ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಣ್ಣಾ ಹಜಾರೆ


 ಅಣ್ಣಾ ಹಜಾರೆ


ಅಣ್ಣಾ ಹಜಾರೆ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಹೆಸರಾದವರು. ಒಮ್ಮೆ ಅಣ್ಣಾ ಹಜಾರೆ ಹೋರಾಟದ ಅಲೆ, ದೇಶದಲ್ಲಿ ಬಿರುಗಾಳಿಯಂತೆ ಮೂಡಿತ್ತು. 2014ರಲ್ಲಿ ಉಂಟಾದ ರಾಜಕೀಯದಲ್ಲಿನ ಬದಲಾವಣೆ ಮತ್ತು ಅಂದು ಅಣ್ಣಾ ಹಜಾರೆ ಜೊತೆಗಿದ್ದವರು ರಾಜಕೀಯದ ಭಾಗವಾಗಿದ್ದರ ಪರಿಣಾಮವಾಗಿ ಆ ಹೋರಾಟ ತಣ್ಣಗೂ ಆಗಿಬಿಟ್ಟಿತು.  ಆದರೆ ಅದೊಂದೇ ಪರಿಧಿಯಲ್ಲಿ ಮಾತ್ರಾ ಅಣ್ಣಾ ಹಜಾರೆ ಅವರನ್ನು ಕಾಣಲಾಗುವುದಿಲ್ಲ.  ಅವರೊಬ್ಬ ಅಪ್ರತಿಮ ಹೋರಾಟಗಾರರಾಗಿ ಬಹಳಷ್ಟು ಸಾಧಿಸಿದವರು.

ಅಣ್ಣಾ ಹಜಾರೆ  1938ರ ಜೂನ್ 15ರಂದು ಜನಿಸಿದರು.  ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿ ಎಲ್ಲಾ ಸಿದ್ಧಿಗಳಿಂದ ವಂಚಿತವಾಗಿ ಬರಡುಭೂಮಿಯಾಗಿ ಕ್ಷಾಮರೋಗಗಳಿಗೆ ಸುಲಭದ ತುತ್ತಾಗಿ ಕುಡಿತ, ಕಡುಬಡತನ ಮತ್ತು ಪಟ್ಟಣಗಳಿಗೆ ವಲಸೆ ಹೋಗಲು ಕಾರಣೀಭೂತವಾದ ಆಗರವಾಗಿತ್ತು.  ಅಣ್ಣಾ ಹಜಾರೆಯವರ ಪ್ರೇರಣೆಗಳಿಂದ ಈ ಊರು ನೈಸರ್ಗಿಕವಾಗಿ ಜಲಸಂರಕ್ಷಣೆಯ ವಿಧಾನಗಳನ್ನು ಕಲಿತುಕೊಂಡು ಹಳ್ಳಿಗರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರ ಜೊತೆಗೆ ‘ರಾಲೆಗನ್ ಸಿದ್ಧಿ’ ಎಂಬ ಹೆಸರನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿತು.  ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಅಂದರೆ ಏನು ಎಂಬುದಕ್ಕೆ ಅಣ್ಣಾ ಹಜಾರೆ, ನಮ್ಮ ಹೆಗ್ಗೋಡಿನ ಸುಬ್ಬಣ್ಣ, ಆನಂದವನದ ಬಾಬಾ ಅಮ್ಟೆ, ಬಿಳಿಗಿರಿರಂಗನ ಬೆಟ್ಟದ ಸುದರ್ಶನ್ ಅವರನ್ನು ನೋಡಿ ನಾವು ಅದರಲ್ಲೂ ನಮ್ಮ ರಾಜಕೀಯ, ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ತಜ್ಞರು ಕಲಿಯುವುದು ತುಂಬಾ ತುಂಬಾ ಇದೆ.  ‘ರಾಲೇಗನ್ ಸಿದ್ಧಿ’ಯ ಸಿದ್ಧಿ ಪ್ರವರಗಳನ್ನು ಮತ್ತು ಅದು ಸಾಧಿಸಿರುವ ಶ್ರೇಷ್ಠತೆಗಳನ್ನು ಇಡೀ ವಿಶ್ವವೇ ಕಂಡು ಬೆರಗುಗೊಂಡಿರುವುದು ಅಣ್ಣಾ ಹಜಾರೆ ಅವರ ಆತ್ಮವನ್ನು ಅರಿಯಬಲ್ಲವರಿಗೆ ಪ್ರಥಮ ಹೆಜ್ಜೆಯಾಗಬೇಕಾಗುತ್ತದೆ.

ಹಲವು ಯುದ್ಧಗಳಲ್ಲಿ ಭಾರತದ ವೀರಯೋಧನಾಗಿ ಪಾಲ್ಗೊಂಡ ಅಣ್ಣಾ ಹಜಾರೆ ಅವರಿಗೆ, ಒಂದು ದಿನ ಯುದ್ಧದಲ್ಲಿ ಅವರ ತಲೆಯ ಮೇಲೇ ಹಾದು ಹೋದ ಶತ್ರುಸೈನಿಕರ ಗುಂಡು ಅವರ ಬದುಕಿನ ಚಿಂತನೆಗಳನ್ನೇ ಬದಲಿಸಿಕೊಳ್ಳುವಂತೆ ಮಾಡಿತು.  ಸ್ವಾಮಿ ವಿವೇಕಾನಂದರ ಬೋಧನೆಗಳ ಪ್ರಿಯರಾದ ಅಣ್ಣಾ ಹಜಾರೆಯವರು ಆ ಕ್ಷಣದಲ್ಲೇ ತಮ್ಮ ಬದುಕನ್ನು ಮಾನವಸೇವೆಗೆ ಮುಡಿಪಾಗಿಡಲು ನಿರ್ಧರಿಸಿದರು.  ಹಾಗೆಂದು ಅವರು ತಕ್ಷಣದಲ್ಲೇ  ಸೈನ್ಯವನ್ನೇನೂ ಬಿಟ್ಟು ಬರಲಿಲ್ಲ.  ಮುಂದೆ ಇನ್ನೂ ಹನ್ನೆರಡು ವರ್ಷಗಳ ಕಾಲ ಸೈನ್ಯದಲ್ಲಿದ್ದು ನಂತರದಲ್ಲಿ ತಮ್ಮ ಬರಡುಹಳ್ಳಿಗೆ ಬಂದರು.  ತಮ್ಮ ಬ್ರಹ್ಮಚರ್ಯ, ನಿಷ್ಕಲ್ಮಶವಾದ ಮನ, ದೃಢ ಸಂಕಲ್ಪ ಮತ್ತು ಮಾನವಪ್ರೇಮಗಳಿಂದ ರಾಲೇಗನ್ ಸಿದ್ಧಿ ಎಂಬ ಹಳ್ಳಿಯ ಹಾಳೆಯ ಮೇಲೆ ನವಕಾವ್ಯ ಬರೆಯುತ್ತಾ ಹೋದರು.  ಹೆಂಡದಂಗಡಿಗಳನ್ನು ಮುಚ್ಚಿ, ನೀರಿನಮೃತದ ಚಿಲುಮೆಯತ್ತ ಗಮನಹರಿಸಿ ಊರನ್ನು ಸ್ವಾವಲಂಬಿಯಾಗಿ ಮಾಡಲು ಪ್ರೇರಣೆ ಇತ್ತರು ಅಣ್ಣಾ.  ಶಾಲೆ, ಡೈರಿ, ಸಹಕಾರ ಸಂಘ, ಕಲ್ಯಾಣ ಮಂಟಪ, ದವಸ ಧಾನ್ಯ ಶೇಖರಣಾ ಕೇಂದ್ರ, ಹಣಕಾಸಿನ ಬ್ಯಾಂಕು, ಸ್ವಯಂ ಸೇವಾ ಸಂಘಗಳು ಇವನ್ನೆಲ್ಲಾ ತಾವೇ ತಾವಾಗಿ ಜನ ಮಾಡುತ್ತಾ ಬಂದರು.  ಮನುಷ್ಯನ ಮನಸ್ಸು ಏನೂ ಮಾಡಲು ತೋಚದಿದ್ದಾಗ ಕೆಟ್ಟ ಚಟಗಳ ದಾಸನಾಗುತ್ತದೆ.  ಅದಕ್ಕೆ ಒಂದು ಮಹದುದ್ದೇಶ ಕೊಟ್ಟಲ್ಲಿ ಅದು ಸ್ವಯಂ ತಾನೇತಾನಾಗಿ ಸ್ವರ್ಗವನ್ನೇ ಸೃಷ್ಠಿಮಾಡಿಕೊಳ್ಳಬಲ್ಲದು!  ಅಣ್ಣಾ ತಮ್ಮ ಊರಿನ ಜನಕ್ಕೆ ಅಂತಹ ಸದುದ್ಧೇಶವನ್ನು ಹಾಕಿಕೊಟ್ಟವರು.

ದೇಶದಲ್ಲಿ ಅಭಿವೃದ್ಧಿಯು ಭ್ರಷ್ಟಾಚಾರದಿಂದಾಗಿ ಕುಂಠಿತಗೊಂಡಿದೆ ಎಂದು ಮನಗಂಡು, ಅಣ್ಣಾ  1991ರಲ್ಲಿ  ಭ್ರಷ್ಟಾಚಾರ ವಿರೋಧೀ ಜನ ಆಂದೋಲನ ಎಂಬ ಚಳವಳಿಯನ್ನಾರಂಬಿಸಿದರು. 42 ಅರಣ್ಯಾಧಿಕಾರಿಗಳು ಸರ್ಕಾರಿ ಸಂಸ್ಥೆಯಲ್ಲಿನ ಭ್ರಷ್ಟಾಚಾರದಿಂದಾಗಿ ರಾಜ್ಯ ಸರ್ಕಾರಗಳಿಗೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದರು ಎಂಬುದು ತಿಳಿದುಬಂದಿತು. ಹಜಾರೆ ಅವರು ಸರ್ಕಾರಕ್ಕೆ ಪುರಾವೆಗಳನ್ನು ಒದಗಿಸಿದರೂ ಆಳುವ ಪಕ್ಷದ ಒಬ್ಬ ಮಂತ್ರಿಯೂ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡು ಆ ಅಧಿಕಾರಿಗಳ ಮೇಲೆ ಯಾವುದೇ ರೀತಿಯ  ಕ್ರಮ ಕೈಗೊಳ್ಳಲು ನಿರಾಕರಿಸಿತು. ಇದರಿಂದ ಮನನೊಂದ ಹಜಾರೆ ಅವರು ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಗೆ ಹಿಂದಿರುಗಿಸಿದರು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ನೀಡಿದ್ದ ವೃಕ್ಷ ಮಿತ್ರ ಪ್ರಶಸ್ತಿಯನ್ನೂ ಕೂಡ ಹಿಂದಿರುಗಿಸಿದರು.

ಇದೇ ವಿಷಯದ ಸಲುವಾಗಿ ಅವರು ಆಮರಣಾಂತ ಉಪವಾಸ ಕೈಗೊಂಡರು. ಕೊನೆಗೂ ನಿದ್ದೆಯಿಂದ ಎಚ್ಚೆತ್ತ ಮನೋಭಾವನೆಗಳಲ್ಲಿ ಪರಿಣಾಮ ಬೀರಿತು - ಆರು ಮಂತ್ರಿಗಳು ರಾಜೀನಾಮೆ ಕೊಟ್ಟರು ಮತ್ತು ವಿವಿಧ ಕಛೇರಿಗಳ ನಾನೂರಕ್ಕೂ ಹೆಚ್ಚು ಅಧಿಕಾರಿಗಳು ಮನೆಗೆ ಕಳುಹಿಸಲ್ಪಟ್ಟರು.

ಇದೆಲ್ಲಾ ಅಂದುಕೊಂಡಷ್ಟು ಸುಲಭದಲ್ಲಿ ಆಗುವಂತದ್ದಲ್ಲ.  ಆದರೆ ನೈತಿಕಶಕ್ತಿಯ ಮುಂದೆ ಅಹಂಕಾರಿ ಶಕ್ತಿ ಯಾವುದನ್ನೂ ಕಿತ್ತುಕೊಳ್ಳುವಷ್ಟು ಶಕ್ತಿಶಾಲಿಯಾಗಿರುವುದಿಲ್ಲ!  1998ರಲ್ಲಿ ಮಹಾರಾಷ್ಟ್ರ ಸಮಾಜ ಕಲ್ಯಾಣ ಮಂತ್ರಿಗಳಾಗಿದ್ದ ಬಬನ್‌ರಾವ್ ಗೊಳಪ್‌ರವರು ಮಾನನಷ್ಟ ಮೊಕ್ಕದ್ದಮೆಯನ್ನು  ಹೂಡಿ ಅಣ್ಣಾ ಹಜಾರೆಯವರ  ಬಂದನಕ್ಕೆ ಕಾರಣರಾದರು.  ಆದರೆ ಸಾರ್ವಜನಿಕರ ಪ್ರತಿಭಟನೆಯ ಕಾರಣದಿಂದಾಗಿ ಅಣ್ಣಾ ಅವರನ್ನು ಜೈಲು ಬಂಧನದಲ್ಲಿರಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ!.

ಮಾಹಿತಿ ಹಕ್ಕು ಕಾಯ್ದೆ - 2005 ಕಾರ್ಯಗತವಾದ ಮೇಲೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುತ್ತಾ ಹಜಾರೆಯವರು ರಾಜ್ಯದಲ್ಲಿ 12000 ಕಿ.ಮೀಗೂ ಹೆಚ್ಚು ದೂರ ಸಂಚರಿಸಿದರು. ಎರಡನೇ ಹಂತದಲ್ಲಿ ಇವರು ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳೊಂದಿಗೆ ಸಂವಹನ ನೆಡೆಸಿದರು ಮತ್ತು ರಾಜ್ಯದ ಬಹುತೇಕ  ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನೂ ಆಯೋಜಿಸಿದರು. ಮೂರನೇ ಹಂತವು 155 ತೆಹಸಿಲ್ ಜಾಗಗಳಲ್ಲಿ ಪ್ರತಿದಿನ 2 - 3 ಸಾರ್ವಜನಿಕ ಸಭೆಗಳನ್ನು ಒಳಗೊಂಡಿತ್ತು. ಈ ಮಹಾಚಳವಳಿಯಲ್ಲಿ ಭಿತ್ತಿಪತ್ರಗಳು ಪ್ರದರ್ಶನಗೊಂಡವು ಮತ್ತು ಕಾಯ್ದೆಯ ನಿಬಂಧನೆಗಳ ಪುಸ್ತಕಗಳನ್ನು ಸಾಮಾನ್ಯ ದರದಲ್ಲಿ ವಿತರಿಸಲಾಯಿತು. ಇದು ಸಾಕಷ್ಟು ಜಾಗೃತಿಯನ್ನುಂಟುಮಾಡಿತು ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಜನರು ತಿಳಿದುಕೊಳ್ಳಲು ಸಹಾಯನೀಡಿತು.

ಮುಂದೆ ಅಣ್ಣಾ ಹಜಾರೆ ಅವರು ಲೋಕಪಾಲ ಮಸೂದೆಯ ಅನುಷ್ಠಾನಕ್ಕೆ ಹೋರಾಡಿ ಇಡೀ ದೇಶವನ್ನೇ ಒಂದೇ ದನಿಯಾಗಿಸಿದ್ದು ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತು.  ಮುಂದೆ ಚುನಾವಣೆ ನಡೆದು ಮೋದಿ ಅಲೆ ಭರ್ಜರಿ ಜಯ ಮತ್ತು ಅಣ್ಣಾ ಹಜಾರೆ ಅವರ ಜೊತೆ ಇದ್ದ ಒಂದು ಭಾಗ ಆಮ್ ಆದ್ಮಿ ಪಕ್ಷ, ಮತ್ತೊಂದು ಭಾಗ ಬಿಜೆಪಿ ಪರ ವಾಲಿದ ನಂತರ, ಅಣ್ಣಾ ಹಜಾರೆ ರಾಷ್ಟ್ರೀಯ ಹೋರಾಟದ ವಿಷಯದಲ್ಲಿ ಒಂಟಿಯಾದರು. 

ಇಂದು ಅಣ್ಣಾ ಹಜಾರೆ ಅವರನ್ನು ನೆನೆಯುವರು ಅಪರೂಪ.

On the birthday of Anna Hazare

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ