ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮೃತಾ ಪ್ರೀತಮ್



 ಅಮೃತಾ ಪ್ರೀತಮ್


ಪ್ರೇಮತುಂಬಿದ ಬರಹಗಳಿಗೆ ಹೆಸರಾದ ಅಮೃತಾ ಪ್ರೀತಮ್  ಜ್ಞಾನಪೀಠ ಪುರಸ್ಕಾರ ಗಳಿಸಿದ ಮಹಾನ್ ಕವಯತ್ರಿ, ಲೇಖಕಿ, ಕತೆಗಾರ್ತಿ ಮತ್ತು ಕಾದಂಬರಿಗಾರ್ತಿ.

ಅಮೃತಾ ಪೀತಮ್  ಸ್ವಾತಂತ್ರ್ಯಪೂರ್ವ ಅವಿಭಕ್ತ ಪಂಜಾಬಿನ ಲಾಹೋರಿನ ಬಳಿಯ ಗುಜರಾವಾಲೆಯಲ್ಲಿ 1919ರ ಆಗಸ್ಟ್ 31ರಂದು ಜನಿಸಿದರು.  ಇವರ ತಂದೆ ಕರ್ತಾರಸಿಂಹ ಹಿತಕಾರಿ ಅವರು ಪ್ರಸಿದ್ದ ಲೇಖಕರಲ್ಲೊಬ್ಬರಾಗಿದ್ದರು. ಅಮೃತಾ  ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ತಾಯಿ ರಾಜಕೌರ್ ಅವರನ್ನು ಕಳೆದುಕೊಂಡರು. ಮುಂದೆ  ತಂದೆಯ ಪೋಷಣೆಯಲ್ಲೇ ಬೆಳೆದ ಅಮೃತಾ, ತಂದೆಯ  ಪ್ರೇರಣೆಯಿಂದಲೆ ಸಾಹಿತ್ಯ ರಚನೆಗೆ ತೊಡಗಿದರು. ನೂರಕ್ಕೂ ಹೆಚ್ಚು ಕವನಗಳನ್ನುಳ್ಳ ಇವರ ಮೊದಲಕೃತಿ ‘ಅಮೃತ ಲಹರಾರಿ’ 1936ರಲ್ಲಿ ಹೊರಬಂತು. 1938ರಲ್ಲಿ ‘ನವೀದುನಿಯಾ’ ಎಂಬ ಸಾಹಿತ್ಯ ಪತ್ರಿಕೆಯನ್ನು ನಡೆಸತೊಡಗಿದರು. ಲಾಹೋರಿನ ಆಕಾಶವಾಣಿಗೆ ಕವನಗಳನ್ನು ಬರೆಯಲಾರಂಭಿಸಿದರು. ಇವರ ಆರಂಭದ ಬರವಣಿಗೆಯ ಮೇಲೆ ಪಂಜಾಬಿನ ಖ್ಯಾತ ಕವಿ ಮೋಹಸಿಂಗ್ ಮತ್ತು ಪ್ರಸಿದ್ಧ ಲೇಖಕ ಗುರುಬಕ್ಷ್‍ಸಿಂಗ್ ಅವರ ಪ್ರಭಾವ ಸಾಕಷ್ಟು ಗೋಚರಿಸುತ್ತವೆ.

1947ರಲ್ಲಿ ಭಾರತದ ವಿಭಜನೆಯಾದ ನಂತರ ಅಮೃತಾ ಪ್ರೀತಮ್ ಲಾಹೋರನ್ನು ತೊರೆದು ದೆಹಲಿಯಲ್ಲಿ ನೆಲೆಸಿದರು.  ವಿಭಜನೆಯ ಸಮಯದಲ್ಲಿ ಅಲ್ಲಿಯ ಪ್ರಜೆಗಳಿಗೆ ಉಂಟಾದ ಕಷ್ಟನಷ್ಟಗಳು ಇವರ ಅನೇಕ ಕೃತಿಗಳಲ್ಲಿ ಮಾರ್ದನಿಸಿವೆ. ವಾರಸ್‍ಶಾಹ್ ಎಂಬ ಇವರ ಕವನ ಈ ನಿಟ್ಟಿನಲ್ಲಿ ತುಂಬಾ  ಪ್ರಸಿದ್ಧವಾದದ್ದು. ಇವರ ಕೃತಿಗಳಲ್ಲಿ ಪಂಜಾಬಿನ ಜನಜೀವನದ ಹಲವಾರು ಮುಖಗಳ ಪರಿಚಯ ಕಾಣಸಿಗುತ್ತದೆ. 

ಪ್ರೀತಿಯ ನಾನಾ ಮುಖಗಳು, ಪ್ರೀತಿಯನ್ನು ಅರಸುವ ಮನ, ಅದು ಪಡುವ ಅಸಂತೃಪ್ತ ಅಲೆಮಾರಿತನಗಳನ್ನು ಅಮೃತಾ ಮೊಗೆ ಮೊಗೆದು ತಮ್ಮ ಬರಹಗಳಲ್ಲಿ ಅನುಭಾವಿಸಿ ಬಿಡಿಸಿಟ್ಟಿದ್ದಾರೆ.  ಅಂದಿನ ಕಟ್ಟುಪಾಡಿನ ಸಾಮಾಜಿಕ ಹಿನ್ನೆಲೆಯ ದಿನಗಳಲ್ಲೇ ಅವರ ಸ್ವತಂತ್ರ ಮನೋಭಾವನೆಗಳ ದಿಟ್ಟತನ ಎದ್ದು ಕಾಣುತ್ತದೆ.   ಅಮೃತಾ ಅವರಿಗೆ ಇಪ್ಪತ್ತನೆಯ ವಯಸ್ಸಿನಲ್ಲಿ (ಡಿಸೆಂಬರ್ 1939) ಪ್ರೀತಮ್‍ಸಿಂಗ್ ಕವಾತಡಾ ಅವರೊಡನೆ ಮದುವೆಯಾಯಿತು. ಆದರೆ ಮನಸ್ಸುಗಳು ಕೂಡಿಬರಲಿಲ್ಲ. ಅಂದಿನ ದಿನಗಳಲ್ಲಿ ಸಾಹಿ ಲುಧಿಯಾನವಿ ಎಂಬ ಕವಿ ಹೆಚ್ಚು ಹೆಸರನ್ನು ಮಾಡಿದ್ದ.  ಈತನ ಕವಿತೆಗಳು ಅಮೃತಾ ಪ್ರೀತಮ್ ಅವರನ್ನು ಎಷ್ಟು  ಸೆಳೆಯಿತೆಂದರೆ, ಆಕೆ ತನ್ನ ಪತಿ ಪ್ರೀತಮ್ ಸಿಂಗ್ ಅನ್ನು ಶಾಶ್ವತವಾಗಿ ತೊರೆದು  ಸಾಹಿರ್ ಲುಧಿಯಾನವಿ ಹಿಂದೆ ನಡೆದರು.  ಆದರೆ ಲುಧಿಯಾನವಿ ಮತ್ತೊಂದು ಹೆಣ್ಣಿನಲ್ಲಿ ಸುಖ ಕಾಣಹೊರಟಾಗ ದೊಡ್ಡ ನಿರಾಸೆ ಅನುಭವಿಸಿದರೂ, ಆತನನ್ನು ಆತನ ಪಾಡಿಗೆ ಬದುಕಲು ಬಿಟ್ಟುಬಿಟ್ಟರು. ಮುಂದೆ ಅಮೃತಾ ಪ್ರೀತಮ್, ಇಮ್ರೋಜ್ ಎಂಬ ಕಲಾವಿದನ ಜೊತೆಯಲ್ಲಿ ಬದುಕಲು ಆರಂಭಿಸಿದರು. ತನ್ನ ಜೀವನದ ಕೊನೆಯವರೆಗೆ ಸುಮಾರು 40 ವರ್ಷಗಳ ಕಾಲದ ಸುದೀರ್ಘ ಬದುಕನ್ನು ಆಕೆ ಇಮ್ರೋಜನ ಜೊತೆ ಕಳೆದರು.

ಲಾಮಿಯಾವತನ್; ಸುನಹರ್  ಮೊದಲಾದವು ಅಮೃತಾ ಪ್ರೀತಮ್ ಅವರ ಕವನ ಸಂಗ್ರಹಗಳು. ಪಿಂಜರ್, ಆಲನಾ, ಬಂದ್ ದರ್‍ವಾಜಾ, ರಂಗ್ ಕಾ ಪತ್ತಾ, ವಾಕ್ ಥೀ ಅನೀತಾ, ಧರತೀ, ಸಾಗರ್ ಔರ್ ಸೀಪಿಯಾಂ, ದಿಲ್ಲೀ ಕಿ ಗಲಿಯಾಂ, ಎಸ್ಕಿಮೋ ಸ್ಟೈಲ್ ತಥಾ ಏರಿಯಲ್, ಜಲಾವತನ್, ಜೇಬ್ ಕತರೇ ಕಾದಂಬರಿಗಳು. ಅಖರೀಖತ್,  ಏಕ್ ಲಡಕೀ ಏಕ್ ಶಾಪ್ ಸಣ್ಣಕತೆಗಳ ಸಂಗ್ರಹ. ಇಕ್ಕೀಸ್ ಪತ್ತಿಯೋಂಕಾ ಗುಲಾಬ್ ಎಂಬುದು ಇವರ ಬಲ್ಗೇರಿಯ, ಸೋವಿಯತ್ ರಷ್ಯ, ಯುಗೋಸ್ಲಾವಿಯ, ಹಂಗೇರಿ, ರುಮೇನಿಯ ಮತ್ತು ಜರ್ಮನಿ ಪ್ರವಾಸದ ದಿನಚರಿ.  ಅತೀತ್ ಕೀ ಪರಛಾಯಿಯಾಂ ಕೃತಿಯಲ್ಲಿ ತಮ್ಮ ಬದುಕು-ಸಾಹಿತ್ಯ, ದೇಶವಿದೇಶಗಳ ಬರಹಗಾರರ ಬದುಕು ಮತ್ತು ಸಾಹಿತ್ಯವನ್ನು ಕುರಿತಂತೆ ನೆನಪಿನ ಚಿತ್ರಗಳನ್ನು ಬಿಡಿಸಿದ್ದಾರೆ. 'ದ ರೆವಿನ್ಯೂ ಸ್ಟ್ಯಾಂಪ್' ಇವರ ಆತ್ಮಕಥಾನಾತ್ಮಕ ಕೃತಿ.

ಅಮೃತಾ ಪ್ರೀತಮ್ ಅವರು ದೆಹಲಿಯ ಆಕಾಶವಾಣಿಯಲ್ಲಿ ಅನೇಕ ವರ್ಷ ಕೆಲಸ ಮಾಡಿದರು. ಮುಂಬಯಿಯ ಚಲನಚಿತ್ರ ಪ್ರಪಂಚಕ್ಕೂ ಹೆಜ್ಜೆಯಿಟ್ಟ ಇವರು ಆ ಕ್ಷೇತ್ರ ಒಗ್ಗದೆ ಮರಳಿದರು. ಇವರ ಅನೇಕ ಕೃತಿಗಳು ಭಾರತೀಯ ಭಾಷೆಗಳಲ್ಲೇ ಅಲ್ಲದೆ ಇಂಗ್ಲಿಷ್, ರಷ್ಯನ್, ಬಲ್ಗೇರಿಯನ್. ಹಂಗೇರಿಯನ್, ಜಪಾನಿ ಭಾಷೆಗಳಿಗೆ ಅನುವಾದಗೊಂಡಿವೆ.

1966ರಿಂದ ಮೊದಲುಗೊಂಡಂತೆ, ನಾಗಮಣಿ ಎಂಬ ಪಂಜಾಬಿ ಪತ್ರಿಕೆಯ ಸಂಪಾದಕರಾಗಿದ್ದರು. ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದ ನಿಯತಕಾಲಿಕವಾದ 'ಮೆಹಫಿಲ್' ಇವರ ಕೃತಿಗಳನ್ನು ಕುರಿತಂತೆ ಒಂದು ಸಂಚಿಕೆಯನ್ನು ಹೊರತಂದಿತ್ತು.

ಅಮೃತಾ ಪ್ರೀತಮ್ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ (1956)ಪಡೆದ ಮಹಿಳೆಯರಲ್ಲಿ ಮೊದಲಿಗರು.  ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳು ಸಂದವು. ದೆಹಲಿ ವಿಶ್ವವಿದ್ಯಾಲಯವು 1973ರಲ್ಲಿ ಗೌರವ ಡಿ.ಲಿಟ್ ಪ್ರಶಸ್ತಿ ನೀಡಿತು.

ಅಮೃತಾ ಪ್ರೀತಮ್ 2005ರ  ಅಕ್ಟೋಬರ್ 31ರಂದು ನಿಧನರಾದರು.

Amrita Pritam

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ