ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ನಟರಾಜ್


 ಜಿ. ನಟರಾಜ್


ವಿದ್ವಾನ್ ಜಿ. ನಟರಾಜ್ ಮಹಾನ್ ಸಂಗೀತ ವಿದ್ವಾಂಸರು ಮತ್ತು ಪಿಟೀಲು ವಾದಕರು. 

ನಟರಾಜ್‌ 1943ರ ಆಗಸ್ಟ್ 25ರಂದು  ಬೆಂಗಳೂರಿನಲ್ಲಿ ಜನಿಸಿದರು. ತಂದೆ ಜಿ.ಎನ್‌. ಜೋಶಿ ಬಳೇಪೇಟೆಯ ಆರ್ಯ ವಿದ್ಯಾಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ತಾಯಿ ರತ್ನಮ್ಮ. ಪ್ರಸಿದ್ಧ ಚಲನಚಿತ್ರ ಸಾಹಿತಿ ಕು. ರಾ. ಸೀತಾರಮಶಾಸ್ತ್ರಿಗಳು ಇವರ ಸೋದರ ಮಾವನವರಾಗಿದ್ದರು. 

ನಟರಾಜ್ ಒಂಬತ್ತನೆಯ ವಯಸ್ಸಿನಿಂದಲೇ ಎಚ್‌.ಕೆ. ವೆಂಕಟರಮಣ ಶಾಸ್ತ್ರಿಗಳಲ್ಲಿ ಹಾಡುಗಾರಿಕೆ ಶಿಕ್ಷಣ ಪಡೆದರು. ವಿದ್ವಾನ್‌ ಎ. ವೀರಭದ್ರಯ್ಯ, ಎಚ್‌.ವಿ. ಕೃಷ್ಣಮೂರ್ತಿ ಅವರಲ್ಲಿ ಪಿಟೀಲು ವಾದನ ಶಿಕ್ಷಣ ಪಡೆದರು. 1963ರಿಂದ 9 ವರ್ಷಗಳ ಕಾಲ ಶ್ರೀ ರಾಮಕೃಷ್ಣ ಮಠದಲ್ಲಿ ಬ್ರಹ್ಮಚರ್ಯ ಜೀವನ ಪಾಲಿಸಿ 1971ರಲ್ಲಿ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದರು.

ವಿಶಿಷ್ಟ ಶೈಲಿಯ ಪಿಟೀಲುವಾದಕರಾಗಿ 1957ರಿಂದ ಕಚೇರಿಗಳನ್ನು ನೀಡಲು ಆರಂಭಿಸಿದ ನಟರಾಜ್ ನಾಡಿನ ಎಲ್ಲ ಪ್ರಮುಖ ವೇದಿಕೆಗಳಲ್ಲಿ, ಹಾಗೂ ಆಕಾಶವಾಣಿ -  ದೂರದರ್ಶನಗಳಲ್ಲಿ ಕಚೇರಿ ನೀಡಿದ್ದರು. ಶ್ರೀರಾಮಕೃಷ್ಣ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದರು. ನಟರಾಜ್ ಹಿಂದೂಸ್ಥಾನಿ ಮತ್ತು ಇತರ ಮಾದರಿಯ ಆಧುನಿಕ ಸಂಗೀತಕ್ಕೆ ಕೂಡಾ ಜೊತೆ ನೀಡಿದ್ದರು.

ನಟರಾಜ್ ಅವರು ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಪ್ರತಿಷ್ಠಿತ ಪ್ರಶಸ್ತಿ ‘ಕರ್ನಾಟಕ ಕಲಾಶ್ರೀ’, ಗಾಯನ ಸಮಾಜದ ಪುರಸ್ಕಾರ, ಹಾಗೂ  ಹಲವಾರು ಸಂಘ ಸಂಸ್ಥೆಗಳಿಂದ ವೈಲಿನ್‌ ವಾದನ ಚತುರ, ತಂತ್ರಿವಾದ್ಯ ವಾದನ ನಿಪುಣ, ಧನುರ್ವೀಣಾ ಕೇಸರಿ, ನಾದ ಚಿಂತಾಮಣಿ, ತಂತ್ರಿವಾದ್ಯ ಸಾಮ್ರಾಟ, ಕಲಾಭೂಷಣ, ಪಿಟೀಲುವಾದನ ಚಾಣಾಕ್ಷ ಮುಂತಾದ ಅನೇಕ ಗೌರವಗಳನ್ನು ಗಳಿಸಿದ್ದರು.

ವಿದ್ವಾನ್ ಜಿ. ನಟರಾಜ್ 2011ರ ಆಗಸ್ಟ್ 31ರಂದು ನಿಧನರಾದರು.

On the birth anniversary of great violinist G. Nataraj

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ