ಸಂಗೊಳ್ಳಿ ರಾಯಣ್ಣ
ಸಂಗೊಳ್ಳಿ ರಾಯಣ್ಣ
ಸಂಗೊಳ್ಳಿ ರಾಯಣ್ಣ ಅವರ ಹೆಸರು ಸ್ವಾತಂತ್ರ್ಯದ ಕಿಚ್ಚನ್ನು ದೇದೀಪ್ಯಮಾನವಾಗಿಸುವಂತದ್ದು. ಅವರು ಬ್ರಿಟಿಷರ ವಿರುದ್ಧ ಕಿತ್ತೂರಿನಲ್ಲಿ ನಡೆದ ದಂಗೆಯ ನೇತಾರರು.
ಸಂಗೊಳ್ಳಿ ರಾಯಣ್ಣ ಜನಿಸಿದ್ದು 1798 ವರ್ಷದ ಆಗಸ್ಟ್ 15ರಂದು ಎಂದು ಉಲ್ಲೇಖಗಳಿವೆ.
ಕಿತ್ತೂರು ಸಂಸ್ಥಾನಕ್ಕೆ ಸೇರಿದ್ದ ಸಂಗೊಳ್ಳಿ ಗ್ರಾಮದವರಾಗಿದ್ದ ರಾಯಣ್ಣ ಕಿತ್ತೂರು ದೇಸಾಯಿಗಳ ಸಶಸ್ತ್ರ ಅನುಚರರಾಗಿದ್ದರು ಹಾಗೂ ಸೈನ್ಯದಿಂದ ಹಲವು ಎಕರೆ ಜಮೀನನ್ನು ಗುತ್ತಿಗೆ ಮೇಲೆ ಪಡೆದಿದ್ದ ರೈತರಾಗಿದ್ದರು. ರಾಯಣ್ಣ ಕಿತ್ತೂರು ಸಂಸ್ಥಾನದ ಸಾಮಾನ್ಯ ಪ್ರಜೆ. ಸಂಗೊಳ್ಳಿ ಗ್ರಾಮದ ತಳವಾರಿ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಚೆನ್ನಮ್ಮ ದಂಗೆ ಎದ್ದಾಗ ಅದರಲ್ಲಿ ಭಾಗವಹಿಸಿದ್ದ ಐದು ಸಾವಿರ ಸಶಸ್ತ್ರ ಹೋರಾಟಗಾರರಲ್ಲಿ ಆಗಿನ್ನೂ 29 ವರ್ಷದವನಾಗಿದ್ದ ಸಂಗೊಳ್ಳಿ ರಾಯಣ್ಣ ಕೂಡ ಒಬ್ಬರಾಗಿದ್ದರು.
ಕಿತ್ತೂರು ಬಂಡಾಯ ಹತ್ತಿಕ್ಕಲ್ಪಟ್ಟಾಗ ರಾಯಣ್ಣ ಬಂಧಿತರಾಗಿದ್ದರು. 1826ರಲ್ಲಿ ಎಲ್ಲ ಬಂಧಿತರಿಗೂ ಸಾರ್ವತ್ರಿಕ ಕ್ಷಮೆ ನೀಡಿ, ಎಚ್ಚರಿಕೆಯೊಂದಿಗೆ ಬಿಡುಗಡೆ ಮಾಡಿದಾಗ ರಾಯಣ್ಣ ಕೂಡ ಹೊರಬಂದಿದ್ದರು. ಬೈಲಹೊಂಗಲದಲ್ಲಿ ಚೆನ್ನಮ್ಮರನ್ನು ಸೆರೆಯಲ್ಲಿಟ್ಟಿದ್ದಾಗ ತಾನು ಆಕೆಯ ದೂರದ ಸಂಬಂಧಿ ಎಂಬ ನೆಪದಲ್ಲಿ ಸಂಗೊಳ್ಳಿ ರಾಯಣ್ಣ ಆಕೆಯನ್ನು ಜೈಲಿನಲ್ಲಿ ಭೇಟಿ ಕೂಡ ಆಗಿದ್ದರು. ಕಿತ್ತೂರನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳಬೇಕೆಂಬ ಕಿಚ್ಚು ಅವರಲ್ಲಿ ಹುಟ್ಟಿದ್ದೇ ಚೆನ್ನಮ್ಮರನ್ನು ಜೈಲಿನಲ್ಲಿ ಕಂಡಿದ್ದರಿಂದ.
ಸಂಗೊಳ್ಳಿ ರಾಯಣ್ಣ ಹಲವಾರು ದೇಶಬಾಂಧವರೊಡನೆ ಅಹೋರಾತ್ರಿ ಹೋರಾಡಿ ಇತರರಂತೆ ಕಾರಾಗೃಹವಾಸ ಅನುಭವಿಸಿ ಬಿಡುಗಡೆಯಾಗಿದ್ದರು. ಸ್ಥಳೀಯ ಕುಲಕರ್ಣಿಯ ಕುತಂತ್ರದಿಂದಾಗಿ ರಾಯಣ್ಣನ ಅರ್ಧ ಜಮೀನು ಖಬ್ಜವಾದರೆ ಇನ್ನುಳಿದ ಅರ್ಧ ಜಮೀನಿನ ಮೇಲೆ ಬ್ರಿಟಿಷ್ ಸರ್ಕಾರ ದೊಡ್ಡ ಮೊತ್ತದ ಕಂದಾಯವನ್ನು ವಿಧಿಸಿತು.
ಹೀಗೆ ಶ್ರೀಮಂತರ ಪಾಳೇಗಾರಿಕೆ ಮತ್ತು ಅದರ ಜೊತೆಗೆ ಕೈಜೋಡಿಸಿ ಬಡಜನರರಿಗೆ ಬದುಕು ಅಸಾಧ್ಯ ಮಾಡಿ ತಮ್ಮ ದರ್ಪದ ಅಧಿಕಾರ ನಡೆಸುತ್ತಿದ್ದ ಬ್ರಿಟಿಷರ ಕೃತ್ಯದಿಂದ ರಾಯಣ್ಣ ಕ್ರೋಧಗೊಂಡರು. ಜೊತೆಗೆ ಚೆನ್ನಮ್ಮರ ದರ್ಶನದಿಂದ ಕಿತ್ತೂರಿನ ಸ್ವಾತಂತ್ರ್ಯ ವನ್ನು ಪುನಃ ಸ್ಥಾಪಿಸುವ ಉದಾತ್ತ ಧ್ಯೇಯ ಇವರ ದೇಶಾಭಿಮಾನವನ್ನು ಮತ್ತೊಮ್ಮೆ ಬಡಿದೆಬ್ಬಿಸಿತು.
ಬ್ರಿಟಿಷರ ವಿರುದ್ಧ ಹೋರಾಡಲು ಶೂರಸಾಹಸಿಗಳ ಗುಂಪು ಕಟ್ಟಿಕೊಂಡು ಬಂಡಾಯವೆಬ್ಬಿಸಿ, ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಗದ್ದುಗೆಗೆ ಏರಿಸುವ ಸಾಹಸಕೃತ್ಯಕ್ಕೆ ರಾಯಣ್ಣ ಕೈಹಾಕಿದರು. ಹೀಗೆ ಕಿತ್ತೂರಿನಲ್ಲಿ ಬ್ರಿಟಿಷ್ ಸರ್ಕಾರದ ಇರವನ್ನು ಧಿಕ್ಕರಿಸುವ ಪ್ರಯತ್ನಮಾಡಿದರು. ಸೈನ್ಯಸಹಾಯವಿಲ್ಲದ ಕಾರಣ ಇವರು ಕೂಟಯುದ್ಧಕ್ಕಿಳಿದರು.
ಮೊದಲು ಖಾನಾಪುರದಲ್ಲಿ ನೆಲೆಸಿದ್ದ ಮೇಜರ್ ಪಿಕ್ಕರಿಂಗ್ನ ಸೈನ್ಯದ ಮೇಲೆ ದಾಳಿಮಾಡಿದರು; ಅಲ್ಲಿಯ ಸರ್ಕಾರಿ ಕಚೇರಿಯನ್ನು ಸುಟ್ಟರು. ಹಗಲು ಹೊತ್ತನ್ನು ಕಾಡಿನಲ್ಲಿ ಕಳೆದು, ರಾತ್ರಿ ವೇಳೆ ತಮ್ಮ ಅನೇಕ ಯೋಧರೊಡನೆ ಬ್ರಿಟಿಷರ ಠಾಣೆಗಳ ಮೇಲೆ ಎರಗುತ್ತಿದ್ದರು. ದಿನೇ ದಿನೇ ಇವರ ಸಹಚರರು ವರ್ಧಿಸುತ್ತಿದ್ದರು. ಸುಮಾರು ಇಡೀ ಕಿತ್ತೂರು ಸಂಸ್ಥಾನದ ಪ್ರಜೆಗಳೆಲ್ಲ ಇವರ ಬೆಂಬಲಿಗರಾಗಿದ್ದರು. ಮೋಸದಿಂದ ಬ್ರಿಟಿಷರ ಪಕ್ಷ ವಹಿಸುವವರನ್ನು ನಿರ್ದಾಕ್ಷಿಣ್ಯವಾಗಿ ಕೊನೆಗಾಣಿಸುತ್ತಿದ್ದರು.
ಸಂಗೊಳ್ಳಿ ರಾಯಣ್ಣ ಅವರ ಕಾರ್ಯದಿಂದ ಬೆಚ್ಚಿದ ಬ್ರಿಟಿಷ್ ಅಧಿಕಾರಿಗಳು ರಕ್ಷಣೆಗಾಗಿ ಸೈನ್ಯಸಹಾಯ ಪಡೆಯಬೇಕಾಯಿತು. ಸರ್ಕಾರಿ ಅಧಿಕಾರಿಗಳು ಇವರನ್ನು ಹಿಡಿಯಲು ಬೆನ್ನುಹತ್ತಿದರೂ ಇವರು ನುಣುಚಿಕೊಳ್ಳುತ್ತಿದ್ದರು. ಇವರು ಖಾನಾಪುರದಿಂದ ನಡೆದು ಅನಂತರ ಸಂಪಗಾಂವದ ಮೇಲೆ ದಾಳಿ ಮಾಡಿದರು. ಅಲ್ಲಿನ ಖಜಾನೆಯನ್ನು ಸೂರೆಮಾಡಿ ಹಲವು ಹಳ್ಳಿಗಳ ಮೇಲೂ ಎರಗಿ ಧನಸಂಗ್ರಹಮಾಡಿ, ಬ್ರಿಟಿಷರ ನಿಗ್ರಹಕ್ಕೆ ಹಗಲಿರುಳೂ ಪ್ರಯತ್ನಿಸಿದರು.
1830ರ ಜನವರಿ 5ರಂದು ಬಿಡಿ ಗ್ರಾಮದಲ್ಲಿದ್ದ ಸರ್ಕಾರಿ ಕಛೇರಿಗೆ ಬೆಂಕಿ ಹಚ್ಚುವ ಮೂಲಕ ತನ್ನ ಹೋರಾಟವನ್ನು ರಾಯಣ್ಣ ಪ್ರಾರಂಭಿಸಿದಾಗ ಅಂದು ಅವರೊಂದಿಗೆ ಇದ್ದವರ ಸಂಖ್ಯೆ ಕೇವಲ ನೂರು. ಆದರೆ ನಾಲ್ಕು ತಿಂಗಳ ನಂತರ ಏಪ್ರಿಲ್ 8ರಂದು ರಾಯಣ್ಣನ ವರ ಬಂಧನವಾದಾಗ ಆತನೊಂದಿಗೆ ಒಂದು ಸಾವಿರ ಬಂಡಾಯಗಾರರಿದ್ದರು. ಈ ಅಂಶವನ್ನು ಧಾರವಾಡದ ಕಲೆಕ್ಟರ್ ಆಗಿದ್ದ ನಿಸ್ಬೆಟ್ರವರು ತಮ್ಮ ಪತ್ರದಲ್ಲಿ ದಾಖಲಿಸಿದ್ದಾರೆ. ಮುಂದೆ ಈ ಒಂದು ಸಾವಿರ ಜನರೊಂದಿಗೆ ಸಂಗೊಳ್ಳಿ ರಾಯಣ್ಣ ಖಾನಪುರಕ್ಕೆ ಬೆಂಕಿ ಹಚ್ಚಿ ಅಲ್ಲಿ ಕೊಳ್ಳೆ ಹೊಡೆದು ಶಮ್ಶೇರ್ಗಡ್ಗೆ ಹಿಂದಿರುಗಿದರು. ಅಂದು ಮೂರು ಸಾವಿರ ಜನ ಸೇರಿಕೊಂಡರು. ಹೀಗೆ ರಾಯಣ್ಣನವರ ನಾಯಕತ್ವದ ಸಶಸ್ತ್ರ ಹೋರಾಟದಲ್ಲಿ ಜನರನ್ನು ಸಜ್ಜುಗೊಳಿಸಲಾಯಿತು. ಈ ಸೈನ್ಯ ನಡೆಸಿದ ಹಲವಾರು ದಾಳಿಗಳಿಗೆ ಸರ್ಕಾರಿ ಆಸ್ತಿಗಳು, ಭೂಕಂದಾಯ ದಾಖಲೆಗಳು ಗುರಿಯಾದವಲ್ಲದೇ, ಬ್ರಿಟಿಷ್ ಆಡಳಿತದಡಿ ಕುಪ್ರಸಿದ್ಧ ಭೂಮಾಲೀಕರು ಮತ್ತು ಅಧಿಕಾರಿಗಳು ಜನರಿಂದ ವಸೂಲಿ ಮಾಡಿದ್ದ ಹಣವನ್ನೂ ಹಿಂದೆ ಪಡೆಯಲಾಗಿತ್ತು. ಇಂತಹ ಪ್ರಕ್ರಿಯೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನಸಾಮಾನ್ಯರು ಪಾಲ್ಗೊಳ್ಳುತ್ತಿದ್ದರಲ್ಲದೇ, ಪ್ರತಿ ದಾಳಿಯ ನಂತರ ಅಲ್ಲಿನ ಜನ ರಾಯಣ್ಣನವರ ಸೈನ್ಯವನ್ನು ಸೇರುತ್ತಿದ್ದರು.
ರಾಯಣ್ಣನವರ ಸಶಸ್ತ್ರ ಸಂಗ್ರಾಮಕ್ಕೆ ಜನ ಸಮುದಾಯದ ಅಪಾರ ಬೆಂಬಲವಿತ್ತಲ್ಲದೆ, ಆತನ ಚಲನವಲನದ ಬಗ್ಗೆ ಯಾವ ಮಾಹಿತಿಯನ್ನೂ ಸರ್ಕಾರದ ದೂತರಿಗೆ ನೀಡದಂತೆ ಇತರ ಅನುಚರರೂ ಸಹಕರಿಸಿದ್ದರು.
ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ವ್ಯಾಪಿಸಿದ ಕಿತ್ತೂರು ಭೂಪ್ರದೇಶವನ್ನು ರಾಯಣ್ಣ ತಮ್ಮ ಗೆರಿಲ್ಲಾ ಯುದ್ಧಕ್ಕೆ ಸೂಕ್ತವಾಗಿ ಬಳಸಿಕೊಂಡರು. ಮಲೆನಾಡಿನ ಕಾಡುಗಳಂತೂ ರಾಯಣ್ಣನವರ ಸೈನ್ಯಕ್ಕೆ ಭದ್ರಕೋಟೆಯಂತಾಯಿತು. ಜನ ವಿರೋಧಿಗಳಾಗಿದ್ದ ಭೂಮಾಲಿಕರು, ಅಧಿಕಾರಿಗಳು ಮತ್ತು ವಸಾಹತುಶಾಹಿ ಸೈನ್ಯವನ್ನು ಮಾತ್ರ ರಾಯಣ್ಣ ಗುರಿಯಾಗಿಟ್ಟಿದ್ದರಿಂದ ಅವರಿಗೆ ಅಪಾರ ಬೆಂಬಲ ಸಿಕ್ಕಿತ್ತು. ಈ ಕಾರಣದಿಂದಾಗಿಯೇ ರಾಯಣ್ಣನವರನ್ನು ಯುದ್ಧದ ಮೂಲಕ ಮುಗಿಸಲಾಗುವುದಿಲ್ಲವೆಂದು ಅರಿತ ಸರ್ಕಾರ, ಅವರನ್ನು ಮೋಸದಿಂದಲೇ ಸೆರೆ ಹಿಡಿಯುವ ಸಂಚು ರೂಪಿಸಿತು. ಇದಕ್ಕೆ ಭೂಮಾಲೀಕರ ಮತ್ತು ದುಷ್ಟ ಅಧಿಕಾರಿಗಳ ಬೆಂಬಲ ಸಿಕ್ಕಿತು.
ರಾಯಣ್ಣನವರ ಸೈನ್ಯ ಸೇರಿ ಒಳಗಿಂದಲೇ ಈ ರೈತ ಸಂಗ್ರಾಮವನ್ನು ನಾಶ ಮಾಡುವ ಜವಾಬ್ದಾರಿಯನ್ನು ಅಮಲ್ದಾರ ಕೃಷ್ಣರಾವ್ ಎಂಬಾತನಿಗೆ ಬ್ರಿಟಿಷ್ ಆಡಳಿತ ವಹಿಸಿತು. ಖುದ್ನಾಪುರದ ಪಟೇಲ ಲಿಂಗಣ್ಣ ಗೌಡ ತಾನೂ 300ಜನರೊಂದಿಗೆ ರಾಯಣ್ಣನ ಸೈನ್ಯ ಸೇರುವುದಾಗಿ ಸೂಚಿಸಿದ. ಇದಕ್ಕೆ ರಾಯಣ್ಣ ಒಪ್ಪಿ ಮಾರ್ಚ್ ತಿಂಗಳ ಹದಿನೈದು ದಿನಗಳ ಕಾಲ ಲಿಂಗಣ್ಣ ಗೌಡ ಎಲ್ಲ ಗೆರಿಲ್ಲಾ ಕಾರ್ಯಾಚರಣೆಗಳಲ್ಲಿ ತಾನೂ ಭಾಗವಹಿಸಿದ. ಸ್ಟೋಕ್ಸ್ ದಾಖಲಿಸಿರುವಂತೆ, "ಒಂದು ದಿನ, ರಾಯಣ್ಣ ತನ್ನ ಶಶ್ತ್ರಾಸ್ತ್ರಗಳನ್ನು ಬದಿಗಿಟ್ಟು ಸ್ನಾನ ಮಾಡುತ್ತಿದ್ದ. ಆಗ ನೇಗಿನಹಾಳದ ಸನಾದಿ ಲಕ್ಕಪ್ಪ ಎಂಬಾತ ಇದ್ದಕ್ಕಿದ್ದಂತೆ ರಾಯಣ್ಣನ ಮೇಲೆರಗಿ ಅವನನ್ನು ಬಂಧಿಸಿದ. ಅದೇ ವೇಳೆಗೆ ಇತರರು ಅವನ ಶಸ್ತ್ರಾಸ್ತ್ರಗಳನ್ನು ಕಟ್ಟಿ ಹಾಕಿ ಆತನನ್ನು ಧಾರವಾಡಕ್ಕೆ ಕರೆತಂದರು."
ರಾಯಣ್ಣನನ್ನು ಬಂಧಿಸಲು ಸಹಾಯ ಮಾಡಿದ್ದಕ್ಕೆ ಕೃಷ್ಣ ರಾವ್ಗೆ ನಗದು ಬಹುಮಾನ ನೀಡಲಾಯಿತು. ರೈತರ ಸಂಗ್ರಾಮಕ್ಕೆ ದ್ರೋಹ ಬಗೆದ ಭೂಮಾಲಿಕರಿಗೂ ಪ್ರಶಸ್ತಿಗಳನ್ನು ನೀಡಲಾಯಿತು. ಅವರೆಲ್ಲರಿಗೆ ಮುನ್ನೂರು ರೂಪಾಯಿಗಳ ನಗದು ಸೇರಿದಂತೆ ಇಡೀ ಹಳ್ಳಿಗಳನ್ನೇ ಇನಾಮಾಗಿ ನೀಡಿತು ಬ್ರಿಟಿಷ್ ಸರ್ಕಾರ. ಲಿಂಗಣ್ಣ ಗೌಡನಿಗೆ ಕಿತ್ತೂರು ಸಮೀಪದ ಕಲೊಲಿ ಗ್ರಾಮ ದಕ್ಕಿದರೆ, ಯೆಂಕನ ಗೌಡನಿಗೆ ಧಾರವಾಡದ ಹತ್ತಿರದ ಧೋಂ ಗ್ರಾಮ ದಕ್ಕಿತು. ಆದರೆ ರಾಯಣ್ಣ ಮತ್ತು ಸಂಗಡಿಗರಿಗೆ ಸಿಕ್ಕಿದ್ದು ಮರಣದಂಡನೆ!
ಈ ರೀತಿ ಬ್ರಿಟಿಷ್ ಸರ್ಕಾರ, ಕಪಟ ಜಾಲವೊಡ್ಡಿ, ದೇಶದ್ರೋಹಿಗಳ ಸಹಾಯದಿಂದ ರಾಯಣ್ಣನನ್ನು ಸೆರೆಹಿಡಿದು, ವಿಚಾರಣೆಗೊಳಪಡಿಸಿತು. ವಿಶೇಷ ನ್ಯಾಯಾಲಯ ಇವರನ್ನು ತಪ್ಪಿತಸ್ಥನೆಂದು ಘೋಷಿಸಿತು. ಇವರ ಕಾರ್ಯಕ್ಷೇತ್ರಗಳಲ್ಲಿ ಮುಖ್ಯವಾಗಿದ್ದ ನಂದಗಡದಲ್ಲಿ ಇವರನ್ನು 1831ರ ಜನವರಿ 26ರಂದು ಗಲ್ಲಿಗೇರಿಸಲಾಯಿತು.
ಸಂಗೊಳ್ಳಿ ರಾಯಣ್ಣ ತಮ್ಮ ಕಾರ್ಯದಲ್ಲಿ ಹೆಚ್ಚು ಕಾಲ ಸಫಲರಾಗದಿದ್ದರೂ ಬ್ರಿಟಿಷರ ಗುಲಾಮನಾಗಿ ಬಾಳುವುದಕ್ಕಿಂತ ಅವರೊಡನೆ ಹೋರಾಡಿ ವೀರಸ್ವರ್ಗವನ್ನು ಹೊಂದುವುದೇ ಮೇಲೆಂದು ಭಾವಿಸಿದ್ದವರು. ಕಿತ್ತೂರಿನ ರಾಣಿ ಚೆನ್ನಮ್ಮರ ವೀರಕಥೆಯಂತೆ ಸಂಗೊಳ್ಳಿ ರಾಯಣ್ಣನವರ ದೇಶಾಭಿಮಾನವೂ ಹಲವು ಜನಪದ ಗೀತೆಗಳಿಗೆ ವಸ್ತುವಾಗಿದೆ.
On the birth anniversary of Sangolli Rayanna who truly lit 🔥 the light of freedom movement with great sacrifice 🌷🙏🌷
ಕಾಮೆಂಟ್ಗಳು