ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಆರ್. ಪಾವಂಜೆ


ಮಾಧವ ರಾವ್ ಪಾವಂಜೆ

ಭಾರತೀಯ ಕಲಾಲೋಕದಲ್ಲಿ ಪಾವಂಜೆ ಕುಟುಂಬ ದೊಡ್ಡ ಹೆಸರು. ಹತ್ತೊಂಬತ್ತನೆಯ ಶತಮಾನದಲ್ಲಿ ಗೋಪಾಲಕೃಷ್ಣಯ್ಯ ಪಾವಂಜೆ ಅವರಿಂದ ಪ್ರಾರಂಭಗೊಂಡ ಕಲಾಸೇವೆ ಇಂದಿನ ಆ‍ ಕುಟುಂಬದ ತಲೆಮಾರಿನಲ್ಲೂ ನಿರಂತರವಾಗಿ ಹರಿಯುತ್ತಿದೆ. ನಮ್ಮ ಆತ್ಮೀಯರಾದ ಅನು ಪಾವಂಜೆ Anu Pavanje ಅವರೂ  ಈ ಕುಟುಂಬದ ಕಲಾವಿದೆ.

ಗೋಪಾಲಕೃಷ್ಣಯ್ಯ ಪಾವಂಜೆ ಅವರ ಮೂವರು ಮಕ್ಕಳಲ್ಲಿ ಒಬ್ಬರಾದ ಪಾವಂಜೆ ಭುಜಂಗರಾವ್ ಅವರ ಪುತ್ರರು  ಮಾಧವ ರಾವ್ ಪಾವಂಜೆ.  ಎಂ. ಆರ್. ಪಾವಂಜೆ ಎಂಬುದು ಇವರ ಹೆಸರಿನ ಕಿರು ರೂಪ.  ತಾಯಿ ಭಾರತಿ ರಾವ್. ಮಾಧವ ರಾವ್ ಪಾವಂಜೆಯವರು ಇವರ ಮೂರು ಹೆಣ್ಣು , ನಾಲ್ಕು ಗಂಡು ಮಕ್ಕಳಲ್ಲಿ ಮೂರನೆಯ ಮಗನಾಗಿ 1942ರ ಆಗಸ್ಟ್ 26ರಂದು ಜನಿಸಿದರು. ತಂದೆ ಭುಜಂಗ ರಾಯರೂ ಕಲೆಯನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡವರು. ಅಜ್ಜ, ದೊಡ್ಡಪ್ಪ ಎಲ್ಲರೂ ಕಲಾವಿದರೇ. ಕುಟುಂಬದ ವಾಹಿನಿಯಲ್ಲಿ ಕಲಾ ಶಿಕ್ಷಣ ತಾನೇ ತಾನಾಗಿ ಪ್ರವಹಿಸುತ್ತಿತ್ತು.

ಬಾಲ್ಯದಿಂದಲೇ ಮಾಧವ ರಾವ್ ಅವರಿಗೆ ಬಣ್ಣದೊಂದಿಗಿನ ಆಟಗಳ ಬದುಕು ಪಾಠ ಸಹಜವೇ ಎಂಬಂತೆ ಪ್ರಾಪ್ತವಾಗಿತ್ತು. ಮನೆಗೆ ಭೇಟಿ ನೀಡುತ್ತಿದ್ದ ಪ್ರಸಿದ್ಧ ಕಲಾವಿದರು ಮತ್ತು ಕಲಾ ಶಿಕ್ಷಣಕ್ಕಾಗಿ ಪಾವಂಜೆ ಮನೆಗೆ ಬರುವ ವಿದ್ಯಾರ್ಥಿಗಳನ್ನು ನೋಡುತ್ತಾ ಅವರ ಕಲೆಯನ್ನು ನೋಡುತ್ತಾ,  ಮಾತುಕತೆಗಳನ್ನು ಕೇಳುತ್ತಾ ಮಾಧವ ರಾವ್ ಬೆಳೆದರು.

ಮಾಧವ ರಾವ್ ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿರುವ ಸೆಂಟ್ರಲ್ ವಾರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಮೇಲೆ ಕೆನರಾ ಹೈಸ್ಕೂಲಿನಲ್ಲಿ ಮುಂದಿನ ಶಿಕ್ಷಣ ಪಡೆದರು. ತಂದೆ ಭುಜಂಗರಾಯರೂ ಕಲಾ ಅಧ್ಯಾಪಕರಾಗಿ ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. 

ಬದುಕನ್ನು ಸಾಗಿಸುವುದಕ್ಕೆ ಅನುವಾಗಲೆಂದು ಮಾಧವ ರಾವ್ ತಮ್ಮ ಅಜ್ಜ ಗೋಪಾಲಕೃಷ್ಣಯ್ಯನವರ ಶಿಷ್ಯಂದಿರಾದ ಎಲ್.ಕೆ. ಶೇವಗೂರರಲ್ಲಿ ಕಮರ್ಶಿಯಲ್ ಆರ್ಟ್‌ನಲ್ಲಿ ಶಿಕ್ಷಣ ಪಡೆದರು. ಜೀವನ ನಿರ್ವಹಣೆಯ ಹಾದಿಯಲ್ಲಿ ಹಲವು ವರ್ಷಗಳ ಕಾಲ ಅವರು ಹಲವಾರು ಜಾಹೀರಾತುಗಳನ್ನು ರಚಿಸಿ ಪ್ರಸಿದ್ಧರಾದರು. 

ಮಾಧವ ರಾವ್ ಮುಂದೆ  ಬ್ರಿಟಿಷ್ ಇನ್ಸಿಟ್ಯೂಟ್ ಆಫ್ ಆರ್ಟ್ಸ್‌ನಿಂದ ಕರೆಸ್ಪಾಂಡೆನ್ಸ್  ಆರ್ಟ್ಸ್ ಕೋರ್ಸನ್ನು ಮುಗಿಸಿ ಕಲೆಯ ಜ್ಞಾನದ ಬಗ್ಗೆ ಅರಿವನ್ನು ವಿಸ್ತರಿಸಿಕೊಂಡರು. ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರರು ಮಾಧವ ರಾವ್ ಪಾವಂಜೆ ಅವರ  ಅಜ್ಜ ಮತ್ತು ದೊಡ್ಡಪ್ಪನವರಿಂದ ಚಿತ್ರಕಲೆಯ ಮೂಲ ಪಾಠಗಳನ್ನು ಕಲಿತುಕೊಂಡು ಮಹಾನ್ ಕಲಾವಿದರಾಗಿ ಅರಳಿದವರು. ಮಾಧವ ರಾವ್ ಮುಂಬೈಗೆ  ಹೋದಾಗಲೆಲ್ಲಾ ಕೆ.ಕೆ. ಹೆಬ್ಬಾರರಿಂದ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಪಡೆಯುತ್ತಿದ್ದರು. ಹಾಗೆಯೇ ಹೆಬ್ಬಾರರೂ ಊರಿಗೆ ಬಂದಾಗಲೆಲ್ಲಾ ಇವರನ್ನು ಭೇಟಿಯಾಗುತ್ತಿದ್ದರು. ಇಂತಹ ಶ್ರೇಷ್ಠ ಕಲಾವಿದರೊಂದಿಗಿನ ಸಂಬಂಧವು ಅವರ ಕಲೆಯಲ್ಲಿ ಪರಿಪಕ್ವತೆ ತಂದುಕೊಳ್ಳಲು ಪೋಷಣೆ ನೀಡಿತು. 

ಕ್ರಮೇಣದಲ್ಲಿ ಮಾಧವರಾಯರು ಚಿತ್ರಕಲೆಯನ್ನು ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಸೃಜಿಸುವ ಶಕ್ತಿಯನ್ನು ಪಡೆದರು. ತೈಲವರ್ಣ, ಜಲವರ್ಣ, ಪೆನ್ಸಿಲ್ ಶೇಡಿಂಗ್‌ನಂತಹ ಕೃತಿಗಳಿಂದ ಅವರು ಕಲಾ ಸಂತೃಪ್ತಿಯನ್ನು ಅರಸಿದರು. ಅವರ ಕಲಾಕೃತಿಗಳು ಗಾಢವಾದ ಶ್ರದ್ಧೆಯಿಂದ ಮೂಡಿದವುಗಳಾಗಿವೆ. ಅವರ ಅಜ್ಜ ಗೋಪಾಲಕೃಷ್ಣಯ್ಯನವರ ಧಾರ್ಮಿಕ ಶ್ರದ್ಧೆ ಮಾಧವರಾಯರಲ್ಲೂ ಹರಿದಿತ್ತು. ಪ್ರತಿಭಾವಂತ ಸೃಜನಶೀಲ ಕಲಾವಿದ ಮನುಷ್ಯರನ್ನು ಬೆಸೆದು ಅವರ ಭಾವನೆಗಳನ್ನು ಅರಳಿಸುವಂತಿರಬೇಕು ಎಂಬುದು ಮಾಧವರಾಯರ  ಜೀವನ ಸಿದ್ಧಾಂತವಾಗಿತ್ತು. 

ಮಾಧವ ರಾವ್ ಪಾವಂಜೆಯವರು ಚಿತ್ರಕಲೆಯ ಜೊತೆಗೆ ಇನ್ನಿತರ ಹವ್ಯಾಸಗಳಲ್ಲೂ ಅರ್ಪಣಾಭಾವದಿಂದ ತೊಡಗಿಕೊಂಡವರು. ಸಂಗೀತ ಕೇಳುವುದು ಅವರಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಇಷ್ಟವಾದ ಹಾಡುಗಳನ್ನು ಗುನು ಗುನಿಸುತ್ತಾ, ನೆಲದ ಮೇಲೆ ಕುಳಿತು ಚಿತ್ರ ರಚಿಸಲು ಕುಳಿತರೆ ಅವರು ಲೋಕವನ್ನೇ ಮರೆಯುತ್ತಿದ್ದರು.

ಪ್ರಾಚೀನ ಅಂಚೆ ಚೀಟಿಗಳು, ನಾಣ್ಯಗಳು ಇತ್ಯಾದಿಗಳ ಅಪೂರ್ವವಾದ ಸಂಗ್ರಹ ಮಾಧವ ರಾವ್ ಅವರ ಬಳಿ ಇತ್ತು. ಭಾರತ ಸರಕಾರ ಮೊತ್ತಮೊದಲು ಹೊರಡಿಸಿದ ಕವರು, ಕಾರ್ಡ್, ಅಂಚೆ ಚೀಟಿಯಿಂದ ಮೊದಲುಗೊಂಡು ದೇಶ ವಿದೇಶಗಳ ಅಂಚೆ ಚೀಟಿಗಳ ಸಂಗ್ರಹದ ದೊಡ್ಡ ನಿಧಿಯೇ ಅವರ ಬಳಿ ಇತ್ತು. ಅವುಗಳನ್ನು ಅವರು ಜೋಡಿಸಿಟ್ಟುಕೊಂಡಿದ್ದ ಕ್ರಮವೂ ಕಲಾತ್ಮಕವಾಗಿತ್ತು. ಅದೇ ರೀತಿ ಅವರ ಬಳಿ ಇರುವ ನಮ್ಮ ನಾಡನ್ನಾಳಿದ ರಾಜರ ಚಿನ್ನ, ಬೆಳ್ಳಿಯ ನಾಣ್ಯಗಳ ಸಂಗ್ರಹವೂ ಉಲ್ಲೇಖಾರ್ಹವಾದದ್ದು. ಎಲ್ಲೂ ಕಾಣಸಿಗದ ಕೆಲವು ನಾಣ್ಯಗಳು ಉದಾಹರಣೆಗೆ ಅಳುಪರ ಕಾಲದ ನಾಣ್ಯಗಳು, ರೋಮ್ ನಾಣ್ಯಗಳು ಕೂಡಾ ಇವರ ಬಳಿ ಇದ್ದವು. ಅವರ ಮನೆಯ ಅಟ್ಟದ ಮೇಲಿನ ಒಂದು ದೊಡ್ಡ ಕೋಣೆ ಹಳೆಯ ಕಾಲದ ವಸ್ತುಗಳಿಂದ ತುಂಬಿತ್ತು.‍ ಸ್ವಾತಂತ್ರ್ಯ ಪೂರ್ವದ ಹಳೆಯ ಪತ್ರಿಕೆಗಳು, ಇಂದು ದುರ್ಲಭವಾದ ಕೆಲವು ಅಮೂಲ್ಯ ಗ್ರಂಥಗಳು, ಹಿಂದಿನ ದಿನ ಬಳಕೆಯ ಅಪೂರ್ವ ವಸ್ತುಗಳು ಜೋಪಾನವಾಗಿ  ಮತ್ತು ಆಕರ್ಷಕವಾಗಿ ಅಲ್ಲಿದ್ದವು. ತುಳು ಲಿಪಿಯ ಹಳೆಯ ಕೃತಿಗಳೂ ಅವರ ಸಂಗ್ರಹದಲ್ಲಿದ್ದವು.

ಮಾಧವ ರಾವ್ ಪಾವಂಜೆ ಅವರು ದಕ್ಷಿಣ ಕನ್ನಡ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷರಾಗಿಯೂ  ಕೆಲಸಮಾಡಿದ್ದರು. ಮಂಗಳಾ ಪೆಕ್ಸ್ 80ರ ಬೆಳ್ಳಿ ಪದಕವನ್ನು ಪಡೆದಿದ್ದರು. 84ರಲ್ಲಿ ಅತ್ಯುತ್ತಮ ಸಂಗ್ರಹಕಾರರೆಂಬ ಪ್ರಶಸ್ತಿಯೂ ಸಂದಿತ್ತು. ಇವರ ಸಂಗ್ರಹಕ್ಕೆ 1986ರಿಂದ ಮೊದಲುಗೊಂಡಂತೆ ಅನೇಕ ವರ್ಷಗಳು ನಿರಂತರವಾಗಿ ಬಹುಮಾನ ಸಂದಿದ್ದವು.  2001ರಲ್ಲಿ ನಾಸಿಕ್‌ನಲ್ಲಿ ರಾಷ್ಟ್ರಮಟ್ಟದ ಅಂಚೆ ಚೀಟಿ ಪ್ರದರ್ಶನ ಜರುಗಿದಾಗ ಇವರ ‘ಟ್ರಾವಂಕೂರ್-ಕೊಚ್ಚಿನ್’ ಸಂಗ್ರಹಕ್ಕೆ ರಜತ ಪದಕ ಗೌರವ ಸಂದಿತ್ತು.

ಪಾವಂಜೆ ಕುಟುಂಬದಲ್ಲಿ ಮಾಧವ ರಾವ್ ಪಾವಂಜೆ ಅವರ ಅಜ್ಜ, ತಂದೆ, ದೊಡ್ಡಪ್ಪಂದಿರೆಲ್ಲಾ ಪ್ರಯತ್ನಶೀಲ ದುಡಿತದಲ್ಲಿ ಸುಖ ಕಂಡವರು. ಯಶಸ್ಸು, ಪ್ರಶಸ್ತಿಗಳಿಗಾಗಿ ಹಂಬಲಿಸಿ ಕೈ ಚಾಚಿದವರಲ್ಲ. ಅದೇ ರೀತಿ ಮಾಧವ ರಾವ್ ಪಾವಂಜೆಯವರೂ ತಮ್ಮನ್ನು  ಗೌರವಿಸುವವರಿಲ್ಲ ಎಂಬ ಬೇಸರ ಹೊಂದಿದ್ದವರಲ್ಲ. ಕಲಾಕೈಂಕರ್ಯದಲ್ಲಿ ತಮ್ಮ ಸಂತೃಪ್ತಿ ಕಂಡುಕೊಂಡವರಾಗಿದ್ದರು.  

ಮಾಧವ ರಾವ್ ಫೇಸ್ಬುಕ್ ಆವರಣದಲ್ಲಿ ನಮ್ಮ ಬರಹಗಳನ್ನು ಆಗಾಗ ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು. ಸದ್ದುಗದ್ದಲವಿಲ್ಲದೆ ನಮ್ರರಾಗಿದ್ದ ಅವರು ಹಾಗೆಯೇ ಅದೇ ನಿಃಶಬ್ಧತೆಯಲ್ಲೇ 2021ರ ಅಕ್ಟೋಬರ್ 29ರಂದು ಈ ಲೋಕದಿಂದ ಹೊರನಡೆದರು. 

ಮಾಹಿತಿ ಆಧಾರ: ಕನ್ನಡ ಸಂಘ ಕಾಂತಾವರ ಅವರ,  ನಾಡಿಗೆ ನಮಸ್ಕಾರ ಪುಸ್ತಕ ಸರಣಿ.

On the birthday anniversary of Madhava Rao Pavanje 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ