ಗಿರಿಧರ ಕಾಮತ್
ಗಿರಿಧರ ಕಾಮತ್
ಇಂದು ನನ್ನ ಆತ್ಮೀಯರಾದ ಪ್ರಖ್ಯಾತ ಬರಿಗಾಲಿನ ಓಟಗಾರ ಗಿರಿಧರ ಕಾಮತ್ ಅವರ ಹುಟ್ಟುಹಬ್ಬ. ವರ್ಷಕ್ಕೆ ಅವರು ಓಡುತ್ತಿರುವ ಓಟ 6000ಕ್ಕೂ ಹೆಚ್ಚಿನ ಕಿಲೋಮೀಟರ್ ವ್ಯಾಪ್ತಿಯದ್ದು. ಸದಾ ಸಂತಸದಿಂದ ಇದ್ದು 'ಶಿವ ಮಡಗ್ದಂಗೆ' ಎಂದು ತಮ್ಮ ಫೇಸ್ಬುಕ್ ದಿನಚರಿಯಲ್ಲಿ ನಮೂದಿಸುವ ಗಿರಿಧರ್ ತಮ್ಮ ಬದುಕನ್ನೂ ಹಾಂಗೇ ಸ್ವೀಕರಿಸಿದವರು.
ಓಟ, ಓಟ, ಓಟ. ಎಲ್ಲೆಲ್ಲಿಯೂ ನಾವು ಓಡುತ್ತಿರುತ್ತೇವೆ. ತಲುಪಬೇಕಾದ ತಾಣಕ್ಕೆ ಓಡುವುದು ಒಂದು ರೀತಿಯ ಓಟವಾದರೆ, ಬಯಕೆಗಳ ಹಿಂದೆ ಮನ ಓಡುವುದು ಮತ್ತೊಂದೇ ತೆರನಾದ ಓಟ. ಕ್ರೀಡೆಯಲ್ಲಿ ಗೆಲ್ಲಲು ಓಡುವುದು ಮತ್ತೊಂದು ಓಟ. ದೈಹಿಕ ದಾರ್ಢ್ಯ ಉತ್ತಮವಾಗಿರಿಸಿಕೊಳ್ಳಲು ಓಡುವವರದ್ದು ಇನ್ನೊಂದು ಬಗೆ. ದಿನಕ್ಕೆ ಅತಿ ಕಡಿಮೆ ಎಂದರೂ ಹತ್ತು ಕಿಲೋಮೀಟರ್ ಓಡುವ ನಮ್ಮೀ ಆತ್ಮೀಯರಾದ ಗಿರಿಧರ್ ಕಾಮತ್ ಅವರ ಓಟ ಎಂತದ್ದು?
ಓಟ ಎಂಬುದು ಒಂದು ರೀತಿಯಲ್ಲಿ ಮುನ್ನೋಟದ ಸೂಚಕ. ಗಿರಿಧರ ಕಾಮತ್ ಅವರೊಡನೆ ಮಾತನಾಡುವಾಗ, ಅವರು ಒಂದು ಸಮಗ್ರತೆಯ ಹಿನ್ನೋಟಕ್ಕೆ ನಮ್ಮನ್ನು ಕರೆದೊಯ್ದಂತೆ ಭಾಸವಾಗುತ್ತದೆ. ಅಂದರೆ ಅವರು ಭೂತಕಾಲದಲ್ಲಿ ಕಳೆದುಹೋದವರು ಎಂದಲ್ಲ. ಅವರು ತಮ್ಮ ಇದುವರೆಗಿನ ಸಂಪೂರ್ಣ ಜೀವನದ ಪ್ರತೀ ಘಟನೆಗಳೂ ತಮ್ಮ ಪ್ರಸಕ್ತ ಜೀವನದ ಒಂದು ಪ್ರತಿಫಲನವಾಗಿದೆ ಎಂಬುದರ ಕುರಿತಾಗಿ ಅಚ್ಚರಿ ಹುಟ್ಟಿಸುವಂತಹ ಜಾಗೃತಿಯನ್ನು, ತಮ್ಮ ವ್ಯಕ್ತಿದ ಒಂದು ಭಾಗವಾಗಿ ಮೇಳೈಸಿಕೊಂಡವರಂತಿದ್ದಾರೆ. “ನಾನು ಯಾವುದೇ ಸಾಧನೆಯ ಹಿಂದೆ ಬೆನ್ನಟ್ಟಿ ಹೋಗಬೇಕು ಎಂದು ಬದುಕುವವನಾಗಿಲ್ಲ. ಯಾವುದೇ ವೈಭವಯುತ ಜೀವನವೂ ನನ್ನ ಗುರಿಯಲ್ಲ. ನಾನು ಎಲ್ಲವನ್ನೂ ನನ್ನ ಸಂತೋಷಕ್ಕೆ ಮಾಡುತ್ತೇನೆ. ಯಾವುದನ್ನೂ ಪೂರ್ವನಿಯೋಜಿತವಾಗಿ ಎಂಬಂತೆ ಮಾಡುವುದಿಲ್ಲ. ದಿನದ ಪ್ರಾರಂಭದಲ್ಲಿ ನಾನು ಅಂದಿಗೆ ಏನು ಮಾಡಬೇಕು ಎಂಬುದರ ಸೂಕ್ಷ ಕಲ್ಪನೆಯನ್ನಿರಿಸಿಕೊಂಡು ಮುಂದುವರೆಯುತ್ತೇನೆ. ಮತ್ತೊಬ್ಬರಿಗೆ ನಾನು ಇಂತದ್ದು ಮಾಡುತ್ತೇನೆ ಎಂದು ಒಪ್ಪಿಕೊಂಡದ್ದರ ಹೊರತಾಗಿ ‘ನನಗಾಗಿ ನಾಳೆಗೆ’ ಎಂದು ಏನನ್ನೂ ಇಂದು ಯೋಜಿಸಹೋಗುವುದಿಲ್ಲ” ಎಂದು ತಮ್ಮ ಕುರಿತು ವ್ಯಾಖ್ಯಾನಿಸಿಕೊಳ್ಳುವ ಗಿರಿಧರ ಕಾಮತರ ಮಾತು ಅವರ ನಿರಂತರ ಸಂತಸ ಹೊರಹೊಮ್ಮಿಸುವ ಮುಖಾರವಿಂದದ ಗುಟ್ಟಿನಂತೆಯೂ ಇದೆ.
1970ರ ವರ್ಷದ ಸೆಪ್ಟೆಂಬರ್ 9ರಂದು ಮಾಸ್ತಿಯಲ್ಲಿ ಜನಿಸಿದ ಗಿರಿಧರ ಕಾಮತ್ ಚಿಕ್ಕವಯಸ್ಸಿನಿಂದಲೂ ಉತ್ಸಾಹಿ ಹುಡುಗ. ಶಾಲೆಯಲ್ಲಿ ಓದುವಾಗ ಮೂರು ವರ್ಷ ಸತತವಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹೆಸರಿನಲ್ಲಿದ್ದ ದತ್ತಿಯ ಹಣದ ಬಹುಮಾನ ಪಡೆದ ಹೆಗ್ಗಳಿಕೆ ಇವರದ್ದು. ತಂದೆ ಪುಟ್ಟದೊಂದು ಹೋಟೆಲ್ ನಡೆಸುತ್ತಿದ್ದರು. ಕರುಣಾಳುವಾದ ತಾಯಿ ಅಂದೂ ಇಂದೂ ಸುತ್ತಮುತ್ತಲಿನ ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಮೃದು ಹೃದಯಿ. ಈ ಕುಟುಂಬದ ಐದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದವರು ಗಿರಿಧರ್. ಐದು ಗಂಡು ಮಕ್ಕಳಲ್ಲಿ ಇವರೇ ಮಧ್ಯಮ ಪಾಂಡವ. ಗಿರಿಧರ್ ಓದಿನ ಜೊತೆಯಲ್ಲಿ ತಂದೆಯ ಹೋಟೆಲಿನಲ್ಲಿ ಒಂದಷ್ಟು ಕೆಲಸ ಕೂಡಾ ಮಾಡುತ್ತಿದ್ದರು. ಅಲ್ಲಿನ ಶಿವ ದೇಗುಲದಲ್ಲಿ ಭಾವಿಯಲ್ಲಿ ಸೇದಿ ನೀರು ತರುವುದರಿಂದ ಮೊದಲುಗೊಂಡು ಅಲ್ಲಿನ ಅರ್ಚಕರಾಗಿದ್ದ ಶ್ರೀಕಂಠಶಾಸ್ತಿಗಳಿಗೆ ಪೂಜೆಗೆ ಬೇಕಾದ ಸಕಲ ವ್ಯವಸ್ಥೆಯನ್ನೂ ಸಿದ್ಧಗೊಳಿಸಿಕೊಡುವ ದಿನಚರಿ ಅವರದ್ದಾಗಿತ್ತು. ಹೀಗೆ ತಮ್ಮ ಬಾಲ್ಯವನ್ನು ಕಳೆದ ಗಿರಿಧರ್ ಪಿ.ಯು.ಸಿ ನಂತರದಲ್ಲಿ ಮನೆಯಲ್ಲಿದ್ದ ಹಣಕಾಸಿನ ಅಡಚಣೆಯ ದೃಷ್ಟಿಯಿಂದ ಓದಿಗೆ ಮಂಗಳವನ್ನು ಹಾಡಿದರು.
ಮುಂದೆ ತಂದೆಯ ಹೋಟೆಲಿನಲ್ಲೆ ಒಂದಷ್ಟು ಕೆಲಸ ಮಾಡುತ್ತಿದ್ದ ಗಿರಿಧರ್, ತಾಯಿಯ ಸಂಬಂಧಿಕರೊಬ್ಬರು ಮೈಸೂರಿನ ದಸರಾ ವಸ್ತುಪ್ರದರ್ಶನದ ಸಮಯದಲ್ಲಿ ತಾವು ಇರಿಸಿದ್ದ ಮಳಿಗೆಯಲ್ಲಿ ವಹಿವಾಟು ನಡೆಸಲು ನಿಮ್ಮ ಗಿರಿಧರನನ್ನು ಕಳುಹಿಸಿ ಎಂದು ಸಹಾಯ ಕೇಳಿದಾಗ ಆ ಕೆಲಸದಲ್ಲಿ ಪಾಲ್ಗೊಂಡರು. ಕಾರಣಾಂತರದಿಂದ ಆ ಬಂಧುಗಳು ಆ ವ್ಯವಹಾರವನ್ನು ಮೈಸೂರು ವಸ್ತುಪ್ರದರ್ಶನ ಮುಗಿದ ನಂತರದಲ್ಲಿ ಮುಂದುವರೆಸಲಿಲ್ಲ. ಈ ಸಮಯದಲ್ಲಿ “ಕೆಲಸಕ್ಕೆ ಎಂದು ಬೇರೆ ಊರಿಗೆ ಹೋದವ, ತಾನು ಈಗ ಕೆಲಸ ಇಲ್ಲ ಎಂದು ಹೇಗೆ ಊರಿಗೆ ವಾಪಸ್ಸಾಗುವುದು?” ಎಂಬ ಅರಿಮೆಯಲ್ಲಿ ಬೆಂಗಳೂರಿನ ಕಲಾಸಿಪಾಳ್ಯದ ಕಬ್ಬಿಣದ ಅಂಗಡಿಯಲ್ಲಿ ಕೆಲಕಾಲ ಕೆಲಸ ಮಾಡಿದರು. ಮುಂದೆ ಗಿರಿಧರ್ ಪ್ರಸಿದ್ಧ ಜಾದೂಗಾರ ಉದಯ್ ಜಾದೂಗಾರ್ ಅವರ ಬಳಿ 3 ವರ್ಷಗಳ ಕಾಲ ಕೆಲಸ ಮಾಡಿದರು. ನಂತರದಲ್ಲಿ ಸ್ವಯಂ ಉದ್ಯೋಗ ಆರಂಭಿಸಿದ ಗಿರಿಧರ್ ಇಂದು ಮ್ಯಾಜಿಕ್ ಟಾಯ್ಸ್ ಉದ್ಯಮದಲ್ಲಿ ಗಣನೀಯ ಯಶಸ್ಸಿನಿಂದ ಮುಂದುವರೆದಿದ್ದಾರೆ.
ತಮ್ಮ ವಿಶಿಷ್ಟ ಯಕ್ಷಿಣಿ ಆಟಿಕೆಗಳನ್ನು ವಸ್ತುಪ್ರದರ್ಶನಗಳ ಸಂದರ್ಭದಲ್ಲಿ ಮಾರಾಟ ಮಾಡುತ್ತಿದ್ದ ಗಿರಿಧರ್ ತಮ್ಮ ಪಯಣದಲ್ಲಿ ಅನೇಕ ಮಹನೀಯರುಗಳು ತಮಗೆ ತೋರಿದ ಪ್ರೀತಿ ವಿಶ್ವಾಸಗಳನ್ನು ಆಪ್ತವಾಗಿ ನೆನಪಿನಲ್ಲಿರಿಸಿಕೊಂಡಿದ್ದಾರೆ. ಒಮ್ಮೆ ಗಿರಿಧರ ಕಾಮತ್ ಅವರ ಆಟಿಕೆಗಳ ಪ್ರದರ್ಶನವನ್ನು ಮತ್ತು ಅದರಲ್ಲಿ ಇವರಿಗಿರುವ ಶ್ರದ್ಧೆಯನ್ನು ಪ್ರದರ್ಶನವೊಂದರಲ್ಲಿ ಕಂಡು ಮೆಚ್ಚಿಕೊಂಡವರು ಪ್ರಸಿದ್ಧ ಪುಸ್ತಕೊದ್ಯಮಿ ಗಂಗಾರಾಮ್. ಅವರು ತಮ್ಮ ಸಂಸ್ಥೆ ಪಾಲ್ಗೊಂಡಿದ್ದ ಬೃಹತ್ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಆಟಿಕೆಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಗಿರಿಧರ ಕಾಮತ್ ಅವರಿಗೆ ಅನುವು ಮಾಡಿಕೊಟ್ಟರು. ಗಂಗಾರಾಮ್ ಅವರು ತಾವು ವಿದೇಶದಿಂದ ವಿಶೇಷವಾಗಿ ತರಿಸಿದ್ದ ಬೃಹತ್ ಕೊಡೆಯನ್ನು ಸಹಾ ಈ ಉತ್ಸಾಹಿ ಗಿರಿಧರ ಕಾಮತರಿಗೆ ಒದಗಿಸಿದ್ದೇ ಅಲ್ಲದೆ, ಒಬ್ಬ ಮಾರಾಟ ಮಾಡುವ ವ್ಯಕ್ತಿ, ಗ್ರಾಹಕನನ್ನು ಸೆಳೆಯುವಲ್ಲಿ ಹೊಂದಿರಬೇಕಾದ ವಿಶಿಷ್ಟ ಅಭಿವ್ಯಕ್ತಿ ಕೌಶಲ್ಯ ಸ್ವರೂಪಗಳ ಬಗ್ಗೆ ಒಳನೋಟವನ್ನು ಸಹಾ ನೀಡಿ ಪ್ರೋತ್ಸಾಹಿಸಿದರು. ಒಮ್ಮೆ ಇವರ ಮಳಿಗೆಯಿದ್ದ ವಸ್ತುಪ್ರದರ್ಶನವೊಂದಕ್ಕೆ ಆಗಮಿಸಿದ್ದ ಅಂದಿನ ಪ್ರಸಿದ್ಧ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರು, ಗಿರಿಧರ ಕಾಮತ್ ಅವರ ಮಳಿಗೆಗೆ ಆಗಮಿಸಿ ಇವರ ಆಟಿಕೆಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಆಸಕ್ತಿಯಿಂದ ತಿಳಿದು, ನನ್ನ ಮೊಮ್ಮಕ್ಕಳಿಗಾಗಿ ತೆಗೆದುಕೊಂಡು ಹೋಗಿ ಅವರೊಡನೆ ಆಟವಾಡುತ್ತೇನೆ ಎಂದು ಮೂರು ಸೆಟ್ ಆಟಿಕೆಗಳನ್ನು ಕೊಂಡುಕೊಂಡು ತಮ್ಮ ಜೇಬಿನಿಂದಲೇ ಹಣ ತೆಗೆದುಕೊಟ್ಟರು. ಇಂತಹ ಅಪಾರ ಮುದನೀಡುವ ಅನೇಕ ಅನುಭವಗಳು ಗಿರಿಧರ ಕಾಮತರ ಬೆಳವಣಿಗೆಯ ಯಾನದಲ್ಲಿವೆ.
ತಾವು ಯಕ್ಷಿಣಿ ಆಟಿಕೆಗಳ ವಹಿವಾಟನ್ನು ಸ್ವಂತವಾಗಿ ಪ್ರಾರಂಭಿಸಿದ ಸಮಯದಲ್ಲಿ ವಿದೇಶದಿಂದ ಆಮದಿಸಿದ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದ ಗಿರಿಧರ್ ಮುಂದೆ ಆಟಿಕೆಗಳ ಉತ್ಪನ್ನವನ್ನೂ ತಾವೇ ಮಾಡಿ ರಫ್ತು ಉದ್ಯಮಿಯೇ ಆದರು. ಆದರೆ, ರಫ್ತು ಉದ್ಯಮದಲ್ಲಿ ಚೀನಾದ ಕಡಿಮೆ ಬೆಲೆಯ ಕಡಿಮೆ ಗುಣಮಟ್ಟದ ಆಟಿಕೆಗಳ ಜೊತೆಗೆ ಸ್ಪರ್ಧೆ ಹೂಡಬೇಕಾದ ಸಂದರ್ಭ ಒದಗಿದಾಗ, ಗುಣಮಟ್ಟದಲ್ಲಿ ಅಂತಹ ಹೊಂದಾಣಿಕೆ ಮಾಡಿಕೊಳ್ಳುವುದಕ್ಕಿಂತ ರಫ್ತಿನ ಬಾಬತ್ತನ್ನೇ ಪಕ್ಕಕ್ಕಿಟ್ಟುಬಿಟ್ಟು ದೇಶೀಯ ಮಾರುಕಟ್ಟೆಯಲ್ಲೇ ತಮ್ಮ ಉತ್ತಮ ಗುಣಮಟ್ಟದ ಹೆಸರಿನಿಂದ ಉತ್ತಮ ಉದ್ಯಮಿಯಾಗಿ ಮುಂದುವರೆದಿದ್ದಾರೆ. ಗಿರಿಧರ ಕಾಮತರು ತಮ್ಮ ಯಕ್ಷಿಣಿ ಆಟಿಕೆಗಳನ್ನು ವಿಶ್ವದ ಮೂಲೆ ಮೂಲೆಯ ದೇಶಗಳಲ್ಲಿ ನಡೆದ ಯಕ್ಷಿಣಿ ಉತ್ಸವಗಳ ಸಂದರ್ಭಕ್ಕೆ ಹೊಂದಿಕೊಂಡಂತೆ ನಡೆಯುವ ವಸ್ತುಪ್ರದರ್ಶನಗಳಲ್ಲಿ ಪ್ರಸ್ತುತಪಡಿಸಿ ಬಂದ ವಿಸ್ತೃತ ಅನುಭವಿಯಾಗಿದ್ದಾರೆ.
ಗಿರಿಧರ ಕಾಮತರಿಗೆ ತಮ್ಮ ಉದ್ಯಮದ ಕೆಲಸವೂ ಒಂದು ಸಂತಸದ ಕ್ರಿಯೆಯೇ ವಿನಃ, ವಹಿವಾಟಿನಿಂದ ತಲೆಕೆಡಿಸಿಕೊಂಡು ಹಣಮಾಡುವ ಯಾಂತ್ರಿಕ ದಿನಚರಿಯಲ್ಲ. ಅವರ ಸಂಸ್ಥೆ ಇಂದು ಸ್ವಯಂಚಾಲನಾ ಮನೋಭಾವವನ್ನು ರೂಢಿಸಿಕೊಂಡಿರುವಂತದ್ದಾಗಿದ್ದು, ಅಲ್ಲಿ ತಾವು ನಿಯಮಿತವಾಗಿ ಹೋಗಿ ಮಾಡಬೇಕು ಎನ್ನುವಂತದ್ದು ಏನೂ ಇಲ್ಲ. ತಮಗೆ ಅಲ್ಲಿ ಸಂತಸದಿಂದ ಹೋಗಬೇಕು ಎನಿಸಿದಾಗ ಹೋಗುತ್ತೇನೆ. ನಾನು ಅಲ್ಲಿ ಕೇವಲ ಕಾರ್ಯ ನಿಯಂತ್ರಕನಾಗಿ ಹೋಗಬೇಕಾದ ಅವಶ್ಯಕತೆ ಇಲ್ಲ ಎಂಬುದನ್ನು ಮನಗಂಡಿದ್ದೇನೆ ಎಂಬ ಮುಕ್ತಭಾವದ ಉದ್ಯಮಿಯಾಗಿ ತಮ್ಮನ್ನು ಕಂಡುಕೊಳ್ಳುತ್ತಿದ್ದಾರೆ. ಕೃಷಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಗಿರಿಧರ ಕಾಮತರಿಗೆ ಅವರು ಬದುಕಿನಲ್ಲಿ ಸಂತಸವನ್ನು ಬಯಸುವ ದಿನಚರಿಗಳಲ್ಲಿ ಮೊದಲಿನಿಂದಲೂ ಜೊತೆಗೂಡಿದ್ದು ಅವರ ಬೆಳಗಿನ ನಡೆ. ಅವರು ಸುಮಾರು ಎರಡು ದಶಕಗಳ ಕಾಲದಿಂದ ಪ್ರತೀ ದಿನ ತಮ್ಮ ಆತ್ಮೀಯರೊಂದಿಗೆ ಬೆಳಗಿನ ನಡೆಯನ್ನು ತಪ್ಪದೆ ನಡೆಸುತ್ತಿದ್ದರು. ಮುಂದೆ ಅವರು ಬಂದದ್ದು ಓಟಕ್ಕೆ. ಇದಕ್ಕೆ ಪ್ರೇರಕವಾಗಿದ್ದು ಪ್ರಸಿದ್ಧವಾದ ‘10k ರನ್’ ಕ್ರೀಡಾಕೂಟ. 2007ರ ವರ್ಷದಲ್ಲಿ ಪ್ರಾರಂಭಗೊಂಡ ‘10k ರನ್’ ಎಂಬ ಸಮೂಹ ಓಟದ ಕ್ರೀಡಾಕೂಟ 2010ರ ವರ್ಷದ ವರೆಗೆ ‘ಸನ್ ಫೀಸ್ಟ್’ ಸಂಸ್ಥೆಯ ಆಯೋಜನೆಯಲ್ಲಿ ನಡೆಯುತ್ತಿತ್ತು. 2011ರ ವರ್ಷದಲ್ಲಿ ಅದು ಪ್ರಸಿದ್ಧ ಟಾಟಾ ಸಮೂಹದ ಟಿ.ಸಿ.ಎಸ್ ಆಯೋಜನೆಯ ಪರಿವಿಡಿಯಲ್ಲಿ ಬಂದಾಗ ಅದಕ್ಕೆ ಹೆಚ್ಚಿನ ಮಟ್ಟದ ವ್ಯಾಪ್ತಿ ಪ್ರಚಾರಗಳ ರೆಕ್ಕೆಗಳು ಹಬ್ಬಿಕೊಂಡವು. ಈ ಸಂದರ್ಭದಲ್ಲಿ ಗಿರಿಧರ ಕಾಮತರ ಗೆಳೆಯರು ನಾವೂ ಇದರಲ್ಲಿ ಪಾಲ್ಗೊಳ್ಳೋಣ ಎಂದಾಗ, ಮೊದಲು ಗಿರಿಧರ ಕಾಮತ್ ನಾನು ಓಟಗಾರನಲ್ಲ, ಆದ್ದರಿಂದ ಒಲ್ಲೆ ಎಂದರು. ಆಗ ಗೆಳೆಯರು ನಾವು ಈ ಓಟದಲ್ಲಿ 10 ಕಿಲೋ ಮೀಟರ್ ವ್ಯಾಪ್ತಿಯನ್ನು ಎರಡು ಗಂಟೆಗಳಲ್ಲಿ ಕ್ರಮಿಸಬೇಕು ಅಷ್ಟೇ ಎಂದಾಗ “ಹ್ಞಾ, ನಾವು ಹತ್ತು ಕಿಲೋ ಮೀಟರ್ ದೂರವನ್ನು ನಡಿಗೆಯಲ್ಲೇ ಪ್ರತೀ ದಿನ ಒಂದೂವರೆ ಗಂಟೆಗಳ ಅವಧಿಯಲ್ಲೇ ಮಾಡುತ್ತಿದ್ದೇವೆಲ್ಲಾ!” ಎಂದು ಅಚ್ಚರಿಗೊಂಡ ಗಿರಿಧರ್ ಸರಿ ಓಡೋಣ ಎಂದು ತಕ್ಷಣದಿನದಲ್ಲೇ ತಯಾರಿ ಪ್ರಾರಂಭಿಸಿಯೇ ಬಿಟ್ಟರು. ಈ ಕುರಿತು ತಾವು ಮತ್ತು ತಮ್ಮ ಗೆಳೆಯರು, ಪ್ರತಿಷ್ಟಿತ ಸ್ಪೋರ್ಟ್ಸ್ ಮಳಿಗೆಗೆ ಹೋಗಿ ಅತ್ಯಂತ ದುಬಾರಿ ಹಣ ತೆತ್ತು ಓಟಕ್ಕಾಗಿ ಅದು ಸೂಕ್ತವೋ ಅಲ್ಲವೋ ಎಂದು ಕೂಡಾ ತಿಳಿಯದೆ ಬಟ್ಟೆಗಳನ್ನು ಕೊಂಡುದನ್ನು ನೆನೆದು ನಗುತ್ತಾರೆ. ಆದರೆ ಗಿರಿಧರ ಕಾಮತ್ ಈ ಓಟವನ್ನು ತುಂಬಾ ಗಂಭೀರವಾಗಿ ಮನಸ್ಸಿಗೆ ತೆಗೆದುಕೊಂಡುಬಿಟ್ಟಿದ್ದರು. ಈ ಗಂಭೀರತೆ ಎಷ್ಟು ಪ್ರಖರವಾಗಿತ್ತೆಂದರೆ “ಟಿ.ಸಿ.ಎಸ್ 2011ರ 10k ರನ್” ಸಮೂಹ ಓಟದ ಕೂಟದಲ್ಲಿನ ತಮ್ಮ ಮೊಟ್ಟ ಮೊದಲ ಪ್ರಯತ್ನದಲ್ಲೇ, ಗಿರಿಧರ್ 10 ಕಿಲೋ ಮೀಟರ್ ಓಟವನ್ನು ಕೇವಲ 1 ಗಂಟೆ 3 ನಿಮಿಷದಲ್ಲಿ ಹರ್ಷ- ಉತ್ಸಾಹ-ಚೈತನ್ಯಗಳು ತುಂಬಿದ ನಗೆಮೊಗದ ಗೆಲುವಿನಿಂದ ಸಾಧಿಸಿದ್ದರು. ಗಿರಿಧರ ಕಾಮತರು ತಾವು ಈ ಕೂಟದಲ್ಲಿ ಭಾಗವಹಿಸುವ ಕುರಿತು, ತಮ್ಮೊಂದಿಗೆ ನಡಿಗೆ ಹಾಗೂ ಓಟದ ತಯಾರಿಯಲ್ಲಿದ್ದ ಕೆಲವು ಗೆಳೆಯರಿಗೆ ಹೊರತಾಗಿ ಬೇರೆಯವರಿಗೆ ಯಾವುದೇ ರೀತಿಯಲ್ಲೂ ಹೇಳಿರಲಿಲ್ಲ. ಆದರೆ ದೇಶ ವಿದೇಶಗಳಿಂದೆಲ್ಲಾ ಗಿರಿಧರ ಕಾಮತರಿಗೆ ಪರಿಚಿತರ ದೂರವಾಣಿ ಕರೆಗಳು ಬರಲು ತೊಡಗಿದವು. ಕಾರಣ “ಗಿರಿಧರ ಕಾಮತರು ತಮ್ಮ ಓಟವನ್ನು ಗೆಲುವಿನೋಪಾದಿಯ ಸಂಭ್ರಮವಾಗಿ ತಮ್ಮ ದೈಹಿಕ ಅಭಿವ್ಯಕ್ತಿಯಲ್ಲಿ ಹೊರಸೂಸುತ್ತಿದ್ದ ಚಿತ್ರವನ್ನು ಟಿ.ಸಿ.ಎಸ್ ಸಂಸ್ಥೆ ಪತ್ರಿಕೆಗಳಲ್ಲಿನ ಬೃಹತ್ ಮಧ್ಯಮ ಪುಟದ ಜಾಹೀರಾತಿನಲ್ಲಿ ಬಿಂಬಿಸಿತ್ತು”. ಇಷ್ಟೇ ಅಲ್ಲದೆ ಗಿರಿಧರ ಕಾಮತ್ ಅವರಿಗೆ “ಟಿ.ಸಿ.ಎಸ್ 2011ರ 10k ರನ್” ಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಮೊದಲ ಹತ್ತು ಜನರಿಗೆ ಕೊಡಲಾಗುವ ‘ಟಿ-ಶರ್ಟ್’ ಕೂಡಾ ಲಭಿಸಿತು. ಈ ಗಮನಾರ್ಹ ಸಾಧನೆ ಮಾಡಿದ ಗಿರಿಧರ ಕಾಮತರಿಗೆ ಕೆ. ಸಿ. ಕೊಂದಂಡಪಾಣಿ ಅವರ ಓಟದ ಮಾರ್ಗದರ್ಶನ ಕೂಡಾ ಲಭಿಸುವಂತಾಯಿತು. ಮುಂದಿನ ವರ್ಷದ ಕೂಟವಾದ “ಟಿ.ಸಿ.ಎಸ್ 2012ರ 10k ರನ್” ಆಯೋಜನೆಯಲ್ಲಿ ಗಿರಿಧರ ಕಾಮತ್ ತಮ್ಮ 10 ಕಿಲೋ ಮೀಟರ್ ಓಟವನ್ನು 53 ನಿಮಿಷಗಳಲ್ಲೇ ಸಾಧಿಸಿ ಮತ್ತಷ್ಟು ಉತ್ತಮತೆಯನ್ನು ಪ್ರತಿಬಿಂಬಿಸಿದರು.
“ಟಿ.ಸಿ.ಎಸ್ 2013ರ 10k ರನ್” ಸಮಾವೇಶದ ಸಮಯದಲ್ಲಿ ಗಿರಿಧರ ಕಾಮತರ ಗುರುಗಳು ಈ ಸಲ 48 ನಿಮಿಷಗಳ ಸಾಧನೆಯನ್ನು ಗುರಿಯಲ್ಲಿಡುವಂತೆ ಅವರಿಗೆ ಸೂಚಿಸಿದರು. ಗಿರಿಧರ ಕಾಮತರಿಗೆ ತಮ್ಮ ಸಾಧನೆಯನ್ನು 43 ನಿಮಿಷಗಳಲ್ಲೇ ಮುಗಿಸಬೇಕೆಂಬ ಆಕಾಂಕ್ಷೆ ಗರಿಗೆದರಿತ್ತು. ಆದರೆ ಅದರ ಪರಿಣಾಮ ಹೀಗೆಂದು ಆವರ ಊಹೆಗೆ ದಕ್ಕಿರಲಿಲ್ಲ! ಓಟದ ಪ್ರಾರಂಭಿಕ ಕ್ಷಣಗಳಲ್ಲೇ ತಮ್ಮ ಓರಗೆಯವರನ್ನೆಲ್ಲಾ ಮೀರಿ ಓಡುತ್ತಾ ಸಾಗಿದ್ದ ಗಿರಿಧರರಿಗೆ ಅವರ ತೋಳು ಪಟ್ಟಿಯಲ್ಲಿದ್ದ ಮಾಪನ ಇಪ್ಪತ್ತೇ ನಿಮಿಷಗಳಲ್ಲಿ 6 ಕಿಲೋ ಮೀಟರ್ ಓಟವನ್ನು ಮುಗಿಸಿದ್ದುದರ ಸಂಭ್ರಮವನ್ನು ರಿಂಗಣಿಸಿತ್ತು. ಆದರೆ, ಆ ಕ್ಷಣದಿಂದಲೇ ಗಿರಿಧರರಿಗೆ ಅವರ ಓಟದ ಮೇಲಿನ ಅರಿವಿನ ಕೊಂಡಿ ಕಳಚಿಕೊಂಡಿತ್ತು. ಮುಂದೆ ಅವರು ಓಟ, ಕಣ್ಣು ಕಾಣದವನ ಓಟವಾಗಿತ್ತಾದರೂ ತನ್ನ ಓಘವನ್ನು ಯಾಂತ್ರಿಕವೆಂಬಂತೆ ಕ್ರಮಿಸುತ್ತಾ ಸಾಗಿತ್ತು. ಈ ಹಾದಿಯಲ್ಲಿ ಸಾಗಿದ್ದವರಿಗೆ ಸುತ್ತಲಿನ ಪ್ರೋತ್ಸಾಹದ ಧ್ವನಿಯೊಂದು ಕೇಳಿ ಬಂದಾಗ “ಗುರಿಯ ಗೆರೆ ಎಲ್ಲಿದೆ?” ಎಂದು ಗಿರಿಧರರು ಪ್ರಶ್ನಿಸಿದರು. ಆಗ ಇವರಿಗೆ ಬಂದ ಉತ್ತರ “ಇಲ್ಲೇ 200 ಮೀಟರ್ ದೂರದಲ್ಲಿ!”. ಆದರೆ, ಪುನಃ ಇವರಿಗೆ ಅರಿವಾದಾಗ ಇವರು ಇದ್ದದ್ದು ಗುರಿಯ ಗೆರೆಯ ನಂತರದಲ್ಲಲ್ಲ! ಇದ್ದದ್ದು ಆಸ್ಪತ್ರೆಯಲ್ಲಿ! ಜೊತೆಯಲ್ಲಿದ್ದವರ ಪ್ರಕಾರ ತುರ್ತುಸೇವಾ ಅಪಘಾತ ವಾಹನದಲ್ಲಿದ್ದಾಗ ಸಹಾ ಇವರ ಉಸಿರಾಟ ಸ್ಥಗಿತವಾಗಿ ಚಿಂತಾಕ್ರಾಂತವಾಗಿತ್ತಾದರೂ ಆಸ್ಪತ್ರೆಯಲ್ಲಿ ಸಂದ ಪ್ರಾಥಮಿಕ ಚಿಕೆತ್ಸೆಯ ಸಂದರ್ಭದಲ್ಲೇ ಇವರ ಉಸಿರಾಟ ತನ್ನ ಸಹಜ ಸ್ಥಿತಿಗೆ ಮರಳಿತ್ತು. ಎಲ್ಲ ರೀತಿಯ ಪರೀಕ್ಷೆಗಳೂ ಯಾವುದೇ ಗಂಭೀರತೆಯನ್ನು ತೋರದೆ, ಕ್ಷಣಿಕವಾಗಿ ನೀಡಿದ ದೇಹದ ಮೇಲಿನ ಹೆಚ್ಚಿನ ಒತ್ತಡ ಉಸಿರಾಟದ ಸ್ಥಗಿತತೆಯನ್ನು ನಿರ್ಮಿಸಿತ್ತೇ ವಿನಃ ಶ್ವಾಸಕೋಶದ ಮೇಲೆ ಯಾವುದೇ ಪರಿಣಾಮವೂ ಇಲ್ಲ ಎಂಬುದು ಖಚಿತಗೊಂಡಿತು. ಹೆಚ್ಚಿನ ಆಸ್ಪತ್ರೆಯ ಅವಶ್ಯಕತೆಯಿಲ್ಲದೆ ಗಿರಿಧರರು ಕ್ಷೇಮವಾಗಿ ಹಿಂದಿರುಗಿದ್ದರು.
ಮುಂದೆ ಮನೆಯವರ ಆತ್ಮೀಯ ಒತ್ತಾಸೆಗೆ ಓಗೊಟ್ಟ ಗಿರಿಧರ ಕಾಮತರು ಮೂರ್ನಾಲ್ಕು ತಿಂಗಳು ತಮ್ಮ ಓಟಕ್ಕೆ ಬಿಡುವು ನೀಡಿದರಾದರೂ ತಮ್ಮ ವೈದ್ಯರು “ನೀನು ನಿರಂತರವಾಗಿ ಓಡುವ ಅಭ್ಯಾಸವನ್ನು ಚೆನ್ನಾಗಿ ಮಾಡಿದ್ದರಿಂದಲೇ ನಿನ್ನ ಶರೀರ ಇಂತಹ ಗಂಭೀರ ಒತ್ತಡವನ್ನು ತಡೆದುಕೊಂಡು ಉಳಿದುಕೊಂಡಿದೆ. ಇಲ್ಲದಿದ್ದರೆ ಬದುಕುಳಿಯುವುದು ಸಾಧ್ಯವೇ ಇರಲಿಲ್ಲ” ಎಂದು ಹೇಳಿದ ಮಾತು ಅವರ ಸ್ಮರಣೆಯಲ್ಲಿ ಪದೇ ಪದೇ ಅಂಕುರಗೊಳ್ಳತೊಡಗಿತ್ತು. ಡಾಕ್ಟರರು ನುಡಿದಿದ್ದ ಈ ಮಾತನ್ನು ಮನೆಯವರ ಮುಂದೆಯೂ ಭಾವುಕರಾಗಿ ನುಡಿದ ಗಿರಿಧರ ಕಾಮತರು “ನನ್ನನ್ನು ಉಳಿಸಿದ ಓಟವನ್ನು ನಾನು ಮರೆಯುವುದಕ್ಕೆ ಸಾಧ್ಯವಿಲ್ಲ” ಎಂದಾಗ ಕುಟುಂಬದವರೂ ಮೂಕರಾಗಿ ಅನುಮೋದನೆ ನೀಡದಿರುವುದು ಸಾಧ್ಯವಿರಲಿಲ್ಲ.
ಹೀಗೆ ಗಿರಿಧರ ಕಾಮತರ ಓಟದಲ್ಲಿ ಅವರ ಜೀವನದಲ್ಲಿ ಕಂಡ ಒಂದು ಕ್ಷಣದ ಆಪತ್ತು, ಹಿಂದೆ ಹಿಂದೆ ಸರಿದಿದೆ. ಇಂದಿನ ದಿನದಲ್ಲಿ ಅವರು ಕಿಂಚಿತ್ತೂ ಆಯಾಸವಿಲ್ಲದೆ ಹತ್ತು ಕಿಲೋಮೀಟರ್ ದೂರವನ್ನು ಕೇವಲ 40 ನಿಮಿಷಗಳಲ್ಲಿ ಓಡುವ ದೇಹಾತ್ಮಶಕ್ತಿಗಳನ್ನು ತಮ್ಮೊಂದಿಗಿರಿಸಿಕೊಂಡಿದ್ದಾರೆ. ದೇಹಕ್ಕೆ ಯಾವುದೇ ಶ್ರಮ ಎನ್ನಿಸದ ಹಾಗೆ ದಿನಕ್ಕೆ 60ರಿಂದ 80 ಕಿಲೋಮೀಟರ್ ಓಡಬಲ್ಲ ಗಿರಿಧರ್ ಒಂದೇ ದಿನದಲ್ಲಿ 102 ಕಿಲೋ ಮೀಟರ್ ದೂರವನ್ನು ಓಟದಲ್ಲಿ ಕ್ರಮಿಸಿದ್ದೂ ಇದೆ. ಆದರೆ ಅವರು ಇದ್ಯಾವುದನ್ನೂ ಸಾಧನೆಯ ಗರಿಮೆಗಾಗಿ ಮಾಡಬೇಕಿಲ್ಲ, ಎಲ್ಲವನ್ನೂ ಸಂತೋಷಕ್ಕಾಗಿ ಮಾಡಬೇಕು ಎಂಬ ದಿವ್ಯಜ್ಞಾನವನ್ನು ಕೂಡಾ ಮೈಗೂಡಿಸಿಕೊಂಡಿದ್ದಾರೆ. ತಮ್ಮ ಬದುಕಿನಲ್ಲಿ ಬಂದ ಆ ಆಪತ್ತಿನ ಕ್ಷಣ ತಮಗೆ ತಂದುಕೊಟ್ಟ ಈ ಅರಿವಿಗಾಗಿ ಅವರು ಹೃದಯತುಂಬಿದ ಕೃತಜ್ಞತೆ ಬೆಳೆಸಿಕೊಂಡಿದ್ದಾರೆ. “ಈ ಅರಿವು ಕೇವಲ ನನ್ನ ಓಟಕ್ಕೆ ಮಾತ್ರಾ ಅನ್ವಯವಾಗಿರದೆ ನನ್ನ ಸಮಸ್ತ ಬದುಕಿಗೇ ಅನ್ವಯವಾಗಿರುವಂತಹ ಭಾವ ನನ್ನಲ್ಲಿದೆ” ಎನ್ನುವಾಗ ಗಿರಿಧರ ಕಾಮತರ ಶಾಂತ ಮುಖಮುದ್ರೆ ಮತ್ತಷ್ಟು ಹೊಳಪು ಹೊರಹೊಮ್ಮಿಸುತ್ತದೆ.
ಈಗ ಗಿರಿಧರ ಕಾಮತರ ಪ್ರಭಾವ ಅವರ ಅಪಾರ ವಿಸ್ತೃತ ಸ್ನೇಹ ಕೂಟಗಳಲ್ಲಿ ವ್ಯಾಪಿಸಿದೆ. ತಾವಾಗಿಯೇ ಎಲ್ಲೂ ತಮ್ಮನ್ನು ಮುಂದು ಮಾಡಿಕೊಳ್ಳದ ಗಿರಿಧರ ಕಾಮತರನ್ನು “ನನ್ನ ಜೊತೆ ತಮಗೆ ಓಡಲಿಕ್ಕೆ ಸಾಧ್ಯವೇ?” ಎಂದು ಆಶಿಸಿದವರ ಜೊತೆಯಲ್ಲಿ ತಮ್ಮ ಹೆಜ್ಜೆ ಹಾಕುತ್ತಾರೆ. ತಾವು ಹೀಗೆ ಎಲ್ಲರೊಂದಿಗೆ ಓಡುವಾಗ “ನಿಮ್ಮ ಜೊತೆ ಓಡುವವರ ವೇಗದ ಮಿತಿ ನಿಮ್ಮ ವೇಗದ ಮಿತಿಗೆ ಕಡಿವಾಣ ಮೂಡುವ ಸಾಧ್ಯತೆಗಳು ಹೆಚ್ಚಲ್ಲವೆ?” ಎಂಬ ಪ್ರಶ್ನೆಗೆ ಗಿರಿಧರ ಕಾಮತರ ಉತ್ತರ ನಮ್ಮನ್ನು ಮೂಕವಾಗಿಸುತ್ತದೆ. “ನಾನು ನಾನೇ ಓಡುವಾಗ ನನ್ನ ಓಟದ ವೇಗ, ನನಗೆ ಅನಿಸಿದ ಹಾಗೂ ನನ್ನ ಸಂಪೂರ್ಣ ಸಾಧ್ಯತೆಗಳ ಆಳದಲ್ಲಿರುತ್ತದೆ. ಆದರೆ ಮತ್ತೊಬ್ಬರ ಜೊತೆ ಓಡುವಾಗ ನಾನು ಅವರ ಮಿತಿಗಳೊಂದಿಗೆ ಸಹಸಾಮ್ಯತೆಯಲ್ಲಿರುತ್ತೇನೆ. ನನ್ನ ಮಟ್ಟಿಗೆ ಇದು ಕೂಡಾ ತುಂಬಾ ಉಪಯುಕ್ತ. ನಮ್ಮ ದೇಹದಲ್ಲಿ ಒಂದೊಂದು ರೀತಿಯ ವೇಗದ ಓಟಕ್ಕೂ ಬೇರೆ ಬೇರೆಯ ನರಗಳು ಉಪಯೋಗಿಸಲ್ಪಡುತ್ತವೆ. ಹೀಗಾಗಿ ನನಗೆ ವಿವಿಧ ರೀತಿಯ ಜೊತೆಯ ಓಟಗಾರರೊಡನೆ ಓಡುವ ಅವಕಾಶದಿಂದ ನನ್ನಲ್ಲಿರುವ ಎಲ್ಲ ರೀತಿಯ ನರಗಳೂ ಉಪಯೋಗಕ್ಕೆ ಬರುವಂತಾಗುತ್ತಿವೆ” ಎಂದು ಅಲ್ಲೂ ತಮ್ಮಲ್ಲಿರುವ ಧನ್ಯತೆಯನ್ನೇ ಗಿರಿಧರ ಕಾಮತರು ಅಭಿವ್ಯಕ್ತಿಸುತ್ತಾರೆ.
ಗಿರಿಧರ ಕಾಮತರು ತಮ್ಮದೇ ಓಟದ ವಿಚಾರದಲ್ಲಿ ಬಂದಾಗ ಏಕಾತಾನತೆ ಮೂಡದಿರಲು ಹಲವು ಸ್ಥಳಗಳು, ಹಲವು ಸಮಯಗಳ ವೈವಿಧ್ಯಮಯ ಸೃಜನಾ ಕಲ್ಪನೆಗಳನ್ನೂ ತಮ್ಮ ಓಟದಲ್ಲಿ ವಿಧಿಸಿಕೊಳ್ಳುವುದಿದೆ. ಇದಕ್ಕಾಗಿ ಅವರು ಹಲವು ಸರದಿ (ರಿಲೇ) ಓಟಗಳಲ್ಲಿ ಪಾಲ್ಗೊಳ್ಳುವುದಿದೆ. ಉದಾಹರಣೆಗೆ ಒಮ್ಮೆ ಬೆಂಗಳೂರು ಮೈಸೂರು ನಡುವೆ ನಡೆದ ಟ್ವಿನ್ ಸಿಟಿ ರಿಲೇ ಓಟದಲ್ಲಿ ತಾವು ಅಭ್ಯರ್ಥಿ ಆಗಿಲ್ಲದಿದ್ದರೂ ಎರಡು ತಾಸುಗಳ ಬ್ಯಾಕ್ ಟು ಬ್ಯಾಕ್ (ಒಟ್ಟು ಇಪ್ಪತ್ತು ಕಿಲೋಮೀಟರ್) ಓಟವನ್ನು ಅವರು ನಡೆಸಿದರು. ಒಮ್ಮೆ ತಾವೇ ಹಾಕಿಕೊಂಡಿದ್ದ 24 ಗಂಟೆಗಳ ಸರದಿ ಓಟದ ಯೋಜನೆಯಂತೆ ನಿರಂತರ 24 ದಿನಗಳಲ್ಲಿ ಒಂದೊಂದು ದಿನ ಒಂದೊಂದು ತಾಸಿನಲ್ಲಿ (ಇಂದು ರಾತ್ರಿ 12ರಿಂದ 1 ಗಂಟೆ, ನಾಳೆ ರಾತ್ರಿ 1ರಿಂದ 2, ಮುಂದಿನ ದಿನ ರಾತ್ರಿ 2ರಿಂದ 3 ಹೀಗೆ 24 ದಿನಗಳಲ್ಲಿ 24 ಸರದಿ ತಾಸುಗಳ) ಓಟವನ್ನು ವಿವಿದೆಡೆಗಳಲ್ಲಿ ನಡೆಸಿದರು. ಹಲವಾರು ಆಯೋಜನೆಗಳಿಗೆ ಅವರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದೂ ಇದೆ. 2017 ವರ್ಷದಲ್ಲಿ ಅವರು ಈಶಾ ಫೌಂಡೆಶನ್ ಅವರ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಯೋಜನೆಗೆ ಸಹಾಯ ಒದಗಿಸುವ ಸಲುವಾಗಿ ಈ ಸೆಪ್ಟೆಂಬರ್ 3ರಿಂದ ಮೊದಲ್ಗೊಂಡಂತೆ ಬೆಂಗಳೂರಿನಿಂದ ಕೊಯಮತ್ತೂರುವರೆಗಿನ 400 ಕಿಲೋಮೀಟರ್ ದೂರವನ್ನು ಮೊದಲ ಮೂರು ದಿನಗಳಲ್ಲಿ 200 ಕಿಲೋಮೀಟರ್ ದೂರವನ್ನು ಬರಿಗಾಲಿನ ಓಟದಲ್ಲೂ ಮತ್ತು ಉಳಿದ ಮೂರು ದಿನಗಳ 200 ಕಿಲೋಮೀಟರ್ ದೂರವನ್ನು ಸೈಕಲ್ ಸವಾರಿಯಲ್ಲೂ, ಪೂರೈಸಿದ್ದಾರೆ. ಮುಂದೆ ಚೆನ್ನೈ, ಪಾಂಡಿಚೇರಿ ಮುಂತಾದೆಡೆಗಳಲ್ಲಿ ಓಡಿ ಬಂದಿದ್ದಾರೆ. 2019ರಲ್ಲಿ ದಿನಕ್ಕೆ 50 ಕಿಲೋಮಿಟರಿನಂತೆ 40 ದಿನಗಳ ಕಾಲ ಬೆಂಗಳೂರಿನಿಂದ ಬನಾರಸ್ ವರೆಗೆ ಓಡಿ ಕಾಶಿ ವಿಶ್ವನಾಥನ ದರ್ಶನ ಮಾಡಿಬಂದಿದ್ದಾರೆ.
ಹೀಗೆಈ ಓಟ ನಿರಂತರವಾಗಿ ಸಾಗುತ್ತಿದೆ.
ಜೀವನವನ್ನು ಪ್ರೀತಿ, ಸಂತೃಪ್ತಿ, ಸ್ನೇಹ, ಸಂತಸಗಳ ವ್ಯಾಪ್ತಿಯಲ್ಲಿ ಅನುಭಾವಿಸುವ ಗಿರಿಧರ ಕಾಮತರು, ತಮ್ಮ ಜೀವನವನ್ನು ಯಾವುದೇ ವೈಭವಗಳ ಅವಲಂಬನೆಯಿಲ್ಲದ ಸರಳತೆಯ ಹಂದರದಲ್ಲಿ ಸಾಗಿಸುತ್ತಿದ್ದಾರೆ. ತಾವು ಅತ್ಯಂತ ಸಾಮಾನ್ಯ ಎಂದು ತನ್ನ ಬಾಲ್ಯದಿಂದಲೂ ತಿಳಿದಿದ್ದರೂ ತನ್ನ ಜೊತೆ ಬಾಳಲು ನಿರ್ಧರಿಸಿ ತಮ್ಮೊಡನೆ ಯಾವುದೇ ವಿಚಾರದಲ್ಲೂ ಯಾವುದೇ ಪ್ರಶ್ನೆಯಿಲ್ಲದೆ ಆಪ್ತವಾಗಿ ಬದುಕು ನಡೆಸುತ್ತಿರುವ ತಮ್ಮ ಪತ್ನಿ
Radha Giridhar, ಎಲ್ಲ ವಿಚಾರದಲ್ಲೂ ಸ್ವಾವಲಂಬಿಯಾಗಿ ಬೆಳೆಯುತ್ತಾ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಬೇಕಿಂಗ್ ಉದ್ಯಮದಲ್ಲಿ ತೊಡಗಿರುವ ಪುತ್ರಿ, ಈಗಲೂ ಮಾಸ್ತಿಯಲ್ಲಿದ್ದು ತನ್ನ ಸುತ್ತಮುತ್ತಲಿನ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಜನಾನುರಾಗಿ ಅಘೋಷಿತ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸುತ್ತಾ ಧನ್ಯತೆಯ ಬಾಳನ್ನು ಬದುಕುತ್ತಿರುವ ತಾಯಿ, ತಮ್ಮ ಸಂಸ್ಥೆಯನ್ನು ತಮ್ಮದೆಂದು ಭಾವಿಸಿ ಶ್ರದ್ಧೆಯಿಂದ ದುಡಿಯುತ್ತಿರುವ ತಮ್ಮ ಸಂಸ್ಥೆಯ ಉದ್ಯೋಗಿಗಳು, ತಮ್ಮೊಡನೆ ಎಂದೆಂದೂ ಒಂದೆಂದು ಭಾವಿಸಿ ಆತ್ಮೀಯತೆ ತೋರಿರುವ ಸಮೀಪದಲ್ಲಿರುವ ಮತ್ತು ವಿಶ್ವದ ವಿವಿದೆಡೆ ನೆಲೆಸಿರುವ ಹಲವಾರು ಸ್ನೇಹಿತರು ಇವರೆಲ್ಲರ ಬಗ್ಗೆ ಗಿರಿಧರ ಕಾಮತರು ಹೃದಯ ತುಂಬಿ ಮಾತನಾಡುತ್ತಾರೆ. ಉತ್ತಮ ಸಂಗೀತ ಕೇಳುವುದು, ತಮ್ಮ ಆತ್ಮೀಯ ಗೆಳೆಯರೊಂದಿಗೆ ಸಮಯ ಕಳೆಯುವುದು, ಉತ್ತಮ ಸಾಂಸ್ಕೃತಿಕ ಮನೋಭಾವದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇವೆಲ್ಲಾ ಇವರಿಗೆ ಅತ್ಯಂತ ಸಂತಸ ನೀಡುತ್ತವೆ.
ಹೀಗೆ ತಮ್ಮ ಬದುಕಿನ ಸಾಧನೆಯ ಜೊತೆಗಿನ ಓಟವನ್ನು ಸಂತೃಪ್ತಿಯ ಸುಮಧುರ ಹಾದಿಯಲ್ಲಿ ನಡೆಸುತ್ತಿರುವ ನಮ್ಮ ಆತ್ಮೀಯ ಗಿರಿಧರ ಕಾಮತರ ಈ ಸವಿಜೀವನದೋಟ ಎಂದೆಂದೂ ಸವಿಯಾಗಿರಲಿ ಎಂಬುದು ನಮ್ಮೆಲ್ಲರ ಪ್ರೀತಿಯ ಹಾರೈಕೆ.
On the birth day of ever running, ever smiling and ever affectionate Giridhar Kamath, Giridhar Kamath
ಕಾಮೆಂಟ್ಗಳು