ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಲಾವತಿ ಅವಧೂತ್


 ಕಲಾವತಿ ಅವಧೂತ್ 


ವಿದುಷಿ ಕಲಾವತಿ ಅವಧೂತ್ ಅವರ ಪ್ರಸಿದ್ಧ ಸಂಗೀತಗಾರ್ತಿಯಾಗಿ ಹೆಸರಾಗಿದ್ದಾರೆ.

ಕಲಾವತಿ ಅವಧೂತ್ ಅವರು 1969ರ ಸೆಪ್ಟೆಂಬರ್ 9ರಂದು ಜನಿಸಿದರು. ಇವರು ಪ್ರಸಿದ್ಧ ಸಂಗೀತಗಾರರ ಮನೆತನದಿಂದ ಬಂದವರು.  ಇವರ ತಂದೆ ವಿದ್ವಾನ್. ಕೆ. ವೆಂಕಟರಾಂ ಪ್ರಸಿದ್ಧ ಘಟಂ ಕಲಾವಿದರು. ತಾಯಿ ಗಮಕ ಕೋಗಿಲೆ ಎಂದು ಪ್ರಸಿದ್ಧರಾದ. ಜಿ. ಆರ್. ಜಯಾ ಅವರು. ಸಂಗೀತ ಕಲೆಯ ಪೋಷಕರಾದ ಅವಧೂತ್ ಅವರು ಕಲಾವತಿ ಅವರ ಪತಿ.

ತಾಯಿ ಜಿ. ಆರ್. ಜಯಾ ಮತ್ತು ಉಷಾ ಚಾರ್ ಅವರಲ್ಲಿ ಪ್ರಾರಂಭಿಕ ಮಾರ್ಗದರ್ಶನವನ್ನು ಪಡೆದ ಕಲಾವತಿ ಅವರು ವಿದ್ವಾನ್ ಅನೂರು ಎಸ್. ರಾಮಕೃಷ್ಣ ಅವರಲ್ಲಿ ಸುದೀರ್ಘ ಕಾಲ ಸಂಗೀತಾಭ್ಯಾಸ ನಡೆಸಿ ಮಹತ್ವದ ಕಲಾವಿದೆಯಾಗಿ ರೂಪುಗೊಂಡರು. ವಿದುಷಿ ಸೀತಾಲಕ್ಷ್ಮಿ ವೆಂಕಟೇಶ್ ಅವರ ಮಾರ್ಗದರ್ಶನವನ್ನೂ ಪಡೆದ ಕಲಾವತಿ ಅವರು ಚೆನ್ನೈನ ಪ್ರಸಿದ್ಧ ಸಂಗೀತ ವಿದ್ವಾಂಸರಾದ ವಿದ್ವಾನ್ ಪಿ. ಎಸ್. ನಾರಾಯಣ ಸ್ವಾಮಿ ಅವರಲ್ಲಿಯೂ ತಮ್ಮ ಸಂಗೀತ ಸಾಧನೆ ಮಾಡುತ್ತ ಬಂದಿದ್ದಾರೆ.

ಕಲಾವತಿ ಅವರು ಭಾರತದಾದ್ಯಂತ ಪ್ರವಾಸ ಮಾಡಿ ಎಲ್ಲ ಪ್ರಮುಖ ಸ್ಥಳಗಳಲ್ಲಿ ಸಂಗೀತ ಕಚೇರಿ ಮಾಡಿದ್ದಾರೆ. ಅಮೆರಿಕಕ್ಕೆ ಹಲವಾರು ಬಾರಿ ಪ್ರವಾಸ ಮಾಡಿದ್ದಾರೆ.  ಇವುಗಳಲ್ಲಿ 1999ರಲ್ಲಿ ಅಮೆರಿಕದಲ್ಲಿ ನಡೆದ 'ನಾದ ತರಂಗಿಣಿ' ಮತ್ತು ಆಮ್ಸ್ಟರ್‌ಡ್ಯಾಮ್ 2005ರಲ್ಲಿ ನಡೆದ 'ಕರ್ನಾಟಿಕ್ ಲ್ಯಾಬ್'  ಸಂಗೀತ ಉತ್ಸವಗಳು  ಸೇರಿವೆ.  ಜಿ.ವಿ. ಅಯ್ಯರ್ ನಿರ್ದೇಶನದ 'ಮಧ್ವಾಚಾರ್ಯ', 'ರಾಮಾನುಜಾಚಾರ್ಯ' ಮತ್ತು 'ಭಗವದ್ಗೀತ' ಚಿತ್ರಗಳಿಗೆ ಇವರು ಡಾ. ಎಂ ಬಾಲಮುರಳಿಕೃಷ್ಣ ಅವರೊಂದಿಗೆ ಧ್ವನಿ ನೀಡಿದ್ದಾರೆ. 2018ರಲ್ಲಿ, ಇವರು ವಾಷಿಂಗ್ಟನ್ ಡಿಸಿ ಯಲ್ಲಿನ 'ಹರಿದಾಸ ದಿನ' ಮತ್ತು ಅಮೆರಿಕದ ಇತರ ರಾಜ್ಯಗಳಲ್ಲಿ 'ಹರಿದಾಸ ಕೀರ್ತನ' ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಿದರು. ಅಮೆರಿಕದ ಆಸ್ಟಿನ್ ಮತ್ತು ಸ್ಯಾನ್ ಜೋಸ್ ಮುಂತಾದ ಕಡೆಗಳಲ್ಲಿ ವಿಶೇಷ ಹರಿದಾಸ ಸಂಗೀತ ಕಚೇರಿಗಳನ್ನು ನಡೆಸಿದರು. ಅಮೆರಿಕ ಅಲ್ಲದೆ ನೆದರ್ಲ್ಯಾಂಡ್ಸ್ ಮತ್ತು ಇನ್ನಿತರ ರಾಷ್ಟ್ರಗಳಲ್ಲೂ ಇವರ ಸಂಗೀತ ಕಾರ್ಯಕ್ರಮಗಳು ನಡೆದಿವೆ. 

ಕಲಾವತಿ ಅವಧೂತ್ ಅವರು ಶಾಸ್ತ್ರಬದ್ಧ ಸುಶ್ರಾವ್ಯ ಸಂಗೀತ ಕಚೇರಿಗಳಿಗೆ ಮಾತ್ರವಲ್ಲದೆ ಸಂಗೀತದ ಕುರಿತಾದ ವಿದ್ವತ್ಪೂರ್ಣ ಉಪನ್ಯಾಸಗಳು ಮತ್ತು ಪ್ರಾತ್ಯಕ್ಷಿಕೆಗಳಿಗೂ ಹೆಸರಾಗಿದ್ದಾರೆ. ಕಲಾವತಿ ಅವಧೂತ್ ಅವರು ಕಲಾಗುರುವಾಗಿ ಅನೇಕ ಪ್ರತಿಭೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ.  ಇಂದಿನ ದಿನಗಳಲ್ಲಿ ಪ್ರಸಿದ್ಧ ಬಾಲಪ್ರತಿಭೆಯಾಗಿ ಹೆಸರಾಗಿರುವ ರಾಹುಲ್ ವೆಲ್ಲಾಲ್ ಸೇರಿದಂತೆ ಅನೇಕ ಪ್ರತಿಭಾನ್ವಿತರು ಇವರ ಶಿಷ್ಯವರ್ಗಕ್ಕೆ ಸೇರಿದವರಾಗಿದ್ದಾರೆ.

ಕಲಾವತಿ ಅವಧೂತ್ ಅವರ ಹಲವಾರು ಧ್ವನಿಸುರುಳಿಗಳು ಪ್ರಸಿದ್ಧಿ ಪಡೆದಿವೆ.‍ ಕೇಂದ್ರ ಸರ್ಕಾರದ ಫೆಲೋಷಿಪ್ ಅಲ್ಲದೆ ಆಕಾಶವಾಣಿಯ ಅಖಿಲ ಭಾರತ ಸ್ಪರ್ಧೆ, ಕೃಷ್ಣ ಗಾನಸಭಾ, ಗಾಯನ ಸಮಾಜ, ಇಂಡಿಯನ್‌ ಫೈನ್‌ ಆರ್ಟ್ಸ್‌ ಸೊಸೈಟಿ ನಡೆಸಿದ ಸ್ಪರ್ಧೆಗಳಲ್ಲಿ ಇವರಿಗೆ ಬಹುಮಾನ ಸಂದಿದ್ದವು. ಅನನ್ಯ ಯುವ ಪುರಸ್ಕಾರ, ಕರ್ನಾಟಕ ಗಾನ ಕಲಾಪರಿಷತ್ತಿನ ಗಾನ ಕಲಾಶ್ರಿ, ಸತ್ಯಶ್ರೀ, ವಿಶೇಷ ಕಲಾಚೇತನ ಸೇರಿದಂತೆ  ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.

ಮಹತ್ವದ ಸಂಗೀತ ಸಾಧಕರಾದ ವಿದುಷಿ. ಕಲಾವತಿ ಅವಧೂತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Vid.Kalavathy Avadhoot 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ