ಟಾಮ್ ಆಲ್ಟರ್
ಟಾಮ್ ಆಲ್ಟರ್
ಸೆಪ್ಟೆಂಬರ್ 29, 2017ರಂದು ನಿಧನರಾದ ಟಾಮ್ ಆಲ್ಟರ್ ನಮ್ಮಲ್ಲಿ ಒಂದು ರೀತಿಯಲ್ಲಿ ಪ್ರೀತಿಯಿಂದ ಸೇರಿ ಹೋಗಿದ್ದವರು. ಬಹುಶಃ ಅವರ ವಿದೇಶಿ ಚರ್ಯೆಯ ಭಾರತೀಯ ಹೃದಯವಂತಿಕೆ ಇದಕ್ಕೆ ಕಾರಣವಿದ್ದಿರಬಹುದು. ಆ ಕಾಂತಿಯುಕ್ತ ಕಂಗಳುಳ್ಳ ಪ್ರಶಾಂತತೆಯ ಆಕರ್ಷಣೆಗೆ ಸಿಲುಕದಿದ್ದವರು ವಿರಳವೇ ಎನ್ನಬೇಕು.
ಅಮೆರಿಕದ ಮೂಲದ ಕೌಟುಂಬಿಕ ಹಿನ್ನೆಲೆ ಇದ್ದರೂ ಭಾರತದ ಮಣ್ಣಿನಲ್ಲಿ ಜನಿಸಿದ ಟಾಮ್ ಆಲ್ಟರ್ ಈ ದೇಶದ ಮಣ್ಣಿನ ಸೆಳೆತಕ್ಕೇ ಹೆಚ್ಚು ಜೋತು ಬಿದ್ದರು. ಹೆಚ್ಚಿನ ಓದಿಗೆ ಮತ್ತು ಒಮ್ಮೊಮ್ಮೆ ಕೆಲಸಕ್ಕೆ ಎಂದು ಅಮೆರಿಕಕ್ಕೆ ಹೋಗಿದ್ದರೂ ಅವರು ಪುನಃ ಪುನಃ ಭಾರತಕ್ಕೇ ಹಿಂದಿರುಗಿದ್ದು, ಅವರಿಗೆ ಈ ನೆಲದ ಮೇಲ್ಲಿದ್ದ ಯಾವುದೋ ಆಕರ್ಷಣೆಯ ಕಾರಣವೇ ಇದ್ದೀತು. ಇವರ ತಾತನ ಕುಟುಂಬ, ಅಮೆರಿಕದ ಓಹಿಯೋ ಇಂದ 1917ರಲ್ಲಿ ಭಾರತಕ್ಕೆ ವಲಸೆ ಬಂತು. ಟಾಮ್ ಆಲ್ಟರ್ ಜನಿಸಿದ್ದು 1950ರ ಜೂನ್ 22ರಂದು ಮಸ್ಸೂರಿಯಲ್ಲಿ. ಓದಿನ ದಿನಗಳಲ್ಲೇ ಅವರು ಹಿಂದೀ ಮತ್ತು ಉರ್ದು ಭಾಷೆಗಳಲ್ಲೂ ಪ್ರಭುತ್ವ ಪಡೆದಿದ್ದರು. ಓದಿನ ನಂತರ ಶಿಕ್ಷಕನಾಗಿ ಕೆಲಕಾಲ ಕಾರ್ಯನಿರ್ವಹಿಸಿದ್ದರು. ಕೆಲ ಕಾಲ ಅಮೆರಿಕದ ಆಸ್ಪತ್ರೆಯಲ್ಲೂ ಕೆಲಸ ಮಾಡಿದ್ದರು.
ಬಾಲ್ಯದಲ್ಲೇ ರಾಜೇಶ್ ಖನ್ನಾ ಮತ್ತು ಶರ್ಮಿಳಾ ಠಾಗೂರ್ ಅಭಿನಯದ 'ಆರಾಧನಾ' ಚಿತ್ರ ನೋಡಿ ಹೀರೋ ಆಗಬಯಸಿದ ಟಾಮ್ ಪುಣೆಯ ಫಿಲಂ ಇನ್ಸ್ಟಿಟ್ಯೂಟಿನಲ್ಲಿ ಕಲೆಯನ್ನು ಅಭ್ಯಾಸ ಮಾಡಿದರು. ನಸೀರುದ್ದೀನ್ ಷಾ, ಶಬಾನಾ ಅಜ್ಮಿ, ಬೆಂಜಮಿನ್ ಗಿಲಾನಿ ಮುಂತಾದವರ ಸಹಚರ್ಯೆ ಅವರಿಗೆ ಈ ಸಂದರ್ಭದಲ್ಲಿ ಲಭಿಸಿತ್ತು.
ಹಿಂದಿಯಲ್ಲಿ ರಮಾನಂದ್ ಸಾಗರ್ ಅವರ ಚರಸ್, ಸತ್ಯಜಿತ್ ರೇ ಅವರ ಶತರಂಜ ಕೆ ಖಿಲಾರಿ, ಕನ್ನಡದಲ್ಲಿ ಎಂ. ಎಸ್. ಸತ್ಯು ಅವರ ಕನ್ನೇಶ್ವರ ರಾಮ ಮುಂತಾದವು ಅವರ ಪ್ರಾರಂಭಿಕ ಚಿತ್ರಗಳು. ‘ಕನ್ನೇಶ್ವರ ರಾಮ’ ಮತ್ತು ಹಿಂದಿಯ ‘ಕ್ರಾಂತಿ’ ಚಿತ್ರಗಳಲ್ಲಿನ ಪೋಲೀಸ್ ಅಧಿಕಾರಿ ಪಾತ್ರಗಳು ಇಂದೂ ನೆನಪಿನಲ್ಲಿ ಉಳಿಯುವಂತದ್ದು. ಇಂಗ್ಲಿಷ್, ಹಿಂದಿ ಅಲ್ಲದೆ ಹಲವಾರು ಭಾರತೀಯ ಭಾಷೆಗಳಲ್ಲೂ ಅಭಿನಯಿಸಿದ್ದ ಟಾಮ್ ಅಲ್ಟರ್ ಹಲವಾರು ದೂರದರ್ಶನದ ಸರಣಿಗಳಲ್ಲೂ ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದರು. 'ಜುನೂನ್'ನಲ್ಲಿ ಅವರ ಗ್ಯಾಂಗ್ಸ್ಟರ್ ಕೇಶವ್ ಕಲ್ಸಿ ಪಾತ್ರ ಇಂದೂ ಪ್ರಸಿದ್ಧ. ರಂಗದ ಮೇಲೆಯೂ ಅದ್ಭುತ ಪ್ರತಿಭೆ ಚೆಲ್ಲಿದ್ದ ಅವರ 'ಮಿರ್ಜಾ ಗಾಲಿಬ್' ಪಾತ್ರ ಸ್ಮರಣೀಯವೆನಿಸಿದೆ.
ನಟನೆ ಜೊತೆಗೆ ನಿರ್ದೇಶನವನ್ನೂ ಮಾಡಿದ್ದ ಟಾಮ್ 80 - 90ರ ದಶಕಗಳಲ್ಲಿ ಸ್ಪೋರ್ಟ್ಸ್ ವೀಕ್, ಔಟ್ ಲುಕ್, ಕ್ರಿಕೆಟ್ ಟಾಕ್, ಸಂಡೆ ಅಬ್ಸರ್ವರ್, ದೆಬೋನೆರ್ ಮುಂತಾದ ಪ್ರಸಿದ್ಧ ಪತ್ರಿಕೆಗಳಿಗೆ ಪತ್ರಕರ್ತರಾಗಿ ಅದರಲ್ಲೂ ವಿಶೇಷವಾಗಿ ಕ್ರೀಡಾ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಇ.ಎಸ್.ಪಿ.ಎನ್ ಗಾಗಿ ಹಿಂದಿಯಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗೂ ಆಹ್ವಾನಿತರಾಗಿದ್ದರು. ‘ದಿ ಲಾಂಗೆಸ್ಟ್ ರೇಸ್’, ‘ರೀ ರನ್ ಅಟ್ ರಿಯಾಲ್ಟೋ’, ‘ದಿ ಬೆಸ್ಟ್ ಇನ್ ದಿ ವರ್ಲ್ಡ್’ ಅವರ ಪ್ರಸಿದ್ಧ ಪ್ರಕಟಿತ ಗ್ರಂಥಗಳು.
ಟಾಮ್ ಆಲ್ಟರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. ಇವೆಲ್ಲಕ್ಕೂ ಮಿಗಿಲಾಗಿ ವೈಶಿಷ್ಟ್ಯಪೂರ್ಣವಾಗೆಂಬಂತೆ “ಇವ ನಮ್ಮವನಲ್ಲಂತದಿರುವ ನಮ್ಮ ಆತ್ಮೀಯ” ಎಂಬ ಅಪೂರ್ವ ಭಾವ ಹುಟ್ಟಿಸಿದ್ದರು. ಇಂತಹ ಭಾವಗಳು ಕಡಿಮೆ ಆಗುತ್ತಿರುವ ಈ ವಿಶ್ವದಲ್ಲಿ ಟಾಮ್ ಆಲ್ಟರ್ ಅಂತಹ ವ್ಯಕ್ತಿ ಇಲ್ಲದಿರುವುದು “ತುಂಬಲಾರದ ನಷ್ಟ ಎನ್ನುವುದು” ಖಂಡಿತವಾಗಿಯೂ “ಒಂದು ಮಾತು ಮಾತ್ರಾ ಅಲ್ಲ”.
On Remembrance Day is Tom Alter
ಕಾಮೆಂಟ್ಗಳು