ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಾದಾಭಾಯಿ ನೌರೋಜಿ


ದಾದಾಭಾಯಿ ನೌರೋಜಿ


ದಾದಾಭಾಯಿ ನೌರೋಜಿ ಭಾರತದ ಪ್ರತಿಭಾವಂತ ರಾಷ್ಟ್ರಪ್ರೇಮಿ, ಸ್ವಾತಂತ್ರ್ಯವಾದಿ, ಶಿಕ್ಷಣತಜ್ಞ, ಸಮಾಜ ಸುಧಾರಕ, ಪತ್ರಕರ್ತ ಹೀಗೆ ಬಹುಮಖಿಯಾಗಿದ್ದವರು.

ದಾದಾಭಾಯಿ ನೌರೋಜಿ 1825ರ ಸೆಪ್ಟೆಂಬರ್ 4ರಂದು ಮುಂಬಯಿಯಲ್ಲಿ ಬಡ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ನೌರೋಜಿ ಪಾಲಂಜಿ ದೋರ್ದಿ.  ತಾಯಿ ಮಾಣಿಕ್‍ಬಾಯಿ. ದಾದಾಭಾಯಿ 4 ವರ್ಷದವರಿದ್ದಾಗ ತಂದೆ ತೀರಿಕೊಂಡರು. ಆದ್ದರಿಂದ ಅವರು ತಾಯಿಯ ಪಾಲನೆಯಲ್ಲಿ ಬೆಳೆದರು. ಮಗನ ಮುಂದಿನ ಘನತೆಗೆ ತಾಯಿಯೇ ಬಹಳ ಮಟ್ಟಿಗೆ ಕಾರಣ. ಮನೆಯಲ್ಲಿ ಬಡತನವಿದ್ದರೂ ಆಕೆ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಮುಂದೆ ತರಲು ಶ್ರಮಿಸಿದರು. 

ದಾದಾಭಾಯಿಯವರಿಗೆ 11 ವರ್ಷ ಆಗಿದ್ದಾಗ ಸೋರಾಬ್‍ಜಿ ಷರಾಫ್‍ರ 7 ವರ್ಷ ವಯಸ್ಸಿನ ಪುತ್ರಿ ಗುಲ್‍ಬಾಯಿಯೊಂದಿಗೆ ವಿವಾಹವಾಯಿತು. ದಾದಾಭಾಯಿಯವರು ಮುಂಬಯಿಯಲ್ಲಿ ಖಾಸಗಿ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಣವನ್ನೂ,  ಅಲ್ಲಿಯ ಎಲ್ಛಿನ್‍ಸ್ಟನ್ ಇನ್‍ಸ್ಟಿಟ್ಯೂಟಿನಲ್ಲಿ ಪ್ರೌಢಶಿಕ್ಷಣವನ್ನೂ ಪಡೆದರು. 1840ರಲ್ಲಿ ಆವರಿಗೆ ಕ್ಲೇರ್ ವಿದ್ಯಾರ್ಥಿ ವೇತನ ದೊರೆಯಿತು. ಅವರ ಪಾಂಡಿತ್ಯ ಪ್ರತಿಭೆಗಳು ಅವರ ಪ್ರಾಧ್ಯಾಪಕರ ಮೆಚ್ಚುಗೆ ಗಳಿಸಿದುವು. ದಾದಾಭಾಯಿ ನೌರೋಜಿ 1845ರಲ್ಲಿ ಪದವೀಧರರಾದರು.

ದಾದಾಭಾಯಿಯವರು ಎಲ್‍ಫಿನ್‍ಸ್ಟನ್ ಸಂಸ್ಥೆಯ ನೇಟಿವ್ ಹೆಡ್ ಅಸಿಸ್ಟೆಂಟ್ ಆಗಿ ನೇಮಕಗೊಂಡರು. 1850ರಲ್ಲಿ ಅವರು ಎಲ್‍ಫಿನ್‍ಸ್ಟನ್ ಕಾಲೇಜಿನಲ್ಲಿ ಗಣಿತ ಶಾಸ್ತ್ರ ಹಾಗೂ ಭೌತವಿಜ್ಞಾನಗಳ ಸಹಾಯಕ ಪ್ರಾಧ್ಯಾಪಕರಾದರು. ಆ ಕಾಲೇಜಿನಲ್ಲಿ ಪಾಧ್ಯಾಪಕರಾಗಿ ನೇಮಕವಾದ ಪ್ರಥಮ ಭಾರತೀಯರು ಅವರು. ಸ್ತ್ರೀಯರ ಶಿಕ್ಷಣಕ್ಕಾಗಿ ನಡೆಸುತ್ತಿದ್ದ ವಿಶೇಷ ತರಗತಿಗಳಲ್ಲೂ ಅವರು ಬೋಧಿಸುತ್ತಿದ್ದರು. 1855ರಲ್ಲಿ ಕಾಮಾ ವ್ಯಾಪಾರ ಸಂಸ್ಥೆಯ ಪಾಲುದಾರರಾಗಿ ಅದರ ಲಂಡನ್ ಶಾಖೆಯನ್ನು ನೋಡಿಕೊಳ್ಳಲು ಅಲ್ಲಿಗೆ ತೆರಳಿದರು. 3 ವರ್ಷಗಳ ಅನಂತರ ಅವರು ಆ ಸಂಸ್ಥೆಯನ್ನು ಬಿಟ್ಟು ಭಾರತಕ್ಕೆ ಹಿಂದಿರುಗಿ ಮತ್ತೆ ಇಂಗ್ಲೆಂಡಿಗೆ ಹೋಗಿ ಲಂಡನ್ನಿನಲ್ಲಿ ತಮ್ಮದೇ ಸಂಸ್ಥೆಯನ್ನು ಆರಂಭಿಸಿದರು (1862). 1863 ಸೆಪ್ಟೆಂಬರ್ 9ರಂದು ಅವರು ಮತ್ತೆ ಭಾರತಕ್ಕೆ ಮರಳಿ ಕೊಂಚ ಕಾಲ ಮುಂಬೈಯಲ್ಲಿ ಉಳಿದಿದ್ದು, 1864ರ ಏಪ್ರಿಲ್ 29ರಂದು ತಮ್ಮ ಪತ್ನಿ ತಾಯಿಯವರೊಂದಿಗೆ ಇಂಗ್ಲೆಂಡಿಗೆ ಮರಳಿದರು. 1865ರಲ್ಲಿ ಡಬ್ಲ್ಯು.ಸಿ. ಬ್ಯಾನರ್ಜಿಯೊಂದಿಗೆ ಲಂಡನ್ ಇಂಡಿಯ ಸೊಸೈಟಿ ಎಂಬ ಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. 1907ರಲ್ಲಿ ಭಾರತಕ್ಕೆ ಮರಳುವ ವರೆಗೂ ಆ ಸ್ಥಾನದಲ್ಲಿದ್ದು ಅನಂತರವೂ ಗೌರವಾಧ್ಯಕ್ಷರಾಗಿದ್ದರು.

1866ರ ಡಿಸೆಂಬರ್ 1ರಂದು ದಾದಾಭಾಯಿ ಇಂಗ್ಲೆಂಡ್ ಮತ್ತು ಭಾರತಗಳ ನಡುವೆ ಸಾಮರಸ್ಯ ಮತ್ತು ಸ್ನೇಹಭಾವಗಳನ್ನು ಬೆಳೆಯಿಸುವ ಉದ್ದೇಶದಿಂದ ನಿವೃತ್ತ ಆಂಗ್ಲ ಅಧಿಕಾರಿಗಳ ಸಮಿತಿಯೊಂದರ ಸಹಕಾರ ಪಡೆದು ಲಂಡನ್ನಿನಲ್ಲಿ ಈಸ್ಟ್ ಇಂಡಿಯ ಅಸೋಸಿಯೇಷನ್ ಎಂಬ ಸಂಘವನ್ನು ಸ್ಥಾಪಿಸಿ ಅದರ ಕಾರ್ಯದರ್ಶಿಯಾದರು. ಬಹು ಮಂದಿ ಇಂಗ್ಲಿಷ್ ರಾಜಕೀಯ ವ್ಯಕ್ತಿಗಳು, ರಾಜನೀತಿಜ್ಞರು ನಿವೃತ್ತ ಗವರ್ನರರು ಮತ್ತು ಇತರ ಅಧಿಕಾರಿಗಳು ಆ ಸಂಘದ ಸದಸ್ಯರಾದರು. ಭಾರತದ ಹಿತಾಸಕ್ತಿಗಳನ್ನು ಸ್ವತಂತ್ರ ಹಾಗೂ ನಿಷ್ಟಕ್ಷಪಾತ ದೃಷ್ಟಿಯಿಂದ ಪ್ರತಿಪಾದಿಸುವುದು, ಅವನ್ನು ಸಾಧಿಸಲು ಎಲ್ಲ ನ್ಯಾಯಬದ್ಧ ರೀತಿಗಳಲ್ಲೂ ಶ್ರಮಿಸುವುದು, ಭಾರತದ ಬಗ್ಗೆ ತಿಳಿವಳಿಕೆ ನೀಡುವುದು ಇವು ಸಂಘದ ಗುರಿಗಳಾಗಿದ್ದುವು. ಭಾರತೀಯ ಸಿವಿಲ್ ಸರ್ವಿಸಿಗೆ ಭಾರತೀಯರನ್ನು ಸೇರಿಸಿಕೊಳ್ಳುವ ಪ್ರಶ್ನೆಯನ್ನೆತ್ತಿ, ಆ ಪರೀಕ್ಷೆಯನ್ನು ಭಾರತದಲ್ಲೂ ನಡೆಸುವಂತೆ ಸ್ಟೇಟ್ ಸೆಕ್ರೆಟರಿಗೆ ವಿಜ್ಞಾಪನ ಪತ್ರವೊಂದನ್ನು ಕಳಿಸಬೇಕೆಂಬ ಸೂಚನೆಯನ್ನು 1876ರ ಆಗಸ್ಟ್ 13ರ ಸಭೆಯಲ್ಲಿ ಮಂಡಿಸಿದರು. ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಏಕಕಾಲದಲ್ಲಿ ಲಂಡನ್, ಕಲ್ಕತ್ತ, ಮದ್ರಾಸು, ಮುಂಬೈಗಳಲ್ಲಿ ನಡೆಸುವುದು ಅಪೇಕ್ಷಣೀಯವೆಂಬ ಸೂಚನೆ ಕಾಮನ್ಸ್ ಸಭೆಗೆ ಹೋಯಿತು. ಭಾರತದ ಪ್ರಮುಖ ನಗರಗಳಲ್ಲಿ ಈಸ್ಟ್ ಇಂಡಿಯ ಆಸೋಸಿಯೇಷನ್ನಿನ ಶಾಖೆಗಳನ್ನು ತೆರೆಯುವುದಕ್ಕೆ ಮತ್ತು ನಿಧಿ ಕೂಡಿಸುವುದಕ್ಕೆ ದಾದಾಭಾಯಿ ಹಿಂದಿರುಗಿದರು. ಮುಂಬಯಿಯಲ್ಲಿ ಅದರ ಶಾಖೆಯೊಂದು ಆರಂಭವಾಯಿತು. ಕೆಲವು ತಿಂಗಳುಗಳಲ್ಲಿ ಕಲ್ಕತ್ತ, ಮದ್ರಾಸು ನಗರಗಳಲ್ಲೂ ಶಾಖೆಗಳು ಸ್ಥಾಪಿತವಾದುವು. ಸಂಘದ ಪರವಾಗಿ ಕೈಕೊಂಡ ಕಾರ್ಯ ಸಫಲವಾಗಿದ್ದರಿಂದ ತೃಪ್ತಿ ಹೊಂದಿದ ದಾದಾಭಾಯಿ ನಾಲ್ಕನೆಯ ಬಾರಿಗೆ ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಅಲ್ಲಿ ಸಂಘದ ಚಟುವಟಿಕೆಗಳನ್ನು ಮುಂದುವರಿಸಿದರು. ಹೀಗೆ ಅವರು ಇಂಗ್ಲೆಂಡ್ - ಭಾರತಗಳ ನಡುವೆ ಹಲವು ಸಾರಿ ಪ್ರಯಾಣ ಮಾಡಿದರು.

1874ರಲ್ಲಿ ನೌರೋಜಿಯವರು ಬಡೋದೆಯ ದಿವಾನರಾಗಿ ನೇಮಕವಾದರು. ಮಹಾರಾಜರು ಮತ್ತು ರೆಸಿಡೆಂಟರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಒಂದು ವರ್ಷದ ಅನಂತರ ಆ ಹುದ್ದೆಗೆ ರಾಜೀನಾಮೆ ನೀಡಿದರು. 1875ರ ಜುಲೈಯಲ್ಲಿ ಮುಂಬಯಿಯ ಮುನಿಸಿಪಲ್ ಕಾರ್ಪೊರೇಷನ್ನಿನ ಸದಸ್ಯರಾಗಿ ಆಯ್ಕೆಗೊಂಡು ಸೆಪ್ಟೆಂಬರ್‍ನಲ್ಲಿ ಕಾರ್ಪೊರೇಷನ್ನಿನ ಟೌನ್ ಕೌನ್ಸಿಲ್ಲಿಗೆ ಚುನಾಯಿತರಾದರು. ಆದರೆ 1876ರಲ್ಲಿ ರಾಜೀನಾಮೆಯಿತ್ತು ವ್ಯಾಪಾರವನ್ನು ನೋಡಿಕೊಳ್ಳಲು ಇಂಗ್ಲೆಂಡಿಗೆ ಹಿಂದಿರುಗಿದರು. 1881 ಮುಗಿಯುವ ವೇಳೆಗೆ ಅವರ ವ್ಯಾಪಾರ ಸಂಸ್ಥೆ ಮುಚ್ಜಿದ್ದರಿಂದ ಭಾರತಕ್ಕೆ ಮರಳಿದರು. 1883ರಲ್ಲಿ ಜಸ್ಟಿಸ್ ಆಫ್ ದಿ ಪೀಸ್ ಆಗಿ ಅವರ ನೇಮಕವಾಯಿತು. ಅದೇ ವರ್ಷ ಕಾರ್ಪೊರೇಷನ್ ಸದಸ್ಯರಾಗಿ 2ನೆಯ ಸಲ ಆಯ್ಕೆಗೊಂಡರು. ಅವರ ಮಾಸಪತ್ರಿಕೆ, ದಿ ವಾಯ್ಸ್ ಆಫ್ ಇಂಡಿಯಾ, ಇದೇ ಸಮಯಕ್ಕೆ ಹೊರಡತೊಡಗಿತು. ಭಾರತೀಯರ ಮನೋಭಾವ, ಆಶಯಗಳನ್ನು ಬ್ರಿಟಿಷರಿಗೆ ಮನವರಿಗೆ ಮಾಡಿಕೊಡುವುದೇ ಈ ಪತ್ರಿಕೆಯ ಉದ್ದೇಶವಾಗಿತ್ತು.

1885ರಲ್ಲಿ ಮುಂಬಯಿ ವಿಧಾನ ಪರಿಷತ್ತಿನ ಸದಸ್ಯರಾಗಬೇಕೆಂದು ಆ ಪ್ರಾಂತ್ಯದ ಗವರ್ನರರಿಂದ ಅವರಿಗೆ ಆಹ್ವಾನ ಬಂತು. ಭಾರತ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪನೆಯಲ್ಲಿ (1885) ಭಾಗವಹಿಸಿದವರ ಪೈಕಿ ನೌರೋಜಿಯವರೂ ಒಬ್ಬರು. 1886, 1893 ಮತ್ತು 1906ರಲ್ಲಿ ಅವರು ಅದರ ಅಧ್ಯಕ್ಷರಾಗಿದ್ದರು. ಭಾರತದ ಹಣಕಾಸಿನ ಸ್ಥಿತಿಯನ್ನು ಪರಿಶೀಲಿಸಲು ಅವರ ಪ್ರಯತ್ನದಿಂದಾಗಿ ನೇಮಕಗೊಂಡ (1873) ಪಾರ್ಲಿಮೆಂಟರಿ ಸಮಿತಿಯ (ಫಾಸೆಟ್ ಸಮಿತಿ) ಮುಂದೆ ಸಾಕ್ಷ್ಯ ನೀಡಿದರು. ತಲಾ ವಾರ್ಷಿಕ ವರಮಾನ ಕೇವಲ ರೂ. 20 ಇರುವ ಭಾರತೀಯರ ಕಂದಾಯದ ಹೊರೆ ಅತಿ ಭಾರದ್ದು ಎಂದು ಅವರು ಅಂಕಿ ಅಂಶಗಳ ಮೂಲಕ ವಿವರಿಸಿದರು. 1887ರಲ್ಲಿ ಲೋಕಸೇವಾ ಆಯೋಗದ ಎದುರು ಸಾಕ್ಷಿ ನೀಡಿ, ಸ್ಪರ್ಧಾ ಪರೀಕ್ಷೆಗಳಲ್ಲಿ ಭಾರತೀಯ ಹಾಗೂ ಇಂಗ್ಲಿಷ್ ಅಭ್ಯರ್ಥಿಗಳ ನಡುವಣ ತಾರತಮ್ಯದಿಂದ ಭಾರತೀಯರಿಗೆ ಅನ್ಯಾಯವಾಗುತ್ತಿದೆಯೆಂದು ಹೇಳಿದರು. ಭಾರತದ ಖರ್ಚುಗಳನ್ನು ಕುರಿತ ವಿಚಾರಣೆ ನಡೆಸಿ ಸಲಹೆ ನೀಡಲು ನೇಮಕವಾದ ವೆಲ್ಬಿ ಆಯೋಗದಲ್ಲಿ ಅವರೂ ಒಬ್ಬ ಸದಸ್ಯರಾಗಿದ್ದರು. ಈ ಆಯೋಗದ ಮುಂದೆ ಅವರೂ ಸಾಕ್ಷ್ಯ ನೀಡಿದರು(1897). ಭಾರತದ ಕರೆನ್ಸಿ ವ್ಯವಸ್ಥೆಯ ಬಗ್ಗೆ ಭಾರತದ ಕರೆನ್ಸಿ ಆಯೋಗಕ್ಕೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. 1902ರಲ್ಲಿ ಅವರು ಮಧ್ಯ ಫಿನ್ಸ್‍ಬರಿ ಕ್ಷೇತ್ರದಿಂದ ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಬ್ರಿಟನ್ನಿನ ಕಾಮನ್ಸ್ ಸಭೆಗೆ ಚುನಾಯಿತರಾದರು. ಸಂವೈಧಾನಿಕ ಪ್ರಜಾಸತ್ತೆಯಲ್ಲಿ ಅವರಿಗೆ ಧೃಡವಾದ ನಂಬಿಕೆಯಿತ್ತು. ಭಾರತದ ಸ್ವಾತಂತ್ರ್ಯದ ಪ್ರಶ್ನೆ ಬ್ರಿಟನ್ನಿನ ಕಾಮನ್ಸ್ ಸಭೆಯಲ್ಲಿ ಇತ್ಯರ್ಥವಾಗಬೇಕೆಂದು ಅವರು 1905ರಲ್ಲಿ ಹೇಳಿದರು. ಆಮ್‍ಸ್ಟರ್‍ಡ್ಯಾಮಿನಲ್ಲಿ ಜರುಗಿದ ಅಂತರರಾಷ್ಟ್ರೀಯ ಸಮಾಜವಾದಿಗಳ ಸಮ್ಮೇಳನದಲ್ಲಿ ಅವರು ಭಾರತದ ಪ್ರತಿನಿಧಿಯಾಗಿದ್ದರು. ಒಂದನೆಯ ಮಹಾಯುದ್ಧದಲ್ಲಿ ಭಾರತೀಯರು ಬ್ರಿಟಿಷರಿಗೆ ಸಹಾಯ ಮಾಡಬೇಕೆಂಬುದಾಗಿ ಅವರು ಮನವಿ ಮಾಡಿದರು. 1916ರಲ್ಲಿ ಮುಂಬಯಿ ವಿಶ್ವವಿದ್ಯಾಲಯ ಅವರಿಗೆ ಗೌರವ ಎಲ್‍ಎಲ್.ಡಿ. ಪದವಿ ನೀಡಿತು. 

ದಾದಾಭಾಯಿಯವರು ಅನೇಕ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ಎಲ್ಛಿನ್‍ಸ್ಟನ್ ಕಾಲೇಜಿನ ಸಾಹಿತ್ಯ ಮತ್ತು ವಿಜ್ಞಾನ ಸಂಘದ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರೆಲ್ಲದೆ ಅದರ ಆಶ್ರಯದಲ್ಲಿ ಜ್ಞಾನಪ್ರಕಾಶ ಎಂಬ ಗುಜರಾತಿ ಪತ್ರಿಕೆಯನ್ನಾರಂಭಿಸಿ ತಾವೇ ಅದರ ಸಂಪಾದಕರಾದರು. 1889ರಲ್ಲಿ ರಾಸ್ತ್ ಗೋಫ್ತಾರ್ (ಸತ್ಯವಾದಿ) ಎಂಬ ಗುಜರಾತಿ ವಾರಪತ್ರಿಕೆಯನ್ನು ಹೊರಡಿಸಿ 2 ವರ್ಷ ಅದರೆ ಸಂಪಾದಕರಾಗಿದ್ದರು. 1883ರಲ್ಲಿ ಅವರು ವಾಯ್ಸ್ ಆಫ್ ಇಂಡಿಯ ಎಂಬ ಪತ್ರಿಕೆ ಹೊರಡಿಸಿದರು. ಅನಂತರ ಅದು ಇಂಡಿಯನ್ ಸ್ಪಕ್ಟೇಟರ್ ಪತ್ರಿಕೆಯಲ್ಲಿ ವಿಲೀನವಾಯಿತು. ಅದು ಪ್ರಗತಿಶೀಲ ಮತ್ತು ಮುನ್ನಡೆಯ ವಿಚಾರಗಳಿಗೆ ಮೀಸಲಾಗಿದ್ದ ಪತ್ರಿಕೆ. ಇಂಗ್ಲೆಂಡ್ ಮತ್ತು ಭಾರತದ ಅನೇಕ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದುವು. ಭಾರತದಲ್ಲಿ ದಾರಿದ್ರ್ಯ ಎಂಬ ವಿಷಯವನ್ನು ಕುರಿತು ಅವರು ಇಂಗ್ಲಿಷಿನಲ್ಲಿ ಬರೆದ ಹೊತ್ತಗೆಯೊಂದು 1878ರಲ್ಲಿ ಪ್ರಕಟವಾಯಿತು. ಇದನ್ನು ಅನಂತರ ಪರಿಷ್ಕರಿಸಿ ಹಿಗ್ಗಿಸಿ, ಪಾವರ್ಟಿ ಅಂಡ್ ಅನ್-ಬ್ರಿಟಿಷ್ ರೂಲ್ ಎಂಬ ಹೆಸರಿನಲ್ಲಿ 1901ರಲ್ಲಿ ಲಂಡನ್ನಿನಿಂದ ಪ್ರಕಟಿಸಿದರು. ಅವರ ಭಾಷಣಗಳು ಮತ್ತು ಲೇಖನಗಳ ಸಂಕಲನವೊಂದನ್ನು ಮದರಾಸಿನ ಜಿ. ಎ. ನಟೀಶನ್ ಮತ್ತು ಕಂಪನಿ ಪ್ರಕಟಿಸಿತು. ಭಾರತದ ರಾಷ್ಟ್ರೀಯ ವರಮಾನ ಕ್ಷೇತ್ರದಲ್ಲಿ ಮೊಟ್ಟಮೊದಲು ಅಧ್ಯಯನ ನಡೆಸಿದವರು ಅವರು. ದಾದಾಭಾಯಿ ನೌರೋಜಿಯವರು ಫ್ರಾಮ್‍ಜಿ ಇನ್‍ಸ್ಟಿಟ್ಯೂಟ್, ಇರಾನಿ ಫಂಡ್, ಪಾರ್ಸೀ ಜಿಮ್ನಾಸಿಯಮ್, ವಿಧವಾ ವಿವಾಹ ಸಂಘ, ವಿಕ್ಟೋರಿಯ ಮತ್ತು ಆಲ್ಪರ್ಟ್ ಮ್ಯೂಸಿಯಮ್ ಮೊದಲಾದ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು. ಪಾರ್ಸಿಗಳ ಮುನ್ನಡೆಗಾಗಿಯೂ ಅವರು ಉದ್ದಕ್ಕೂ ಶ್ರಮಿಸಿದರು.

ದಾದಾಭಾಯಿ ನೌರೋಜಿಯವರು 19ನೆಯ ಶತಮಾನದ ಉತ್ತರಾರ್ಧದ ಪ್ರಮುಖ ಸಮಾಜಸುಧಾರಕರಾಗಿದ್ದರು. ಜಾತೀಯತೆಯಲ್ಲಿ ಅವರಿಗೆ ನಂಬಿಕೆಯಿರಲಿಲ್ಲ. ಸ್ತ್ರೀ ಶಿಕ್ಷಣದ ಮುಂದಾಳುಗಳಾಗಿದ್ದ ಅವರು ಸ್ತ್ರೀಪುರುಷರಿಗೆ ಸಮಾನವಾದ ಕಾನೂನುಗಳಿರಬೇಕೆಂದು ಪ್ರತಿಪಾದಿಸುತ್ತಿದ್ದರು. ಅವರು ಪ್ರಾಥಮಿಕ ಶಿಕ್ಷಣದ ಮಹತ್ತ್ವವನ್ನು ಒತ್ತಿ ಹೇಳಿದರು. ವಿಚಾರ, ಮಾತು ಮತ್ತು ಕೃತಿಗಳಲ್ಲಿ ಶುಚಿಯಾಗಿರಬೇಕೆಂಬುದಾಗಿ ಅವರು ಜೊರಾಸ್ಟ್ರಿಯನ್ ಕರ್ತವ್ಯಗಳನ್ನು ಕುರಿತು ಬರೆದಿರುವ ಹೊತ್ತಗೆಯಲ್ಲಿ ಹೇಳಿದ್ದಾರೆ.
ಅವರು ಪ್ರಗತಿಪರ ಅಭಿಪ್ರಾಯಗಳನ್ನು ಹೊಂದಿದ್ದ ರಾಷ್ಟ್ರೀಯತಾವಾದಿಗಳಾಗಿದ್ದರು. ಭಾರತ ಸ್ವರಾಜ್ಯ ಗಳಿಸಬೇಕೆಂಬುದು ಅವರ ಭಾವನೆಯಾಗಿತ್ತು. ಇದಕ್ಕಾಗಿ ಸಂವಿಧಾನಬದ್ಧವಾದ ಮಾರ್ಗಗಳನ್ನೇ ಅನುಸರಿಸಬೇಕೆಂದು ಅವರು ಪ್ರತಿಪಾದಿಸುತ್ತಿದ್ದರು.

ಭಾರತದಲ್ಲಿ ಬ್ರಿಟಿಷರ ಹಣಕಾಸಿನ ಅಡಳಿತ ಅವರಿಂದ ಕಟುವಾದ ಟೀಕೆಗೆ ಒಳಗಾಗಿತ್ತು. ಕ್ಷಾಮ ಡಾಮರಗಳು, ಸಾಂಕ್ರಾಮಿಕ ರೋಗಗಳು, ಮುಂತಾದವು ಬ್ರಿಟಿಷರ ಆರ್ಥಿಕ ಶೋಷಣೆಯ ಪರಿಣಾಮ ಎಂದು ಅವರು ಹೇಳುತ್ತಿದ್ದರು. ಸ್ವದೇಶಿ ತತ್ತ್ವದಲ್ಲಿ ಅವರಿಗೆ ದೃಢನಂಬಿಕೆ. ಆದರೆ ಅವರು ಯಂತ್ರ ವಿರೋಧಿಯಾಗಿರಲಿಲ್ಲ.

ದಾದಾಭಾಯಿ ನೌರೋಜಿಯವರಿಗೆ ದೇಶವಿದೇಶಗಳಲ್ಲಿ ಅನೇಕ ಸ್ನೇಹಿತರಿದ್ದರು. ಗಾಂಧೀಜಿಗೆ ಅವರು ಸ್ಛೂರ್ತಿದಾಯಕರಾಗಿದ್ದರು. ಗಾಂಧಿಯವರು ಅವರಿಂದ ಆಗಾಗಿ ಸಲಹೆ ಪಡೆಯುತ್ತಿದ್ದದ್ದುಂಟು. ದಕ್ಷಿಣ ಆಫ್ರಿಕದಲ್ಲಿದ್ದ ಭಾರತೀಯರ ಸ್ಥಿತಿ ಸುಧಾರಣೆಗಾಗಿ ಅವರು ಇಂಗ್ಲೆಂಡಿನಲ್ಲಿ ಬಹಳ ಶ್ರಮಿಸಿದರು. ಭಾರತೀಯರ ಆಶೋತ್ತರಗಳನ್ನು ಪ್ರಪಂಚಕ್ಕೆ ತಿಳಿಸಲು ಬಹುವಾಗಿ ಶ್ರಮಿಸಿದ ದಾದಾಭಾಯಿ ನೌರೋಜಿಯವರು ಭಾರತದ ಪಿತ ಎಂದು ಗೌರವಾನ್ವಿತರಾಗಿದ್ದವರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ನೌರೋಜಿಯವರು ಒಳ್ಳೆಯ ವಾಗ್ಮಿಯೂ ಚಿಂತನಶೀಲರೂ ಹಣಕಾಸು ತಜ್ಞರೂ ಸಮಾಜಸುಧಾರಕರೂ ರಾಷ್ಟ್ರಪ್ರೇಮಿಯೂ ಆಗಿದ್ದರು. ಭಾರತದ ಹಿತಚಿಂತನೆಯಲ್ಲೇ ಅವರು ಸದಾ ನಿರತರಾಗಿದ್ದರು. 

1917ರ ಜೂನ್ 30ರಂದು ದಾದಾಭಾಯಿ ನೌರೋಜಿಯವರು ತೀರಿಕೊಂಡರು.

On the birth anniversary of Grand old man of India

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ