ಸದ್ಗುರು
ಸದ್ಗುರು
ಇಂದು ವಿಶ್ವಪ್ರಸಿದ್ಧ ಪೂಜ್ಯ ಸದ್ಗುರು ಅವರ ಜನ್ಮದಿನ. ಇಂದು ನಾನಿರುವ ದುಬೈನಲ್ಲಿ ಹಲವಾರು ದೇಶಗಳಿಗೆ ಸೇರಿರುವ ವಿವಿಧ ಧರ್ಮೀಯರು ಸಹಾ ಅವರ ವಿಡಿಯೋ ಕಾರ್ಯಕ್ರಮಗಳನ್ನು ನೋಡಿ ಮೆಚ್ಚಿ ಮಾತಾಡುವುದನ್ನು ಆಗ್ಗಿಂದಾಗ್ಗೆ ನೋಡಿದ್ದೇನೆ. ಅವರು ಹಲವಾರು ಮಾಧ್ಯಮಗಳಲ್ಲಿ ಯಾವುದೇ ವಿಚಾರದಲ್ಲಿ ಸುಸ್ಪಷ್ಟತೆಯಿಂದ ಮಾತನಾಡುವುದನ್ನು ಕೇಳಿದಾಗ ಒಬ್ಬ ನಮ್ಮ ನಡುವೆಯೇ ಇರುವ ವ್ಯಕ್ತಿಗೆ ಇಂತಹ ಶಕ್ತಿ ಹೇಗೆ ಸಾಧ್ಯ ಎಂದು ಅಚ್ಚರಿಯುಕ್ತ ಗೌರವ ಸಹಾ ಮೂಡುತ್ತದೆ.
ಸದ್ಗುರು ಜಗ್ಗಿ ವಾಸುದೇವ್ ಅವರ ಮೂಲ ಹೆಸರು ಜಗದೀಶ. ಇವರು 1957ರ ಸೆಪ್ಟಂಬರ್ 3ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಡಾ. ವಾಸುದೇವ್. ತಾಯಿ ಸುಶೀಲ. ಈ ದಂಪತಿಗಳ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳಲ್ಲಿ ಜಗದೀಶ್ ಕಿರಿಯರು. ತಂದೆ ರೈಲ್ವೆ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರಾಗಿದ್ದು ಸಂಸಾರ ಬೇರೆ ಬೇರೆ ಊರುಗಳಲ್ಲಿ ನೆಲೆಸುವುದು ಅನಿವಾರ್ಯವಾಗಿತ್ತು. ಜಗದೀಶ ಮುದ್ದಿನಿಂದ ಜಗ್ಗಿ ಎನಿಸಿದರು.
ಜಗ್ಗಿ ಚಿಕ್ಕಂದಿನಿಂದಲೇ ಪ್ರಕೃತಿಪ್ರೇಮಿಯಾಗಿ ಮೈಸೂರಿನ ಸುತ್ತಮುತ್ತಲಿನ ಕಾಡುಮೇಡುಗಳಲ್ಲಿ ಅಲೆದಾಡುತ್ತಿದ್ದರು. ಕೆಲವು ವೇಳೆ ಈ ಅವಧಿ ಹಲವು ದಿನಗಳವರೆಗೂ ಹೋದದ್ದುಂಟು. 11ನೇ ವರ್ಷದಲ್ಲಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಪರಿಚಯವಾಗಿ, ಅವರಲ್ಲಿ ಪ್ರಾರಂಭಿಕ ಯೋಗಾಸನಗಳನ್ನು ಕಲಿತು, ದಿನವೂ ಅಭ್ಯಾಸ ಮಾಡುತ್ತಿದ್ದರು. ಸದ್ಗುರುಗಳೇ ಹೇಳಿರುವಂತೆ ಒಂದು ದಿನವೂ ಬಿಡದಂತೆ ಮಾಡುತ್ತಿದ್ದ ಸರಳ ಯೋಗವು ಕಾಲಾನಂತರದಲ್ಲಿ ಮತ್ತೂ ಆಳವಾದ ಆಧ್ಯಾತ್ಮಿಕ ಅನುಭವಕ್ಕೆ ದಾರಿ ಮಾಡಿಕೊಟ್ಟಿತು.
ಜಗ್ಗಿಯವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪದವೀಧರರಾದರು. ತರಗತಿಯಲ್ಲಿ ಎರಡನೆ ಸ್ಥಾನ ಪಡೆದರು. ಕಾಲೇಜು ದಿನಗಳಲ್ಲೇ ಇವರಿಗೆ ಪ್ರವಾಸ ಮತ್ತು ಮೋಟರ್ ಬೈಕ್ಗಳೆಂದರೆ ಅತೀವ ಆಸಕ್ತಿಯಿತ್ತು. ಇಂದೂ ಅದು ಮುಂದುವರೆದಿದೆ. ಜಗ್ಗಿಯವರು ಭಾರತದ ಅನೇಕ ಸ್ಥಳಗಳಿಗೆ ಮೋಟಾರ್ ಬೈಕ್ನಲ್ಲೇ ಪ್ರವಾಸ ಹೋಗುತ್ತಿದ್ದರು. ನೇಪಾಳಕ್ಕೆ ಹೋಗಲು ಪ್ರಯತ್ನಿಸಿದಾಗ ಪಾಸ್ಪೋರ್ಟ್ ಇಲ್ಲದಿದ್ದುದರಿಂದ ನೇಪಾಳದ ಗಡಿಯಲ್ಲಿ ಪ್ರವೇಶ ದೊರೆಯಲಿಲ್ಲ. ಈ ಅನುಭವದ ಪರಿಣಾಮವಾಗಿ ಬಹು ಬೇಗ ಹಣ ಸಂಪಾದಿಸಿ ಯಾರೂ ಅಡ್ಡಿ ಮಾಡದಿರುವಂತಹ ಜಾಗಕ್ಕೆ ಹೋಗಬೇಕೆಂಬ ಛಲ ಇವರಲ್ಲಿ ಹುಟ್ಟಿತು. ಹಾಗಾಗಿ, ಪದವಿ ಪಡೆದನಂತರ ಕೋಳಿ ಸಾಕಣೆ, ಇಟ್ಟಿಗೆ ಕಾರ್ಖಾನೆ, ಕಟ್ಟಡ ನಿರ್ಮಾಣ ಮುಂತಾದ ಹಲವು ಉದ್ಯೋಗಗಳಲ್ಲಿ ತೊಡಗಿಕೊಂಡು ಯಶಸ್ವಿಯಾದರು.
ಜಗ್ಗಿ ಅವರಿಗೆ ಮೈಸೂರಿನ ಚಾಮುಂಡಿ ಬೆಟ್ಟ ಆಪ್ತತಾಣ. 1982ರ ಸೆಪ್ಟೆಂಬರ್ 23ರಂದು ತಮ್ಮ 25ನೇ ವಯಸ್ಸಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಲ್ಲಿನ ಹೆಬ್ಬಂಡೆಯೊಂದರ ಮೇಲೆ ಕುಳಿತಿದ್ದಾಗ ಜಗ್ಗಿ ಅವರಿಗೆ ಒಂದು ಅವರ್ಣನೀಯ ಅನುಭವವಾಯಿತು. ಆ ಕುರಿತು ಅವರ ಮಾತು ಹೀಗಿದೆ: "ನನ್ನ ಜೀವನದಲ್ಲಿ ಅಲ್ಲಿಯವರೆಗೆ ನಾನು ಎಂಬುದು ಬೇರೆ, ಅದು, ಅವರು ಎಲ್ಲವೂ ಬೇರೆ ಎಂದೇ ಯೋಚಿಸುತ್ತಿದ್ದೆ. ಅವತ್ತು ಮೊದಲ ಬಾರಿಗೆ ನಾನು ಮತ್ತು ಯಾವುದೂ ಬೇರೆ ಎಂಬ ಭಾವ ತಿಳಿಯದಂತೆ, ಒಮ್ಮೆಲೇ ನಾನೇ ಎಲ್ಲೆಡೆ, ಎಲ್ಲವೂ ಆದಂತಹ ಅನುಭವವಾಯ್ತು! ನಾನು ಕುಳಿತಿದ್ದ ಬಂಡೆ, ಉಸಿರಾಡುತ್ತಿದ್ದ ಗಾಳಿ, ಸುತ್ತಲಿನ ವಾತಾವರಣ ಎಲ್ಲದರಲ್ಲಿಯೂ ’ನಾನು’ ಎನ್ನುವುದು ಸ್ಫೋಟಗೊಂಡಂತೆನಿಸಿತು. ಇದು ನಿಜಕ್ಕೂ ಹುಚ್ಚು ಎನಿಸಬಹುದು. ಈ ಅನುಭವವು ನನಗೆ 10 - 15 ನಿಮಿಷದವರೆಗೆ ಆದಂತೆನಿಸಿತು, ಆದರೆ ಆ ಅವಧಿ, ವಾಸ್ತವದಲ್ಲಿ ನಾಲ್ಕು ಗಂಟೆಗಳಿಗೂ ಮೀರಿತ್ತೆಂದು ಅನಂತರ ತಿಳಿಯಿತು. ಕಣ್ತೆರೆದಿದ್ದರೂ, ಮೈಮೇಲಿನ ಅರಿವಿದ್ದರೂ ಕಾಲ ಸರಿದದ್ದೆ ತಿಳಿಯಲಿಲ್ಲ”.
ಇದಾದ ಆರು ವಾರಗಳ ನಂತರ ಸದ್ಗುರುಗಳು ತಾವು ನಡೆಸುತ್ತಿದ್ದ ಉದ್ದಿಮೆಯನ್ನು ಗೆಳೆಯನಿಗೊಪ್ಪಿಸಿ, ತಮಗೆ ಆದ ಅಪೂರ್ವ ಅನುಭವದ ಬಗ್ಗೆ ಬಲ್ಲವರಿಂದ ತಿಳಿಯಲು ದೀರ್ಘಕಾಲ ಪ್ರವಾಸ ನಡೆಸಿದರು. ಒಂದು ವರ್ಷ ಕಾಲ ನಡೆದ ಧ್ಯಾನ ಮತ್ತು ಪ್ರವಾಸದ ನಂತರ ಸದ್ಗುರುಗಳು ತಮಗಾದ ಅಂತರಂಗದ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಯೋಗವನ್ನು ಹೇಳಿಕೊಡುವ ನಿರ್ಧಾರ ಮಾಡಿದರು.
ಸದ್ಗುರುಗಳು 1983ರಲ್ಲಿ, ಮೈಸೂರಿನಲ್ಲಿ ಏಳು ಜನರಿಗಾಗಿ ಯೋಗದ ಮೊದಲ ತರಗತಿಯನ್ನು ನಡೆಸಿದರು. ಕ್ರಮೇಣ, ಕರ್ನಾಟಕದ ವಿವಿಧ ನಗರಗಳಲ್ಲಿ ಮತ್ತು ಹೈದರಾಬಾದ್ನಲ್ಲಿ ಯೋಗವನ್ನು ಹೇಳಿಕೊಡುವುದಕ್ಕಾಗಿ ಮೋಟಾರ್ಬೈಕ್ನಲ್ಲಿ ಊರಿಂದೂರಿಗೆ ಪ್ರಯಾಣ ಮಾಡುತ್ತಿದ್ದರು. ತಮ್ಮ ಕೋಳಿ ಫ಼ಾರ್ಮ್ನಿಂದ ಬರುತ್ತಿದ್ದ ಹಣದಲ್ಲಿ ಜೀವನ ನಿರ್ವಹಿಸುತ್ತ ಕಲಿಯಲು ಬಂದವರಿಗೆ ಉಚಿತವಾಗಿ ಯೋಗವನ್ನು ಹೇಳಿಕೊಡುತ್ತಿದ್ದರು. ಯೋಗ ಶಿಬಿರದಲ್ಲಿ ಬರುತ್ತಿದ್ದ ಹಣವನ್ನು ಕಡೆಯ ದಿನದಂದು ಆಯಾ ಊರಿನ ಯಾವುದಾದರೂ ಸಂಸ್ಥೆಗೆ ದಾನವಾಗಿ ಕೊಟ್ಟುಬಿಡುವುದು ಅವರ ಪದ್ದತಿಯಾಗಿತ್ತು. ಈ ಆರಂಭಿಕ ತರಗತಿಗಳೇ ಮುಂದೆ ಈಶ ಯೋಗ ಶಿಕ್ಷಣಕ್ಕೆ ತಳಹದಿಯಾದವು. 1989ರಲ್ಲಿ, ಯೋಗ ಶಿಕ್ಷಣದ ಮೊದಲ ತರಗತಿಯು ಕೊಯಮತ್ತೂರಿನಲ್ಲಿ ನಡೆಯಿತು, ಅದೇ ಈಗ ’ಈಶ ಯೋಗ ಕೇಂದ್ರ’ವಾಗಿ ಬೆಳೆದು ನಿಂತಿದೆ.
ಆಗ ಈ ತರಗತಿಗಳನ್ನು ’ಸಹಜ ಸ್ಥಿತಿ ಯೋಗ’ ಎಂದು ಕರೆಯುತ್ತಿದ್ದು, ಅದರಲ್ಲಿ ಆಸನಗಳು, ಪ್ರಾಣಾಯಾಮ ಕ್ರಿಯೆಗಳು ಮತ್ತು ಧ್ಯಾನ ಒಳಗೊಂಡಿತ್ತು. ಆಧ್ಯಾತ್ಮಿಕ ಸಾಧಕರ ಸಂಖ್ಯೆ ಬೆಳೆಯುತ್ತಿದ್ದಂತೆ ಅವರ ಅನುಕೂಲಕ್ಕಾಗಿ ಆಶ್ರಮವನ್ನು ಸ್ಥಾಪಿಸಲು ಸದ್ಗುರುಗಳು 1993ರಲ್ಲಿ ನಿರ್ಧರಿಸಿದರು. ಕರ್ನಾಟಕ, ಕೇರಳ, ಗೋವಾ, ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಬಹಳ ಹುಡುಕಾಟ ನಡೆಸಿ, ಕಡೆಗೆ 1994ರಲ್ಲಿ ಕೊಯಮತ್ತೂರಿನಿಂದ 30 ಕಿ.ಮೀ. ದೂರದಲ್ಲಿರುವ ವೆಳ್ಳಿಯಂಗಿರಿ ಬೆಟ್ಟದ ತಪ್ಪಲಿನಲ್ಲಿ 13 ಎಕರೆ ಜಮೀನನ್ನು ಖರೀದಿಸಿ, ಅಲ್ಲಿ ’ಈಶ ಯೋಗ ಕೇಂದ್ರ’ವನ್ನು ಸ್ಥಾಪಿಸಿದರು. 'ಈಶ’ ಎಂದರೆ ನಿರಾಕಾರ ದೈವ ಎಂದರ್ಥ. 'ಈಶ ಯೋಗ’ದ ಪ್ರಮುಖ ಕಾರ್ಯಕ್ರಮವೇ ’ಇನ್ನರ್ ಎಂಜಿನೀರಿಂಗ್’. ಇದರಲ್ಲಿ ಸಾಧಕರಿಗೆ ವೈಯಕ್ತಿಕವಾಗಿ ಧ್ಯಾನ, ಪ್ರಾಣಾಯಾಮ ಮತ್ತು ’ಶಾಂಭವೀ ಮಹಾಮುದ್ರಾ’ ದೀಕ್ಷೆ ನೀಡಲಾಗುತ್ತಿದೆ.
1994ರಲ್ಲಿ, ಆಶ್ರಮದ ಆವರಣದಲ್ಲಿ ನಡೆದ ಮೊದಲ ಯೋಗಾಭ್ಯಾಸ ತರಗತಿಯಲ್ಲಿ ಸದ್ಗುರುಗಳು ಧ್ಯಾನಲಿಂಗದ ಬಗ್ಗೆ ಪ್ರಸ್ತಾಪಿಸಿದರು. ತಮ್ಮ ಗುರುಗಳ ಆಣತಿಯಂತೆ ಧ್ಯಾನಲಿಂಗದ ಪ್ರಾಣಪ್ರತಿಷ್ಠಾಪನೆ ಮಾಡುವುದು ತಮ್ಮ ಜೀವನದ ಏಕೈಕ ಗುರಿಯಾಗಿತ್ತೆಂದು ಸದ್ಗುರುಗಳು ಒಂದೆಡೆ ಹೇಳಿದ್ದಾರೆ. 1996ರಲ್ಲಿ, ಧ್ಯಾನಲಿಂಗದ ಶಿಲಾವಿಗ್ರಹ ಆಶ್ರಮಕ್ಕೆ ಬಂತು. ಸುಮಾರು ಮೂರು ವರ್ಷಗಳ ಸತತ ಕಾರ್ಯ ನಡೆದು, ದಿನಾಂಕ 23.6.1996ರಂದು ಧ್ಯಾನಲಿಂಗವನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆಯಲಾಯಿತು. ಧ್ಯಾನಲಿಂಗದ ಆವರಣವನ್ನು ಧ್ಯಾನಕ್ಕಾಗಿಯೇ ರಚಿಸಲಾಗಿದೆ. ಧ್ಯಾನಲಿಂಗವು ಯಾವುದೇ ಧರ್ಮ, ಮತ, ಪಂಥಕ್ಕೆ ಒಳಪಡದೆ ಕೇವಲ ಧ್ಯಾನಸ್ಥಾನವಾಗಿದೆ. ಸುಮಾರು 76 ಅಡಿ ಎತ್ತರವಿರುವ ದೇವಾಲಯದ ಗುಮ್ಮಟವು ಕಬ್ಬಿಣ, ಸಿಮೆಂಟ್ನಿಂದ ನಿರ್ಮಿತವಾಗಿಲ್ಲದೆ ಕೇವಲ ಕೆಮ್ಮಣ್ಣು, ಇಟ್ಟಿಗೆ, ಹಾಗೂ ಸ್ವಲ್ಪ ಪ್ರಮಾಣದ ಗಾರೆಯಿಂದ ಕಟ್ಟಲ್ಪಟ್ಟಿದ್ದು, ಅದು ಇಡೀ ಗರ್ಭಗೃಹವನ್ನು ಆವರಿಸಿಕೊಂಡಿದೆ. ಸಾಂದ್ರವಾದ ಕಪ್ಪು ಗ್ರಾನೈಟ್ನಲ್ಲಿ ಕೆತ್ತಲ್ಪಟ್ಟಿರುವ ಧ್ಯಾನಲಿಂಗವು 13 ಅಡಿ 9 ಅಂಗುಲ ಎತ್ತರವಿದೆ. ಮುಂಬಾಗಿಲಿನ ಎದುರಿನಲ್ಲಿರುವ ’ಸರ್ವ ಧರ್ಮಸ್ತಂಭ’ ಏಕತೆಯ ದ್ಯೋತಕವಾಗಿದೆ. ಅದರ ಮೇಲೆ ಹಿಂದೂ, ಕ್ರೈಸ್ತ, ಇಸ್ಲಾಮ್, ಸಿಖ್, ಜೈನ, ಬೌದ್ಧ, ತಾವೋ, ಜ಼ರಾತುಷ್ಟ್ರ, ಯಹೂದಿ, ಶಿಂಟೋ ಮತಗಳ ಸಂಕೇತಗಳನ್ನು ಪಡಿಮೂಡಿಸಲಾಗಿದೆ.
ಇಂದು ಸದ್ಗುರು ಅವರು ಸ್ಥಾಪಿಸಿರುವ ’ಈಶ ಪ್ರತಿಷ್ಠಾನ’ ಸೇವಾಸಂಸ್ಥೆಯು ವಿಶ್ವದಾದ್ಯಂತ ಯೋಗಾಭ್ಯಾಸದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ. 1997ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಯೋಗ ಶಿಕ್ಷಣ ಪ್ರಾರಂಭವಾಯಿತು. ಮಾರ್ಚ್ 2005ರಲ್ಲಿ, ಅಮೇರಿಕದ ಟೆನ್ನೆಸ್ಸಿ ಪ್ರಾಂತ್ಯದ ಮ್ಯಾಕ್ಮಿನ್ವಿಲ್ಲೆಯಲ್ಲಿ ’ಈಶ ಇನ್ಸ್ಟಿಟ್ಯೂಟ್ ಆಫ಼್ ಇನ್ನರ್ ಸೈನ್ಸಸ್’ [ಐ.ಐ.ಐ.] ಅನ್ನು ಆರೇ ತಿಂಗಳಿನಲ್ಲಿ ಕಟ್ಟಿ ಮುಗಿಸಲಾಯಿತು. 2008ರಲ್ಲಿ ಸುಮಾರು 39,000 ಚದರಡಿಯಷ್ಟು ವಿಶಾಲವಾದ ಮಹಾಮಂಟಪ ’ಮಹಿಮಾ’ ವನ್ನು ಸದ್ಗುರುಗಳು ಐ.ಐ.ಐ.ನಲ್ಲಿ ಪ್ರತಿಷ್ಠಾಪಿಸಿದರು. ಮಧ್ಯಪ್ರಾಚ್ಯ ದೇಶಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಚಿಕ್ಕಬಳ್ಳಾಪುರದ ಬಳಿಯೂ 'ಸದ್ಗರು ಸನ್ನಿಧಿ' ಜನ್ಮತಾಳಿದೆ.
ಈಶ ಪ್ರತಿಷ್ಠಾನವು ಅನೇಕ ಸಮಾಜೋದ್ಧಾರಕ ಕಾರ್ಯಕ್ರಮಗಳನ್ನೂ ಕೂಡ ಹಮ್ಮಿಕೊಂಡಿದೆ. ವಿಶ್ವಸಂಸ್ಥೆಯು ತನ್ನ ’ಎಕನಾಮಿ ಆಂಡ್ ಸೋಶಿಯಲ್ ಕೌನ್ಸಿಲ್’(ಆರ್ಥಿಕ ಮತ್ತು ಸಾಮಾಜಿಕ ಮಂಡಲಿ)ನಲ್ಲಿ ಈಶ ಪ್ರತಿಷ್ಠಾನಕ್ಕೆ ವಿಶೇಷ ಸಲಹೆಗಾರ ಸ್ಥಾನವನ್ನು ನೀಡಿದೆ. ಸದ್ಗುರು ಬರೆದಿರುವ ಪುಸ್ತಕಗಳು ಆರೋಗ್ಯ, ಧರ್ಮ, ಆಧ್ಯಾತ್ಮಿಕತೆ ಮತ್ತು ನಂಬಿಕೆ, ಸಲಹೆ ಮತ್ತು ಇತರೆ ಅನೇಕ ವಿಭಾಗಗಳಲ್ಲಿ ಬಹುಬೇಡಿಕೆ ಪಡೆದಿವೆ.
ಸದ್ಗುರುಗಳು ಆರಂಭಿಸಿದ ’ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್’ (ಪಿ.ಜಿ.ಎಚ್) ಪರಿಸರ ಯೋಜನೆಗೆ ಜೂನ್ 2010ರಲ್ಲಿ ಭಾರತ ಸರಕಾರದ 'ಇಂದಿರಾಗಾಂಧಿ ಪರ್ಯಾವರಣ್ ಪುರಸ್ಕಾರ್’ ಸಂದಿದೆ. ‘ಈಶ ಪ್ರತಿಷ್ಠಾನದ ’ಆಕ್ಶನ್ ಫ಼ಾರ್ ರೂರಲ್ ರಿಜುವಿನೇಶನ್’ - ಗ್ರಾಮೀಣ ಪುನರುತ್ಥಾನ ಆಂದೋಲನ (ಎ.ಆರ್.ಆರ್) ಯೋಜನೆಯು ಗ್ರಾಮೀಣ ಬಡವರ ಆರೋಗ್ಯ ಮತ್ತು ಅವರ ಜೀವನಮಟ್ಟವನ್ನು ಉತ್ತಮಪಡಿಸಲು ಉದ್ದೇಶಿಸಿದೆ. ‘ಈಶ ವಿದ್ಯಾ’ ಎಂಬುದು ವಿದ್ಯಾಭ್ಯಾಸಕ್ಕಾಗಿ ಈಶ ಪ್ರತಿಷ್ಠಾನ ರೂಪಿಸಿರುವ ಮತ್ತೊಂದು ಯೋಜನೆ. ಗ್ರಾಮೀಣ ಮಕ್ಕಳನ್ನು ಅಕ್ಷರಸ್ಥರನ್ನಾಗಿಸಿ, ಅವರನ್ನು ಉನ್ನತ ಶಿಕ್ಷಣಕ್ಕೆ ಸಜ್ಜುಗೊಳಿಸುವುದು ಇದರ ಉದ್ದೇಶ.
2017ರಲ್ಲಿ ಸದ್ಗುರು ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಯಿತು.
ಸದ್ಗುರುಗಳ ಅನೇಕ ಪ್ರವಚನಗಳನ್ನು ಮಾಧ್ಯಮಗಳಲ್ಲಿ ಕೇಳಿ ಮನಸ್ಸು ಸಂತೋಷಗೊಂಡಿದೆ. ಯಾವುದೇ ಪ್ರಶ್ನೆಗಾದರೂ ಅವರು ಸುಸ್ಪಷ್ಟತೆಯಿಂದ ಉತ್ತರಿಸುವುದು, ಅದು ಹೇಗೆ ಸಾಧ್ಯ ಎಂದು ವಿಸ್ಮಯ ಗೌರವ ಮೂಡುತ್ತದೆ. ಸದ್ಗುರುಗಳಿಗೆ ಅವರ ಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು.
On the birthday of Sadhguru 🌷🙏🌷
ಕಾಮೆಂಟ್ಗಳು