ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮನಮೋಹನ್ ಸಿಂಗ್


 ಡಾ. ಮನಮೋಹನ್ ಸಿಂಗ್


ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರು ಜನಿಸಿದ್ದು  1932ರ ಸೆಪ್ಟೆಂಬರ್ 26ರಂದು.   ಮನಮೋಹನ್ ಸಿಂಗ್ ಅವರನ್ನು ನೆನೆದಾಗಲೆಲ್ಲ ವಿಭಿನ್ನ ಭಾವಗಳು ನನ್ನಲ್ಲಿ ಹಾದುಹೋಗುತ್ತದೆ.   

ನಾವು ನಮ್ಮ ದೇಶವನ್ನು ಕಾಣುವಾಗಲೆಲ್ಲಾ ನಮ್ಮ ದೇಶದ ನಾಯಕತ್ವವನ್ನು ದೂಷಿಸುವುದು ನಮ್ಮ ಭಾರತೀಯತೆಯ ಜನ್ಮಜಾತ ಗುಣ.  ನಮ್ಮ ದೇಶದ  ರಾಜಕಾರಣ ಅಂತಹ ದೂಷಣೆಗೆ ನಿರಂತರವಾಗಿ ಅನ್ವರ್ಥವಾಗಿ ನಡೆದುದು  ಎಂಬುದು ಕೂಡಾ ಅಷ್ಟೇ ಸತ್ಯ.   ನಾವು ದೂಷಿಸಿ ದೂಷಿಸಿ ನಮ್ಮ ವ್ಯವಸ್ಥೆಯನ್ನು ನಮ್ಮ ಮಾತುಗಳಂತೆ ಮಾಡಿಕೊಂಡಿದ್ದೇವೆಯೋ ಇಲ್ಲವೇ ನಮ್ಮ ವ್ಯವಸ್ಥೆಯನ್ನು ನೋಡಿಯೇ,  ದೂಷಣೆಯನ್ನೇ ನಮ್ಮ ಜೀವನವನ್ನಾಗಿ ಮಾಡಿಕೊಂಡಿದ್ದೇವೆಯೋ, ಒಟ್ಟಿನಲ್ಲಿ ನಮ್ಮ ಭಾರತೀಯ ವ್ಯವಸ್ಥೆ ಎಂಬುದೇ ದೂಷಿತವೆಂಬಂತೆ ಸ್ಥಗಿತತೆಯಲ್ಲಿ ನಿಂತು ಹೋಗಿರುವಂತೆ ಭಾಸವಾಗುತ್ತಿದೆ.

ನಮ್ಮ ದೇಶದಲ್ಲಿ ಏನಿಲ್ಲ.  ಪ್ರಕೃತಿ ಸಂಪತ್ತು, ಬುದ್ಧಿವಂತ ಜನಾಂಗ, ಪರಂಪರೆ, ಸಾಕಷ್ಟು ಒಳ್ಳೆಯ ಜನ ಇತ್ಯಾದಿ ಇತ್ಯಾದಿ ಎಲ್ಲವೂ ಇದೆ.  ಆದರೆ ಈ ಎಲ್ಲವೂ ಕಿಂಚಿತ್ತು ಮಾಲಿನ್ಯ, ಒಂದಷ್ಟು ಜನರ  ಮೌಢ್ಯ, ಸ್ವಾರ್ಥ, ಭ್ರಷ್ಟತೆ ಇವುಗಳ ನಡುವೆ ಮರೆಮಾಚಿಹೋಗಿದೆ.  ಮನಮೋಹನ ಸಿಂಗ್ ಅವರ ಬಯೋಡಾಟಾದಲ್ಲಿ  ಪ್ರಪಂಚದಲ್ಲಿ ಇನ್ನ್ಯಾವ ನಾಯಕನಿಗೂ ಇಲ್ಲದಷ್ಟು ವಿದ್ಯಾಭ್ಯಾಸ, ಸಾಧನೆ, ವೈವಿಧ್ಯಪೂರ್ಣ ಅನುಭವ, ಒಂದಷ್ಟು ಯಶಸ್ಸು ಎಲ್ಲವೂ ಇದೆ.   ಆದರೆ ಇವೆಲ್ಲವೂ ಅವರ ಸುತ್ತ ಇದ್ದ ವಂಶಪಾರಂಪರ್ಯದ ಹಿಡಿತ, ಏನೂ ಮಾಡಲು ಬಿಡದ ವಿಭಿನ್ನ ಸ್ವಾರ್ಥ ರಾಜಕಾರಣಿಗಳ ಕಾಲೆಳೆತಗಳು,  ಅಷ್ಟೊಂದು ಭ್ರಷ್ಟತೆ ಹೆಜ್ಜೆ ಹೆಜ್ಜೆಯಲ್ಲಿದ್ದರೂ, ಪ್ರಕೃತಿಯನ್ನು ಮೊಗೆ ಮೊಗೆದು ಹಾಳು ಮಾಡುತ್ತಿದ್ದರೂ, ಓಟಿನ ಕೀಳು ತನಕ್ಕಾಗಿ ಪಕ್ಕದ ದೇಶಗಳಿಂದ ಜನರನ್ನು ಒಳತರುವ ಹೇಯ ಕ್ರಮಗಳು ಮುಂತಾದವು ನಡೆದರೂ  ಏನೂ ಕ್ರಮ ಕೈಗೊಳ್ಳಲಾಗದೆ ಸುಮ್ಮನೆ ಕುಳಿತುಕೊಂಡಂತ ಮೂಕತೆಗಳ ನಡುವೆ ಕಳೆದುಹೋಗಿದ್ದಂತೆ ಕಾಣಬರುತ್ತದೆ.

ಕಷ್ಟಪಟ್ಟು ಮೇಲೆ ಬಂದ ಅಪ್ರತಿಮ ಪ್ರತಿಭಾವಂತ, ಆಕ್ಸ್ ವರ್ಡ್ ವಿಶ್ವವಿದ್ಯಾಲಯದ ಡಾಕ್ಟರೇಟ್  ಪಡೆದಾತ, ವಿಶ್ವಸಂಸ್ಥೆಯಲ್ಲಿ ಉದ್ಯೋಗ ಮಾಡಿದಾತ, ಅರ್ಥಶಾಸ್ತ್ರಜ್ಞ, ಸಲಹೆಗಾರ, ಯೋಜನಾ ಆಯೋಗದ ಉಪಾಧ್ಯಾಕ್ಷ, ರಿಸರ್ವ್ ಬ್ಯಾಂಕ್ ಮುಖ್ಯಸ್ಥ,  ದೇಶವನ್ನು ಲೈಸೆನ್ಸ್ ರಾಜ್ ಮುಷ್ಠಿಯಿಂದ ಬಿಡುಗಡೆಯ ಹಾದಿಗೆ ತಂದ ಧೀಮಂತ ಹಣಕಾಸು ಮಂತ್ರಿ, ಜವಹರಲಾಲ್ ನೆಹರೂ ನಂತರ ಐದು ವರ್ಷ ಅವಧಿ ಪೂರೈಸಿ ಮತ್ತೊಂದು ಅವಧಿಗೆ ಪ್ರಧಾನಿಯಾದ ಕೀರ್ತಿ ಇವೆಲ್ಲವೂ ಡಾ. ಮನಮೋಹನ್ ಸಿಂಗ್ ಅವರ ಹೆಗ್ಗಳಿಕೆಯಲ್ಲಿವೆ.  ಇಷ್ಟಿದ್ದರೂ ಅವರು ಯಾವುದೋ ಕಬಂಧ ಮುಷ್ಠಿಯಲ್ಲಿ ಸಿಲುಕಿದ್ದಂತೆ ಕಂಡುಬಂದರು.  ಅಮೆರಿಕದೊಂದಿಗೆ ಪರಮಾಣು ಒಪ್ಪಂದ,  ಚಿಲ್ಲರೆ ಮಾರುಕಟ್ಟೆಗಾಗಿ ವಿದೇಶಿಗರಿಗೆ ಪರವಾನಗಿ, ಅಡುಗೆ ಗ್ಯಾಸ್ ಮೇಲೆ ಸಬ್ಸಿಡಿ ಬಗ್ಗೆ ಬಿಗಿ ನಿಲುವು ತಾಳಿದ ಮನಮೋಹನ್ ಸಿಂಗರು, ಅವರ ಕಾಲದಲ್ಲಿ ನಡೆದ ಭ್ರಷ್ಟತೆಯ ಬಗ್ಗೆ ಅದೇ ನಿಲುವನ್ನು ತಾಳಲಾಗದಿದ್ದುದು ದೊಡ್ಡ ವಿಪರ್ಯಾಸವೆನಿಸುತ್ತದೆ.  ಅವರ ಕಛೇರಿಯನ್ನೇ ಉಪಯೋಗಿಸಿ ಹಗರಣಗಳು ನಡೆದವು.  ಯಾವ ಹಗರಣವೂ ಈ ದೇಶದಲ್ಲಿ ಕೋರ್ಟಿನಲ್ಲಿ ಸಾಬೀತುಗೊಳ್ಳುವುದಿಲ್ಲ.  ಹಾಗೆಯೇ  ಅವರ ಅಧಿಕಾರಾವಧಿಯಲ್ಲಿ ನಡೆದ ಹಗರಣಗಳೂ ಆಗೇ ಇಲ್ಲ ಎಂದು ಖುಷಿಯಿಂದ ಜೈಲಿನಲ್ಲಿದ್ದವರೆಲ್ಲಾ  ಮಾಧ್ಯಮಗಳಲ್ಲಿ ಕೈಬೀರಿ ಗೆಲುವಿನ ಸಂತಸದ  ನಗೆ ತೋರಿದರು.  ಅವುಗಳ ಸತ್ಯಾಸತ್ಯತೆ ಏನೇ ಇರಲಿ,  ಈ ದೇಶದ ಯಾರೇ ಆಗಲಿ  ವೈಯಕ್ತಿಕವಾಗಿ ಡಾ. ಮನಮೋಹನ ಸಿಂಗ್ ಅವರು ಭ್ರಷ್ಟರು ಎಂದು ಹೇಳುವುದಿಲ್ಲ.   ಆದರೆ ಅವರನ್ನು ಭ್ರಷ್ಟದ  ದಾಳವಾಗಿ ಬಳಸಲಾದ ಸಂದರ್ಭದಲ್ಲೂ ಅವರು ತಳೆದಿದ್ದ  ಬಹುದೊಡ್ಡ ಮೌನ ದೇಶದ ಜನತೆಗೆ ಮೋಹಕವಾಗಲಿಲ್ಲ ಎಂಬುದಂತೂ ಸತ್ಯ.  ಇಷ್ಟೊಂದು ಬುದ್ಧಿವಂತ ವ್ಯಕ್ತಿ ಪ್ರಧಾನಿಯಾಗಿದ್ದ ಕಾಲದಲ್ಲೂ  ನಮ್ಮ ದೇಶಕ್ಕೆ ಹಿಡಿದಿದ್ದ ಗ್ರಹಣ ಮಾತ್ರ, ಇದಕ್ಕೆ ಎಂದಾದರೂ ವಿಮೋಚನೆ ಉಂಟೆ ಎಂಬಂತಹ ಭೀತಿಯನ್ನು ಇಡೀ ಭಾರತೀಯ ಸಮುದಾಯದಲ್ಲಿ ವ್ಯಾಪಕವಾಗಿಸಿತ್ತು .

ಹಾಗೆಂದ ಮಾತ್ರಕ್ಕೆ ಭಾರತದ ಪ್ರಧಾನಮಂತ್ರಿಯ ಹುದ್ಧೆ ಸುಲಭದ್ದಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ.  ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರೆ ಸಾಕು ಏನೇನೋ ಆಗಿಹೋಗುತ್ತದೆ  ಎಂದು ಕೊಂಡಾಡಿ ಬರೆದವರೆಲ್ಲ, ಇಂದಿನ ದಿನ ಅವರ ಸರ್ಕಾರದ ಪರವಾಗಿ   ರಕ್ಷಣಾತ್ಮಕ ಹೇಳಿಕೆ ನೀಡುವುದರಲ್ಲಿ ಸಮಯ ವ್ಯಯಿಸುತ್ತಿದ್ದಾರೆ.  ಇದನ್ನು  ಒಬ್ಬ ಪ್ರಧಾನಿಯ ಪರ ಅಥವಾ ವಿರೋಧದ ಮಾತಾಗದೆ ನಾವು ನಮ್ಮ ದೇಶದ ವಾಸ್ತವತೆಯ ನಿಟ್ಟಿನಿಂದ  ಅತಿಯಾದ ಪರ ಮತ್ತು ವಿರೋಧಿ ಭಾವನೆಗಳನ್ನು ಬದಿಗಿಟ್ಟು ಅರ್ಥೈಸುವುದು ಮುಖ್ಯ.   ಭಾರತದಲ್ಲಿ ಅತೀ ಕಡಿಮೆ ನಿದ್ದೆ ಮಾಡುವ ವ್ಯಕ್ತಿಯೆಂದರೆ ಪ್ರಧಾನ ಮಂತ್ರಿ ಎಂಬ ಮಾತು ಮೊದಲಿನಿಂದಲೂ ಜನಜನಿತ.  ಈ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಅವರ  ಶ್ರಮ ವಂದನಾರ್ಹವಾದುದು.  ಬುದ್ಧಿವಂತ, ಪ್ರಾಮಾಣಿಕರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ  ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.  ಅವರ ಹಿರಿತನದ ಬದುಕು ಆರೋಗ್ಯ, ನೆಮ್ಮದಿ, ಶಾಂತಿಗಳಿಂದ ಹಿತವಾಗಿರಲಿ. 


On the birth day of Dr Manmohan Singh Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ