ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಡಿಕೇರಿ ನಾಗೇಂದ್ರ


 ಮಡಿಕೇರಿ ನಾಗೇಂದ್ರ


ಸುಗಮ ಸಂಗೀತ ಮತ್ತು ಭಕ್ತಿಸಂಗೀತ ಲೋಕದ ಸುಮಧುರ ಧ್ವನಿಗಳಲ್ಲಿ ಮಡಿಕೇರಿ ನಾಗೇಂದ್ರ ಒಬ್ಬರು. ಡಿವಿಜಿ ಅವರ ಅಂತಃಪುರ ಗೀತೆಗಳನ್ನು ನೆನೆಯುವಾಗಲೆಲ್ಲ ಮಡಿಕೇರಿ ನಾಗೇಂದ್ರರು ಅವುಗಳಿಗೆ ಜೀವಧ್ವನಿಯಾಗಿರುತ್ತಿದುದು ನೆನಪಾಗುತ್ತದೆ.

ಮಡಿಕೇರಿ ನಾಗೇಂದ್ರರು ಪ್ರಖ್ಯಾತ ಗಮಕ ಮತ್ತು ಸಂಗೀತದ ಹಿನ್ನೆಲೆಯ ಕುಟುಂಬಕ್ಕೆ ಸೇರಿದವರು. ತಂದೆ ಡಿವಿಜಿ ಅವರ ಆಪ್ತರಾಗಿದ್ದ ಮಹಾನ್ ವಿದ್ವಾಂಸ ಮತ್ತು ಗಮಕಿ ಮೈ.ಶೇ. ಅನಂತಪದ್ಮನಾಭರಾಯರು. ತಾಯಿ ಲಕ್ಮೀದೇವಿ ಅವರು. ನಾಗೇಂದ್ರರ ಹಿರಿಯ ಸಹೋದರ ನಮ್ಮೆಲ್ಲರ ಆಪ್ತರೂ, ಪೂಜ್ಯರೂ, ಮಹಾನ್ ಗಮಕಿಗಳೂ, ಲೇಖಕರೂ ಆದ ಎಂ.ಎ. ಜಯರಾಮ ರಾವ್ ಅವರು.

ಮಡಿಕೇರಿ ನಾಗೇಂದ್ರರಿಗೆ ತಂದೆಯವರಿಂದಲೇ
ಗಮಕ ಹಾಗೂ ಸಂಗೀತದ ಮೊದಲ ಪಾಠಗಳು ಸಂದವು. ಬಿ.ಕಾಮ್ ಪದವಿ ಪಡೆದು ಕೆನರಾ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಗಳ ತನಕದ ಹುದ್ದೆಯನ್ನು ನಿರ್ವಹಿಸಿದರಾದರೂ ಗಮಕ ಮತ್ತು ಸುಗಮ ಸಂಗೀತದ ಪ್ರೇಮ ಅವರನ್ನು ಜನಪ್ರಿಯ ಗಾಯಕನನ್ನಾಗಿಯೂ ರೂಪಿಸಿತು. 

ಮಡಿಕೇರಿ ನಾಗೇಂದ್ರರು ಶಿವಮೊಗ್ಗದಲ್ಲಿದ್ದಾಗ ಪ್ರಖ್ಯಾತ ಸುಗಮ ಸಂಗೀತಗಾರರಾದ ಎಂ.ಪ್ರಭಾಕರ್‌ ಮತ್ತು ಶಿವಮೊಗ್ಗ ಸುಬ್ಬಣ್ಣ ಇವರ ಗಾಯನಕ್ಕೆ ಮರುಳಾಗಿ ತಾವೂ ತಮ್ಮಲ್ಲಿ ಹುದುಗಿದ್ದ ಗಾನ ಪ್ರತಿಭೆಗೆ ಹೆಚ್ಚಿನ ಪ್ರೇರಣೆ ಕಂಡುಕೊಂಡರು. ಬೆಂಗಳೂರಿನಲ್ಲಿ ಕೆಲಕಾಲ ಬಳ್ಳಾರಿ ಎಂ.ಶೇಷಗಿರಿ ಆಚಾರ್ಯ ಅವರಲ್ಲಿ ಹೆಚ್ಚಿನ ಸಂಗೀತ ಶಿಕ್ಷಣವನ್ನು ಪಡೆದುಕೊಂಡರು.

ಕ್ರಮೇಣದಲ್ಲಿ ಹಲವು ವೇದಿಕೆಗಳಲ್ಲಿ ಜನಸಮುದಾಯದ ನಡುವೆ ತಮ್ಮ ಗಾಯನವನ್ನು ಹೊಮ್ಮಿಸುತ್ತ ಬಂದ ಮಡಿಕೇರಿ ನಾಗೇಂದ್ರರು ಆಕಾಶವಾಣಿಯಲ್ಲಿ ಗಣ್ಯಶ್ರೇಣಿಯ ಕಲಾವಿದರಾಗಿ ಪರಿಗಣಿತರಾದರು. ಬೆಂಗಳೂರಿನ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಹಲವಾರು ಬಾರಿ ಅವರ ಭಕ್ತಿಗೀತೆಗಳ ಪ್ರಸರಣ ಏರ್ಪಡುತ್ತಿತ್ತು. 

ಮಡಿಕೇರಿ ನಾಗೇಂದ್ರರು 1972 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ತಂಡದ ಸದಸ್ಯರಾಗಿ ದೆಹಲಿಯಲ್ಲಿ ಕಾರ್ಯಕ್ರಮ ನೀಡಿದ್ದರು. ಭಿಲಾಯ್‌, ನಾಗಪುರ, ಕೋಲ್ಕತ್ತಗಳಲ್ಲೂ ಅವರ ಕಾರ್ಯಕ್ರಮ ನಡೆದಿತ್ತು. ಕೆನರಾ ಬ್ಯಾಂಕಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಮುಂಚೂಣಿಯ ಗಾಯಕರಾಗಿದ್ದರಲ್ಲದೆ, ಕನ್ನಡ ನಾಡಿನ ಎಲ್ಲೆಡೆಗಳಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ಅವರ ಕಾರ್ಯಕ್ರಮಗಳು ಸುಸಂಸ್ಕೃತ ಮನಗಳನ್ನು ಆಕರ್ಷಿಸಿದವು.

ಮಡಿಕೇರಿ ನಾಗೇಂದ್ರರು ದಾಸ ಸಾಹಿತ್ಯ ಹಾಗೂ ಸುಗಮ ಸಂಗೀತದ ಅನೇಕ ಪ್ರಾತ್ಯಕ್ಷಿಕೆಗಳನ್ನೂ ನಡೆಸಿಕೊಡುತ್ತಿದ್ದರು. 'ಇಂಚರ’ ಸಂಗೀತ ಕಲಾಶಾಲೆ ಪ್ರಾರಂಭಿಸಿ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದರು. ಡಿ.ವಿ.ಜಿ.ಯವರ ಅಂತಃಪುರಗೀತೆಗಳ 'ಶೃಂಗಾರಭಾವ', 'ಮೌನಧ್ವನಿ', 'ಯತಿವರ ಬಂದ ರಾಘವೇಂದ್ರ' ಮುಂತಾದ ಪ್ರಮುಖ ಧ್ವನಿಸುರುಳಿಗಳೇ ಅಲ್ಲದೆ ಅನೇಕ ವಿವಿಧ ಕಲಾವಿದರ ಸಂಗಮದ ಧ್ವನಿ ಸುರುಳಿಗಳಲ್ಲಿಯೂ ಮಡಿಕೇರಿ ನಾಗೇಂದ್ರರ ಸುಮಧುರ ಗಾನ ಸಂಗೀತಪ್ರಿಯರನ್ನು ಇಂದೂ ತಲುಪುತ್ತಲಿವೆ. 

ಈ ಸುಮಧುರ ಧ್ವನಿ ಇನ್ನೂ ಹೆಚ್ಚು ಹೆಚ್ಚು ಕೇಳಬೇಕು ಎಂದು ಜನಮನ ಬಯಸುತ್ತಿದ್ದ ದಿನಗಳಲ್ಲೇ ಕೇವಲ 55 ವಯಸ್ಸು ತುಂಬುವ ಮೊದಲೇ, ಮಡಿಕೇರಿ ನಾಗೇಂದ್ರರು ಈ ಲೋಕಕ್ಕೆ ವಿದಾಯ ಹೇಳಿದರು. ಅವರ ಇನಿಧ್ವನಿಯನ್ನು ಆಲಿಸಿದ್ದ ಹೃದಯಗಳಿಗೆ ಅವರು ನಿರಂತರ ಜೀವಂತ.

On the birth anniversary of great singer Madikeri Nagendra

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ