ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏಣಗಿ ಬಾಳಪ್ಪ


 ಏಣಗಿ ಬಾಳಪ್ಪ


ಏಣಗಿ ಬಾಳಪ್ಪ ರಂಗಭೂಮಿಯಲ್ಲಿ ಮಹಾನ್ ಹೆಸರು. 'ರಂಗಭೂಮಿಯ ವಿಶ್ವಕೋಶ’ ಎಂದು ಹೆಸರಾಗಿದ್ದ ಏಣಗಿ ಬಾಳಪ್ಪ  ನೂರಾರು ನಾಟಕಗಳಲ್ಲಿ ಮತ್ತು ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದರು. ಅದ್ಭುತ ಕಂಠಸಿರಿಯನ್ನು ಹೊಂದಿದ್ದ ಅವರು ಹಲವು ರಂಗಗೀತೆಗಳಿಗೆ ಮರುಜೀವ ನೀಡಿದ್ದರು.

ಬಾಳಪ್ಪನವರು ಏಣಗಿ ಗ್ರಾಮದ ಲೋಕೂರ ಮನೆತನದ ಕರಿಬಸಪ್ಪ ಮತ್ತು ಬಾಳಮ್ಮ ದಂಪತಿಗಳ  ಪುತ್ರರಾಗಿ 1914ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಬಾಳಪ್ಪ ತಂದೆಯನ್ನು ಕಳೆದುಕೊಂಡರು. ಕುಟುಂಬದ ಹೊಣೆಯು ತಾಯಿಯ ಮೇಲೆ ಬಿದ್ದಿತ್ತು. ಇದೇ ಸಮಯದಲ್ಲಿ ಪಕ್ಕದ ಬೈಲಹೊಂಗಲದಲ್ಲಿ ‘ಪಾದುಕಾ ಪಟ್ಟಾಭಿಷೇಕ’ ನಾಟಕ ಬಂದಿತ್ತು. ನಾಟಕದ ಪ್ರಮುಖ ಪಾತ್ರಧಾರಿ ಲವ ಪಾತ್ರಕ್ಕೆ ಬಾಲನಟನ ಅವಶ್ಯಕತೆ ಇತ್ತು. ಉತ್ತಮ ಕಂಠಸಿರಿ ಹೊಂದಿದ್ದ ಬಾಳಪ್ಪ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಈ ಮೂಲಕ ಬಾಳಪ್ಪ ತಮ್ಮ 12ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು. 

ಬಾಳಪ್ಪ ಅವರ ಪ್ರತಿಭೆಯನ್ನು ಗುರುತಿಸಿದ ಚಿಕ್ಕೋಡಿಯ ನಾಟಕ ಕಲಾವಿದ ಶಿವಲಿಂಗ ಸ್ವಾಮಿ ಹಲವು ನಾಟಕಗಳಲ್ಲಿ ಅವಕಾಶ ನೀಡಿದರು.  1946ರಲ್ಲಿ ಬಾಳಪ್ಪ ‘ಕಲಾವೈಭವ ನಾಟಕ ಸಂಘ’ವನ್ನು ಸ್ಥಾಪಿಸಿದರು. ಪೌರಾಣಿಕ, ಐತಿಹಾಸಿಕ ನಾಟಕಗಳ ಜೊತೆ ಸಮಕಾಲೀನ ಸಮಸ್ಯೆಗಳನ್ನು ಇಟ್ಟುಕೊಂಡು ಹೊಸ ಹೊಸ ನಾಟಕಗಳನ್ನು ಬರೆಸಿದರು.  ಹೀಗೆ ಅವರು ಹೊಸ ಹೊಸ ಪ್ರಯೋಗ ನಡೆಸಿ ಜಯಶೀಲರಾದರು. ಅನೇಕ ಸ್ತ್ರೀ– ಪುರುಷ ನಾಟಕಗಳಲ್ಲಿ ಮಿಂಚಿದ ಅವರ ಜಗಜ್ಯೋತಿ ಬಸವೇಶ್ವರ, ಕಿತ್ತೂರ ಚನ್ನಮ್ಮ, ಮಾವಬಂದ್ನಪೋ ಮಾವ, ಅಕ್ಕಮಹಾದೇವಿ, ಕುಂಕುಮ, ದೇವರಮಗು, ಶಾಲಾ ಮಾಸ್ತರ, ಹೇಮರೆಡ್ಡಿ ಮಲ್ಲಮ್ಮ, ರಾಜಾ ಹರಿಶ್ಚಂದ್ರ, ರಾಮಾಯಣ ಮುಂತಾದ ಅನೇಕ ನಾಟಕಗಳು ಪ್ರಸಿದ್ಧಿ ಪಡೆದವು.

ಸ್ವಾತಂತ್ರ್ಯ ಹೋರಾಟಗಾರರಿಗೆ ಬಾಳಪ್ಪನವರ ನಾಟಕ ಕಂಪನಿ ಆಶ್ರಯ ತಾಣವಾಗಿತ್ತು. ರಾತ್ರಿ ಬಿಟಿಷ್ ಪೊಲೀಸರು ಬೆನ್ನು ಹತ್ತಿದರೆ ಅವರೆಲ್ಲ ಬಾಳಪ್ಪನವರ ನಾಟಕ ಕಂಪನಿ ಹೊಕ್ಕು ಬಣ್ಣ ಬಳಿದು, ಗಡ್ಡ-ಮೀಸೆ ಹಚ್ಚಿಕೊಂಡು ಪಾತ್ರದವರಾಗಿ ಆ ಕ್ಷಣದ ಸಂಕಷ್ಟದಿಂದ ಪಾರಾಗುತ್ತಿದ್ದರು. ಹೀಗಾಗಿ ಬ್ರಿಟಿಷ್ ಸರಕಾರದ ಒಂದು ಕಣ್ಣು ಸದಾ ಬಾಳಪ್ಪನವರ ಮೇಲಿತ್ತು. 

ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ್ದ ಏಣಗಿ ಬಾಳಪ್ಪನವರು ಮಾಡಿ ಮಡಿದವರು, ಜನುಮದ ಜೋಡಿ, ಗಡಿಬಿಡಿ ಕೃಷ್ಣ, ಗಾನಯೋಗಿ ಪಂಚಾಕ್ಷರಿ ಗವಾಯಿ, ಪರೀಕ್ಷೆ ಮುಂತಾದ ಚಲನಚಿತ್ರಗಳಲ್ಲೂ  ಅಭಿನಯಿಸಿದ್ದರು. 

ಬಾಳಪ್ಪನವರ ಪುತ್ರ ದಿವಂಗತ ಏಣಗಿ ನಟರಾಜ್ ರಂಗಭೂಮಿಯಲ್ಲಿ ಸಾಧಕರಾಗಿ ಹೆಸರು ಮಾಡಿದ್ದರು.

ಏಣಗಿ ಬಾಳಪ್ಪನವರಿಗೆ 1973ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1976ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, 1978ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್‌ ಪ್ರಶಸ್ತಿ, 1995ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, 1995ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ, 2005ರಲ್ಲಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, 2006ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಮುಂತಾದ ಅನೇಕ ಗೌರವಗಳು ಸಂದವು. 2013ರ ಮೈಸೂರು ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯ­ಕ್ರಮ­ಗಳನ್ನು ಅಂಬಾ ವಿಲಾಸ ಅರಮನೆಯಲ್ಲಿ ಬಾಳಪ್ಪ ಅವರು ಉದ್ಘಾಟಿಸಿದ್ದರು.

103 ವರ್ಷ ಬಾಳಿದ ಬಾಳಪ್ಪನವರು 2017ರ ಆಗಸ್ಟ್ 18ರಂದು ಈ ಲೋಕವನ್ನಗಲಿದರು.

Great theater personality Late Enagi Balappa 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ