ಕೆರೆಮನೆ ಶಂಭು ಹೆಗಡೆ
ಕೆರೆಮನೆ ಶಂಭು ಹೆಗಡೆ
ಕೆರೆಮನೆ ಶಂಭು ಹೆಗಡೆ ಯಕ್ಷರಂಗದ ಅಭಿಜಾತ ಕಲಾವಿದರಾಗಿ ಯಕ್ಷಗಾನ ಕಲೆಗೆ ವಿಶ್ವವ್ಯಾಪ್ತಿ ತಂದವರು.
ಶಂಭು ಹೆಗಡೆ ಅವರು 1938ರ ನವೆಂಬರ್ 6ರಂದು ಕೆರೆಮನೆ ಶಿವರಾಮ ಹೆಗಡೆ ಹಾಗು ಮುಕಾಂಬೆ ದಂಪತಿಗಳ ಪುತ್ರರಾಗಿ ಜನಿಸಿದರು.
ಕೆರೆಮನೆ ಶಂಭು ಹೆಗಡೆ ಅವರು ಪುರುಷ ಸ್ತ್ರೀ ವೇಷಗಳೂ ಸೇರಿದಂತೆ ಸುಮಾರು 175 ಪಾತ್ರಗಳಲ್ಲಿ, 5000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ವಿಶ್ವದಾದ್ಯಂತ ಪ್ರದರ್ಶನಗಳನ್ನು ನೀಡಿದವರು. ಖ್ಯಾತ ನೃತ್ಯ ಕಲಾವಿದೆ ಮಾಯಾರಾವ್ ಅವರಲ್ಲಿ ಕೊರಿಯೋಗ್ರಫಿಯ ತಂತ್ರಗಳನ್ನೂ ಕಲಿತ ಅವರು ಅರ್ಧ ಚಂದ್ರಾಕೃತಿಯ ರಂಗಮಂಚವನ್ನು ಪರಿಚಯಿಸಿ ಅದರ ಮೇಲೆ ಸಧಬಿರುಚಿಯ ಪ್ರಸಂಗಗಳನ್ನು ಪ್ರಸಿದ್ಧಿಗೊಳಿಸಿದರು. ಗುಣವಂತೆಯಲ್ಲಿ ತಂದೆ ಶಿವರಾಮ ಹೆಗಡೆ ಹೆಸರಿನಲ್ಲಿ ರಂಗಮಂದಿರ ಮತ್ತು ಯಕ್ಷ ಶಿಕ್ಷಣ ನೀಡುವ ಶ್ರೀಮಯ ಕಲಾಕೇಂದ್ರ ಸ್ಥಾಪಿಸಿದರು.
ಇಂದು ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ರಚನೆ ಆಗಿದ್ದರೆ ಅದರ ಹಿಂದೆ ಶಂಭು ಹೆಗಡೆಯವರ ಸಾತ್ವಿಕ ಹೋರಾಟದ ಪಾಲು ಇದೆ. ಯಕ್ಷಗಾನಕ್ಕೊಂದು ಅಕಾಡಮಿ ಬೇಕು, ಅದರ ಸ್ವರೂಪ ಹೇಗಿರಬೇಕು ಎಂಬುದರ ಬಗ್ಗೆ ಎರಡು ದಶಕಗಳ ಹಿಂದೆಯೇ ಸಮರ್ಥವಾಗಿ ಪ್ರತಿಪಾದಿಸಿದ ಧೀಮಂತ ಮೂರ್ತಿ ಅವರು.
ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಿ ಅದರ ವತಿಯಿಂದ ಹಮ್ಮಿಕೊಂಡ ಮೊದಲ ಕಾರ್ಯಕ್ರಮವೇ ಅವರು ಪಾಲ್ಗೊಂಡ ಕೊನೆಯ ಸಭಾ ಕಾರ್ಯಕ್ರಮವಾಗಿರಬೇಕಾದರೆ ಅಕಾಡಮಿ ಕುರಿತಾಗಿ ಅವರಿಟ್ಟುಕೊಂಡಿದ್ದ ಕನಸು ಮತ್ತು ಅವರ ಸಾರ್ಥಕ ಬದುಕಿಗೆ ಬೇರೆ ಸಾಕ್ಷಿ ಬೇಕಿಲ್ಲ! ಏನು ಸಾಧಿಸಬೇಕೆಂದುಕೊಂಡಿದ್ದರೋ ಅವೆಲ್ಲವನ್ನೂ ಸಾಧಿಸಿ ಹೊರಟುಬಿಟ್ಟ ಧನ್ಯತೆಯ ಬದುಕವರದು.
ಹಳ್ಳಿಯಲ್ಲಿಯೇ ಹುಟ್ಟಿ, ಹಳ್ಳಿಯಲ್ಲಿಯೇ ಬೆಳೆದು, ಹಳ್ಳಿಗನಾಗಿಯೇ ಬದುಕಿ, ಕೆರೆಮನೆಯೆಂಬ ಪುಟ್ಟ ಹಳ್ಳಿಯನ್ನು ಜಗದ್ವಿಖ್ಯಾತ ಮಾಡಿದ ಯಕ್ಷರಂಗ ಕಂಡ ಸರ್ವೋತ್ಕೃಷ್ಟ ಕಲಾವಿದ ಕೆರೆಮನೆ ಶಂಭು ಹೆಗಡೆ. ಕಲೆಯ ಅಭ್ಯುದಯಕ್ಕೆ ದುಡಿದು, ಜಾಗತಿಕವಾಗಿ ಯಕ್ಷಗಾನವನ್ನು ಪರಿಚಯಿಸಿದ ಯಕ್ಷ ಲೋಕದ ಸವ್ಯಸಾಚಿ. ಅವರೊಬ್ಬ ನಟ, ಸಂಘಟಕ ಮಾತ್ರವಲ್ಲ; ಕಲಾವ್ರತಿ, ಕಲಾ ತತ್ವದ ಪರಿಜ್ಞಾನ, ರಂಗ ಸಾಮರ್ಥ್ಯ, ಸೈದ್ಧಾಂತಿಕ ಬದ್ಧತೆ, ಪ್ರಯೋಗಶೀಲತೆ, ವಿಮರ್ಶಕ ದೃಷ್ಠಿಕೋನಗಳನ್ನು ಹೊಂದಿದ್ದ ಅಪಾರ ಜೀವನ ಪ್ರೀತಿ ಮತ್ತು ಮಮತೆಯ ಸೆಲೆ. ಕಾರ್ಯಶೀಲ ಚಿಂತಕ. ನೃತ್ಯ, ಮಾತು, ಚಲನೆ, ಅಭಿವ್ಯಕ್ತಿ ಎಲ್ಲದರಲ್ಲೂ ಅವರೊಂದು ಪ್ರತಿಮೆ.
ಪರಂಪರೆಯೊಂದಿಗೆ ಹಲವು ಹೊಸ ಸ್ಪರ್ಶಗಳನ್ನಿತ್ತ, ಯಕ್ಷಗಾನದ ಪರಂಪರೆಯ ಚೌಕಟ್ಟಿನಲ್ಲಿ ಹೊಸ ಪ್ರಯೋಗ ಮಾಡಿ ರಂಗದಲ್ಲಿ ಅನೇಕ ಸುಧಾರಣೆ, ಸೀಮೋಲ್ಲಂಘನ ಮಾಡಿದವರು ಶಂಭು ಹೆಗಡೆ. ಕುರಿಯ ವಿಠಲ ಶಾಸ್ತ್ರಿಗಳಂತೆಯೇ ಯಕ್ಷಗಾನಕ್ಕೆ ನಾಟ್ಯದ ಸಮರ್ಥ ಹೊಂದಾಣಿಕೆ ನೀಡಿದವರು. ‘ನೃತ್ಯ ಬೇಡ’ ಅಂದುಕೊಂಡ ಪಾತ್ರಗಳಿಗೂ ಸಮಯೋಚಿತ ನೃತ್ಯ ಮಾರ್ಗದರ್ಶಿಸಿ ರಂಗ ಸೂಕ್ಷ್ಮಗಳನ್ನು ಅಳವಡಿಸಿದವರು. ತಮ್ಮ ಪರಿಸರ, ಪರಂಪರೆಯಿಂದಷ್ಟೇ ಕಲಿತರೂ, ಅದಕ್ಕೇ ಜೋತು ಬೀಳದೆ, ಅವಲಂಬಿತರಾಗದೆ ಕಲಿತದ್ದನ್ನು ರಂಗವಿಜ್ಞಾನದ ಬೆಳಕಿನಲ್ಲಿ ಸಂಯೋಜನೆ ಮಾಡಿದವರು. ಅವರ, ಅರ್ಧ ಚಂದ್ರಾಕೃತಿಯ ರಂಗಮಂಚದ ಕಲ್ಪನೆ ಮತ್ತು ಆಯೋಜನೆ ಯಕ್ಷ ಪ್ರದರ್ಶನಕ್ಕೆ ಇಟ್ಟ ಕಳಶ.
ವೃತ್ತಿ ಮೇಳದ ಕಲಾವಿದರಾಗಿ ನಂತರ, ತಮ್ಮ ತಂದೆಯವರು 1974 ರಲ್ಲಿ ಸ್ಥಾಪಿಸಿದ ಮೇಳವನ್ನು ಪುನಃಸ್ಸಂಘಟನೆ ಮಾಡುವಲ್ಲಿ ಅವರ ಶ್ರಮ ನಿಜಕ್ಕೂ ಇತಿಹಾಸ. ಸ್ಥಾಪಿಸಿದ್ದ ಮೇಳವನ್ನು ಸಂಘಟಿಸಿ ನಿರ್ಮಿಸಿ, ಅಪಾರ ಪ್ರೇಕ್ಷಕವರ್ಗವನ್ನು ಸಂಪಾದಿಸಿಕೊಳ್ಳುತ್ತಾ, ದೇಶ-ಹೊರದೇಶಗಳಲ್ಲೂ ಶುದ್ಧ ಯಕ್ಷಗಾನದ ಪರಿಚಯವನ್ನೀಯುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿಯೇ ಅವರ ಇಡಗುಂಜಿ ಮೇಳ ಯಕ್ಷಗಾನದ ಒಂದು ಚಳುವಳಿ ಇದ್ದಂತೆ.
ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅದೆಷ್ಟೋ ಪ್ರತಿಭಾನ್ವಿತ, ತೆರೆಮರೆಯ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟು ಬೆಳಕಿಗೆ ತಂದಿದ್ದರು. ವಾದ-ಭಿನ್ನಾಭಿಪ್ರಾಯ ಹೊಂದಿದವರೊಂದಿಗೂ ಸ್ನೇಹಪರರಾಗಿ ಇದ್ದರು. ಯಕ್ಷಗಾನದ ತಿಟ್ಟುಗಳ ನಡುವಿನ ಕಂಡೂ ಕಾಣದ ವಾದ-ಜಗಳಗಳಿಗೆ ತಮ್ಮದೇ ನಿಟ್ಟಿನಲ್ಲಿ ಉತ್ತರವನಿತ್ತು ಸೌಹಾರ್ದ ಬೆಸೆದರು. ಇವರ ಪ್ರಸಂಗ ಪಾತ್ರ ಮತ್ತು ಇಡಗುಂಜಿ ಮೇಳದ ಇತಿಹಾಸದ ಬಗ್ಗೆ ಸಂಶೋಧನಾ ಪ್ರಬಂಧಗಳೂ ರಚಿತವಾಗಿವೆ.
‘ಕಲಾವಿದನಾದವನಿಗೆ ಎಂಥಹ ಜೀವನ ಇರಬೇಕು’ ಎಂದು ಸಾಧಿಸಿ ತೋರಿಸಿದ್ದಷ್ಟೇ ಅಲ್ಲದೆ, ಕಲೆಯ ಎಲ್ಲಾ ವಿಭಾಗಗಳ ಕುರಿತೂ ಚಿಂತನೆ ನಡೆಸಿದ ಸಮತೋಲನ ನಡೆ-ನುಡಿ-ಅಭಿವ್ಯಕ್ತಿಯ ಸಚ್ಚಾರಿತ್ರ್ಯದ ಜೀವ ಅದು. ಅವರಿಗಿದ್ದ ಚಟವೆಂದರೆ ಅದೊಂದೇ-‘ಕಲೆ’.
ಅವರು ಕರುಣಾರಸದ ಸಿದ್ಧಿ ಪುರುಷ. ಉತ್ಕೃಷ್ಟ ಮಟ್ಟದ ವಿಸ್ತಾರವಾದ ಹರಹುವುಳ್ಳ ಅವರ ಚಿಂತನೆ ಪಾತ್ರಗಳಲ್ಲಿ ಸ್ಪಷ್ಟವಾಗುತ್ತಿತ್ತು. ಅನುಕರಿಸಲೇಬೇಕೆನ್ನುವ ಪಾತ್ರಗಳು ಅವು. ಆದರೆ ಅದಷ್ಟು ಸುಲಭವಲ್ಲ. ಸುಭದ್ರಾ ಕಲ್ಯಾಣದ ಕೃಷ್ಣ, ಚತುರ ರಾಜಕಾರಣಿ ಸಂಧಾನ ಕೃಷ್ಣ, ರಾಮ ನಿರ್ಯಾಣದ ರಾಮ, ಸತ್ಯ ಹರಿಶ್ಚಂದ್ರ, ಕರ್ಣಪರ್ವದ ಕರ್ಣ, ಗಧಾಪರ್ವದ ಕೌರವ, ಬಾಹುಕ, ಸಾಲ್ವ, ಅರ್ಜುನ, ಕಾರ್ತವೀರ್ಯ, ಕೀಚಕ, ಮಾಗಧ…ಹೀಗೆ ಪ್ರತೀ ಪಾತ್ರಕ್ಕೂ ತಮ್ಮದೇ ಛಾಪು ಒತ್ತಿ ಎಷ್ಟೋ ಬಾರಿ ವೇಷ ಹಾಕಿ, ಗೆಜ್ಜೆ ಕಟ್ಟಿದವರು ಕಡೆಗೆ ಗೆಜ್ಜೆ ಕಳಚದೆಯೇ ಸ್ಥಬ್ದವಾಗಿಬಿಟ್ಟರು.
ರಥಸಪ್ತಮಿಯಂದು ನಡೆಯುವ ಇಡಗುಂಜಿ ತೇರಿನಲ್ಲಿ ಕೆರೆಮನೆ ಮೇಳದ ಆಟ ಕಳೆದ 5 ದಶಕದಿಂದ ಅವಿಚ್ಚಿನ್ನವಾಗಿ ನಡೆದು ಬಂದಿತ್ತು. ಈ ಸಂದರ್ಭದಲ್ಲಿ ಶಂಭು ಹೆಗಡೆಯವರು ತಪ್ಪದೇ ಪಾತ್ರ ವಹಿಸುತ್ತಿದ್ದರು. ಹಾಗೆ ನೋಡಿದರೆ, ಶಂಭು ಹೆಗಡೆ ಅವರ ಯಕ್ಷ ಬದುಕಿನ ರಂಗಪ್ರವೇಶವಾದದ್ದು ಇಡಗುಂಜಿಯಲ್ಲೇ! ಮೊದಲು ಯಕ್ಷ ಹೆಜ್ಜೆ ಇಟ್ಟು ಬಂದಲ್ಲೇ ಅವರು ತಮ್ಮ ಕೊನೆಯ ಹೆಜ್ಜೆಯನ್ನು ಹಾಕಿದರು. ಫೆಬ್ರುವರಿ 3, 2009ರಂದು ಶಂಭು ಹೆಗಡೆಯವರು ಇಡಗುಂಜಿಯ ರಂಗಸ್ಥಳದಲ್ಲಿ ‘ಕುಶ-ಲವ’ದ ರಾಮನ ಪಾತ್ರ ನಿರ್ವಹಿಸುತ್ತಲೇ ಭೂಲೋಕದ ತಮ್ಮ ಬದುಕಿಗೆ ವಿದಾಯ ಹೇಳಿದ್ದರು. ಪರಂಧಾಮಕ್ಕೆ ಸಾಗುವ ಹಾದಿಗೆ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿಕೊಂಡದ್ದು ಕೂಡಾ ಹಾಗೆಯೇ ಇತ್ತು! ಅವರು ಹಚ್ಚಿದ ಸೂರ್ಯವಂಶದ ತಿಲಕ ಹಣೆಯಲಿತ್ತು !
ಈ ಮಹಾನ್ ಕಲಾಚೇತನಕ್ಕೆ ನಮ್ಮ ನಮನ.
On the birth anniversary of great Yakshagana artiste Keremane Shambhu Hegde
ಕಾಮೆಂಟ್ಗಳು