ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜತೀಂದ್ರನಾಥ ದಾಸ್


 ಜತೀಂದ್ರನಾಥ ದಾಸ್


ಜತೀಂದ್ರನಾಥ ದಾಸ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರು.‍ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಖೈದಿಗಳನ್ನು ಬ್ರಿಟಿಷರು ಕಾರಾಗೃಹಗಳಲ್ಲಿ ಹೀನರೀತಿಯಲ್ಲಿ ಕಾಣುತ್ತಿದ್ದುದರ ವಿರುದ್ಧ 63ದಿನ  ಉಪವಾಸ ಮಾಡಿ ಜೀವತೆತ್ತ ಯುವಜೀವಿ ಜತೀಂದ್ರನಾಥರು.

ಜತೀಂದ್ರನಾಥ ದಾಸ್ 1904ರ ಅಕ್ಟೋಬರ್ 27ರಂದು ಕೋಲ್ಕೊತ್ತಾದಲ್ಲಿ ಜನಿಸಿದರು.  ತಂದೆ ಭಂಕಿಮ್ ಬೆಹಾರಿ. ತಾಯಿ ಸುಹಾಸಿನಿ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಜತೀಂದ್ರನಾಥ ಮೆಟ್ರಿಕ್ಯುಲೇಷನ್ ಮತ್ತು ಇಂಟರ್‌ಮಿಡಿಯೇಟ್ ಪರೀಕ್ಷೆಗಳಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು. ಅಂದು ದೇಶದಾದ್ಯಂತ ನಡೆಯುತ್ತಿದ್ದ ಸ್ವತಂತ್ರ ಹೋರಾಟದ ಬಿಸಿಗೆ ವಿದ್ಯಾರ್ಥಿಯಾಗಿದ್ದಾಗಲೇ ಆಕರ್ಷಿತರಾಗಿದರು. ಗಾಂಧೀಜಿಯವರಿಂದ ಪ್ರಭಾವಿತರಾಗಿ 1921ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಪಿಕೆಟಿಂಗ್ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದಾಗ ಅವರ ವಯಸ್ಸು ಕೇವಲ 17.

ಜೈಲಿನಲ್ಲೇ ಇದ್ದುಕೊಂಡು, ಭಗತ್ ಸಿಂಗ್ ಮತ್ತು ಸಹಚರರೂ ಸೇರಿದಂತೆ ಭಾರತದಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದ ಹಲವಾರು ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದರು. ಬಂಗಾಳದ ಕ್ರಾಂತಿಕಾರಿ ಸಂಘಟನೆಯಾದ ’ಅನುಶೀಲನ ಸಮಿತಿ’ಯನ್ನು ಸೇರಿ ತಮ್ಮ ಹೋರಾಟಕ್ಕೆ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡರು. 1925ರಲ್ಲಿ ವಿದ್ಯಾಸಾಗರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದಾಗ ಬ್ರಿಟಿಷ್ ಸರ್ಕಾರ,  ತೀವ್ರತರವಾದ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂಬ ಆಪಾದನೆಯ ಮೇಲೆ ಇವರನ್ನು ಬಂಧಿಸಿ, ಮೈಮೆನ್ ಸಿಂಗ್ ಕೇಂದ್ರ ಕಾರಾಗೃಹಕ್ಕೆ ತಳ್ಳಿಬಿಟ್ಟಿತು. ಜೈಲಿನಲ್ಲಿ ರಾಜಕೀಯ ಖೈದಿಗಳನ್ನು ಅನಾಗರಿಕವಾಗಿ ನಡೆಸಿಕೊಳ್ಳಲಾಗುತ್ತಿದ್ದುದನ್ನು ಕಂಡ ಜತೀಂದ್ರನಾಥ್ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. 20 ದಿನಗಳವರೆಗೂ ನಡೆದ ಉಪವಾಸ ಸತ್ಯಾಗ್ರಹ, ಜೈಲ್ ಸೂಪರಿಂಟೆಂಡೆಂಟ್ ಕ್ಷಮಾಪಣೆ ಕೇಳುವುದರೊಂದಿಗೆ ಕೊನೆಗೊಂಡಿತು. 

ಕೇವಲ 21 ವರ್ಷದ ಸತ್ಯಾಗ್ರಹಿ ಜತೀಂದ್ರನಾಥ ಎಂಬ ಯುವಕ ಕಲ್ಕತ್ತಾದಲ್ಲಿ ಮನೆಮಾತಾಗಿಬಿಟ್ಟರು. ಆ ಹೋರಾಟದ ಯಶಸ್ಸಿನ ನಂತರ ಜತೀಂಧ್ರನಾಥರನ್ನು ಬ್ರಿಟಿಷ್ ಸರ್ಕಾರ ಸಣ್ಣಪುಟ್ಟ ಕಾರಣಗಳಿಗೂ ಜೈಲಿಗೆ ಕಳುಹಿಸುವ ಮನೋಧರ್ಮ ಪ್ರದರ್ಶಿಸುತ್ತಿತ್ತು.

1929ರ ಜೂನ್ 14ರಂದು ಜತೀಂದ್ರನಾಥರನ್ನು ಕ್ರಾಂತಿಕಾರಿ ಚಟುವಟಿಕೆಗಳ ಕಾರಣವನ್ನೊಡ್ಡಿ ಬಂಧಿಸಿ, ಸಪ್ಲಿಮೆಂಟರಿ ಲಾಹೋರ್ ಕಾನ್ಸ್ಪಿರೆಸಿ ನೆಪದಲ್ಲಿ ಅಪಾದಿತನೆಂದು ತೀರ್ಮಾನಿಸಿ, ಲಾಹೋರ್ ಬೋರ‍್ಸ್ಟಲ್ ಜೈಲಿಗೆ ಕಳುಹಿಸಲಾಯಿತು. ಲಾಹೋರ್ ಜೈಲಿನಲ್ಲಿ ಸ್ವತಂತ್ರ ಹೋರಾಟಗಾರರಿಗೆ, ವಿಚಾರಣಾಧೀನ ಖೈದಿಗಳಿಗೆ ಅತಿಯಾಗಿ ಕಿರುಕುಳ ನೀಡಲಾಗುತ್ತಿತ್ತು. ಖೈದಿಗಳಿಗೆ ನೀಡಲಾಗುತ್ತಿದ್ದ ಸಮವಸ್ತ್ರಗಳು ಕೊಳೆಯಾಗಿರುತ್ತಿದ್ದುವು. ಅಡುಗೆಮನೆ ಜಿರಲೆ ಇಲಿಗಳ ವಾಸಸ್ಥಾನವಾಗಿಬಿಟ್ಟಿತ್ತು. ಕುಡಿಯಲು ಕೊಡುತ್ತಿದ್ದ ನೀರಿನಲ್ಲಿ ಹುಳುಗಳು ತೇಲುತ್ತಿದ್ದುವು. ಓದಲು ಪುಸ್ತಕ ಪತ್ರಿಕೆಗಳನ್ನು ಕೊಡುತ್ತಿರಲಿಲ್ಲ. ಆದರೆ, ಅದೇ ಜೈಲಿನಲ್ಲಿದ್ದ ಇಂಗ್ಲಿಷ್ ಖೈದಿಗಳನ್ನು ಉತ್ತಮತರವಾಗಿ ನಡೆಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಜತೀಂದ್ರನಾಥ ದಾಸರು ದಂಗೆಯೆದ್ದುಬಿಟ್ಟರು. ತಾರತಮ್ಯವನ್ನು ವಿರೋಧಿಸಿ 1929ರ ಜುಲೈ 13ರಿಂದ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. ಜೈಲಿನ ಆಡಳಿತ ಜತೀಂದ್ರನಾಥ ಮತ್ತು ಇತರ ಸತ್ಯಾಗ್ರಹಿಗಳಿಗೆ ಹೊಡೆದು ಬಡಿದು ಹಿಂಸಿಸಿದ್ದಲ್ಲದೆ, ಕುಡಿಯಲು ನೀರನ್ನು ಸಹ ಕೊಡಲಿಲ್ಲ. ಬಲವಂತವಾಗಿ ಆಹಾರ ತಿನ್ನಿಸುವ ಯತ್ನವೂ ನಡೆಯಿತು. ಆದರೂ ಜತೀಂದ್ರನಾಥರು ಉಪವಾಸವನ್ನು ನಿಲ್ಲಿಸಲಿಲ್ಲ. ಗಾಂಧೀಜಿ ಮೊದಲಾದ ನಾಯಕರುಗಳು ಜತೀಂದ್ರನಾಥ ಮತ್ತು ಇತರ ಸತ್ಯಾಗ್ರಹಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದರು. ದಿನೇ ದಿನೇ ತೀವ್ರತರವಾಗುತ್ತಿದ್ದ ಹೋರಾಟವನ್ನು ಗಮನಿಸಿದ ಜೈಲು ಆಡಳಿತ ಯಾವುದೇ ನಿರ್ಬಂಧಗಳಿಲ್ಲದೆ ಜತೀಂದ್ರನಾಥರನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ವರದಿ ನೀಡಿತು. ಆದರೆ ಸರ್ಕಾರ ಅದಕ್ಕೆ ಒಪ್ಪದೆ ಬೇಲ್ ಮೇಲೆ ಬಿಡುಗಡೆ ಮಾಡುವುದಾಗಿ ಹೇಳಿತು. ಜತೀಂದ್ರನಾಥರು ಅದನ್ನು ಒಪ್ಪಲಿಲ್ಲ. 1929ರ ಸೆಪ್ಟೆಂಬರ್ 13ರಂದು  ಉಪವಾಸ ಸತ್ಯಾಗ್ರಹದ 63ನೆಯ ದಿನ, ಮಧ್ಯರಾತ್ರಿ 1 ಗಂಟೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜತೀಂದ್ರನಾಥರ ಪ್ರಾಣಪಕ್ಷಿ ಹಾರಿಹೋಯಿತು.

ಹುತಾತ್ಮ ಜತೀಂದ್ರನಾಥರ ಪಾರ್ಥಿವ ಶರೀರವನ್ನು ಲಾಹೋರಿನಿಂದ ಕೋಲ್ಕೊತ್ತಾಗೆ ರೈಲಿನಲ್ಲಿ ತರಲಾಯಿತು. ದಾರಿಯುದ್ದಕ್ಕೂ ಪ್ರತೀ ನಿಲ್ದಾಣದಲ್ಲೂ ಸಾವಿರಾರು ಜನರು ಅಂತಿಮ ನಮನ ಸಲ್ಲಿಸುತ್ತಿದ್ದರು. ಕಲ್ಕತ್ತಾದಲ್ಲಿ ಸುಮಾರು 6 ಲಕ್ಷ ಜನ ಎರಡು ಮೈಲಿ ಉದ್ದ ಮೆರವಣಿಗೆಯಲ್ಲಿ ಇಡೀ ದೇಶದ ಪರವಾಗಿ ಅಂತಿಮ ನಮನ ಸಲ್ಲಿಸಿದರು. 

ಇಷ್ಟೆಲ್ಲಾ ಘಟನೆಗಳಿಂದಾಗಿ ಭಾರತದದಾದ್ಯಂತ ಸ್ವಂತಂತ್ರ ಹೋರಾಟದ ಕಿಚ್ಚು ಹೆಚ್ಚಾಯಿತು. ಬೀದಿ ಬೀದಿಗಳಲ್ಲಿ ಹರತಾಳ, ಪ್ರತಿಭಟನೆ, ಪಿಕೆಟಿಂಗ್ ನಡೆದವು. ಮೋತಿಲಾಲ್ ನೆಹರೂ ಅವರು, ಲಾಹೋರ್ ಜೈಲಿನ ಅಮಾನವೀಯ ನಡವಳಿಕೆಯನ್ನು ವಿರೋಧಿಸಿ, ನಡೆಯಬೇಕಿದ್ದ ಕೇಂದ್ರೀಯ ಅಸೆಂಬ್ಲಿಯ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಲ್ಲದೆ, ಅಸೆಂಬ್ಲಿಯಲ್ಲಿ ಗೊತ್ತುವಳಿಯನ್ನು ಮಂಡಿಸಿ 55-47ರ ಅಂತರದಲ್ಲಿ ಗೆಲುವಾಗುವಂತೆ ನೋಡಿಕೊಂಡರು. ಮೊಹಮದ್ ಅಲಂ, ಗೋಪಿನಾಥ ಚಂದ್ ಭಾರ್ಗವ ಮೊದಲಾದ ನಾಯಕರು ಪಂಜಾಬ್ ಲೆಜಿಸ್ಲೇಟೀವ್ ಕೌನ್ಸಿಲ್ಲಿಗೆ ರಾಜಿನಾಮೆ ನೀಡಿ ಪ್ರತಿಭಟಿಸಿದರು. ಜತೀಂದ್ರನಾಥರ ಸತ್ಯಾಗ್ರಹ ಮತ್ತು ಸಾವು, ಬ್ರಿಟಿಷ್ ಸರ್ಕಾರದ ತಾರತಾಮ್ಯ ನೀತಿಯನ್ನು, ತಣ್ಣನೆಯ ಕ್ರೌರ್ಯವನ್ನು ಜಗತ್ತಿನೆದರಿಗೆ ತೆರೆದಿಟ್ಟಿತ್ತು.

ಜತೀಂದ್ರನಾಥರ ಸಾವು ಇಡೀ ಭಾರತವನ್ನು ಅದರಲ್ಲೂ ಯುವಕರನ್ನು ಬಡಿದೆಬ್ಬಿಸಿಬಿಟ್ಟಿತ್ತು. 

On the birth anniversary of revolutionary freedom fighter Jatindranath Das

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ