ಆದಿಕವಿ ಪಂಪ
ಆದಿಕವಿ ಪಂಪನ ನೆನೆಯೋಣ 🌷🙏🌷
ಪಂಪ ಹತ್ತನೆಯ ಶತಮಾನದಲ್ಲಿದ್ದ ಕವಿ. ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ ಎಂಬ ಎರಡು ಶ್ರೇಷ್ಠ ಕೃತಿಗಳ ಕರ್ತೃ. ಪ್ರಾಚೀನ ಕನ್ನಡ ಕವಿಗಳಲ್ಲಿ ಅಗ್ರಗಣ್ಯ.
ಪಂಪ ಆದಿಪುರಾಣದಲ್ಲಿ ತಾನು ದುಂದುಭಿ ಸಂವತ್ರಸರೋದ್ಭವಂ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಶಕರವರುಷಮೆಂಟುನೂಕ್ಕೆ ಕಡೆಯೊಳವತ್ತುಮೂರು ಸಂದಂದು ಜಗತ್ಪ್ರಕಟ ಪ್ಲವಸಂವತ್ಸರದಲ್ಲಿ (ಶಾ.ಶ. 863)ರಲ್ಲಿ ಎಂದರೆ ಕ್ರಿ.ಶ. 941ರಲ್ಲಿ (ಅಥವಾ ಕೆಲವು ವಿದ್ವಾಂಸರು ಅಭಿಪ್ರಾಯಪಡುವಂತೆ 942ರಲ್ಲಿ) ಈ ಕೃತಿ ರಚಿತವಾಯಿತೆಂದು ಅದರಿಂದಲೇ ತಿಳಿದುಬರುತ್ತದೆ. ಈ ಪ್ಲವ ಸಂವತ್ಸರಕ್ಕೆ ಹಿಂದೆ ಬರುವ ದುಂದುಭಿಸಂವತ್ಸರ ಕ್ರಿ.ಶ. 902ಕ್ಕೆ (ಅಥವಾ 903ಕ್ಕೆ) ಸರಿಹೊಂದುತ್ತವೆ. ಆದ್ದರಿಂದ, ಪಂಪನ ಜನ್ಮವರ್ಷವನ್ನು ಕ್ರಿ. ಶ. 902 (ಅಥವಾ 903) ಎಂದು ನಿಸ್ಸಂದಿಗ್ಧವಾಗಿ ಹೇಳಬಹುದು. ಎಂದಮೇಲೆ, ಕವಿಯ 39-40ನೆಯ ವರ್ಷದಲ್ಲಿ ಆದಿಪುರಾಣ ರಚಿತವಾದಂತಾಯಿತು ಎಂಬುದು ವಿದ್ವಾಂಸರ ಅಭಿಪ್ರಾಯ.
ಸಂಸ್ಕೃತಕ್ಕೆ ವಾಲ್ಮೀಕಿ ಹೇಗೆ ಆದಿಕವಿಯೊ, ಕಾಳಿದಾಸ ಹೇಗೆ ಕುಲ ಗುರುವೊ ಹಾಗೆ ಕನ್ನಡಕ್ಕೆ ಪಂಪ ಆದಿಕವಿಯೂ ಅಗ್ರಕವಿಯೂ ಕವಿಕುಲಗುರುವೂ ಆಗಿದ್ದಾನೆ ಎಂಬ ವಿಮರ್ಶಕ ಪರಂಪರೆಯ ಉಕ್ತ ಅತ್ಯುಕ್ತಿಯಲ್ಲ. ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ ಎಂಬ ಕವಿನಾಗರಾಜನ (ಕ್ರಿ. ಶ. 1331) ಉಕ್ತಿಯಂತೂ ಎಂದಿಗೂ ಸಲ್ಲುವ ಮಾತು. ಅನೇಕ ಕನ್ನಡ ಕವಿಗಳು ಪಂಪನ ಪ್ರಭಾವಕ್ಕೆ ಒಳಗಾಗಿದ್ದಾರೆ. ರನ್ನನಂತೂ (ಕ್ರಿ. ಶ. 993) ಪಂಪನ ವಿಕ್ರಮಾರ್ಜುನ ವಿಜಯಕ್ಕೆ ಬಹುವಿಧಗಳಲ್ಲಿ ಋಣಿಯಾಗಿದ್ದಾನೆ. ಪಂಪನ ಭಾರತ ವಿಕ್ರಮಾರ್ಜುನ ವಿಜಯವಾದರೆ, ರನ್ನನ ಗದಾಯುದ್ಧ ಸಾಹಸ ಭೀಮ ವಿಜಯ. ಆಶ್ರಯದಾತನನ್ನು ಕಥಾನಾಯಕನಿಗೆ ಹೋಲಿಸಿ ಕಥೆಯನ್ನು ಹೇಳುವ ರೀತಿಯಲ್ಲಿಯೂ ರನ್ನನಲ್ಲಿ ಪಂಪನ ಅನುಕರಣವಿದೆ. ಇಷ್ಟೇ ಅಲ್ಲ. ಈ ಗದಾಯುದ್ಧದ ಕಥೆಗೆ ಪಂಪ ಭಾರತದ ಹದಿಮೂರನೆಯ ಆಶ್ವಾಸದ 49ನೆಯ ಪದ್ಯದಿಂದ ಆ ಆಶ್ವಾಸಾಂತ್ಯದವರೆಗಿನ ಕಥೆಯೇ ಮೂಲ; ವರ್ಣನಾದಿಗಳೂ ಕೆಲವಡೆಗಳಲ್ಲಿ ಪಂಪಭಾರತವನ್ನೇ ಅನುಸರಿಸಿವೆ. ಕೆಲವು ಪದ್ಯಗಳೂ ಪದ್ಯಭಾಗಗಳೂ ಪಂಪಭಾರತದ ಈ ಭಾಗದ ಪಡಿನೆಳಲಿನಂತಿವೆ.
ರಾಮಚಂದ್ರಚರಿತಪುರಾಣಕರ್ತೃವಾದ ನಾಗಚಂದ್ರ (ಕ್ರಿ. ಶ. ಸು. 1100) ತನ್ನನ್ನು "ಅಭಿನವ ಪಂಪ"ನೆಂದು ಕರೆದುಕೊಂಡ. ಅವನ ಕೃತಿ ಪಂಪರಾಮಾಯಣವೆಂದು ಪ್ರಸಿದ್ಧವಾಯಿತು. ಇನ್ನೂ ಅನೇಕ ಕವಿಗಳು-ಪಂಪನ ಗೀರ್ಗುಂಪದ ಪೆಂಪು, ಅಸದೃಶ್ಯಮಪ್ಪಪೂರ್ವರಸಂ, ಸನ್ನುತ ಕವಿತಾಗುಣ, ಹಂಪದೇವೋಕ್ತಪ್ರಯೋಗ, ರಸಿಕಾಗ್ರಣಿ ಪಂಪನ ನುಣ್ಬುವೆತ್ತ ನುಡಿ, ಪಂಪನಿಂಪು, ಪಂಪನೋಜೆ-ಎಂದು ಮುಂತಾಗಿ ಪಂಪನ ಕವಿತೆ ಗುಣಗಳನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಕುಮಾರವ್ಯಾಸ ಭಾರತದಲ್ಲಿಯೂ ಪಂಪಭಾರತದ ಪ್ರಭಾವವನ್ನು ಗುರುತಿಸಿದ್ದಾರೆ. ಈ ಪಂಪಪ್ರಶಂಸೆಯ ಹಿನ್ನೆಲೆಯಲ್ಲಿ ಪಂಪ ಕನ್ನಡ ಕವಿಕುಲಗುರು ಎಂಬ ಪ್ರಶಸ್ತಿಗೆ ಸರ್ವಥಾ ಅರ್ಹನೆನ್ನಲು ಯಾವ ಅಡ್ಡಿಯೂ ಇಲ್ಲ. ವಿಮರ್ಶೆಯ ತಕ್ಕಡಿಯಲ್ಲಿಟ್ಟು ತೂಗಿ ಹಿಂದಿನದಕ್ಕೆಲ್ಲ ಹೊಸಬೆಲೆಯನ್ನು ಕಟ್ಟುತ್ತಿರುವ ಈಗಿನ ಕಾಲದಲ್ಲಿ ಕೂಡ ಈತನ ಸ್ಥಾನ ಮಹತ್ತ್ವಗಳಿಗೆ ಕುಂದು ಬಂದಿಲ್ಲ ಎಂಬುದು ತೀ.ನಂ. ಶ್ರೀಯವರ ಮಾತು.
ತೆಲುಗಿನಲ್ಲಿ ವ್ಯಾಸಭಾರತವನ್ನು ಅನುವಾದಿಸತೊಡಗಿ ಮೂರುಪರ್ವಗಳಷ್ಟನ್ನು ಮಾತ್ರ ಬರೆದ ನನ್ನಯಭಟ್ಟನ ಕೃತಿಯಲ್ಲಿ ಪಂಪನ ಭಾರತದ ಪ್ರಭಾವವನ್ನು ಆಂಧ್ರ ವಿದ್ವಾಂಸರು ಗುರುತಿಸಿದ್ದಾರೆ. ಪಂಪನ ಪ್ರಭಾವ ಮುದ್ರೆಯ ವ್ಯಾಪಕತ್ವಕ್ಕೆ ಇದು ಗಮನಾರ್ಹ ನಿದರ್ಶನ.
ಪಂಪ ವಿಕ್ರಮಾರ್ಜುನ ವಿಜಯವನ್ನು ಅರಿಕೇಸರಿಯ ರಾಜಧಾನಿಯಾದ ಬೋಧನದಲ್ಲಿ ಬರೆದ, ಆದಿಪುರಾಣವನ್ನು ರಾಷ್ಟ್ರಕೂಟ ರಾಜ್ಯದಲ್ಲಿ ಬರೆದ ಎಂದು ರನ್ನನ ಹೇಳಿಕೆಯಿಂದ ತಿಳಿದುಬರುತ್ತದೆ. ರನ್ನನ ಮನಸ್ಸಿನಲ್ಲಿ ಆದಿಪುರಾಣಕರ್ತ ಪಂಪನೇ ಇದ್ದಿರಬೇಕು. ಆದಿಪುರಾಣದಲ್ಲಿ ಪೆರರೀವುದೇಂ ಮುಂತಾಗಿ ಪಂಪ ಹೇಳುವಲ್ಲಿ, ರಾಷ್ಟ್ರಕೂಟ ದೊರೆಯನ್ನೇ ಅವನು ಕುರಿತಿರಬಹುದೆಂದು ತೋರುತ್ತದೆ.
ಪಂಪನ ವಂಶಾಭಿಮಾನ ಶ್ಲಾಘ್ಯವಾದದ್ದು. ಅವನು ಹುಟ್ಟಿನಿಂದ ಜೈನನಾದರೂ ವೈದಿಕಮತಾವಲಂಬಿಗಳಾಗಿದ್ದ ತನ್ನ ಪೂರ್ವಜರನ್ನು ಹೆಮ್ಮೆಯಿಂದಲೇ ನೆನೆದಿದ್ದಾನೆ. ಜಿನಾಗಮವನ್ನು ಬೆಳಗುವ ಆದಿಪುರಾಣದಲ್ಲಿ ಆತ್ಮ ವೃತ್ತಾಂತವನ್ನು ವರ್ಣರಂಜಿತವಾಗಿ ಚಿತ್ರಿಸಿದ್ದರೂ ಅಲ್ಲಿ ವೈದಿಕನಿಷ್ಠ ವಂಶದ ವಿಚಾರವನ್ನು ಬೆರೆಸಲು ಇಷ್ಟಪಡದೆ, ವೈದಿಕ ಧರ್ಮಾವಲಂಬಿಯಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ನಿರೂಪಿಸಿರುವ ಲೌಕಿಕ ಕಾವ್ಯವಾದ ವಿಕ್ರಮಾರ್ಜುನ ವಿಜಯದ ಆದಿಭಾಗದಲ್ಲಿ ಅರಿಕೇಸರಿಯ ವಂಶದ ವರ್ಣನೆಯನ್ನು ಚಾರಿತ್ರಿಕ ಸತ್ಯಕ್ಕೆ ವಿರೋಧವಾಗದಂತೆ ವರ್ಣಿಸಿ, ಕಾವ್ಯಾಂತ್ಯದಲ್ಲಿ ತನ್ನ ವಂಶವನ್ನು ವರ್ಣಿಸಿರುವುದು ಪಂಪನ ಔಚಿತ್ಯದೃಷ್ಟಿಯನ್ನು ಸೂಚಿಸುತ್ತದೆ.
ಪಂಪನಪೂರ್ವಜರ ಸ್ಥಳ ವೆಂಗಿಮಂಡಲ (ಕೃಷ್ಣಾ ಗೋದಾವರೀ ನದಿಗಳ ನಡುವೆ ಪೂರ್ವಸಮುದ್ರಪರ್ಯಂತ ಹಬ್ಬಿದ್ದ ಪ್ರದೇಶ). ರಾಜದ್ರಾಜಕಮೆನಿಸಿದ ಸಾಜದ ಪುಲಿಗಯ ತಿರುಳಕನ್ನಡದೊಳ್ ನಿವ್ರ್ಯಾಜದೆಸಕದೊಳೆ ಪುದಿದೊಂದೋಜೆಯ ಬಲದಿನಿಯ ಕವಿತೆ ಪಂಪನ ಕವಿತೆ - ಎಂದಲ್ಲವೆ ? ಈ ತಿರುಳಗನ್ನಡ ಅವನ ನಾಲಗೆಯಲ್ಲಿ ಊರಿದ್ದು ಹೇಗೆ ? ಜಿನವಲ್ಲಭನ ಶಾಸನದಲ್ಲಿ ಈ ಪ್ರಶ್ನೆಗೆ ಉತ್ತರ ಸಿಕ್ಕುತ್ತದೆ. ಪಂಪನ ತಾಯಿಯ ಊರು ಬೆಳ್ವೊಲ. ಇದು ತಿರುಳ್ಗನ್ನಡದ ಪುಲಿಗೆರೆಯ ನೆರೆಯ ನಾಡು, ಪಂಪ ತನ್ನ ಶೈಶವ ಬಾಲ್ಯಗಳನ್ನು ಇಲ್ಲಿಯೇ ಕಳೆದಿರಬೇಕು.
ಸ್ವಾಭಿಮಾನಿಯಾದ ಪಂಪನಿಗೆ ತನ್ನ ರೂಪಿನಲ್ಲಿ, ವ್ಯಕ್ತಿತ್ವದಲ್ಲಿ ಮಿಗಿಲಾದ ಹೆಮ್ಮೆ. ತಾನು ಧಾತ್ರಿವಳಯ ನಿಳಿಂಪು, ಚತುರಂಗಬಳಭಯಂಕರಣಂ, ನಿಷ್ಕಂಪಂ, ಲಲಿತಾಲಂಕರಣಂ. ಪಂಚಶರೈಕರೂಪಂ, ಅಪಗತಪಾಪಂ, ಅವನ ರೂಪೋ ಕದಳೀ ಗರ್ಭಶ್ಯಾಮಂ, ಮೃದುಕುಟಿಲ ಶಿರೋರುಹಂ, ಮೃದುಮಧ್ಯಮತನು, ಹಿತಮಿತ ಮೃದುವಚನಂ, ಲಲಿತಮಧುರ ಸುಂದರವೇಷಂ. ಹೀಗೆ ತನ್ನ ಲಲನಾಲೋಲುಪ್ತಿಯನ್ನೂ ಸಂಕೋಚವಿಲ್ಲದೆ ತಿಳಿಸಿದ್ದಾನೆ, ಪಂಪ ವಿಕ್ರಮಾರ್ಜುನ ವಿಜಯದಲ್ಲಿ ಅರ್ಜುನನ ಮೂಲಕ ಮಾಡಿಸಿರುವ ಬನವಾಸಿಯ ವರ್ಣನೆ ಪಂಪ ಅರಿಕೇಸರಿಗಳಿಬ್ಬರ ಬನವಾಸಿ ಪ್ರೇಮಕ್ಕೂ ನಿದರ್ಶನ. ಪಂಪನ ತಾಯ ತವರೂರು ಪುಲಿಗೆರೆ ಎಂದು ಹಿಂದೆಯೇ ಸೂಚಿಸಿದೆ ; ಪುಲಿಗೆರೆ ಬನವಾಸಿಯ ನೆರೆಕರೆಯ ಊರು. ಬಾಲ್ಯದ ಒಡನಾಡಿಗಳಾಗಿದ್ದ ಅರಿಕೇಸರಿ ಪಂಪರು ಬನವಾಸಿಯ ಪ್ರಾಂತ್ಯದಲ್ಲಿ ಒಂದಿಗೆಯೇ ಕೆಲ ಕಾಲವನ್ನಾದರೂ ಕಳೆದಿರಬೇಕು ; ಇಬ್ಬರಿಗೂ ಅದು ಮಾತಾಮಹರ ಕಡೆಯವರ ಬೀಡು. ಈ ಸಂದರ್ಭದ ಹಿನ್ನೆಲೆಯಲ್ಲಿಯೇ ಬನವಾಸಿಯ ವರ್ಣನೆಯ ಔಚಿತ್ಯವನ್ನು ಕಂಡುಕೊಳ್ಳಬೇಕು. ಪಂಪ ಅರಿಕೇಸರಿಗಳ ಬದುಕಿನುದ್ದಕ್ಕೂ ಸಾಗಿಬಂದ ಈ ಸ್ನೇಹವೇ ಕರ್ಣದುರ್ಯೋಧನರ ಸ್ನೇಹದ ಚಿತ್ರಣದ ವಾಜ್ಯದಲ್ಲಿ ಚಿತ್ರಿತವಾಗಿದೆಯೆಂದು ಅನೇಕ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಪಂಪನ ಸಂಬಂಧವಾಗಿ ನಾವು ಮಾಡಬಹುದಾದ ಸಂಭಾವ್ಯ ಊಹೆಗಳಲ್ಲಿ ಇದೂ ಒಂದು. ಬನವಾಸಿಯ ವರ್ಣನೆ ಪಂಪನಿಗೆ ಎಷ್ಟರಮಟ್ಟಿಗೆ ಸಂಬಂಧಪಟ್ಟುದೋ ಅರಿಕೇಸರಿಗೂ ಅಷ್ಟರ ಮಟ್ಟಿಗೆ ಸಂಬಂಧಪಟ್ಟದ್ದು.
ತೆಂಕಣಗಾಳಿ ಸೋಂಕಿದೊಡಂ, ಒಳ್ನೂಡಿಗೇಳ್ದೊಡಂ, ಇಂಪನಾಳ್ದಗೇ ಯಂ ಕಿವಿವೊಕ್ಕೊಡಂ, ಬಿರಿದ ಮಲ್ಲಿಗೆಗಂಡೊಡಂ, ಆದಕೆಂದಲಂ ಪಂಗೆಡೆಗೊಂಡೊಡಂ, ಮಧುಮಹೋತ್ಸವಮಾದೊಡಂ. ಏನನೆಂಬೆನ್, ಆರ್ ಅಂಕುಸಮಿಟ್ಟೊಡಂ ನೆನೆವುದೆನ್ನಮನಂ ಬನವಾಸಿದೇಶಮಂ
ತವರು ನಾಡಿನ ಬಗೆಗಿನ ಈ ಅದಮ್ಯವಾದ ತೊಳಲಿಕೆ ಪಂಪನ ಹೃದಯದಿಂದ ಚಿಮ್ಮಿರುವುದು ಎಷ್ಟು ಸತ್ಯವೋ ಅರಿಕೇಸರಿಯ ಹೃದಯವನ್ನು ತಟ್ಟಿರುವದೂ ಅಷ್ಟೇ ಸತ್ಯ
ಗುರು ದೇವೇಂದ್ರಮುನೀಂದ್ರಂ. ರಾಜಾಧಿರಾಜರಿಂದ ಪೂಜಿತರಾದ ಕೊಂಡ ಕುಂದಾನ್ವಯದ ಈದೇವೇಂದ್ರಮುನಿ ಬಹಳ ಪ್ರಖ್ಯಾತನಾಗಿದ್ದನೆಂದು ಶ್ರವಣಬೆಳ್ಗೊಳದ ಶಾಸನವೊಂದರಿಂದ ತಿಳಿದುಬರುತ್ತದ. ಈ ಆಧಾರದಿಂದ ದೇವೇಂದ್ರ ಮುನಿಯ ಸ್ಥಳ ಶ್ರವಣಬೆಳ್ಗೊಳವೆಂದೂ ಪಂಪನ ವಿದ್ಯಾಭ್ಯಾಸ ಅಲ್ಲಿಯೇ ಸಾಗಿತೆಂದೂ ಕೆ.ಜಿ. ಕುಂದಣಗಾರರು ಊಹಿಸುತ್ತಾರೆ. ಪಂಪ ತನ್ನ ಗುರುಗಳನ್ನು ಸ್ಮರಿಸುವಾಗ ಜಯನಂದಿಮುನಿಯನ್ನು ಸ್ಮರಿಸುವುದರಿಂದಲೂ ಜಿನವಲ್ಲಭ ತನ್ನ ಶಾಸನದಲ್ಲಿ ಕೊಂಡ ಕುಂದೆಯ ದೇಸಿಗ ಗಣದ ಪೊತ್ಥಗೆಯ ಬಳಿಯ ಪಂಡರಂಗವಲ್ಲಿಯ ಜಯಣನ್ದಿ ಸಿದ್ದಾನ್ತ ಭಟಾರರ ಗುಡ್ಡಂ ಜಿನವಲ್ಲಭಂ ಎಂದು ಹೇಳಿಕೊಂಡಿರುವುದರಿಂದಲೂ ಅಣ್ಣತಮ್ಮಂದಿರಿಬ್ಬರೂ ಜಯನಂದಿಯ ಶಿಷ್ಯರಾಗಿದ್ದರೆಂದು ಹೇಳಬಹುದು. ಮುನಿಜನದೋದಿಸಿದೋಜೆಯೊಳನುವದಿಪುದಿದೊಂದೆ ಕೊಂಡ ಕುಂದಾನ್ವಯ ನಂದನ ವನಶುಕಂ ಎಂಬ ಪಂಪನ ಹೇಳಿಕೆ ಇದಕ್ಕೆ ಪೋಷಕವಾಗಿದೆ.
ಈಗ ಪಂಪನವೆಂದು ನಮಗೆ ದೊರೆತಿರುವ ಕೃತಿಗಳೆಂದರೆ ಆದಿ ಪುರಾಣ ಮತ್ತು ಪಂಪಭಾರತ ಎಂದು ಪ್ರಸಿದ್ಧವಾಗಿರುವ ವಿಕ್ರಮಾರ್ಜುನವಿಜಯ. ವಿಕ್ರಮಾರ್ಜುನ ವಿಜಯದಲ್ಲಿ ಪಂಪ ತನ್ನ ಕೃತಿಗಳೆಂದು ಹೆಸರಿಸಿರುವುದು ಈ ಎರಡು ಕೃತಿಗಳೇ. ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆಟ್ಟಿದುವು ಸಮಸ್ತ ಭಾರತಮುಂ ಆದಿ ಪುರಾಣ ಮಹಾಪ್ರಂಧಮುಂ ಎಂಬ ಪಂಪನ ಹೇಳಿಕೆಗೆ, ಈ ಎರಡು ಕೃತಿಗಳು ಪಂಪ ಪೂರ್ವ ಗಣ್ಯಕೃತಿಗಳೆಲ್ಲವನ್ನೂ ಮೀರಿಸಿದುವು ಎಂದು ಸಾಮಾನ್ಯವಾಗಿ ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿರುವುದು ಸರಿಯೆಂದು ಕಾಣುತ್ತದೆ. ಮುಳಿಯ ತಿಮ್ಮಪ್ಪಯ್ಯನವರಾದರೊ ಈ ಹೇಳಿಕೆಯಿರುವ ಪದ್ಯವನ್ನು ವಿಸ್ತಾರವಾಗಿ ವಿಮರ್ಶೆ ಮಾಡಿ, ಅವನು ಅಭ್ಯಾಸ ಕವಿತೆಗಳಾಗಿ ಜಸಗಬ್ಬ, ಚಳಗಬ್ಬ, ಅಳಂಕೃತಿಗಬ್ಬ, ಕೈತಗಬ್ಬ, ದೇಸಿಗಬ್ಬ, ವಸ್ತುವಿದ್ಯೆಯ ಕಬ್ಬ ಎಂಬ ವಿಶಿಷ್ಟ ಗುಣೋಪೇತಗಳಾದ ಕೆಲವು ಕಾವ್ಯಗಳನ್ನು ಬರೆದಿದ್ದರಬೇಕೆಂದೂ ತನ್ನ ಈ ಮೊದಲಿನ ಕಬ್ಬಗಳನ್ನು ತನ್ನ ಭಾರತ ಮತ್ತು ಆದಿಪುರಾಣಗಳು ಇಕ್ಕಿಮೆಟ್ಟಿದುವು ಎಂದು ಹೇಳಿಕೊಂಡಿರುವನೆಂದೂ ಅಭಿಪ್ರಾಯಪಟ್ಟಿದ್ದಾರೆ. ಆತ ಅಭ್ಯಾಸ ಕವಿತೆಗಳನ್ನು ರಚಿಸಿದ್ದಿರಬಹುದು. ಆದರೆ ತನ್ನ ಪೂರ್ವ ಕಾವ್ಯಗಳ ಸ್ವರೂಪವನ್ನೇ ಪ್ರಸ್ತು ಪದ್ಯದಲ್ಲಿ ವಿವರಿಸಿದ್ದಾನೆ ಎನ್ನುವುದು ನಿರಾಧಾರವಾದ ಊಹೆ ಮಾತ್ರವಾಗಿ ಕಾಣುತ್ತದೆ.
ಆದಿಪುರಾಣ, ಪಂಪಭಾರತ : ಆದಿಪುರಾಣ ವಿಕ್ರಮಾರ್ಜುನ ವಿಜಯಗಳೆರಡೂ ಕನ್ನಡದ ಅಗ್ರಮಾನ್ಯ ಆದಿಮಹಾಕಾವ್ಯಗಳು. ಚಂಪೂ ಕಾವ್ಯಪ್ರಕಾರದ ಶ್ರೇಷ್ಠತಮ ಮಾದರಿಗಳು. ಆದಿಪುರಾಣ ಧಾರ್ಮಿಕಗ್ರಂಥ ; ಲೋಕ ಕಲ್ಯಾಣಕ್ಕಾಗಿ ಧರ್ಮಾಮೃತವನ್ನು ವರ್ಷಿಸಿದ ಆದಿತೀರ್ಥೇಶ್ವರಚರಿತ. ಕರ್ಣಾಮೃತಸ್ಯಂದಿಯಕ್ಕಿದು ಭವ್ಯಾವಳಿಗೆ ಎಂದು ಪಂಡಿತರು ಪ್ರೇರಿಸಿದರೂ ಮುಖ್ಯವಾಗಿ ತನಗೆ ಪುಣ್ಯದೊರಕಲೆಂದೂ ಕರ್ಮನಿರ್ಜರೆಯಾಗಲೆಂದೂ ಬಯಸಿ, ಅನಂತಸುಖಾಭಿಲಾಷಿಯಾಗಿ ಷೋಡಷ ಭಾವನೆಯಿಂದ ಬರೆದ ಷೋಡಶಾಶ್ವಾಸಗಳುಳ್ಳ ಪವಿತ್ರ ಗ್ರಂಥ. ಈ ಕಾವ್ಯ ರಚನೆಯಿಂದ ಪಂಪ ಆತ್ಮಸಂತುಷ್ಟಿಯನ್ನೂ ಪಂಡಿತ ಪ್ರಶಂಸೆಯನ್ನೂ ಗಳಿಸಿ ಪುರಾಣಕವಿಯೆಂದು ಪ್ರಸಿದ್ಧನಾದ.
ಪಂಪನ ಆದಿಪುರಾಣ ಜಿನಸೇನಾಚಾರ್ಯರ ಪೂರ್ವಪುರಾಣಕ್ಕೆ ಅನೇಕ ವಿಧಗಳಲ್ಲಿ ಋಣಿಯಾಗಿದೆ. "ವಿಶ್ರುತವೀರಸೇನ ಜಿನಸೇನಾಚಾರ್ಯ ಪರ್ಯಂತಮಾಗಿರೆ ಬಂದೀ ಕಥೇಗುಣ್ಪುವೆತ್ತುದು, ಆಂ ಧೃಷ್ಟನೆನ್ ಈ ಕಥಾಬ್ದಿಯುಮಮನೇನಿಸಲ್ ಮನಂದಂದೆನೋ" ಎಂದು ತನ್ನ ಋಣವನೊಪ್ಪಿಕೊಂಡು ಪಂಪ ವಿನಯವನ್ನು ಮೆರೆದಿದಾನೆ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ಧಿಯನೀಸುವೆನ್ ಕವಿವ್ಯಾಸನೆನ್ ಎಂಬ ಗರ್ವಮೆನಗಿಲ್ಲ ಎಂದು ವಿಕ್ರಮಾರ್ಜುನ ವಿಜಯದಲ್ಲೂ ಇದೇ ಗುಣವನ್ನು ವ್ಯಕ್ತಪಡಿಸಿದ್ದಾನೆ. ಹೀಗೆ, ಈ ಎರಡು ಕೃತಿಗಳಲ್ಲಿಯೂ ಪಂಪ ಕಥಾವಸ್ತು ವಿಷಯದಲ್ಲಿ ಹೆರರಿಗೆ ಕಡಹೊತ್ತಿದ್ದರೂ ಅವನ ಅನ್ಯಾದೃಶ ಪ್ರತಿಭೆ ಮೂಲ ಕಥೆಗಳನ್ನು ಕುಗ್ಗಿಸುವಲ್ಲಿ ಕುಗ್ಗಿಸಿ, ಹಿಗ್ಗಸಬೇಕಾದಲ್ಲಿ ಹಿಗ್ಗಿಸಿ, ಆದಿಪುರಾಣದಲ್ಲಿ ಕಾವ್ಯಧರ್ಮ-ಧರ್ಮಗಳ ಸಮನ್ವಯವನ್ನು ಬಹುಮಟ್ಟಿಗೆ ಸಾಧಿಸಿ, ಭಾರತದಲ್ಲಿ ಲೌಕಿಕವನ್ನು ಎಂದರೆ ಲೋಕಧರ್ಮವನ್ನು ಉಜ್ಜ್ವಲವಾಗಿ ಬೆಳಗಿಸಿದೆ. ಎರಡು ಮಹಾಕಥಾಸಾಗರಗಳನ್ನೂ ಬಲ್ಮೆಯಿಂದ ಈಸಿ ಪಂಪ ಪಾರಂಗತನಾಗಿದ್ದಾನೆ.
ಕತೆಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತಭಾರತಮುಮನ್ ಅಪೂರ್ವಮಾಗೆ ಪೇ ಇರಲಿಲ್ಲ. ವರ್ಣಕಂ (ಎಂದರೆ ಕಾವ್ಯೋಚಿತ ವರ್ಣನೆಗಳು) ಕಥೆಯೊಳೊಡಂಬಡಂಪಡೆಯ ಪೇಳ್ವೊಡೆ ಪಂಪನೆ ಪೇಳ್ ಎಂದು ಪಂಡಿತರೇ ಹೊಗಳಲು ಈ ಕೃತಿಯನ್ನು ರಚಿಸಲು ಮನಸ್ಸಾಯಿತೆಂದು ಹೇಳಿದ್ದಾನೆ. ಅಲ್ಲದೆ, ಅರಿಕೇಸರಿ ಪಂಪನಿಗೆ ಪಿರಿದನಿತ್ತು ಗೌರವಿಸಿ, ಇತಿಹಾಸ ಕಥೆಯನ್ನು ಬರೆಯಲೊಪ್ಪಿಸಿದ. ಗುಣಾರ್ಣವನ ಒಳ್ಪು ಅವನ ಮನಸ್ಸನುನ ಹಿಡಿಯಿತು. ಒಟ್ಟಿನಲ್ಲಿ ಪೂರ್ವಭೂಮಿಪರನ್ನು ಮೀರಿಸಿದ ಅರಿಕೇಸರಿಯನ್ನು ಅರ್ಜುನನೊಂದಿಗೆ ಹೋಲಿಸಲು ಪಂಪನಿಗೆ ಒಲವಾಯಿತು. ಅರ್ಜುನನೊಂದಿಗೆ ಅಭೇದಕಲ್ಪನೆಮಾಡಿ, ಚಾಗಬೀರಗಳಲ್ಲಿ ಅಸಮಾನನಾದ ಅರಿಕೇಸರಿಯನ್ನು ಕಥಾನಾಯಕನ್ನಾಗಿ ಮಾಡಿಕೊಂಡ.
ಈ ಎರಡು ಕೃತಿಗಳೂ ಪಂಪನ ಪ್ರತಿಭೆಯನ್ನು ಶಾಶ್ವತವಾಗಿ ವಿಶ್ವವ್ಯಾಪಿಯಾಗಿ ಬೆಳಗುವ ಕೃತಿಗಳೆಂಬುದರಲ್ಲಿ ಸಂದೇಹವೇ ಇಲ್ಲ. ಆಧುನಿಕ ವಿಮರ್ಶೆಯ ಪುನರ್ಮೌಲ್ಯ ಮಾಪನದ ಅಗ್ನಿಪರೀಕ್ಷೆಯಲ್ಲಿ ಎಂದೂ ತೇರ್ಗಡೆಯಾಗಬಲ್ಲ ಸತ್ತ್ವವನ್ನು ಹೊಂದಿರುವ ಕೃತಿಗಳಿವು.
ಆದಿಪುರಾಣದ ಕಥಾವಸ್ತು ಜೈನರಲ್ಲದವರಿಗೆ ಅಪರಿಚಿತವಾಗಿರಬಹುದು. ಆದ್ದರಿಂದ ಅದರ ಬಗೆಗೆ ಎರಡು ಮಾತು ಅಗತ್ಯ ಜೈನಪುರಾಣಗಳಲ್ಲಿ ಜಿನಧರ್ಮವನ್ನು ನಂಬಿ ನಡೆದು ಸದ್ಗತಿಯನ್ನು ಪಡೆದ ಮಹಾಪುರುಷರ ಚರಿತ್ರೆ ವರ್ಣಿತವಾಗಿದೆ. ಇದರಲ್ಲಿ ತ್ರಿಷಷ್ಟಿಶಲಾಕಾ ಪುರುಷರೆಂದು 63 ಮಂದಿ ಪ್ರಸಿದ್ದರು. ಇವರ ಪೈಕಿ ಜಿನಧರ್ಮಬೋದಕರೂ ಪ್ರವರ್ತಕರೂ ಆದ 24 ಮಂದಿ ತೀರ್ಥಂಕರರು (ಎಂದರೆ, ಸಂಸಾರಸಾಗರವನ್ನು ತಾವು ದಾಟಿ ಇತರರನ್ನೂ ದಾಟಿಸುವವರು) ಅತ್ಯಂತ ಪ್ರಮುಖರು. ಈ ತೀರ್ಥಂಕರರಲ್ಲಿ ಮೊದಲನೆಯವ ವೃಷಭದೇವ. ಈ ಆದಿತೀರ್ಥಂಕರನ ಜನ್ಮಜನ್ಮಾಂತರಗಳ ಚರಿತ್ರೆಯನ್ನು ಬಿತ್ತರಿಸುವ ಕಥೆಯೆ ಆದಿಪುರಾಣ. ಎಲ್ಲ ತೀರ್ಥಂಕರರ ಪುರಾಣಕಥೆಗಳ ಚೌಕಟ್ಟೂ ಒಂದೇ ಬಗೆಯದು. ಇದನ್ನು ಸ್ವಲ್ಪ ಮಾತ್ರ ವ್ಯತ್ಯಾಸಮಾಡುವ ಸ್ವತಂತ್ರ್ಯವೂ ಕವಿಗೆ ಇಲ್ಲ. ಪುರಾಣ ಲಕ್ಷಣಕ್ಕೆ ಆತ ಬದ್ಧ. ಈ ಲಕ್ಷಣವನ್ನು ಪಂಪನೇ ಹೀಗೆ ಅನುವಾದಿಸಿದ್ದಾನೆ ; ಆ ಪುರಾಣಕ್ಕಂ ಲೋಕಾಕಾರ ಕಥನಮುಂ ದೇಶನಿವೇಶೋಪದೇಶಮುಂ ನಗರಸಂಪತ್ಪರಿವರ್ಣನಮುಂ ರಾಜ್ಯ ರಾಮಣೀಯಕಾಖ್ಯಾನಮುಂ ತೀರ್ಥಮಹಿಮಾಸಮರ್ಥ ನಮುಂ ಚತುರ್ಗತಿ (ಎಂದರೆ ದೇವ, ಮಾನುಷ, ತಿರ್ಯಕ್ ಮತ್ತು ನಾರಕ ಎಂಬ ನಾಲ್ಕು ಗತಿ) ಸ್ವರೂಪನಿರೂಫಣಮುಂ ತಪೋದನವ್ಯಾವಣ್ನಮುಂದ ತತ್ಫಲ ಪ್ರಾಪ್ತಪ್ರಕಟನಮುಂ ಎಂದಿಂತವಯವಂಗಳೆಂಟಕ್ಕುಂ ಈ ಲಕ್ಷಣ ಪಾಲನೆಯ ಜೊತೆಗೆ, ತೀರ್ಥಂಕರನ ಬೇರೆಬೇರೆ ಜನ್ಮಗಳ ಕಥೆಯ ನಿರೂಪಣೆ, ಇದ್ದೇ ತೀರಬೇಕು. ಪುರಾಣಗಳ ಸ್ವಾರಸ್ಯವೆಲ್ಲ ಈ ಭವಾವಳಿಯಲ್ಲಿ ಬೀಜರೂಪದಲ್ಲಿ ಅಡಗಿರುತ್ತದೆ. ಕಾರನ, ಗುರಿ ಒಂದೆ ಆದರೂ ಒಬ್ಬ ತೀರ್ಥಂಕರನ ಭವಾವಳಿ ಇದ್ದಂತೆ ಇನ್ನೊಬ್ಬನದು ಇರುವುದಿಲ್ಲ. ಈ ಭವಾವಳಿಯ ಸ್ವರೂಪವನ್ನು ಕಲಾತ್ಮಕವಾಗಿ ಆವಿಷ್ಕಾರ ಮಾಡುವುದರಲ್ಲಿ ಕವಿಪ್ರತಿಭೆಗೆ ಅವಕಾಶವುಂಟು. ಈ ಕಲಾಕರ್ಮವನ್ನು ಪಂಪ ಅಮೋಘವಾಗಿ ನಿರ್ವಹಿಸಿದ್ದಾನೆ. ಆದಿ ತೀರ್ಥಂಕರನ ಭವಾವಳಿಯ ಅನುಕ್ರಮವನ್ನು ಪಂಪನ ಒಂದು ಅಕ್ಕರವೃತ್ತ ಹೀಗೆ ನಿರೂಪಿಸಿದೆ :
ಪದ್ಯ : - ಭೋಗಾಕಾಂಕ್ಷೆಯೊಳ್ ಜಯವರ್ಮಂ ಬಯಕೀ ಮಹಬಲಂ ಲಲಿತಾಂಗಂ ವಜ್ರಜಂಘಂ | ಭೋಗಭೂಮಿಜಂ ಶ್ರೀಧರದೇವಂ ಸುವಿಧಿನರಾಧಿಪನಚ್ಯುತೇಂದ್ರಂ | ಸಾಗರಾಂತಂ ನೆಲನನಿತುಮಂ ಚಕ್ರದಿಂ ಬೆಸಕೈಸಿದ ವಜ್ರನಾಭಿ - | ಯಾಗಿ ಸರ್ವಾರ್ಥಸಿದ್ಧಿಯೊಳ್ ಪುಟ್ಟಿಬಂದಿಲ್ಲಿ ತಾನಾದಿದೇವನಾದಂ || (ಆದಿಪು 16-58)
ಪದ್ಯ :-
ಭವದಿಂದ ಭವದೊಳ್ ತಗುಳ್ದು ಪರಮಸ್ನೇಹಂಗಳ್ ಜೀವಗಳನ್ನು ಮೋಹ ಸಂಕೋಲೆಯಿಂದ ಹೇಗೆ ಬಂಧಿಸುತ್ತವೆ, ಅದರಿಂದ ಬಿಡಿಸಿಕೊಂಡು ಸದ್ಗತಿಪಡೆಯಲು ಜೀವ ಹೇಗೆ ಹೆಣಗುತ್ತದೆ ಎಂಬ ಜಿನಧರ್ಮತತ್ತ್ವವನ್ನು ವೃಷಭದೇವನ ಪೂರ್ವ ಜನ್ಮಾಳಿಕಥನದಲ್ಲಿ ಪಂಪ ಮನೋಹರವಾಗಿ ಪ್ರತಿಪಾದಿಸಿದ್ದಾನೆ. ವಿಶೇಷವಾಗಿ, ಲಲಿತಾಂಗ-ಸ್ವಯಂಪ್ರಭೆ, ವಜ್ರಜಂಘ-ಶ್ರೀಮತಿ ಇವರು ಪ್ರಣಯಿಗಳಾಗಿ ಹುಟ್ಟ ಭೋಗಜೀವನದ ಪರಾಕಾಷ್ಠೆಯನ್ನು ಮುಟ್ಟಿಯೂ ಕೊನೆಗೊಮ್ಮೆ ಮರಣವನ್ನು ಅಪ್ಪಲೇಬೇಕಾಗಿ ಬಂದ ಸನ್ನಿವೇಶಗಳನ್ನು ಹೃದಯಸ್ಪರ್ಶಿಯಗಿ ಚಿತ್ರಿಸಿದ್ದಾನೆ, ಪಂಪ. ಒಟ್ಟಿನಲ್ಲಿ, ಇದು ಮನೆಯಿಂದ ಮನೆಗೆ ಹೋಗುವಂತೆ ಕಥಾನಾಯಕ ಬೇರೆ ಬೇರೆ ಜನ್ಮಗಳೆತ್ತಿ ಹೆಚ್ಚು ಹೆಚ್ಚಿನ ಪರಿಪಾಕವನ್ನು ಹೊಂದಿದ ಕಥೆ ಪ್ರಸ್ತುತ್ಯ ಜನ್ಮಾಳಿಬಂಧುರಂ. ಕೊನೆಯ ಜನ್ಮದಲ್ಲಿ, ಆದಿನಾಥ ಭೂಲೋಕದಲ್ಲಿ 14ನೆಯ ಮನುವಾದ ನಾಭಿರಾಜನಿಗೆ ವೃಷಭಸ್ವಾಮಿ (ಅಥವಾ ಪುರುದೇವ) ಎಂಬ ಹೆಸರಿನ ಪುತ್ರನಾಗಿ ಜನ್ಮವೆತ್ತಿ ಸಂಸಾರದಲ್ಲಿ ಭೋಗಾಸಕ್ತನಾದರೂ ನಿರ್ಲಿಪ್ತನಾಗಿ ಬಾಳಿ ಪರಿನಿಷ್ಕೃಮಣ ಕಾಲಬಂದಾಗ ನೀಲಾಂಜನೆಯಂಬವಳ ಅಮೋಘನೃತ್ಯವನ್ನು ನೋಡುತ್ತಿದ್ದಾಗ ಗತಾಯುವಾಗಿದ್ದ ಆಕೆ ಹಠಾತ್ತನೆ ಕಣ್ಮರೆಯಾದ ಘಟನೆಯಿಂದ ತೀವ್ರ ವೈರಾಗ್ಯಪರನಾಗುತ್ತಾನೆ; ಮುಕ್ತಿ ಸಾಧಿಸಲು ತೆರಳುತ್ತಾನೆ. ಪುರುದೇವಭವದಲ್ಲಿ ವರ್ಣಿತವಾದ ಪಂಚಕಲ್ಯಾಣಗಳಲ್ಲಿ ತೀರ್ಥಂಕರ ಜನ್ಮಾಭಿಷೇಕ ಕಲ್ಯಾಣವೂ ಕಡೆಯದಾದ ಪರಿನಿಷ್ಕೃಮಣಕಲ್ಯಾಣವೂ ದಿವ್ಯಭವ್ಯವಾಗಿ ಮೂಡಿ ಬಂದಿವೆ ಪಂಪನ ಪ್ರತಿಭಾವಿಲಾಸದಲ್ಲಿ, ಪುರುದೇವನ ಜನ್ಮ ಕಥೆಗೆ ಪೂರಕವಾಗಿ ಭರತಚಕ್ರವರ್ತಿ-ಬಾಹುಬಲಿಯ ಕಥೆಯೂ ಉಜ್ವಲವಾಗಿ ಚಿತ್ರಿತವಾಗಿದೆ. ಆದಿದೇವನ ಕಥೆಯಲ್ಲಿ ಭೋಗನಿರಾಸವೂ ಭರತನ ಕಥೆಯಲ್ಲಿ ವೈಭವಮದದ ನಿರರ್ಥಕತೆಯೂ ಕಾವ್ಯ ಧರ್ಮಕ್ಕೆ ಅಧೀನವಾಗಿ ನಿರೂಪಿತವಾಗಿವೆ.
ವಿಕ್ರಮಾರ್ಜುನ ವಿಜಯದ ಕಥೆ ಪ್ರಸಿದ್ಧವಾದ ಮಹಾಭಾರತದ ಕಥೆ. ಈ ಕೃತಿಯನ್ನು ಪಂಪ ಬಹುಶಃ ಸಮಗ್ರ ಭಾರತ ಎಂಬ ಅರ್ಥದಲ್ಲಿ ಸಮಸ್ತಭಾರತ ಎಂದು ಅನೇಕ ಕಡೆ ನಿರ್ದೇಶಿಸಿದ್ದಾನೆ. ಅರಿಕೇಸರಿಯ ವೃತ್ತಾಂತವನ್ನು ಅರ್ಜುನನ ಕಥೆಯೊಂದಿಗೆ ಸಮಾಸ ಮಾಡಿರುವುದರಿಂದ ಸಮಸ್ತ ಭಾರತ ಎಂಬ ಹೆಸರು ಅದಕ್ಕೆ ಅನ್ವರ್ಥಕ ಎಂದು ಮುಳಿಯ ತಿಮ್ಮಪ್ಪಯ್ಯನವರು ವ್ಯಾಖ್ಯಾನಿಸಿದ್ದಾರೆ. ಈ ಆಶಯ ಕವಿಗೆ ಇದ್ದಿರಬಹುದು. ಪಂಪನ ದೃಷ್ಟಿಯಲ್ಲಿ ಭಾರತ ಕೇವಲ ವಿಕ್ರಮಾರ್ಜುನ ವಿಜಯವಲ್ಲ ; ಅನೇಕ ಮಹಪುರುಷರ ಕಥೆ, ಅವರ ನಡವಳಿಕೆಗಳ ಮೂಲಕ ಲೌಕಿಕವನ್ನು ಎಂದರೆ ಲೋಕಧರ್ಮವನ್ನು ಅವನು ಬೆಳಗಿದ್ದಾನೆ. ಈ ಆಶಯ ಚಲದೊಳ್ ದುಯೋಧನಂ, ನನ್ನಿಯೊಲ್ ಇನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೇಶಂ, ಅತ್ಯುನ್ನತಿಯೊಳ್ ಅಮರಸಿಂಧೂದ್ಭವಂ, ಚಾಪ ವಿದ್ಯಾ ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿರ್ಮಲಚಿತ್ತಂ ಧರ್ಮಪುತ್ರಂ ಮಿಗಿಲ್ ಇವರ್ಗಳಿನೀ ಭಾರತಂ ಲೋಕಪೂಜ್ಯಂ ಎಂಬ ಪಂಪನ ಉಪಸಂಹಾರ ವಾಕ್ಯದಲ್ಲಿ ಸುವ್ಯಕ್ತವಾಗಿದೆ.
ವ್ಯಾಸಮುನಿ ಪ್ರಣೂತ ಭಾರತವನ್ನೂ ಸತ್ಕವಿ ಜಿನಸೇನಾಚಾರ್ಯರ ಆದಿಪುರಾಣವನ್ನೂ ಹೇಳಿ ಪಂಪ ವಾಕ್ಶ್ರೀಸುಭಗನೂ ಪುರಾಣಕವಿಯೂ ಆದ್ದರಿಂದಲೇ ನಾಡೊಜನೆನಿಸಿದ. ಸಹಸ್ರವರ್ಷಗಳ ಮೇಲಾದರೂ ಈ ನಾಡೊಜನ ಕೀರ್ತಿ ಬೆಳೆಯುತ್ತಿದೆಯೆ ಹೊರತು ಕುಗ್ಗುತ್ತಿಲ್ಲ. ಕುಗ್ಗುವುದೂ ಇಲ್ಲ. ಅವನ ಕೃತಿಗಳಲ್ಲಿ ಕುಂದುಕೊರತೆಗಳನ್ನೂ ಲೋಪದೋಷಗಳನ್ನೂ ಹೊಸಹೊಸದಾಗಿ ಗುರುತಿಸುತ್ತಿರುವ ಆಧುನಿಕ ವಿಮರ್ಶೆ ಕೂಡ ಅವನ ಕವಿತಾವೈಭವಕ್ಕೆ, ಮಹೋನ್ನತಿಗೆ, ಕೈಮುಗಿದಿದೆ.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
Adi Pampa
ಕಾಮೆಂಟ್ಗಳು