ಬಸವರಾಜ ಹಳಿಜೋಳ
ಬಸವರಾಜ ಹಳಿಜೋಳ
ಬಸವರಾಜ ಹಳಿಜೋಳರು ನಾಡಿನ ಮಹತ್ವದ ಚಿತ್ರಕಾರರಲ್ಲೊಬ್ಬರು.
ಬಸವರಾಜ ಹಳಿಜೋಳ 1934ರ ಡಿಸೆಂಬರ್ 13ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇಶನೂರ ಗ್ರಾಮದಲ್ಲಿ ಜನಿಸಿದರು. ತಂದೆ ಮಡಿವಾಳಪ್ಪ. ತಾಯಿ ಭಾಗೀರಥಿ.
ಬಸವರಾಜ ಹಳಿಜೋಳರಿಗೆ ಬಾಲ್ಯದಲ್ಲೇ ಚಿತ್ರಕಲೆಯಲ್ಲಿ ಎಷ್ಟೊಂದು ಪ್ರೀತಿಯೆಂದರೆ, ಶಾಲೆಯಲ್ಲಿ ಸ್ನೇಹಿತರ ಪುಸ್ತಕದ ಮೇಲೆಲ್ಲಾ ಪ್ರಾಣಿ, ಪಕ್ಷಿ, ನಿಸರ್ಗ ದೃಶ್ಯ ರಚಿಸಿ ಬಿಡುತ್ತಿದ್ದರಂತೆ.
ಮುಂಬಯಿಯ ಪ್ರಸಿದ್ಧ ಜೆ.ಜೆ. ಕಲಾಶಾಲೆಯಿಂದ ಡಿಪ್ಲೊಮ ಪಡೆದ ಬಸವರಾಜ ಹಳಿಜೋಳರು, ಹುಬ್ಬಳ್ಳಿಯಲ್ಲಿ ಡಾ. ಮಿಣಜಿಗಿಯವರ ಕಲಾಮಂದಿರದಲ್ಲಿ ಉಪನ್ಯಾಸಕರಾಗಿ ಉದ್ಯೋಗ ಪ್ರಾರಂಭಿಸಿದರು. ಮಿಣಜಿಗಿಯವರ ನಿವೃತ್ತಿಯ ನಂತರ ಪ್ರಾಚಾರ್ಯರಾಗಿ ಜವಾಬ್ದಾರಿವಹಿಸಿಕೊಂಡ ಅವರು, ಇದನ್ನು ವಿಜಯ ಮಹಾಂತೇಶ ಮಹಾವಿದ್ಯಾಲಯವಾಗಿ ಮಾರ್ಪಡಿಸಲು ಪಟ್ಟ ಶ್ರಮ ಅಪಾರವಾದದ್ದು.
ಎಲ್ಲ ರೀತಿಯ ಚಿತ್ರ ಕಲಾವಂತಿಕೆಗೆ ಹೆಸರಾಗಿದ್ದ ಬಸವರಾಜ ಹಳಿಜೋಳ ಅವರ ಪ್ರಸಿದ್ಧ ಚಿತ್ರಗಳ ಸಂಖ್ಯೆಯೇ ಒಂದು ಸಾವಿರದ ಐನೂರಕ್ಕೂ ಹೆಚ್ಚಿನದು. ಅವರು ಹಂಪಿ, ಬಾದಾಮಿ, ಬಿಜಾಪುರ, ಲಕ್ಕುಂಡಿ ಮುಂತಾದ ಐತಿಹಾಸಿಕ ಸ್ಥಳಗಳ ಜಲವರ್ಣ ಕೃತಿ ರಚನೆ ಮಾಡಿದರು. ಭಾವಚಿತ್ರ ರಚನೆಯಲ್ಲೂ ಸಿದ್ಧಹಸ್ತರೆನಿಸಿದ್ದ ಅವರು ವಿ.ಕೃ. ಗೋಕಾಕ್, ಅ.ನ. ಸುಬ್ಬರಾವ್, ಡಾ. ಎಂ.ವಿ. ಮಿಣಜಿಗಿ, ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು, ಡಿ.ವಿ. ಹಾಲಭಾವಿ, ಡಾ. ಡಿ.ಎಸ್. ಕರ್ಕಿ, ಎಸ್.ಆರ್. ಕಂಠಿ, ಬೀಚಿ ಮುಂತಾದ ಅನೇಕಾನೇಜ ಗಣ್ಯರ ತೈಲಚಿತ್ರಗಳ ರಚನೆ ಮಾಡಿದರು.
ಬಸವರಾಜ ಹಳಿಜೋಳ ಅವರಿಗೆ ಕಾರವಾರದ 45ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಡೆಗೋಡ್ಲು ಶಂಕರಭಟ್ಟರಿಂದ, 55ನೇ ಸಾಹಿತ್ಯ ಸಮ್ಮೇಳನದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಿಂದ, ಹುಬ್ಬಳ್ಳಿಯ ಕಲಾಮಂದಿರದ ವತಿಯಿಂದ ಇಂದಿರಾ ಗಾಜಿನ ಮನೆಯಲ್ಲಿ, ಬೆಂಗಳೂರಿನ ವೆಂಕಟಪ್ಪ ಚಿತ್ರಕಲಾ ಶಾಲೆಯಲ್ಲಿ ಹೀಗೆ ದೊರೆತ ಪ್ರಶಸ್ತಿ, ಪುರಸ್ಕಾರಗಳು ಅನೇಕ.
ಬಸವರಾಜ ಹಳಿಜೋಳ ಅವರು 1982ರ ಜನವರಿ 14ರಂದು ಈ ಲೋಕವನ್ನಗಲಿದರು. ಕರ್ನಾಟಕ ಲಲಿತಕಲಾ ಅಕಾಡೆಮಿಯು ಮರಣೋತ್ತರವಾಗಿ ಅವರಿಗೆ 1991ವರ್ಷದಲ್ಲಿ ಪ್ರಶಸ್ತಿ ನೀಡಿ ಸ್ಮರಿಸಿತು.
On the anniversary of great artiste Basavaraja Halijola, Halijol
ಕಾಮೆಂಟ್ಗಳು