ಮಲ್ಲಿಕಾರ್ಜುನ ಮನಸೂರ್
ಮಲ್ಲಿಕಾರ್ಜುನ ಮನಸೂರ್
ಪಂಡಿತ್ ಮಲ್ಲಿಕಾರ್ಜುನ ಮನಸೂರ್ ಅಂದರೆ ಉಸಿರುಸಿರೂ ಸಂಗೀತವಾಗಿ ಹೊಮ್ಮುತ್ತಿದ್ದ ಒಂದು ಮಹಾನ್ ಜೀವ.
ಡಾ. ಮಲ್ಲಿಕಾರ್ಜುನ ಮನಸೂರರು 1910ರ ಡಿಸೆಂಬರ್ 31ರಂದು ಜನಿಸಿದರು.
ಮಲ್ಲಿಕಾರ್ಜುನ ಮನಸೂರರ ತಂದೆ ಭೀಮರಾಯಪ್ಪನವರು ಮನ್ಸೂರ ಗ್ರಾಮದ ಗೌಡರಾಗಿದ್ದು ಅವರಿಗೆ ನಾಟಕ, ಸಂಗೀತ ದೊಡ್ಡಾಟಗಳಲ್ಲಿ ಅಪಾರ ಆಸಕ್ತಿಯಿತ್ತು. ಪರವೂರಿನಿಂದ ಮೇಳಗಳನ್ನು ಕರೆಯಿಸಿ ಅವರ ಕಾರ್ಯಕ್ರಮಗಳು, ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು. ತಾಯಿಗೂ ಹಾಗೆಯೇ ಸಂಗೀತವೆಂದರೆ ಜೀವ. ಆಕೆಗೆ ಅದೆಷ್ಟೋ ಬೀಸುವ ಹಾಡುಗಳು, ಜೋಗುಳ ಹಾಡು, ಭಜನೆಗಳು ಕಂಠಗತವಾಗಿದ್ದು ಅವುಗಳನ್ನು ಇಂಪಾಗಿ ಹಾಡುತ್ತಿದ್ದರು.
ಮಲ್ಲಿಕಾರ್ಜುನರು ಎರಡನೆಯ ವರ್ಗದಲ್ಲಿದ್ದಾಗ ಅವರ ತಂದೆ ಅಪ್ಪಯಸ್ವಾಮಿ ಎಂಬ ಸಂಗೀತಗಾರರನ್ನು ಕರೆತಂದರು. ಅವರು ತಂಜಾವೂರಿನಲ್ಲಿ ಕರ್ನಾಟಕ ಸಂಗೀತ ಕಲಿತು ಬಂದಿದ್ದರು. ಅವರು ಎಳೆಯರಿಗೆ ಸೈರಂಧ್ರಿ ನಾಟಕ ಕಲಿಸುತ್ತಿದ್ದರು. ಅವರ ಕಂಠ ಮಧುರವಾಗಿತ್ತು. ಅವರು ಹಾಡುವಾಗ ಇದ್ದಕ್ಕಿದ್ದಂತೆ ಬಾಲಕ ಮಲ್ಲಿಕಾರ್ಜುನರ ಕಣ್ಣು ಹನಿಗೂಡುತ್ತಿದ್ದವು. ಮನೆಕೆಲಸ ಮುಗಿಸಿ ತಾಯಿಯು ರಾತ್ರಿ ಭಜನೆಯನ್ನೋ ಗೀತವನ್ನೋ ಹಾಡುವಾಗಲೂ ಇವರ ಹೃದಯದಲ್ಲಿ ಏನೋ ವಿಚಿತ್ರವಾದ ಮಧುರ ವೇದನೆಯ ಅನುಭವವಾಗುತ್ತಿತ್ತು. ಕರೆವ್ವನ ಗುಡಿಯಲ್ಲಿ ಗಂಟೆ ಮೊಳಗಿದಾಗ ಇವರ ಅಂತರಾಳದಲ್ಲಿ ಅದು ಮಾರ್ದನಿಗಯ್ಯುವಂತಿತ್ತು. ಹೀಗೆ ಬಾಲ್ಯದಲ್ಲಿಯೇ ಮಲ್ಲಿಕಾರ್ಜುನರ ಮನಸ್ಸಿನಲ್ಲಿ ಸಂಗೀತದ ಬೀಜ ಹೊಕ್ಕು ನೆಲೆಸಿತ್ತು
ಮಲ್ಲಿಕಾರ್ಜುನ ಮನಸೂರರು ಗಾಂವಟೀ ಶಾಲೆಯ ಶಿಕ್ಷಣ ಮುಗಿಸಿ ಧಾರವಾಡಕ್ಕೆ ಬರಬೇಕಾಗಿತ್ತು. ಆದರೆ ಇವರು ಇವರಣ್ಣ ಸೇರಿದ ವಿಶ್ವಗುಣಾದರ್ಶ ನಾಟಕ ಮಂಡಲಿಯ ಬಾಗಿಲು ತಟ್ಟಿದರು. ಸುದ್ದಿ ತಲಪುವುದೇ ತಡ ಇವರನ್ನು ನಾಟಕ ಕಂಪನಿಯಿಂದ ಬಿಡಿಸಿ ಇವರಪ್ಪ ಮತ್ತೆ ಶಾಲೆಯಲ್ಲಿ ಸೇರಿಸಿದರು. ಆದರೆ ಇವರು ತಿರುಗಿ ಕಂಪೆನಿಗೆ ಹೋಗಿ ಸೇರಿದರು. ಆಗ ಏನಾದರೂ ಮಾಡಿಕೊಳ್ಳಲಿ ಎಂದು ಇವರ ದಾರಿಗೆ ಇವರನ್ನು ಬಿಟ್ಟುಕೊಟ್ಟರು.
ಅಲ್ಲಿ ಪಾಂಡೋಬಾ ಮತ್ತು ಸಂಗಬಸಪ್ಪನವರು ಮಲ್ಲಿಕಾರ್ಜುನರಿಗೆ ಪದಗಳನ್ನು ಕಲಿಸುತ್ತಿದ್ದರು. ಹಾಗೆಯೇ ಬಾಯಿಪಾಠ ಮಾಡಿದ ಹಾಡುಗಳ ಮೂಲಕ ಶ್ರೋತೃಗಳ ಹೃದಯ ಸ್ಪರ್ಶಿಸುವ ಹದವನ್ನು ಅರಿತುಕೊಂಡರು. ದಿನ ಬೆಳಗಾದರೆ ಅದೇ ಅದೇ ಹಾಡುಗಳನ್ನೇ ಹಾಡಬೇಕಾಗುತ್ತಿತ್ತು ನಿಜ, ಆದರೆ ಯಾವ ಹಾಡಿನಲ್ಲೂ ಯಾಂತ್ರಿಕತೆಯಾಗಲೀ ಏಕತಾನತೆಯಾಗಲೀ ಬರಕೂಡದು. ಪ್ರತಿಯೊಂದು ಹಾಡೂ ಆಗತಾನೇ ಅರಳಿದ ಹೂವಿನಂತೆ ಸೌರಭ ಸೂಸುವಂತಾಗಬೇಕೆಂದು ಎಂದು ಇವರಿಗೆ ಒಳಗೊಳಗೇ ಅನ್ನಿಸುತ್ತಿತ್ತು. ಹೀಗೆ ಎಳೆತನದಲ್ಲಿಯೇ ಇವರ ಮೇಲಾದ ಸಂಸ್ಕಾರಗಳು ಹಾಗೂ ರಂಗಭೂಮಿಯ ಮೇಲೆ ಕಲಿತ ಪಾಠಗಳು ಇವರೊಳಗಿನ ಕಲಾಪ್ರೇಮಕ್ಕೆ ಸಾಣೆ ಹಿಡಿಯಲು ನೆರವಾದವು.
ಒಮ್ಮೆ ಇವರ ಕಂಪನಿ ಬಾಗಲಕೋಟೆಯಲ್ಲಿರುವಾಗ ಶ್ರೀ ಶಿವಬಸವಸ್ವಾಮಿಗಳ ಜೊತೆ ಪಾಂಡೋಬಾ ಮಾಸ್ತರರ ಗುರುಗಳಾದ ನೀಲಕಂಠಬುಬಾ ಮೀರಜಕರ್ ಅವರು “ನಿಮ್ಮ ಕಂಪನಿಯೊಳಗೆ ಒಬ್ಬ ಹುಡಗ ಪಸಂದಾಗಿ ಹಾಡ್ತಾನಂತಲ್ಲ? ಅಂವ ಎಲ್ಲಿದ್ದಾನೆ?” ಎಂದು ಮಾಸ್ತರರನ್ನು ಕೇಳಿದರಂತೆ. ಅವರ ಮುಂದೆ ಮಲ್ಲಿಕಾರ್ಜುನ ಮನಸೂರರು ಹಾಡಿದರು. “ಈ ಹುಡುಗನನ್ನು ನನ್ನ ಕಡೆಗೆ ಕೊಟ್ಟುಬಿಡ್ರಿ ಒಬ್ಬ ಒಳ್ಳೆಯ ಸಂಗೀತಗಾರನನ್ನು ತಯಾರಿಸುವೆ. ಇವನು ನಾಟಕ ಕಂಪನಿಯಲ್ಲಿ ಇದ್ದು ತನ್ನ ಪ್ರತಿಭೆಯನ್ನು ಹದಗೆಡಿಸಬಾರದು” ಎಂದರು. ಬುವಾರೊಡನೆ ಮೀರಜದ ದಾರಿ ಹಿಡಿದುದೇ ಮಲ್ಲಿಕಾರ್ಜುನ ಮನಸೂರರ ರಸಯಾತ್ರೆಯ ಮಹತ್ವದ ಹಂತ.
ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಗುರುಗಳು ಮನಸೂರರಿಗೆ ಸ್ವರಜ್ಞಾನವನ್ನು ಮಾಡಿಕೊಡುತ್ತಿದ್ದರು. ತಂಬೂರಿಯನ್ನು ಶ್ರುತಿಗೂಡಿಸಿ ಮೊದಲು ಕೆಲವು ಹೊತ್ತು ಷಡ್ಜವನ್ನು ತುಂಬಿಸುತ್ತಿದ್ದರು. ಯಾವುದಾದರೂ ಸ್ವರ ಖಚಿತವಾಗಿ ತಾಗದಿದ್ದರೆ ಗುರುಗಳು ಇವರಿಗೆ ಷಡ್ಜವನ್ನು ಹಾಡಲು ಹೇಳಿ, ತಿರುಗಿ ತಪ್ಪಿದ ಸ್ವರ ಹಚ್ಚಲಿಕ್ಕೆ ಹೇಳಿದಾಗ ಆ ಸ್ವರವೂ ನಿಷ್ಕಳಂಕ ಹಾಗೂ ಖಚಿತವಾಗಿ ತಾಗುತ್ತಿತ್ತು. ಕೆಲವು ಕಾಲ ಗುರುಗಳ ಸಾನಿಧ್ಯದಲ್ಲಿ ಈ ತರಹ ಸಾಧನೆಯನ್ನು ಮಾಡುತ್ತಿದ್ದಾಗ ಇವರಿಗೆ ಎಷ್ಟೋ ಮಹತ್ವದ ಸಂಗತಿಗಳು ಹೊಳೆದವು. ಎಲ್ಲ ವಿಷಯಗಳನ್ನು ನೇರವಾಗಿ ಹೇಳದೆ ಶಿಷ್ಯನಿಗೆ ವಿಚಾರ ಮಾಡಿ ತಂತಾನೆ ಕಂಡುಹಿಡಿಯಲು ಪ್ರೇರೇಪಿಸುವುದು ತಜ್ಞನಾದ ಗುರುವಿನ ಲಕ್ಷಣ.
ನಾಟಕದಲ್ಲಿ ಹಾರ್ಮೋನಿಯಂ ಪಿಟೀಲುಗಳೊಂದಿಗೆ ಮಾತ್ರ ಹಾಡಿ ರೂಢಿಯಿದ್ದ ಮಲ್ಲಿಕಾರ್ಜುನ ಮನಸೂರರಿಗೆ ತಂಬೂರಿಯ ಮಹತಿಯು ತಿಳಿಯಿತು. ಗುರುಗಳು ಮಲ್ಲಿಕಾರ್ಜುನ ಮನಸೂರರಿಗೆ ಪ್ರಥಮ ಕಲಿಸಿದ್ದು ಭೈರವ ರಾಗ. ಹಲವಾರು ರಾಗಗಳಲ್ಲಿ ಛೋಟಾಖ್ಯಾಲ ಕಲಿಸಿದ ನಂತರ ಕ್ರಮೇಣ ‘ಬಡಾಖ್ಯಾಲ’ವನ್ನು ಕಲಿಸಿದರು. ಅದರಲ್ಲಿ ತಾಲದೊಂದಿಗೆ ಹೇಗೆ ರಾಗದ ಬೆಳವಣಿಗೆಯನ್ನು ಮಾಡಬೇಕೆಂಬುದನ್ನು ಕಲಿಸಿದರು. ಆರು ವರ್ಷಗಳಲ್ಲಿ ಬಿಹಾಗ, ಮಾಲಕಂಸ, ಭೂಪ, ಕಾಮೋದ, ತೋಡಿ, ದರಬಾರಿ, ಯಮನ, ಕೇದಾರ, ಪೂರಿಯಾ, ಮಾರವಾ, ಬಿಲಾವಲ ಲಲಿತ, ಇತ್ಯಾದಿ ನಲ್ವತ್ತು ಐವತ್ತು ರಾಗಗಳನ್ನು ವಿಸ್ತಾರವಾಗಿ ಹಾಡಲು ಮಲ್ಲಿಕಾರ್ಜುನ ಮನಸೂರರು ಸಮರ್ಥರಾದರು.
ಬೇರೆ ಬೇರೆ ರಾಗಗಳಲ್ಲಿ ಹಲವಾರು ‘ಅಸ್ಥಾಯಿ’ ಗಳನ್ನು ಕಲಿಯುವಾಗ ಆ ರಾಗಗಳ ಸುಮಧುರವಾದ ಸ್ವರರೇಖೆಗಳು, ಸೌಂದರ್ಯಸ್ಥಳಗಳು ಮನಸ್ಸಿನಲ್ಲಿ ಮೂಡಿದ್ದಲ್ಲದೆ ‘ಗಮಕ’, ‘ಮೀಂಡ’, ‘ಖಟಕಾ’ ಆದಿ ಗಾನಕ್ರಿಯೆಗಳು ಇವರಿಗೆ ಕಂಠವಾಗುತ್ತಿದ್ದವು.
ಮಲ್ಲಿಕಾರ್ಜುನ ಮನಸೂರರು ಮೀರಜದಲ್ಲಿ ಕಲಿಯುತ್ತಿರುವಾಗ ಒಮ್ಮೆ ಉಸ್ತಾದ್ ಕರೀಂಖಾನರು ಮಿರಾ ಸಾಹೇಬರ ದರ್ಗಾದ ಹತ್ತಿರ ಒಂದು ಮರದಡಿಯಲ್ಲಿ ಕುಳಿತು ತೋಡಿರಾಗವನ್ನು ಹಾಡುತ್ತಿದ್ದರು. ಅವರ ಹಾಡಿನಲ್ಲಿ ಅಪೂರ್ವವಾದ ಭಾವಪರವಶತೆ ಹಾಗೂ ಮಧುರ ವೇದನೆಯಿದ್ದು ಕೇಳುವವರನ್ನು ಮುಗ್ಧಗೊಳಿಸುವ ಶಕ್ತಿಯಿತ್ತು. ಅವರ ಸಂಗೀತವನ್ನು ಕೇಳಿದಾಗ ಇಡೀ ಮಾನವ ಕುಲವನ್ನು ಪೀಡಿಸುವ ನೋವಿನುಂದುಂಟಾದ ಮರುಕವೇ ಅವರ ಹಾಡಿನಲ್ಲಿ ಹುದುಗಿತ್ತೆಂದು ಮನಸೂರರಿಗೆ ಅನ್ನಿಸುತ್ತಿತ್ತಂತೆ.
ಗುರುಕುಲದಲ್ಲಿ ಸಂಗೀತ ವ್ಯಾಸಂಗ ಮಾಡುತ್ತಿರುವ ದಿನಗಳಲ್ಲಿ ಇವರು ಕೇಳಿದ ಸಾಮ್ರಾಟ ಅಲ್ಲಾದಿಯಾ ಖಾನ್ ಸಾಹೇಬರು ಹಾಡಿದ ‘ಮೆಹಫಿಲ’ ಇವರ ಎಳೆಯ ಮನಸ್ಸಿನ ಮೇಲೆ ವಿಲಕ್ಷಣವಾದ ಪ್ರಭಾವ ಬೀರಿತು. ಅಲ್ಲಾದಿಯಾಖಾನ್ ಸಾಹೇಬರ ಹಾಡುಗಾರಿಕೆಯನ್ನು ಕೇಳಿದಾಗ, ಇವರ ಮನಸ್ಸನ್ನು ಸೆಳೆದದ್ದು ಅದರಲ್ಲಿಯ ಬುದ್ಧಿಯ ಪ್ರಖರತೆ, ತಂತ್ರದ ಸಂಕೀರ್ಣತೆ ಮತ್ತು ಸೃಜನಶೀಲತೆಯ ನಿತ್ಯ ನವೋನ್ಮೇಷ. ಅದನ್ನು ಕೇಳಿದ ಮೇಲೆ ಇವರಿಗೂ ಹಾಗೆಯೇ ಹಾಡಬೇಕೆಂಬ ಆಸೆಯು ಅವರ ಮನಸ್ಸಿನಲ್ಲಿ ಅಂಕುರಿಸಿತು.
ಮನಸೂರರಿಗೆ ಸುಮಾರು ಹದಿನಾರು ವರ್ಷ ತುಂಬಿದಾಗ ಅವರ ಧ್ವನಿ ಒಡೆಯಿತು. ಎರಡು ಮೂರು ತಿಂಗಳು ಧ್ವನಿಯ ಈ ಪಾಡಿನಲ್ಲಿ ಅದನ್ನು ಹೆಚ್ಚು ದಣಿಸದೆ ಅವರು ಪದೇ ಪದೇ ಚೀಜುಗಳ ಪುನರಾವೃತ್ತಿಯನ್ನು ಮಾಡುವುದರಲ್ಲಿ ಕಳೆದರು. ಆಮೇಲೆ ಎಂದಿಲ್ಲದ ರಭಸದಿಂದ ರಿಯಾಜ್ ಮಾಡಲಾರಂಭಿಸಿದರು. ರಾತ್ರಿ 9 ಗಂಟೆಗೆ ಆರಂಭಿಸಿದ ರಿಯಾಜು ಬೆಳಿಗ್ಗೆ 6 ಗಂಟೆಯವರೆಗೂ ನಡೆಯುತ್ತಿತ್ತು. ಮೂರು ವರ್ಷಗಳಲ್ಲಿ ಮೆಹನತ್ತಿನ ಮೂಲಕ ಅವರ ಧ್ವನಿಯಲ್ಲಿ ಸ್ಥಿರತೆ, ಕಸುವು ಮತ್ತು ಲವಣಿಕತೆ ಒಳಗೊಂಡು ಅದಕ್ಕೊಂದು ಹೊಸ ಮೆರುಗು ಬಂದಂತೆ ಭಾಸವಾಯಿತಂತೆ.
ಮಲ್ಲಿಕಾರ್ಜುನ ಮನಸೂರರು ಸಂಗೀತ ಸಾಧನೆಯನ್ನು ಮಾಡುತ್ತಿರುವ ಸಮಯದಲ್ಲಿಯೆ ಧಾರವಾಡ ಹಾಗೂ ಈ ನಗರಗಳ ಸುತ್ತುಮುತ್ತಲಿನ ಪ್ರದೇಶದಲ್ಲಿ ಉತ್ತರ ಹಿಂದೂಸ್ಥಾನಿ ಸಂಗೀತದ ಪ್ರಚಾರಕ್ಕೆ ಅನುಕೂಲಕರವಾದ ವಾತಾವರಣವೊಂದು ಸಿದ್ಧವಾಗಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂಸ್ಥಾನಿ ಸಂಗೀತದಲ್ಲಿ ಅಭಿರುಚಿಯುಳ್ಳ ಕೆಲವು ಜನರು ಅಲ್ಲಿ ವಾಸವಾಗಿದ್ದರು. ಇನ್ನು ಕೆಲವರು ಪುಣೆಯಲ್ಲಿ ಕಾಲೇಜು ಕಲಿಯುತ್ತಿರುವಾಗ ಒಳ್ಳೆಯ ಸಂಗೀತವನ್ನು ಕೇಳಿ ಕೇಳಿ ಸಂಸ್ಕಾರಹೊಂದಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಕಲಾವಿದರು, ಅವರ ಶಿಷ್ಯರು ಹಾಗೂ ಕಲಾ ಪೋಷಕರು ಕೂಡಿ ಮಾಡಿದ ಸಂಗೀತ ಪ್ರಚಾರದ ಮೂಲಕ ಈ ಭಾಗದಲ್ಲಿ ಒಂದು ಚಿಕ್ಕದಾದ ಉತ್ತಮ ಶ್ರೋತೃವರ್ಗವು ನಿರ್ಮಾಣವಾಗಿತ್ತು.
ಈ ಮಧ್ಯದಲ್ಲಿ ವಾಣೀವಿಲಾಸ ಕಂಪನಿಯು ಅಗ್ನಿಗೆ ಆಹುತಿಯಾಗಿ ಮಲ್ಲಿಕಾರ್ಜುನ ಮನಸೂರರ ನಾಟ್ಯಜೀವನಕ್ಕೆ ತೆರೆಬಿದ್ದ ನಂತರ ಇವರೆದುರು ಹೊಸದೊಂದು ದಾರಿ ತೆರೆಯಿತು. ಇವರ ಆತ್ಮೀಯ ಗೆಳೆಯರಾಗಿದ್ದ ಬಳ್ಳಾರಿ ವೀರಭದ್ರಪ್ಪ ಈಶ್ವರಪ್ಪಾ ಬೆಂಡಿಗೇರಿ ಮುಂತಾದವರು ಕೂಡಿ ‘ಹಿಸ್ ಮಾಸ್ಟರ್ಸ್ ವಾಯ್ಸ್’ ಕಂಪೆನಿಯ ಮೂಲಕ ಇವರ ಹಾಡಿನ ರಿಕಾರ್ಡ್ ಮಾಡಿಸುವ ಉದ್ದೇಶದಿಂದ ಆ ಕಂಪನಿಯ ಮುಖ್ಯಸ್ಥರಾದ ಶ್ರೀ ರೂಪಜಿ ಎಂಬುವರನ್ನು ಮುಂಬಯಿಯಿಂದ ಗದುಗಿಗೆ ಕರೆಯಿಸಿ ಇವರ ಸಂಗೀತದ ಏರ್ಪಾಟು ಮಾಡಿದರು. 1933ರಲ್ಲಿ ಮುಂಬಯಿಯಲ್ಲಿ ಇವರ ಧ್ವನಿಮುದ್ರಿಕೆಯು ಬಿಡುಗಡೆಯಾಗಿ ಅದು ಮಹಾರಾಷ್ಟ್ರದ ಮರ್ಮಜ್ಞ ರಸಿಕರ ಮೆಚ್ಚುಗೆಯನ್ನು ಪಡೆಯಿತು. ಇದರ ಪರಿಣಾಮವಾಗಿ ಇವರಗೆ ಆಕಾಶವಾಣಿಯ ಬೇರೆ ಬೇರೆ ಕೇಂದ್ರಗಳಿಂದಲೂ, ಸಂಗೀತ ಸಭೆಗಳಿಂದಲೂ ಆಮಂತ್ರಣಗಳು ಬರತೊಡಗಿದವು.
1935ರ ಆರಂಭದಲ್ಲಿ ಮಲ್ಲಿಕಾರ್ಜುನ ಮನಸೂರರ ಜೀವನದಲ್ಲಿ ಮಹತ್ವದ ಘಟನೆಯೊಂದು ಒದಗಿತು. ಒಂದು ಸಾಯಂಕಾಲ ಇವರು ‘ಸಂತ ತುಕಾರಾಮ’ ಖ್ಯಾತಿಯ ವಿಷ್ಣುಪಂತ ಪಾಗನಿಸರ ಅಂಗಡಿಯಲ್ಲಿ ಕುಳಿತು ಅವರೊಡನೆ ಮಾತನಾಡುತ್ತಿರುವಾಗ ಆಕಸ್ಮಿಕವಾಗಿ ಮಂಜೀಖಾನ ಸಾಹೇಬರು ಅಲ್ಲಿಗೆ ಬಂದರು. ಇವರ ಪರಿಚಯವನ್ನು ಖಾನ್ ಸಾಹೇಬರಿಗೆ ಮಾಡಿಕೊಡುತ್ತಾ ಪಾಗನಿಸರು “ಕಲಿಯುವ ಪಿಪಾಸೆಯಿಂದ ಬಳಲುತ್ತಿದ್ದಾನೆ ತಮ್ಮಂಥವರು ಇವನ ಶಿರದ ಮೇಲೆ ವರದ ಹಸ್ತವನ್ನಿಟ್ಟು ಇವನಿಗೆ ವಿದ್ಯೆಯನ್ನು ಕೊಟ್ಟರೆ ಇವನು ಲಾಜವಾಬ ಗಾಯಕನಾಗಬಲ್ಲ” ಎಂದು ನುಡಿದರು.
ಮಂಜೀಖಾನರು ದೀಕ್ಷಾ ಸಮಾರಂಭದ ಅಂಗವಾಗಿ ಇವರಿಗೆ ಭೀಮಪಲಾಸ ರಾಗವನ್ನು ಹಾಡಿ ಕಲಿಸಲಾರಂಭಿಸಿದರು. ಮಂಜೀಖಾನರ ಬಳಿ ರಾಗದ ಸ್ವರಗಳನ್ನು ಹಾಡುವುದು ಮತ್ತು ಸ್ವರಗಳಲ್ಲಿ ರಾಗವನ್ನರಳಿಸುವುದು ಇವುಗಳಲ್ಲಿಯ ನವಿರಾದ ಅಂತರ ಮನಸೂರರಿಗೆ ವಿಶದವಾಯಿತು. ಅವರಲ್ಲಿ "ಮಲ್ಲಿಕಾರ್ಜುನನ ಪುನರ್ಜನ್ಮ ಆಯಿತೆಂದರೆ ಅತಿಶಯೋಕ್ತಿಯಲ್ಲ" ಎಂದು ಮನಸೂರರು ನುಡಿಯುತ್ತಿದ್ದರು. ಇವರಿಗೆ ಸಂಗೀತದ ಹೊರತು ಇನ್ಯಾವುದೂ ಬೇಡವೆಂದೆನಿಸಿತು. ಖಾನ್ ಸಾಹೇಬರಿಂದ ಇವರಿಗೆ ಶಿವಮತ್ ಭೈರವ, ಲಲಿತ್, ದೇಶ್ ಕಾರ್, ನಟಬಿಹಾಗ ಮುಂತಾದ ರಾಗಗಳಲ್ಲಿ ತಾಲೀಮು ದೊರಕಿತು. ಎಷ್ಟೋ ಬಾರಿ ಬಡೇಖಾನ್ ಸಾಹೇಬರು ಬರುತ್ತಿದ್ದು, ‘ವಾಹ, ವಾಹ, ಜೀತೆ ರಹೋ’ ಎಂದು ಉದ್ಗರಿಸಿ ತಮ್ಮ ಪ್ರಸನ್ನತೆಯನ್ನು ವ್ಯಕ್ತಪಡಿಸುತ್ತಿದ್ದರು.
ಮುಂದೆ ಮನಸೂರರು ಇನ್ನೂ ಶೇಷವಾಗಿ ಉಳಿದಿರುವ ಜಯಪುರ ಘರಾಣೆಯ ಗಾಯಕಿಯನ್ನು ಪೂರ್ತಿಯಾಗಿ ಗ್ರಹಿಸಬೇಕೆಂಬ ಹಂಬಲವು ತೀವ್ರವಾಗಿ ಮುಂಬೈಗೆ ಹೋದರು. ಪರಮಗುರು ಅಲ್ಲಾದಿಯಾಖಾನ್ ಸಾಹೇಬರನ್ನು ಭೇಟಿಯಾಗಿ ”ಇನ್ನು ನನ್ನ ಮುಂದಿನ ಗತಿಯೇನು?” ಎಂದು ಕೇಳಿದಾಗ “ಭುರ್ಜಿಖಾನ್ ಹತ್ತಿರ ಕಲಿ. ಏನೂ ಚಿಂತೆ ಮಾಡಬೇಡ” ಎಂದರು. ಅವರು ಕೊಲ್ಹಾಪುರದಲ್ಲಿ ಇರಹತ್ತಿದಾಗ ಅಲ್ಲಿಗೆ ಹೋಗಿ ಕಲಿಯಲಾರಂಭಿಸಿದರು.
ಮನಸೂರರು ತಮ್ಮ ಮಹಾನ್ ಗುರುಗಳ ಜೊತೆ ಕಛೇರಿಯಲ್ಲಿ ಭಾಗವಹಿಸಿದರು. ತಾಲದಲ್ಲಿಯ ಬಂದಿಶ್ ಮತ್ತು ಉಪಜ ಇವು ಇವರ ನಿರಂತರ ಚಿಂತನೆಯ ವಿಷಯವಾಗಿದ್ದವು. ಒಂದು ದಿನ ಧಾರವಾಡದ ಹಲಗೇರಿಯ ಕೆರೆಯ ಹತ್ತಿರ ಹಾದುಹೋಗುವಾಗ ಎಂದಿನಂತೆ ಮೆಲುದನಿಯಲ್ಲಿ ಹಾಡುತ್ತ ನಡೆದಿದ್ದರು. ತಾಲದ ಆವರ್ತನದಲ್ಲಿ ಹಾಡುತ್ತಿರುವಾಗ ‘ಉಪಜ’ಗಳು ಲಯದ ವಿವಿಧ ಗತಿಗಳಲ್ಲಿ ರೂಪುಗೊಂಡು, ಇಡೀ ಇಡೀ ಆವರ್ತನೆಯು ತುಂಬ ಸಹಜವಾಗಿ ಚಲಿಸುತ್ತ ಅದೇ ಓಟದಲ್ಲಿ ಮುಖಡೆಯಿಂದೊಡಗೂಡಿ ಆಕರ್ಷಕವಾದ ರೀತಿಯಲ್ಲಿ ಸಮ್ಮಿಲನದಲ್ಲಿ ಕೊನೆಗೊಂಡವು. ಇವರಿಗಾದ ಆನಂದ ಅಷ್ಟಿಷ್ಟಲ್ಲ.
ಮನಸೂರರಿಗೆ ವಚನ ಹಾಡಲು ಪ್ರೇರಣೆಯಿತ್ತವರು ಅವರ ಆತ್ಮೀಯ ಸ್ನೇಹಿತರಾದ ಅ. ನ. ಕೃಷ್ಣರಾಯರು ಮತ್ತು ಬಸವನಾಳ ಮಾಸ್ತರರು. ವಚನವನ್ನು ಕಾವ್ಯವಾಚನದ ರೀತಿಯಲ್ಲಿ ಹೇಳಬೇಕೆ ಅಥವಾ ತಾಲಕ್ಕೆ ಜೋಡಿಸಿ ಹಾಡಬೇಕೆ ಎಂಬ ವಾದವು ನಡೆಯುತ್ತಿದ್ದಾಗ, ಮನಸೂರರು ಅವುಗಳ ಅರ್ಥ ಹಾನಿಯಾಗಗೊಡದೆ ರಾಗ ತಾಳಗಳಲ್ಲಿ ಹಾಡಲಾರಂಭಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1976ರಲ್ಲಿ ಸಂಗೀತದ ಸ್ನಾತಕೋತ್ತರ ವಿಭಾಗ ಆರಂಭಿಸಲಾಯಿತು. ಮಲ್ಲಿಕಾರ್ಜುನ ಮನಸೂರರನ್ನು ಈ ವಿಭಾಗದ ಪ್ರಪ್ರಥಮ ಗೌರವ ನಿರ್ದೇಶಕ ಎಂದು ನೇಮಿಸಲಾಯಿತು.
ಮಲ್ಲಿಕಾರ್ಜುನ ಮನಸೂರರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡಮಿ, ಹಲವು ಡಾಕ್ಟೊರೇಟ್ ಮುಂತಾದ ಅನೇಕ ಗೌರವಗಳು ಅರಸಿ ಬಂದಿದ್ದವು.
ಮೇ 1991ರಲ್ಲಿ ಮಲ್ಲಿಕಾರ್ಜುನ ಮನಸೂರರಿಗೆ ಮೂತ್ರಪಿಂಡದ ತೊದರೆ ಪ್ರಾರಂಭವಾಯಿತು. ಬೆಂಗಳೂರು ಕಿಡ್ನಿ ಫೌಂಡೇಶನ್ನಿನ ಡಾ. ತಲವಾಲ್ಕರರು ಅವರನ್ನು ನೋಡಿಕೊಳ್ಳುತ್ತಿದ್ದರು. ರಕ್ತ ಶುದ್ಧಿಗೊಳಿಸಲು ಆವರ ಧಮನಿಗಳ ಮೂಲಕ ರಕ್ತವು ಹೋಗುತ್ತಿದ್ದಾಗ, “ಮಗನೇ ಭೈರವಿ ರಾಗದ ದುಃಖ ದೂರ ಕರಿಯೇ ಎಂಬ ಬಂದಿಶ್ ಹಾಡು” ಎಂದರು ಮಗನಿಗೆ. ಅದನ್ನು ಹಾಡಿದಾಗ ಅದನ್ನು ತಿದ್ದಿ ಸರಿಮಾಡಿ ಮಗನನ್ನು ಇನ್ನೂ ಹಾಡುವಂತೆ ಪ್ರೋತ್ಸಾಹಿಸಿದರು. ಅವರ ಜೀವನಾಡಿಯಲ್ಲಿ ಸಂಗೀತವೇ ಹರಿಯುತ್ತಿತ್ತು. ವಾಸಿಯಾದ ಮೇಲೂ ತಾವು ಸರಿಹೊಗಿದ್ದೇನೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಲು ಸಂಗೀತವೇ ಅವರಿಗೆ ಒರೆಗಲ್ಲಾಗಿತ್ತು. ತಂಬೂರಿಯನ್ನು ತರಿಸಿಕೊಂಡು ಆಸ್ಪತ್ರೆಯಲ್ಲಿ ಹಾಡಿ ಸಮಾಧಾನವಾದ ನಂತರ ಮನೆಗೆ ಹೋದರು. ವಾಸಿಯಾದ ನಂತರ ಮೊದಲಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಇತರರಿಗೆ ಗಾಬರಿ ಹುಟ್ಟಿಸುವಂತೆ ದೇಶದಾದ್ಯಂತ ಹಲವಾರು ಮೆಹಫಿಲ್ಲುಗಳನ್ನು ನೀಡಿದರು. 1992ರಲ್ಲಿ ಅವರ ಜೀವನದುದ್ದಕ್ಕೂ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿ, ಉತ್ಕೃಷ್ಟ ಸಂಗೀತವನ್ನು ಸೃಷ್ಟಿಸಿದ್ದ ಶ್ವಾಸಕೋಶಕ್ಕೆ ಕ್ಯಾನ್ಸರ್ ಬಂದಿತ್ತು. ಅವರಿಗೆ ಆ ವಿಷಯ ತಿಳಿಸಿರಲಿಲ್ಲ. ಅವರ ಸಾವಿಗೆ ಇನ್ನು 25 ದಿನಗಳಿದ್ದಾಗ ಮುರುಘಾಮಠದಲ್ಲಿ ವಾರ್ಷಿಕ ಸಂಗೀತ ಸೇವೆಯನ್ನು ಮಾಡುವ ಆಸೆಯನ್ನು ವ್ಯಕ್ತಪಡಿಸಿದರು. ಆಗಸ್ಟ್ 17. 1992ರಂದು ಮನೆಯವರು ಇವರನ್ನು ಅಲ್ಲಿಗೆ ಕರೆದೊಯ್ದರು. 'ಹೇಮನಟ’ ರಾಗದಲ್ಲಿ ತುಂಬಾ ಅರ್ಥಪೂರ್ಣವಾದ “ತುಮ್ ಬಿನ್ ಮೈಕೊ ಕಲನ ಪರತ ಹೈ, ಬೀತ್ ಗಯೆ” ಇವುಗಳನ್ನು ಹಾಡಿದರು. ಅದುವರೆಗೂ ಯಾರೂ ಕೇಳದಿದ್ದ ವಚನವೊಂದನ್ನು ಹಾಡಿ ತಮ್ಮ ಸೇವೆಯನ್ನು ಮುಗಿಸಿದರು. ಸೆಪ್ಟಂಬರ್ 12ರಂದು ಮಲ್ಲಿಕಾರ್ಜುನ ನಸೂರರು ತಮ್ಮ ಕೊನೆಯುಸಿರೆಳೆಯಲು ಪ್ರಾರಂಭಿಸಿದಾಗ ಮಗ ರಾಜಶೇಖರ ಮನಸೂರರು ಅವರ ತಲೆಯನ್ನು ತಮ್ಮ ಮಡಿಲಿನಲ್ಲಿ ಇರಿಸಿಕೊಂಡು ತಂಬೂರಿಯನ್ನು ಮೀಟಲಾರಂಭಿಸಿದರು. ಅದನ್ನು ಕೇಳುತ್ತಲೇ ಮಲ್ಲಿಕಾರ್ಜುನ ಮನಸೂರರು ತುಂಬಾ ಶಾಂತವಾಗಿ ತಮ್ಮ ಸಂಗೀತ ರಸಯಾತ್ರೆಯನ್ನು ಮುಗಿಸಿದರು”
ಈ ಮಹಾನ್ ಸಂಗೀತ ತಪಸ್ವಿ ಡಾ. ಮಲ್ಲಿಕಾರ್ಜುನ ಮನ್ಸೂರ್ ಚೇತನಕ್ಕೆ ನಮ್ಮ ನಮನಗಳು.
On the birth anniversary of great musician Dr Mallikarjun Manasur, Mansur, Mallikarjuna
ಕಾಮೆಂಟ್ಗಳು