ವಿಜಯಶಂಕರ್
ಎಸ್. ಆರ್. ವಿಜಯಶಂಕರ್
ಇಂದು ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವಿಮರ್ಶಕ, ಪ್ರಖ್ಯಾತ ಶಿಕ್ಷಕ, ಪತ್ರಕರ್ತ, ಆಧುನಿಕ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಹಾಗೂ ನನ್ನ ಆತ್ಮೀಯ ಗೆಳೆಯರಾದ ಎಸ್. ಆರ್. ವಿಜಯಶಂಕರ ಅವರ ಜನ್ಮದಿನ.
ವಿಜಯಶಂಕರ್ 1957ರ ಡಿಸೆಂಬರ್ 21ರಂದು ಜನಿಸಿದರು.
ಎಚ್ ಎಮ್ ಟಿ ಸಂಸ್ಥೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ವಿಜಯಶಂಕರ್ ನಮ್ಮ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಿದ್ದವರು. ಅಲ್ಲಿನ ‘ಕನ್ನಡ ಸಂಪದ’ದಲ್ಲಿ ನಾವುಗಳು ಹುರುಪಿನಿಂದ ಓಡಾಡುವ ಯುವ ಚಿಲುಮೆಗಳಾಗಿದ್ದೆವೇ ವಿನಃ, ನನ್ನಂತಹವರಿಗೆ ಸಾಹಿತ್ಯಶಕ್ತಿಯ ಬುನಾದಿ ಇರಲಿಲ್ಲ. ಅದನ್ನು ತಮ್ಮ ಮಾರ್ಗದರ್ಶನದ ಮೂಲಕ ನಮ್ಮ ‘ಕನ್ನಡ ಸಂಪದ’ದಲ್ಲಿ ಸಮರ್ಪಕವಾಗಿ ತುಂಬಿದವರು ವಿಜಯಶಂಕರ್. ನಮ್ಮ ಕನ್ನಡ ಸಂಪದದಲ್ಲಿ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಕುರಿತು ಅವರು ಅಂದು ಹೇಳಿದ ಒಂದು ಮಾತು, ನನ್ನ ಮತ್ತು ನಾನು ಕಾರ್ಯದರ್ಶಿಯಾಗಿದ್ದ ‘ಕನ್ನಡ ಸಂಪದ’ದ ದೃಷ್ಠಿಕೋನದಲ್ಲಿ ಒಂದು ವಿಶಿಷ್ಟ ಬದಲಾವಣೆಯನ್ನು ಕಾಣುವಂತೆ ಮಾಡಿತು. “ನಾವು ಹಬ್ಬ ಸಮಾರಂಭಗಳ celebrationಗಳಿಗೆ ಕಾದುಕೊಂಡು ಕನ್ನಡದ ಕೆಲಸವನ್ನು ನಡೆಸಬೇಕಿಲ್ಲ. ಯಾವುದೇ celebrationಗಳಿಲ್ಲದೆ ಸಹಾ ನಾವು ಅತ್ಯುತ್ತಮ ಕೆಲಸಗಳನ್ನು ಮಾಡಬಹುದು” ಎಂದು ಹೇಳಿದ ಅವರ ಮಾತು ನನ್ನಲ್ಲಿ ಬದಲಾವಣೆ ತಂದಿತ್ತು. ಮುಂದಿನ ದಿನಗಳಲ್ಲಿ ನಾನು ಅಂತಹ ಕೆಲಸಗಳಲ್ಲಿ ಹೆಚ್ಚು ಪ್ರವೃತ್ತನಾದೆ.
ಮುಂದೆ ವಿಜಯಶಂಕರರು ನಾವೆಲ್, ಸಿಸ್ಕೋ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಂತರದಲ್ಲಿ ಇಂಟೆಲ್ ಸಂಸ್ಥೆಯ ಅಂತರರಾಷ್ಟ್ರೀಯ ಮಟ್ಟದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದವರು. ಇತ್ತೀಚಿನ ವರ್ಷದಲ್ಲಿ ಐಚ್ಛಿಕವಾಗಿ ಆ ಸೇವೆಯನ್ನು ಸಲಹೆ ಸ್ವರೂಪಕ್ಕೆ ನಿಯಮಿತಗಳಿಸಿಕೊಂಡಿದ್ದಾರೆ. ತಮ್ಮ ಹುದ್ದೆಯ ನಿಮಿತ್ತವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ವಿಶ್ವದೆಲ್ಲೆಡೆ ನಿರಂತರವಾಗಿ ಚಲಿಸುವ ಕೆಲಸ ಅವರದ್ದಾಗಿತ್ತು. ಆದರೆ ಅವರ ಕನ್ನಡದ ಪ್ರೀತಿ, ಸಾಹಿತ್ಯದ ಆಸಕ್ತಿ ಒಂದಿನಿತೂ ಕುಂದಲಿಲ್ಲ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನೂ ಒಳಗೊಂಡಂತೆ ವಿವಿಧ ವೇದಿಕೆಗಳಲ್ಲಿ, ಅವರ ವೈವಿಧಯಮುಖಿ ಚಿಂತನೆಗಳು ಮತ್ತು ಸಾಹಿತ್ಯದ ವಿಮರ್ಶೆಗಳು ನಿರಂತರ ಬೆಳಕು ಕಾಣುತ್ತ ಬಂದಿವೆ. ‘ನೀನಾಸಂ’ ಸಾಹಿತ್ಯ ಶಿಬಿರಗಳು ಮತ್ತು ‘ನೀನಾಸಂ’ ಸಾಹಿತ್ಯ ಉತ್ಸವಗಳಲ್ಲಿ ಎಷ್ಟೋ ವರ್ಷಗಳಿಂದ ಅವರು ಪ್ರಮುಖ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಜಯಶಂಕರ್ ಅವರ ಪ್ರಕಟಿತ ಕೃತಿಗಳಲ್ಲಿ
ಮನೋಗತ (ವಿಮರ್ಶಾ ಲೇಖನಗಳು), ಒಳದನಿ (ಕಾವ್ಯ, ಕೃತಿ, ವಿಮರ್ಶೆ ಹಾಗೂ ಸಂಸ್ಕೃತಿ ಕುರಿತ ಬರಹಗಳು), ಒಡನಾಟ (ವ್ಯಕ್ತಿಚಿತ್ರಗಳು), ನಿಜಗುಣ (ವಿಮರ್ಶಾ ಸಂಕಲನ), ನಿಧಾನಶ್ರುತಿ ಮತ್ತು ಇತರ ಲೇಖನಗಳು (ಅಂಕಣ ಹಾಗೂ ವೈಚಾರಿಕ ಬರಹಗಳು), ನುಡಿಸಸಿ (ಸಾಹಿತ್ಯ, ಸಂಸ್ಕೃತಿ, ಸಮಾಜ ಕುರಿತ ಅಂಕಣ ಬರಹಗಳು), ಅಪ್ರಮೇಯ (ವಿಮರ್ಶಾ ಲೇಖನಗಳ ಸಂಗ್ರಹ),
ಕೆ. ವಿ. ತಿರುಮಲೇಶ್ (ಮೊನೋಗ್ರಾಫ್), ಅಕ್ಷರ ಚಿತ್ರಗಳು (ವ್ಯಕ್ತಿ ಚಿತ್ರಗಳು), ಕೀರ್ತಿನಾಥ ಕುರ್ತಕೋಟಿ (ಮೊನೋಗ್ರಾಫ್), ವಸುಧಾ ವಲಯ (ವಿಮರ್ಶೆ), ಆಪ್ತನೋಟ (ವ್ಯಕ್ತಿಚಿತ್ರಗಳು), ಅನವರತ (ಆಯ್ದ ವಿಮರ್ಶಾ ಲೇಖನಗಳ ಸಂಗ್ರಹ), ಹೂ ಬೆರಳು (ಸಾಂಸ್ಕೃತಿಕ ಬರಹಗಳು), ಎಚ್.ಎಸ್.ವಿ. ಕಾವ್ಯ ಸಾತತ್ಯ (ಕಾವ್ಯಾಧ್ಯಯನ), ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಬದುಕು ಬರಹ (ಸಮಗ್ರ ಅಧ್ಯಯನ), ಬೆಳುದಿಂಗಳ ನೋಡಾ (ವಿಮರ್ಶಾ ಪ್ರಬಂಧಗಳು), ನವ್ಯ ಸಾಹಿತ್ಯದಲ್ಲಿ ಜೀವನ ಮಾಲ್ಯಗಳು ( ವಿಷಯಾಧಾರಿತ ವಿಮರ್ಶೆ) ಸೇರಿವೆ.
ಇವರ ಸಂಪಾದಿತ ಕೃತಿಗಳಲ್ಲಿ ಪ್ರತಿಮಾ ಲೋಕ : ಗೋಪಾಲಕೃಷ್ಣ ಅಡಿಗರ ಮರು ಓದು; ಕೆ. ಸದಾಶಿವ ಅವರ ಕತೆಗಳ ವಾಚಿಕೆ; ಅನಂತಮೂರ್ತಿ ಸಾಹಿತ್ಯ ವಿಮರ್ಶೆ – (ಡಾ. ಯು.ಆರ್.ಅನಂತಮೂರ್ತಿ ಅವರು ಬರೆದ ಸಾಹಿತ್ಯ ವಿಮರ್ಶಾ ಲೇಖನಗಳ ಆಯ್ದ ಸಂಗ್ರಹ) ಮುಂತಾದವು ಸೇರಿವೆ.
ವಿಜಯಶಂಕರ್ ಬಂಟ್ವಾಳ ತಾಲ್ಲೂಕಿನ ಸರವು ಎಂಬ ಹಳ್ಳಿಯ ಅಡಿಕೆ ವ್ಯವಸಾಯದ ಕುಟುಂಬಕ್ಕೆ ಸೇರಿದವರು. ಅಂದಿನ ದಿನಗಳಲ್ಲಿ ಒಂದು ಟಾರ್ ರಸ್ತೆ ಕಾಣಬೇಕೆಂದರೆ ಹಲವಾರು ಮೈಲಿ ದೂರ ನಡೆಯಬೇಕಿದ್ದ ಹಳ್ಳಿ. ತಂದೆ ಸರವು ರಾಮ ಭಟ್ಟರು ಪದವಿ ಪಡೆದರೂ ವ್ಯವಸಾಯಕ್ಕೆ ನಿಂತವರು. ತಾಯಿ ರತ್ನವೇಣಿ. ಮನೆಯಲ್ಲಿದ್ದ ಅಪಾರ ಪುಸ್ತಕಗಳ ಸಂಗ್ರಹವನ್ನು ಜಾಲಾಡಿದ್ದರಿಂದ ಕನ್ನಡ ಚೆನ್ನಾಗಿ ಜೊತೆಗೂಡಿತ್ತು. ಶಾಲೆಯಲ್ಲಿ ಸಂಸ್ಕೃತ ಕಲಿತರು. ಹಾಗಾಗಿ ಕಾಲೇಜಿನಲ್ಲಿ ಇಂಗ್ಲಿಷ್ ಓದಿದರು. ಸುಬ್ಬರಾಯ ಚೊಕ್ಕಾಡಿ ಅವರು ಅವರ ಚಿಕ್ಕಪ್ಪನವರು. ಅವರ ಮೂಲಕ ಗೋಪಾಲಕೃಷ್ಣ ಅಡಿಗರು, ಕೆ.ವಿ. ಸುಬ್ಬಣ್ಣ ಇಂತಹ ಸಮುದಾಯ ಅವರಿಗೆ ಹತ್ತಿರವಾಯ್ತು. ಮೈಸೂರಿನ ಎಂ.ಎ ವ್ಯಾಸಂಗದಲ್ಲಿ ಯು. ಆರ್. ಅನಂತಮೂರ್ತಿ, ಜಿ. ಎಚ್. ನಾಯಕ್, ಪೋಲಂಕಿ ರಾಮಮೂರ್ತಿ, ಎಸ್. ಅನಂತನಾರಾಯಣ ಇವರುಗಳೆಲ್ಲ ಅವರ ಅಧ್ಯಾಪಕರಾಗಿದ್ದರು.
ಕಾಲೇಜಿನ ದಿನಗಳಲ್ಲೇ ವಿಜಯಶಂಕರ್ ಸ್ಟೂಡೆಂಟ್ಸ್ ಡೆಮೋಕ್ರಾಟಿಕ್ ಲೀಡರ್ ಆಗಿದ್ದರು. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಶಾಂತಿಭೂಷಣ ಅವರೊಂದಿಗಿದ್ದರು. ವಿಜಯಶಂಕರ್ ಅವರ ಮೇಲೆ ಮಾರ್ಕ್ಸ್ ಮತ್ತು ಲೋಹಿಯಾ ಪ್ರಭಾವ ಅಪಾರವಾಗಿದೆ.
ಮುಂದೆ ವಿಜಯಶಂಕರ್ ಅವರು ಹೈದರಾಬಾದಿನಲ್ಲಿ ಡಿಪ್ಲೋಮಾ ಇನ್ ಟೀಚಿಂಗ್ ಇಂಗ್ಲಿಷ್ ಮಾಡಿದ್ದರಿಂದ ಭಾಷೆಯ ಹಿಡಿತದಲ್ಲಿ ಉತ್ತಮ ನೆಲೆ ದೊರೆಯಿತು. ಬಿ.ಜಿ. ಎಲ್ ಸ್ವಾಮಿ, ವೆಂಕಟರಾಂ, ದೇವನೂರು ಮಹಾದೇವ ಅವರ ಸಹಚರ್ಯೆ ಕೂಡಾ ಅವರದಾಗಿತ್ತು.
ಮುಂದೆ ಎಲ್ ಎಲ್ ಬಿ ಮಾಡಿದರು. ಉಡುಪಿಯ ಕಾಲೇಜಿನಲ್ಲಿ ಅಧ್ಯಾಪಕರಾದರು. ಅನಂತರ ಬೆಂಗಳೂರಿಗೆ ಬಂದು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ಗಳಿಗೆ ವರದಿಗಾರರಾಗಿ ಕೆಲಸ ಮಾಡಿದರು. ಆನಂತರ ಬಂದದ್ದು ಸಂಸ್ಥೆಗಳ ಸಾರ್ವಜನಿಕ ಸಂಪರ್ಕದ ನೇತೃತ್ವ.
ಬೆಂಗಳೂರಿನಲ್ಲಿ ವೈ ಎನ್ ಕೆ ಮತ್ತು ಕೆ. ಸತ್ಯನಾರಾಯಣ ಅವರುಗಳು ಹತ್ತಿರವಾಗಿ ‘ಕನ್ನಡ ಪ್ರಭ’ದಲ್ಲಿ ಬರೆಯತೊಡಗಿದರು. ಈ ಬರವಣಿಗೆ ನಿಂತ ನೀರಾಗದೆ ನಿರಂತರವಾಗಿ ಹರಿದು ಸಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಅವರ ವೈಚಾರಿಕ ಅಂಕಣಗಳು ವಿಜಯವಾಣಿ ಪತ್ರಿಕೆಯಲ್ಲಿ ‘ನುಡಿಸಸಿ’ಯಾಗಿ ಕನ್ನಡ ಸಾಹಿತ್ಯ ಓದುಗಬಳಗದಲ್ಲಿ ಮೂಡಿಬಂದವು. ನಂತರದ್ದು ಮತ್ತೊಂದು ಪ್ರಸಿದ್ಧ ಅಂಕಣ 'ವಿಜಯ ಕರ್ನಾಟಕ'ದಲ್ಲಿನ 'ಹೂಬೆರಳು'. ಮುಂದೆ ಪ್ರಜಾವಾಣಿಯಲ್ಲಿ ಅವರ ಕೃತಿ ವಿಮರ್ಶೆಗಳು ಮೂಡಿಬಂದವು.
ವಿಜಯಶಂಕರ್ ಅವರ ಬಳಿ ಮಾತನಾಡುವುದೇ ಒಂದು ವಿಶಿಷ್ಟ ಅನುಭವ. ಅದೊಂದು ವಿಸ್ಮಯ ತರುವ ಲೋಕ. ಅವರ ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಪ್ರಸಕ್ತ ವಿಶ್ವ ವರ್ತಮಾನಗಳು, ವ್ಯಾಪಕ ಓದಿನ ಕನ್ನಡ ಸಾಹಿತ್ಯ, ವಿಶ್ವಸಾಹಿತ್ಯ, ವಿಶ್ವಮಟ್ಟದಲ್ಲಿ ವ್ಯಾಪಿಸಿದ್ದ ಅವರ ಹುದ್ದೆಯ ವಿವಿಧ ನೆಲೆಗಳು, ವಿವಿಧ ವೇದಿಕೆಗಳಲ್ಲಿನ ಅವರ ಅಭಿಪ್ರಾಯಗಳು, ಇವೆಲ್ಲ ಯಾವುದೂ ವಿಭಿನ್ನ ಅನಿಸದ ಒಂದು ಸಮತೋಲನ ಮತ್ತು ಇವೆಲ್ಲ ತಮ್ಮ ಬಳಿ ಇದ್ದೂ, ಕೇಳುಗನ ಮನದಲ್ಲಿ, ಕಣ್ಣುಗಳಲ್ಲಿ ಮತ್ತು ಆತನ ನಿಜನೆಲೆಯಲ್ಲಿ ಏನಿದೆ ಎಂದು ಆಪ್ತವಿನಿಮಯದಲ್ಲಿ ಓದುವ ಹೃದಯವಂತಿಕೆಯ ಕಲಿಕೆ ಕೂಡಾ ಅಲ್ಲಿದೆ.
ವಿಜಯಶಂಕರ್ ಅವರ ಬರಹಗಳಲ್ಲಿ ಕಾಣುವ ವಿಸ್ತಾರ ಓದು, ಸೂಕ್ಷ್ಮಗ್ರಹಿಕೆ, ಬದುಕನ್ನು ನೋಡುವ ದೃಷ್ಠಿ, ಬರಹಗಾರನ ಬರಹಗಳಲ್ಲಿ ಹುಡುಕಲೆತ್ನಿಸುವ ಒಳತೋಟಿಗಳು ಇವೆಲ್ಲಾ ಓದುಗನ ಹೃದಯದಲ್ಲಿ ಪ್ರೀತಿಯನ್ನು ಹುಟ್ಟಿಸುವುದಲ್ಲದೆ ಒಳ್ಳೆಯ ಸಾಹಿತ್ಯದೆಡೆಗೆ ಓದುಗನನ್ನು ಕೈಹಿಡಿದು ಕರೆದೊಯ್ಯುವ ಸಖನಾಗಿ ಸಹಾ ಕಾರ್ಯನಿರ್ವಹಿಸುತ್ತದೆ. ಬರೀ ಬರಹದಲ್ಲಷ್ಟೇ ಅಲ್ಲದೆ ನೀನಾಸಂ ಸಾಹಿತ್ಯ ಕಮ್ಮಟಗಳು, ವಿಚಾರ ಸಂಕೀರ್ಣಗಳಲ್ಲಿ ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಸಹಾ ಬಿಡುವು ಮಾಡಿಕೊಂಡು ಯುವ ಸಾಹಿತ್ಯಾಸಕ್ತರನ್ನು ಮಾರ್ಗದರ್ಶಿಸುತ್ತಾರೆ ಕೂಡ. ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಇಂಟೆಲ್ ಸಂಸ್ಥೆಯ ಕೆಲಸವನ್ನು ವಾರದಲ್ಲಿನ ಕೆಲವೊಂದು ದಿನಗಳ ಅವಧಿಗೆ ಸೀಮಿತಗೊಳಿಸಿಕೊಂಡು ಉಳಿದ ಸಮಯವನ್ನು ತಮ್ಮ ಪ್ರೀತಿಯ ವಿಷಯಗಳಾದ ಸಾಹಿತ್ಯ ವ್ಯಾಸಂಗ, ಬರವಣಿಗೆ, ಬೋಧನೆ, ಕಮ್ಮಟ, ಸಾಹಿತ್ಯಾಸಕ್ತರೊಂದಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಲ್ಲಾಪ ಮುಂತಾದವುಗಳಿಗೆ ನೀಡತೊಡಗಿರುವುದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಲಾಭವಾಗುವಂತದ್ದಾಗಿದೆ. ವಿಜಯಶಂಕರ್ ಅವರ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಪಡೆದುಕೊಂಡಿತು. ಕನ್ನಡ ಸಾಹಿತ್ಯ ಪರಿಷತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಗೆ ಅವರು ಗೌರವ ಸಂಚಾಲಕರಾಗಿ ತಮ್ಮ ಕೊಡುಗೆಗಳನ್ನು ನೀಡಿದ್ದರು. ಮುಂದೆ ಕೇಂದ್ರ ಸಾಹಿತ್ಯ ಅಕಾಡಮಿಯ ಭಾಷಾಂತರ ಕೇಂದ್ರದ ಗೌರವ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ವಿಜಯಶಂಕರ್ ತಾವಿರುವ ಐ.ಟಿ. ಕ್ಷೇತ್ರದಲ್ಲಿನ ಸಾಧನೆಗಾಗಿ ದೇಶೀಯ ಹಾಗೂ ಅಂತರರಾಷ್ತ್ರೀಯ ಮಟ್ಟದ ಅನೇಕ ಸ್ಥಾನಮಾನ ಗೌರವಗಳನ್ನು ಪಡೆದಿದ್ದಾರೆ. ಭಾರತೀಯ ಮಟ್ಟದಲ್ಲಿನ ಐ.ಟಿ ಕ್ಷೇತ್ರದಲ್ಲಿನ ಹಾರ್ಡ್ವೇರ್ ಸಂಪನ್ಮೂಲ, ತರಬೇತಿ ಮತ್ತು ಸಂಶೋಧನಾ ಕ್ಷೇತ್ರಗಳ ಪ್ರಾತಿನಿಧಿಕ ಸಂಘಟನೆಯಾದ ‘MAIT’, ತನ್ನ ದಕ್ಷಿಣ ಭಾರತ ವಿಭಾಗಕ್ಕೆ ವಿಜಯಶಂಕರರನ್ನು ಅಧ್ಯಕ್ಷರನ್ನಾಗಿಸಿಕೊಂಡಿದೆ.
ಸಾಹಿತ್ಯಕ ಕ್ಷೇತ್ರದಲ್ಲಿ ವಿಜಯಶಂಕರ್ ಅವರಿಗೆ
ರಾಷ್ಟ್ರಕವಿ ಎಂ. ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ನೀಡುವ ಪ್ರೊ| ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ – 2008;
ಕರ್ನಾಟಕ ಸಂಘ ಮುಂಬಯಿ ವಿಮರ್ಶಾ ಸಾಹಿತ್ಯಕ್ಕಾಗಿ ನೀಡುವ ಡಾ. ಸುನಿತಾ ಶೆಟ್ಟಿ ಪ್ರಶಸ್ತಿ – 2013: ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಮರ್ಶೆಗೆ ನೀಡುವ ಪುಸ್ತಕ ಬಹುಮಾನ ಪ್ರಶಸ್ತಿ (2012ರಲ್ಲಿ ಪ್ರಕಟವಾದ ‘ನಿಜಗುಣ’ ಕೃತಿಗೆ – 2015); ಜಿ.ಎಸ್.ಎಸ್. ವಿಶ್ವಸ್ಥ ಮಂಡಳಿ ವಿಮರ್ಶೆಯ ಒಟ್ಟು ಸಾಧನೆಗಾಗಿ ನೀಡುವ ಡಾ. ಜಿ.ಎಸ್. ಶಿವರುದ್ರಪ್ಪ ವಿಮರ್ಶಾ ಪ್ರಶಸ್ತಿ – 2017;
ಪ್ರೊ. ಬಿ. ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ – 2018;
ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2018ರ ಪುಸ್ತಕ ಬಹುಮಾನ ‘ವಸುಧಾ ವಲಯ’ ಕೃತಿಗೆ – 2019; ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡಲಾಗುವ ಮಾಸ್ತಿ ಪ್ರಶಸ್ತಿ – 2020; ಅಕಲಂಕ ವಿಮರ್ಶಾ ಪುರಸ್ಕಾರ, ಉಡುಪಿ 2021 ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಇಂಥ ಸಮರ್ಥ ಸಾಹಿತ್ಯಕ ದೃಷ್ಟಾರರಾದ ವಿಜಯಶಂಕರರ ಸಾಹಿತ್ಯಕ ಮಾರ್ಗದರ್ಶನ ಕನ್ನಡಿಗರಿಗೆ ನಿರಂತರ ದೊರಕುತ್ತಿರಲಿ, ವಿಜಯಶಂಕರರ ಬದುಕಿನಲ್ಲಿ ನಿರಂತರ ಹಸನು ತುಂಬಿರಲಿ ಎಂದು ಹಾರೈಸೋಣ.
On the birth day of writer and my friend Vijaya Shankar S R Sir
ಕಾಮೆಂಟ್ಗಳು