ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನವರತ್ನರಾಮ್


 ನವರತ್ನರಾಮ್


ನವರತ್ನ ರಾಮ್ ಕನ್ನಡದ ನಗೆ ಬರಹದ ಮಾಂತ್ರಿಕರೆಂದೇ ಪ್ರಸಿದ್ಧರು. ಸುಧಾದಲ್ಲಿ "ನೀವು ಕೇಳಿದಿರಿ?" ಪ್ರಶ್ನೆಗಳಿಗೆ ಅವರು 'ಚಿತ್ತಾ' ಹೆಸರಲ್ಲಿ ಉತ್ತರಿಸುತ್ತಿದ್ದುದು ಜನಪ್ರಿಯ.

ನವರತ್ನ ರಾಮ್ 1932ರ ಡಿಸೆಂಬರ್ 3ರಂದು ಜನಿಸಿದರು. ನವರತ್ನ ರಾಮ್ ಅವರದು ಸುಸಂಸ್ಕೃತ ಮನೆತನ. ತಂದೆ ನವರತ್ನ ರಾಮರಾಯರು ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಅಧಿಕಾರಿಗಳಾಗಿ ಅಪಾರ ಕೆಲಸ ಮಾಡಿ, ಜನಸಾಮಾನ್ಯರ ಪ್ರೀತಿ ‍ ವಿಶ್ವಾಸ ಸಂಪಾದಿಸಿದವರು. ಮಾಸ್ತಿಯವರ ಸಮಕಾಲೀನರಾಗಿದ್ದ ನವರತ್ನ ರಾಮರಾಯರು ಮಾಸ್ತಿಯವರ ಮೇಲೂ ಪ್ರಭಾವ ಬೀರಿದವರು. ಅವರ ಜೀವನದ ನೆನಪುಗಳನ್ನು ಕುರಿತ ‘ಕೆಲವು ನೆನಪುಗಳು’ ಪುಸ್ತಕ ಉತ್ತಮ ಬರಹಕ್ಕೆ ಒಂದು ಉದಾಹರಣೆ. ಅವರು "ರಾಜಸೇವಾ ಪ್ರಸಕ್ತ" ಎಂಬ ಬಿರುದನ್ನು ಆಗಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಪಡೆದಿದ್ದರು. ನವರತ್ನ ರಾಮ್ ಅವರ ತಾಯಿ ಪುಟ್ಟಮ್ಮ. 

ನವರತ್ನ ರಾಮ್ ಮತ್ತು ಲಕ್ಷ್ಮಣ ಅವಳಿಜವಳಿಗಳು. ಅವರಲ್ಲಿ ಒಬ್ಬರು ಇನ್ನೊಬ್ಬರನ್ನು ಎಷ್ಟರ ಮಟ್ಟಿಗೆ ಹೋಲುತ್ತಿದ್ದರೆಂದರೆ,  ನವರತ್ನ ರಾಮ್ ಅವರನ್ನು ಮದುವೆಯಾದ  ಪ್ರಖ್ಯಾತ ಲೇಖಕಿ ಉಷಾ ನವರತ್ನರಾಮ್ ಅವರಿಗೇ ತಮ್ಮ ಗಂಡ ಯಾರು, ಅವರ ತಮ್ಮ ಯಾರು ಎಂಬುದು ಮೊದಮೊದಲು ಗೊತ್ತಾಗದೆ ಕಷ್ಟವಾಗುತ್ತಿತ್ತಂತೆ.  "ಅಪೂರ್ವ ಸಹೋದರರು" ಎನ್ನಿ ಬೇಕಾದರೆ!  ಇಬ್ಬರೂ ಬಲು ತುಂಟರು, ವಾನರ ವೀರರೆಂದೇ ಅವರ ಬಾಲ್ಯದ ಖ್ಯಾತಿ!  ನವರತ್ನರಾಮ್ ಎಸ್. ಎಸ್. ಎಲ್. ಸಿ ವರೆಗೆ ಓದಿದ್ದು ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ. ಸಂಗೀತ, ನಾಟಕ, ಸಾಹಿತ್ಯ, ಚಿತ್ರಕಲೆಗಳಲ್ಲಿ ಚಿಕ್ಕಂದಿನಿಂದಲೂ ಪ್ರೀತಿ. ಕಲಾ ಮಂದಿರದ ಅ. ನ. ಸುಬ್ಬರಾಯರ ಪ್ರೋತ್ಸಾಹದಿಂದಾಗಿ ಈ ಪ್ರೀತಿ ಹೆಮ್ಮರವಾಗಿ ಬೆಳೆಯಿತು. ಬೀಳಲು ಬಿಟ್ಟು ಹರಡಿಕೊಂಡಿತು. 

ಬೆಂಗಳೂರಿನ ಸರ್ಕಾರಿ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಓದಿದ ಮೇಲೆ ತಂದೆಯ ಇಚ್ಛೆಯಂತೆ ರಾಮ್ ಕೃಷಿ ಕಾಲೇಜು ಸೇರಿ ಪದವೀಧರರಾದರು. ವಿದ್ಯಾರ್ಥಿ ದೆಸೆಯಿಂದಲೇ ನಾಟಕ ರಚನೆ, ಅಭಿನಯ, ಸಂಗೀತ, ನೀಲಕಮಲ್ ಆರ್ಕೇಸ್ಟ್ರಾ, ಕಲಾ ಮಂದಿರದ ಗೆಳೆಯರೊಂದಿಗೆ ಸೇರಿ "ಚಿತ್ರ ಕಲಾವಿದರು" ನಾಟಕ ತಂಡ, "ಅಕ್ಕ ‍ ಪಕ್ಕ", "ಕೆಂಬೂತ", "ಕನಸು ‍ ನನಸು" ಮುಂತಾಗಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದ ನವರತ್ನ ರಾಮ್ ಅವರ ಮೇಲೆ ಪ್ರಭಾವ ಬೀರಿದ ಸಾಹಿತಿಗಳು ಕುವೆಂಪು, ಮಾಸ್ತಿ, ರಾಜರತ್ನಂ ಮತ್ತು ತ. ರಾ. ಸು. 

ತಂದೆ ನವರತ್ನ ರಾಮರಾಯರ ಹೆಸರಿನ ಬಲದಿಂದ ತಮ್ಮನ್ನು ಲೋಕ ಗುರುತಿಸಬಾರದು ಎಂಬುದು ನವರತ್ನರಾಮ್ ಅವರ ಇಚ್ಛೆ.  ಹೀಗಾಗಿ ಅವರು "ಎನ್. ರಾಮ್" ಎಂಬ ಹೆಸರಿನಿಂದಲೇ ಬರೆಯುತ್ತಿದ್ದರಾದರೂ ಕ್ರಮೇಣ "ನವರತ್ನರಾಮ್" ಎಂಬ ಹೆಸರೇ ಸ್ಥಿರವಾಗಿ ಹೋಯಿತು. ಆದರೂ ನವರತ್ನ ರಾಮರಾಯರ ಬೆಳಕಿನಲ್ಲಿ ಬೆಳಗಿದವರೆಂದು ಅವರ ಕೃತಿಗಳನ್ನೋದಿದ ಯಾರೂ ಭಾವಿಸಲಾರರು. ಅವುಗಳಲ್ಲಿ ಸ್ವೋಪಜ್ಞತೆಯಿದೆ, ನವಿರಾದ ಹಾಸ್ಯವಿದೆ, ಸಮಾಜ ದರ್ಶನವಿದೆ, ಸಾಹಿತ್ಯದ ಗುಣವಿದೆ, ಆಕರ್ಷಕ ಶೈಲಿ ಇದೆ. ಇದನ್ನೆಲ್ಲಾ ಯಾರಾದರೂ ಸ್ವಂತ ಪರಿಶ್ರಮ, ಸತತವಾದ ವ್ಯಾಸಂಗ, ಸುತ್ತಣ ಜನ ಜೀವನದ ಅವಲೋಕನ, ಜೊತೆಗೆ ಪ್ರತಿಭೆ ಇವುಗಳಿಂದಲೇ ಪಡೆಯಬೇಕು. ಶಿಫಾರಸ್ಸಿನಿಂದ ಅಥವಾ ಇನ್ನೊಬ್ಬರ ಹೆಸರಿನಿಂದ ದಕ್ಕುವಂಥದಲ್ಲ. 

ನವರತ್ನ ರಾಮ್ ರಾಯರನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅವರ ಮೆಕ್ಯಾನಿಕ್ ಮಂಜಣ್ಣನವರನ್ನು ನೀವು ನೋಡಬೇಕು ಎನ್ನುತ್ತಿದ್ದರು ಎಚ್ಚೆಸ್ಕೆ.  “ಸ್ವಧರ್ಮೇನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” ಎಂದು ಹೇಳುವುದಿಲ್ಲವೇ ಭಗವದ್ಗೀತೆ?  ತಂತಮ್ಮ ಧರ್ಮದಲ್ಲೇ, ಅಂದರೆ ವೃತ್ತಿ ಜೀವನದ ಸಹದೂರ ರೀತಿ ರಿವಾಜಿನಲ್ಲೇ ತಲ್ಲೀನರಾಗಬೇಕು. ಅದರಲ್ಲೇ ಮುಳುಗೇಳಬೇಕು.  ಕೊನೆಯ  ತನಕವೂ ಅದಕ್ಕೇ ಅಂಟಿಕೊಂಡಿರಬೇಕು. ತನ್ನದು ಚೆನ್ನಿಲ್ಲ. ಇನ್ನೊಬ್ಬನ ವೃತ್ತಿ ಚೆನ್ನ. ಅದನ್ನು ನಾನು ಅನುಸರಿಸಬೇಕಾಗಿತ್ತು ಎಂದು ಕೊರಗುವವನು ಎಂದಿಗೂ ಸುಖವನ್ನು ಕಾಣಲಾರ. ಹೀಗೆ ಮೆಕ್ಯಾನಿಕ್  ಮಂಜಣ್ಣನ ಚಿತ್ರದ ಮೂಲಕ ನವರತ್ನ ರಾಮ್ ಅವರು ಜೀವನ ವೇದಾಂತವನ್ನೇ ಧ್ವನಿಸುತ್ತಾರೆ.

ಕಾವ್ಯದಲ್ಲಿ ‍ ಸೃಜನಶೀಲ, ಬರಹದಲ್ಲಿ ಸಾಧಾರಣ ಎನಿಸುವಂಥದನ್ನೇ ಒಕ್ಕಣಿಸುತ್ತಾ ವಾಚ್ಯವಾಗಿರುವ  ಬೇರೆ ಯಾವುದೋ ಮಹತ್ವದ ಸತ್ಯದ ಎಡೆಗೆ ಬೆಟ್ಟು ಮಾಡಿ ತೋರಿಸುವುದೇ ಉತ್ತಮ ಸಾಹಿತ್ಯದ ಲಕ್ಷಣ. ಅದೇ ಕಾವ್ಯ ಅಥವಾ ಸೃಜನಾತ್ಮಕ ಸಾಹಿತ್ಯ. ಅದಿಲ್ಲದ್ದು ಕೇವಲ ವರದಿ. ಅದು ಸಾಹಿತ್ಯವೆನಿಸದು. ನಗೆ ಬರಹದ ಮೂಲಕವೇ ಜೀವನ ದರ್ಶನವನ್ನು ಅಭಿವ್ಯಕ್ತಿಸುವುದು ನವರತ್ನರಾಮ್ ಅವರ ಸಾಹಿತ್ಯದ ಸಲ್ಲಕ್ಷಣ. ನಗೆ ಬರಹವನ್ನೂ ಆ ಎತ್ತರದ ಸ್ತರಕ್ಕೇರಿಸಿರುವುದು ನವರತ್ನ ರಾಮ್  ಕೃತಿಗಳ ವೈಶಿಷ್ಠ್ಯ. 

ಸುಂದರ ಸುದೀರ್ಘ ಕವನಗಳಂತೆ ನವರತ್ನರಾಮ್ ಅವರ  ಲಘು ಬರಹಗಳು ಓದಿಸಿಕೊಂಡುಹೋಗುತ್ತವೆ. ಇದು ಲಘುವಾದರೂ ಲಾಘವವಿಲ್ಲ. ಗಾಂಭೀರ್ಯದ ಸೊಗಸಿದೆ. ಇದು ನವರತ್ನ ರಾಮ್ ಅವರ ಬಹುತೇಕ ಎಲ್ಲ ಬರಹಗಳ ಲಕ್ಷಣ. 

ನವರತ್ನರಾಮ್ ಅವರ ವೃತ್ತಿ ಜೀವನವೂ ಬಹಳ ಸ್ವಾರಸ್ಯವಾದದ್ದು. ಅದು ಸಾಹಿತ್ಯದಿಂದಲೇ ಹಣೆದುಕೊಂಡಿದ್ದು. ಕೃಷಿ ವಿಷಯದಲ್ಲಿ ಸ್ನಾತಕರಾದ ಮೇಲೆ ನವರತ್ನ ರಾಮ್‌ ಅವರಿಗೆ ವ್ಯವಸಾಯ ಇಲಾಖೆಯಲ್ಲೇ ಉದ್ಯೋಗ ಲಭಿಸಿತ್ತು. ಹೆಚ್ಚಿನ ವ್ಯಾಸಂಗಕ್ಕಾಗಿ ಅವರಿಗೆ ಫ್ರಾನ್ಸಿಗೆ ಹೋಗುವ ಅವಕಾಶ ಲಭ್ಯವಾಯಿತು. ಅವರು ಫ್ರೆಂಚ್ ಭಾಷೆ ಕಲಿಯಬೇಕಾಗಿ ಬಂತು.  ಫ್ರೆಂಚ್ ಭಾಷೆ ತಿಳಿದಿದ್ದ ಉಷಾ ಅವರಿಂದ ಅವರು ಆ ಭಾಷೆ ಕಲಿತರು. ಜೊತೆಗೆ ನವರತ್ನ ರಾಮ್ ತಮ್ಮ ಗುರುವಿಗೇ ತಿರುಮಂತ್ರ ಹೇಳಿದರು. ಇಬ್ಬರೂ ಪರಸ್ಪರ ಪ್ರೇಮಿಸಿದರು. ವಿವಾಹವಾದರು. ಆಗ ರಾಮ್‌ಗೆ ಮೂವತ್ತೊಂದು ವರ್ಷ. ಉಷಾ ಅವರು ಉಷಾ ನವರತ್ನ ರಾಮ್ ಆದರು. ನಮಗೆಲ್ಲಾ ತಿಳಿದಿರುವಂತೆ ಉಷಾ ನವರತ್ನರಾಂ ಅವರು ಪ್ರಸಿದ್ಧ  ಲೇಖಕಿ, ಕಲಾವಿದೆ. 

ಪ್ಯಾರಿಸಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ರಾಮ್ ಉಷಾಗೆ ಬರೆದ ಪತ್ರಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.  ಆ ಕೃತಿಯ ಹೆಸರು "ಪ್ಯಾರಿಸಿನಿಂದ ಪ್ರೇಯಸಿಗೆ".  ಈ ಕೃತಿಗೆ ಇದಕ್ಕಿಂತ ಬೇರೆ ಹೆಸರು ಇಡುವುದು ಹೇಗೆ ತಾನೇ ಸಾಧ್ಯ? ನವರತ್ನ ರಾಮ್ ಅವರ ಆಸಕ್ತಿಗಳು ಒಂದೆರಡಲ್ಲ. ಹಲವಾರು. ವ್ಯವಸಾಯ ಇಲಾಖೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ರಾಮ್ ಅವರು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರೂ ಆಗಿದ್ದರು. ವಿಶ್ವ ಕನ್ನಡ ಸಮ್ಮೇಳನದಲ್ಲೂ ಪಾತ್ರ ವಹಿಸಿದ್ದರು. ಚಲನಚಿತ್ರದಲ್ಲೂ ಅವರಿಗೆ ಅಪಾರ ಆಸಕ್ತಿ. ಪುಟ್ಟಣ್ಣ ಕಣಗಾಲ್ ಅವರ "ಗೆಜ್ಜೆಪೂಜೆ" ಮತ್ತು ಇನ್ನೂ ಹಲವು ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದ ರಾಮ್  ಇದಕ್ಕಾಗಿ ರಾಜ್ಯ  ಪ್ರಶಸ್ತಿ ಪಡೆದರು. "ನವರತ್ನ ರಾಮಾಯಣ", "ಹೂವೊಂದು ದುಂಬಿ ನೂರೊಂದು", "67 ಹ್ಯಾರಿಸ್ ರಸ್ತೆ" "ಜಗವೆಲ್ಲ ಒಂದೇ ಸಿವ", "ನೆರೆಹೊರೆಯವರ ಹೊರೆ", "ಹಾಲು ಹಾಲಾಹಲ" "ಕಲ್ಲರಳಿ ಹೂವಾಯಿತು", "ಜೀವ ಯಾವ ಕುಲ, ಆತ್ಮ ಯಾವ ಕುಲ" ಇವು ಪ್ರಸಿದ್ಧ ಕೃತಿಗಳು. 

"ಸುಧಾ"ದ "ನೀವು ಕೇಳಿದಿರಿ" ವಿಭಾಗದ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಿದ್ದ ಬೀಚಿ ಅವರು ನಿಧನರಾದ ಮೇಲೆ "ಚಿತ್ತಾ" ಎಂಬ  ಹೆಸರಿನಲ್ಲಿ ಅದನ್ನು ನವರತ್ನ ರಾಮ್ ಮುಂದುವರಿಸಿದರು. "ಚಿತ್ತಾ" ಗಂಡೋ ಹೆಣ್ಣೋ ಎಂಬುದು  ಅನೇಕರಿಗಿದ್ದ ಕುತೂಹಲ. ಕೊನೆಯವರೆಗೂ ಗುಟ್ಟು ಬಿಟ್ಟು ಕೊಡದ ನೀವು, ಅದು  ನಿಧನರಾದಾಗ ಗೊತ್ತಾಗದೆ? ಎಂಬ ಓದುಗರೊಬ್ಬರ ಪ್ರಶ್ನೆಗೆ ಅವರು ಹೇಳಿದ್ದರು, "ನನ್ನ ನಿಧನ ನಿಧಾನ" ಎಂದು. ಆದರೆ ಬೇಗನೆ  ಅವರು ನಿರ್ಗಮಿಸಿದರು (ಐವತ್ತೊಂಬತ್ತು ವರ್ಷ – ಅಕ್ಟೋಬರ್ 17, 1991) ಮಕ್ಕಳು "ಥ್ರೀ ಏಸ್"  ಆರತಿ, ಅಂಜಲಿ ಮತ್ತು ಆಶ್ರಯಿ. ಈ ಮಹಾನ್ ನವರತ್ನ ರಾಮ್ ಅವರಿಗೆ ನಮ್ಮ ನಮನ.  

ಇಂದು ನಮ್ಮೊಡನಿರುವ ರಾಮ್ ಅವರ ಜೊತೆ ಜನಿಸಿದ ಅವರ ಅವಳಿ ಸಹೋದರ ಕ್ರಿಯಾಶೀಲತೆಗೆ ಹೆಸರಾದ ನವರತ್ನ ಲಕ್ಷ್ಮಣ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆ.


On the birth anniversary of great writer Navaratna Ram 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ