ಜೀಜಾಬಾಯಿ
ಮಹಾಮಾತೆ ಜೀಜಾಬಾಯಿ
ಶಿವಾಜಿಯಂತಹ ಮಹಾಪುರುಷನ ಜೀವನಕ್ಕೆ ಆಧಾರ ರೂಪವಾಗಿ, ಸಂಸ್ಕಾರ ಕೊಟ್ಟು ತ್ಯಾಗ ಮಾಡಿ ವೀರತ್ವವನ್ನು ಜಾಗೃತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ ಕಾರ್ಯದಲ್ಲಿ ಅತ್ಯಂತ ಹಿರಿಯದಾದ ಪಾತ್ರ ವಹಿಸಿ ಇಡೀ ಮಾತೃವರ್ಗಕ್ಕೆ ಆದರ್ಶ ಮಾತೆಯಾಗಿ ಮೆರೆದ ವೀರ ಮಹಿಳೆ ಜೀಜಾಬಾಯಿ!
ಜೀಜಾಬಾಯಿ ಅವರು 1598 ವರ್ಷದ ಜನವರಿ 12ರಂದು ಜನಿಸಿದರು. ತಂದೆ ಲಖೋಜಿ ರಾವ್ ಜಾಧವ್ ಮತ್ತು ತಾಯಿ ಮಾಳಸಬಾಯಿ. ಬಾಲ್ಯದಲ್ಲಿಯೇ ಜೀಜಾಬಾಯಿ ಅವರು ತಂದೆಯ ಜೊತೆಗೂಡಿ ರಾಜಶಾಸ್ತ್ರ ವಿದ್ಯೆಯ ಬಗ್ಗೆ ಜ್ಞಾನ ಪಡೆದರು. ತಾಯಿಯಿಂದ ಭಕ್ತಿ, ಭಾವ, ಎಲ್ಲಾ ಸಂಸ್ಕಾರಗಳನ್ನು ಕಲಿಯುತ್ತಲೇ ದೊಡ್ಡವಳಾದರು. ಆಕೆಯನ್ನು ಕಂಡರೆ ಎಲ್ಲರಿಗೂ ಅತ್ಯಂತ ಗೌರವ.
ಚಾಣಾಕ್ಷೆ ಸುಂದರಿ ಜೀಜಾಬಾಯಿ ಚಿಕ್ಕಂದಿನಿಂದಲೇ ತಂದೆಯ ಪರಾಕ್ರಮದ ಉದಾಹರಣೆಗಳನ್ನು ಬೆರಗಾಗಿ ಕೇಳುತ್ತಿದ್ದರು. ಬೆಳೆಯುತ್ತಲೇ ಅಸಹಾಯಕತೆ ಮತ್ತು ಅವಿಶ್ವಾಸ ಎಂಬ ರೋಗಗಳನ್ನು ಮನಸ್ಸಿನಿಂದ ಕಿತ್ತೊಗೆಯಲು ಮುಂದಾದರು. ಸಾಹಸಿಯಾಗಿ ಕತ್ತಿವರಸೆಯಲ್ಲಿ ಪರಿಣತಿ ಸಾಧಿಸಿದರು.
ಜೀಜಾಬಾಯಿ 1605 ರಲ್ಲಿ ಶಹಾಜಿ ಭೋಸಲೆಯ ಪಟ್ಟದರಸಿಯಾದರು. ಬಹುವರ್ಷ ಮಕ್ಕಳಾಗದಿದ್ದಾಗ ಭವಾನಿ ಮಾತೆಯಲ್ಲಿ "ತೇಜಸ್ವಿ, ಪರಾಕ್ರಮಿ, ಸ್ವರಾಜ್ಯ ಸ್ಥಾಪಿಸಲು ಸಾಮಾರ್ಥ್ಯವುಳ್ಳ ಪುತ್ರನನ್ನು ನನಗೆ ದಯಪಾಲಿಸು” ಎಂದು ಮೊರೆ ಇಟ್ಟರು. 1630 ವರ್ಷದಲ್ಲಿ ಅವರಿಗೆ ಜನಿಸಿದ ಗಂಡು ಮಗುವಿಗೆ ಶಿವಾಜಿ ಎಂದು ಹೆಸರಿಟ್ಟರು.
ಆರಂಭದಿಂದಲೇ ಶಿವಾಜಿಗೆ ಜೀಜಾಬಾಯಿ ಅವರು ವೀರ ಸಾಹಸ ಕಥೆಗಳನ್ನು ಹೇಳುತ್ತಿದ್ದರಲ್ಲದೆ, ಸೀತೆಯ ಅಪಹರಣ ಮಾಡಿದ ದುಷ್ಟ ರಾವಣನನ್ನು ವಧಿಸಿದ ರಾಮನು ಎಷ್ಟು ಪರಾಕ್ರಮಿಯಾಗಿದ್ದನು, ಬಕಾಸುರನನ್ನು ವಧಿಸಿ ದುರ್ಬಲ ಜನರನ್ನು ಮುಕ್ತಗೊಳಿಸುವ ಭೀಮನು ಎಷ್ಟು ಪರಾಕ್ರಮಿಯಾಗಿದ್ದನು.. ... ಹೀಗೆ ಪ್ರತಿಯೊಂದು ಕಥೆಯಲ್ಲಿ ಅವರು ಪರಾಕ್ರಮಿ ಪುರುಷನಿಗೆ ಭಗವಂತನ ಸ್ಥಾನವನ್ನು ನೀಡಿದರು. ಅಲ್ಲದೇ ಸ್ವಾತಂತ್ರ್ಯಕ್ಕೆ ಧ್ಯೇಯದ ಸ್ಥಾನವನ್ನೂ ನೀಡಿದರು.
ಜೀಜಾಬಾಯಿಯ ಮಗ ಶಿವಾಜಿ, ತಾಯಿಯ ಪೋಷಣೆ ಹಾಗು ಮಾರ್ಗದರ್ಶನದಲ್ಲಿಯೇ ಬೆಳೆದರು. ಭಾರತದ ಗಡಿಯಾಚೆಯಿಂದ ನುಗ್ಗಿದ ಕಟುಕ ದರೋಡೆಕೋರರನ್ನು ಜೀಜಾಬಾಯಿ ನೋಡಿದ್ದರು. ಇಲ್ಲಿ ರಾಜ್ಯ ಸ್ಥಾಪಿಸಿ, ಇಲ್ಲಿಯ ಜನತೆಯನ್ನು ಹಿಂಡುತ್ತಿದ್ದಂತಹ, ಇಲ್ಲಿಯ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಂತಹ ವಿದೇಶಿ ದಾಳಿಕಾರರ ಅಡಿಯಲ್ಲಿಯೇ ಅವಳ ತಂದೆ ಹಾಗು ಅವಳ ಗಂಡ ಊಳಿಗ ಮಾಡುತ್ತಿದ್ದರು. ನಾಡ ಜನತೆಯ ಮೇಲೆ ನಡೆಯುವ ದಬ್ಬಾಳಿಕೆಯನ್ನು ಪ್ರತ್ಯಕ್ಷವಾಗಿ ಕಂಡ ಜೀಜಾಬಾಯಿ ಈ ನಾಡವರ ರಾಜ್ಯಕ್ಕಾಗಿ, ಭಾರತೀಯರ ಸ್ವರಾಜಕ್ಕಾಗಿ ತನ್ನ ಮಗ ಶಿವಾಜಿಗೆ ಪ್ರೇರಣೆ ಇತ್ತಳು. ಶಿವಾಜಿಯ ಜನ್ಮದೊಂದಿಗೆ ಹಿಂದವೀ ಸ್ವರಾಜ್ಯದ ಅಡಿಪಾಯ ಹಾಕಿದಂತಾಗಿತ್ತು.
ಶಿವಾಜಿಯ ಮನಸ್ಸಿನಲ್ಲಿ ಕರ್ತೃತ್ವದ ಕಿಡಿಯನ್ನು ಹಚ್ಚಿದ ಜೀಜಾಬಾಯಿ ಮಗನಿಗೆ ರಾಜನೀತಿಯನ್ನು ಕೂಡ ಕಲಿಸಿದರು. ಸಮಾನ ನ್ಯಾಯವನ್ನು ನೀಡುವ ವೃತ್ತಿ ಹಾಗೂ ಅನ್ಯಾಯ ಮಾಡುವವರಿಗೆ ಕಠೋರ ಶಿಕ್ಷೆ ನೀಡುವ ಧೈರ್ಯವನ್ನು ನೀಡಿದರು. ಶಿವಾಜಿಯ ಶಸ್ತ್ರಾಸ್ತ್ರಗಳ ಪ್ರತಿಕ್ಷಣದತ್ತ ಸ್ವತಃ ಸೂಕ್ಷ್ಮ ಗಮನ ನೀಡಿದರು. ಶಹಾಜಿರಾಜರ ಬಂಧನ ಹಾಗೂ ಬಂಧಮುಕ್ತಿ, ಅಫ್ಜಲ್ ಖಾನನ ತೊಂದರೆ, ಆಗ್ರಾದಿಂದ ಮುಕ್ತಿ ಹೀಗೆ ಅನೇಕ ಪ್ರಸಂಗಗಳಲ್ಲಿ ಶಿವಾಜಿಗೆ ಜೀಜಾಬಾಯಿಯವರ ಮಾರ್ಗದರ್ಶನ ಲಭಿಸಿತು. ಶಿವಾಜಿಯವರು ಮಹತ್ವವಾದ ಅಭಿಯಾನದಲ್ಲಿದ್ದಾಗ, ಜಿಜಾಬಾಯಿಯೇ ರಾಜ್ಯದ ಕಾರ್ಯಭಾರದತ್ತ ಗಮನ ನೀಡುತ್ತಿದ್ದರು.
ಶಿವಾಜಿಯು ತನ್ನ ಸ್ವರಾಜವನ್ನು ವಿಸ್ತರಿಸುತ್ತಾ ಹೋದಂತೆ, ವಿಜಯಪುರದ ಆದಿಲಶಾಹಿ ಚಿಂತಿತನಾದ! ಶಿವಾಜಿಯ ನಿಗ್ರಹಕ್ಕಾಗಿ ಆತ ಅಫ್ಜಲ್ ಖಾನನನ್ನು ಕಳಿಸಿಕೊಟ್ಟ. ಅಫ್ಘಾನ್ ಮೂಲದ ಈತ ಆದಿಲಶಾಹಿಯ ನೆಚ್ಚಿನ ಸೇನಾಪತಿಯಾಗಿದ್ದ. ಈತ ಪುಣೆಯಲ್ಲಿ ಶಿವಾಜಿಯನ್ನು ಎದುರಿಸಿ, ಕೊಚ್ಚಿ ಹಾಕಲು ಅಫ್ಜಲ್ ಖಾನ್ ಬಯಸಿದ್ದ. ಆದರೆ ಶಿವಾಜಿ ಉದ್ದೇಶಪೂರ್ವಕವಾಗಿ ಪ್ರತಾಪಗಡಕ್ಕೆ ತೆರಳಿದ. ಅಫ್ಜಲ್ ಖಾನನ ಸೈನ್ಯ ಪ್ರತಾಪಗಡವನ್ನು ದೀರ್ಘ ಕಾಲದವರೆಗೆ ಮುತ್ತಿಗೆ ಹಾಕಿದರೂ ಏನೂ ಪ್ರಯೋಜನವಾಗಲಿಲ್ಲ.
ಕೊನೆಗೆ ಮೈತ್ರಿಯ ಒಪ್ಪಂದಕ್ಕೆ ಅಫ್ಜಲ್ ಖಾನ ತನ್ನ ದೂತನನ್ನು ಕಳುಹಿಸಿದನ. ಈ ಸಂದರ್ಭದಲ್ಲಿ ಶಿವಾಜಿಯು ಈ ಭೇಟಿಗೆ ಒಪ್ಪಿದ. ಇವರಿಬ್ಬರೂ ನಿಶ್ಶಸ್ತ್ರರಾಗಿ ಸಂಧಿಸಬೇಕು. ಜೊತೆಗೆ ಇಬ್ಬರು ಸಶಸ್ತ್ರ ಅಂಗರಕ್ಷಕರು ಮಾತ್ರ ಇರಬೇಕು ಎನ್ನುವ ಷರತ್ತಿನೊಡನೆ ಭೇಟಿಯಾಗುವ ಸಿದ್ಧತೆಗಳಾದವು. ಅಫ್ಜಲ್ ಖಾನ್ ಈ ಮೊದಲೊಮ್ಮೆ ಕಸ್ತೂರಿರಂಗ ಎನ್ನುವ ರಾಜನನ್ನು ಇಂತಹದೇ ನೆಪದಲ್ಲಿ ಮೋಸದಿಂದ ಕೊಂದಿದ್ದ. ಆದುದರಿಂದ ಶಿವಾಜಿಯ ಹಿತವರ್ಗದವರೆಲ್ಲರೂ ಈ ಭೇಟಿಗೆ ಒಪ್ಪದಿರಲು ಆತನಿಗೆ ಸಲಹೆ ನೀಡಿದರು. ಜೀಜಾಬಾಯಿ ಮಾತ್ರ ನಿರ್ಭೀತಿಯಿಂದಲೇ ಶಿವಾಜಿಗೆ ಸಮ್ಮತಿ ನೀಡಿದಳು.
ಭೇಟಿಗೆ ಹೋಗುವ ಮುಹೂರ್ತದಲ್ಲಿ ಶಿವಾಜಿಗೆ ಆರತಿ ಬೆಳಗಿ ತಿಲಕವನ್ನಿಡುವ ಸಂದರ್ಭದಲ್ಲಿ ಶಿವಾಜಿ ಹೆಂಡತಿಯ ಕೈ ಆರತಿ ಎತ್ತುವಾಗ ಕಂಪಿಸಿತು. ಆಗ ಜೀಜಾಬಾಯಿಯೇ ಆರತಿ ಎತ್ತಿ, ತಿಲಕವನ್ನಿತ್ತು, ಆಶೀರ್ವದಿಸಿ ಕಳುಹಿಸಿದಳು!! ಕುಂತಿ ಏಕಚಕ್ರನಗರದ ಪ್ರಜೆಗಳ ಹಿತರಕ್ಷಣೆಗಾಗಿ ಭೀಮಸೇನನನ್ನು ಕಳೆದುಕೊಳ್ಳುವ ಅಪಾಯವನ್ನು ಹೇಗೆ ಎದುರಿಸಿದಳೋ, ಅದೇ ರೀತಿಯಲ್ಲಿ ಜೀಜಾಬಾಯಿಯೂ ಸಹ ಜನಹಿತರಕ್ಷಣೆಗಾಗಿ ತನ್ನ ಒಬ್ಬನೇ ಮಗ ಶಿವಾಜಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಿದರು!
ಬಾಲ್ಯದ ಸುಸಂಸ್ಕಾರಗಳ ಬಲದಲ್ಲಿ ಛತ್ರಪತಿ ಶಿವಾಜಿ ಸಾವಿರಾರು ವರ್ಷಗಳ ಗುಲಾಮಗಿರಿಯನ್ನು ಮುರಿದು ಹಾಕಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಪುತ್ರನ ಕರ್ತೃತ್ವದ ಮೇಲೆ ಕಾಲಕ್ಕೆ ತಕ್ಕಂತೆ ಮಾಯೆಯ ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತ ಅವನು ಸಿಂಹಾಸನ ಏರುವವರೆಗೂ ಜೀಜಾಬಾಯಿ ಹೋರಾಡುತ್ತಿದ್ದರು. ರಾಯಗಡದ ಮೇಲೆ ಶಿವರಾಜ್ಯಾಭಿಷೇಕದ ಹನ್ನೆರಡು ದಿವಸಗಳ ನಂತರ 17 ಜೂನ್ 1674 ರಂದು ಅವರು ಸ್ವತಂತ್ರ ಹಿಂದವೀ ಸ್ವರಾಜ್ಯದಲ್ಲಿ ಕೊನೆಯುಸಿರು ಎಳೆದರು. ಇಂತಹ ಧೀರ ಮಾತೆಯ ಸಮಾಧಿ ರಾಯಗಡದ ಮಡಿಲಿನ ಪಾಚಾಡ ಎಂಬ ಊರಿನಲ್ಲಿದೆ.
ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿ ಆತ್ಮಗೌರವದ ಜೀವಂತ ಮೂರ್ತಿಯಾಗಿದ್ದರು. ಎಷ್ಟೇ ಕಷ್ಟಗಳು ಬಂದರೂ ವೀರಪುತ್ರ ಶಿವಾಜಿ ಮಹಾರಾಜರಿಗೆ ಸ್ಫೂರ್ತಿಯಾದ ಮಹಾಮಾತೆಯು, ಶಹಾಜಿರಾಜರ ಅನುಪಸ್ಥಿತಿಯಲ್ಲಿ ಅವರು ಎರಡೂ ಭೂಮಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿದಂತಹ ಚೈತನ್ಯಮಯಿಯಾಗಿದ್ದರು. ಜೀಜಾಬಾಯಿ ಕಲಿಸಿದ ಈ ಸಂಸ್ಕಾರದಿಂದಾಗಿ ಮುಂದೆ ಶಿವಾಜಿ ಮಹಾರಾಜರು ಮೊಘಲರಿಗೆ ಮಣ್ಣುಮುಕ್ಕಿಸಿದರು.
On birth anniversary of Jijabai
ಕಾಮೆಂಟ್ಗಳು