ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ.ಜಿ. ಭಾರತಿ


ಎಂ. ಜಿ. ಭಾರತಿ

ಆತ್ಮೀಯರಾದ ಡಾ. ಎಂ. ಜಿ.  ಭಾರತಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದು ಬಹುಮುಖಿ ಸಾಂಸ್ಕೃತಿಕ ಆಸಕ್ತಿ ಉಳ್ಳವರಾಗಿದ್ದಾರೆ. 

ಜನವರಿ 12,  ಭಾರತಿ ಅವರ ಜನ್ಮದಿನ.  ಇವರು ಜನಿಸಿದ್ದು ಬೆಂಗಳೂರಿನಲ್ಲಿ. ತಾಯಿ ಅನುಸೂಯಾ. ತಂದೆ ಮಾಯಸಂದ್ರ ಗೋಪಾಲಕೃಷ್ಣ ಅವರು ಕೈಗಾರಿಕೋದ್ಯಮಿ ಮತ್ತು ಯೋಗ ಪಟು. ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರ ಕುಟುಂಬದಲ್ಲಿ ಇವರು ಕಿರಿಯವರು. 

ಭಾರತಿ ಅವರು ಬಸವನಗುಡಿಯ ವಿಜಯಾ ಹೈಸ್ಕೂಲ್ ಮತ್ತು ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದವರು.  ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ ಮತ್ತು  ಕನ್ನಡದಲ್ಲಿ ಎಂ.ಎ. ಪದವಿ ಗಳಿಸಿದರು. ಬಿಎಸ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದರು. ಡಾ ಡಿ ಆರ್ ನಾಗರಾಜ್ ಮತ್ತು ಡಾ ವಿದ್ಯಾ ಶಂಕರ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ “ಪುತಿನ ಅವರ ಸಾಹಿತ್ಯದಲ್ಲಿ ತಾತ್ವಿಕತೆ ಮತ್ತು ಕಲಾರೂಪ" ಎಂಬ ವಿಚಾರದಲ್ಲಿ ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರು. 

ಭಾರತಿ ಅವರು ತಮ್ಮ  ಕಾಲೇಜು ದಿನಗಳಲ್ಲಿ ಪ್ರೊ. ಕಿ. ರಂ. ನಾಗರಾಜ್ ಅವರಿಂದ ಪ್ರಭಾವಿತರಾಗಿದ್ದರು. ಇವರ ಮೇಲೆ ಜಿ. ಎಸ್.ಶಿವರುದ್ರಪ್ಪ, ಶಿವರಾಮ ಕಾರಂತ, ಎಸ್.ಎಲ್. ಬೈರಪ್ಪ ಮತ್ತು ಕುವೆಂಪು ಅವರ ಬರಹಗಳ ಪ್ರಭಾವವೂ ಅಪಾರ. ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಲಲಿತ ವಿದ್ಯಾಮಂದಿರದ ಚಿ. ವಿಶ್ವೇಶ್ವರಯ್ಯ ಇವರಿಗೆ ಮಾನಸಿಕ ಆಧ್ಯಾತ್ಮಿಕ ಗುರುಗಳು.

ಭಾರತಿ ಅವರು  ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಆಳವಾದ ಆಸಕ್ತಿಯನ್ನು ಹೊಂದಿದ್ದಾರೆ. ಇವರು ವಿದ್ಯಾರ್ಥಿ ದಿನಗಳಿಂದಲೂ ಉತ್ತಮ ಗಾಯಕಿಯಾಗಿ ಪರಿಚಿತರು. ಇವರ "ಕಥಾಭಾರತಿ" ಎಂಬ ಯೂಟ್ಯೂಬ್ ವಾಹಿನಿ ಇದೆ. 

ಭಾರತಿ ಅವರು ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಕಲಿಸಿದ ನಂತರದಲ್ಲಿ 1987ರಲ್ಲಿ ಎಸ್‌ಎಸ್‌ಎಂಆರ್‌ವಿ ಕಾಲೇಜಿಗೆ ಬಂದರು.  ಅಲ್ಲಿ ಸಹೋದ್ಯೋಗಿಗಳಾಗಿದ್ದು, ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಪಾವಗಡ ಪ್ರಕಾಶ್ ಅವರ ನಿವೃತ್ತಿ ನಂತರದಲ್ಲಿ,  ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 2016 ರಲ್ಲಿ ನಿವೃತ್ತರಾದರು. ಇದಲ್ಲದೆ, ಎಪಿಎಸ್ ಸಾರ್ವಜನಿಕ ಶಾಲೆ ಹಾಗೂ  ಎಪಿಎಸ್ ಪಿಯು ಕಾಲೇಜು ಆಡಳಿತ ಮಂಡಳಿಯ ಸದಸ್ಯರಾಗಿ ಸಹಾ ಸೇವೆ ಸಲ್ಲಿಸುತ್ತಿದ್ದಾರೆ. 

ಡಾ ಭಾರತಿ ಅವರು ಸಾಫ್ಪ್ ಸ್ಕಿಲ್ ಅಭಿವೃದ್ಧಿ ತರಬೇತುದಾರರೂ ಆಗಿದ್ದು ಅನೇಕರಿಗೆ ಬೆಳಕಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಬಂಜಾರ ಅಕಾಡೆಮಿಯಿಂದ ಕೌನ್ಸೆಲಿಂಗ್‌ನಲ್ಲಿ ಡಿಪ್ಲೊಮಾ ಸಹ ಪಡೆದಿದ್ದಾರೆ.  ಅವರು ತತ್ವಶಾಸ್ತ್ರ, ಸಂಗೀತ ಮತ್ತು ಕನ್ನಡ ಸಾಹಿತ್ಯದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದಾರೆ. ಭಾರತಿ ಅವರ ಪತಿ ಸಿ. ನಾಗರಾಜ್ Nagaraj Chandrashekaraiah

ಅವರು ಸಹ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿದ್ದಾರೆ. ಈ ದಂಪತಿಗಳ ಸುಪುತ್ರರಾದ ಶರತ್ ಮತ್ತು ಶಿಶಿರ್. ಹೀಗೆ ಇವರದು ಆತ್ಮೀಯ ಸಂತಸದ ಕುಟುಂಬ.

ಆತ್ಮೀಯರಾದ ಡಾ.  ಭಾರತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಆತ್ಮೀಯತೆ ಮತ್ತು ಪ್ರೋತ್ಸಾಹಗಳಿಗೆ ನಾನು ಕೃತಜ್ಞ. ನಮಸ್ಕಾರ. 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ