ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ.ಪಿ.ಎಂ. ನಟರಾಜಯ್ಯ


ಎಂ.ಪಿ.ಎಂ. ನಟರಾಜಯ್ಯ

ಎಂ.ಪಿ.ಎಂ. ನಟರಾಜಯ್ಯ ಅತ್ಯುತ್ತಮ ಕಲಾವಿದರಾಗಿ ಪ್ರಸಿದ್ಧರು. ಅವರೊಬ್ಬ ಉತ್ತಮ ಕವಿ ಮತ್ತು ಬರಹಗಾರ ಕೂಡ. ತಮ್ಮ ಅದ್ಭುತ ಕಲೆಯಿಂದ ಕಲಾಪ್ರಿಯರ ಮನಸೆಳೆದಿರುವ ನಟರಾಜಯ್ಯನವರ ಕಲಾಕುಂಚ, ನಾಡಿನ ಪ್ರಸಿದ್ಧ ಮುಖಪುಟಗಳಲ್ಲೂ, ಕಥಾನಕಗಳಲ್ಲೂ, ಪ್ರಸಿದ್ಧರ ಮನೆಗಳ ಭಿತ್ತಿಗಳಲ್ಲೂ, ಚಿತ್ರಪ್ರದರ್ಶನಗಳಲ್ಲೂ  ನಿರಂತರವಾಗಿ ರಾರಾಜಿಸುತ್ತಿವೆ.  ನಮ್ಮ ‘ಕನ್ನಡ ಸಂಪದ’ ಪುಟ ಮತ್ತು 'ಸಂಸ್ಕೃತಿ ಸಲ್ಲಾಪ' ತಾಣದ ಮುಡಿಚಿತ್ರ ಕೂಡಾ ನಟರಾಜಯ್ಯನವರ ಕೊಡುಗೆ.  

ನಟರಾಜಯ್ಯನವರು ಸೌರಮಾನ ಯುಗಾದಿಯ ದಿನವಾದ  1971ರ ಏಪ್ರಿಲ್ 14ರಂದು ದಾವಣಗೆರೆಯಲ್ಲಿ ಜನಿಸಿದರು.  ತಂದೆ ಎಂ.ಪಿ.ಎಂ. ಮಹಾದೇವಯ್ಯನವರು ಚಿಕ್ಕ ಕಿರಾಣಿ  ಅಂಗಡಿ ಮತ್ತು ಕಟ್ಟಿಗೆಯ ವ್ಯಾಪಾರ ಮಾಡುತ್ತಿದ್ದರು. ತಾಯಿ ಮೀನಾಕ್ಷಮ್ಮನವರು. ತಂದೆಯವರು ವ್ಯಾಪಾರದಲ್ಲಿನ ಪ್ರಾಮಾಣಿಕತೆಗೆ ಊರಲ್ಲೆಲ್ಲಾ ಹೆಸರಾಗಿದ್ದರೆ, ತಾಯಿ ಸಾತ್ವಿಕಗುಣದಿಂದ ಸುತ್ತಲಿನ ಸಮಾಜದಲ್ಲಿ ಗೌರವಾನ್ವಿತೆ.  

ಬಾಲ್ಯದ ಹುಡುಗುತನದಲ್ಲಿ ತರಲೆ, ಕೀಟಲೆ, ಶಾಲೆಗೆ ಚಕ್ಕರ್  ಹೊಡೆದು ಸದಾ ಕೆರೆ ಕಾಲುವೆ ಹಳ್ಳಗಳಲ್ಲಿ ಮಿಂದೇಳುವುದನ್ನು  ದಿನಚರಿ ಮಾಡಿಕೊಂಡಿದ್ದರೂ, ಕಂಡ ಕಂಡಲ್ಲಿ,  ಮನೆಗಳ ಸುಣ್ಣಬಣ್ಣಕಂಡ ಗೋಡೆಗಳ ಮೇಲೇಲ್ಲ ಇದ್ದಿಲು ಇಲ್ಲ, ಸೀಮೆಸುಣ್ಣದಿಂದ  ಕ್ರಿಕೆಟ್ ಪ್ರೀತಿಯೋ, ಇಲ್ಲ ಜೆಮಿನಿ ಸರ್ಕಸ್ಸಿನ ಹುಲಿ, ಸಿಂಹ, ಆನೆ, ಕಲಾವಿದರೂ ಹೀಗೆ ವಿವಿಧ ಚಿತ್ರಗಳು ನಟರಾಜರಿಂದ ರೂಪುಗೊಳ್ಳುತ್ತಿದ್ದವು.  ಮಳೆಗಾಲದಲ್ಲಿ ಜೇಡಿಮಣ್ಣಿನಿಂದ ಬೊಂಬೆಗಳನ್ನು,  ಕೆಲವೊಮ್ಮೆ  ಗಣಪನನ್ನು ಮಾಡು ಅಂದರೆ ಅವರಪ್ಪನನ್ನು ಮಾಡುವ ಗುಣ ಬೆಳೆಸಿಕೊಂಡಿದ್ದ ಇವರು ತಮ್ಮ  ಶಾಲೆಯ ಪಠ್ಯಪುಸ್ತಕಗಳಲ್ಲಿ ಸಹಾ ಬಿಳಿಯ ಜಾಗವಿದ್ದೆಡೆಯಲ್ಲೆಲ್ಲಾ ಚಿತ್ರಗಳನ್ನು ತುಂಬಿಸುವ ಅದಮ್ಯತೆ ತುಂಬಿ ಬೆಳೆಯತೊಡಗಿದ್ದರು.  ಇವರ ಈ ಎಲ್ಲ ಹುಡುಗುತನಕ್ಕೆ ತಡೆ ನೀಡಿದ್ದು ಅವರ ತಂದೆಯವರ ಅಕಾಲಿಕ ಮರಣ.  ಬದುಕು ದುಸ್ತರವಾಗಿ, ಪ್ರೌಢಶಾಲೆಯ ಓದಿಗೇ ಕೈಮುಗಿದು ವಿವಿಧ ರೀತಿಯ ಅಂಗಡಿಗಳಲ್ಲಿ ಬಾಲಕಾರ್ಮಿಕನಾದರು. 

ಬಾಲಕ ನಟರಾಜಯ್ಯನಲ್ಲಿ  ಕಲಾವಿದನೊಬ್ಬನನ್ನು ಕಂಡಿದ್ದ ಅವರ ಪ್ರೀತಿಯ ಸೋದರಮಾವನವರಾದ ಮುಕ್ತಿನಾಥಯ್ಯ ಮತ್ತು ಚಿಕ್ಕಪ್ಪನವರಾದ  ಕೆ.ಜಿ. ಮಹಾದೆವಯ್ಯನವರ ಸಹಾಯದಿಂದ   ದಾವಣಗೆರೆಯ ಚಿತ್ರಕಲಾ ಮಹಾವಿದ್ಯಾಲಯ ಸೇರಿದ ನಟರಾಜಯ್ಯನವರು ಅಲ್ಲಿ ಐದು ವರ್ಷಗಳ ಕಾಲ ಮಲ್ಲಿಕಾರ್ಜುನ ಜಾಧವ್, ಕೊರತಿ, ವೈ.ಎಸ್. ಸೂಗೂರ್ ಮತ್ತು ಪ್ರಾಂಶುಪಾಲರಾಗಿದ್ದ ವಿ.ಬಿ. ಹಿರೇಗೌಡರ, ರವೀಂದ್ರ ಎಸ್. ಕಮ್ಮಾರ ಮುಂತಾದವರ ಮಾರ್ಗದರ್ಶನದಲ್ಲಿ  ಕಲಿತು ಕಲಾಪದವೀಧರರಾಗಿ ಹೊರಹೊಮ್ಮಿದರು.  ಬೆಂಗಳೂರಿಗೆ ಬಂದ ಮೇಲೆ ಕಲಾ ಪ್ರಾದ್ಯಾಪಕರಾದ ಬಾಬು ಜತ್ತಕರ್ ಅವರ ಮಾರ್ಗದರ್ಶನ ಪಡೆದರು. 

ನಟರಾಜಯ್ಯನವರು ವೃತ್ತಿಯಲ್ಲಿ  ಬಹುಪಾಲು ಬೆಂಗಳೂರಿನ ವಿವಿಧ ಜಾಹಿರಾತು ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸಮಾಡಿದರು.  ಚೆನ್ನೈ,  ಹೈದರಾಬಾದ್ ನಗರಗಳಲ್ಲಿನ  ಅನಿಮೇಷೀನ್ ಕಂಪನಿಗಳಲ್ಲಿ ಕಾನ್ಸೆಪ್ಟ್  ಆರ್ಟಿಸ್ಟ್ ಆಗಿ ಕೆಲಸಮಾಡಿ ಅನುಭವ ಪಡೆದು, ಮುಂದೆ ಸ್ವತಂತ್ರರಾಗಿ ಕೆಲಸ ಮಾಡತೊಡಗಿದರು.  ಕೆಲವು ವರ್ಷ ಇವರ ಕುಂಚಕಲೆ ಕರ್ಮವೀರ ಪತ್ರಿಕೆಯ ಮುಖಪುಟಗಳನ್ನೂ ಅಲಂಕರಿಸಿತ್ತು.  

ಎಂ.ಪಿ.  ನಟರಾಜಯ್ಯನವರು 'ಚಿತ್ರಯಾನ' ಎಂಬ ಹಲವು ಏಕವ್ಯಕ್ತಿ ಚಿತ್ರಪ್ರದರ್ಶನಗಳನ್ನು ನೀಡಿದ್ದಾರೆ.  ಚಿತ್ರಸಂತೆ ಮುಂತಾದ ಪ್ರದರ್ಶನಗಳಲ್ಲಿ ಅವರ ಚಿತ್ರಗಳ ಮುಂದೆ ಜನ ನೂಕುನುಗ್ಗಲಿನಲ್ಲಿ ನಿಂತು ಕಣ್ತುಂಬಿಕೊಳ್ಳುವುದು ಕಾಣುವುದು ಸರ್ವೇ ಸಾಮಾನ್ಯ.  ಬೆಳಕನ್ನು ಉತ್ತಮವಾಗಿ ಬಳಸಿಕೊಳ್ಳುವುದು ಅವರ ಚಿತ್ರಗಳ ವೈಶಿಷ್ಟ್ಯ.  

“ಚಿತ್ರಕಲೆಯಲ್ಲಿ ವಿಭಿನ್ನವಾದುದನ್ನು ಮಾಡಬೇಕು. ಭಾರತೀಯ ಸಂಸ್ಕೃತಿಯ ಪೌರಾಣಿಕ ಕಥಾನಕಗಳ ಸೊಗಡನ್ನು ಚಿತ್ರಗಳಲ್ಲಿ ಬಿಂಬಿಸಬೇಕು ಎಂಬ ಅಭಿಲಾಷೆಯೇ ಈ ಚಿತ್ರಗಳಿಗೆ ಸ್ಫೂರ್ತಿ” ಎಂದು ತಮ್ಮ ಕಣ್ಮನ ಸೆಳೆಯುವ ಚಿತ್ರಗಳತ್ತ  ಆಧ್ಯಾತ್ಮಿಕ ಭಾವದಲ್ಲಿ ನೋಟ ಬೀರುವ ಎಂ.ಪಿ. ನಟರಾಜಯ್ಯನವರು ಆಯಿಲ್ ಪೇಂಟಿಂಗ್, ವಾಟರ್ ಕಲರ್, ಪೆನ್ಸಿಲ್ ಹಾಗು ಡಿಜಿಟಲ್ ಆರ್ಟ್ ಮಾಡುತ್ತಾರೆ. 

ನಟರಾಜಯ್ಯನವರು ವೃತ್ತಿ ಜೀವನದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ, ಶಿಕ್ಷಣಕ್ಕೆ ಸಂಬಂಧಿಸಿದ,  ಜೀವಶಾಸ್ತ್ರ, ಭೌತಶಾಸ್ತ್ರ ವಿಜ್ಞಾನಗಳ ಚಿತ್ರ ಹಾಗೂ ಜಾಹಿರಾತು ಚಿತ್ರಕಲೆ ಹೀಗೆ ಅನೇಕ ರೀತಿಯಲ್ಲಿ ತಮ್ಮ ಕಲೆಯನ್ನು ಬೆಳೆಸಿದ್ದಾರೆ.   ಆದರೆ ಅವರಿಗೆ ಆತ್ಮತೃಪ್ತಿ ತರುವುದು  ನಮ್ಮ ಭಾರತೀಯ ಸಂಸ್ಕೃತಿಯ ಪುರಾಣ ಪ್ರಸಿದ್ಧ ಕಥಾ ನಾಯಕರ ಹಾಗೂ ದೇವಾನುದೇವತೆಗಳ ಯೋಗ‌ ಸಿದ್ದಿ, ಅವರ ಅಧರ್ಮದ ವಿರುದ್ಧದ ಸಮರ,  ಭಕ್ತ ಸಂರಕ್ಷಣೆಯ ಸಾಹಸ ,  ಸೊಕ್ಕಿ ಜಾರುತ್ತಾ  ಬರುವ ಗಂಗೆ  "ನಾನು ಅಭಗ್ನ ಧೀರ ಧಾರೆ ನನ್ನ ಜಲಬಲವ ಸೊಕ್ಕಿದ ರಂಗಿನೊಲವ  ತಡೆಯಬಲ್ಲಿರೆನು?   ಬಾಹುಬಲವೂ ತಪೋ ಬಲವೂ ಶಕ್ತಿ ಯುಕ್ತಿಯಲಿ" ಎಂದು ಶಿವನಿಗೆ ಪಂಥ ಹಾಕುವ ಸನ್ನಿವೇಶಗಳಂತಹ ಚಿತ್ರಗಳು.

ನಟರಾಜಯ್ಯನವರಿಗೆ ಹೂವಿನ ಹಡಗಲಿ ತಾಲೂಕಿನ ಮಾನಿಹಳ್ಳಿಯ ಪುರವರ್ಗ ಮಠದ 'ಕಲಾ ಸಿರಿ' ಗೌರವ, ತಿಪಟೂರು ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ 'ಕಲಾ ಭಾಸ್ಕರ್' ಪ್ರಶಸ್ತಿ ಗೌರವ, ಬೆಂಗಳೂರಿನ ಶ್ರೀ ಹಾಲವಾಡಿ ಗ್ರಾಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಕೇಂದ್ರದ 'ಕರ್ನಾಟಕ ಕಲಾರತ್ನ', ತುಮಕೂರು ಚಿಕ್ಕಪೇಟೆ ಹೀರೆಮಠದ  'ಕಲಾ ಮಾನಸ' ಗೌರವ,
ಕಲ್ಬುರ್ಗಿ ಸಾಂಬ ಶಿವಯೋಗೇಶ್ವರ ಮಹಾಸಂಸ್ಥಾನ ಮಠದ 2024ರ 'ಕಲಾರತ್ನ' ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ

ನಟರಾಜಯ್ಯನವರು ಗ್ರಾಮೀಣ ಭಾಗದಿಂದ ಮೊದಲ್ಗೊಂಡು  ದೇಶವಿದೇಶಗಳ ಸಂಘ‌‌ ಸಂಸ್ಥೆಗಳಿಗೆ ಮತ್ತು ವೈಯಕ್ತಿಕ ಗ್ರಾಹಕರ ಕಲ್ಪನೆ ಹಾಗೂ ಆಸಕ್ತಿಗಳಿಗೆ ತಕ್ಕಂತೆ ಕಲಾಕೃತಿಗಳನ್ನು ಮೂಡಿಸುವುದರಲ್ಲಿ,  ಅದರಲ್ಲೂ ಪೌರಾಣಿಕ ಹಿನ್ನೆಲೆಯ ಚಿತ್ರಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರೆನಿಸಿದ್ದಾರೆ.

ಈ ಮಹಾನ್ ಕಲಾವಿದರಿಗೆ ಹುಟ್ಟುಹಬ್ಬದ ಆತ್ಮೀಯ ಶುಭ ಹಾರೈಕೆಗಳನ್ನು ಹೇಳೋಣ.  

On the birth day of our great artiste and affectionate friend Mpm Natarajaiah Sir 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ