ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಧಾಕರ ಚತುರ್ವೇದಿ


 ಸುಧಾಕರ ಚತುರ್ವೇದಿ 

ಸುಧಾಕರ ಚತುರ್ವೇದಿ ಅವರು ವೇದತಜ್ಞರಾಗಿ, ಗಾಂಧೀಜಿಯವರ ಒಡನಾಡಿಯಾಗಿ, ಜಲಿಯನ್ ವಾಲಾಬಾಗ್ ದುರಂತದ ಪ್ರತ್ಯಕ್ಷದರ್ಶಿಗಳಾಗಿ 123 ವರ್ಷ ಜೀವಿಸಿದ್ದ ಕನ್ನಡಿಗರೆಂದು ಹೇಳಲಾಗಿದೆ.

ಸುಧಾಕರ ಚತುರ್ವೇದಿ ಅವರು 1897ರ ಏಪ್ರಿಲ್‌ 20ರಂದು ಜನಿಸಿದರೆಂದು ಹೇಳಲಾಗಿದೆ. ಸುಧಾಕರ ತನ್ನ ಎಂಟನೇ ವಯಸ್ಸಿನಲ್ಲೇ ಅಕ್ಕ ಪದ್ಮಾವತಿ ಬಾಯಿಯವರಿಂದ ವ್ಯಾಕರಣ, ಪ್ರಾಚೀನ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡಿದ್ದರು.  ದಯಾನಂದ ಸರಸ್ವತಿಯವರ ಜೀವನ ಚರಿತ್ರೆ ಬಾಲ್ಯದಲ್ಲಿಯೇ ಅವರ ಮೆಚ್ಚಿನ ಓದಾಗಿತ್ತು. ಇವರ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಪುಟ್ಟಮ್ಮ ಅವರ ಪಾತ್ರವೂ ಪ್ರಮುಖವಾಗಿತ್ತು. 

ಸುಧಾಕರ ಚತುರ್ವೇದಿ ಬೆಂಗಳೂರು ಚಾಮರಾಜಪೇಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಮಾಧ್ವ ಬ್ರಾಹ್ಮಣ ಸಂಪ್ರದಾಯದ ಮನೆಯಲ್ಲಿ ಬೆಳೆದ ಇವರಿಗೆ ಇಬ್ಬರು ಮುಸಲ್ಮಾನ ಸ್ನೇಹಿತರಿದ್ದರು. ಒಮ್ಮೆ ಇವರ ನಡುವೆ ಜಾತಿ, ಧರ್ಮಗಳ ಪ್ರಶ್ನೆ ಬಂದಾಗ, ಸುಧಾಕರ ಆ ಸ್ನೇಹಿತರಿಗೆ ಕಚ್ಚೆ ಉಡಿಸಿ, ಜನಿವಾರ ಹಾಕಿಸಿ ಮನೆಗೆ ಕರೆಸಿ, ತನ್ನ ತಂದೆಯೊಂದಿಗೆ ಕೂರಿಸಿ ಊಟ ಬಡಿಸಿದರು. ಆದರೆ, ಎಲೆಗೆ ಉಪ್ಪಿನಕಾಯಿ ಬೀಳುತ್ತಿದ್ದಂತೆ ಅವರಲ್ಲೊಬ್ಬ ಬೆರಳಿಂದ ಅದನ್ನು ಎತ್ತಿ ನಾಲಿಗೆ ಮೇಲಿಟ್ಟು ಚಪ್ಪರಿಸಿದ. ಇದರಿಂದ ಅನುಮಾನಗೊಂಡ ತಂದೆ ಟಿ.ವಿ.ಕೃಷ್ಣರಾವ್ ಎಲ್ಲರನ್ನು ಓಡಿಸಿ ಮನೆಗೆಲ್ಲ ಗಂಜಲ ಸಿಂಪಡಿಸಿ ಶುದ್ಧಿ ಮಾಡಿದ್ದರಂತೆ. 

ಸ್ವಾಮಿ ದಯಾನಂದರ ಶಿಷ್ಯ ಶ್ರದ್ಧಾನಂದರು ಹರಿದ್ವಾರದಲ್ಲಿ ಸ್ಥಾಪಿಸಿದ್ದ 'ಗುರುಕುಲ ಕಾಂಗಡಿ' ವಿಶ್ವವಿದ್ಯಾಲಯದಲ್ಲಿ ಸತತ ಆರು ವರ್ಷ ಅಭ್ಯಾಸ ಮಾಡಿ 'ವೇದಾಲಂಕಾರ' ಪದವಿ ಪಡೆದರು. ನಂತರ ಉತ್ತರ ಭಾರತದಲ್ಲಿ ಸಂಚರಿಸುತ್ತ ಸ್ವತಃ ವೇದಾಭ್ಯಾಸ ಮಾಡಿ ಎರಡೇ ವರ್ಷದಲ್ಲಿ 'ವೇದ ವಾಚಸ್ಪತಿ' ಆದರು. ಜ್ಞಾನ ಸಂಪಾದನೆ ಹೆಚ್ಚುತ್ತಿದ್ದಂತೆ ಪದವಿಗಳ ಬಗೆಗೆ ವ್ಯಾಮೋಹ ಇಲ್ಲವಾಗಿ, ಆಳ ಅಧ್ಯಯನದಲ್ಲಿ ನಿರತರಾದರು. ನಾಲ್ಕು ವೇದಗಳಲ್ಲೂ ಪರಿಣತಿ ಪಡೆದು 'ಚತುರ್ವೇದಿ' ಎಂದು ಹೆಸರಾದರು.  ಹಲವು ವರ್ಷಗಳ ಸಂಚಾರದ ಬಳಿಕ ಬೆಂಗಳೂರಿಗೆ ವಾಪಸ್ಸಾದರು. ಮಠವೊಂದರಲ್ಲಿ ಗುರುಗಳ ಭೇಟಿಗೆಂದು ಹೋಗಿದ್ದಾಗ, ವಿಧವೆಯೊಬ್ಬಳು ಗುರುಗಳ ಕಾಲಿಗೆ ನಮಸ್ಕರಿಸುವಷ್ಟರಲ್ಲಿ, ಆ ಗುರು ‘ಥೂ...! ಮುಂಡೆ ಅನಿಷ್ಟ ಹೋಗು ಆಕಡೆ...’ ಎಂದು ಗದರುತ್ತಿದ್ದರು. ಆ ಘಟನೆ ಸುಧಾಕರ ಅವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತು. ವಿಧವೆಯರು ಮಾತ್ರ ಏಕೆ ಧರಿದ್ರರು..? ಗಂಡಸರು ಎಷ್ಟು ಮದುವೆ ಬೇಕಾದರು ಮಾಡಿಕೊಳ್ಳಬಹುದು, ಹೆಂಸರಿಗೆ ಏಕೆ ಆ ಹಕ್ಕಿಲ್ಲ..? ಎಂಬ ಪ್ರಶ್ನೆಗಳನ್ನು ಗುರುಗಳಲ್ಲಿ ಕೇಳಿದ್ದರಂತೆ.  
ಇದರಿಂದ ಕೋಪಗೊಂಡ ಗುರು, ನಿಷ್ಠಾವಂತ ಬ್ರಾಹ್ಮಣರ ಮನೆಯಲ್ಲಿ ಇಂತಹ ಅಧಿಕ ಪ್ರಸಂಗಿ ಎಂದು ಟೀಕಿಸಿ; ಸಭೆ ಕರೆಸಿ ಬಹಿಷ್ಕಾರ ಹಾಕಿದರಂತೆ. 'ಯಾವತ್ತೋ ನಿಮ್ಮನ್ನು ನನ್ನೆದೆಯಿಂದ ಬಹಿಷ್ಕರಿಸಿದ್ದೇನೆ' ಎಂದು ಸುಧಾಕರ್‌ ಹೊರನಡೆದರಂತೆ. 

ಈ ಘಟನೆಯ ನಂತರ ಸುಧಾಕರ ಚತುರ್ವೇದಿ ಅವರು ಬೀದಿ-ಬೀದಿಗಳಲ್ಲಿ ತಿರುಗಿ ಜೀವನ ಸಾಗಿಸಬೇಕಾಗಿ ಬಂತು. ಸಂಬಂಧಿಗಳು ಮನೆಗೆ ಸೇರಿಸಲು ಹೆದರಿದರು. ಅಲೆದಾಟ ಇನ್ನಷ್ಟು ಗಟ್ಟಿಯಾಗಿಸಿತು. ಮತ್ತೆ ಉತ್ತರ ಭಾರತದ ಕಡೆಗೆ ತೆರಳಿದರು.  ಜೀವನೋಪಾಯಕ್ಕಾಗಿ  ಭಾಷಣಗಳನ್ನು ಮಾಡಿದರು. ಅದರಿಂದ ರೂಪಾಯಿ 100ರಿಂದ 2,000ದ ವರೆಗೂ ಸಂಭಾವನೆ ಸಿಗುತ್ತಿದ್ದು ಆರ್ಥಿಕ ಸಮಸ್ಯೆ ದೂರವಾಯಿತು.

1915ರಲ್ಲಿ ಸುಧಾಕರ ಅವರು ಹರಿದ್ವಾರದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮೊಟ್ಟಮೊದಲ ಬಾರಿಗೆ ಗಾಂಧೀಜಿ ಅವರೊಂದಿಗೆ ಭೇಟಿಯಾಗಿತ್ತು. ದಕ್ಷಿಣ ಭಾರತದವರಾದರೂ ಸುಲಲಿತವಾಗಿ ಹಿಂದಿ ಮಾತನಾಡುವುದನ್ನು ಕಂಡ ಗಾಂಧೀಜಿ ಚಕಿತರಾಗಿದ್ದರು. ಅಂದಿನಿಂದ ಬಾಪು ಜೊತೆಗಿನ ಸ್ನೇಹ ಮೊದಲುಗೊಂಡಿತು. ಕನ್ನಡದಲ್ಲಿ ಸಹಿ ಮಾಡಲು ಹಾಗೂ ಮಾತು ಅರ್ಥವಾಗುವಷ್ಟು ಕನ್ನಡ ಭಾಷೆಯನ್ನು ಗಾಂಧೀಜಿಗೆ ಕಲಿಸುವ ಪ್ರಯತ್ನ ಮಾಡಿದ್ದರಂತೆ. 

ಮಹಾತ್ಮ ಗಾಂಧಿ ಅನೇಕ ಬಾರಿ ಪತ್ರ ಬರೆಯುವಾಗ ಸುಧಾಕರರನ್ನು ಜೊತೆಯಲ್ಲಿರಿಸಿಕೊಳ್ಳುತ್ತಿದ್ದರು. ಕೆಲವು ಸಹ ವೈಸ್‌ರಾಯ್‌ಗಳೊಂದಿಗೆ ನಡೆಸುವ ಪತ್ರ ವ್ಯವಹಾರಗಳ ಹೊಣೆ ಇವರೇ ವಹಿಸಿದ್ದರಂತೆ. ಗಾಂಧೀಜಿ ಹೊರತರುತ್ತಿದ್ದ ಹಿಂದಿ ಮತ್ತು ಸಂಸ್ಕೃತ ಪ್ರತಿಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುತಿದ್ದರಂತೆ. ಹಾಗೂ ಕನ್ನಡದಲ್ಲಿ ಅಚ್ಚಾಗುತ್ತಿದ್ದ ‘ಹರಿಜನ’ ಪತ್ರಿಕೆಗೆ ಸುಧಾಕರ ಅವರ ಸಹೋದರ ಸಂಪಾದಕರಾಗಿದ್ದರಂತೆ.  

ಸುಧಾಕರ ಚತುರ್ವೇದಿ ಅವರು ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲೀಷ್ ಭಾಷೆ ಸರಾಗವಾಗಿ ಮಾತನಾಡುತ್ತಿದ್ದುದರಿಂದ ಪಂಜಾಬ್, ಲಾಹೋರ್, ಪಾಟ್ನಾ, ಕೋಲ್ಕತ್ತಾಗಳಲ್ಲಿ ಭಾಷಣ ಮಾಡಿದರು. ಅಲ್ಲಿ ಶಿಷ್ಯ ವೃಂದವೇ ಸೃಷ್ಟಿಯಾಯಿತು. ಶಿಷ್ಯರಲ್ಲಿ ಯುವತಿಯೊಬ್ಬಳು ಇವರನ್ನು ಪ್ರೀತಿಸಿದ್ದಳು ಹಾಗೂ ಆಕೆಯ ತಂದೆ ತನ್ನ ಮಗಳನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ, ಸುಧಾಕರ ಚತುರ್ವೇದಿಯವರು ಸ್ವರಾಜ್ಯ ಬರುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ತೊಟ್ಟಿದ್ದರು. ರಾಷ್ಟ್ರ ಸ್ವತಂತ್ರವಾಗುವುದು ತಡವಾಯಿತು... ಆ ಸಮಯಕ್ಕೆ ವಯಸ್ಸು 50 ವರ್ಷ ದಾಟಿತ್ತು. 1935ರಲ್ಲಿ ಬಲೋಚಿಸ್ತಾನದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿನ ಜನರ ಸೇವೆಗೆಂದು ತೆರಳಿದ್ದ ಪ್ರೀತಿಯ ಶಿಷ್ಯೆ ಮರಳಿ ಬರಲೇ ಇಲ್ಲ. ಹೀಗೆ ಸುಧಾಕರ ಚತುರ್ವೇದಿ ಬ್ರಹ್ಮಚಾರಿಯಾಗಿಯೇ ಉಳಿದರು.

ಹಲವು ಮಠಾಧೀಶರು, ಪಂಡಿತರು ಇವರಲ್ಲಿಗೆ ಬಂದು ವೇದ, ಮಂತ್ರಗಳ ಅರ್ಥವನ್ನು ತಿಳಿದುಕೊಂಡು ಹೋಗುವುದು ಕೊನೆಯವರೆಗೂ ಮುಂದುವರಿದಿತ್ತು.  ಶ್ರದ್ಧಾನಂದರ ಆಜ್ಞೆಯಂತೆ, ನಾಲ್ಕು ವೇದಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಸುಮಾರು 25 ಪಂಡಿತರಿಗೆ ಆ ಕೆಲಸವನ್ನು ಒಪ್ಪಿಸಲಾಗಿತ್ತು. ಇವರ ಸುಮಾರು 40 ಪುಸ್ತಕಗಳು ನಾಲ್ಕು ಭಾಷೆಗಳಲ್ಲಿ ಪ್ರಕಟಗೊಂಡವು. ‘ವೇದ ತರಂಗ’ ಹಾಗೂ ‘ವೇದ ಪ್ರಕಾಶ’ ಎಂಬ ಮಾಸಪತ್ರಿಕೆಗಳಲ್ಲಿನ ಮುಖ್ಯ ಹುದ್ದೆಯಲ್ಲಿಯೂ ಸೇವೆ ಸಲ್ಲಿಸಿದ್ದರು. 

ಮಹಾಯುದ್ಧಗಳ ಸಮಯದಲ್ಲಿ ಮುದ್ರಣವಾಗಿದ್ದ ತಮ್ಮದೇ ಪದ್ಯಗಳನ್ನು ಈಜಿಪ್ಟ್‌ನಲ್ಲಿದ್ದ ಕನ್ನಡ ನಾಡಿನ ಸೈನಿಕರಿಗಾಗಿಯೇ 500 ಪ್ರತಿಗಳನ್ನು ತಲುಪಿಸಿದ್ದರು. ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಸುಧಾಕರ ಚತುರ್ವೇದಿ ಅವರು ಗಾಂಧೀಜಿ ಜೊತೆ ಬಂಗಾಳದಲ್ಲಿದ್ದರು. ಹಿಂದು-ಮುಸಲ್ಮಾನರ ಗಲಭೆಗಳು ಹೆಚ್ಚು ನಡೆಯುತ್ತಿದ್ದ ಜಾಗವದು. ಅದೇ ಸಮಯದಲ್ಲಿ ಒಬ್ಬ ಮುಸಲ್ಮಾನ ವೃದ್ಧ ಇವರನ್ನು ಆರು ತಿಂಗಳು ಜೋಪಾನ ಮಾಡಿದ್ದರು. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಸುಮಾರು 31 ಬಾರಿ ಕರಾಚಿಯಿಂದ ಮೊದಲ್ಗೊಂಡು ವೆಲ್ಲೂರಿನ ವರೆಗೆ ದೇಶದ ಬಹುತೇಕ ಕಡೆ ಸೆರೆಮನೆ ವಾಸ ಅನುಭವಿಸಿದರು.

ಸುಧಾಕರ ಚತುರ್ವೇದಿ ಅವರು ಮಹಾತ್ಮ ಗಾಂಧಿ ಅವರ 'ಪೋಸ್ಟ್ ಮನ್' ಎಂದೇ ಹೆಸರಾಗಿದ್ದರು. ಅವರ ಬದುಕು ಹೋರಾಟ ಮತ್ತು ಅಲೆದಾಟಗಳ ಜೋಡಣೆ ಎಂಬಂತ್ತಿತ್ತು. 123 ವರ್ಷ ಬದುಕಿದ ಅವರ ನಿತ್ಯ ಚಟುವಟಿಕೆ ಮತ್ತು ಆಹಾರ ಪದ್ಧತಿ ಸೋಜಿಗ ಮೂಡಿಸುವಂತದ್ದಾಗಿತ್ತು. ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾಳೆ ಹಣ್ಣು ಸೇವೆಯೇ ಅವರ ಊಟ. ಅದುವೇ ದೀರ್ಘ ಆಯುಷ್ಯದ ಗುಟ್ಟಾಗತ್ತಂತೆ!

'ಮತ ಪರಿವರ್ತನೆಗಿಂತ, ಮನಃ ಪರಿವರ್ತನೆ ಉತ್ತಮ‘ ಹಾಗೂ ಹೆಸರು, ವೇಷ-ಭೂಷಣದಲ್ಲಿ ಬದಲಾವಣೆ ಬೇಕಾಗಿಲ್ಲ, ಯಾರಲ್ಲಿ ನಿನಗೆ ನಂಬಿಕೆಯಿದೆಯೊ ಅವರನ್ನು ನೀನು ಪೂಜಿಸು ಎಂದು ಸಾರಿದರು.  ಬ್ರಹ್ಮಚಾರಿಯಾಗಿದ್ದ ಸುಧಾಕರ ಅವರು ಹಿಂದುಳಿದ ವರ್ಗದ ಹುಡುಗನನ್ನು ದತ್ತು ತೆಗೆದುಕೊಂಡು ಆತನಿಗೆ 'ಆರ್ಯಮಿತ್ರ' ಎಂದು ಹೆಸರಿಟ್ಟು ಉತ್ತಮ ವಿದ್ಯಾಭ್ಯಾಸ ನೀಡಿ ಬೆಳೆಸಿದರು. ಆರ್ಯಮಿತ್ರ ಜಿಲ್ಲಾಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸಿದರು. 

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸುಧಾಕರ ಚತುರ್ವೇದಿ ಅವರಿಗೆ 2007-2008ರಲ್ಲಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿತು. 2010ರಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಿಂದ ಸನ್ಮಾನ ಸಂದಿತು.

ಚತುರ್ವೇದ ವಿದ್ವಾಂಸ, ಸ್ವಾತಂತ್ರ ಹೋರಾಟಗಾರ, ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ ಸುಧಾಕರ್‌ ಚತುರ್ವೇದಿ ಅವರು 2020ರ ಫೆಬ್ರವರಿ 27ರಂದು ಬೆಂಗಳೂರಿನಲ್ಲಿ ನಿಧನರಾದರು. 

On the birth anniversary of great scholar and freedom fighter

 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ