ಶಿವಮೂರ್ತಿ ಶಾಸ್ತ್ರೀ
ಬಿ. ಶಿವಮೂರ್ತಿ ಶಾಸ್ತ್ರೀ
ಬಿ. ಶಿವಮೂರ್ತಿ ಶಾಸ್ತ್ರಿಗಳು ಮಹಾನ್ ವಿದ್ವಾಂಸರಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದವರಾಗಿ, ಕೀರ್ತನಕೇಸರಿ ಬಿರುದಾಂಕಿತರಾಗಿ ನಾಡಿನಲ್ಲೆಲ್ಲಾ ಸಂಚರಿಸಿದವರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪರಿಷತ್ತಿನ ಚಟುವಟಿಕೆಗಳಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದವರಾಗಿ ಸ್ಮರಣೀಯರಾಗಿದ್ದಾರೆ.
ಶಿವಮೂರ್ತಿ ಶಾಸ್ತ್ರಿಗಳು 1903ರ ಫೆಬ್ರವರಿ 23ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಬಸವಯ್ಯಸ್ವಾಮಿ. ತಾಯಿ ನೀಲಮ್ಮ. ಶಾಸ್ತ್ರಿಗಳ ವಿದ್ಯಾಭ್ಯಾಸ ಅಪ್ಪರ್ ಸೆಕೆಂಡರಿಯವರೆಗೆ ತುಮಕೂರಿನಲ್ಲಿ ನಡೆಯಿತು. ಮುಂದೆ ಕರಿಬಸವ ಶಾಸ್ತ್ರಿಗಳಲ್ಲಿ ಸಂಸ್ಕೃತ ಮತ್ತು ಕನ್ನಡ ಅಭ್ಯಾಸ ಮಾಡಿದರು. ಜೊತೆಗೆ ಸ್ವಪ್ರಯತ್ನದಿಂದ ಹಿಂದಿ, ತೆಲುಗು ಭಾಷೆಗಳನ್ನೂ ಕಲಿತರು.
ಶಿವಮೂರ್ತಿ ಶಾಸ್ತ್ರಿಗಳು 1924ರಲ್ಲಿ ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. 1936ರಲ್ಲಿ ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡರು.
ಶಿವಮೂರ್ತಿ ಶಾಸ್ತ್ರಿಗಳು 'ಶರಣ ಸಾಹಿತ್ಯ’ ಎಂಬ ಮಾಸ ಪತ್ರಿಕೆ ಆರಂಭಿಸಿದರು. ಇದರಲ್ಲಿ ವೀರಶೈವ ಸಾಹಿತ್ಯ ಪ್ರಸಾರವೇ ಪ್ರಮುಖವಾಗಿದ್ದರೂ ಇತರ ಧರ್ಮಗಳ ಕುರಿತ ಲೇಖನಗಳಿಗೂ ಪ್ರಾಶಸ್ತ್ಯ ಸಂದಿತು. ಶರಣ ಸಾಹಿತ್ಯದ ಜೊತೆಗೆ ಕರ್ನಾಟಕದ ಏಕೀಕರಣಕ್ಕೆ ಮೀಸಲಾದ ‘ಸ್ವತಂತ್ರ ಕರ್ನಾಟಕ’ ವಾರಪತ್ರಿಕೆಯನ್ನು 1938ರಲ್ಲಿ ಆರಂಭಿಸಿದರು.
ಶಿವಮೂರ್ತಿ ಶಾಸ್ತ್ರಿಗಳು ಉಪಾಧ್ಯಾಯ ವೃತ್ತಿಗೆ ಶರಣು ಹೊಡೆದು ಕೀರ್ತನಕಾರರಾದರು. ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ‘ಕರ್ನಾಟಕ ವಿಜಯ’ದ ಮೇಲೆ ಕೀರ್ತನೆ ಮಾಡಿ ಖ್ಯಾತರಾದರು.
ಶಿವಮೂರ್ತಿ ಶಾಸ್ತ್ರಿಗಳು ಹಲವಾರು ಗ್ರಂಥಗಳನ್ನು ಸಂಶೋಧಿಸಿ ಪ್ರಕಟಿಸಿದರು. ‘ಶೂಲಪಾಣಿ’ ಎಂಬ ಕಾವ್ಯನಾಮದಿಂದಲೂ ಲೇಖನಗಳನ್ನು ಬರೆದರು. ರಾಘವಾಂಕನ ವೀರೇಶಚರಿತ್ರೆ, ನಿಜಗುಣ ಶಿವಯೋಗಿಯ ಪುರಾತನರ ತ್ರಿವಿ, ಪಾಲ್ಕುರಿಕೆ ಸೋಮನಾಥನ ‘ಬಸವೋದಾಹರಣಮ್’, ಗಣಸಹಸ್ರನಾಮ, ಘನಲಿಂಗಿ ದೇವರ ವಚನಗಳು, ಸಂಕ್ಷಿಪ್ತ ಪೂಜಾವಿ, ಕೋಡಿಹಳ್ಳಿ ಕೇಶೀರಾಜನ ‘ಷಡಕ್ಷರ ಮಂತ್ರ ಮಹಿಮೆ’, ಗುರುಸಿದ್ದನ ಮಾದೇಶ್ವರ ಸಾಂಗತ್ಯ, ಸರ್ವಜ್ಞಮೂರ್ತಿ, ಹಿಂದೂಧರ್ಮ ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ. ವೀರಶೈವ ಸಾಹಿತ್ಯ ಮತ್ತು ಇತಿಹಾಸ (ಭಾಗ ೧, ೨, ೩), ವೀರಶೈವ ಮಹಾಪುರುಷರು, ಕರ್ನಾಟಕ ದರ್ಶನ, ನಾಲ್ವಡಿ ಕೃಷ್ಣರಾಜ ವಿಲಾಸ, ಗಾಂಗೀತೆಗಳು ಇವರ ಇತರ ಪ್ರಮುಖ ಕೃತಿಗಳು.
ಶಿವಮೂರ್ತಿ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ‘ಕನ್ನಡ ನುಡಿ’ಯ ಸಂಪಾದಕ ಮಂಡಲಿಯಲ್ಲಿ ಕಾರ್ಯನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದರು. ಸರ್ಕಾರದ ಪಠ್ಯಪುಸ್ತಕ ಸಮಿತಿ, ದಿ ರೀಜನಲ್ ಹಿಸ್ಟಾರಿಕಲ್ ಕಮಿಟಿ, ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜ್ ಸಮಿತಿಗಳಲ್ಲಿ ಇದ್ದರು.
ಶಿವಮೂರ್ತಿ ಶಾಸ್ತ್ರಿಗಳು 1948ರಲ್ಲಿ ಮೈಸೂರು ಮಹಾರಾಜರಿಂದ ‘ಪಂಡಿತರತ್ನ’ ಪ್ರಶಸ್ತಿ ಸಂದಿತು. ಆಸ್ಥಾನ ವಿದ್ವಾನ್, ಕೀರ್ತನಾಚಾರ್ಯ, ಕರ್ನಾಟಕ ವಿಭೂಷಣ, ವಿದ್ಯಾವಾರಿ, ಸಮಾಜ ಭಾಸ್ಕರ, ಪಂಡಿತರತ್ನಂ ಬಿರುದಾಂಕಿತರಾಗಿದ್ದರು.
1966ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ, 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೌರವಗಳು ಸಂದವು.
ಶಿವಮೂರ್ತಿ ಶಾಸ್ತ್ರಿಗಳು 1976ರ ಜನವರಿ 15ರಂದು ಈ ಲೋಕವನ್ನಗಲಿದರು.
Great scholar B. Shivamurthy Shastri
ಕಾಮೆಂಟ್ಗಳು