ಲಲಿತಾ ನಾಯಕ್
ಬಿ. ಟಿ. ಲಲಿತಾ ನಾಯಕ್
ಲಲಿತಾ ನಾಯಕ್ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪರಿಚಿತರಾದವರು.
ಲಲಿತಾ ನಾಯಕ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯ ಎಂಬಲ್ಲಿ 1945ರ ಏಪ್ರಿಲ್ 4ರಂದು ಜನಿಸಿದರು. ತಂದೆ ಬಾಲಾಜಿನಾಯಕ್. ತಾಯಿ ಗಂಗಾಬಾಯಿ. ತಾಂಡ್ಯ, ಚಿತ್ರದುರ್ಗದಲ್ಲಿ ಎಂಟನೆಯ ತರಗತಿವರೆಗೆ ವಿದ್ಯಾಭ್ಯಾಸ ನಡೆಸಿದ ನಂತರದಲ್ಲಿ ವಿದ್ಯಾಭ್ಯಾಸದ ಅವಕಾಶಗಳು ಹೆಚ್ಚಿಲ್ಲದ ಅಂದಿನ ದಿನಗಳಲ್ಲಿ ಲಲಿತಾ ಅವರು ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡಲಾರಂಭಿಸಿದರು. ಹೀಗೆ ಅವರು ಸಂಸ್ಕೃತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಪರಿಣತಿ ಸಾಧಿಸಿದರು. ಬಿ.ಎ. ಓದುತ್ತಿದ್ದ ಅಣ್ಣ ಪ್ರತಿವಾರ 30. ಕಿ.ಮೀ. ದೂರದ ಚಿಕ್ಕಮಗಳೂರಿನಿಂದ ಹಳ್ಳಿಗೆ ಬಂದು ತಂಗಿಗೆ ಕಲಿಸಿ ಹೋಗುತ್ತಿದ್ದರಂತೆ.
ಲಲಿತಾ ನಾಯಕರ ಕಥೆ, ಕಾದಂಬರಿ, ನಾಟಕಗಳೆಲ್ಲದರಲ್ಲಿ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯದ ದನಿ, ದಲಿತರ ನೋವುಗಳಿವೆ. ಹಲವು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿಯೂ ಕಾರ್ಯನಿರ್ವಹಿಸಿದರು. ಇವರು ರಚಿಸಿದ ಅನೇಕ ನಾಟಕಗಳು ಧಾರವಾಡದ ಆಕಾಶವಾಣಿ ಕೇಂದ್ರದಿಂದ ಪ್ರಸಾರಗೊಳ್ಳುತ್ತಿದ್ದವು.
1986ರಲ್ಲಿ ರಾಮಕೃಷ್ಣ ಹೆಗಡೆಯವರ ಆಹ್ವಾನದ ಮೇರೆಗೆ ರಾಜಕೀಯ ಪ್ರವೇಶ ಮಾಡಿದ ಲಲಿತಾ ನಾಯಕ್, 1986-92ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿ, 1994ರಿಂದ 99ವರೆಗೆ ವಿಧಾನಸಭಾ ಸದಸ್ಯರಾಗಿ, ಸಚಿವೆಯಾಗಿ ಕಾರ್ಯನಿರ್ವಹಿಸಿದರು. ಕೆಲಕಾಲದ ಹಿಂದೆ ಅವರು ಆಮ್ ಆದ್ಮಿ ಪಕ್ಷ ಸೇರಿದ್ದರು ಎಂದು ಓದಿದ ನೆನಪು.
ಲಲಿತಾ ನಾಯಕ್ ಅವರ ಪ್ರಕಟಿತ ಕೃತಿಗಳು: ಚಂದ್ರಪರಾಭವ (ನಾಟಕ ಸಂಕಲನ) ; ಭಟ್ಟನ ಕನಸು (ಮಕ್ಕಳ ಕಥಾ ಸಂಕಲನ) ; ನೆಲೆ ಬೆಲೆ, ಗತಿ (ಕಾದಂಬರಿ) ; ಹಬ್ಬ ಮತ್ತು ಬಲಿ (ಕಥಾಸಂಕಲನ) ; ನಂ ರೂಪ್ಲಿ, ಇದೇ ಕೂಗು ಮತ್ತೆ ಮತ್ತೆ, ಒಡಲ ಬೇಗೆ, ಬಿದಿರು ಮೆಳೆ ಕಂಟಿಯಲ್ಲಿ, ಸವಾಸೇರು (ಕವನ ಸಂಕಲನ); ಚುಟುಕುಗಳ ಸಂಕಲನ ಮುಂತಾದವು
ಲಲಿತಾ ನಾಯಕ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜೀವ್ ಗಾಂಧಿ ಏಕತಾ ಪ್ರಶಸ್ತಿ, ಶ್ರೀಮತಿ ಸಾವಿತ್ರಮ್ಮ ದೇ.ಜ.ಗೌ. ಮಹಿಳಾ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ಕಿರಣ ಪ್ರಭಾ ಪ್ರಶಸ್ತಿ, ಕಾಯಕ ಸಮ್ಮಾನ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ ಮುಂತಾದ ಹಲವಾರು ಸಾಹಿತ್ಯಕ, ಸಾಮಾಜಿಕ ಪ್ರಶಸ್ತಿ ಗೌರವಗಳು ಸಂದಿವೆ.
On the birthday of writer and politician B. T. Lalitha Naik
ಬಡತನದಲ್ಲಿ ಹುಟ್ಟಿ.ಸಾಕಷ್ಟು ಓದಲಿಲ್ಲ ಆದರೂ ಸಾಹಿತ್ಯದ ಗೀಳು ಹಚ್ಚಿಕೊಂಡು ಜನಾಂಗ ಬಡತನ ಶ್ಯೈಕ್ಷಣಿಕ . ರಾಜಕೀಯ ಸ್ಥಿತಿಗತಿ.ಇಂಥ ವಾತಾವರಣ ದ ಸಂವೇದನಾಶೀಲತೆ ಯಿಂದ ಜನಾಂಗದ ಬೆಳಕಾಗಿ ಯುವ ಬರಹಗಾರರಿಗೆ ಸ್ಪೂರ್ತಿ ಆಗಿರುವ ನೀವು ನೂರು ವರುಷ ಬಾಳಿ ಎಂದು ಹಾರೈಸುತ್ತೇನೆ ಅಮ್ಮಾ....
ಪ್ರತ್ಯುತ್ತರಅಳಿಸಿ