ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೀchi


 ಬೀchi


ನನಗೆ ತುಂಬಾ ಸಂತೋಷ ತಂದಿರುವ ಸಂಗತಿಗಳಲ್ಲಿ ಬೀchi ಅವರ ಪುಸ್ತಕಗಳು  ಪ್ರಮುಖವಾದದ್ದು.  ಹಾಗಾಗಿ ಅವರ ಪುಸ್ತಕ ತಿಂಮನ ತಲೆ, ಬೆಳ್ಳಿ ತಿಂಮ ನೂರೆಂಟು ಹೇಳಿದ ನನಗೆ ನಿರಂತರ ಸಂಗಾತಿ. 

'ಏಪ್ರಿಲ್ 23’ ಬೀchi ಅವರ ಹುಟ್ಟಿದ ಹಬ್ಬ. ಬೀchi ಅವರ ಬಗ್ಗೆ ಅಷ್ಟು ಸುಂದರವಾಗಿ ಇಂದು ಅ.ರಾ. ಮಿತ್ರರ ಹೊರತು ಮತ್ತಿನ್ನಾರು ಬರೆಯಲು ಸಾಧ್ಯ.  ಇದೋ ಈ ಬರಹ ಮಿತ್ರರದು.  ಇನ್ನು ನೀವುಂಟು, ಬೀಚಿ ಉಂಟು, ಮಿತ್ರರುಂಟು.  ನಾನು ಇಲ್ಲಿ ಕೇವಲ ಟೈಪಿಗ.

ನಿನ್ನಂತೆ ನೀನಾಗು 
ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ 
ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? 
ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ.   
(- ಅಂದನಾ ತಿಂಮ)

ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು.  ಇದು ಬೀchi ದೃಷ್ಟಿಕೋನ.  ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ.  ಬೀchi ಪ್ರಸಿದ್ಧ ಇಂಗ್ಲಿಷ್ ಕಾದಂಬರಿಗಳ ನಗೆತುಣುಕುಗಳ ಸಾಮಗ್ರಿಯನ್ನು ಕನ್ನಡಕ್ಕೆ ಇಳಿಸಿದ್ದಾರೆ  ನಿಜ.  ಆದರೆ ಅವರ ಭಾಷಾಪ್ರಜ್ಞೆಯಲ್ಲಿ ಕನ್ನಡದ ಛಾಪು ಇದೆ. ಶಬ್ದದ ವಿಶಿಷ್ಟ ಸತ್ವದಿಂದಲೇ ವಿಚಾರಗಳನ್ನು ಬೆದಕಬೇಕೆಂಬ ಆರೋಗ್ಯಕರ ವ್ಯಂಗ್ಯಶೀಲತೆಯಿದೆ.  “ಮಾನವನ ಬಾಳು ಗೋಪುರದ  ಗಡಿಯಾರ.  ತಲೆ ಎತ್ತಿದರೆ ಮಾತ್ರ ಕಾಣುತ್ತದೆ.  ಎತ್ತಲು ತಲೆ ಎಂಬುದೊಂದುಬೇಕು.  ಎತ್ತಬೇಕು ಅಂಬುದು ಅದಕ್ಕೆ ತೋಚಬೇಕು, ಅಲ್ಲವೇ?  ಅದಕ್ಕಾಗಿ ಮನುಷ್ಯನೆಂಬ ಪ್ರಾಣಿ ಊರ್ಧ್ವಮುಖಿ.  ಗಡಿಯಾರ ಅಂಬುದು ಅದಕ್ಕೆ ತೋಚಬೇಕು.  ಬರೀ ಕಂಡರೂ ಸಾಲದು.  ಅದರ ಮುಳ್ಳುಗಳ ಲೆಕ್ಕಾಚಾರ ತಿಳಿದಿರಬೇಕು.”  ಹೀಗೆ ಶಬ್ದಮುಖವಾಗಿ ಪ್ರತಿಮಾತ್ಮಕವಾಗಿ ಬರೆಯುವ ಶಕ್ತಿಯನ್ನು ಅವರು ರೂಢಿಸಿಕೊಂಡವರು.  ಈ ಬಗೆಯ ವ್ಯಂಗ್ಯ ಶೈಲಿಯೇ ಅವರ ದೊಡ್ಡ ಕೊಡುಗೆ.

ಭಾಷೆಯ ಬೇರುಗಳೊಳಗೆ ನೀರಿನಂತೆ ಇಳಿದುಕೊಂಡು ಅದರ ಒಳಮೈಯ ಇಕ್ಕಟ್ಟಾದ ಸ್ಥಳಗಳನ್ನೆಲ್ಲ ಶೋಧಿಸುವ ಕೆಲಸ ಕೈಗೊಂಡವರು ಬೀchi.  ಇದರ ಪರಿಣಾಮವಾಗಿ ಶಬ್ದದ ಬೆನ್ನುಹತ್ತಿ ಅದರ ವಕ್ರಗತಿಗಳನ್ನೆಲ್ಲ ತೋರಿಸಿಕೊಡುವುದು, ಹಾಸ್ಯದೃಷ್ಟಿಯನ್ನಿರಿಸಿಕೊಂಡು ಶಬ್ದದ ಆಚೆ ಈಚೆಯ ವಿಚಾರದ ಮಗ್ಗುಲುಗಳನ್ನು ತೋರಿಸಿ ಕೊಡುವುದು ಅವರಿಗೆ ಸಾಧ್ಯವಾಯಿತು.  ಈ ದೃಷ್ಟಿಯಿಂದ ಹಾಸ್ಯ ವಿಶ್ಲೇಷಣೆ ಶಬ್ಧಶೋಧಗಳೆರಡನ್ನೂ ಒಂದೇ ಮೈಯಲ್ಲಿ ಸಾಧಿಸಿದ ಕೀರ್ತಿ ಬೀchiಯವರಿಗೆ ಸಲ್ಲುತ್ತದೆ.  ಆಧುನಿಕ ಕನ್ನಡ ಹಾಸ್ಯಪರಂಪರೆ ಬಹುಮುಖಿಯಾದದ್ದು.  ಆರ್. ನರಸಿಂಹಾಚಾರ್, ಗೊರೂರು, ಪಡುಕೋಣೆ ರಮಾನಂದರಾಯ ಇವರುಗಳಲ್ಲಿ ಹಾಸ್ಯ ಪ್ರಸಂಗಗಳ ನವಿರಾದ ವಸ್ತು ವಿವರಣೆಯಿದೆ.  ರಾಶಿ, ರಾಜರತ್ನಂ, ಎ. ಎನ್. ಮೂರ್ತಿರಾವ್, ಲಾಂಗೂಲಾಚಾರ್ಯ ಇವರುಗಳ ಹಾಸ್ಯದಲ್ಲಿ ಆತ್ಮೀಯತೆಯ ಲೇಪವಿದೆ.  ನಾಡಿಗೇರ್ ಸೋದರರು, ನಾ. ಕಸ್ತೂರಿ, ಎನ್ಕೆ, ಎಚ್. ಕೆ. ರಂಗನಾಥ್ ಇವರುಗಳು ಶುದ್ಧಹಾಸ್ಯದ ಅಬ್ಬರದ ದರ್ಶನ ಮಾಡಿಕೊಡುತ್ತಾರೆ.  ಶ್ರೀರಂಗ, ಕಾರಂತ ಇವರ ಹಾಸ್ಯದ ಹಿನ್ನೆಲೆಯಲ್ಲಿ ವಿಚಾರದ ಬೆಟ್ಟವೇ ಇರುತ್ತದೆ.  ರಾ.ಕು, ಅ.ರಾ.ಸೇ, ದಾಶರಥಿ ದೀಕ್ಷಿತ್, ಸುನಂದಮ್ಮ ಮೊದಲಾದವರು ತಮ್ಮ ವಿಚಿತ್ರ ದೃಷ್ಟಿಕೋನದಿಂದ ಹಾಸ್ಯಪ್ರಕರಣಗಳನ್ನು ಮಥಿಸುತ್ತಾರೆ.  ಬೀchi ಶಬ್ದದ ಬೆನ್ನು ಹಿಡಿದು ಹಾಸ್ಯದ ಒಳಸೆಲೆಗಳನ್ನು ಶೋಧಿಸುವ ಅನನ್ಯ ಪಂಥದ ಬರಹಗಾರರಾಗಿದ್ದಾರೆ.

“ಬೀchi”  ಕನ್ನಡ-ಹೂಣ ಲಿಪಿಗಳ ಎರಡು ತಲೆ ಕರುವಿನಂತೆ ವಿಚಿತ್ರವಾಗಿ ಕಾಣುವ ಈ ಹೆಸರು ನಿಜವಾಗಿ ಅಚ್ಚಕನ್ನಡದ ‘ಬೀಚಿ’ಯೇ.  ಅವರ ನಿಜವಾದ ಹೆಸರು ಹೆದರಿಕೆ ಹುಟ್ಟಿಸುವಂತ ಬಲಶಾಲಿಯಾದ ಹೆಸರೇ.  ರಾಯಸಂ ಭೀಮಸೇನರಾವ್.  ಈ ಬಗ್ಗೆ ಅವರೇ ವಿವರಣೆ ನೀಡಿದ್ದಾರೆ.

“ಪಾರ್ಥಸಾರಥಿ ಪಾಚು ಆಗುತ್ತಾನೆ.  ನಾರಾಯಣ ನಾಣಿ.  ಅಂತೆಯೇ ಭೀಮಸೇನ ಬೀಚಿಯಾದ ಅವರಿವರ ಬಾಯಲ್ಲಿ, ಹಾಗಾದುದೇ ಒಳಿತಾಯಿತು.  ಸದಾ ಕರುಳಿನ ಬೇನೆಯಿಂದ ನರಳುವ ಈ ಹೊಟ್ಟೆರೋಗಿ ‘ಭೀಮಸೇನ’ ಹೇಗಾದಾನು?”  ಹೀಗಾಗಿ ಈ ‘ಕಾಚಿಕಡ್ಡಿ ಪೈಲುವಾನ’ ಅವರ ಅಮ್ಮನ ಮುದ್ದಿನ ನುಡಿಗತ್ತರಿಗೆ ಸಿಲುಕಿ ‘ಬೀಚಿ’ಯಾದ.

ಅವರ ಜೀವನ ಚರಿತ್ರೆಯ ಒಂದು ಪುಟ ಅವರೇ ಬರೆದ ‘ಬೀchi ಲೈಫೋಗ್ರಫಿ’ಯಲ್ಲಿದೆ.  

ಹುಟ್ಟಿದ ತಾರೀಖು : 23.4.1913

ಶಿಕ್ಷಣ : ಎಸ್.ಎಸ್.ಎಲ್.ಸಿ ಪಾಸು 1930

ನೌಕರಿಗೆ ಸೆರಿದ್ದು : “ ಪೋಲೀಸ್ ಖಾತೆಯಲ್ಲಿ ಅಟೆಂಡರ್ 1931

ಪ್ರಥಮ ಲೇಖನ ಮುದ್ರಣ  :  ಪ್ರಜಾಮತ (ಮದ್ರಾಸ್) 1933

ಮದುವೆ : ಜಮಖಂಡಿ ಶ್ರೀನಿವಾಸಾಚಾರ್ಯರ ಮಗಳು ಸೌ. ಸೀತಾಬಾಯಿ ಅವರೊಡನೆ.  1933 (ಶ್ರಾವಣ)

ಪ್ರಥಮ ಸಂತಾನ : 1940

ಪ್ರಥಮ ಪುಸ್ತಕ ಪ್ರಕಟಣೆ : 1946

ಕೆಲಸದಲ್ಲಿ ಬಡತಿ : ಸೂಪರಿಂಟೆಂಡೆಂಟ್, ಸ್ಪೆಷಲ್ ಬ್ರಾಂಚ್ ಸಿ.ಐ.ಡಿ ಬೆಂಗಳೂರು (ರಾಜ್ಯದಲ್ಲಿ ಈ ತರಹದ ಹುದ್ದೆ ಇದೊಂದೇ)

ಪಿಂಚಣಿ : 1968

ಪಿಂಚಣಿ ಹಣ : ರೂ. 133

ವಿಶೇಷ ಉಲ್ಲೇಖನೀಯ ಸಂಗತಿಗಳು : ಹುಟ್ಟುವುದು, ಮದುವೆ

ಬೀchi ಹರಪನಹಳ್ಳಿಯ ಹುರುಪಿನ ಜೀವ.  ಅವರೇ ತಮ್ಮ ಬಾಲ್ಯದ ಬಗೆಗೂ ಹೇಳಿಕೊಂಡಿದ್ದಾರೆ.  “ಪರಾವಲಂಬಿಯ ಜೀವಿ ನಾನಲ್ಲ.  ಹುಟ್ಟುತ್ತಲೇ ತಂದೆ, ತಾಯಿ ಇಲ್ಲ.  ಬಡವರಾದ ಸೋದರತ್ತೆ ಅವರು ಉಳಿದ ತಂಗಳ ಹಾಕಿ ಸಾಕಿದರು.... ಎಸ್ಸೆಸ್ಸೆಲ್ಸಿ ಮುಗಿಸುವುದೇ ಒಂದು ಪ್ರಯಾಸವಾಯಿತು.  ಶಾಲೆಗೆ ಫೀಜು ಕಟ್ಟುವುದಕ್ಕೆ ಗತಿಯಿಲ್ಲದೆ ಅಲ್ಲಿಗೆ ಮುಗಿಯಿತು ವಿದ್ಯಾಭ್ಯಾಸದ ಕತೆ”.  ಅವರಿಗೆ ಬಾಲ್ಯದಲ್ಲಿ ಅಕ್ಷರಾಭ್ಯಾಸವಾದದ್ದು ತೆಲುಗಿನಲ್ಲಿ.  ಸೋದರಮಾವ ವೃತ್ತಿಯಲ್ಲಿ ಅರ್ಚಕರು.  ಅವರ ಮನೆಯಲ್ಲಿ ‘ಮೇಲುಕರಟದ ತುರಿಯಿಂದ ಬೆಳೆದವನು’ ಎಂದು ಬೀchi ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.  ಅವರು ಕನ್ನಡ ಕಲಿತದ್ದೇ ಎಸ್.ಎಸ್.ಎಲ್.ಸಿ ವೇಳೆಗೆ (ಅಥವಾ ಆಗಲೂ ಅಲ್ಲ.  I learnt Kannada after I became an author – ಇದು ಅವರದೇ ಮಾತು).  ಪೋಲೀಸ್ ಇಲಾಖೆಯಲ್ಲಿ ಅಖಂಡವಾಗಿ ಮೂವತ್ತೆರಡು ವರ್ಷ ಸೇವೆ.  ಬಹುಶಃ ಇವರ ಹುಡುಕುಗಣ್ಣು, ಚುಚ್ಚು ಮಾತು, ಝಾಡಿಸುವ ಮನೋಧರ್ಮ ಇವೆಲ್ಲ ಬಹುಮಟ್ಟಿಗೆ ಆ ಡಿಪಾರ್ಟ್ ಮೆಂಟಿನ ಪ್ರಸಾದ ಎನಿಸುತ್ತದೆ.  ಇದನ್ನು ಮನಸ್ಸಿನಲ್ಲಿರಿಸಿಕೊಂಡೇ ಎಂ.ಎನ್. ವ್ಯಾಸರಾವ್ ಬೀಚಿಯವರನ್ನು ಕುರಿತ ಒಂದು ಪದ್ಯದಲ್ಲಿ:

ಕಾಲಮಾನಗಳನಾಚೆ ನೂಕಿ
ಸವೆದು ಸತ್ತವುಗಳ ಬೆದಕಿ ಕೆದಕಿ
ಸದಾ ತನಿಖೆಯಲ್ಲಿರುವ ಮನಸು

ಎಂದಿದ್ದಾರೆ.  

ಬೀchi ಬರವಣಿಗೆಗೆ ಇಳಿದದ್ದು ಒಂದು ಆಕಸ್ಮಿಕವೇ.  ಅದರಲ್ಲೂ ಹಾಸ್ಯದ ಬರವಣಿಗೆಗೆ ಅವರಿಗೆ ಪ್ರೇರಣೆ ಬಂದದ್ದು ಇನ್ನೊಂದು ಆಕಸ್ಮಿಕ.  ಹಾಸ್ಯಪ್ರಜ್ಞೆಯೇನೋ ಅವರಲ್ಲಿ ಧಾರಾಳವಾಗಿತ್ತು.  ಆದ್ದರಿಂದ ಏನನ್ನೂ ಬರೆಯದಿದ್ದರೂ ಹಾಸ್ಯಗಾರರನ್ನಾಗಿರುವವರನ್ನು ಅವರು ಮೆಚ್ಚಿದ್ದಾರೆ:

“ಎಂದು ನೀನು ಹಾಸ್ಯ ಲೇಖಕನಾದಿ? ಎಂಬುದಕ್ಕೆ ಉತ್ತರ ಸಿಕ್ಕೀತು.  ಆದರೆ ನೀನೆಂದು ಹಾಸ್ಯಗಾರನಾದಿ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ತುಂಬಾ ಕಷ್ಟ.  ಹಾಸ್ಯಗಾರ ಅವನು ಹುಟ್ಟುವ ಮೊದಲೇ ಹಾಸ್ಯಗಾರನಾಗಿರುತ್ತಾನೆ.  ಆಮೇಲೆ ಅವನು ಲೇಖಕನಾದರೆ ಹಾಸ್ಯ ಲೇಖಕನಾಗುತ್ತಾನೆ.  ಇಲ್ಲದಿದ್ದರೆ ಬರಿಯ ಹಾಸ್ಯಗಾರನಾಗಿಯೇ ಉಳಿಯುತ್ತಾನೆ.  ಅಂಥ ಹುಟ್ಟು ಹಾಸ್ಯಗಾರರು ನಮ್ಮಲ್ಲಿ ಹೇರಳವಾಗಿದ್ದಾರೆ.

“ಬೀchi ಅವರಿಗೆ ಬರೆಯುವ ಅಭ್ಯಾಸ ಇರಲಿಲ್ಲ ಮಾತ್ರವಲ್ಲ.  ‘ಕನ್ನಡದಲ್ಲಿ ಬರೆಯುವುದು ಓದುವುದು ಅಷ್ಟೇನೂ ಗೌರವದ ಕೆಲಸವಲ್ಲ ಎಂಬ ಭಾವನೆಯೂ ಇತ್ತು.  ಕನ್ನಡ ಸಾಹಿತ್ಯ ಗ್ರಂಥಗಳ ಪರಿಚಯವೇ ಇಲ್ಲದಿದ್ದ ಬೀchiಯಂತಹ ತರುಣನನ್ನು ಸಾಹಿತ್ಯ ಜಗತ್ತಿನ ಗುರುತ್ವಾಕರ್ಷಣೆಗೆ ಒಳಪಡಿಸಿದವರೆಂದರೆ ಅ.ನ.ಕೃಷ್ಣರಾಯರು.  ಅವರ ಸಂಧ್ಯಾರಾಗ ಬೀchiಯವರ ಮನಸ್ಸನ್ನು ಸೆಳೆದ ಕಾದಂಬರಿ.  ಈ ಕಾದಂಬರಿಯ ಪರಿಚಯವಾದುದೂ ಒಂದು ಸ್ವಾರಸ್ಯಕರ ವಿಷಯವೇ.  ಇವರ ಪತ್ನಿ ಕನ್ನಡ ಭಕ್ತೆ.  ಕನ್ನಡ ಪುಸ್ತಕ ಓದುವ ಹವ್ಯಾಸ ಆಕೆಯದು.  ಬೀchi ಅಲ್ಪ ಸ್ವಲ್ಪ ತಿರಸ್ಕಾರದ ಭಾವದಿಂದಲೇ ಒಂದು ಪುಸ್ತಕದ ಅಂಗಡಿಗೆ ಹೋದರಂತೆ.  “ಒಂದು ಕನ್ನಡದ ಪುಸ್ತಕ ಕೊಡಿ.  ಯಾವುದಾದರೂ ಚಿಂತೆಯಿಲ್ಲ.  ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿಯಿಲ್ಲ.  ಆದರೆ ಕನ್ನಡದಲ್ಲಿ ಅಚ್ಚಾಗಿರಬೇಕು” ಎಂದರಂತೆ!  ಪುಣ್ಯಕ್ಕೆ ಅಂಗಡಿಯಾತ ಕೊಟ್ಟ ಪುಸ್ತಕ ‘ಸಂಧ್ಯಾರಾಗ’.  ಅದನ್ನು ಓದಿದ ಬೀchi ಸದ್ದಿಲ್ಲದೆ ಕನ್ನಡದ ಪ್ರೇಮಿಯಾದರು.  ಬಳ್ಳಾರಿಯಲ್ಲಿದ್ದ ಗೆಳೆಯ ಕೋ. ಚೆನ್ನಬಸಪ್ಪ ಅವರ ಕಾಟದಿಂದ, ಕೋ.ಚೆ. ಸಂಪಾದಕರಾಗಿದ್ದ ರೈತವಾಣಿ ವಾರಪತ್ರಿಕೆಯಲ್ಲಿ ‘ಬೇವಿನಕಟ್ಟೆ ತಿಂಮ’ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಹಾಸ್ಯ ಲೇಖನಗಳನ್ನು ಬರೆದು ಅನಂತರ ಪಾ.ಪು.ಅವರ ‘ವಿಶಾಲ ಕರ್ನಾಟಕ’ ದಿನಪತ್ರಿಕೆಯಲ್ಲಿ ‘ಕೆನೆ ಮೊಸರು’ ಸ್ಥಿರ ಶೀರ್ಷಿಕೆಯಡಿಯಲ್ಲಿ  ನಿತ್ಯವೂ ಹರಟೆಗಳನ್ನು ಬರೆದರು.

ಬೀchi ನಾಟಕ ಪ್ರೇಮಿಯೂ ಆಗಿದ್ದರು.  ಒಂದು ನಾಟಕ ಬರೆದು ಬಳ್ಳಾರಿಯ ಜನರ ಕೆಂಗಣ್ಣಿನ ಕೃಪೆಗೆ ಪಾತ್ರರಾದರು.  ಅವರು ಬರೆದ ಮೊದಲ ನಾಟಕ ’ಯದ್ವಾತದ್ವಾ ಅಥವಾ ದೇವರ ಆತ್ಮಹತ್ಯೆ’.   ಬರೆದ ಹುರುಪಿನಲ್ಲೇ ಗೆಳೆಯರನ್ನು ಕೂಡಿಸಿ ಬಳ್ಳಾರಿಯಲ್ಲಿ ಆಡಿಯೂ ಬಿಟ್ಟರು.  ಬೀchiಯವರೇ ದೇವರ ವೇಷ ಹಾಕಿ ರಂಗಭೂಮಿಯ ಮೇಲೆ ಟೈಯಿಂದ ಉರುಲು ಹಾಕಿಕೊಂಡು ‘ಆತ್ಮಹತ್ಯೆ’ ಮಾಡಿಕೊಂಡರು.  ಮರುದಿನ ಅವರ ಅವಸ್ಥೆ ಬೇಡ.  ಉತ್ತಮ ಜಾತಿಯವರೆಂದು ಭ್ರಮಿಸಿಕೊಂಡ ಅನೇಕರು ಬೀchiಯ ಮೇಲೆ ತಮ್ಮ ಜುಟ್ಟಿನಿಂದಲೇ ಕೆಂಡ ಕಾರಿದರಂತೆ.  ಆ ಜನಗಳ ತಪೋಜ್ವಾಲೆ ಎಂದೋ ತಣ್ಣಗಾಗಿದ್ದರಿಂದ ಬೀchiಯವರು ಬಳ್ಳಾರಿ ರಾಘವರ ಸಕಾಲಿಕ ಸಹಾಯದಿಂದ ಉಳಿದುಕೊಂಡರಂತೆ.

1946ರಲ್ಲಿ ಪ್ರಕಟಿತಗೊಂಡ ‘ರೇಡಿಯೋ ನಾಟಕಗಳು’ದಿಂದ ಹಿಡಿದು ತಾವು ತೀರಿಕೊಳ್ಳುವವರೆಗೂ ಬೀchi ಬರವಣಿಗೆಗೆ ವಿಶ್ರಾಂತಿ ಎಂಬುದೇ ಇರಲಿಲ್ಲ.  ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ ಅವರ ರಚನೆಗಳಲ್ಲಿ ಹಲವಾರು ನಿರಂತರವಾಗಿ ಮುದ್ರಣದ ಭಾಗ್ಯವನ್ನು ಕಂಡಿವೆ.  ‘ತಿಂಮನ ತಲೆ’ಯಂತೂ ಇಂದಿನ ದಿನಗಳಲ್ಲೂ ಪುನರ್ ಮುದ್ರಣ ಕಾಣುತ್ತಲೇ ಸಾಗಿದೆ.  ಬೀchi ಸತ್ಕಾರ ಸಮಿತಿಯವರು ಅವರ ಅರವತ್ತನೇ ಹುಟ್ಟುಹಬ್ಬದ ಸನ್ಮಾನ ಸಂದರ್ಭದಲ್ಲಿ ಬೆಳೆಗಾಂವಿಯಿಂದ ಮಿರ್ಜಿ ಅಣ್ಣಾರಾಯ, ಕೃಷ್ಣಕೊಲ್ಹಾರ ಕುಲಕರ್ಣಿ ಇವರುಗಳ ಸಂಪಾದಕತ್ವದಲ್ಲಿ ಹೊರತಂದಿರುವ ‘ತಿಂಮಾಯಣ’ದ ಪರಿವಿಡಿಗಳಲ್ಲಿ ಅವರ ಕೃತಿಗಳ ಪೂರ್ಣವಿವರ ಇದೆ.  ಬೀchiಯವರ ಬರವಣಿಗೆಯನ್ನು ಮುಖ್ಯವಾಗಿ ಕಾದಂಬರಿ, ನಾಟಕ, ಕಥೆ, ಹರಟೆ, ಪದ್ಯ ಎಂದು ವಿಂಗಡಿಸಬಹುದು.  ಅವರ ‘ದಾಸಕೂಟ’ ಕನ್ನಡದಲ್ಲಿಯೇ ಮೊತ್ತ ಮೊದಲ ಹಾಸ್ಯಪ್ರಧಾನ ಕಾದಂಬರಿ.  ಇದರ ಒಂದು ಪಾತ್ರದ ಬೆಳವಣಿಗೆ ಮುಂದಿನ ‘ಸತೀ ಸೂಳೆ’ ಕಾದಂಬರಿಯ ವಸ್ತು.  ‘ಸರಸ್ವತಿ ಸಂಹಾರ’, ‘ಖಾದಿ ಸೀರೆ’, ‘ಬೆಂಗಳೂರು ಬಸ್ಸು’, ‘ದೇವನ ಹೆಂಡ’, ‘ಏರದ ಬಳೆ’, ಮೇಡಮ್ಮನ ಗಂಡ’, ‘ಟೆಂಟ್ ಸಿನಿಮಾ’, ‘ಆರಿದ ಚಹಾ’, ‘ಬಿತ್ತಿದ್ದೇ ಬೇವು’ ಮೊದಲಾದ ಮೂವತ್ತಕ್ಕೂ ಹೆಚ್ಚಿನ ಕಾದಂಬರಿಗಳನ್ನು ಅವರು ಬರೆದಿದ್ದಾರೆ.  ಕನ್ನಡದಲ್ಲಿ ಬರುತ್ತಿದ ಬರಿಯ ಕಾಲ್ಪನಿಕವಾದ ಅಸಂಬದ್ಧ ಪತ್ತೆದಾರಿ (detective) ಕಾದಂಬರಿಗಳ ವ್ಯಂಗ್ಯಾನುಕರಣದ ಫಲವಾಗಿ ಅವರ ‘ಸತ್ತವನು ಎದ್ದು ಬಂದಾಗ’ ಎಂಬ ‘Defective’ ಕಾದಂಬರಿ ಮೂಡಿತು.  ಸಾಯದೆ ಇದ್ದವನನ್ನು ಶೋಧಿಸುವ ಮೋಜಿನ ಈ ಕಾದಂಬರಿ ತುಂಬ ಜನಪ್ರಿಯವಾಯಿತು.  ಅನಕೃ ಅವರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಬೀchi ತಮ್ಮ ವಿಶಿಷ್ಟ ವ್ಯಂಗ್ಯಶೈಲಿಯನ್ನು ಮಾತ್ರ ಉಳಿಸಿಕೊಂಡು ಜನಪ್ರಿಯತೆ, ರೋಚಕತೆ, ರೋಮಾಂಚಕತೆಗಳ ವೈಭವದ ಜಾಡಿನಲ್ಲಿ ನುಗ್ಗಿಬಿಟ್ಟರು.  

ಕಾದಂಬರಿಕಾರ ಬೀchiಯವರು ಕಂಡ ಜಗತ್ತು ಬೇರೆ.  ಪೋಲೀಸ್ ವಿಭಾಗದಲ್ಲಿದ್ದುದರಿಂದ ಸಾಮಾನ್ಯರಿಗೆ ತಲಸ್ಪರ್ಶಿಯಾಗಿ ಕಾಣದ ಒಂದು ಅಧೋಲೋಕ ಇವರ ಕಣ್ಣಿಗೆ ಬಿದ್ದು ಸಮಾಜದ ಈ ವರ್ಗದ ಜನರ ಸಮಸ್ತ ಅನುಭವವನ್ನೂ ಸೆರೆಹಿಡಿಯಲು ಯತ್ನಿಸಿದ್ದಾರೆ.  ಇವರೊಂದಿಗೆ ಬದುಕಿನಲ್ಲಿ ಸಂಪನ್ನತೆಯ ಪರ್ವತಗಳಂತೆ ತಲೆ ಎತ್ತಿ ನಿಲ್ಲಬಯಸುವ ಜನರನ್ನೂ ಬೆರೆಸುತ್ತಾರೆ.  ಪ್ರಣಯ  ಚಿಂತನದ ರೋಚಕ ವರ್ಣನೆಗೆ ಮನಸೋತಿದ್ದಾರೆ.  ಕಾದಂಬರಿಕಾರರಾಗಿ ಅವರು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳ ಪತನವನ್ನು ವ್ಯಾಖ್ಯಾನಿಸುತ್ತಾರೆ.  ದೇಶದ ಸ್ವಾತಂತ್ರ್ಯದ ಸಂಧಿಕಾಲದಲ್ಲಿ ಅವರು ಬರೆದ ‘ದಾಸಕೂಟ’ ಇಂಥ ಮೌಲ್ಯಗಳ ಸ್ಥಿತಿಸ್ಥಾಪಕ ಗುಣವನ್ನು ಬಯಲಿಗೆಳೆಯುವ ಒಂದು ಸಾರ್ಥಕ ಪ್ರಯತ್ನ.  ರಾಷ್ಟ್ರನಾಯಕರ ಮತ್ತು ಅವರ ಅನು’ನಾಯಿ’ಗಳ ವ್ಯಕ್ತಿತ್ವದ ಸುತ್ತ ಬೆಳೆದುಕೊಳ್ಳುವ ಪೊಳ್ಳು, ಕ್ರಿಯಾ ಹೀನತೆಯನ್ನು ವಾಗಾಡಂಬರದಿಂದ ಮೆಚ್ಚಿಕೊಳ್ಳುವ ಪ್ರವೃತ್ತಿ ಮತ್ತು ಜನತೆಯ ಸಮಯ ಸಾಧಕವೃತ್ತಿ ಬಾಲಬಡುಕುತನಗಳಿಂದಾಗಿ ಮರೆಯಲ್ಲೇ ನರಳುವ ಪ್ರಾಮಾಣಿಕತೆ-ಈ ಎರಡು ರಾಜಕೀಯ ಪತನಗಳನ್ನು ಅವರು ಹಲವಾರು ಕಾದಂಬರಿಗಳಲ್ಲಿ ವಿಶ್ಲೇಷಿಸಲು ಯತ್ನಿಸಿದ್ದಾರೆ.  ಸಮಾಜದ ಕಂದಾಚಾರಗಳು ಮತ್ತು ವರ್ಗ ಕಲಹಗಳು ಸಿಡಿಸುತ್ತಿರುವ ಸಾಮಾಜಿಕ ಬೇನೆಗಳನ್ನು ಅವರ ‘ಎಲ್ಲರೂ ಸಂಪನ್ನರೇ’, ‘ಸ್ವರಸ್ವತಿಯ ಸಂಹಾರ’ ಮೊದಲಾದ ಕೃತಿಗಳು ಪರಿಚಯಿಸಲು ಯತ್ನಿಸಿವೆ.  ಮೂರನೆಯ ಬಗೆಯ ಕಾದಂಬರಿಗಳಲ್ಲಿ ಲೈಂಗಿಕ ಕಾಮನೆಗಳು ತುಂಬಾ ಕಟ್ಟುಪಾಡಿಗೆ ಒಳಗಾದಾಗ ಏನೇನು ವಿಕಾರಗಳನ್ನು ತಾಳಬಹುದು ಎಂಬ ವಿವರಗಳಿವೆ.  ಅಸಹಜ ಮನೋವಿಕಾರಗಳಿಂದ ನರಳುವ ಪಾತ್ರಗಳ ವರ್ಣನೆ ಈ ಕಾದಂಬರಿಗಳಲ್ಲಿದೆ.   ನೈಜಲೋಕದಿಂದಲೇ ಅಪಾರವಾದ ವೈವಿಧ್ಯಮಯ ಪಾತ್ರಗಳನ್ನು ಎತ್ತಿಕೊಳ್ಳಬಲ್ಲ ಬೀchi ನಾಲ್ಕು ಗ್ರಾಮು ಸೆರೆ (ಹೆಂಡ) ಎಂಟು ಗ್ರಾಮು ಕೋಪದ ಕಂಡಕ್ಟರ್ ಕೇಶವರಾಯ, ಬಸವಿ, ಬಸಮ್ಮ, ಚಂದ್ರಮ್ಮ, ಆಚಾರ್ಯರು, ಶಿವಮ್ಮ, ಇನ್ಸ್ಪೆಕ್ಟರ್ ಶಾಮಣ್ಣ, ಕಾಲೇಜು ಕನ್ಯೆಯರು ಇಂಥ ನೂರಾರು ಜೀವಂತ ಪಾತ್ರಗಳನ್ನು ಕಾಣಿಸಿಕೊಟ್ಟಿದ್ದಾರೆ.

ಬೀchiಯವರಿಗೆ ತುಂಬ ಕೀರ್ತಿ ತಂದುಕೊಟ್ಟ ಕೃತಿಗಳ ಪೈಕಿ ಹನ್ನೊಂದನೆಯ ಅವತಾರ, ರೇಡಿಯೋ ನಾಟಕಗಳು ಇವೆರಡು ಮುಖ್ಯವಾದವು.  ‘ಏಕೀಕರಣ’ದಂಥ ರೇಡಿಯೋ ನಾಟಕ ಕರ್ನಾಟಕದ ಸಮಗ್ರತೆಯ ಆಶಯದಲ್ಲಿಯೂ ಅದರ ಭಾಷಾವೈವಿಧ್ಯಗಳನ್ನು ವಿಫುಲ ಸಾಕ್ಷಾಧಾರಗಳಿಂದ ಪದರ್ಶಿಸುವ ಶುದ್ಧಾಂಗ ಹಾಸ್ಯನಾಟಕ.  ಹನ್ನೊಂದನೆಯ ಅವತಾರದ ಎರಡು ನಾಟಕಗಳಲ್ಲೂ “ದೇ.ಭ” ಎಂದು ಬೀchi ಜನಪ್ರಿಯಗೊಳಿಸಿದ ದೇಶಭಕ್ತ ಹೇಗೆ ನಮ್ಮ ದೇಶದ ‘ಹನ್ನೊಂದನೆಯ ಅವತಾರ’ವಾಗಿದ್ದಾನೆ ಎಂಬುದನ್ನು ತುಂಬ ಅಬ್ಬರದಿಂದ ವ್ಯಂಗ್ಯವಾಗಿ ಕಾಣಿಸಲಾಗಿದೆ.  ನವರಾಜಕಾರಣಿಗಳಿಂದ ನಮ್ಮ ರಾಜಕೀಯ ಹಾಗೂ ನೈತಿಕ ಮೌಲ್ಯ ಹೇಗೆ ಕುಸಿಯುತ್ತಿವೆ ಎಂಬುದರ ಧ್ವನಿಪೂರ್ಣ ಸಮೀಕ್ಷೆಯೂ ಈ ನಾಟಕಗಳಲ್ಲಿವೆ. 

ಬೀchiಯವರ ಬರವಣಿಗೆಯ ಕಾವಿನಿಂದ ಪುಷ್ಟಗೊಂಡವೆಂದರೆ ಅವರ ಹಾಸ್ಯ ಬರಹಗಳು, ಚುಟುಕಗಳು, ನಗೆಹನಿಗಳು, ತಿಂಮ ದರ್ಶನಗಳು, ತಿಂಮ ರಸಾಯನಗಳು, ಹರಟೆಗಳು, ತಿಂಮನ ತಲೆ, ಹುಚ್ಚು ಹುರುಳು, ಚಿನ್ನದ ಕಸ, ಬೆಳ್ಳಿ ತಿಂಮ ನೂರೆಂಟು ಹೇಳಿದ, ಅಮ್ಮಾವ್ರ ಕಾಲ್ಗುಣ, ಹೆಂಡತಿ ನಕ್ಕಾಗ, ಸಂಪನ್ನರಿದ್ದಾರೆ ಎಚ್ಚರಿಕೆ, ಉತ್ತರ ಭೂಪ, ತಿಂಮಿಕ್ಷನರಿ, ಅಂದನಾ ತಿಂಮ ಮೊದಲಾದ ಹಾಸ್ಯಕೃತಿಗಳು.   ಬೀchi ಕಥೆ ಬರೆಯಲಿ, ಹರಟೆ ಬರೆಯಲಿ, ನಾಟಕ ಕಾದಂಬರಿಯನ್ನೇ ಬರೆಯಲಿ ಅವರ ಮೊದಲ ಗಮನ ಮಾತಿನ ಕಡೆಗೆ.  ಅವರು  ಮಾತನ್ನು ಹರಡಿಸುವ ಬಗೆಯನ್ನು ಅವರ ಹರಟೆಗಳು ಚೆನ್ನಾಗಿ ದುಡಿಸಿಕೊಂಡಿವೆ.  ತಿಂಮನನ್ನು ನಾಯಿಗೆ ಹೋಲಿಸುತ್ತಾ ಸರಳವಾಗಿ ಆರಂಭಿಸುವ ಬೀchi ಆ ಪ್ರತಿಮೆಯ ಅಂತರಂಗಕ್ಕೇ ಇಳಿದುಬಿಡುತ್ತಾರೆ.

“ಕಚ್ಚುವುದೊಂದೇ ತಿಂಮನ ಕಸುಬಲ್ಲ.  ಚಿನ್ನಾಟವಾಡುತ್ತಾ ಒಡೆಯನ ಕೈ ಮೈ ನೆಕ್ಕುತ್ತ ಮಮತೆಯ ನಾಯಿಯಂತೆ ಇಡೀ ಸಮಾಜವನ್ನೇ ನೆಕ್ಕುತ್ತಾನೆ – ತನ್ನ ಉರುಟಾದ ನಾಲಿಗೆಯಿಂದ.  ಗಾಯವಿದ್ದವರಿಗೆ ನೋವಾಗಬಹುದು, ನಂಜಾಗಬಹುದು, ಗುಣವೂ ಆಗಬಹುದು.  ಮನಸ್ಸಿನಂತೆ ಮಹದೇವ”.

ಇದು ‘ತಿಂಮ’ ಕನ್ನಡದಲ್ಲಿ ಬೆಳೆದ ಬಗೆಯೂ ಹೌದು.  ಬೀchi ಬೆಳೆದ ಬಗೆಯೂ ಹೌದು.  ಬೀchi ಎಲ್ಲ ವಿಷಯಗಳಲ್ಲೂ ತಲೆಹಾಕಲು ಒಂದು ಒಳ್ಳೆಯ ಪಾತ್ರ ಪ್ರತಿಮೆಯನ್ನು ಬಳಸಿಕೊಂಡರು.  ಅದೇ ತಿಂಮ, ಬೀಚಿ  ತಿಂಮತನ ಈ ಶಬ್ದಗಳ ವ್ಯಾಪಕ ಅರ್ಥದಲ್ಲಿ ಬಳಸಿದ್ದಾರೆ.  ತಿಂಮ ‘ತಿಮ್ಮ’ನಾಗದೆ ‘ತಿಂಮ’ ನಾದದ್ದೂ ಒಂದು ವಿಶಿಷ್ಟ ಉಪಯೋಗಕ್ಕಾಗಿಯೇ.  ಇವನು ಹುಟ್ಟಿದ್ದೂ ಒಂದು ವಿಚಿತ್ರ ಸನ್ನಿವೇಶದಲ್ಲೇ.  ಬೀchi ಒಮ್ಮೆ ಆಸ್ಪತ್ರೆಯಲ್ಲಿ ನರಳುತ್ತಿದ್ದರಂತೆ.  (ಅಂದರೆ ಮನೆಯಲ್ಲಿ ನರಳುತ್ತಲೇ ಇರಲಿಲ್ಲ ಎಂದರ್ಥವಲ್ಲ, ಇರಲಿ!) ಹೊತ್ತು ಕಳೆಯಲು ತುಂಬಾ ಓದುತ್ತಿದ್ದರು.  ವೋಡ್ ಹೌಸ್ ನ ‘ಆಮ್ನಿ ಬಸ್’, ‘ಥ್ಯಾಂಕ್ಯೂ ಜೀವ್ಸ್’ ಇವುಗಳನ್ನು ಓದುತ್ತಿದ್ದಾಗ ಕನ್ನಡದಲ್ಲೂ ಜೀವ್ಸ್ ನಂತಹ ಒಂದು ಪಾತ್ರದ ಸೃಷ್ಟಿ ಅಗತ್ಯ ಎಂದುಕೊಂಡರು.  ಫಲವಾಗಿ ‘ತಿಂಮ’ ಹುಟ್ಟಿಕೊಂಡ.  ತಿಂಮನ ವಿಷಯದಲ್ಲಿ ಬೀchi ಹೀಗೆ ಹೇಳುತ್ತಾರೆ.

“ತಿಂಮ ಯಾರು?”

“ಯಾವೊಬ್ಬ ತಿರುಮಲರಾಯನನ್ನಾಗಲಿ, ತಿಂಮಪ್ಪನನ್ನಾಗಲಿ ಮುಂದಿಟ್ಟುಕೊಂಡು ಇದನ್ನು ಬರೆದಿಲ್ಲ.  
ಮಕ್ಕಳ ಆಟದಲ್ಲಿ, ಗೆಳೆಯರ ಕೂಟದಲ್ಲಿ, ಹಿರಿಕಿರಿಯರ ಕಿರಿಹಿರಿತನಗಳಲ್ಲಿ, ಚತುರರ ಹೆಡ್ಡತನದಲ್ಲಿ , ದಡ್ಡರ ದೊಡ್ಡತನದಲ್ಲಿ ಕಂಡುಕೇಳಿದ ಚೇಷ್ಟೆಗಳಿಗೆಲ್ಲಾ –ಪಾಪ! ತಿಂಮನನ್ನೇ ನಾಯಕನನ್ನಾಗಿ ಒಡ್ಡಿದ್ದೇನೆ.”

“ತಿಂಮನ ನಗು ದೇಹವಾದರೆ ಆ ನಗುವಿನ ಹಿಂದೆ ಹುದುಗಿಕೊಂಡಿರುವ ನೋವೇ ಜೀವ, ಅದನ್ನು ಗುರುತಿಸದಿದ್ದರೆ ದೊರೆಯುವುದು ತಿಂಮನ ಹೆಣ ಮಾತ್ರ”.

ಬೀchiಯವರ ಭಾಷಾಸಾಧನೆಗೆ ಸಹಾಯಕವಾಗಿರುವ ಅವರ ಶ್ರವಣಾಭಿರುಚಿ ಉನ್ನತಮಟ್ಟದ್ದು.  ಕೇಳಿದ ಮಾತನ್ನು ಅದೇ ಉಚ್ಛಾರ ಕ್ರಮದಲ್ಲಿ ಉಲ್ಲೇಖಿಸಲು ಅವರು ಪ್ರಯತ್ನಿಸುತ್ತಾರೆ.  ಜನ ಬಳಸುವ ಒಂದು ಶಬ್ದಕ್ಕೆ ಏನೆಲ್ಲಾ ಅರ್ಥ, ಅನರ್ಥ, ಅಪಾರ್ಥ, ಹೀನಾರ್ಥ, ನಾನಾರ್ಥಗಳನ್ನು ಕಲ್ಪಿಸಬಹುದು, ಶಬ್ದವನ್ನು ಹದವಾಗಿ ತಿರುವಿ ಬಿಡಿ ಭಾಗಗಳನ್ನು ಹೇಗೆ ತೆರೆದಿಡಬಹುದು ಎಂದು ತಿಳಿಯಬಯಸುವವರು ಬೀchiಯವರ ಬರಹದ ವೈಖರಿಯನ್ನೇ ಗಮನಿಸಬೇಕು.  ಹೀಗಾಗಿ ಅವರಿಗೆ ಸಾಹಿತ್ಯ ಪರಿಷತ್ತಿನ ‘ಕನ್ನಡ-ಕನ್ನಡ ನಿಘಂಟು’ ಅಂದ ಕೂಡಲೇ 'ಹೆರಲಾರದ ಬಸುರಿ’ ಎಂಬ ವ್ಯಾಖ್ಯಾನ ಸಾಧ್ಯವಾಗುತ್ತದೆ.  ‘ಆಕಳಿಕೆ’ಯಲ್ಲಿ ಅವರು ಲೀಲಾಜಾಲವಾಗಿ ಆsssಕಳಿಕೆಯನ್ನು ಕಾಣುತ್ತಾರೆ.  ‘ಮಗಳನ್ನು ಬೆಂಗಳೂರಿಗೆ ಕೊಟ್ಟಿದೆ’ ಎಂದು ಯಾರೋ ಅಂದರೆ ‘ಆ್ಞ..... ಇಡೀ ಬೆಂಗಳೂರಿಗೆ?’ – ಎನ್ನುತ್ತಾರೆ.  ಸೀತಾ ಪರೀಕ್ಷಣ ಮಾಡಿದ ರಾಮನನ್ನು ಅವರ ಭಾಷಾಮುಖ ಕಂಡಿರುವ ಬಗೆ ಹೀಗಿದೆ:  “ಶ್ರೀರಾಮ ಅಸಲು ಅಕ್ಕಸಾಲಿಗ – ಹೆಂಡತಿಯನ್ನೇ ಬೆಂಕಿಯಲ್ಲಿ ಪುಟಕ್ಕೆ ಹಾಕಿ ಪರೀಕ್ಷೆ ಮಾಡಿದ.”

ಹರಟೆಯಲ್ಲಿ ಬೀchiಯವರ ಈ ಭಾಷಾವಿಲಾಸವನ್ನು ಒಂದು ಉದಾಹರಣೆಯಿಂದ ಗಮನಿಸಬಹುದು.  ‘ಆ ದಡ ಕಂಡವರು’ ಎಂಬ ಹಾಸ್ಯ ಪ್ರಬಂಧ ಇದು.  ಪುರೋಹಿತರೊಬ್ಬರು ಬೆಳಗ್ಗೆ ಹನ್ನೊಂದಕ್ಕೆ ನಾಯಕನ ಮನೆಗೆ ಬರುತ್ತಾರೆ.  ಮಧ್ಯಾಹ್ನ ಹನ್ನೆರಡಕ್ಕೆ ಏಳುವ ನಾಯಕ ‘ಬಾಗಿಲು ಬಡಿದ ಜನರ’ ಮೇಲೆ ಸಿಟ್ಟು ಮಾಡಿಕೊಳ್ಳುವ ರೀತಿ ನೋಡಿ:

“ಬಾಗಿಲು ಬಡಿಯುವ ಮೂರ್ಖರಿಗೆ ಬುದ್ಧಿಕಲಿಸಬೇಕಾದರೆ ಒಂದೇ ಮಾರ್ಗ – ಬಡಗಿಯನ್ನು ಕರೆಯಿಸಿ ಆ ಬಾಗಿಲನ್ನೇ ತೆಗೆಯಿಸಿ ಒಳಕ್ಕೆ ಇಡಬೇಕು”.

ಈ ಶಾಸ್ತ್ರಿಯ ಹೆಸರು ‘ಲೋಕಕಲ್ಯಾಣಶಾಸ್ತ್ರಿ’, ‘ಪರೋಪಕಾರವೇ ತನ್ನ ಮನೋಧರ್ಮ ಎಂದು ಅವಕಾಶ ಸಿಕ್ಕಾಗಲೆಲ್ಲಾ ಹೇಳಿಕೊಳ್ಳುವ ಜಾತಿ’.  ಅರ್ಥಮಾಡಿಕೊಳ್ಳಲಾರದ ಹುಂಬ.  “ಹುಚ್ಚುಮುಂಡೆ ಗಂಡ ಎಂದು ಒಬ್ಬಳು ಬೈದರೆ ಅವಳು ನನ್ನನ್ನು ಗಂಡ ಅಂದಳು ಎಂದು ಹೆಮ್ಮೆಯಿಂದ ಊರಲ್ಲೆಲ್ಲ ಹೇಳಿಕೊಂಡು ಬರುವ” ಭಂಡ.  ಅವರು ನಾಯಕನನ್ನು ಎಲ್ಲಿಗೋ ಕರೆದೊಯ್ಯಬೇಕಿತ್ತು.  ತಾವು ಬರುವ ಮೊದಲೇ ನಾಯಕ ಸ್ನಾನ ಮಾಡಿರುತ್ತಾನೆಂದು ಅವರು ತಿಳಿದಿದ್ದರಂತೆ.  ನಾಯಕ ಹೇಳುತ್ತಾನೆ:

“ತಮ್ಮ ದರ್ಶನ ಮಾಡಿಕೊಂಡ ನಂತರ ಹೇಗೂ ಮತ್ತೊಮ್ಮೆ ಸ್ನಾನ ಆಗಬೇಕು.  ಎರಡೆರಡು ಸ್ನಾನ ಆಗುವುದು ತಪ್ಪಿತು ಸಧ್ಯ”.  ಬಂದ ಶಾಸ್ತ್ರಿಗಳು ಅಚಾರವಂತರು.  ವಯಸ್ಸಾದವರು.  ಆ ದಡ ಕಂಡವರು.  ಅವರು ಕಾಫಿ ಕುಡಿಯಲಿಲ್ಲ.  ಅಮಾವಾಸ್ಯೆ ದಿನ ಮುಖ ತೊಳೆಯದೆ ನಾಯಕ ಕಾಫಿ ಹೀರುವುದನ್ನು ಆಕ್ಷೇಪಿಸಿರುತ್ತಾರೆ.

ಯಾರೋ ಹಿರಿಯ ಅಧಿಕಾರಿಗಳು ನಾಯಕನ ಸ್ನೇಹಿತರಂತೆ.  ಅವರಿಂದ ಒಂದು ಉಪಕಾರ ಗಿಟ್ಟಿಸಿಕೊಳ್ಳಲು ಶಾಸ್ತ್ರಿ ಬಂದಿದ್ದರು.  ನಾಯಕನಿಗೆ ಬೇಸರ.

“ಸ್ನೇಹಕ್ಕಾಗಿ ಸ್ನೇಹ ಎಂಬುದು ಬೇಡವೇ ಬೇಡ ಈ ಜೀವನದಲ್ಲಿ?  ಬ್ಯಾಂಕ್ ಚೆಕ್ಕಿನಂತೆ ಸ್ನೇಹ ವಿಶ್ವಾಸಗಳನ್ನೂ ಕ್ಯಾಷ್ ಮಾಡಿಸಬೇಕೆ?”

ಶಾಸ್ತ್ರಿಗಳು ನಾಯಕನಿಗೆ ಮೈ ಕೈ ತಗುಲಿಸುತ್ತ ಮಾತಾಡುತ್ತಾರೆ.  ನಾಯಕನ ವ್ಯಾಖ್ಯಾನ:  “ಅದು ಅವರ ಅಭ್ಯಾಸ.  ಇದಕ್ಕೆ ಕಾರಣ, ಹೆಚ್ಚಾಗಿ ಸ್ತ್ರೀಯರೊಂದಿಗೇ ಶಾಸ್ತ್ರಿಗಳ ವ್ಯವಹಾರವೆಲ್ಲ”.

ಅವರು ಬಂದದ್ದು ಯಾಕೆ ಗೊತ್ತೆ?  ನಾಯಕ ತನ್ನ ಸ್ನೇಹಿತರಾದ ಸಾಹೇಬರಿಗೆ ಹೇಳಿ ಶಾಸ್ತ್ರಿಗಳ ಅಣ್ಣನ ಮಗನನ್ನು ಕೆಲಸದಿಂದ ಡಿಸ್ ಮಿಸ್ ಮಾಡಿಸಬೇಕಂತೆ.  ಕಾರಣ ಅವನು ಶಾಸ್ತ್ರಿಗಳ ವೈರಿಯಾಗಿದ್ದ.  

ಅಣ್ಣನ ಮಗ ಅಲ್ಲವೆ? ಅವನಿಂದ ತೊಂದರೆಯಾಗಿದೆಯೇ ಎಂಬ ನಾಯಕನ ಪ್ರಶ್ನೆಗೆ ಅವರ ಉತ್ತರ:
“ಅವನು ಸುಖವಾಗಿ ಇರುವುದೇ ನಮಗೆ ತೊಂದರೆ ಅಲ್ಲವೇನಯ್ಯಾ?  ಅವನನ್ನು ಕೆಲಸದಿಂದ ತೆಗೆಸಿಹಾಕಿ ಅಣ್ಣನನ್ನ  ಗತಿಕಾಣದ ಹಾಗೆ  ಮಾಡಿಸಬೇಕು ನಾನು.  ಭಿಕ್ಷೆ ಬೇಡಬೇಕು ಅವನು.  ನಾವು ನೋಡಬೇಕು ಅದನ್ನ”.

ವಾಸ್ತವವಾಗಿ ಈ ಪ್ರಬಂಧದಲ್ಲಿ ವಸ್ತು ಹೆಚ್ಚೇನೂ ಇಲ್ಲ.  ಆದರೆ ಅದರ ಸುತ್ತ ಕಾವು ಕೊಡುತ್ತ ಅಡ್ಡಾದಿಡ್ಡಿ ಹರಡಿಕೊಳ್ಳುತ್ತ ಹೋಗುವ ‘ಭಾಷಾಮುಖ’ವನ್ನು ಗಮನಿಸಿದರೆ ಅವರ ಶೈಲಿಯ ಪರಿಚಯ ಮಾಡಿಕೊಳ್ಳಬಹುದಾಗಿದೆ.  ಆ ಮುದುಕ ಬ್ರಾಹ್ಮಣ,  ಆಚಾರವಂತ ಅಂತ ಹೇಳಿಕೊಳ್ಳೋ ಬ್ರಾಹ್ಮಣ ನಿಜವಾಗಿ ಅಂದು ತರ್ಪಣ ಬಿಟ್ಟು ಬಂದದ್ದು ತನ್ನ ಮಾನವೀಯ ಗುಣಗಳಿಗೆ ಎಂಬುದನ್ನು ಈ ಪ್ರಬಂಧ ಸ್ಪಷ್ಟವಾಗಿ ಸಾರುತ್ತದೆ.  ಬೀಚಿಯವರು ವಸ್ತು ವ್ಯಾಖ್ಯಾನದ ಜತೆಗೆ ಪ್ರಾಸಂಗಿಕವಾಗಿ ಬರುವ ಸಂಪರ್ಕದ ಮಾತುಗಳನ್ನು ತಿರುಚಿ ನಾನಾ ಮೂಲೆಗಳಿಗೆ ಎಳೆದೊಯ್ಯುವ ಶಬ್ದವ್ಯಾಖ್ಯಾನವನ್ನೂ ಮಾಡುತ್ತ ಹೋಗುತ್ತಾರೆ.  ಅವರ ಬರಹಗಳ ವಿಶಿಷ್ಟ ದ್ರವ್ಯ ಇದೇ.  ಉತ್ತಮ ವಾಗ್ಮಿಯೂ ಆಗಿದ್ದ ಬೀchi ಈ ಭಾಷಾ ವೈಶಿಷ್ಟ್ಯವನ್ನೇ ಮೆರೆಸಿ ಜನರ ಮನಸ್ಸನ್ನೂ ಗೆದ್ದುಕೊಂಡಿದ್ದರು.  ಐವತ್ತಕ್ಕೂ ಹೆಚ್ಚಿನ ಗ್ರಂಥಗಳನ್ನು ಬರೆದ ಬೀchiಯವರ ಯಾವ ಪುಸ್ತಕ ತೆರೆದರೂ ಇಂಥ ಬೀchiಯವರದೆಂದು ಗುರುತಿಸಬಲ್ಲಂಥ-ವಿಶಿಷ್ಟಶೈಲಿಯ ದರ್ಶನವಾಗುತ್ತದೆ.
--
ಬೀchiಯವರು ನಿಧನರಾದದ್ದು ಡಿಸೆಂಬರ್ 7, 1980ರಲ್ಲಿ.  ಈ ಮಹಾನ್ ಬರಹಗಾರನಿಗೆ ನಮ್ಮ ಸಾಷ್ಟಾಂಗ ನಮನಗಳು.

(ಆಧಾರ: ಲೇಖನದಲ್ಲಿ ಹೇಳಿರುವಂತೆ ಇದು ಪ್ರೊಫೆಸರ್ ಅ. ರಾ. ಮಿತ್ರರು 'ಸಾಲುದೀಪಗಳು' ಗ್ರಂಥದಲ್ಲಿ ಮೂಡಿಸಿರುವ ಲೇಖನ.  ಲೇಖನ ಉದ್ದವಾಗುತ್ತದೆ ಎಂಬ ಕಾರಣದಿಂದ ಕೆಲವೊಂದು ವಿಮರ್ಶೆಯ ಅಂಶಗಳನ್ನು ಆ ಲೇಖನದಿಂದ ಬಿಟ್ಟಿದ್ದೇನೆ)

On the birth anniversary of our great writer Beechi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ