ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ವೆಂಕಟಲಕ್ಷಮ್ಮ


 ಕೆ. ವೆಂಕಟಲಕ್ಷ್ಮಮ್ಮ


ಮೈಸೂರು ಶೈಲಿಯ ಭರತನಾಟ್ಯ ಪ್ರವರ್ತಕರಲ್ಲಿ ಡಾ. ಕೆ. ವೆಂಕಟಲಕ್ಷ್ಮಮ್ಮ ದೊಡ್ಡ ಹೆಸರು. 

ವೆಂಕಟಲಕ್ಷಮ್ಮನವರು 1906ರ ಮೇ 29 ರಂದು ಕಡೂರಿನ ತಂಗಲ ತಾಂಡ್ಯದಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡದ್ದರಿಂದ ಅಜ್ಜ ರಾಮನಾಯಕ ಮತ್ತು ಅಜ್ಜಿಯ ಪೋಷಣೆಯಲ್ಲಿ ಬದುಕು ನಡೆಸಿದರು.  ಪ್ರಸಿದ್ಧ  ಸಂಸ್ಕೃತ ಉಪಾಧ್ಯಾಯರಾದ ಅನಂತ ಜೋಶಿಯವರ ಸಲಹೆಯಂತೆ ವಿದ್ಯಾಭ್ಯಾಸಕ್ಕಾಗಿ  ಮೈಸೂರಿಗೆ ಬಂದರು.   ಓದಿದ್ದು ಎಂಟನೆಯ ತರಗತಿಯವರೆಗೆ.

ವೆಂಕಟಲಕ್ಷಮ್ಮನವರು ಒಂಬತ್ತನೆಯ ವಯಸ್ಸಿನಲ್ಲಿಯೇ ಮೈಸೂರಿನ ನಾಟ್ಯ ಸರಸ್ವತಿ ಎನಿಸಿದ್ದ ಜಟ್ಟಿ ತಾಯಮ್ಮನವರ ಬಳಿ ಭರತನಾಟ್ಯ ತರಬೇತಿ ಪಡೆಯಲಾರಂಭಿಸಿದರು. ಬಿಡಾರಂ ಕೃಷ್ಣಪ್ಪ ಮತ್ತು  ಅವರ ಶಿಷ್ಯರಾದ ಬಿ. ದೇವೇಂದ್ರಪ್ಪನವರಿಂದ ಶಾಸ್ತ್ರೀಯ ಸಂಗೀತ ಕಲಿತರು. 1811ರಿಂದ 1869ರವರೆಗೆ ಆಳಿದ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಭರತನಾಟ್ಯದಲ್ಲಿ    ‘ಮೈಸೂರಿನದೇ ವಿಶೇಷ ಶೈಲಿ’ ಎಂದು ಪ್ರಸಿದ್ಧಿ ಪಡೆದಿತ್ತು. ನಟುವಾಂಗ ವಾದ್ಯ ಪ್ರದಕ್ಷಿಣೆ, ಸಭಾಪೂಜೆ, ಪ್ರಭು ಪ್ರಶಂಸೆ, ನಂತರ ಕಲಾವಿದೆಯಿಂದ ಪುಷ್ಪಾಂಜಲಿ, ಹಯಗ್ರೀವ ಸ್ತುತಿ, ಸ್ವರಜತಿ, ವರ್ಣ, ಶಬ್ದ, ತಿಲ್ಲಾನಗಳ ಬಳಿಕ ಶ್ಲೋಕ, ಪಂಚಕ, ಪದ, ಜಾವಳಿ ಪ್ರದರ್ಶನ ಮುಂತಾದವುಗಳು  ಮೈಸೂರಿನ  ಶೈಲಿಯ ವೈಶಿಷ್ಟ್ಯವೆನಿಸಿದ್ದವು.  ರಸಾಭಿನಯವೇ ಮೈಸೂರು ಶೈಲಿಯ ಹೆಗ್ಗಳಿಕೆ. ಕನ್ನಡ ಜಾವಳಿಗಳಿಗೆ ವೆಂಕಟಲಕ್ಷ್ಮಮ್ಮನವರು ಅಭಿನಯಿಸುತ್ತಿದ್ದ ರೀತಿ ಚಿರಸ್ಮರಣೀಯವೆನಿಸಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರಕಾಲದಲ್ಲಿ ಆಸ್ಥಾನ ವಿದುಷಿಯಾಗಿ 1939ರಲ್ಲಿ ನೇಮಕಗೊಂಡ ವೆಂಕಟಲಕ್ಷಮ್ಮನವರು 30 ವರ್ಷ ಆಸ್ಥಾನ ಕಲಾವಿದರಾಗಿ ಕೀರ್ತಿ ಸಂಪಾದಿಸಿದರು. ಅರಮನೆಯ ಚಾಮುಂಡೇಶ್ವರಿ ಉತ್ಸವ, ನವರಾತ್ರಿಯ ಹತ್ತುದಿವಸ ಮತ್ತು ಮಹಾರಾಜರ ವರ್ಧಂತಿ ಉತ್ಸವಗಳಲ್ಲಿ ಅವರ  ನೃತ್ಯ ಕಾರ್ಯಕ್ರಮ ಅವಶ್ಯಕವಾಗಿ ಇರುತ್ತಿತ್ತು.  ವೆಂಕಟಲಕ್ಷಮ್ಮನವರು  ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಕಾಲೇಜಿನ ನೃತ್ಯ ವಿಭಾಗಕ್ಕೆ ರೀಡರ್‌ ಆಗಿ ನೇಮಕಗೊಂಡಿದ್ದರು. ತಾವೇ ಸ್ಥಾಪಿಸಿದ ಭರತ ಕಲಾ ನಿಕೇತನ ಸಂಸ್ಥೆಯಲ್ಲೂ ಅವರು ಶಿಷ್ಯರಿಗೆ ಶಿಕ್ಷಣ ನೀಡುತ್ತಿದ್ದರು. ಅಮೇರಿಕದ ವಿಶ್ವವಿದ್ಯಾಲಯದಿಂದ ಸಹಾ ವಿದ್ಯಾರ್ಥಿಗಳ ತಂಡಗಳು  ಅವರಿಂದ ತರಬೇತಿ ಪಡೆಯಲು ಬರುತ್ತಿದ್ದುದುಂಟು. 70-8೦ರ ಇಳಿವಯಸ್ಸಿನಲ್ಲಿಯೂ ಅವರು ಹಿನ್ನೆಲೆಗಾಯನಕ್ಕೆ ತಕ್ಕಂತೆ ರಸಾಭಿನಯಗಳ ಮಾರ್ಗದರ್ಶನ ನೀಡುತ್ತಿದ್ದರು.  ಭಾರತದ ಬಹಳಷ್ಟು ಪ್ರಸಿದ್ಧ ನೃತ್ಯ ಕಲಾವಿದರು ವೆಂಕಟಲಕ್ಷಮ್ಮನವರ ಬಳಿ ಹೆಚ್ಚಿನ ನೃತ್ಯ ಕಲಿಕೆಗೆ ಮತ್ತು ನೃತ್ಯ ಕಲೆಯ ಸೂಕ್ಷ್ಮತೆಗಳ ಅಧ್ಯಯನಕ್ಕೆ ಬರುತ್ತಿದ್ದುದುಂಟು.

ವೆಂಕಟಲಕ್ಷಮ್ಮನವರಿಗೆ ಹಲವಾರು ಗೌರವ ಪ್ರಶಸ್ತಿಗಳು ಸಂದವು.  ಅವುಗಳಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ರಾಷ್ಟ್ರದ ಪ್ರತಿಷ್ಠಿತ ಪದ್ಮಭೂಷಣ, ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಾಯನ ಸಮಾಜದ ಸಮ್ಮೇಳನ ಅಧ್ಯಕ್ಷತೆ, ಸಂಗೀತ ಕಲಾ ರತ್ನ ಬಿರುದು, ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ಸಂಗೀತ ನೃತ್ಯ ಅಕಾಡೆಮಿಗಳು ನಿರ್ಮಿಸಿದ ಸಾಕ್ಷ್ಯಚಿತ್ರಗಳು ಪ್ರಮುಖವಾದವು.

ಈ ಮಹಾನ್ ಕಲಾವಿದೆ ವೆಂಕಟಲಕ್ಷಮ್ಮನವರು 2002ರ ಜುಲೈ 2 ರಂದು ಈ ಲೋಕವನ್ನಗಲಿದರು.  ಈ ಮಹಾನ್ ಕಲಾಚೇತನಕ್ಕೆ ನಮ್ಮ ಪ್ರಣಾಮಗಳು.

ಚಿತ್ರಕೃಪೆ: ಡಿ. ಕೇಶವ Dasappa Keshava 🌷🙏🌷

On the birth anniversary of great dancer and guru Dr. K. Venkatalakshamma 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ