ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರ್ಪೂರ ಶ್ರೀನಿವಾಸರಾವ್


 ಕರ್ಪೂರ ಶ್ರೀನಿವಾಸರಾವ್


ಕರ್ಪೂರ ಶ್ರೀನಿವಾಸರಾವ್ ಕನ್ನಡಕ್ಕಾಗಿ ಅಪಾರವಾಗಿ ದುಡಿದ ಶ್ರೇಷ್ಠ ಮಹಾನುಭಾವರಲ್ಲೊಬ್ಬರು. ವೃತ್ತಿಯಿಂದ ಮಹಾನ್ ಇಂಜಿನಿಯರ್ ಆಗಿ, ಪ್ರವೃತ್ತಿಯಿಂದ ಸಾಹಿತಿಗಳಾಗಿ,  ಸಾಹಿತ್ಯ ಪೋಷಕರಾಗಿ  ಕಂಗೊಳಿಸಿದ ಮಹಾನ್ ಸಾಧಕರಿವರು.
ಇಂದು ಈ  ಮಹನೀಯರ  ಸಂಸ್ಮರಣಾ  ದಿನ.

ಕರ್ಪೂರ ಶ್ರೀನಿವಾಸರಾವ್ 1863ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು.  ಅವರ ತಂದೆ ಕರ್ಪೂರ ಸುಬ್ಬರಾವ್.  ಇವರ ಪೂರ್ವಿಕರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೊದಲು ಹೋದಾಗ ಬೆಟ್ಟದ ಅಡಿಯಿಂದ ಮುಡಿಯವರೆಗೆ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ‘ಕರ್ಪೂರ’ ಎಂಬ ಹೆಸರು ಬಂದಿತಂತೆ.  ಶ್ರೀನಿವಾಸರಾಯರು ಬಿ.ಎಸ್ಸಿ, ನಂತರ ಎಲ್.ಸಿ.ಇ ಪದವಿ ಪಡೆದು ಮುಂಬಯಿಯಲ್ಲಿ ಇಂಜಿನಿಯರ್ ಆಗಿ ಸೇರಿದರು.  ಅಲ್ಲಿಂದ ನಿವೃತ್ತರಾದ ಮೇಲೆ ಇವರ ಸೇವೆಯನ್ನು ಗುರುತಿಸಿದ ಮೈಸೂರು ಸರ್ಕಾರ ಇವರನ್ನು ಚೀಫ್ ಇಂಜಿನಿಯರ್ ಆಗಿ ನೇಮಕ ಮಾಡಿತು.  

ಕರ್ಪೂರ ಶ್ರೀನಿವಾಸರಾವ್ ಅವರು ಕನ್ನಡಾಭಿಮಾನ ಹಾಗೂ ತಾಂತ್ರಿಕ ಪ್ರತಿಭೆಯನ್ನು ಪ್ರದರ್ಶಿಸಿ ಪರಿಷತ್ತಿನ ಚರಿತ್ರೆಯಲ್ಲಿ ಅವಿಸ್ಮರಣೀಯ ವ್ಯಕ್ತಿಯಾಗುಳಿದಿದ್ದಾರೆ.  1931ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ ಗೌರವ ಇವರದು. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ನೀಲಿ ನಕ್ಷೆಯನ್ನು ತಾವೇ ತಯಾರಿಸಿ ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಯನ್ನು ತಾವೇ ಖುದ್ದಾಗಿ ನಡೆಸಿದ್ದರು.  ಅಂದಿನ ಯುಗದ ಬೆಂಗಳೂರು ಚಾಮರಾಜಪೇಟೆ ಸುಸಜ್ಜಿತ ಬಡಾವಣೆಯ ಯೋಜನೆಯ ಸೂತ್ರದಾರರೂ ಇವರೇ.

ಶ್ರೀನಿವಾಸರಾಯರು ವೃತ್ತಿಯಿಂದ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಾಹಿತಿಗಳೆನಿಸಿದ್ದರು.  ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯಗಳಿಸಿದ್ದರು.  ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ಇವರು 1918ರಿಂದ 1933ರ ವರೆಗೆ ಇದರ ಉಪಾಧ್ಯಕ್ಷರಾಗಿದ್ದರು.
ರಾಜವಂಶಸ್ಥರು ಗೌರವ ಪರಿಷತ್ತಿನ  ಅಧ್ಯಕ್ಷರುಗಳಾಗಿರುತ್ತಿದ್ದ ಅಂದಿನ ದಿನಗಳಲ್ಲಿ ಉಪಾಧ್ಯಕ್ಷರುಗಳದೇ ಪ್ರಮುಖ ಕಾರ್ಯನಿರ್ವಹಣೆಯಾಗಿತ್ತು.  ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಕ್ಕಾಗಿ ದುಡಿದ ಮಹಾನ್ ತ್ಯಾಗಮೂರ್ತಿಗಳಾಗಿ ಕರ್ಪೂರ ಶ್ರೀನಿವಾಸರಾಯರು ಶೋಭಿತರು.
 
ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಪ್ರಭಾವಿತರಾಗಿದ್ದ ಶ್ರೀನಿವಾಸರಾಯರು ಕೊನೆಯ ತನಕ ಖಾದಿಧಾರಿಗಳಾಗಿದ್ದರು.  ಸಾಹಿತ್ಯ ರಚನೆ ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆಸಕ್ತಿ ವಹಿಸಿದ್ದ ಇವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದ ಸುಭೋದ ರಾಮಯರಾಯರಿಗೆ, ಪುಸ್ತಕ ಪ್ರಕಟಣೆಗೆಂದೇ  ಅಂದಿನ ಕಾಲದಲ್ಲಿ ಒಂದು ಸಾವಿರ ರೂಪಾಯಿಯನ್ನು ಸಹಾಯ ಮಾಡಿದ್ದರು.   ಒಂದು ಶತಮಾನದ ಹಿಂದೆ ಒಂದು ಸಾವಿರ ರೂಪಾಯಿಗೆ ಬಹಳಷ್ಟು ಬೆಲೆ ಇತ್ತು ಎಂಬುದು ನಮಗೆ ತಿಳಿದ ವಿಚಾರ. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಕ್ಕೂ ಅಪಾರ ಹಣ ನೀಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಶ್ರೀನಿವಾಸರಾಯರ ಬಹಳಷ್ಟು ಲೇಖನಗಳನ್ನು ಸಂಗ್ರಹಿಸಿ ‘ಸಾಹಿತ್ಯ ಶಾಸ್ತ್ರ’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ.  ಕರ್ಪೂರ ಶ್ರೀನಿವಾಸರಾವ್ ಅವರು 1919ರ ವರ್ಷದಲ್ಲಿ ಹಾಸನದಲ್ಲಿ ನಡೆದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.  

ಶ್ರೀನಿವಾಸರಾಯರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಮೈಸೂರು ಸರ್ಕಾರವು  ‘ರಾಜ್ಯಸಭಾ ಭೂಷಣ’ ಬಿರುದಿತ್ತು ಗೌರವಿಸಿತ್ತು. ಡಿವಿಜಿ ಅವರು ಕರ್ಪೂರ ಶ್ರೀನಿವಾಸರಾಯರ ಹಿರಿಮೆಯ ಕುರಿತಂತೆ ತಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ವಿಸ್ತ್ರತವಾಗಿ ಬರೆದಿದ್ದಾರೆ.

ಕರ್ಪೂರ ಶ್ರೀನಿವಾಸರಾಯರು 1932ರ ಜೂನ್ 2ರಂದು ಈ ಲೋಕವನ್ನಗಲಿದರು.  

ಚುಕ್ಕಿಚಿತ್ರ ಕೃಪೆ: ಆತ್ಮೀಯ ಗೆಳೆಯರೂ ಮಹಾನ್ ಕಲಾವಿದರೂ ಆದ ಮೋಹನ್ ವರ್ಣೇಕರ್  Mohan Vernekar​ ಅವರದು

On Remembrance Day of great person Karpoora Sreenivasa Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ