ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅವಧಿ

 

ಅವಧಿ ತಲುಪಿತು ಹದಿನೈದವಧಿ

ಕನ್ನಡದ ಬಗ್ಗೆ ಅಂತರಜಾಲದಲ್ಲಿ ಚಿಂತಿಸುವವರಿಗೆ ಮೊದಲು ನೆನಪಾಗುವುದು 'ಅವಧಿ'.  ಹೈದರಾಬಾದಿನ ರಾಮೋಜಿ ಸಿಟಿಯಲ್ಲಿದ್ದು  ಕಿರುತೆರೆಯಲ್ಲಿ 'ಈಟಿವಿ'ಯನ್ನು ಸಾಂಸ್ಕೃತಿಕ ಮೆರುಗಿನ ವಾಹಿನಿಯಾಗಿ ಬೆಳಗಿಸಿದ್ದ ಜಿ. ಎನ್. ಮೋಹನ್ ಅವರು 2007ರಲ್ಲಿ ಮೂಡಿಸಿದ ಸೃಷ್ಟಿಯಿದು. ಇದೀಗ ಈ 'ಅವಧಿ' ಹದಿನಾಲ್ಕು  ಅವಧಿಗಳನ್ನು ದಾಟಿ ಹದಿನೈದಕ್ಕೆ ಕಾಲಿಟ್ಟಿದೆ.

'ಅವಧಿ' ಜೊತೆಗೆ ಒಂದೆಡೆ 'ಹಂಬಲ ತೇರಿನ ಭೂಮಿ' ಎಂಬ ವಾಖ್ಯೆಯಿದೆ.  'ಅವಧಿ'. ತಾಣದಲ್ಲಿ  'ಇದು ಕನಸುಗಳ ಬೆಂಬತ್ತಿದ ನಡಿಗೆ' ಎಂಬ ಮಾತಿದೆ.  ಅದರ ಪುಸ್ತಕ ಪ್ರಕಟಣಾ ಅಂಗವಾದ 'ಬಹುರೂಪಿ' ಎಂಬ ಪದ ಕೂಡಾ ಕಾಣುತ್ತದೆ. ಇದು ಅವಧಿ ಹೊಂದಿರುವ ಕನಸುಗಳ ವ್ಯಾಪ್ತಿ ಎಂಥದು ಎಂಬುವ ಸೂಚ್ಯಗಳಾಗಿವೆ.  ಈ ಸೃಜನಾತ್ಮಕ ಕನಸು ಕಳೆದ ಹದಿನಾಲ್ಕು ವರ್ಷಗಳಲ್ಲಿ ಹರಡಿರುವ ಕನಸುಗಳು ಸಹಸ್ರಾರು. ಅದು  ಪ್ರೇರಿಸುವ ಮನಸ್ಸುಗಳು ಕೂಡಾ ಹಲವು ನೂರು.  

ಅನೇಕ ಕವಿಗಳು ಮತ್ತು ಪ್ರಬುದ್ಧ ಬರಹಗಾರರು ಅವಧಿಯಲ್ಲಿ ಬರೆಯುತ್ತಾ ಬಂದಿದ್ದಾರೆ.  ಅವಧಿ ಕೇವಲ ನನ್ನ ತಾಣಕ್ಕೆ ಬಂದು ಓದಿ ಹೋಗಿ ಎನ್ನುವುದಿಲ್ಲ.  ನೀವೂ ಇಲ್ಲಿ ಬಂದು ನಿಮ್ಮ ಸೃಜನಾತ್ಮಕ ಬರಹವನ್ನು ಮೂಡಿಸಿ ಎನ್ನುತ್ತಲೂ ಬಂದಿದೆ.  ಹೀಗೆ ಕನ್ನಡದ ಮನಗಳಿಗೆ ಇದೊಂದು ಓದುವ, ಕಲಿಯುವ, ಅಭಿವ್ಯಕ್ತಿಸುವ ಮತ್ತು ಬೆಳೆಯುವ ಲೋಕವಾಗಿದೆ. 

ಗ್ಲೋಬಲೈಸನ್ ಅಲೆಯಲ್ಲಿ ಎಲ್ಲವೂ ವಿದೇಶಿ ಮಯವಾಗುತ್ತದೆ, ಕನ್ನಡದಂತಹ ಭಾಷೆಗಳಿಗೆ ಮತ್ತು ಅದರ ಸಂಸ್ಕೃತಿಗೆ ನೆಲೆಯೆಲ್ಲಿ ಎಂದು ಕಾಳಜಿಯಿಂದ ಪ್ರಶ್ನೆ ಹೊಂದಿದ್ದವರಿಗೆ,  'ಅವಧಿ' ಹೊಸ ಡಿಜಿಟಲ್ ಯುಗದಲ್ಲಿ ಹೇಗೆ ಸ್ಥಳೀಯ ಭಾಷಾ ಸಂಸ್ಕೃತಿಗಳು ಉಳಿದು ಬೆಳೆಯಲೂ ಬಹುದು ಎಂಬ ಸಮರ್ಥ ಉತ್ತರವನ್ನೂ ನೀಡುತ್ತ ಬಂದಿದೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತವೂ ಆಗಿರುವ ನಮ್ಮ  'ಅವಧಿ' ಎಂಬ ನಮ್ಮ ಕನ್ನಡದ ವಿಶಾಲ ಶರಧಿ,  ನಿರಂತರ ವಿಸ್ತರಿಸುತ್ತಾ ಅದರ ಸಾಂಸ್ಕೃತಿಕ ಅಲೆಗಳ ಉಲ್ಲಾಸದಲ್ಲಿ ನಮ್ಮನ್ನು ದಿನನಿತ್ಯ ತೋಯಿಸುತ್ತಿರಲಿ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ