ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೀಳಾದೇವಿ



 ನೀಳಾದೇವಿ


ನೀಳಾದೇವಿ ಕನ್ನಡದ ಪ್ರಸಿದ್ಧ ಕತೆಗಾರ್ತಿಯರಲ್ಲಿ ಒಬ್ಬರು.

ನೀಳಾದೇವಿ ಅವರು 1932ರ  ಜೂನ್  5ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಕೆ.ಎಸ್. ರಾಮಸ್ವಾಮಿ. ತಾಯಿ ರುಕ್ಮಿಣಿಯಮ್ಮ.  ತಂದೆ ಮೈಸೂರು ಸಂಸ್ಥಾನದಲ್ಲಿ ಪ್ರಾರಂಭವಾಗಿದ್ದ ಮೊದಲ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ಇಂಜಿನಿಯರಿಂಗ್ ಪದವೀಧರರಾಗಿ ಕಂಟ್ರಾಕ್ಟರ್ ಆಗಿದ್ದವರು.

ನೀಳಾದೇವಿ ಅವರು ಕನ್ನಡ ಶಾಲೆಯಾದ ಮಹಾಜನ ಶಾಲೆಯಲ್ಲಿ ಓದುವಾಗ ಹೈಸ್ಕೂಲಿನಲ್ಲಿ ಬಿ. ರಾಚಯ್ಯ ಮತ್ತು ಎಸ್.ಎಂ. ಕೃಷ್ಣ ಇವರ ಸಹಪಾಠಿಗಳಾಗಿದ್ದರು. ತಂದೆಯವರಿಗೆ ಗಾಂಧೀಜಿಯವರ ತತ್ತ್ವ, ಆದರ್ಶಗಳಲ್ಲಿ ನಂಬಿಕೆ ಇದ್ದುದರಿಂದ ತಮ್ಮ ಕಂಪನಿಯಲ್ಲಿಯೇ ‘ತಿಲಕ್ ಸಂಘ’ಕ್ಕೆ ಉಚಿತವಾಗಿ ಸ್ಥಳ ನೀಡಿದ್ದರು. ಸ್ಕೂಲಿನಿಂದ ಬಂದ ನಂತರ ಮಕ್ಕಳೂ ಕೂಡಾ ಚರಕದಲ್ಲಿ ನೂಲು ತೆಗೆಯಲು, ಹಿಂದಿಭಾಷೆ ಕಲಿಯಲು ಪ್ರೇರೇಪಿಸುತ್ತಿದ್ದರು. ತರಗತಿಯಲ್ಲಿ ಕನ್ನಡ ಪಂಡಿತರಾಗಿದ್ದ ಸುಬ್ಬರಾಯಾಚಾರ್‌ರವರ ಪಾಠಗಳೆಂದರೆ ಹುಡುಗರಿಗೆ ಬಹಳ ಇಷ್ಟವಾದ ತರಗತಿ. ವಿದ್ಯಾರ್ಥಿಗಳು ಕನ್ನಡ ಕಲಿಯಲು ಸ್ವಂತಮಾತಿನಲ್ಲೇ ಲೇಖನಗಳನ್ನು ಬರೆಯುವಂತೆ ಒತ್ತಾಯಿಸುತ್ತಿದ್ದರು. ಹೀಗೆ ಒಮ್ಮೆ ಇವರು ಕೋಗಿಲೆಯ ಮೇಲೆ ಬರೆದ ಲೇಖನವನ್ನು ಮೆಚ್ಚಿ ಬಹುಮಾನವನ್ನು ಕೊಟ್ಟಿದ್ದರು. ಮನೆಯಲ್ಲಿಯೂ ತಂದೆಯ ಗ್ರಂಥಭಂಡಾರದಲ್ಲಿದ್ದ ಇಂಗ್ಲಿಷ್ ಪುಸ್ತಕಗಳ ಜೊತೆಗೆ ಶಿವರಾಮ ಕಾರಂತರ ಬಾಲ ಪ್ರಪಂಚ, ಎಂ.ಎಸ್. ಪುಟ್ಟಣ್ಣನವರ ನೀತಿಕತೆಗಳನ್ನೆಲ್ಲಾ ಓದಿ ಮುಗಿಸಿದ್ದರು. ಹೀಗೆ ಕಥೆಗಳನ್ನು ಓದುತ್ತ ಬಂದಂತೆಲ್ಲ ತಮಗೂ  ಕಥೆ ಬರೆಯಬೇಕೆನಿಸಿ ಬರೆದ ಮೊದಲ ಮೊದಲ ಕತೆ ‘ಕಳ್ಳಬೊಮ್ಮ’. ತಾವು ಬರೆದ ಕತೆಯನ್ನು ತಾತನಿಗೆ (ತಾಯಿಯ ತಂದೆಗೆ) ತೋರಿಸಿದಾಗ ಅವರು ಮಕ್ಕಳ ಸಾಹಿತ್ಯವನ್ನು ಪ್ರಕಟಿಸುತ್ತಿದ್ದ ಸಿ. ಅಶ್ವತ್ಥನಾರಾಯಣರಾಯರಿಗೆ ಕಳುಹಿಸಿದರು. ಅವರು ‘ಮಕ್ಕಳ ಪುಸ್ತಕ’ದಲ್ಲಿ ಪ್ರಕಟಿಸಿದಾಗ ಇವರಿಗಾದ ಆಶ್ಚರ್ಯ, ಸಂತೋಷ ಅಷ್ಟಿಷ್ಟಲ್ಲ. ನಂತರವೂ ಹಲವಾರು ಕತೆ, ಕವನ, ಒಗಟುಗಳನ್ನು ‘ಮಕ್ಕಳ ಪುಸ್ತಕ’ಕ್ಕೆ ಬರೆದು ಕಳುಹಿಸತೊಡಗಿದರು. 

ಸಾಹಿತ್ಯದ ಜೊತೆಗೆ ಚಿತ್ರಕಲೆಯಲ್ಲೂ ಆಸಕ್ತಿ ಬೆಳೆಸಿಕೊಂಡ ನೀಳಾದೇವಿ ಅವರು ಪೇಟೆಯಲ್ಲಿ ಸಿಗುವ ಬಣ್ಣಗಳ ಪರಿಚಯವಿಲ್ಲದಿದ್ದುರಿಂದ ಮನೆಯ ತೋಟದಲ್ಲಿ ಬೆಳೆದ ಮರುಗ, ದಾಸವಾಳ, ಬೋಗನ್‌ವಿಲ್ಲಾ, ಕನಕಾಂಬರ, ಸ್ಫಟಿಕ ಮುಂತಾದ ಹೂಗಳ ರಸ ತೆಗೆದು ಬಣ್ಣಗಳ ಸಂಯೋಜನೆ ಮಾಡಿ ಚಿತ್ರಕಲೆಯನ್ನು ಸ್ವತಃ ಕಲಿತರು. ನಂತರ ಚಾಮರಾಜೇಂದ್ರ ಟೆಕ್ನಲಾಜಿಕಲ್ ಇನ್‌ಸ್ಟಿಟ್ಯೂಟ್‌ಗೆ ಹೋಗಿ ಪ್ರಾರಂಭಿಕ ಕೆಲ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಂತೆ ಸೋದರತ್ತೆ ಮಗನೊಡನೆ ವಿವಾಹವಾಯಿತು.  ನೀಳಾದೇವಿ ಅವರು ಎಸ್.ಎಲ್.ಎಲ್.ಸಿ ಪಾಸುಮಾಡಿದ ನಂತರ ಪತಿಗೃಹಕ್ಕೆ ಬಂದರು. ಮುಂದೆ ಸುಪ್ತಮನಸ್ಸಿನಲ್ಲಿ ಅಡಗಿಕೊಂಡಿದ್ದ ವಿದ್ಯೆ ಕಲಿಕೆಯ ಆಸೆ ಪುಟಿದೆದ್ದದ್ದು ಮೊಮ್ಮಕ್ಕಳು ಬಂದ ನಂತರ. ಹೀಗೆ ಅವರು ಎಂ.ಎ. ಪದವಿ ಗಳಿಸಿದರು.  

ತಮ್ಮ ಮಗಳು ಕಿವುಡಿಯಾದಳೆಂದು ತಿಳಿದಾಗ ಆಕೆಯ ಬದುಕಿಗೆ ಒತ್ತಾಸೆಯಾಗಿ ನಿಂತು ಆಕೆಯ ಬದುಕನ್ನು ಸ್ವಾವಲಂಬನೆಗೆ ತಂದುದರ ಜೊತೆ ಜೊತೆಗೆ, ತಾವು ಅನುಭವಿಸಿದ ಮಾನಸಿಕ ಒತ್ತಡ, ದಿಗ್ಭ್ರಮೆ, ಯಾತನೆಗಳಿಗೆ ರೂಪಕೊಟ್ಟು ಬರೆದ ಕಾದಂಬರಿಗಳೇ ‘ಮೂಕರಾಗ’ ಮತ್ತು ‘ಅನುರಾಧ’.  ಮೂಕರಾಗ ಕಾದಂಬರಿಯು ‘ಸುಧಾ’ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡು ಅಪಾರ ಮೆಚ್ಚುಗೆ ಪಡೆಯಿತು. 

ಮುಂದೆ ಭೂವಿಜ್ಞಾನಿಯಾದ ಇವರ ಪತಿಗೆ ವರ್ಗವಾದದ್ದು ವಿಂದ್ಯಪರ್ವತದ ಅಡವಿಯ ನಡುವಿನ ದ್ವೀಪ, ನಲ್ಲಿ ನೀರು ಇಲ್ಲದ ತಾಣ. ಜನ ಸಂಪರ್ಕವಿಲ್ಲದೆ, ಸರಿಯಾದ ಸ್ನೇಹಿತರಿಲ್ಲದೆ ಹೊತ್ತು ಕಳೆಯುವುದೇ ದುಸ್ತರ ಎನಿಸಿದಾಗ ಸಿಕ್ಕ ಕಾದಂಬರಿ ಚಾರ‍್ಲೆಟ್‌ಬ್ರಾಂಟಿಯ ಜೀನ್ ಐರ್ ಕಾದಂಬರಿ. ಜೀನ್ ಐರ್ ಕಾದಂಬರಿಯಿಂದ ಪ್ರೇರಿತವಾಗಿ ಬರೆದ ಕಾದಂಬರಿಯೇ ‘ಬೇಡಿ ಬಂದವಳು’. ಈ ಕಾದಂಬರಿಯನ್ನು ಹಸ್ತಪ್ರತಿರೂಪದಲ್ಲಿಯೇ ಎಸ್.ವಿ. ಪರಮೇಶ್ವರ ಭಟ್ಟರು, ಜಿ.ಪಿ. ರಾಜರತ್ನಂ, ತ.ಸು. ಶಾಮರಾಯರು ಓದಿ ಮೆಚ್ಚಿದ್ದರು. ಇದು ಪ್ರಕಟಗೊಂಡಾಗ ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆಯೂ ಬಂದು 1968ರಲ್ಲಿ ಸಿ. ಶ್ರೀನಿವಾಸ್‌ರವರ ನಿರ್ದೇಶನದಲ್ಲಿ ಚಲನಚಿತ್ರವಾಗಿಯೂ ಜನಪ್ರಿಯವಾಯಿತಲ್ಲದೆ ತಮಿಳಿನಲ್ಲಿಯೂ ‘ಶಾಂತನಿಲಯಂ’ ಎಂಬ ಹೆಸರಿನಿಂದ ಚಲನಚಿತ್ರವಾಗಿ ಪ್ರಸಿದ್ಧಿ ಪಡೆಯಿತು. 

ನಂತರ ನೀಳಾದೇವಿ ಅವರು 'ಒಲವಿನ ಜಾಲ', 'ಕಣ್ಣುಮುಚ್ಚಾಲೇ', 'ಜೀವನ ಹೆಜ್ಜೆ', 'ಕಾಗದದ ಚೂರು', 'ಅಂತರ', 'ಫ್ಲಾಟ್‌ಫಾರಂ ಮೇಲೆ ಒಂದು ರಾತ್ರಿ' ಮುಂತಾದ ಸುಮಾರು 40 ಕಾದಂಬರಿಗಳನ್ನು  ಪ್ರಕಟಿಸಿದರು. ‘ಕಳ್ಳಿಗಿಡದ ಬುಡದಲ್ಲಿ’ ಕಥೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಂದಿತು. ‘ಹುಲ್ಲು ಹಸುರಾಯಿತು’ ಕಾದಂಬರಿಯ ಪ್ರಕಟವಾದ ನಂತರ ಓದುಗರ ಮೆಚ್ಚುಗೆ ಪಡೆದದ್ದಷ್ಟೇ ಅಲ್ಲದೆ ವಾಷಿಂಗ್‌ಟನ್ ಲೈಬ್ರರಿ ಆಫ್ ಕಾಂಗ್ರೆಸ್‌ನವರು ಇದೊಂದು ಸಮಾಜಶಾಸ್ತ್ರ ಅಧ್ಯಯನದ ಕೃತಿ ಎಂದು ಆಯ್ಕೆ ಮಾಡಿದರು. ರಾಮಾನುಜಾಚಾರ್ಯರನ್ನು ಅಧ್ಯಯನ ಮಾಡಿ ರಚಿಸಿದ ಕೃತಿ ‘ಧನ್ಯ’. ಈ ಕೃತಿಯು ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿಯೂ ಸಂದಿತು. ತರಂಗ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಮತ್ತೊಂದು ಕಾದಂಬರಿ ‘ಕಪಿಮುಷ್ಠಿಲಿ ಕಡ್ಲೆಕಾಯಿ’. 

ನೀಳಾದೇವಿ ಅವರು ಅಮೆರಿಕಾ, ಕೆನಡಾ ದೇಶಗಳಿಗೆ ಹಲವಾರು ಬಾರಿ ಭೇಟಿ ನೀಡಿ ಗಳಿಸಿದ ವಿಫುಲ ಅನುಭವಕ್ಕೆ ಅಕ್ಷರರೂಪಕೊಟ್ಟು ಬರೆದ ಎರಡು ಕೃತಿಗಳೆಂದರೆ ‘ನಾ ಕಂಡ ಆ ಖಂಡ’ ಮತ್ತು ‘ಸಬಲನ ವಿದೇಶ ಯಾತ್ರೆ’. ಇವಲ್ಲದೆ ರೂಪದಾಹ, ಅಲೆಯ ಆಟ, ಮಾಣಿಕ್ಯ, ಹೆಜ್ಜೆ, ಕಾಮನ ಬಿಲ್ಲು, ಕಾಲ ಕಂಡ ಕಥೆಗಳು (ಅನುವಾದ) ಮುಂತಾದ ಕಥಾ ಸಂಕಲನಗಳು ಪ್ರಕಟವಾಗಿವೆ. 

ನೀಳಾದೇವಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಿ. ಸರೋಜದೇವಿ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ  ಮತ್ತು ಸ್ವರಲಿಪಿ ಪ್ರಾಜ್ಞೆ ಪ್ರಶಸ್ತಿಗಳ, ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ,  ಜೊತೆಗೆ 2007 ರಲ್ಲಿ ಮಂಡ್ಯದಲ್ಲಿ ನಡೆದ ಕರ್ನಾಟಕ ಲೇಖಕಿಯಿರ ಸಂಘದ ಆರನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವೂ ಸಂದಿತು.

ನಾಡಿನ ಹಿರಿಯ ಬರೆಹಗಾರ್ತಿ ನೀಳಾದೇವಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.


On the birth day of our novelist Neeladevi 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ