ಪ. ಗು. ಸಿದ್ಧಾಪುರ
ಪ. ಗು. ಸಿದ್ಧಾಪುರ
ಮಕ್ಕಳ ಸಾಹಿತ್ಯದಲ್ಲಿ ಹೆಸರಾಗಿರುವ ಪರಗೊಂಡ ಗುರುಪಾದಪ್ಪ ಸಿದ್ಧಾಪುರರವರು ವಿಜಾಪುರ ತಾಲ್ಲೂಕಿನ ಬಸವನ ಬಾಗೇವಾಡಿಯಲ್ಲಿ 1958 ವರ್ಷದ ಜೂನ್ 1 ರಂದು ಜನಿಸಿದರು. ತಂದೆ ಗುರುಪಾದಪ್ಪ ಮತ್ತು ತಾಯಿ ಯಮುನಾ ಬಾಯಿ ಅವರು.
ಪ. ಗು. ಸಿದ್ಧಾಪುರ ಅವರು ಬಾಲ್ಯದಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರಾದರೂ ಪ್ರಾರಂಭಿಕ ಶಿಕ್ಷಣ ಪಡೆದಿದ್ದು ತಾಯಿಯ ತವರೂರಾದ ದಶಾಳದಲ್ಲಿ. ಪ್ರೌಢಶಾಲಾ ಶಿಕ್ಷಣವನ್ನು ಬಬಲೇಶ್ವರದಲ್ಲಿ ಪಡೆದ ಅವರು ಗದಗದ ವಿಜಯ ಕಲಾಮಂದಿರದಲ್ಲಿ ಕಲೆಯಲ್ಲಿ ಸ್ನಾತಕೋತ್ತರ ಪದವಿ. (ಎಂ.ಎ. ಆರ್ಟ್ ಮಾಸ್ಟರ್) ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವಿಗಳನ್ನು ಪಡೆದರು.
ಪ. ಗು. ಸಿದ್ಧಾಪುರ ಅವರು ಬಸವನಬಾಗೇವಾಡಿ ತಾಲ್ಲೂಕಿನ ಮುಳವಾಡ ಗ್ರಾಮದ ಶ್ರೀ ಚನ್ನ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಉದ್ಯೋಗ ಆರಂಭಿಸಿದರು. ಚಿತ್ರಕಲೆಯಲ್ಲಿ ತಮ್ಮ ಬಣ್ಣಗಳ ಸಂಯೋಜನಾ ಕುಶಲತೆಯಿಂದ ಮುಗ್ಧ ವಿದ್ಯಾರ್ಥಿಗಳ ಮನಗೆದ್ದಂತೆ ಹಲವಾರು ಮಕ್ಕಳ ಪದ್ಯಗಳನ್ನೂ ರಚಿಸಿ ಚಿಣ್ಣರ ನಾಲಗೆಯಲ್ಲಿ ಹರಿದಾಡುವಂತೆ ಮಾಡಿದರು.
ಪ. ಗು. ಸಿದ್ಧಾಪುರ ಅವರು ಇರುಳಿನ ಕೆಸರಲಿ ಅರಳಿದ ತಾವರೆ ಚಂದಿರ ನಗುತಿಹನು, ಮಜ್ಜಿಗೆಯೊಳಗಿನ ಬೆಣ್ಣೆಯ ಹಾಗೆ ತೇಲುತ ಬರುತಿಹನು ಎಂಬಂತಹ ಲಯಬದ್ಧ, ಸರಳ ಮಾತುಗಳ, ಆಕರ್ಷಕ ಶೈಲಿಯ ಪದ್ಯಗಳನ್ನು ಬರೆದರು. ಇವು ಮಕ್ಕಳು ಹಾಡಿ ಕುಣಿಯುವಂತಹ ಗುಣವನ್ನು ಹೊಂದಿವೆ. ಹೀಗೆ ಮಕ್ಕಳ ಪದ್ಯಗಳ ರಚನೆಯಲ್ಲಿ ತಮ್ಮದೇ ಆದ ಹಾದಿ ಹಿಡಿದು ಸಾಗಿದ ಪ. ಗು. ಸಿದ್ಧಾಪುರ ಅವರು ಅನೇಕ ಮಕ್ಕಳ ಪದ್ಯಗಳ ಸಂಕಲನಗಳನ್ನು ಪ್ರಕಟಸಿದ್ದಾರೆ. ಹೀಗೆ ಅವರು ಬರೆದ ಹಲವಾರು ಪದ್ಯಗಳು ಸುಧಾ, ಮಯೂರ, ಕರ್ಮವೀರ, ಮಲ್ಲಿಗೆ. ವಿಜಯಕರ್ನಾಟಕ, ಪ್ರಜಾವಾಣಿ ಮುಂತಾದ ದಿನಪತ್ರಿಕೆಗಳು, ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ. ಗು. ಸಿದ್ಧಾಪುರ ಅವರ ಮೊದಲ ಮಕ್ಕಳ ಕವಿತೆಗಳ ಸಂಕಲನ ‘ಬಣ್ಣದ ಚಿಟ್ಟೆ’ 1989 ರಲ್ಲಿ ಪ್ರಕಟಗೊಂಡಿತು. ಅದರಲ್ಲಿನ ಒಂದು ಸಾಲು ಹೀಗಿದೆ:
ಬಾಬಾ ಚಿಟ್ಟೆ ಬಣ್ಣದ ಚಿಟ್ಟೆ ಎಲ್ಲಿಗೆ ಹೊರಟಿರುವೆ ? ಹೆದರುವಿಯೇಕೆ ಪರಿಮಳ ಬೇಕೆ ಈಗಲೆ ನಾ ತರುವೆ !
ಬಣ್ಣದ ಚಿಟ್ಟೆ ಸಂಕಲನದ ನಂತರ ಪ. ಗು. ಸಿದ್ಧಾಪುರ ಅವರು ‘ತಾರಾಲೋಕಕ್ಕೆ ಹಾರುವೆನು’, ‘ಮಳೆರಾಯ’, ‘ಪುಟ್ಟನ ಪ್ರಶ್ನೆ’, 'ಸಕ್ಕರೆ ತುಪ್ಪ, ಮುತ್ತಿನ ಕುಂಜಿಗೆ’, ‘ಮಂಗನ ಅಂಗಳಕೆ’, 'ಚಿನ್ನದ ಜಿಂಕೆ’, 'ನಂದನದಲ್ಲಿ ಚಂದನ’, ಆಯ್ದ ಮಕ್ಕಳ ಕವಿತೆಗಳ ಸಂಕಲನವಾದ ‘ಮಕ್ಕಳ ನೂರಾರು ಕವಿತೆಗಳು’ ಮುಂತಾದ ಕವಿತಾ ಸಂಕಲನಗಳಲ್ಲದೆ, ‘ಹಸಿರು ತೋರಣ’ (ಪರಿಸರ ಗೀತೆ), ‘ಪಣತೊಟ್ಟ ಪ್ರಾಣಿಗಳು’ (ಮಕ್ಕಳ ಕಥೆಗಳು), ‘ಹೊಸ ಹೆಜ್ಜೆ’ (ನವಸಾಕ್ಷರರಿಗಾಗಿ ಕಥೆಗಳು), ‘ಯಾವೂರಾನೆ, ವಿಜಾಪುರದಾನೆ!’ (ಮಕ್ಕಳ ಕಥೆಗಳು), ‘ಕರಡಿ ಹೇಳಿದ ಕಥೆ’ (ಮಕ್ಕಳ ಕಥನ ಕವನ), ‘ಅಥಣಿ ಶಿವಯೋಗಿಗಳು’ (ಮಕ್ಕಳಿಗಾಗಿ ವ್ಯಕ್ತಿ ಪರಿಚಯ), ‘ಬಂಗಾರದ ಬಳೆ’ (ಮಕ್ಕಳ ಕಥೆಗಳು) ಮುಂತಾದವುಗಳನ್ನು ಪ್ರಕಟಿಸಿದ್ದಾರೆ.
ಪ. ಗು. ಸಿದ್ಧಾಪುರ ಅವರು ಬರೆದ ಹಲವಾರು ಮಕ್ಕಳ ಕವಿತೆಗಳು ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯ, ಮಹಾರಾಷ್ಟ್ರ ಸರಕಾರದ ಪಠ್ಯಪುಸ್ತಕ ನಿರ್ಮಿತಿ ಮಂಡಳ, ಕೇರಳ ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯ ಮುಂತಾದವುಗಳಿಂದ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿವೆ. ನವ ಸಾಕ್ಷರರಿಗಾಗಿ ಬರೆದ ಕಥಾಸಂಕಲನ ‘ಹೊಸ ಹೆಜ್ಜೆಯು’ ಅತ್ಯಾಕರ್ಷಕ ಕಥಾ ಸಂಕಲನವಾಗಿದ್ದು, ನವಸಾಕ್ಷರರಿಗೆ ಸಾಕ್ಷರತೆಯ ಬಗ್ಗೆ ಒಲವು ಮೂಡುವಲ್ಲಿ ಸಫಲವಾದ ಕೃತಿಯಾಗಿದೆ.
ಮೇಲ್ಕಂಡ ಕೃತಿಗಳೇ ಅಲ್ಲದೆ ಪ. ಗು. ಸಿದ್ಧಾಪುರ ಅವರು ಕೊರ್ತಿ – ಕೊಲ್ಹಾರದ ನಡುವಿನ ಸೇತುವೆ ನಿರ್ಮಾಣದ ಹಿನ್ನೋಟದ ಬಗ್ಗೆ ಕೃತಿಯೊಂದನ್ನು ರಚಿಸಿದ್ದು ಬಾಗಲಕೋಟೆ – ವಿಜಾಪುರ ಅವಳಿ ಜಿಲ್ಲೆಗಳಿಗೆ ಸಂಬಂಧಿಸಿದ ಕಥಾ ವೃತ್ತಾಂತವನ್ನು ಬಿಡಿಸಿಟ್ಟಿದ್ದಾರೆ. ಇವಲ್ಲದೆ ರಾಜ್ಯ ಚಿತ್ರಕಲಾ ಶಿಕ್ಷಕರ 4 ನೇ ಶೈಕ್ಷಣಿಕ ಮಹಾ ಸಮ್ಮೇಳನದ ಸ್ಮರಣ ಸಂಚಿಕೆ ‘ನಿಸರ್ಗ’, ಗೊಳಸಂಗಿ ದಳವಾಯಿ ಪ್ರೌಢಶಾಲಾ ಸ್ಮರಣ ಸಂಚಿಕೆ ‘ಬೆಳ್ಳಿ ಬೆಳಕು’ ಹಾಗೂ ಅಭಿನಂದನಾ ಗ್ರಂಥಗಳಾದ ‘ಹೂವಿನ ಹಂದರ’, ‘ಚಿಂತಾಮಣಿ’, ‘ದಾಂಪತ್ಯ ದೀಪ್ತಿ’, ‘ಮನಗೂಳಿ ಮಾಣಿಕ್ಯ’, ‘ಗೊಳಸಂಗಿ ಗೌರವ’, ‘ಸುವರ್ಣ ಸಂಭ್ರಮ’ ಮುಂತಾದ ಕೃತಿಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು ವಿಜಾಪುರ ಜಿಲ್ಲಾ ಮಕ್ಕಳ ಸಂಗಮದ ಕೋಶಾಧಿಕಾರಿಯಾಗಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಗಮಕ ಕಲಾ ಪರಿಷತ್ತು, ಮುಳವಾಡದ ರೋಟರಿ ಸಂಸ್ಥೆ ಮುಂತಾದವುಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಪ. ಗು. ಸಿದ್ಧಾಪುರ ಅವರ 'ಪಣ ತೊಟ್ಟ ಪ್ರಾಣಿಗಳು’ ಕಥಾಸಂಕಲನಕ್ಕೆ ಚಿಕ್ಕೋಡಿ ತಮ್ಮಣ್ಣಪ್ಪ ಸಾಹಿತ್ಯ ಪುರಸ್ಕಾರ, ‘ತಾರಾ ಲೋಕಕ್ಕೆ ಹಾರುವೆನು’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ಮಹಾದೇವಪ್ಪ ಕರ್ಲಟ್ಟಿ ಮಕ್ಕಳ ಸಾಹಿತ್ಯ ಪುರಸ್ಕಾರ, ಕಂಚ್ಯಾಣಿ ಶರಣಪ್ಪ ಮಕ್ಕಳ ಸಾಹಿತ್ಯ ಪುರಸ್ಕಾರಗಳು; ‘ಹುಯ್ಯೋ ಹುಯ್ಯೋ ಮಳೆರಾಯ’ ಕವನ ಸಂಕಲನಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠ ಸಾಹಿತ್ಯ ಪುರಸ್ಕಾರ, ‘ಸಕ್ಕರೆ ತುಪ್ಪ’ ಮಕ್ಕಳ ಕವನ ಸಂಕಲನಕ್ಕೆ ನಾಲತವಾಡ ವಿಜಯ ಪ್ರಕಾಶನದಿಂದ ಮಕ್ಕಳ ರತ್ನ ಪ್ರಶಸ್ತಿ,, ‘ಮಂಗಳನ ಅಂಗಳಕೆ’ ಕವನ ಸಂಕಲನಕ್ಕೆ ಮೂಡುಬಿದಿರೆಯಲ್ಲಿ ನಡೆದ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹಸ್ತಪ್ರತಿಗೆ ಗೌರವಧನ, ರಾಷ್ಟ್ರಕೂಟ ಸಾಹಿತ್ಯಶ್ರೀ ಪುರಸ್ಕಾರ, ಇವುಗಳಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ, ಬಾಲವಿಕಾಸ ಅಕಾಡಮಿ, ಕಲಬುರ್ಗಿಯ ತಪೋವನ ಮಠ ಮುಂತಾದವುಗಳಿಂದ ದೊರೆತ ಗೌರವಗಳ ಜೊತೆಗೆ ವಿಜಾಪುರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶಿಕ್ಷಕರ ಸಂಘದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ರಾಜ್ಯ ಸರಕಾರದ ಶಿಕ್ಷಣ ಇಲಾಖೆಯಿಂದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರದಂತೆ ಅನೇಕ ಗೌರವಗಳು ಸಂದಿವೆ.
ಕಾಮೆಂಟ್ಗಳು