ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್. ಡಿ. ಬರ್ಮನ್


 ಆರ್. ಡಿ. ಬರ್ಮನ್


ಭಾರತದ ಮಹಾನ್ ಸಿನೆಮಾ ಸಂಗೀತ ನಿರ್ದೇಶಕರಲ್ಲೊಬ್ಬರು ಆರ್. ಡಿ. ಬರ್ಮನ್. ಆರ್.ಡಿ.ಬರ್ಮನ್ ಭಾರತೀಯ ಸಿನಿಮಾ ಸಂಗೀತಕ್ಕೆ ವಿಶಿಷ್ಟ ಮೆರುಗು ತಂದ ಅಸಾಮಾನ್ಯ ಸೃಜನಶೀಲ ಪ್ರತಿಭೆ.

ರಾಹುಲ್ ದೇವ್ ಬರ್ಮನ್ 1939ರ ಜೂನ್ 27ರಂದು ಕೊಲ್ಕತ್ತಾದಲ್ಲಿ ಜನಿಸಿದರು. ತಂದೆ ಮಹಾನ್ ಸಂಗೀತ ಸಂಯೋಜಕರೂ, ಗಾಯಕರೂ ಆದ ಸಚಿನ್ ದೇವ್ ಬರ್ಮನ್.  ತಾಯಿ ಗೀತರಚನೆಗಾರ್ತಿ ಮೀರಾ ದೇವ್ ಬರ್ಮನ್.

ಭಾರತೀಯ ಚಲನಚಿತ್ರ ಸಂಗೀತಕ್ಕೆ  ವಿಶಿಷ್ಟ ಪರಂಪರೆಗಳ ಉಗಮಕ್ಕೆ ಕಾರಣರಾದವರಲ್ಲಿ  ಸಿ. ರಾಮಚಂದ್ರ, ಎಸ್.ಡಿ. ಬರ್ಮನ್, ನೌಷದ್, ಗುಲಾಂ ಆಲಿ ಪ್ರಮುಖರೆನಿಸಿದವರು. ಇಂತಹವರ ನಡುವೆ ಎಸ್.ಡಿ.ಬರ್ಮನ್ ಅವರದ್ದೆಲ್ಲ ವಿಶಿಷ್ಟ  ಪ್ರಯೋಗಗಳೇ. ಗೈಡ್, ತೇರೆ ಮೇರೆ ಸಪ್ನೆ, ಜ್ಯೂಯೆಲ್ ಥೀಫ್, ಅಭಿಮಾನ್, ಅರಾಧನ ಮುಂತಾದ ಚಿತ್ರಗಳು ಹಿಂದಿ ಚಿತ್ರರಂಗದವರ  ಮೆಹನತ್ತುಗಳು ಎಂದು ಗುರುತಿಸಲ್ಪಡುವವು.  ಎಸ್.ಡಿ.ಬರ್ಮನ್‌ ಅವರ ಸೃಷ್ಟಿಯ ಒಂದೊಂದು ಹಾಡೂ ಸೊಬಗಿನ ಸಂಗೀತ ನಾದದಿಂದ ಅರಳಿದಂತಹವು.

ಎಸ್.ಡಿ.ಬರ್ಮನರ ಹಾಡುಗಳ ಹುಚ್ಚು ಪ್ರೇಮಿಯೊಬ್ಬ ಅವರನ್ನು ಭೇಟಿಯಾಗಿ, ನನಗೊಬ್ಬ ಮಗ ಹುಟ್ಟಿದರೆ, ನಿಮ್ಮ ಹೆಸರನ್ನೇ ಇಡುತ್ತೇನೆ ಅಂದ. ಅಚ್ಛಾ ಎಂದು ಹುಬ್ಬೇರಿಸಿದ ಬರ್ಮನ್ ಸರಿ ಸಂತೋಷ ಎಂದರು. ಮುಂದೆ ಆತನಿಗೆ ಒಂದು ಗಂಡು ಮಗುವಾಯ್ತು. ಅದಕ್ಕಾತ, ಸಚಿನ್ ತೆಂಡೂಲ್ಕರ್ ಅಂತ ನಾಮಕರಣ ಮಾಡಿದ. ಆತನೇ ಕ್ರಿಕೆಟ್ ಲೋಕದ ಅಸಾಮಾನ್ಯ ಪ್ರತಿಭೆ. ಆ ಹೆಸರೇ ಅಷ್ಟೊಂದು ಪ್ರಭಾವಶಾಲಿ.

ಆರ್.ಡಿ. ಬರ್ಮನ್ ಅಂದರೆ ಸಂಗೀತಗಾರರ ಆಪ್ತ ಸ್ನೇಹಿ. ವಾದ್ಯಗಾರರ ಜೊತೆ ಅವರು ಬಾಲ್ಯ ಸ್ನೇಹಿತನಂತೆ ಸದಾ ನಗುತ್ತಾ, ನಗಿಸುತ್ತಾ ಬದುಕಿದವರು. ಕೋಲ್ಕತ್ತದ ಒಂದು ಸ್ಟುಡಿಯೋದಲ್ಲಿ ಒಬ್ಬ ಗಿಟಾರ್ ವಾದಕನಿಗೆ ಆರ್.ಡಿ.ಬರ್ಮನ್ ಹೀಗೆ ಹೇಳಿದರಂತೆ: "ನೋಡು ಗೆಳೆಯಾ ನಿನ್ನ ವಾದ್ಯವನ್ನು ನೀನು ಚೆನ್ನಾಗಿ ಪಳಗಿಸಿಕೊಂಡಿದ್ದೀಯ. ನೀನು ನೂರು ಹಾಡುಗಳನ್ನು ನುಡಿಸಬಲ್ಲೆ ಅನ್ನೋದು ಜಂಭ ಅನ್ನಿಸಿಕೊಳ್ಳುತ್ತೆ. ಒಂದು ಹಾಡನ್ನು ಮಾತ್ರ ಚೆನ್ನಾಗಿ, ತುಂಬಾ ತುಂಬಾ ಚೆನ್ನಾಗಿ ನುಡಿಸಬಲ್ಲೆ ಅನ್ನೋದು ನಿನ್ನ ಪರ್‌ಫೆಕ್ಷನ್ ತೋರಿಸುತ್ತೆ. ಸಿನೆಮಾ ಹಾಡುಗಳು ಚಿಕ್ಕವಾಗಿದ್ರೂ ಅವು ಪರ್‌ಫೆಕ್ಟ್ ಆಗಿರಬೇಕು. ಅದೇ ಸಿನೆಮಾ ಸಂಗಿತದ ಮುಖ್ಯ ನಿಯಮ".

ಬರ್ಮನ್ ಬಾಲಪ್ರತಿಭೆ.  ತಮ್ಮ ಒಂಬತ್ತನೆ ವಯಸ್ಸಿನಲ್ಲಿಯೆ ಹಾಡುಗಳನ್ನು ಸಂಯೋಜಿಸಿದ್ದರು. ಹಾಡುಗಳ ಮಟ್ಟುಗಳನ್ನು ಹುಟ್ಟು ಹಾಕುವುದರಲ್ಲಿ ನಿಸ್ಸೀಮರಾಗಿದ್ದರು. ಒಮ್ಮೆ ತಾನು ಸಂಯೋಜಿಸಿದ್ದ ಗೀತೆಯನ್ನು ತಂದೆಗೆ ಕೇಳಿಸಿದರು. ತಂದೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಕೊಡದೆ ತಮ್ಮ ಪಾಡಿಗೆ ತಾವು ನಡೆದುಬಿಟ್ಟರು. ಅದಾದ ಕೆಲವು ತಿಂಗಳ ನಂತರ ರಫಿ ಅಮೃತ ಕಂಠದ ಪ್ರೇಮಗೀತೆಯೊಂದು ಸೂಪರ್ ಡೂಪರ್ ಹಿಟ್ಟಾಗಿ ವಿಜೃಂಭಿಸತೊಡಗಿತು. ಈ ಬಾಲಪ್ರತಿಭೆ ಬೆಚ್ಚಿ ಬೆಪ್ಪಾಗಿ ಅಪ್ಪನ ಬಳಿ ಬಂದು 'ಅಪ್ಪಾ ಈ ಟ್ಯೂನ್ ನಂದಲ್ವಾ? ನೀವೇ ನಿಮ್ಮ ಮಗನ ಟ್ಯೂನನ್ನ ಕದ್ದಿದೀರಲ್ಲ ಇದು ಸರೀನಾ?' ಎಂದಾಗ ತಂದೆ ಮಗನ ಭವಿಷ್ಯವನ್ನೆ ನುಡಿದಿದ್ದರು: 'ಮುಂದೆ ನಿನ್ನ ಟ್ಯೂನ್‌ಗಳನ್ನ ಈ ದೇಶಾನೇ ಕದಿಯುತ್ತೆ ಮಗೂ. ಅದಕ್ಕೆ ನಾನು ನಾಂದಿ ಹಾಕಿದ್ದೀನಿ ಅಷ್ಟೆ!'.

ದಿ ಲವ್ಲಿ ಸ್ಯಾಕ್ಸೊಪೋನ್ ಪ್ಲೇಯರ್ ಆಫ್ ಇಂಡಿಯನ್ ಫಿಲಂ ಮ್ಯೂಸಿಕ್ ಬಾಸು ಮನೋಹರಿ ಅವರು ಆರ್‌. ಡಿ. ಬರ್ಮನ್ ಅವರ ಬಲಗೈಯಾಗಿದ್ದರು. ಭೂಪೇಂದರ್ ಎಂಬ ಗಂಧರ್ವ ಕಂಠದ ಗಾಯಕ, ಗಿಟಾರ್ ವಾದಕ ಎಡಗೈಯಂತಿದ್ದರು. ಒಂದು ದಿನ ಈ ಗೆಳೆಯರ ಬೈಠಕ್ ನಡೆದಿತ್ತು. ಹೊಸ ಹಾಡುಗಳಿಗೆ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದರು. ಆರ್‌. ಡಿ. ಬರ್ಮನ್ ಅವರಿಗೆ  ಚಿಂತೆಯೆಲ್ಲಾ ಒಂದೆ. ತನ್ನ ಪಲ್ಲವಿ ಯಾವ ಹೊಸ ವಾದ್ಯದಲ್ಲಿ ಬೆಳಗುತ್ತದೆ? ತಂತ್ರ ಯಾವುದು? ಅದರಲ್ಲಿ ಹೊಸತೇನು? ಎಂದು.

ಇದೇ ಧ್ಯಾನದಲ್ಲಿ ಕುಳಿತಿದ್ದ ಆರ್‌. ಡಿ. ಬರ್ಮನ್ ಕಿವಿಗೆ ದನಿಯೊಂದು ಅಪ್ಪಳಿಸಿತು. ಕಣ್ತೆರೆದು ನೋಡಿದರೆ, ಎಲೆಕ್ಟ್ರಿಕ್ ಗಿಟಾರ್ ಒಂದು ಕೆಳಕ್ಕೆ ಬಿದ್ದು ದನಿ ತರಂಗಗಳನ್ನೆಬ್ಬಿಸಿತ್ತು. ಆ ದನಿಗಳು ಹಿಮಾಲಯದ ಗಿರಿಕಂದರಗಳಲ್ಲಿ ಉಂಟಾಗುವ ದನಿ ಪ್ರತಿಧ್ವನಿಗಳಂತೆ ಅನುಕಂಪಿಸುತ್ತಿದ್ದವು. ಆರ್‌ಡಿಬಿಗೆ ನಿಸರ್ಗವೇ ಕಿವಿ ಬಳಿ ನಿಂತು ಹೊಸತಂತ್ರ ಹೇಳಿಕೊಟ್ಟ ಹಾಗೆ ಆಯಿತು. ರಸಭಂಗಕ್ಕೆ ಗಿಟಾರ್ ವಾದಕ ಪೆಚ್ಚಾಗಿ ನಿಂತಿರುವಾಗ ಬರ್ಮನ್ ಆತನಿಗೆ ಗಿಟಾರನ್ನು ಮತ್ತೆ ಎತ್ತಿ ಕೆಳಕ್ಕೆ ಹಾಕು ಎಂದಾಗ ಭಯಗೊಂಡ, ಆದರೆ ಹೇಳಿದಂತೆ ಮಾಡಿದ. ನಂತರ ಅದೇ ಪರಿಣಾಮವನ್ನು ವಾದ್ಯದಲ್ಲಿ ನುಡಿಸಿ ತೋರು ಎಂದು ಹುರಿದುಂಬಿಸಿದರು. ಅಲ್ಲಿಂದ ಆರಂಭವಾಯ್ತು ಆರ್.ಡಿ. ಬರ್ಮನ್ ಟ್ರೆಂಡ್. ಆ ಅಲೆ ಇಡೀ ದೇಶದಲ್ಲೇ ಪ್ರತಿಧ್ವನಿಸಿತು.

'ತೀಸ್ರೀ ಮಂಜಿಲ್‌' ಎಂಬ ಮೆಗಾ ಮ್ಯೂಸಿಕ್ ಹಿಟ್ ಕೊಡುವವರೆಗೂ ಬರ್ಮನರ ಪ್ರಯೋಗಗಳ ಪಾಡು ಹೇಳತೀರದು. ಅವು ಗೆಲ್ಲಲು ಕಾಲ ಪಕ್ವವಾಗಿರಲಿಲ್ಲ. ತಾನು ಗೆಲ್ಲುವವರೆಗೂ ಆತ ತಂದೆಯ ಅದ್ಭುತ ಸಂಯೋಜನೆಗಳಿಗೆ ಅತ್ಯದ್ಭುತ ವಾದ್ಯವೃಂದದ ಕೌಶಲ್ಯ ಅಳವಡಿಸುತಿದ್ದ. ಅಲ್ಲಿ ಪಡೆದುಕೊಂಡ ಅನುಭವ ಮುಂದೆ ಮೂರು ದಶಕಗಳ ಕಾಲ ಚಲನಚಿತ್ರ ಸಂಗೀತಲೋಕವನ್ನೇ ಆಳುವ ಶಕ್ತಿಯನ್ನು ಆತನಿಗೆ ತಂದುಕೊಟ್ಟಿತು.

'ರೆಹನಾ ಬೀತ್ ಜಾಯೆ... ಶ್ಯಾಂನ ಆಯೆ' ಎನುವ ಹೃದಯ ಹರಿಯುವ ಸಂಯೋಜನೆ ಭಾರತದ ಯಾವ ಸಂಗೀತ ನಿರ್ದೇಶಕನೂ ಕಲ್ಪಿಸಿಕೊಳ್ಳಲಾಗದಷ್ಟು ಸಾಧ್ಯತೆಗಳನ್ನು ಸೃಷ್ಟಿಸಿತು. ಅದ್ಯಾವ ಅಮೃತ ಘಳಿಗೆಯಲ್ಲಿ ಅವರು ಈ ರಾಗವನ್ನು ಕೈಗೆತ್ತಿಕೊಂಡರೋ ಕಾಣೆ, ಹಿಂದೂಸ್ಥಾನಿ ಹಾಗೂ ಶಾಸ್ತ್ರೀಯ ಸಂಗೀತ ದಿಗ್ಗಜರೆಲ್ಲಾ ಆರ್‌ಡಿಬಿ ಕಡೆ ಬೆರಗಿನಿಂದ ನೋಡುವಂತಾಯ್ತು. ಲತಾ ಮಂಗೇಷ್ಕರ್ ಅವರ ಕಂಠಕ್ಕೆ ಕಾಂತಿ ಒದಗಿ ಬಂದಿದ್ದು ಈ ಹಾಡಿನಿಂದ ಎಂದು ಹೇಳಿದರೆ ಮಾತ್ರ ಆರ್‌ಡಿಬಿ ಸಂಯೋಜನೆಯ ಸೌಂದರ್ಯ ಮೀಮಾಂಸೆ ಅರ್ಥ ಕಾಣುವುದು. ಅಮರ್ ಪ್ರೇಮ್ ಚಿತ್ರದ ಆ ಹಾಡು ಹಿಟ್ ಆಯಿತು. 'ತೇರೆ ಬಿನಾ ಜಿಂದಗಿಸೆ ಕೋಯಿ.. ಷಿಕ್‌ವಾ.. ತೋ ನಹೀ' ಎನ್ನುವ 'ಆಂಧಿ' ಚಿತ್ರದ ಹಾಡನ್ನು ಇಡೀ ದೇಶವೇ ಅನುಕರಿಸಿತು.

ಅರ್. ಡಿ. ಬರ್ಮನ್ ಅವರ ಪ್ರಸಿದ್ಧ ಚಿತ್ರಗಳಲ್ಲಿ ತೀಸ್ರೀ ಮಂಜಿಲ್, ಆಂಧಿ, ಪಡೋಸನ್, ಕಟೀ ಪತಂಗ್, ಹರೇ ರಾಮ ಹರೇ ಕೃಷ್ಣ, ಅಮರ್ ಪ್ರೇಮ್, ಕ್ಯಾರವಾನ್,ಯಾದೋಂ ಕಿ ಬಾರಾತ್, ಆಪ್ ಕಿ ಕಸಮ್, ಸೀತಾ ಔರ್ ಗೀತಾ, ಮಿಲಿ, ಮಾಸೂಮ್, ಖೇಲ್ ಖೇಲ್ ಮೆ, ಶೋಲೆ, ಹಮ್ ಕಿಸೀಸೆ ಕಮ್ ನಹೀನ್, ಕಸ್ಮೆ ವಾದೆ, ಘರ್, ಗೋಲ್ ಮಾಲ್, ಖೂಬ್ ಸೂರತ್, ಕಿನಾರಾ, ಶಾಲಿಮಾರ್, ಶಾನ್,ಲವ್ ಸ್ಟೋರಿ, ಬೇತಾಬ್, ಸಾಗರ್, ಸನಮ್ ತೇರಿ ಕಸಮ್, 1942: ಎ ಲವ್ ಸ್ಟೋರಿ ಮುಂತಾದವು ಸೇರಿವೆ.

ಹೀಗೆ ಆರ್.ಡಿ. ಬರ್ಮನ್ ಹೊಸ ಬೆಳಕು ಇಣುಕಿಸಿದ ಗೀತೆಗಳು ಎಷ್ಟೆಷ್ಟೋ. .  ಇಷ್ಟೆಲ್ಲ ಸಾಧಿಸಿದ ವ್ಯಕ್ತಿ ಅಸಂತೋಷದಿಂದ ಬದುಕಲ್ಲಿ ಅತೃಪ್ತರಾಗಿದ್ದರಂತೆ.  ಇದಕ್ಕೆ ಏನೆನ್ನುವುದು.  ಮಹಾನ್ ಪ್ರತಿಭೆ ಆರ್. ಡಿ. ಬರ್ಮನ್ ಕೇವಲ 54 ವರ್ಷ ಬದುಕಿದ್ದು 1994ರ ಜನವರಿ 4 ರಂದು ನಿಧನರಾದರು. ಅವರು ಸಿನಿಮಾ ಲೋಕಕ್ಕೆ ನೀಡಿದ ನಾದಜ್ಯೋತಿ ಎಂದೂ ಆರದಂತದ್ದು. 

On the birth anniversary of great music director Rahul Dev Burman 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ