ಶ್ರೀಪಾದರಾಜರು
ಶ್ರೀಪಾದರಾಜರು
ಶ್ರೀಪಾದರಾಜರು ಸುಮಾರು 14 ನೇ ಶತಮಾನದಲ್ಲಿ ಅವತರಿಸಿದ್ದ ಮಹಾನುಭಾವರು. ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ ಇವರು ಅಗಿನ ಕಾಲದಲ್ಲಿ, ಕನ್ನಡವೆಂದರೆ ಮೂಗು ಮುರಿಯುತ್ತಿದ್ದ ವಾತಾವರಣದಲ್ಲಿ, ಸಕಲ ವೇದಗಳ, ಉಪನಿಷತ್ತುಗಳ, ಮಧ್ವಾಚಾರ್ಯರ ತತ್ತ್ವವಾದವನ್ನು ಸಂಸ್ಕೃತ ಭಾಷೆಯ ಮತ್ತು ಶಾಸ್ತ್ರದ ಅರಿವಿಲ್ಲದ ಸಾಮಾನ್ಯ ಜನರಿಗೋಸ್ಕರವಾಗಿ ಕನ್ನಡದಲ್ಲಿ ರಚಿಸಿದರು. ಜೊತೆಗೆ ಸರಳ ಕನ್ನಡದಲ್ಲೇ ಹಾಡು, ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿ ಅವರು ಮಾಡಿದ ಸೇವೆ ಸಹಾ ಸ್ಮರಣೀಯವಾದುದು. ಇವರ ಶಿಷ್ಯರೇ ವಿಜಯನಗರದ ಸಾಮ್ರಾಜ್ಯದ ಅಧಿಪತಿಯಾಗಿದ್ದ ಕೃಷ್ಣದೇವರಾಯನ ರಾಜಗುರುಗಳಾಗಿದ್ದ ವ್ಯಾಸರಾಜರು.
ಹರಿದಾಸ ಸಾಹಿತ್ಯಕ್ಕೆ ಮೂಲ ಶ್ರೀ ಮಧ್ವಾಚಾರ್ಯರ ದ್ವಾದಶಸ್ತೋತ್ರ. ಇದಾದ ಅನಂತರ ಶ್ರೀ ನರಹರಿತೀರ್ಥರು ಕನ್ನಡ ಭಾಷೆಯಲ್ಲಿ ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ಆದರೆ ಪೂರ್ಣಪ್ರಮಾಣದಲ್ಲಿ ಹರಿದಾಸ ಸಾಹಿತ್ಯ ರೂಪುಗೊಂಡದ್ದು ಶ್ರೀಪಾದರಾಜರಿಂದ. ಸಂಸ್ಕೃತದಲ್ಲಿ ಅವರು ರಚಿಸಿದ ‘ವಾಗ್ವಜ್ರ’ ಗ್ರಂಥವೊಂದರ ಉಲ್ಲೇಖದ ಹೊರತು ಮಿಕ್ಕೆಲ್ಲ ಅವರ ಕೃತಿಗಳು ಕನ್ನಡದಲ್ಲೇ ಇವೆ.
ಪರಮಾತ್ಮನನ್ನು ಅತಿಶಯ ಪ್ರೀತಿಯಿಂದ ಕರೆಯುವ ‘ಬಾರೋ ಮನೆಗೆ ಗೋವಿಂದ’, ಮನುಷ್ಯರಿಗೆ ಏನು ಭೂಷಣ ? ಎಂದು ವರ್ಣಿಸುವ ‘ಭೂಷಣಕೆ ಭೂಷಣ’, ‘ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ’ ಮುಂತಾದ ಅವರ ಕೃತಿಗಳು ಮನಸೆಳೆಯುತ್ತವೆ.
ಶ್ರೀಪಾದರಾಜರು ಕೃಷ್ಣನ ಮೇಲೆ ಅನೇಕ ಕೃತಿಗಳನ್ನು ರಚಿಸುತ್ತಾ, ಭಾಗವತದ ದಶಮ ಸ್ಕಂದವನ್ನೇ ನಮ್ಮ ಮುಂದಿಟ್ಟಿದ್ದಾರೆ. ಕೃಷ್ಣ ಆಟವಾಡಿ ಮನೆಗೆ ಬಂದಾಗ ‘ಎಲ್ಲಾಡಿ ಓಡಿ ಬಂದೆ ರಂಗಯ್ಯ’, ಯಶೋದೆ ಕೃಷ್ಣನನ್ನು ಹುಡುಕಿ ಹುಡುಕಿ ಬಳಲಿ, ಕೊನೆಗೆ ಅವನನ್ನು ಕಂಡಾಗ
‘ಅಷ್ಟ ದಿಕ್ಕಿನಲ್ಲರಸಿ ಕಾಣದೇ,
ಬಲು ಕಷ್ಟಪಟ್ಟೆನೋ ನಿನ್ನ ನೋಡದೇ’
ಎಂದು ಪರಿತಪಿಸುವ ಪರಿಯನ್ನು ವರ್ಣಿಸಿದ್ದಾರೆ. ಈ ಕೃತಿಯಲ್ಲಿ ಪರಮಾತ್ಮನ ಸರ್ವೋತ್ತಮತ್ವವನ್ನೂ ಸಾರಿದ್ದಾರೆ. ಗೋಪಿಕಾ ಸ್ತ್ರೀಯರು ಕೃಷ್ಣನನ್ನು ‘ಪೋಪು ಹೋಗೋಣ ಬಾರೋ ರಂಗ’ ಎಂದು ಕರೆಯುವ ಶೈಲಿಯೂ ಬಲು ಸುಂದರ. ಶ್ರೀಪಾದರಾಜರ ಕೃತಿ ‘ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು’ ನೈಜ ವಿರಕ್ತಿ ಸ್ಫುರಿಸುವಂತದ್ದು.
ಶ್ರೀಪಾದರಾಜರು ಹಾಡುಗಳಲ್ಲದೇ ಭಾಗವತದ ‘ಭ್ರಮರಗೀತೆ’ಯನ್ನು ಸರಳಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ನರಸಿಂಹ ದಂಡಕ, ಹಳೆಗನ್ನಡದಲ್ಲಿದ್ದು ಪಂಪ-ರನ್ನರ ಕೃತಿಗಳನ್ನು ನೆನಪಿಸುತ್ತದೆ. ಇವರು ತಮ್ಮ ‘ಇಟ್ಟಾಗೆ ಇರುವೆನೋ ಹರಿಯೇ ಎನ್ನ ದೊರೆಯೇ’ ಕೃತಿಯಲ್ಲಿ ಜೀವನ ಅಸ್ವಾತಂತ್ರ್ಯವನ್ನು , ಪರಮಾತ್ಮನ ಸ್ವಾತಂತ್ರ್ಯವನ್ನು ಬಹಳ ಸುಂದರವಾಗಿ, ಅನುಭವದ ನುಡಿಗಳಿಂದ ಪ್ರತಿಪಾದಿಸಿದ್ದಾರೆ. ಶ್ರೀಪಾದರಾಜರು ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿ, ಭಕ್ತಿಯ ಮಹತ್ವವನ್ನು ಸಾರಿ, ಸಜೀವವಾಗಿ ವೃಂದಾವನವನ್ನು ಶಾ.ಶ. 1416 ಜೇಷ್ಠ ಶುದ್ಧ ಚತುರ್ದಶಿ ದಿನದಂದು ಪ್ರವೇಶಿಸಿದರು.
Sripadaraja Theertha
ಕಾಮೆಂಟ್ಗಳು