ಗೋವಿಂದ ಜಾಲಿಹಾಳ
ಗೋವಿಂದರಾವ್ ಜಾಲಿಹಾಳ
ಗೋವಿಂದರಾವ್ ಜಾಲಿಹಾಳ ಅವರು ತತ್ವಶಾಸ್ತ್ರಜ್ಞರಾಗಿ, ಸಾಹಿತಿಗಳಾಗಿ ಮತ್ತು ಸಂಗೀತ ಶಾಸ್ತ್ರಜ್ಞರಾಗಿ ಹೆಸರಾದವರು. ಅವರು ಸಾಹಿತ್ಯಲೋಕದಲ್ಲಿ ಜಾ. ಗೋ. ಎಂದು ಖ್ಯಾತರು.
ಗೋವಿಂದರಾವ್ ಜಾಲಿಹಾಳ ಅವರು 1936ರ ಜೂನ್ 22ರಂದು ಗದಗದಲ್ಲಿ ಜನಿಸಿದರು. ತಂದೆ ಅನಂತರಾವ್ ಜಾಲಿಹಾಳ ವಕೀಲರಾಗಿದ್ದರು. ತಾಯಿ ರಾಧಾಭಾಯಿ. ಗೋವಿಂದರಾಯರು ಶಾಲಾ ವಿದ್ಯಾಭ್ಯಾಸವನ್ನು ಗದಗದಲ್ಲಿ ಪೂರೈಸಿ ಮುಂಬೈಗೆ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ “ದ ಎಥಿಕಲ್ ಕಾಂಟ್ರಿಬ್ಯೂಷನ್ಸ್ ಆಫ್ ದ ಲೇಟ್ ಪ್ರೊಫೆಸರ್ ಹಿರಿಯಣ್ಣ" ಎಂಬ
ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಗಳಿಸಿದರು.
ಗೋವಿಂದರಾವ್ ಜಾಲಿಹಾಳ ಅವರು ಮುಂಬೈನ ಜೆ.ಜೆ. ಸೋಮಾಯ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್ ಅಲ್ಲಿ ಕೆಲಕಾಲ ಅಧ್ಯಾಪನ ನಡೆಸಿ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ವಿಜಯಾ ಕಾಲೇಜು, ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜು, ಮೈಸೂರಿನ ಮಹಾರಾಜಾ ಕಾಲೇಜು, ಮದರಾಸಿನ ವೈಷ್ಣವ ಕಾಲೇಜು ಮುಂತಾದೆಡೆ ಬೋಧಿಸಿ, ಬೆಂಗಳೂರು ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದಲ್ಲಿ ರೀಡರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 1996ರಲ್ಲಿ ನಿವೃತ್ತರಾದರು.
ಗೋವಿಂದರಾವ್ ಜಾಲಿಹಾಳ ಅವರಿಗೆ ಬಾಲ್ಯದಿಂದಲೂ ತತ್ತ್ವಶಾಸ್ತ್ರ, ಸಂಗೀತ ಮತ್ತು ಸಾಹಿತ್ಯಗಳತ್ತ ಒಲವು. ಧಾರವಾಡದಲ್ಲಿ ನಡೆದ ಮನ್ವಂತರ ಸಾಹಿತ್ಯಗೋಷ್ಠಿಯಲ್ಲಿ ‘ಹಳದಿಮೀನು’ ಕಾದಂಬರಿ ಕುರಿತು ವಿಮರ್ಶೆ ಮಂಡಿಸಿದರು. ಅಡಿಗರ ‘ಸಾಕ್ಷಿ’ ಪತ್ರಿಕೆಯಲ್ಲಿ ಇವರ ವಿಮರ್ಶಾ ಲೇಖನಗಳು ಪ್ರಕಟಗೊಂಡವು.
ಗೋವಿಂದರಾವ್ ಜಾಲಿಹಾಳ ಅವರ ಕಾವ್ಯಗಳಲ್ಲಿ ಗದ್ಯದಿಂದ ಪದ್ಯಕ್ಕೆ, ವಿಜಯಪಥ, ಅಂಚೆದಾರಿಯಲ್ಲಿ ಮುಂತಾದವು ಸೇರಿವೆ. ವಿಮರ್ಶೆಗಳಲ್ಲಿ ವಂಶವೃಕ್ಷ ಮತ್ತು ಸಂಸ್ಕಾರ ಒಂದು ತುಲನಾತ್ಮಕ ವಿಮರ್ಶೆ, ಕಾವ್ಯಮಂಥನ ಮುಂತಾದುವು ಇವೆ. ಕರ್ನಾಟಕ ಸಂಗೀತಗಾರರಾದ ಪುರಂದರದಾಸರು, ವಾಗ್ಗೇಯಕಾರ ವಾಸುದೇವಾಚಾರ್, ಬಿಡಾರಂ ಕೃಷ್ಣಪ್ಪ, ಎಂ.ಎಸ್. ಸುಬ್ಬುಲಕ್ಷ್ಮಿ; ಹಿಂದೂಸ್ಥಾನಿ ಸಂಗೀತಗಾರರಾದ ಖಾನ್ ಸಾಹೇಬ್ ಅಬ್ದುಲ್ ಕರೀಂಖಾನ್, ಭೀಮಸೇನ ಜೋಶಿ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮುಂತಾದವರ ಬಗ್ಗೆ ಬರೆದ ಸಂಗೀತದಲ್ಲಿನ ಕಾವ್ಯ ವಿಶ್ಲೇಷಣೆಯ ‘ಸಂಗೀತ ಕವಿತಾಕುಸುಮಮಾಲ’ ಲೇಖನಮಾಲೆ, ‘ಗೋವಾ ದರ್ಪಣ’ ಎಂಬ ಪತ್ರಿಕೆಯಲ್ಲಿ ಒಂದುವರೆ ವರ್ಷ ಪ್ರಕಟಗೊಂಡಿತು. ಇದೊಂದು ಸುದೀರ್ಘ ಸಂಗೀತ - ಕಾವ್ಯ ವಿಶ್ಲೇಷಣೆ.
ಗೋವಿಂದರಾವ್ ಜಾಲಿಹಾಳ ಅವರು ಪಾಶ್ಚಾತ್ಯ ತತ್ತ್ವಶಾಸ್ತ್ರ ಬೋಧಕರಾಗಿ ಫ್ಲಾರಿಡಾದ ಪೆನ್ಸ್ಕೋಲಾ ಕಾಲೇಜಿನಿಂದ ಪ್ರಶಸ್ತಿ ಪಡೆದ ಪ್ರಮುಖರಲ್ಲೊಬ್ಬರು. 'ದ ಟ್ರೆಡಿಷನಲ್ ಹಿಂದೂ ಸೋಷಿಯಲ್ ಫಿಲಸಸಫಿ ಅಂಡ್ ಇಟ್ಸ್ ರೆಲೆವೆನ್ಸ್ ಟು ಹಿಂದೂ ಸೊಸೈಟಿ' ಎಂಬ ವಿಷಯದಲ್ಲಿ ಯೂನಿವರ್ಸಿಟಿ ಗ್ರ್ಯಾಂಟ್ ಕಮೀಷನ್ನಿನಿಂದ ಸಂಶೋಧನೆ ಕೈಗೊಂಡರು.
On the birthday of Prof. Govindarao Jalihal
ಕಾಮೆಂಟ್ಗಳು