ಆರ್.ಕೆ.ಸೂರ್ಯನಾರಾಯಣ
ಆರ್. ಕೆ. ಸೂರ್ಯನಾರಾಯಣ
ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವೈಣಿಕ ವಿದ್ವಾನ್ ಅರ್ ಕೆ ಸೂರ್ಯನಾರಾಯಣ ಅವರ ಹೆಸರು ಪ್ರಸಿದ್ಧವಾದದ್ದು.
ಸೂರ್ಯನಾರಾಯಣ ಅವರು ಸಂಗೀತಕ್ಕೆ ಹೆಸರಾದ ರುದ್ರಪಟ್ನಂ ಮನೆತನದಲ್ಲಿ ಸುಪ್ರಸಿದ್ಧ ವೈಣಿಕ, ಆಸ್ಥಾನ ವಿದ್ವಾನ್ ಆರ್. ಎಸ್. ಕೇಶವವಮೂರ್ತಿಯವರ ಸುಪುತ್ರರಾಗಿ 1937ರ ಜೂನ್ 14 ರಂದು ಜನಿಸಿದರು. ತಂದೆಯವರ ಶಿಕ್ಷಣದಲ್ಲಿ ಉತ್ತಮ ವೈಣಿಕರಾಗಿರೂಪುಗೊಂಡ ಸೂರ್ಯನಾರಾಯಣ ಅವರು, 1944ರಲ್ಲಿ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಸನ್ನಿಧಾನದಲ್ಲಿ ಮೊಟ್ಟಮೊದಲ ಕಛೇರಿ ನಡೆಸಿದರು. ಏಳು ವರ್ಷ ವಯಸ್ಸಿನಲ್ಲಿಯೇ ಮೂಡಿದ ಈ ಬಾಲಕನ ಅಸಾಧಾರಣ ಪ್ರತಿಭೆ ಮುಂದೆ ಕಾಲ ಸರಿದಂತೆ ಅರಳುತ್ತ ವೃದ್ಧಿಯಾಗುತ್ತ ನಡೆಯಿತು.
ನೂತನ ಪ್ರಯೋಗಾತ್ಮಕ ದೃಷ್ಟಿ ಹೊಂದಿದ್ದ ಸೂರ್ಯನಾರಾಯಣರವರು 24 ತಂತಿಗಳುಳ್ಳ ವೀಣೆಯನ್ನು ಆವಿಷ್ಕರಿಸಿ, ದೇಶ-ವಿದೇಶಗಳಲ್ಲಿ ಅದರ ನಾದದ ತುಂಬುತನವನ್ನು ಪಸರಿಸಿದ್ದರು. ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ, ಆಕಾಶವಾಣಿ-ದೂರದರ್ಶನ ಕಾರ್ಯಕ್ರಮಗಳಲ್ಲಿ, ದೇಶದ ಎಲ್ಲಾ ಪ್ರತಿಷ್ಠಿತ ಸಂಘ-ಸಭೆ-ಸಂಸ್ಥೆಗಳಲ್ಲಿ ಇವರ ವೀಣಾವಾದನ ಝೇಂಕರಿಸಿತು. ವಿದೇಶಗಳಿಗೆ ಹಲವಾರು ಬಾರಿ ಪ್ರವಾಸ ಮಾಡಿದ್ದ ಶ್ರೀಯುತರು ರಾಜ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೇಳ ರಾಗಮಾಲಿಕೆಯೂ ಸೇರಿದಂತೆ ಹಲವಾರು ಕೃತಿ ವರ್ಣ ಮುಂತಾದ ರಚನೆಗಳನ್ನು ಸೂರ್ಯನಾರಾಯಣರವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ್ದಾರೆ. ಪ್ರಸಿದ್ಧ ಚಲನಚಿತ್ರಗಳಾದ ‘ಮಲಯಮಾರುತ’, ‘ರಾಮಾನುಜಾಚಾರ್ಯ’ ಮುಂತಾದ ಹಲವಾರು ಚಿತ್ರಗಳಲ್ಲಿ ಆರ್ ಕೆ ಸೂರ್ಯನಾರಾಯಣರು ಸಂಗೀತಗಾರರಾಗಿ ಪಾತ್ರ ನಿರ್ವಹಿಸಿದ್ದರು.
ಸೂರ್ಯನಾರಾಯಣ ಅವರಿಗೆ ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ' ಮುಂತಾದ ಅನೇಕ ಗೌರವಗಳು ಸಂದಿದ್ದವು. ನಾದಜ್ಯೋತಿ, ಕಲಾಪೂರ್ಣ, ವೀಣಾವಾದನ ಗಂಧರ್ವ, ವೀಣಾ ಚಕ್ರವರ್ತಿ ಮುಂತಾದ ಹಲವಾರು ಬಿರುದುಗಳು ಆರ್ ಕೆ ಸೂರ್ಯನಾರಾಯಣ ಅವರನ್ನು ಅಲಂಕರಿಸಿದ್ದವು.
ಸೂರ್ಯನಾರಾಯಣ ಅವರು ಕಿರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ರಾಜ್ಯ ಸಂಗೀತ-ನೃತ್ಯ-ತಾಳವಾದ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿಜೇತರಿಗೆ ಪ್ರಶಸ್ತಿ ಪತ್ರವಿತ್ತು ಸನ್ಮಾನಿಸುತ್ತಿದ್ದರು.
ಅಪಾರ ಶಿಷ್ಯ ವೃಂದವನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ ಸೂರ್ಯನಾರಾಯಣ ಅವರು 2003ರ ಡಿಸೆಂಬರ್ 24ರಂದು ಈ ಲೋಕವನ್ನಗಲಿದರು.
On the birth anniversary of Veena Vidwan R. K. Suryanarayana
ಕಾಮೆಂಟ್ಗಳು