ಕೆ. ಎನ್. ಭಗವಾನ್
ಕೆ. ಎನ್. ಭಗವಾನ್
ವೃತ್ತಿಯಲ್ಲಿ ವಿಮಾನ ತಂತ್ರಜ್ಞಾನ ಕ್ಷೇತ್ರದ ಇಂಜಿನಿಯರ್ ಅದರೂ ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲೆ, ಚಲನಚಿತ್ರ ಹೀಗೆ ಹಲವು ವಿಚಾರಗಳಲ್ಲಿ ಅತ್ಯಂತ ನಿಖರತೆಯ ಅರಿವುಳ್ಳವರು, ನಮ್ಮ ಹಿರಿಯ ಬರಹಗಾರರಾದ ಕೆ. ಎನ್. ಭಗವಾನ್ ಅವರು.
ಕೆ. ಎನ್. ಭಗವಾನ್ ಅವರು 1943ರ ಜೂನ್ 9ರಂದು ಕೊರಟಗೆರೆ ತಾಲೂಕಿನ ಕ್ಯಾಶಾವರ ಗ್ರಾಮದಲ್ಲಿ ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟೂರಿನಲ್ಲೇ ನಡೆಯಿತು. ಅಕ್ಕಿರಾಂಪುರ ಸರ್ಕಾರಿ ಶಾಲೆಯಲ್ಲಿ ಮಾಧ್ಯಮಿಕ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ವ್ಯಾಸಂಗ ನಡೆಸಿದ ನಂತರ ತುಮಕೂರು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ಮುಂದೆ ಭಗವಾನ್ ಅವರು ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಿಯರಾದ ಭಗವಾನ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿಯನ್ನೂ ಪಡೆದಿದ್ದಾರೆ.
ಕೆ. ಎನ್. ಭಗವಾನ್ ಅವರು ಮೊದಲಿಗೆ ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಸ್ಥರಾದರು. ನಂತರ ಎಚ್ ಎ ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ಸೇವೆ ಸಲ್ಲಿಸಿ ಸೀನಿಯರ್ ಮ್ಯಾನೇಜರ್ ಆಗಿ ನಿವೃತ್ತರಾದರು.
ಕೆ. ಎನ್. ಭಗವಾನ್ ಅವರು ಭದ್ರಾವತಿಯಲ್ಲಿ ಇದ್ದ ಸಂದರ್ಭದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರಲ್ಲದೆ ನಾಟಕ ಸ್ಪರ್ಧೆಗಳಲ್ಲಿ ಬಹುಮಾನವನ್ನೂ ಪಡೆದರು. ಭಗವಾನ್ ಅವರು 1966 ವರ್ಷದಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಳಿಸಿದರು. ಕರ್ಮವೀರ ಮತ್ತು ವಿಕ್ರಮ ಪತ್ರಿಕೆಗಳು ಏರ್ಪಡಿಸಿದ್ದ ಕಥಾಸ್ಪರ್ಧೆಗಳಲ್ಲೂ ಅವರಿಗೆ ಬಹುಮಾನಗಳು ಬಂದವು. ಭಗವಾನ್ ಅವರ ನೂರಾರು ಲೇಖನಗಳು ಪತ್ರಿಕೆಗಳಲ್ಲಿ ನಿರಂತರ ಮೂಡಿಬಂದಿವೆ.
2001 ವರ್ಷದಿಂದ ಮೊದಲುಗೊಂಡಂತೆ ಭಗವಾನ್ ಅವರು ಈವರೆಗೆ ಸಣ್ಣಕತೆ, ಪ್ರಬಂಧ, ಕವನ, ನಾಟಕ, ಪ್ರವಾಸ ಕಥನ, ಉದ್ಯಮ ತಂತ್ರಜ್ಞಾನ, ವ್ಯಕ್ತಿಚಿತ್ರ ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಭಗವಾನ್ ಅವರ 'ಕಾರ್ಖಾನೆ ಚಿತ್ರಗಳು' ಕೃತಿಗೆ ಗೊರೂರು ಪ್ರತಿಷ್ಠಾನ ಪ್ರಶಸ್ತಿ, 'ಉದ್ಯಮ ಕರ್ನಾಟಕ' ಕೃತಿಗೆ ರಾಮ್ ಜಾದವ್ ಪ್ರಶಸ್ತಿ, 'ಯದು ವಿಜಯ' ನಾಟಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಮತ್ತು ಒಟ್ಟಾರೆ ಸಾಹಿತ್ಯ ಸಾಧನೆಗಾಗಿ ‘ಅರವಿಂದ ಜೋಷಿ' ಪ್ರಶಸ್ತಿ ಸಂದಿದೆ.
ಸದಾ ಕನ್ನಡ ಪರ ಕಾಳಜಿಗಳ ಕಾರ್ಯದಲ್ಲಿ ಹಸನ್ಮುಖಿಯಾಗಿ ಸಮಾನ ಮನಸ್ಕರೊಡನೆ ತೊಡಗಿಕೊಂಡಿರುವ ಕೆ. ಎನ್. ಭಗವಾನ್ ಅವರು ಇತರ ಭಾಷಿಗರಿಗೆ ಕನ್ನಡ ಕಲಿಸುವ ಕಾಯಕವನ್ನೂ ಮಾಡುತ್ತ ಬಂದಿದ್ದಾರೆ. ಹಲವಾರು ಆಂಗ್ಲ ಭಾಷಾ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅವರ ವಿಭಿನ್ನ ಸಕ್ರಿಯ ಆಸಕ್ತಿಗಳಲ್ಲಿ ಛಾಯಾಗ್ರಹಣ ಮತ್ತು ಪ್ರವಾಸಗಳೂ ಸೇರಿವೆ.
ಆತ್ಮೀಯರೂ ಜ್ಞಾನಿಗಳೂ ಆದ ಕೆ. ಎನ್. ಭಗವಾನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Bhagavan Narayan Sir
ಕಾಮೆಂಟ್ಗಳು