ಜಿ. ಮಾದೇಗೌಡ
ಜಿ. ಮಾದೇಗೌಡರು ಇನ್ನಿಲ್ಲ
ನಾಡಿನ ಹಿರಿಯ ಹೋರಾಟಗಾರರಾಗಿದ್ದ ಜಿ. ಮಾದೇಗೌಡರು ಇಂದು ನಿಧನರಾಗಿದ್ದಾರೆ.
ಕನ್ನಡದ ನೆಲ, ಜಲ, ರೈತ ಹಿತರಕ್ಷಣೆಯ ವಿಚಾರ ಬಂದಾಗಲೆಲ್ಲಾ ಜನಮಾನಸದಲ್ಲಿ ಮೂಡಿಬರುವ ನಾಯಕರುಗಳಲ್ಲಿ ಜಿ. ಮಾದೇಗೌಡರು ಪ್ರಮುಖರಾಗಿದ್ದವರು. ಜಿ. ಮಾದೇಗೌಡರು 'ಮಂಡ್ಯದ ಗಾಂಧೀ’, ‘ನೇರ ನಿಷ್ಠುರ ಪಾರದರ್ಶಕ ಹೋರಾಟಗಾರ’ ಮುಂತಾದ ಬಿರುದುಗಳಿಗೆ ಪಾತ್ರರಾಗಿದ್ದವರು.
ಜಿ. ಮಾದೇಗೌಡರು 1928ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿಯಲ್ಲಿ ಜನಿಸಿದರು. ಹತ್ತರ ಎಳವೆಯಲ್ಲೇ ಶಿವಪುರದ ಸತ್ಯಾಗ್ರಹ ಸಂದರ್ಭದಲ್ಲಿ ಭಾಗವಹಿಸಿದ ಸತ್ಯಾಗ್ರಹಿಗಳಿಗೆ ನೀರು ಕೊಡುವ ಕಾಯಕದಲ್ಲಿ ತೊಡಗಿ, ಮುಂದೆ ಸ್ವಯಂ ತಾವೇ ಸತ್ಯಾಗ್ರಹಿಯಾಗಿ ಬೆಳೆದರು.
ಜಿ. ಮಾದೇಗೌಡರು ಮಹಾತ್ಮ ಗಾಂಧೀಯವರು 1942ರಲ್ಲಿ ಕರೆಕೊಟ್ಟ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದ ಸಂದರ್ಭದಲ್ಲಿ, ಚಳವಳಿಯ ಪ್ರಚಾರಕ್ಕಾಗಿ ಶಾಲೆಯನ್ನೇ ಬಿಟ್ಟು ಹೊರಬಂದರು. ಮುಂದೆ ತಮ್ಮ ನಡೆ, ನುಡಿ, ಆಚಾರ, ವಿಚಾರಗಳಲ್ಲೆಲ್ಲಾ ಗಾಂಧೀ ಮಾರ್ಗವನ್ನು ಅವಲಂಭಿಸಿದ ಗೌಡರು ಬಿ.ಎ. ಪದವಿ ಮತ್ತು ಕಾನೂನು ಪದವಿಗಳನ್ನು ಗಳಿಸಿದರು.
ನಿರಂತರ ಜನಾನುರಾಗಿಗಳಾಗಿ ಜನಪರದನಿಯಾಗಿದ್ದ ಮಾದೇಗೌಡರು 1959ರಲ್ಲಿ ತಾಲ್ಲೂಕು ಮಂಡಳಿ ಚುನಾವಣೆಗಳಲ್ಲಿ ಜಯಿಸಿದ್ದು ಮೊದಲ್ಗೊಂಡಂತೆ, ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಹಿರಿಯ ವಯಸ್ಸಿನಲ್ಲಿಯೂ ಕಾವೇರಿ ನದಿ ನೀರಿನ ವಿಷಯ ಮೂಡಿದಾಗಲೆಲ್ಲ ನಿರಂತರ ಹೋರಾಟ ನಡೆಸಿದವರು. ಅವರು ರೈತಹಿತರಕ್ಷಣಾ ಸಮಿತಿ ಅಧ್ಯಕ್ಷರೂ ಆಗಿದ್ದರು.
ಜಿ. ಮಾದೇಗೌಡರ ಹೆಸರಿನಲ್ಲಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳೂ ಕಾರ್ಯನಿರ್ವಹಿಸುತ್ತಿವೆ.
ಜಿ. ಮಾದೇಗೌಡರು 2021ರ ಜುಲೈ 17ರಂದು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾಗಿರುವುದು ಕಳೆದ ಶತಮಾನದ ಹಿರಿಯರೊಬ್ಬರು ಕಣ್ಮರೆಯಾದಂತಾಗಿದೆ.
Respects to departed soul G. Madegowda
ಕಾಮೆಂಟ್ಗಳು