ಸಿದ್ಧರಾಮಯ್ಯ
ಸಿದ್ಧರಾಮಯ್ಯ
ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ರಾಜಕೀಯದಲ್ಲಿ ತಮಗಿರುವ ಪರ ವಿರೋಧಗಳ ಆಚೆ, ಎಲ್ಲ ಸೋಲು ಗೆಲುವುಗಳಾಚೆಗೆ ಹಾಗೂ ನಾವು ಕಾಣಬಹುದಾದ ಸರಿ ತಪ್ಪುಗಳಾಚೆಗೆ ಸದಾ ಸುದ್ದಿಯಲ್ಲಿದ್ದಾರೆ.
ಸಿದ್ದರಾಮಯ್ಯನವರು ಹುಟ್ಟಿದ ದಿನ 1947ರ ಆಗಸ್ಟ್ 12 ಎಂದು ಹೆಚ್ಚು ಕಡೆ ಮೂಡಿದೆ. ಶಾಲೆಗೆ 1947ರ ಆಗಸ್ಟ್ 3 ಎಂದು ಹೇಳಿದರೆ 12 ಎಂದು ದಾಖಲೆಯಲ್ಲಿ ಮೂಡಿತಂತೆ. ಆದರೆ ಅವರು ಜನಿಸಿದ ದಿನ ಯಾರಿಗೂ ನೆನಪಿರಲಿಲ್ಲವಂತೆ. ಹೀಗಾಗಿ ಸಿದ್ಧರಾಮಯ್ಯನವರಂತೂ ಎಂದೂ ಹುಟ್ಟುಹಬ್ಬ ಆಚರಿಸಿದವರಲ್ಲ. ಅವರು ಜನಿಸಿದ ಊರು ಮೈಸೂರು ಬಳಿಯ ಸಿದ್ದರಾಮನ ಹುಂಡಿ. ತಂದೆ ಸಿದ್ದರಾಮೇಗೌಡ. ತಾಯಿ ಬೋರಮ್ಮ.
ಸಿದ್ದರಾಮಯ್ಯ ಶಾಲೆಗೆ ಸೇರಬೇಕಾದ ವಯಸ್ಸಿನಲ್ಲಿ ಆಟವಾಡುತ್ತಾ ಕುರಿಮೇಯಿಸುತ್ತಾ ಕಾಲ ಕಳೆದರಂತೆ. ಶಾಲೆಯ ಮುಖ ನೋಡದ ಬಾಲಕ ಸಿದ್ದರಾಮಯ್ಯನಿಗೆ ಓದುವ ಇಷ್ಟವಿತ್ತು. ಹಾಗಾಗಿ ಶಾಲೆಗೆ ಹೋಗದಿದ್ದರೂ ಮರಳಿನ ಮೇಲೆ ಗೀಚುವ ಹವ್ಯಾಸ ಮೂಡಿತು. ಬಾಲಕನ ಈ ಆಸಕ್ತಿಯನ್ನು ನೋಡಿದ ನಂಜೇಗೌಡ ಎಂಬುವರು 1957ರಲ್ಲಿ ಇವರನ್ನು ನೇರ ಐದನೇ ಕ್ಲಾಸಿಗೆ ಸೇರಿಸಿದರು.
ಸಿದ್ದರಾಮಯ್ಯ ಓದಿನಲ್ಲಿ ಮುಂದಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲಿಗೆ ಮೈಸೂರಿಗೆ ಬಂದ ಅವರು ವಿದ್ಯಾವರ್ಧಕಕ್ಕೆ ಸೇರಿದರು. 1964ರಲ್ಲಿ ಎಸ್. ಎಸ್. ಎಲ್. ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಅವರು ಪಿಯುಸಿ ಮತ್ತು ಬಿ.ಎಸ್ಸಿ ಪದವಿಯನ್ನು ಯುವರಾಜ ಕಾಲೇಜಿನಲ್ಲಿ ಮುಗಿಸಿ ಕಾನೂನು ಪದವಿಯನ್ನು ವಿದ್ಯಾವರ್ಧಕ ಕಾಲೇಜಿನಲ್ಲಿ ಪಡೆದರು. ಅಲ್ಲದೆ ಅದೇ ಕಾಲೇಜಿನಲ್ಲಿ ಕೆಲಕಾಲ ಪಾಠವನ್ನೂ ಮಾಡಿದರು.
ಸಿದ್ಧರಾಮಯ್ಯನವರಿಗೆ ರೈತ ನಾಯಕ ಪ್ರೊ. ನಂಜುಂಡಸ್ವಾಮಿಯವರ ಸಂಪರ್ಕ ದೊರೆಯಿತು. ಅಲ್ಲದೆ ಜಯಪ್ರಕಾಶ್ ನಾರಾಯಣ್, ಲೋಹಿಯಾ, ಪೆರಿಯಾರ್ ರಾಮಸ್ವಾಮಿ ಮುಂತಾದವರ ಪ್ರಭಾವ ಆವರಿಸಿತು. ಹೀಗಾಗಿ ವಿದ್ಯಾರ್ಥಿ ಚಳುವಳಿ, ಜನಪರ ಹೋರಾಟಗಳಲ್ಲಿ ಭಾಗವಹಿಸತೊಡಗಿದರು. 1974ರಲ್ಲಿ ಜೆಪಿ ಅವರ ಚಳವಳಿಯಲ್ಲಿ ಭಾಗಿಯಾಗಿ, 1975ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲುವಾಸ ಅನುಭವಿಸಿದರು.
ಮುಂದೆ ರಾಜಕೀಯಕ್ಕೆ ಬಂದ ಸಿದ್ಧರಾಮಯ್ಯ ಮೊದಲಿಗೆ 1978ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾದರು. 1980ರಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಎಂ. ರಾಜಶೇಖರಮೂರ್ತಿ ಹಾಗೂ ಗುರುಪಾದಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋತರು. 1983ರ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ರಾಮಕೃಷ್ಣ ಹೆಗಡೆಯವರು ಸಿದ್ಧರಾಮಯ್ಯನವರನ್ನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಮುಂದೆ ಹೆಗಡೆಯವರ ಸಚಿವ ಸಂಪುಟದಲ್ಲಿ ರೇಷ್ಮೆಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯ, ಹೆಗಡೆಯವರ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ರಾಜಶೇಖರಮೂರ್ತಿ ಅವರ ವಿರುದ್ಧ ಸೋತರು.
ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಿದ್ದರಾಮಯ್ಯ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷದ ಸಂಘಟನೆ ಕಾರ್ಯಮಾಡಿದರು. 1994ರಲ್ಲಿ ಪಕ್ಷ ಆಡಳಿತಕ್ಕೆ ಬಂದಾಗ ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು. ಆ ನಂತರ 1996ರಲ್ಲಿ ದೇವೇಗೌಡರು ಪ್ರಧಾನಮಂತ್ರಿಗಳಾದ ಹಿನ್ನೆಲೆಯಲ್ಲಿ ಜೆ. ಹೆಚ್. ಪಟೇಲ್ ಮಂತ್ರಿ ಮಂಡಲದಲ್ಲೂ ಸಚಿವರಾಗಿ ಮುಂದುವರೆದರು. 1999ರಲ್ಲಿ ಕಾಂಗ್ರೆಸ್ ಅಲೆ ಬೀಸಿದಾಗ ಮತ್ತೆ ಚುನಾವಣೆಯಲ್ಲಿ ಎ. ಎಸ್. ಗುರುಪಾದಸ್ವಾಮಿ ವಿರುದ್ಧ ಸೋತರು. 2004ರಲ್ಲಿ ಮತ್ತೆ ಗೆಲುವು ಸಾಧಿಸಿದ ಅವರು ಜೆಡಿಎಸ್ ಕಾಂಗ್ರೆಸ್-ಸಮ್ಮಿಶ್ರ ಸರ್ಕಾರದಲ್ಲಿ ಧರಂಸಿಂಗ್ ಅವರು ಮುಖ್ಯ ಮಂತ್ರಿಗಳಾದಾಗ ಉಪಮುಖ್ಯಮಂತ್ರಿಯಾದರು.
ಜೆಡಿಎಸ್ನಲ್ಲಿನ ಹಲವು ತೊಡಕುಗಳಿಂದ ಹೊರಬಂದ ಸಿದ್ಧರಾಮಯ್ಯನವರು 2005ರಲ್ಲಿ ಅಹಿಂದ ಸಂಘಟನೆಯತ್ತ ಮುಖಮಾಡಿದರು. ಜೊತೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರಿದರು. 2006ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಬಲ ಪೈಪೋಟಿಯಲ್ಲಿ ಗೆದ್ದಿದ್ದಲ್ಲದೆ, 2008ರಲ್ಲಿ ವರುಣಾ ಕ್ಷೇತ್ರದಲ್ಲಿ ಗೆದ್ದು ವಿರೋಧಪಕ್ಷದ ನಾಯಕರಾದರು.
2013ರ ಚುನಾವಣೆಯಲ್ಲಿ ಮತ್ತೆ ವರುಣಾದಿಂದ ಆಯ್ಕೆಯಾಗಿ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಐದು ವರ್ಷಗಳ ಕಾಲ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. 2018ರ ವಿಧಾನ ಸಭಾ ಚುನಾವಣೆಯಲ್ಲಿ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾದಾಮಿ ಕ್ಷೇತ್ರದಲ್ಲಿ ಗೆದ್ದರು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದೆ, ಬಿಜೆಪಿ ಬದಿಗಿಡುವ ಸಲುವಾಗಿ ಒಲ್ಲದ ಮನಸ್ಸಿನಿಂದ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ಸು ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿತ್ತು. ಅದು ಹಲವು ಆಟಗಳಲ್ಲಿ ಕೊನೆಗೊಂಡು ಮತ್ತೆ ಬಿಜೆಪಿ ಅಧಿಕಾರ ಕೆಲಹಿಡಿದ ನಂತರ 2023 ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಕಾಂಗ್ರೆಸ್ ಗೆಲ್ಲಿಸಿದರು. ಮುಖ್ಯಮಂತ್ರಿ ಸ್ಥಾನ ಮತ್ತೊಮ್ಮೆ ಸಿದ್ಧರಾಮಯ್ಯನವರಿಗೆ ಒಲಿದಿದೆ. ತೀವ್ರ ಪೈಪೋಟಿಯಿದ್ದಾಗಿಯೂ ಪುನಃ ಆ ಸ್ಥಾನ ಪಡೆದದ್ದು ಸುಲಭದ ಮಾತಲ್ಲ.
ಸಿದ್ಧರಾಮಯ್ಯನವರಿಗೆ ಒಳಿತಾಗಲಿ. ಕರ್ನಾಟಕಕ್ಕೂ ಅವರ ಆಡಳಿತ ಒಳಿತು ಮಾಡಲಿ.
Siddharamaiah
ಕಾಮೆಂಟ್ಗಳು