ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಮುದವಲ್ಲಿ


 ಕುಮುದವಲ್ಲಿ


ಕುಮುದವಲ್ಲಿ ಅಂದರೆ ಸಾಂಸ್ಕೃತಿಕ ಆವರಣದಲ್ಲಿ ಹಲವು ಹೃನ್ಮನಗಳ ನಡುವೆ ತುಂಬು ನಗೆಯಿಂದ ಕಂಗೊಳಿಸುವ ವ್ಯಕ್ತಿತ್ವ ಕಣ್ಣೆದರು ಮೂಡುತ್ತದೆ.  ಸಾಹಿತ್ಯ,‍ ಸಂಸ್ಕೃತಿ, ಕಾರ್ಯಕ್ರಮ ನಿರೂಪಣೆ,‍ ಆಯೋಜನೆ, ಅಭಿನಯ ಹೀಗೆ ಅವರೊಬ್ಬ ಬಹುಮುಖಿ ಪ್ರತಿಭೆ.

ಅಕ್ಟೋಬರ್ 10, ಕುಮುದವಲ್ಲಿ ಅವರ ಜನ್ಮದಿನ.  ತಾಯಿ ಬಹುಮುಖಿ ಸಾಂಸ್ಕೃತಿಕ ಆಸಕ್ತರಾದ ರುಕ್ಮಿಣಿ ಜಯರಾಮರಾವ್.  ತಂದೆ ಮಹಾನ್ ಗಮಕಿಗಳಾದ ಎಂ. ಎ. ಜಯರಾಮರಾವ್.  ತಾತ ಕಳೆದ ಮೈ. ಶೇ. ಅನಂತ ಪದ್ಮನಾಭರಾಯರು ಕಳೆದ ಶತಮಾನದ ಮಹಾನ್ ಗಮಕಿಗಳು ಮತ್ತು ಶ್ರೇಷ್ಠ ವಿದ್ವಾಂಸರ ಸಾಲಿನಲ್ಲಿ ಕಂಗೊಳಿಸಿದವರು.  ಚಿಕ್ಕಪ್ಪ ಮಡಿಕೇರಿ ನಾಗೇಂದ್ರ ಸುಗಮ ಸಂಗೀತ ಲೋಕದ ಖ್ಯಾತರು.  ಎಂ.ಕಾಂ. ಪದವಿ ಪಡೆದಿರುವ ಕುಮುದವಲ್ಲಿ  ಅವರಿಗೆ ಸಾಹಿತ್ಯ,  ಸಂಗೀತ ಇವೆಲ್ಲ ಕುಟುಂಬದಲ್ಲಿ ಹರಿದು ಬಂದಿರುವ ಬಳುವಳಿ. 

ನಟನೆ ಕುಮುದವಲ್ಲಿ ಅವರ ಮೆಚ್ಚಿನ ಹವ್ಯಾಸಗಳಲ್ಲಿ ಪ್ರಮುಖವಾದುದು. ಓದಿನ ದಿನಗಳಿಂದಲೂ ಹಾಡು, ನೃತ್ಯ, ನಾಟಕಗಳಲ್ಲಿ ಭಾಗವಹಿಸುತ್ತ ಬಂದ ಕುಮುದವಲ್ಲಿ ತಮ್ಮ ಸಹೋದರ ಕೃಷ್ಣಸ್ವಾಮಿ  ಜೊತೆ ಸೇರಿ 'ಅನ್ವೇಷಣ' ಎಂಬ ಸ್ನೇಹಿತರೊಡಗೂಡಿದ ತಂಡ ಕಟ್ಟಿ  ಅನೇಕ ನಾಟಕ ಪ್ರದರ್ಶನ ನೀಡಿದ್ದಾರೆ. ಸಹೋದರ ಕೃಷ್ಣಸ್ವಾಮಿ ಅವರು ಸಿ. ಆರ್. ಸಿಂಹ ಅವರ ತಂಡದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದವರು.

ಕುಮುದವಲ್ಲಿ ಅವರು ಟಿ. ಎನ್. ಸೀತಾರಾಮ್ ಅವರ ಧಾರಾವಾಹಿಗಳೂ ಸೇರಿದಂತೆ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.   ಕೆಲವೊಂದು ಆಯ್ದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.  

ಕುಮುದವಲ್ಲಿ ಅವರು ಕಾರ್ಯಕ್ರಮ ನಿರೂಪಕರಾಗಿಯೂ ಹೆಸರಾಗಿದ್ದಾರೆ. ಇವರು ಉದಯ ಮೂವೀಸ್, ಕಾಮಿಡಿ 3 ಚಾನೆಲ್,  ಶ್ರೀ ಶಂಕರ ಚಾನಲ್ ಮುಂತಾದ ವಾಹಿನಿಗಳ ಧ್ವನಿ ಕಲಾವಿದೆ. ಉದಯ ಟಿವಿಗೆ ಪ್ರೋಮೊ ಬರವಣಿಗೆಗಾರ್ತಿ. ಆನ್ ಮೊಬೈಲ್ ವಡಾಫೋನ್ ಅವರಿಗೂ  ವಾಯ್ಸ್ ಕಲಾವಿದೆ. ಬೈಜೂಸ್‍ಗೆ 8 ಮತ್ತು 9ನೇ ತರಗತಿಗಳಿಗೆ ಲೆಕ್ಕದ ಶಿಕ್ಷಕಿಯಾಗಿ ಅದನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಕುಮುದವಲ್ಲಿ ಅವರು IME - Indian Music experience - Asia's first music museum  ಅವರ ಇ-ಯೋಜನೆಗೆ  ಕನ್ನಡದಲ್ಲಿ ವಿಷಯ ಬರಹಗಾರ್ತಿ ಮತ್ತು ಅನುವಾದಕಿಯಾಗಿದ್ದಾರೆ.

ತುಂಬು ಕುಟುಂಬದ ಸಕಲ ಚಟುವಟಿಕೆಗಳನ್ನು ನಿರ್ವಹಿಸುತ್ತಾ, ತಮ್ಮ ಕ್ರಿಯಾಶೀಲತೆಗೆ ಅಭಿವ್ಯಕ್ತಿ ಕಂಡುಕೊಳ್ಳುತ್ತಾ   ಜೊತೆಗೆ ಮಕ್ಕಳನ್ನೂ ಉತ್ತಮ ವಿದ್ಯಾಭ್ಯಾಸ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲಿ ಸಾಧನೆ ಮಾಡುವಲ್ಲಿ ಪ್ರೇರಣೆ ಆಗಿರುವ ಕುಮುದವಲ್ಲಿ, ಒಂದು ರೀತಿಯಲ್ಲಿ ಎಲ್ಲೆಡೆ ನಗೆಮೊಗದಿಂದ ಹೊರಹೊಮ್ಮುವ ಸರ್ವಾಂತರ್ಯಾಮಿ.

ಮೌಲ್ಯಗಳ ನಿಟ್ಟಿನಲ್ಲಿ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದರ ತತ್ವಗಳನ್ನು ಆರಾಧಿಸುವ ಕುಮುದವಲ್ಲಿ  ಅವರು ತಾವು ಹೋದೆಡೆಯಲ್ಲೆಲ್ಲ ಸುಮಧುರ ಪರಿಮಳದ ಹೂನಗೆ ಚೆಲ್ಲುತ್ತಿರುವವರು. ಅಂತೆಯೇ ಅವರ ಕವಿತೆಯ ಒಂದು ಸಾಲು ಹೀಗಿದೆ:

ಕವಿಯಾಗಲು ಕವಿತೆ ಬರೆಯುತ್ತಿಲ್ಲ 
ಇರುಳಿನಲ್ಲಿ ನೀ ನೆಟ್ಟ ಭಾವಗಳು ನೀರಾಗಿ ಹರಿವ ಮುನ್ನ...  
ಬೆಳಗಿನಲ್ಲಿ ನೀ ಕಟ್ಟುವ ಹಾಡಿನಲ್ಲಿ 
ಒಂದೇ ಒಂದು ಹೂವಾಗಲು ಹವಣಿಸುತ್ತಿರುವೆ!🌷

ಆತ್ಮೀಯ  ಪ್ರತಿಭಾವಂತೆ ಕುಮುದವಲ್ಲಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to our ever smiling and ever creative Kumudavalli Arun Murthy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ