ಕೇಶವಚಂದ್ರ ಸೇನ
ಕೇಶವಚಂದ್ರ ಸೇನ
ಕೇಶವಚಂದ್ರ ಸೇನರು ಆಧುನಿಕ ಭಾರತದ ಸಮಾಜ ಮತ್ತು ಧರ್ಮಸುಧಾರಕರಲ್ಲಿ ಒಬ್ಬರು.
ಕೇಶವಚಂದ್ರ ಸೇನರು 1838ರ ನವೆಂಬರ್ 19ರಂದು ಕಲ್ಕತ್ತೆಯಲ್ಲಿ ಜನಿಸಿದರು. ಅಲ್ಲಿನ ಪ್ರೌಢಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲವು ಕಾಲ ಬಂಗಾಳ ಬ್ಯಾಂಕಿನ ನೌಕರರಾಗಿದ್ದರು. ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಉದ್ದೇಶಿಸಿ ಬ್ಯಾಂಕಿನ ಕೆಲಸವನ್ನು ಬಿಟ್ಟು (1857) ಬ್ರಹ್ಮಸಮಾಜದ ಕೆಲಸದಲ್ಲಿ ನಿರತರಾದರು. ಸಮಾಜ ಮತ್ತು ಮತಸುಧಾರಣೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಇಂಡಿಯನ್ ಮಿರರ್ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ವಿಗ್ರಹಾರಾಧನೆ ಮತ್ತು ಜಾತಿಭೇದಗಳನ್ನು ತೊರೆದಿದ್ದ ಬ್ರಹ್ಮಸಮಾಜದ ತತ್ತ್ವಗಳನ್ನು ಸಮರ್ಥಿಸಲು ದಿ ಬ್ರಹ್ಮ ಸಮಾಜ್ ವಿಂಡಿಕೇಟೆಡ್ ಎಂಬ ಗ್ರಂಥವನ್ನು ಪ್ರಕಟಿಸಿದರು(1863). ಸಮಾಜ ಸುಧಾರಣೆಗಾಗಿ ಸಂಗಾತ್ಸಭೆಯನ್ನು ಸ್ಥಾಪಿಸಿದರು.
ಕಾಲಕ್ರಮದಲ್ಲಿ ಬ್ರಹ್ಮಸಮಾಜದ ಪ್ರಧಾನ ಆಚಾರ್ಯರಾಗಿದ್ದ ದೇವೇಂದ್ರನಾಥ ಠಾಕೂರರಿಗೂ ಕೇಶವಚಂದ್ರರಿಗೂ ಅಂತರ್ಜಾತಿಯ ವಿವಾಹ ಮತ್ತು ವಿಧವಾ ವಿವಾಹ ವಿಚಾರಗಳಲ್ಲಿ ಭಿನ್ನಭಿಪ್ರಾಯ ಹುಟ್ಟಿತಾಗಿ ಕೇಶವಚಂದ್ರರು ಆದಿಬ್ರಹ್ಮಸಮಾಜವನ್ನು ಬಿಟ್ಟು ಹೆಚ್ಚು ವ್ಯಾಪಕವಾದ ಭರತವರ್ಷಿಯ ಬ್ರಹ್ಮಸಮಾಜವನ್ನು ಸ್ಥಾಪಿಸಿದರು (1866). ಈ ಸಮಾಜದ ಹಿಂದಿನ ಪ್ರಾರ್ಥನೆಗಳ ಜೊತೆಗೆ ವೇದದಿಂದಲೇ, ಬೈಬಲ್, ಕುರಾನು, ಜೆಂಡ್ ಅವೆಸ್ಥಾ ಮತ್ತು ಕೂಂಗ್ ಪೂ ಷೆ-ಮೊದಲಾದ ಅಕರಗಳಿಂದ ಆಯ್ದ ಕೆಲವು ಭಾಗಗಳನ್ನು ಸೇರಿಸಲಾಗಿತ್ತು. ಜಾತಿ ಮತ್ತು ಲಿಂಗಭೇದವನ್ನು ಎಣಿಸದೆ ಎಲ್ಲರಗೂ ಈ ಸಮಾಜದ ಸದಸ್ಯರಾಗಲು ಅವಕಾಶ ನೀಡಲಾಗಿತ್ತು. ಈ ಹೊಸ ಸಮಾಜದ ಮುಖ್ಯ ತತ್ತ್ವಗಳು ಇವು; ಈ ವಿಶ್ವವೆಲ್ಲ ಈಶನ ನಿವಾಸ. ಅವನನ್ನು ಹುಡುಕುವುದೇ ತೀರ್ಥಯಾತ್ರೆ. ಅವನ ತಿಳಿವನ್ನು ಕೊಡುವುದೇ ವೇದ. ದೈವಭಕ್ತಿಯೇ ಎಲ್ಲಾ ಮತಗಳ ಮೂಲ. ಮಾನವ ಪ್ರೇಮವೇ ಸಂಸ್ಕೃತಿ. ಸ್ವಾರ್ಥ ತ್ಯಾಗವೇ ಸಂನ್ಯಾಸ. ಇವರು ಸ್ಥಾಪಿಸಿದ ಬ್ರಹ್ಮಸಮಾಜದ ಎಲ್ಲ ಕಾರ್ಯಗಳಿಗೂ ಕ್ರೈಸ್ತ ಮಠಗಳ ಕಾರ್ಯವಿಧಾನ ಮೇಲು ಪಂಕ್ತಿಯಾಗಿತ್ತೆನ್ನಬಹುದು.
ಕೇಶವಚಂದ್ರರು 1870ರಲ್ಲಿ ಇಂಗ್ಲೆಂಡಿಗೆ ಹೋಗಿ ಅಲ್ಲಿನ ಜನಜೀವನದ ಪರಿಚಯ ಮಾಡಿಕೊಂಡರಲ್ಲದೆ ಮತಸುಧಾರಣೆಯ ವಿಚಾರವಾಗಿ ಉಪನ್ಯಾಸ ಮಾಡಿದರು. ಇಂಗ್ಲೆಂಡಿನಿಂದ ಹಿಂತಿರುಗಿದ ಮೇಲೆ ಸಮಾಜಸುಧಾರಣೆಯ ಸಂಘವೊಂದನ್ನು ಸ್ಥಾಪಿಸಿದರು. ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು, ಸಮಾಜದ ಉದ್ದಾರಕ್ಕಾಗಿ ದಾನವನ್ನು ಪ್ರೋತ್ಸಾಹಿಸುವುದು, ಹೆಂಗಸರ ಜೀವನವನ್ನು ಉತ್ತಮಗೊಳಿಸುವುದು, ಪಾನನಿರೋಧ ಪ್ರಚಾರ, ವಿದ್ಯಾಪ್ರಚಾರ-ಇವು ಆ ಸಂಘದ ಮುಖ್ಯ ಉದ್ದೇಶಗಳಾಗಿದ್ದವು. ಕೇಶವಚಂದ್ರರ ಪ್ರಯತ್ನದ ಪರಿಣಾಮವಾಗಿ 1872ರಲ್ಲಿ ಬ್ರಹ್ಮಸಮಾಜ ರೀತಿಯ ಮದುವೆಗೆ ಸರ್ಕಾರದ ಅಂಗೀಕಾರ ದೊರೆಯಿತು. ಸ್ತ್ರೀ ವಿದ್ಯಾಭ್ಯಾಸಕ್ಕೆ ಮುಡುಪಾದ ಒಂದು ಪಾಠಶಾಲೆಯನ್ನು, ಗಂಡುಹುಡುಗರಿಗೆಂದು ಒಂದು ಕೈಗಾರಿಕಾ ಪಾಠಶಾಲೆಯನ್ನು, ನಿರಾಶ್ರಿತರಿಗಾಗಿ ಒಂದು ಆಶ್ರಮವನ್ನು ಕೇಶವಚಂದ್ರರು ಸ್ಥಾಪಿಸಿದರು.
1878ರ ವೇಳೆಗೆ ಕೇಶವಚಂದ್ರರ ಸಮಾಜದ ಸದಸ್ಯರಿಗೆ ತಮ್ಮ ನಾಯಕರಲ್ಲಿದ್ದ ಅಭಿಮಾನ ಕಡಿಮೆಯಾಯಿತು. ಇದಕ್ಕೆ ಮೂರು ಮುಖ್ಯ ಕಾರಣಗಳಿದ್ದುವೆನ್ನಬಹುದು; ಸಮಾಜದ ಆಡಳಿತದಲ್ಲಿ ಸದಸ್ಯರು ಭಾಗಿಗಳಾಗಲು ಅನುಕೂಲವಾಗುವಂಥ ನಿಯಮಾವಳಿಯನ್ನು ರಚಿಸುವ ಆಡಳಿತವನ್ನು ಕೇಶವಚಂದ್ರರು ತಾವೇ ವೈಯಕ್ತಿಕವಾಗಿ ನಡೆಸುತ್ತಿದ್ದುದು. ಮತಸುಧಾರಣೆಯ ವಿಚಾರವಾಗಿ ತಾನು ದೇವರಿಂದ ನೇರವಾಗಿ ಆದೇಶ ಪಡೆದಿರುವುದಾಗಿ ಕೇಶವಚಂದ್ರ ಹೇಳುತ್ತಿದ್ದುದು. 1872ರ ವಿವಾಹಕಾನೂನಿಗೆ ವಿರುದ್ಧವಾಗಿ ಕೇಶವಚಂದ್ರರು ಸಣ್ಣವಯಸ್ಸಿನ ತನ್ನ ಮಗಳನ್ನು ಸಣ್ಣ ವಯಸ್ಸಿನ ಕೂಚ್ಬಿಹಾರ್ ಮಹಾರಾಜನಿಗೆ ಕೊಟ್ಟು ಮದುವೆಮಾಡಿದ್ದು. ಈ ಕಾರಣಗಳ ಸಲುವಾಗಿ ಅನೇಕ ಸದಸ್ಯರು ಕೇಶವಚಂದ್ರರ ಸಮಾಜವನ್ನು ಬಿಟ್ಟು, ಸಾಧಾರಣ ಬ್ರಹ್ಮಸಮಾಜವೆಂಬ ಹೊಸ ಸಮಾಜವನ್ನು ಸ್ಥಾಪಿಸಿದರು (1878).
ಆದರೂ ಕೇಶವಚಂದ್ರರು ತಮ್ಮ ಸಮಾಜವನ್ನು ಮುಂದುವರಿಸಿದರು.
1876ರಲ್ಲಿ ರಾಮಕೃಷ್ಣ ಪರಮಹಂಸರು ಕೇಶವ ಚಂದ್ರ ಸೇನರನ್ನು ಸ್ವಯಂ ತಾವೇ ಹುಡುಕಿಕೊಂಡು ಬಂದರು. ಮೊದ ಮೊದಲು ರಾಮಕೃಷ್ಣರನ್ನು ಕೇಶವಚಂದ್ರರು ಗಂಭೀರವಾಗಿ ಪರಿಗಣಿಸಲಿಲ್ಲ. ಕ್ರಮೇಣದಲ್ಲಿ ಅತಿಯಾಗಿ ಮಾತನಾಡದೆ ನಡೆಯಲ್ಲಿ ಉನ್ನತರಾಗಿರುವುದೇ ರಾಮಕೃಷ್ಣರ ಶ್ರೇಷ್ಠತೆ ಎಂಬುದು ಅವರಿಗೆ ಮನವರಿಕೆಯಾಯಿತು. ರಾಮಕೃಷ್ಣರ ಭೇಟಿಗೆ ಮುಂಚೆ ಬ್ರಹ್ಮಸಮಾಜದಿಂದ ಹೊರಬಂದು ಕ್ರೈಸ್ತ ಪದ್ಧತಿಗಳತ್ತ ವಾಲಿದ್ದ ಕೇಶವ ಚಂದ್ರ ಸೇನರು, ಪರಮಹಂಸರಲ್ಲಿದ್ದ ಸರಳತೆಯ ಅಗಾಧತೆಯಿಂದ ಮನಃಪರಿವರ್ತಿತರಾಗಿ ಹಿಂದೂ ಧರ್ಮದಲ್ಲಿನ ಬಹುಮುಖಿ ಸಾಧ್ಯತೆಗಳ ಬಗ್ಗೆ ದೃಷ್ಟಿ ಹಾಯಿಸಿ, 1881ರಲ್ಲಿ ನವವಿಧಾನ್ ಎಂಬ ಹೆಸರಿನಲ್ಲಿ ಒಂದು ಹೊಸ ಸಂದೇಶವನ್ನು ಪ್ರಕಟಿಸಿದರು. ಪರಮಹಂಸರ ಬೋಧನೆಯಾದ "ದೇವರನ್ನು ತಾಯಿಯಂತೆ ಕಾಣುವ ಪೂಜೆ" ಮತ್ತು "ಎಲ್ಲ ಧರ್ಮಗಳೂ ಸಮಾನ" ಎಂಬುದು ಈ ಸಂಘಟನೆಯ ತತ್ವವಾಯಿತು.
ಕೇಶವಚಂದ್ರ ಸೇನರು ಒಳ್ಳೆಯ ಬರಹಗಾರರಾಗಿದ್ದರೆಂಬುದಕ್ಕೆ ಅವರು ಬರೆದ ಅನೇಕ ಧಾರ್ಮಿಕ ಗ್ರಂಥಗಳು ಸಾಕ್ಷಿಯಾಗಿವೆ. ನಿಧನಕ್ಕೆ ಮುನ್ನ ಇವರು ಬರೆದ ದಿ ನ್ಯೂ ಸಂಹಿತ ಆರ್ ದಿ ಸೆಕ್ರೆಡ್ ಲಾಸ್ ಆಫ್ ದಿ ಆರ್ಯನ್ಸ್ ಆಫ್ ದಿ ನ್ಯೂ ಡಿಸ್ಪೆನ್ಸೇಷನ್ ಎಂಬುದು ಉಲ್ಲೇಖಾರ್ಹವಾದ ಗ್ರಂಥವಾಗಿದೆ.
ಕೇಶವಚಂದ್ರ ಸೇನರು 1884ರ ಜನವರಿ 8ರಂದು ನಿಧನರಾದರು.
On the birth anniversary of social reformer Keshab Chandra Sen
ಕಾಮೆಂಟ್ಗಳು