ಬಸವಣ್ಣ
ಬಸವಣ್ಣ
ಬಸವಣ್ಣನವರು ಜೀವಿಸಿದ್ದ ವಚನಾನುಭಾವಿಗಳ ಆ ಸಮಯವನ್ನು ನೆನೆದಾಗಲೆಲ್ಲ ಹೀಗೂ ಒಂದು ಯುಗವಿರಲು ಸಾಧ್ಯವೇ ಎನಿಸುವಂತಹ ಅಭಿಮಾನ ಹುಟ್ಟುತ್ತದೆ. ಆ ಅನುಭವ ಮಂಟಪವೆಂಬ ದೃಶ್ಯವೇ ಮಹೋನ್ನತವಾದ ಭಾವ ಸೃಷ್ಟಿಸುತ್ತದೆ. ಸುಮಾರು 9 ಶತಮಾನಗಳ ಹಿಂದೆಯೇ ಅಷ್ಟೊಂದು ಪಕ್ವವಾದ ಕನ್ನಡದ ಭಾಷೆ ಜಾಗೃತಿಯಲ್ಲಿತ್ತು, ಎಲ್ಲ ಕಾಯಕದ ಜನರು, ಸ್ತ್ರೀಯರು, ರಾಜನ ಆಸ್ಥಾನದವರು, ಋಷಿ ಸದೃಶ ವ್ಯಕ್ತಿತ್ವದವರು ಹೀಗೆ ಎಲ್ಲರೂ ಕುಳಿತು, ಮೇಲು ಕೀಳುಗಳ ಭಾವವಿಲ್ಲದೆ ಪಾರಸ್ಪರಿಕ ಗೌರವಗಳಿಂದ ಅಧ್ಯಾತ್ಮ ಚಿಂತನೆಯಲ್ಲಿ ಪಾಲ್ಗೊಳ್ಳುತ್ತಿದ್ದ, ವಿಚಾರ ವಿನಿಮಯ ನಡೆಸುತ್ತಿದ್ದ ಅಂತಹ ಯುಗದ ಕಲ್ಪನೆ ಯಾವುದೇ ಮುಂದುವರಿದ ಸಮಾಜದ ದಿನಗಳಲ್ಲೂ ಕಾಣದಂತಹ ಒಂದು ಅಪೂರ್ವ ಯುಗ. ಈ ಯುಗದ ಪ್ರಾತಿನಿಧಿಕ ಸೂತ್ರಧಾರರಂತೆ ಬಸವಣ್ಣನವರು ಚರಿತ್ರೆಯಲ್ಲಿ ಇನ್ನೂ ಸಹಸ್ರಾರು ವರ್ಷಗಳು ಉರುಳಿದರೂ ಸಹಾ ಅಜರಾಮರರಾಗಿ ರಾರಾಜಿಸುತ್ತಾರೆ.
ಬಸವಣ್ಣನವರು ಜನಿಸಿದ್ದು ಕ್ರಿ.ಶ. ಸುಮಾರು 1131ರಲ್ಲಿ ಎಂಬ ಅಂದಾಜಿದೆ. ಅವರು ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ, ಮೇಲಾಗಿ ಕವಿ. 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿಯಾತ. ಬಸವಣ್ಣನವರ ಜೀವಿತದ ವಿವಿಧ ಅಂಶಗಳ ಬಗ್ಗೆ ಸಮಗ್ರವಾದ ಚಿತ್ರಣ, ನಿರ್ದಿಷ್ಟರೂಪದಲ್ಲಿ ಎಲ್ಲೂ ಲಭ್ಯವಿಲ್ಲ. ಬಸವಣ್ಣನವರ 1400ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರೆತಿರುವ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳನ್ನು ಹೆಕ್ಕಿ ತೆಗೆದು ಇವರ ಜೀವನಚಿತ್ರವನ್ನೂ ಸಾಧನೆಗಳನ್ನೂ ಕಾಣಬೇಕಾಗಿದೆ.
ಬಸವಣ್ಣನವರು ಹುಟ್ಟಿದ್ದು ಬಾಗೇವಾಡಿಯಲ್ಲಿ . ಈಗ ಅದು ಬಿಜಾಪುರ ಜಿಲ್ಲೆಯಲ್ಲಿ ತಾಲ್ಲೂಕಿನ ಮುಖ್ಯ ಸ್ಥಳವಾಗಿದೆ. ಹಿಂದೆ ಸುಪ್ರಸಿದ್ಧ ಅಗ್ರಹಾರವಾಗಿತ್ತು. ತಂದೆ ಆ ಅಗ್ರಹಾರದ ಅಧಿಪತಿಯಾದ ಮಾದಿರಾಜ. ತಾಯಿ ಮಾದಲಾಂಬೆ. ದೇವರಾಜ ಅಣ್ಣ, ನಾಗಮ್ಮ ಅಕ್ಕ.
ಎಂಟರ ಪ್ರಾಯದಲ್ಲೆ ಸಾಮಾಜಿಕ ಧಾರ್ಮಿಕ ವಿಚಾರಗಳನ್ನು ಒರೆ ಹಚ್ಚುವಂತಹ ಪ್ರೌಢ ವಿಚಾರಸರಣಿ ಬಸವಣ್ಣನವರಲ್ಲಿ ಮೂಡತೊಡಗಿತು. ಉಪನಯನವನ್ನು ಒಪ್ಪದೆ ತಿರಸ್ಕರಿಸಿ ನಡೆದರೆಂದು ಕೆಲವು ಪುರಾಣಕರ್ತೃಗಳು ಹೇಳಿದರೆ, ಉಪನಯನವಾದ ಕೆಲವು ಕಾಲಾನಂತರ ಯಜ್ಞೋಪವೀತವನ್ನು ಕಿತ್ತು ಹಾಕಿದರೆಂದು ಹರಿಹರ ಕವಿ ಹೇಳುತ್ತಾನೆ. ಅದೇನೇ ಇರಲಿ, ವೈದಿಕ ಧರ್ಮದ ಚತುರ್ವರ್ಣಗಳ ವಿಭಜನೆಯನ್ನೂ, ಅದರಿಂದ ಸಮಾಜದಲ್ಲುಂಟಾದ ಮೇಲು ಕೀಳುಗಳನ್ನೂ ಇವರು ಒಪ್ಪಿಕೊಳ್ಳಲಾರದೇ ಹೋದರೆಂಬುದಂತೂ ಸತ್ಯ. ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸುವುದಕ್ಕಾಗಿ ಯಜ್ಞೋಪವೀತವನ್ನು ಕಿತ್ತು ಹಾಕಿದ್ದರಿಂದ ಬಹಿಷ್ಕೃತರಾಗಿ ಹುಟ್ಟೂರನ್ನು ಬಿಟ್ಟು ಅಕ್ಕ ನಾಗಮ್ಮನೊಡನೆ ಸಂಗಮ ಕ್ಷೇತ್ರಕ್ಕೆ ಹೋದರು. ಸಂಗಮ ಕ್ಷೇತ್ರದ ಜಾತವೇದ ಮುನಿ ಅಥವಾ ಈಶಾನ್ಯ ಗುರುಗಳ ಸಮ್ಮುಖದಲ್ಲಿ ದೀಕ್ಷಾವಿಧಿಯೊಡನೆ ಇವರ ವಿದ್ಯಾಭ್ಯಾಸ ಹನ್ನೆರಡು ವರ್ಷ ನಡೆಯಿತು. ಕೃಷ್ಣಾ ಮಲಾಪಹಾರಿ ನದಿಗಳ ಸಂಗಮದ ಆ ಸುಂದರ ಪರಿಸರದಲ್ಲಿ, ಹೃದಯದ ಭಾವನೆಗಳಿಗೆ ಅನುಭವದ ಶ್ರೀಮಂತಿಕೆ ಒಪ್ಪವೀಯಿತು.
ಕಳಚೂರ್ಯ ಬಿಜ್ಜಳನ ಬಳಿ ದಂಡಾಧೀಶನಾಗಿದ್ದ ಸೋದರಮಾವ ಬಲದೇವನ ಮಗಳು ಗಂಗಾಂಬಿಕೆಯೊಡನೆ ಬಸವಣ್ಣನವರ ವಿವಾಹ ಜರುಗಿ ನಂತರದಲ್ಲಿ ಸಂಗಮದಿಂದ ಮಂಗಳವಾಡಿಗೆ ಬಂದರು. ಮಂಗಳವಾಡಿಗೆ ಬಂದಮೇಲೆ ಬಸವಣ್ಣ ಗಂಗಾಂಬಿಕೆಯ ಜೊತೆಗೆ ನೀಲಲೋಚನೆ ಅಥವಾ ನೀಲಾಂಬಿಕೆಯನ್ನೂ ಮದುವೆಯಾಗಬೇಕಾಯಿತು. ನೀಲಾಂಬಿಕೆ ಬಿಜ್ಜಳನ ಇನ್ನೊಬ್ಬ ದಂಡನಾಯಕನಾದ ಸಿದ್ಧರಸನ ಮಗಳು. ಚಿಕ್ಕಂದಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡು ಬಿಜ್ಜಳನ ಆಶ್ರಯದಲ್ಲಿ ಆತನ ಸಾಕುತಂಗಿಯಾಗಿ ಬೆಳೆದವಳು.
ಬಿಜ್ಜಳನ ಭಂಡಾರದಲ್ಲಿ ಬಸವಣ್ಣನವರಿಗೆ ಒಂದು ಕೆಲಸವೂ ದೊರೆಯಿತು. ದುಡಿಯದೆ ತಿನ್ನುವ ಹಕ್ಕಿಲ್ಲವೆಂಬುದನ್ನು ನಿಶ್ಚಿತವಾಗಿ ನಂಬಿದ್ದ ಇವರು ರಾಜಾಸ್ಥಾನದಲ್ಲಿ ಕೆಲಸವನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಮುಂದೆ ಸ್ವಲ್ಪಕಾಲದಲ್ಲಿಯೆ ರಾಜ್ಯ ಭಂಡಾರದ ಮಂತ್ರಿಯಾದ ಬಲದೇವರು ದೈವಾಧೀನರಾಗಲು ಅವರ ಸ್ಥಾನಕ್ಕೆ ಬಸವಣ್ಣನವರನ್ನೇ ನೇಮಕ ಮಾಡಲಾಯಿತು. ರಾಜ್ಯದ ಭಂಡಾರಿಯಾದ ಬಸವಣ್ಣ ಕ್ರಮೇಣ ಅಂತರಂಗದ ಸಾಧನೆಗಳಿಂದಾಗಿ ಭಕ್ತಿ ಭಂಡಾರಿಯೂ ಅದರು. ಅಲ್ಲದೆ ತನ್ನ ಆಧ್ಯಾತ್ಮಿಕ ದೃಷ್ಟಿಯ ಕ್ರಾಂತಿಕಾರಕ ಭಾವನೆಗಳಿಗನುಸಾರವಾಗಿ ಸಾಮಾಜಿಕ ಕ್ರಾಂತಿಗೂ ಕೈ ಹಾಕಿದರು.
ಬಹುಶಃ ಬಸವಣ್ಣನವರು ಮಂಗಳವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿಯೇ ಅಂದಿನ ರಾಜಕೀಯದಲ್ಲಿ ಬದಲಾವಣೆ ತಲೆದೋರಿತು. ಚಾಲುಕ್ಯ ಅರಸು ದುರ್ಬಲನಾಗಿದ್ದುದರಿಂದ ಸಾಮಂತ ಬಿಜ್ಜಳ ತಾನೇ ಚಕ್ರವರ್ತಿಯಾಗಿ ಮಂಗಳವಾಡದಿಂದ ಕಲ್ಯಾಣಕ್ಕೆ ಬರಬೇಕಾಯಿತು. ಆಗ ಬಸವಣ್ಣನವರು ಇಡೀ ರಾಜ್ಯದ ಮಹಾಭಂಡಾರಿಯಾದರು. ಬಸವಣ್ಣನವರ ಅಧಿಕಾರ ಕ್ಷೇತ್ರವೂ ಧಾರ್ಮಿಕ ಕ್ಷೇತ್ರವೂ ವ್ಯಾಪಕಗೊಂಡವು.
ಸುಮಾರು 12 ವರ್ಷಗಳ ಕಾಲ ಕಲ್ಯಾಣ ಬಸವಣ್ಣನವರ ಕಾರ್ಯ ಕ್ಷೇತ್ರವಾಗಿತ್ತು. ಈ ಅಲ್ಪಾವಧಿಯಲ್ಲಿ ಇವರ ಸಾಧನೆ ಮತ್ತು ಅವುಗಳು ಜನಜೀವನದ ಮೇಲೆ ಬೀರಿದ ಪ್ರಭಾವ ಅದ್ವಿತೀಯವಾದದು. ಅಸಂಖ್ಯಾತ ಸಾಧಕರನ್ನೂ ಶರಣರನ್ನೂ ಸೆಳೆದು ಅವರೆಲ್ಲರನ್ನೂ ಅನುಭವ ಮಂಟಪದಲ್ಲಿ ಸಮಾವೇಶಗೊಳಿಸಿ, ಅವರ ವಿಚಾರಮಥನದಿಂದ ಆಧ್ಯಾತ್ಮಿಕ ಚಿಂತನೆಗಳಿಗೊಂದು ಹೊಸ ಭಾಷ್ಯವನ್ನೇ ಬರೆದರು. ಅಲ್ಲಮಪ್ರಭುವಿನಂಥ ಮಹಾಮೇರು ಸದೃಶ ವ್ಯಕ್ತಿತ್ತವೂ ಬಸವಶಕ್ತಿಗೆ ಆಪ್ತವಾಗಿ ಕಲ್ಯಾಣದಲ್ಲಿ ಕೆಲವು ಕಾಲ ಅನುಭವಮಂಟಪವನ್ನು ನಿರ್ದೇಶಿಸಿತು.
ಬಸವಣ್ಣನವರ ಕ್ರಾಂತಿಕಾರಕ ವಿಚಾರಧಾರೆಗಳು ವೈದಿಕ ಪರಂಪರೆಯನ್ನು ಕೆರಳಿಸಿದುವು. ಅವರನ್ನು ಪದಚ್ಯುತಗೊಳಿಸಲು ಅನೇಕ ಸನ್ನಾಹಗಳೇರ್ಪಟ್ಟವು. ಬಸವಣ್ಣನವರು ರಾಜ್ಯಭಂಡಾರದ ಹಣವನ್ನು ದುರ್ವಿನಿಯೋಗ ಮಾಡಿ ದಾಸೋಹ ನಡೆಸುತ್ತಿರುವರೆಂದು ಬಿಜ್ಜಳನಲ್ಲಿಗೆ ಸಲ್ಲಿತವಾದ ಮಿಥ್ಯಾರೋಪಗಳು ಹುಸಿಯೆನಿಸಿದವು.
ಅಸ್ಪೃಶ್ಯರ ಹರಳಯ್ಯನ ಮಗನಿಗೂ ಬ್ರಾಹ್ಮಣರ ಮಧುವರಸನ ಮಗಳಿಗೂ ವಿವಾಹ ನಡೆದಾಗ ಅಂದಿನ ಸಮಾಜ ಅದನ್ನರಗಿಸಿಕೊಳ್ಳದೆ ಹೋಯಿತು. ವರ್ಣಸಂಕರವಾಯಿತೆಂದು ಸಂಪ್ರದಾಯಸ್ಥರು ಹುಯಿಲೆಬ್ಬಿಸಿದರು. ಇದರೊಡನೆ ರಾಜಕೀಯ ಪಿತೂರಿಯೂ ಸೇರಿ ಹರಳಯ್ಯ ಮಧುವರಸರಿಗೆ ಬಿಜ್ಜಳ ಮರಣದಂಡನೆಯನ್ನು ವಿಧಿಸುವಂತಾಯಿತು. ಅದಾದ ಸ್ವಲ್ಪ ಕಾಲದಲ್ಲಿಯೇ ಬಿಜ್ಜಳನ ಕೊಲೆಯೂ ಆಯಿತು. ಆ ಅಪರಾಧವನ್ನು ಶರಣರ ಮೇಲೆ ಹಾಕುವ ಕುಟಿಲ ರಾಜಕೀಯವೂ ನಡೆಯಿತು. ಈ ಬೆಳವಣಿಗೆಗಳಿಂದ ಬೇಸರಗೊಂಡು ಮೊದಲೇ ಕಲ್ಯಾಣವನ್ನು ಬಿಟ್ಟಿದ್ದ ಬಸವಣ್ಣನವರು ಕೂಡಲಸಂಗಮ ಕ್ಷೇತ್ರಕ್ಕೆ ಹೋಗಿ ಕೂಡಲ ಸಂಗಮನಲ್ಲಿ ಐಕ್ಯರಾದರು. ಇದು ಸುಮಾರು 1167-68ರಲ್ಲಿ ಸಂಭವಿಸಿರಬೇಕೆಂದು ವಿದ್ವಾಂಸರ ಅಭಿಪ್ರಾಯವಾಗಿದೆ.
ಲೌಕಿಕದ ಅಧಿಕಾರದಲ್ಲಿದ್ದೂ ಆಂತರಿಕವಾಗಿ ಮಹಾ ಅನುಭಾವಿಯಾದುದು ಬಸವಣ್ಣನವರ ಅಂತರಂಗದ ಕಥೆ. ಬಸವಣ್ಣನವರ ವಚನಗಳಲ್ಲಿ ಅದರ ಉಜ್ವಲ ಚಿತ್ರ ಕಾಣಬರುತ್ತದೆ. ಬಸವಣ್ಣನವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ಕಾಲದೇಶಗಳ ಹಂಗಿನ ಪರಿಧಿಯಾಚೆಗೆ ಕೂಡಾ ಸಾರ್ವಕಾಲಿಕವಾಗಿ ನಿಲ್ಲುವಂತಹದುಗಾಗಿದೆ.
ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಳಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ಪರಮತತ್ತ್ವ. ಅದಕ್ಕೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಿಲ್ಲ. “ಕೊಲ್ಲುವವನೇ ಮಾದಿಗ, ಹೊಲಸು ತಿಂಬುವನೆ ಹೊಲೆಯ. ಕುಲವೇನೋ ಆವಂದಿರ ಕುಲವೇನೋ? ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲ ಸಂಗನ ಶರಣರೆಲ್ಲಾ ಕುಲಜರು” ಎಂಬುದು ಅವರ ನುಡಿಮಾತ್ರವಲ್ಲ, ಅವರ ನಡೆಯೂ ಹೌದು. ಹರಳಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಶಿವನಾಗಮಯ್ಯ ಮೊದಲಾದ ಅಸ್ಪಶ್ಯರು ಬಸವ ತತ್ವದ ಆಶ್ರಯ ಪಡೆದು ಶರಣರಾದರು. ಅನುಭಾವಿಗಳಾದರು, ವಚನಕಾರರಾದರು; ಬಸವಣ್ಣನವರ ಮಹದಾಶಯಗಳ ಸಾಕಾರ ಮೂರ್ತಿಗಳೂ ಆದರು. ಬಸವಣ್ಣನವರ ಕಾಯಕದ ಕಲ್ಪನೆಯಂತೂ ಸಮಗ್ರ ಜೀವನದ ದರ್ಶನವೇ ಆಗಿ ನಿಲ್ಲುತ್ತದೆ. ವ್ಯಕ್ತಿ ಕೈಗೊಂಡ ಉದ್ಯೋಗ ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅದರ ಫಲ ತನಗೆ ಮಾತ್ರವಲ್ಲದೆ ಸಮಾಜಕ್ಕೂ ದೊರೆಯುವಂತಿರಬೇಕು. ಆಗ ಸ್ವಾರ್ಥವಳಿದು ವಿಶ್ವಶಕ್ತಿ ಅಂತರಂಗದೊಳಗೆ ಇಳಿದು ಬರಲು ಸಹಾಯಕವಾಗುತ್ತದೆ. ಈ ಕಾಯಕದಲ್ಲಿ ಮೇಲು ಕೀಳುಗಳಿಲ್ಲ. ಪ್ರತಿಯೊಬ್ಬನೂ ತನ್ನ ಉದ್ಯೋಗ ಮಾಡಲೇಬೇಕು. ವ್ಯಕ್ತಿ ಅಂದಂದಿನ ಕಾಯಕವನ್ನು ಅಂದಂದು ಮಾಡಿ ಶುದ್ಧನಾಗಬೇಕು. ತನಗೆ ಅಗತ್ಯವಾದುದಕ್ಕಿಂತ ಹೆಚ್ಚಾಗಿ ಶೇಖರಿಸಿಟ್ಟುಕೊಳ್ಳಬಾರದು.
ಬಸವಣ್ಣನವರ ಧಾರ್ಮಿಕ ಸಮತೆಯ ತತ್ವದಲ್ಲಿ ಸ್ತ್ರೀಪುರುಷರೆಂಬ ಭೇದಗಳೂ ಅಳಿದು ಹೋದವು.. ಅಕ್ಕಮಹಾದೇವಿ, ಮಹಾದೇವಮ್ಮ, ಲಕ್ಕಮ್ಮ , ಲಿಂಗಮ್ಮ , ಗಂಗಾಬಿಕೆ, ನೀಲಾಂಬಿಕೆ ಈ ಮೊದಲಾದ ಅನೇಕ ಶರಣೆಯರು ಇದಕ್ಕೆ ಉಜ್ಜ್ವಲ ಸಾಕ್ಷಿಯಾಗಿದ್ದಾರೆ.
ವ್ಯಕ್ತಿ ಸ್ವತಃ ಪೂಜಾ ಕೈಂಕರ್ಯ ಸಲ್ಲಿಸಬೇಕೆಂಬುದು ಬಸವಣ್ಣನವರ ಧಾರ್ಮಿಕ ಚಿಂತನೆಯ ಮತ್ತೊಂದು ಪ್ರಮುಖ ಅಂಶ. ವ್ಯಕ್ತಿ ತನ್ನ ಉದ್ಧಾರವನ್ನು ತಾನೇ ಕಂಡುಕೊಳ್ಳಬೇಕು. ಒಬ್ಬನ ಪರವಾಗಿ ಇನ್ನೊಬ್ಬ ಪೂಜೆ ಸಲ್ಲಿಸುವುದು ಧಾರ್ಮಿಕ ಶೋಷಣೆಗೆ ಕಾರಣವಾಗುತ್ತದೆ. “ತಾನುಂಬ ಊಟವನು, ತನ್ನಾಶ್ರಮದ ರತಿ ಸುಖವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ?” ಎಂಬ ಸಾದೃಶ್ಯದಿಂದ ಬಸವಣ್ಣನವರು ಅದನ್ನು ಕಟುವಾಗಿ ನಿರಾಕರಿಸಿದರು. ಹಾಗೆಯೇ ಪ್ರಾಣಿವಧೆಗೆ ಕಾರಣವಾದ ಯಜ್ಞಯಾಗಾದಿಗಳನ್ನೂ ಕರ್ಮವಾದವನ್ನೂ ಅಂಧಶ್ರದ್ಧೆಯನ್ನೂ ಖಂಡಿಸಿದರು.
ಈ ಎಲ್ಲ ನೆಲೆಗಟ್ಟುಗಳು ಬಸವಣ್ಣನವರ ವೈಚಾರಿಕ ದೃಷ್ಟಿ, ಬೌದ್ಧಿಕ ವಿಕಾಸ. ಧಾರ್ಮಿಕ ಸ್ವಾತಂತ್ಯ್ರ ಮತ್ತು ಆಧ್ಯಾತ್ಮಿಕ ಪ್ರಗತಿಗಳ ತಳಹದಿಯಾಯಿತು. ಕನ್ನಡ ಭಾಷೆ ಬಸವಣ್ಣನವರು ಮತ್ತವರ ಸಮಕಾಲೀನರ ವಚನಗಳಿಂದ ಅಪೂರ್ವವಾದ ಶಕ್ತಿ ಶ್ರೀಮಂತಿಕೆಗಳನ್ನು ಪಡೆಯಿತು. ಮಾತು ಮಾಣಿಕ್ಯದ ದೀಪ್ತಿಯಂತಾಯಿತು. ನುಡಿದುದು ಮುತ್ತಿನಹಾರವಾಯಿತು, ನುಡಿದದ್ದು ನಡೆಯಾದ ಧರ್ಮವೇ ಆಯಿತು.
ಬಸವಣ್ಣನವರ ಭಕ್ತಿಭಾವ, ಕೂಡಲ ಸಂಗಮ ದೇವನಲ್ಲಿಯ ಅನನ್ಯ ಶರಣಭಾವ, ಜಂಗಮಸೇವೆಯೇ ಲಿಂಗಸೇವೆ ಎಂಬುವ ದಿವ್ಯಭಾವ ಅವರ ಎಲ್ಲ ಶಕ್ತಿ ಸಾಮರ್ಥ್ಯಗಳ ಕೇಂದ್ರ. ಬಸವಣ್ಣನವರು ಜ್ಞಾನವೈರಾಗ್ಯಗಳ ಮಹತ್ವವನ್ನು ಅಲ್ಲಗೆಳೆಯದಿದ್ದರೂ ಭಕ್ತಿಗೆ ಪ್ರಾಧಾನ್ಯ ನೀಡಿದರು. ಶಿವಾನುಭವ ಮಂಟಪ ಇದಕ್ಕೆ ಉಜ್ವಲ ನಿದರ್ಶನ. ಅದರ ಖ್ಯಾತಿಯನ್ನು ತಿಳಿದ ಎಷ್ಟೋ ಮಂದಿ ಶಿವಶರಣರು ನಾಡಿನ ಒಳಗಿನಿಂದಲ್ಲದೆ ನಾಡಿನ ಹೊರಗಿನಿಂದಲೂ ಅಲ್ಲಿ ಸೇರಿದರು. ಅದು ಆಚಾರ, ವಿಚಾರ ಎರಡಕ್ಕೂ ಕೇಂದ್ರಸ್ಥಾನವಾಯಿತು. ಚೆನ್ನಬಸವ, ವೈರಾಗ್ಯನಿಧಿ ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ ಮೊದಲಾದ ಜೀವಜ್ಯೋತಿಗಳು ಅಲ್ಲಿ ಕಂಗೊಳಿಸಿದರು. ಸಹಸ್ರಾರು ಶಿವಶರಣರು ವರ್ಣ ಭೇದವಿಲ್ಲದೆ ಮೇಲು ಕೀಳೆಂಬ ಭಾವನೆಗಳಿಲ್ಲದೆ ಸಮಾನ ಮನಸ್ಕತೆಯಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು.
“ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವೆರೆದು
ಆಚಾರವೆಂಬ ಬತ್ತಿಗೆ ಬಸವನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತಾ ಶಿವನ ಪ್ರಕಾಶ.
ಆ ಬೆಳಕಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯ ಶಿವಶರಣರು.
ಶಿವಭಕ್ತನಿರ್ದಕ್ಷೇತ್ರ ಶಿವಭಕ್ತನಿರ್ದದೇಶ
ಪಾವನವೆಂಬುದು ಹುಸಿಯೇ ಗುಹೇಶ್ವರಾ”
ಈ ಅಲ್ಲಮರ ವಚನ ಅನುಭವಮಂಟಪದಲ್ಲಿ ಬಸವಣ್ಣನವರು ವಹಿಸಿದ ಪಾತ್ರವೇನೆಂಬುದನ್ನು ತಿಳಿಸುತ್ತದೆ.
ಬಸವಣ್ಣನವರ ಬೋಧೆ ಅವರ ನೂರಾರು ವಚನಗಳಲ್ಲಿ ವ್ಯಕ್ತವಾಗಿದೆ ಸಾಮಾನ್ಯರಿಗೂ ಅರ್ಥವಾಗುವ ವಚನ ಸಾಹಿತ್ಯ ಪ್ರವಾಹ ಆ ಕಾಲದಲ್ಲಿ ತುಂಬಿ ಹರಿಯಿತು. ಈ ವಚನಗಳು ಜಿಜ್ಞಾಸುಗಳಿಗೆ, ಮುಮುಕ್ಷುಗಳಿಗೆ ಮತ್ತು ಸಾಹಿತ್ಯೋಪಾಸಕರಿಗೆ ದಾರಿದೀಪಗಳಂತಿವೆ. ನಡೆ ನುಡಿಗಳ ಸಾಮರಸ್ಯವನ್ನು ಸೂಚಿಸುವ ಈ ವಚನ ಸಾಹಿತ್ಯ ಕಾಲವನ್ನು ಮೆಟ್ಟಿನಿಲ್ಲುವಂಥದು.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಗಾಗಿ ನಡೆಯದಿದ್ದರೆ ಕೂಡಲ
ಸಂಗಮ ದೇವನೆಂತೊಲಿವನಯ್ಯ.
ಬಸವಣ್ಣನವರು ಮಾನವನ ಶ್ರೇಯಸ್ಸಿಗೆ ಮೇಲ್ಪಂಕ್ತಿಯಾಗಿ ನಿಂತ ಹಿರಿಯ ಚೇತನರು. ಬಸವಣ್ಣನವರ ಸುಮಾರು 1400 ವಚನಗಳು ಸಿಕ್ಕಿವೆ. ಇವರ ಕೆಳಗಿನ ಸ್ತರದಿಂದ ಜನರನ್ನು ಮೇಲೆಕ್ಕೆತ್ತಿದ್ದೇ ಅಲ್ಲದೆ, ಕನ್ನಡ ಭಾಷೆಯನ್ನೂ ಉದ್ಧರಿಸಿದರು. ಒಂದು ಭಾಷೆಗೆ ಏನೆಲ್ಲ ಸಾಧ್ಯತೆಗಳಿರಬಹುದೆಂಬುದನ್ನು ತೋರಿಸಿಕೊಟ್ಟರು. ಕವಿ ಮನೋಭಾವದಿಂದ ಕೂಡಿದ ಇವರ ವಚನಗಳು ಉಪಮೆ ರೂಪಕಾಲಂಕಾರಗಳಿಂದ ಕೂಡಿ ಕಾವ್ಯ ಸೌಂದರ್ಯಗಳಿಂದ ಸಮೃದ್ಧವಾಗಿ ಕಂಗೊಳಿಸುತ್ತಿವೆ.
ಇವರು ಷಟ್ ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾವಿ ಜಿಲ್ಲೆಯ ಅರ್ಜುನವಾಡದ ಶಿಲಾ ಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.
Great reformer and poet Basavanna
ಕಾಮೆಂಟ್ಗಳು