ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗೇಂದ್ರ ಪ್ರಸಾದ್


 ವಿ. ನಾಗೇಂದ್ರ ಪ್ರಸಾದ್


ಡಾ. ವಿ. ನಾಗೇಂದ್ರ ಪ್ರಸಾದ್ ಕನ್ನಡ ಚಲನಚಿತ್ರರಂಗದ ಪ್ರತಿಭಾನ್ವಿತರು.‍ ಗೀತರಚನೆ, ನಿರ್ದೇಶನ, ನಾಟಕ ರಚನೆ, ಸಂಭಾಷಣೆ ಎಲ್ಲದರಲ್ಲೂ ಅವರದ್ದು ಸಾಬೀತುಗೊಂಡಿರುವ ಪ್ರತಿಭೆ.

’ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ', ‘ಕಣ್ ಕಣ್ಣ ಸಲಿಗೆ’, 'ಈ ಟಚ್ಚಲಿ ಏನೋ ಇದೆ’,  ’ಕೆಂಚಾಲೋ ಮಂಚಾಲೋ’, ’ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ’, ‘ಬಾಲ ಇದ್ರೂನೂ ಕೋತಿ ಅಲ್ಲ, ಪಟಪಟ ಗಾಳಿಪಟ’,  ‘ಅಪ್ಪ ಐ ಲವ್ ಯು ಪಾ...’,  ‘ನೀನೇ ರಾಮ ನೀನೇ ಶಾಮ...', 'ಶಾಂಕುತ್ಲೆ ಸಿಕ್ಕಳು...ಒಂದು ಮಳೆ ಬಿಲ್ಲು ..ಒಂದು ಮಳೆ ಮೋಡ', 'ಸಲಾಂ ರಾಕಿ ಭಾಯ್', 'ಜಾರು ತಂತಿ ನಿಮ್ಮ ಭುಜವು..', ಹೀಗೆ ಕಾಲ, ವೈವಿಧ್ಯ, ಕಾಲಪ್ರಸ್ತುತತೆ ಎಲ್ಲಕ್ಕೂ ಅನುವಾಗುವಂತೆ ಹೊಂದಿಕೊಂಡು ಮೇಳೈಸುತ್ತಿರುವ ಪ್ರತಿಭೆ ನಾಗೇಂದ್ರ ಪ್ರಸಾದ್ ಅವರದ್ದು. 

ನಾಗೇಂದ್ರ ಪ್ರಸಾದ್ 1975ರ ಡಿಸೆಂಬರ್ 3ರಂದು ಜನಿಸಿದರು. ತಂದೆ ಎಂ ವಿ ವೆಂಕಟರಾಮಪ್ಪ.  ತಾಯಿ ಚಂದ್ರಮ್ಮ. ಪ್ರಾಥಮಿಕ ಶಾಲಾ ಶಿಕ್ಷಣವನ್ನು ನಾಗಮಂಗಲ, ದೊಡ್ಡಬಳ್ಳಾಪುರದಲ್ಲಿ ಮುಗಿಸಿದ ನಾಗೇಂದ್ರ ಪ್ರಸಾದ್, ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು. ನಾಟಕ ಹಾಗೂ ರಂಗಭೂಮಿಯ ನಂಟು ಕುಟುಂಬದಲ್ಲಿ ಹರಿದು ಬಂದಿತ್ತು. ಇವರ ತಾತ ವೆಂಕಟಸುಬ್ಬಯ್ಯನವರು ಪ್ರಸಿದ್ಧ ನಾಟಕಕಾರರಾಗಿದ್ದರು. ಹೈಸ್ಕೂಲಿನಲ್ಲಿದ್ದಾಗಲೇ ಇವರು ಬರೆದ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. 

ನಾಗೇಂದ್ರ ಪ್ರಸಾದ್ ನಾಟಕಗಳಲ್ಲಿನ ಆಸಕ್ತಯಿಂದ ಅಭಿನಯ ತರಂಗ ನಾಟಕಶಾಲೆಯಲ್ಲಿ ಡಿಪ್ಲೋಮಾ ಮುಗಿಸಿದರು. ಹಲವು ನೂರು ಬೀದಿ ನಾಟಕಗಳಲ್ಲಿ ಅಭಿನಯಿಸಿದ ಪ್ರಸಾದರು ಹತ್ತಾರು ಬೀದಿ ನಾಟಕಗಳನ್ನು ರಚಿಸಿದ್ದಾರೆ. ಹಾಗೆಯೇ ಅನೇಕ ರೇಡಿಯೋ ನಾಟಕಗಳ ರಚನೆ ಮತ್ತು ನಿರ್ದೇಶನವನ್ನೂ ಮಾಡಿದ್ದಾರೆ.

ನಾಗೇಂದ್ರ ಪ್ರಸಾದ್ ಚಿತ್ರರಂಗಕ್ಕೆ ಬರುವ ಮುನ್ನ ಆಯುರ್ವೇದ ವೈದ್ಯ ಪದ್ದತಿ ವ್ಯಾಸಂಗ ಮಾಡಿ ಬೆಂಗಳೂರಿನ ಕುರುಬರಹಳ್ಳಿಯಲ್ಲಿ 'ಭಾವನಾ ಆಯುರ್ವೇದಿಕ್ ಸೆಂಟರ್’ ನಡೆಸುತ್ತಿದ್ದರು.

1999ರಲ್ಲಿ ಕೆ. ವಿ. ಜಯರಾಮ್ ನಿರ್ದೇಶನದ 'ಗಾಜಿನ ಮನೆ' ಚಿತ್ರದ ಮೂಲಕ 'ಬೇವು ಬೆಲ್ಲ ಹಂಚಿಕೊಂಡೆ' ಗೀತೆ ಮೂಲಕ ಸಿನಿಮಾರಂಗ ಪ್ರವೇಶಿಸಿದ ನಾಗೇಂದ್ರ ಪ್ರಸಾದ್ ನಿರಂತರವಾಗಿ ಇಂದೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.    1000ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಲವು ಸಹಸ್ರ ಹಾಡುಗಳನ್ನು ಬರೆದಿದ್ದಾರೆ. ಶ್ರೀ ಮಂಜುನಾಥ, ಸ್ವಾತಿಮುತ್ತು, ಶಿವಲಿಂಗ ಸಿನಿಮಾ ಸೇರಿದಂತೆ 20ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ.   ಅಂಬಿ, ಶಿಷ್ಯ, ಗೂಗಲ್ ಮುಂತಾದ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ನಲ್ಲ' ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಭಕ್ತಿಗೀತೆ, ದೇಶಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ, ಧಾರಾವಾಹಿಗಳಿಗೆ ಗೀತೆ ಹೀಗೆ ಎಲ್ಲೆಡೆ ವ್ಯಾಪಿಸಿದ್ದಾರೆ. ನಾಗೇಂದ್ರ ಪ್ರಸಾದ್ ತಮ್ಮ ಗೀತೆಗಳ ಹಿಂದೆ "ವರಕವಿ ಬೇಂದ್ರೆಯವರ ಪ್ರಭಾವವಿದೆ, ಸುಶ್ರಾವ್ಯ ಗೀತೆ ಬರೆಯೋದು ಅಂದ್ರೆ ನನಗಿಷ್ಟ” ಎನ್ನುತ್ತಾರೆ. 

ಕನ್ನಡ ಚಿತ್ರನಿರ್ದೇಶಕರ ಸಂಘದ ಕಾರ್ಯದರ್ಶಿಯಾಗಿ,  ಹೊಸಪ್ರತಿಭೆಗಳಿಗೆ ಚಿತ್ರನಿರ್ದೇಶನ ತರಬೇತುದಾರರಾಗಿ ಹೀಗೆ ಹಲವು ರೀತಿಯಲ್ಲಿಯೂ ನಾಗೇಂದ್ರ ಪ್ರಾಸಾದ್ ಅವರ ಸೇವೆ ಸಂದಿದೆ. 'ಕನ್ನಡ ಮಾಣಿಕ್ಯ' ಎಂಬ ಮಾಸಿಕ ಪತ್ರಿಕೆಯ ಮುಖ್ಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ನಾಗೇಂದ್ರ ಪ್ರಸಾದ್, 'ಸತ್ಯ' ಚಿತ್ರದ 'ಹುಟ್ಟು ಎರಡಕ್ಷರ...' ಹಾಡಿಗೆ ರಾಜ್ಯ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವ ಮತ್ತು ಜನಪ್ರಿಯತೆಗಳಿಗೆ ಭಾಜನರಾಗಿದ್ದಾರೆ.‍

ನಿರಂತರ ವ್ಯಾಸಂಗಾಸಕ್ತರಾದ ನಾಗೇಂದ್ರ ಪ್ರಸಾದ್ ಇತ್ತೀಚಿನ ವರ್ಷದಲ್ಲಿ "ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ" ಎಂಬ ಪ್ರಬಂಧ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ  ಡಿ.ಲಿಟ್ ಗೌರವ ಗಳಿಸಿದ್ದಾರೆ.  

On the birthday of our lyricist V. Nagendra Prasad 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ