ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಘವ ನಂಬಿಯಾರ್


 ರಾಘವ ನಂಬಿಯಾರ್

ಡಾ. ಕೆ. ಎಂ. ರಾಘವ ನಂಬಿಯಾರ್ ಯಕ್ಷಗಾನದ ತೆಂಕು, ಬಡಗುತಿಟ್ಟುಗಳು ಬಗ್ಗೆ ಅಧಿಕೃತ ವಕ್ತಾರರೆಂಬ ಪ್ರಸಿದ್ಧಿ ಗಳಿಸಿದ್ದಾರೆ.

ರಾಘವ ನಂಬಿಯಾರ್‌ 1946ರ ಡಿಸೆಂಬರ್ 7ರಂದು ಕೇರಳದ ಕಣ್ಣಾನೂರಿನ ಬಳಿಯ ರಾಮಂತಳಿಯಲ್ಲಿ ಜನಿಸಿದರು. ತಂದೆ ಶ್ರೀಕಂಠ ಪಂಡಿತರು. ತಾಯಿ ಪಾರ್ವತಿ ಅಮ್ಮ. ರಾಘವ ನಂಬಿಯಾರ್‌ ಅವರು ಹುಟ್ಟಿದ್ದು ಕೇರಳದಲ್ಲಾದರೂ ಬೆಳೆದದ್ದೆಲ್ಲಾ ಕರ್ನಾಟಕದಲ್ಲೇ. ಕಾರ್ಕಳದ ಪ್ರಾಥಮಿಕ ಶಾಲೆ, ಭುವನೇಂದ್ರ ಹೈಸ್ಕೂಲು, ಭುವನೇಂದ್ರ ಕಾಲೇಜುಗಳಲ್ಲಿ ಇವರ ವಿಧ್ಯಾಭ್ಯಾಸ ನಡೆಯಿತು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಎಂ.ಎ. ಪದವಿ ಪಡೆದರು. “ಕರಾವಳಿಯ ಯಕ್ಷಗಾನದ ಹಿಮ್ಮೇಳ: ಒಂದು ಸಮಗ್ರ ಅಧ್ಯಯನ” ಮಹಾ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಗಳಿಸಿದರು. 

ರಾಘವ ನಂಬಿಯಾರ್‌ 1971ರಿಂದ 2001 ರವರೆಗೆ ಉದ್ಯೋಗಕ್ಕಾಗಿ ಪತ್ರಿಕೋದ್ಯಮ ಕ್ಷೇತ್ರವನ್ನೇ ಆಯ್ದುಕೊಂಡು ಉದಯವಾಣಿ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 

ರಾಘವ ನಂಬಿಯಾರ್‌ ತಮ್ಮ ಬಿಡುವಿನ ವೇಳೆಯನ್ನು ಯಕ್ಷಗಾನದ ಅಧ್ಯಯನ ಮತ್ತು ಪ್ರಯೋಗಶೀಲತೆ ಮೀಸಲಿಟ್ಟರು. ಕಾರ್ಕಳದ ವಿದ್ವಾನ್ ಪಿ. ವಾಮನ ಪ್ರಭುಗಳಿಂದ ಪ್ರಸಂಗಾಧ್ಯಯನ, ಛಂದಸ್ಸು, ಅರ್ಥಗಾರಿಕೆ; ಪಿ. ವಿಠಲ ಪ್ರಭುಗಳಿಂದ ತೆಂಕುತಿಟ್ಟುತಾಳ, ಮದ್ದಳೆ, ನುಡಿತ, ಹಾಡುಗಾರಿಕೆ; ಅಗರಿ ಶ್ರೀನಿವಾಸ ಭಾಗವತರು ಮತ್ತು ಬಲಿಪ ನಾರಾಯಣ ಭಾಗವತರಿಂದ ಹಾಡುಗಾರಿಕೆ; ಬಿ.ಗೋಪಾಲಕೃಷ್ಣ ಕುರುಪ್‌ರವರಿಂದ ಹಿಮ್ಮೇಳವಾದನದ ತಿದ್ದುಪಾಡು; ವಿದ್ವಾನ್ ಎನ್ ಸುಂದರ ಶೆಟ್ಟಿ ಮತ್ತು ಉರ್ವ ನಾರಾಯಣ ಶೆಟ್ಟಿ ಅವರಿಂದ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಹೀಗೆ ಹಲವಾರು ಮಂದಿ ವಿದ್ವಾಂಸರ ಮಾರ್ಗದರ್ಶನದಲ್ಲಿ ಯಕ್ಷಗಾನದ ವಿವಿಧ ಕ್ಷೇತ್ರಗಳಾದ ಅರ್ಥಗಾರಿಕೆ, ಹಾಡುಗಾರಿಕೆ, ಹಿಮ್ಮೇಳ ವಾದನ, ವೇಷಗಾರಿಕೆ, ಹೆಜ್ಜೆಗಾರಿಕೆ  ಸೇರಿದಂತೆ ಯಕ್ಷಗಾನದ ವಿವಿಧ ಮಜಲುಗಳಲ್ಲಿ ಪರಿಣತಿ ಸಾಧಿಸಿದರು. ಕಲಿತದ್ದಷ್ಟೇ ಅಲ್ಲದೆ 1995ರಲ್ಲಿ ‘ಯಕ್ಷ ಕೌಮುದಿ ಉಡುಪಿ’ ಎಂಬ ತಂಡ ಕಟ್ಟಿ ಗುರುಗಳಾದ ಹಿರಿಯಡಕ ಗೋಪಾಲರಾವ್ ಮತ್ತು ಗೋಪಾಲ ಕೃಷ್ಣ ಕುರುಪ್ ಅವರ ಸಹಾಕರದೊಂದಿಗೆ ತೆಂಕು ಮತ್ತು ಬಡಗುತಿಟ್ಟುಗಳ ಯಕ್ಷಗಾನ ಪ್ರಾಯೋಗಿಕ ಪ್ರದರ್ಶನಗಳನ್ನು ನೀಡಿದರು. 

ರಾಘವ ನಂಬಿಯಾರ್‌ ಅವರು 1980ರಿಂದ  ಹಲವಾರು ಯಕ್ಷಗಾನ ಕಮ್ಮಟಗಳಲ್ಲಿ ಪ್ರಬಂಧ, ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನೀಡುತ್ತಾ ಬಂದವರು. ನಿರಂತರ ಯಕ್ಷಗಾನ ಅಧ್ಯಯನದಲ್ಲಿ ತೊಡಗಿಕೊಂಡು ಹಲವಾರು ಯಕ್ಷಗಾನ ಸಂಬಂಧಿತ ಕೃತಿಗಳನ್ಹು ರಚಿಸಿದರು. 'ಮದ್ದಳೆಯ ಮಾಯಾಲೋಕ' - ಗುರು ಹಿರಿಯಡಕ ಗೋಪಾಲ ರಾಯರ ನೆನಪುಗಳ ಕಥನ, 'ವಿಲೋಕನ’ - ರಂಗದ ಸಮಗ್ರ ವಿಮರ್ಶೆ, ‘ತಿಳಿನೋಟ’ (ಸಂಶೋಧನೆ ಮತ್ತು ವಿಮರ್ಶಾ ಸಮಾಚಾರ); 'ದೀವಟಿಗೆ’ (ದೀವಳಿಗೆ ಬೆಳಕಿನ ಯಕ್ಷಗಾನದ ಪುನರುಜ್ಜೀವನ ಕಥನ); ‘ಚಿನ್ನದ ತಾಳ’ (ಭಾಗವತ ಗೋಪಾಡಿ ವಿಠಲ ಪಾಟೀಲರ ರಂಗಾನುಭವಗಳ ನಿರೂಪಣೆ); ‘ಹಿಮ್ಮೇಳ’ (ಯಕ್ಷಗಾನ ಅಧ್ಯಯನ ಗ್ರಂಥ); ‘ಮುಂದಲೆ’ (ಯಕ್ಷಗಾನ ವಿಮರ್ಶೆ); ‘ಯಾಜಿ ಭಾಗವತರು’ (ವ್ಯಕ್ತಿ ಚಿತ್ರಣ),  ಯಕ್ಷ ಸೇಚನ, ರಂಗಚಿಕಿತ್ಸೆ, ಆಶುವೈಖರಿ, ರಂಗವಿದ್ಯೆಯ ಹೊಲಬು, ದ್ರಾವಿಡ ನಾಡು-ನುಡಿ, ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಯುಕ್ತಿ (ಮೂಲ: ಡಾ. ಜಿ. ಫ್ರಾನ್ದಿಸ್ ಜ್ಸೇವಿಯರ್), ಮಹರ್ಷಿ ವಾಲ್ಮೀಕಿ, ರಾನಂ ಪ್ರಸಂಗ ಸಂಪುಟ, ಮಿದುಳಿನ ಶಕ್ತಿ ಹೆಚ್ಚಿಸುವ ಯುಕ್ತಿ ಮುಂತಾದ ಅನೇಕ ಮಹತ್ವದ ಕೃತಿಗಳು ಇವುಗಳಲ್ಲಿ ಸೇರಿವೆ. 

ರಾಘವ ನಂಬಿಯಾರ್ ಅವರಿಗೆ ಮೂರನೆಯ ಕಾರ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಲಲಿತ ಕೀರ್ತಿ ಯಕ್ಷಗಾನ ಮಂಡಲಿಯಿಂದ ಸನ್ಮಾನ, ಮುಂಬಯಿಯ ಡೊಂಬಿ ವಿಲಿಯ ‘ಕಲಾಜಗತ್ತು’ ಇವರಿಂದ ಸನ್ಮಾನ, ಕಾಂತಾವರ ಕನ್ನಡ ಸಂಘದಿಂದ ಸನ್ಮಾನ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ಗೌರವ, ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಸಮ್ಮಾನ, ಯಕ್ಷಗಾನ ಫೆಲೋಷಿಪ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.  ಜೊತೆಗೆ ಇವರ ಕೃತಿಗಳಿಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ, ಜೀಶಂಪ ಪ್ರಶಸ್ತಿ, ಸದಾನಂದ ಪ್ರಶಸ್ತಿ ಮುಂತಾದ ಪ್ರಶಸ್ತಿಗಳೂ ಸಂದಿವೆ. ರಾಘವ ನಂಬಿಯಾರ್ ಅವರು ಇಂದಿಗೂ ಯಕ್ಷಗಾನದ ಕಾರ್ಯಕ್ರಮವೆಂದರೆ ಚಟುವಟಿಕೆಯಿಂದ ಭಾಗಿಯಾಗುತ್ತಾರೆ.

ಪೂಜ್ಯರೂ,  ಆತ್ಮೀಯ ಸರಳ ಸಹೃದಯರೂ ಆದ ರಾಘವ ನಂಬಿಯಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ. 

On the birthday of Great scholar of Yakshagana and writer Dr. K. M. Raghava Nambiar Sir 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ