ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಸೂಯಾ


 

ಅನಸೂಯಾ ರಾಮರೆಡ್ಡಿ


ಅನಸೂಯಾ ರಾಮರೆಡ್ಡಿ ಸುಪ್ರಸಿದ್ಧ ಕಾದಂಬರಿಗಾರ್ತಿ.

ಅನಸೂಯಾ ರಾಮರೆಡ್ಡಿ ಚಿತ್ರದುರ್ಗದ ಬಳಿಯ ತುರುವನೂರು ಎಂಬಲ್ಲಿ 1929ರ ಡಿಸೆಂಬರ್‌ 25ರಂದು ಜನಿಸಿದರು. ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಂ. ರಾಮರೆಡ್ಡಿ. ತಾಯಿ ಮಂಗಳಮ್ಮ. ಇವರ ಮನೆತನವೇ ಒಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಯಾವಾಗಲೂ ಮನೆಯಲ್ಲಿ ಕಾಂಗ್ರೆಸ್ ನೇತಾರರು ತುಂಬಿರುತ್ತಿದ್ದರು.  ಇದು ಬೆಳೆಯುತ್ತಿದ್ದ ಅನಸೂಯ ಅವರ ಮೇಲೂ ಪ್ರಭಾವ ಬೀರಿತು. ಬದುಕಿನುದ್ದಕ್ಕೂ ಗಾಂಧೀಜಿಯವರ ಆದರ್ಶಗಳನ್ನು ರೂಢಿಸಿಕೊಂಡರು.

ತುರುವನೂರು ಊರು ಚಿಕ್ಕದಾಗಿದ್ದರೂ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸರಳ ವಿವಾಹ, ಚರಕದಲ್ಲಿ ನೂಲುವುದು, ಕಾಂಗ್ರೆಸ್ ನಿಧಿ ಸಂಗ್ರಹ, ರಾಷ್ಟ್ರೀಯ ಸಮರ್ಪಣಾಭಾವ ಮುಂತಾದವುಗಳನ್ನು ಮೈಗೂಡಿಸಿಕೊಂಡಿದ್ದ ಊರಾಗಿತ್ತು. ಮನೆತನದ ಗಂಡಸರಿಗೆ ಸ್ವಾತಂತ್ರ್ಯ ಹೋರಾಟವೇ ಗುರಿಯಾಗಿದ್ದರೆ, ತಾಯಿ-ಅಜ್ಜಿ ಮುತ್ತಜ್ಜಿಯರಿಗೆ ಆಧ್ಯಾತ್ಮವೇ ಗುರಿಯಾಗಿತ್ತು. ಕವಿ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಅನಸೂಯಾ ಅವರಿಗೆ ಗುರುಗಳು. ಬೆಳಗೆರೆ ಜಾನಕಮ್ಮ ಇವರ ಸ್ನೇಹಿತೆ. ಇಂಥ ಪರಿಸರದಲ್ಲಿ ಬೆಳೆದ ಅನಸೂಯಾ ಅವರಿಗೆ ಓದಿನ ಗೀಳು ಹಿಡಿದು ಪುಸ್ತಕ ಹಿಡಿದು ಕುಳಿತರೆ ಮೈಮರೆತು ಬಿಡುತ್ತಿದ್ದರು. ವ್ಯಾಯಾಮ, ಯೋಗ, ಈಜು, ಸೈಕಲ್ ಸವಾರಿ, ಸಂಗೀತ, ಹಿಂದಿ, ಸಾಹಿತ್ಯ ಕೂಡ ಇವರಿಗೆ ಬಹುಪ್ರಿಯವಾದ ಹವ್ಯಾಸವಾಗಿತ್ತು. ಶಾಲೆಯ ಓದಿನ ಜೊತೆಗೆ ಮನೆ ಮೇಷ್ಟರಿಂದ ಹಿಂದಿ ಪರೀಕ್ಷೆಗೆ ಕುಳಿತು ರಾಷ್ಟ್ರಭಾಷಾ, ವಿಶಾರದ ಪರೀಕ್ಷೆಯಲ್ಲಿ ತೇರ್ಗಡೆಯಾದರು. 

ಅನಸೂಯಾ ರಾಮರೆಡ್ಡಿ ಅವರು ಮದುವೆಯ ನಂತರ ಹಿಂದಿಯ ಪ್ರವೀಣ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಂತೆ ಚಿತ್ರದುರ್ಗದ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕಿಯ ಹುದ್ದೆ ದೊರೆಯಿತು. ಮೈಸೂರಿನ ಮಹಾರಾಣಿ ಶಿಕ್ಷಕರ ತರಬೇತಿ ಶಾಲೆಯಿಂದ ಟಿ.ಸಿ.ಎಚ್. ಟ್ರೈನಿಂಗ್ ಮತ್ತು ಅಂಚೆ ಶಿಕ್ಷಣದ ಮೂಲಕ ಇಂಟರ್‌ಪಾಸು ಮಾಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪಡೆದರು. 

ಅನಸೂಯಾ ರಾಮರೆಡ್ಡಿ ಅವರ ಮೊದಲ ಕೃತಿ ಗುರುಗೋವಿಂದ ಸಿಂಹರ ಜೀವನ ಚರಿತ್ರೆ. ನಂತರ 1965ರಿಂದ 95ರ ಅವಧಿಯಲ್ಲಿ ಹದಿನೇಳು ಕಾದಂಬರಿಗಳನ್ನು ರಚಿಸಿದರು. ‘ದೇವಿಯ ದರ್ಶನ’ ಇವರ ಮೊದಲ ಕಾದಂಬರಿ. ನಂತರ ಬರೆದದ್ದು ‘ಮಮತೆಯ ಮಡಿಲು’. ಚಲನ ಚಿತ್ರ ನಿರ್ಮಾಪಕ ಚಂದೂಲಾಲ್ ಜೈನರಿಂದ ಚಲನ ಚಿತ್ರವಾಗಿ ತೆರೆಕಂಡು ಅಪಾರ ಜನಮೆಚ್ಚುಗೆ ಪಡೆಯಿತು. ನಂತರ ಬಂದ ಕಾದಂಬರಿಗಳು. ಕುಲದೀಪಕ, ಪ್ರತೀಕ್ಷೆ, ಈಚಲು ಮರ, ಹರಿಗೋಲು, ಬೆಳಕಿನಬಳ್ಳಿ, ಮಧುರತರಂಗ, ಮಂದಾನಿಲ, ಮೂರು ದಾರಿ, ಒಡೆದ ಹಾಲು, ಇದಿರುಗಾಳಿ, ಪಂಜರ, ಮಡಿಲ ಮೊಗ್ಗು, ತೆರೆಗಳು, ಸಂಭಾವಿತರು ಮತ್ತು ಅಂತ್ಯ. ‘ದಾರಿತೋರಿದ ದೇವಿಯರು ಮತ್ತು ಇತರ ಕಥೆಗಳು’ ಇವರ ಸಣ್ಣ ಕಥೆಗಳ ಸಂಗ್ರಹವಾದರೆ, ಹಿಂದಿಯ ಲೇಖಕ ಪ್ರೇಮ ಚಂದ್‌ರ ‘ಬಂಧಿಯ ಬಿಡುಗಡೆ ಮತ್ತು ಇತರ ಕಥೆಗಳು’ ಅನುವಾದಿತ ಕಥಾ ಸಂಕಲನ. ಇದಲ್ಲದೆ ಕುಟುಂಬ ಯೋಜನೆಯ ವಸ್ತುವನ್ನೊಳಗೊಂಡ ‘ಮನೆಗೆ ಮೂರು ಮಾಣಿಕ್ಯ’ ಮತ್ತು ‘ಮುತ್ತಿನ ಹಾಗೆ ಎರಡು’ ಎಂಬ ಎರಡು ನಾಟಕಗಳ ಜೊತೆಗೆ ಸುಮಾರು 30 ಕವಿತೆಗಳನ್ನು ರಚಿಸಿದ್ದರು. ‘ಮುತ್ತಿನ ಹಾಗೆ ಎರಡು’ ಎಂಬ ನಾಟಕವು 1875ರಲ್ಲಿ ಕರ್ನಾಟಕ ಸರಕಾರದ ಕುಟುಂಬ ಯೋಜನಾ ಇಲಾಖೆಯ ಪ್ರಥಮ ಬಹುಮಾನ ಪಡೆದ ಕೃತಿಯಾದರೆ ಪಂಜರ ಎಂಬ ಕಾದಂಬರಿಗೆ 1983ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾದತ್ತಿ ನಿಧಿ ಬಹುಮಾನ ದೊರೆಯಿತು. ‘ಪನ್ನ’ ಎಂಬ ನಾಟಕವು ಆಕಾಶವಾಣಿಯಿಂದ ಪ್ರಸಾರವಾದ ಜನಪ್ರಿಯ ನಾಟಕ. ಜಿ. ನಾರಾಯಣರವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಕರ್ನಾಟಕ ಲೇಖಕಿಯರ ಸಂಘವು ಲೇಖಕಿಯರ ಭೇಟಿಗೆ ವೇದಿಕೆ ಒದಗಿಸಿದಾಗ ಅನಸೂಯ ರಾಮರೆಡ್ಡಿಯವರೂ ಸಾಹಿತ್ಯದ ಬಗ್ಗೆ ಇದ್ದ ಕುತೂಹಲದಿಂದ, ಆಗುತ್ತಿರುವ ಬದಲಾವಣೆ ಗಮನಿಸಲು, ನಿರಂತರವಾಗಿ ಸಮಕಾಲೀನ ಲೇಖಕಿಯರನ್ನು ಭೇಟಿಯಾಗುತ್ತಿದ್ದರು.

ಅನಸೂಯಾ ರಾಮರೆಡ್ಡಿ ಅವರು 2000ದ ಸೆಪ್ಟೆಂಬರ್ 28ರಂದು ನಿಧನರಾದರು.

On the birth anniversary of Anasuya Ramareddy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ