ಆಶಾಪೂರ್ಣ ದೇವಿ
ಆಶಾಪೂರ್ಣ ದೇವಿ
ಜ್ಞಾನಪೀಠ ಪುರಸ್ಕೃತರಾದ ಆಶಾಪೂರ್ಣ ದೇವಿ ಕಳೆದ ಶತಮಾನದ ಮಹಾನ್ ಲೇಖಕಿ.
ಆಶಾಪೂರ್ಣ ದೇವಿ 1909ರ ಜನವರಿ 8ರಂದು ಉತ್ತರ ಕೋಲ್ಕತ್ತಾದಲ್ಲಿ ಜನಿಸಿದರು. ಅವರ ಬಾಲ್ಯವು ಅತ್ಯಂತ ಸಂಪ್ರದಾಯವಾದಿ ಕುಟುಂಬದಲ್ಲಿ ಕಳೆಯಿತು. ಮನೆಯ ಹೆಣ್ಣು ಮಕ್ಕಳನ್ನು ಶಾಲೆಗೆ ಹೋಗಲು ಬಿಡುತ್ತಿರಲಿಲ್ಲ. ಖಾಸಗಿ ಶಿಕ್ಷಕರನ್ನು ಹುಡುಗರಿಗೆ ಮಾತ್ರ ನೇಮಿಸಲಾಗುತ್ತಿತ್ತು. ಮಗುವಾಗಿದ್ದಾಗ ಆಶಾಪೂರ್ಣ ದೇವಿ ತನ್ನ ಸಹೋದರರ ಎದುರು ಕುಳಿತು ಅವರು ಓದನ್ನು ಕೇಳುತ್ತಲೇ ಅಕ್ಷರಗಳನ್ನು ಕಲಿತರಂತೆ. ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದಿದ್ದರೂ, ಅವರು ಸ್ವಯಂ ಶಿಕ್ಷಣವನ್ನು ಹೊಂದಿದರು.
ಆಶಾಪೂರ್ಣ ಅವರ ತಂದೆ ಹರೇಂದ್ರ ನಾಥ್ ಗುಪ್ತಾ ಆ ಕಾಲದ ಪ್ರಸಿದ್ಧ ಕಲಾವಿದರಾಗಿದ್ದರು. ಅವರು ಪ್ರಸಿದ್ಧ ಪೀಠೋಪಕರಣ ಸಂಸ್ಥೆಯಾದ ಸಿ. ಲಾಜರಸ್ ಅಂಡ್ ಕಂಪನಿಯಲ್ಲಿ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಆಶಾಪೂರ್ಣ ಅವರ ತಾಯಿ ಸರೋಲಾ ಸುಂದರಿ ಅವರು ಮಹಾನ್ ಪುಸ್ತಕ ಪ್ರೇಮಿಯಾಗಿದ್ದರು. ಇದೇ ಪುಸ್ತಕ ಪ್ರೇಮ ಆಶಾಪೂರ್ಣ ಮತ್ತು ಅವರ ಸಹೋದರಿಯರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಮೂಡಿ ಕ್ಲಾಸಿಕ್ ಕೃತಿಗಳನ್ನೂ, ಕಥೆ ಪುಸ್ತಕಗಳನ್ನೂ ಓದುವ ತೀವ್ರ ಚಟವಾಗಿ ಮೂಡಿತು.
ಮನೆಯಲ್ಲಿ ಸ್ಥಳದ ಕೊರತೆಯಿಂದಾಗಿ ಹರೇಂದ್ರ ನಾಥ್ ಅವರು ತಮ್ಮ ಕುಟುಂಬವನ್ನು ಪ್ರಫುಲ್ಲ ಚಂದ್ರ ರಸ್ತೆಯಲ್ಲಿನ ವಿಸ್ತಾರವಾದ ಮನೆಗೆ ಸ್ಥಳಾಂತರಿಸಿದರು. ಇದು ಅವರ ಪತ್ನಿ ಸರೋಲಾ ಸುಂದರಿ ಮತ್ತು ಅವರ ಹೆಣ್ಣುಮಕ್ಕಳಿಗೆ ಅವರ ಹೃದಯದ ಇಚ್ಛೆಗೆ ಅನುಗುಣವಾಗಿ ಓದುವ ಸ್ವಾತಂತ್ರ್ಯವನ್ನು ಒದಗಿಸಿತು. ಸರೋಲಾ ಸುಂದರಿಯವರ ಓದುವ ಪ್ರಚಂಡ ಪ್ರಚೋದನೆಯನ್ನು ಪೂರೈಸಲು ಆ ಕಾಲದ ಗ್ರಂಥಾಲಯಗಳಿಂದ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ನಿರಂತರ ಹರಿವು ಇತ್ತು. ಚಿಕ್ಕಂದಿನಿಂದಲೂ ಹೆಣ್ಣುಮಕ್ಕಳಿಗೆ ಬಿಡುವಿನ ಕೊರತೆಯಿಲ್ಲದ ಕಾರಣ ಮತ್ತು ವಯಸ್ಕರ ಪುಸ್ತಕಗಳನ್ನು ಓದಲು ಅಡ್ಡಿಯಿಲ್ಲದ ಕಾರಣ, ಆಶಾಪೂರ್ಣ ದೇವಿ ಮತ್ತು ಅವರ ಸಹೋದರಿಯರು ಪುಸ್ತಕಗಳೊಂದಿಗೆ ಸವಿಯಾದ ಪ್ರೀತಿ-ಸಂಬಂಧವನ್ನು ನಿರ್ಮಿಸಿಕೊಂಡರು. ಈ ಸಹೋದರಿಯರು ಕವಿತೆಗಳನ್ನು ರಚಿಸುವುದರಲ್ಲಿ ಮತ್ತು ಓದುವುದರಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದರು.
ಆಶಾಪೂರ್ಣ ದೇವಿ 1922ರಲ್ಲಿ 'ಶಿಶು ಸತಿ' ನಿಯತಕಾಲಿಕಕ್ಕೆ ರಹಸ್ಯವಾಗಿ ಕವಿತೆಯೊಂದನ್ನು ಕಳಿಸಿದರು. ಆಗಿನ್ನೂ ಹದಿಮೂರು ವರ್ಷವರಾಗಿದ್ದ ಇವರ "ಬೈರೆರ್ ದಕ್" (ಹೊರಗಿನ ಕರೆ) ಕವಿತೆ ಪ್ರಕಟವಾಯಿತು. ಆ ಪತ್ರಿಕೆಯ ಸಂಪಾದಕರಾಗಿದ್ದ ರಾಜಕುಮಾರ ಚಕ್ರವರ್ತಿ ಈಕೆಯಲ್ಲಿರುವ ಪ್ರತಿಭೆಯನ್ನು ಮನಗಂಡು
ಹೆಚ್ಚು ಹೆಚ್ಚು ಕಥೆ ಕವಿತೆಗಳನ್ನು ಕಳುಹಿಸುವಂತೆ ಪತ್ರ ಬರೆದರು. ಹೀಗೆ ಆಶಾಪೂರ್ಣ ದೇವಿ ಅವರ ಬರಹ ದಿನದಿಂದ ದಿನಕ್ಕೆ ಪ್ರವರ್ಧಮಾನವಾಗುತ್ತ ಸಾಗಿತು.
ಆಶಾಪೂರ್ಣ ದೇವಿ ಅವರು ಮೊದ ಮೊದಲು ಮಕ್ಕಳಿಗಾಗಿ ಮಾತ್ರ ಬರೆದರು. ಇವರ 'ಛೋಟೋ ಠಾಕುರ್ದಾರ್ ಕಾಶಿ ಯಾತ್ರೆ' (ಗ್ರೇಟ್ ಅಂಕಲ್ ವಾರಣಾಸಿಗೆ ಹೋಗುತ್ತಾರೆ) 1938ರಲ್ಲಿ ಪುಸ್ತಕವಾಗಿ ಪ್ರಕಟಗೊಂಡಿತು. 1936ರಲ್ಲಿ ಆನಂದ ಬಜಾರ್ ಪತ್ರಿಕೆಯ ಪೂಜಾ ಸಂಚಿಕೆಯಲ್ಲಿ ಪ್ರಕಟವಾದ "ಪತ್ನಿ ಓ ಪ್ರೇಯೋಷಿ" ಇವರು ಮೊದಲು ವಯಸ್ಕರಿಗಾಗಿ ಬರೆದ ಕಥೆ. 1944 ರಲ್ಲಿ ಪ್ರಕಟವಾದ 'ಪ್ರೇಮ್ ಓ ಪ್ರಾಯೋಜನ್' ಇವರ ಮೊದಲ ಕಾದಂಬರಿ. ಅವರ ಶ್ರೇಷ್ಠ ಕೃತಿಗಳೆಂದು ಪರಿಗಣಿತವಾಗಿರುವ, ಟ್ರೈಲಾಜಿ ಪ್ರಥಮ್ ಪ್ರತಿಶ್ರುತಿ (1964), ಸುಬರ್ನೋಲತಾ (1967) ಮತ್ತು ಬಕುಲ್ ಕಥಾ (1974), ಸಮಾನ ಹಕ್ಕುಗಳನ್ನು ಸಾಧಿಸಲು ಮಹಿಳೆಯರು ನಡೆಸಬೇಕಾದ ಅಂತ್ಯವಿಲ್ಲದ ಹೋರಾಟವನ್ನು ಸಂಕೇತಿಸುತ್ತವೆ. ಮಿಂಟ್ ಪತ್ರಿಕೆಯಲ್ಲಿ ಬರೆದ ಸೋಮಕ್ ಘೋಷಾಲ್ ಅವರ ಪ್ರಕಾರ "ಆಶಾಪೂರ್ಣ ದೇವಿ ಅವರು ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಪರಿಸ್ಥಿತಿಗಳಿಂದ ಕ್ಲಾಸ್ಟ್ರೋಫೋಬಿಕ್ನಿಂದ ನಿರ್ಬಂಧಿಸಲ್ಪಟ್ಟಿರುವ ಮಹಿಳೆಯರು ಮತ್ತು ಪುರುಷರ ಬಗ್ಗೆ ಸಮರ್ಥವಾಗಿ
ಬರೆದಿದ್ದಾರೆ."
ಆಶಾಪೂರ್ಣ ದೇವಿ ಅವರಿಗೆ ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ; ಜಬಲ್ಪುರ್, ರವೀಂದ್ರ ಭಾರತಿ, ಬುರ್ದ್ವಾನ್ ಮತ್ತು ಜಾದವ್ಪುರ ವಿಶ್ವವಿದ್ಯಾಲಯಗಳಿಂದ ಡಿ.ಲಿಟ್ ಗೌರವ; ವಿಶ್ವ ಭಾರತಿ ವಿಶ್ವವಿದ್ಯಾನಿಲಯದ ದೇಶಿಕೋತ್ತಮ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು. ಕೇಂದ್ರ ಸಾಹಿತ್ಯ ಅಕಾಡೆಮಿಯು 1994ರಲ್ಲಿ ತನ್ನ ಅತ್ಯುನ್ನತ ಗೌರವವಾದ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಅನ್ನು ನೀಡಿತು.
ಆಶಾಪೂರ್ಣ ದೇವಿಯವರು 1995ರ ಜುಲೈ 13ರಂದು ನಿಧನರಾದರು. 2009 ರಲ್ಲಿ ದೂರದರ್ಶನ ಅವರ ಬಗ್ಗೆ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತು. ಅವರ 101ನೇ ಹುಟ್ಟುಹಬ್ಬದ ಸ್ಮರಣಾರ್ಥ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Ashapurna Devi
ಕಾಮೆಂಟ್ಗಳು