ಭಾರತಕಥಾಮಂಜರಿ17
ಧಾಳಿಯಲಿ ಬಂದರಿಬಲದ ಹೆ
ಚ್ಚಾಳುತನವನು ಮುರಿದು ಸಂಧಿಯ
ಮೇಲೆ ಧರ್ಮಜ ಬಂದು ಹೊಕ್ಕನು ಹಸ್ತಿನಾಪುರವ
-----
ಕೇಳು ಜನಮೇಜಯ ನೃಪತಿ ಪಾಂ
ಚಾಲಸುತೆಯ ವಿವಾಹ ವಾರ್ತೆಯ
ಕೇಳಿದರಲೈ ಕೌರವರು ಮರುಗಿದರು ಮರುಕೊಳಿಸಿ
ಆಳ ನೆರಹಿದರಖಿಳದಳ ದೆ
ಖ್ಖಾಳವನು ನೋಡಿದರು ಭೂಮೀ
ಪಾಲಸಂಕುಲ ಸಹಿತ ಬಂದರು ದ್ರುಪದ ಪುರಿಗಾಗಿ ೧
ಏನ ಹೇಳುವೆ ನಿನ್ನವರ ಜಯ
ಮಾನವನು ಮತ್ತೊಂದು ಪೈಕದ
ಮಾನಭಂಗ ಸ್ಥಿತಿಯನೆಲೆ ಜನಮೇಜಯಜಕ್ಷಿತಿಪ
ಭಾನುವಿನ ಮಂಜಿನ ಶಿಲೋಚ್ಚಯ
ಸಾನುವಿನ ವಜ್ರದ ತರಕ್ಷುವ
ಧೇನುವಿನ ಹೋರಟೆಯ ಹವಣದು ಭೂಪ ಕೇಳೆಂದ ೨
ಮುರಿದುದಾ ಹೆಬ್ಬಲ ವಿಘಾತಿಯ
ಲೊರಗಿದರು ಪಟುಭಟರು ಗಜಹಯ
ದೊರತೆ ಬತ್ತಿತು ಭೀಮ ಪಾರ್ಥರ ಶರನಿದಾಘದಲಿ
ಉರುಕುಗೊಂಡರು ನಿಚ್ಚಟರು ಕೈ
ಮರೆದುದಾಚೆಯ ದೊರೆಗಳಿವದಿರು
ನೆರೆ ವಿಭಾಡಿಸೆ ತೆಗೆದು ಹಾಯ್ದರು ಹಸ್ತಿನಾಪುರಕೆ ೩
ಬಳಿಕ ಪಾಂಚಾಲಕನ ಭೀತಿಯ
ಮೊಳಕೆಯುರಿದುದು ಹರಿದುದುತ್ಸವ
ಜಲಧಿವಳಯದ ಭೂತಳಾಗ್ರದ ಭೂತಳೇಂದ್ರರಲಿ
ಹೊಳೆಹೊಳೆವ ರವಿರಶ್ಮಿಗಳ್ಪ್ರ
ಜ್ವಲಿಸುವಂತಿರೆ ಪಾಂಡುನಂದನ
ರಳವಿನುಬ್ಬಟೆ ಬಿಸಿಲು ನೆರೆ ಪಸರಿಸಿತು ದೆಸೆದೆಸೆಗೆ ೪
ಬಂದನಲ್ಲಿಗೆ ಸಕಲ ಯಾದವ
ವೃಂದ ಸಹಿತ ಮುರಾರಿ ಕುಂತೀ
ನಂದನರು ಬರಲಿದಿರುಗಣಿಸಿಕೊಂಡನುಚಿತದಲಿ
ತಂದ ಬಹುವಿಧ ವಸ್ತುಗಳ ತಾ
ನಂದು ಕೊಟ್ಟನು ಗಜರಥಾಶ್ವವ
ನಿಂದುವದನೆಯರಿಗೆ ವಿಚಿತ್ರಾಂಬರ ವಿಭೂಷಣವ ೫
ಮಗನೆ ಧರ್ಮಜ ಕೇಳು ಭೀಮಾ
ದಿಗಳೆ ಹರಿಯೆಮ್ಮಣ್ಣದೇವನ
ಮಗನು ಸೋದರಮಾವನಾತನು ನಿಮಗೆ ವಸುದೇವ
ವಿಗಡರೀ ಯಾದವ ನೃಪರು ಬಂ
ಧುಗಳು ನಿಮಗೆಂದೈವರನು ಕೈ
ನೆಗಹಿ ಕಮಲೋದರನ ಕೈಯಲಿ ಕೊಟ್ಟಳಾ ಕುಂತಿ ೬
ವನದೊಳಪಗತನಾದನಿವರ
ಯ್ಯನು ಕುಮಾರರ ಬಾಲ್ಯಕಾಲದೊ
ಳೆನಗೆ ರಕ್ಷಾಭಾರ ಬಿದ್ದುದು ಪತಿಪರೋಕ್ಷದಲಿ
ಇನಿಬರನು ಗಜಪುರಿಗೆ ಕೊಂಡೊ
ಯ್ದೆನು ಸುಯೋಧನನಿಂದ ವೈರವು
ಜನಿತವಾಯಿತು ಬಳಿಕ ಲಾಕ್ಷಾಭವನ ದಹನದಲಿ ೭
ಉರಿಯೊಳುಳಿದೆವು ನಿಮ್ಮ ಚರಣ
ಸ್ಮರಣ ಬಲದಲಿ ಬಹಳ ವಿಪಿನಾಂ
ತರದೊಳಗೆ ತೊಳಲಿದೆವು ಹೊರೆದೆವು ಸಾಯದೊಡಲುಗಳ
ಬರಬರಲು ತತ್ಸರ್ವ ದುಃಖೋ
ತ್ತರ ನಿವಾರಣ ದ್ರುಪದ ಕನ್ಯಾ
ವರಣ ನಿನ್ನೀಯಂಘ್ರಿದರುಶನವೆಂದಳಾ ಕುಂತಿ ೮
ದೇವಿ ಚಿತ್ತವಿಸೋಪಚಾರಕ
ಭಾವವೇ ಧರ್ಮಜನು ಭೀಮನು
ಭಾವನವರು ಧನಂಜಯಾದಿಗಳೆಮಗೆ ಮೈದುನರು
ಈ ಉಪಾಧಿ ಸ್ಥಳದೊಳಂತ
ರ್ಜೀವನವು ಪ್ರಾಣಾದಿ ವಾಯುಗ
ಳಾವು ನಿಮ್ಮೈವರಿಗೆ ಕಾರಣವೆಂದನಸುರಾರಿ ೯
ದ್ರುಪದ ಗುಡಿಗಟ್ಟಿದನು ಕುಂತಿಯ
ವಿಪುಳ ಹರುಷವನೇನನೆಂಬೆನು
ದ್ರುಪದ ಯದು ಪರಿವಾರವುಲಿದುದು ಜಲಧಿ ಘೋಷದಲಿ
ಅಪದೆಸೆಯ ಮುಗಿಲೊಡೆದು ಹೊಳೆ ಹೊಳೆ
ದು ಪರಿಚರ ರವಿಯಂತೆ ತತ್ಕ್ಷಣ
ವಿಪುಳ ತೇಜಃಪುಂಜರೆಸೆದರು ಪಾಂಡುನಂದನರು ೧೦
ಇದಿರೊಳವನಿಪ ಭೀಮನೆಡವಂ
ಕದಲಿ ಮಾದ್ರೀಸುತರು ಬಲವಂ
ಕದಲಿ ದೇವಕಿ ಕುಂತಿ ವಸುದೇವಾದಿ ಯದುನಿಕರ
ಮುದದಿಯೈವರ ರಮಣಿ ಬಲವಂ
ಕದಲಿ ಕರುಣಾಳುವಿನ ವಾಮಾಂ
ಕದಲಿ ಫಲುಗುಣನೊಪ್ಪೆ ಮೆರೆದನು ದಾನವಧ್ವಂಸಿ ೧೧
ಆವುದೋ ಧರ್ಮಜನ ಭೀಮನ
ಭಾವಶುದ್ಧಿ ಧನಂಜಯನ ಸುಕೃ
ತಾವಲಂಬನ ಸಾರವೆಂತುಟೊ ಶಿವಮಹಾದೇವ
ಠಾವುಗಾಣವು ವೇದವುಪನಿಷ
ದಾವಳಿಗಳೋಲೈಸಿ ಕೃಷ್ಣ ಕೃ
ಪಾವಿಲಾಸವ ನೋಡಿಯೆಂದುದು ಸಕಲ ಸುರನಿಕರ ೧೨
ಅರಸ ಚಿತ್ತೈಸಂದಿನೋಲಗ
ಹರಿದುದಾ ಹರಿಸೇನೆ ಬಿಟ್ಟುದು
ಪುರದ ಬಹಿರುದ್ಯಾನ ವೀಧಿಗಳೊಳಗೆ ಹರಹಿನಲಿ
ಕುರುನೃಪಾಲನ ಗುಪ್ತಚಾರರು
ಅರಿದರೀವಾರ್ತೆಯನು ಪುರದಲಿ
ಹರಹಿದರು ನೆರೆ ಕೇಳಿದನು ಧೃತರಾಷ್ಟ್ರನೀ ಹದನ ೧೩
ಕರೆಸಿದನು ಗಾಂಗೇಯ ಗೌತಮ
ಗುರು ಸುಯೋಧನ ಶಲ್ಯ ಸೈಂಧವ
ಗುರುತನುಜ ರಾಧೇಯ ವಿದುರ ಕಳಿಂಗ ಸೌಬಲರ
ಚರಮುಖಪ್ರತಿಪನ್ನ ಬಂಧುರ
ತರ ವಚೋವಿನ್ಯಾಸ ಕರ್ಣ
ಜ್ವರವೊ ಕರ್ಣಾಮೃತವೊ ಹೇಳಿರೆ ಎಂದನಂಧನೃಪ ೧೪
ಕೇಳಿರೈ ಹೇಳುವೆನು ಯಾದವ
ರಾಳು ಬಂದುದು ಗಡ ಜನಾರ್ದನ
ಕೋಳುವೋದನು ಗಡ ಯುಧಿಷ್ಠಿರ ಭೀಮ ಪಾರ್ಥರಿಗೆ
ಗಾಳಿ ಬೆಂಬಲವಾಗಲುರಿಯ ಛ
ಡಾಳವನು ನಿರ್ಣೈಸಬಹುದೆ ವಿ
ತಾಳಿಸಿತಲೈ ನಿಮ್ಮ ಗಾರುಡವೆಂದನಾ ನೃಪತಿ ೧೫
ಎನಲು ಘರ್ಜಿಸುತರಸ ಮುರರಿಪು
ಜಿನುಗಿದರೆ ಗಿರಿ ಜರಿವುದೇ ಯಮ
ತನುಜ ಭೀಮಾರ್ಜುನರು ಹಿಡಿದರೆ ಗಗನವಡಗುವುದೆ
ದನುಜರಿಪುವಿನೊಳೇನಹುದು ಬರ
ಲನಿಮಿಷರು ನೆರವಾಗಿ ರಣದಲಿ
ಜನಪ ನೋಡೆಂದರು ಜಯದ್ರಥ ಸೌಬಲಾದಿಗಳು ೧೬
ಕೊರತೆಯಲ್ಲಿದು ನಿನ್ನೆ ನಾವ್ಕಂ
ಡರಿದೆವಿವರತಿ ಬಲರು ಕೃಷ್ಣನ
ಬರಿಸಹಾಯದಲೇನು ಭೀಮಾರ್ಜುನರ ಬಲುಹೇನು
ನೆರವಣಿಗೆಯುಳ್ಳವರಲೈ ಹೊ
ಕ್ಕಿರಿದ ರಣ ಹಸಿಯಾರಿತೇ ನೀ
ವರಿಯಿರೇ ಭೂಪಾಲ ಎಂದನು ನಗುತ ಗಾಂಗೇಯ ೧೭
ಇವರ ಬಲುಹಂತಿರಲಿ ಸಾಕಿ
ನ್ನವರ ಕರೆಸು ವಿರೋಧ ಬಂಧ
ವ್ಯವಹೃತಿಗೆ ಫಲವಿಲ್ಲ ಮೂಲಚ್ಛೇದ ಕರ್ಮವಿದು
ಅವರು ಮುನ್ನತಿಬಲರು ಕೃಷ್ಣನ
ಹವಣ ನೀನೇ ಬಲ್ಲೆಯಿನ್ನೀ
ಸವಡಿ ಮಾರಿಯ ಸೋಕು ಲೇಸಲ್ಲೆಂದನಾ ಭೀಷ್ಮ ೧೮
ಕರೆಸು ವಿದುರನ ಕಳುಹಿ ವಾರಣ
ಪುರದ ರಾಜ್ಯವಿಭಾಗವನು ವಿ
ಸ್ತರಿಸಿಕೊಡು ಭಂಡಾರವನು ದಾಯಾದ ಮಾರ್ಗದಲಿ
ನರಯುಧಿಷ್ಠಿರ ಭೀಮರನು ನೀ
ಬರಿಸು ನಿಮ್ಮವಗುಣವ ನೋಡದೆ
ಬೆರಸಿಕೊಡುವೆವು ಕೂಡಿ ಬದುಕುವುದೆಂದನಾ ಭೀಷ್ಮ ೧೯
ಕರೆಸಿಕೊಡಿರೈ ನಿಮ್ಮ ಚಿತ್ತಕೆ
ಬರಿಸಿ ನಡೆಸುವೆನೆನ್ನ ಮಕ್ಕಳ
ದುರುಳತನದಿಂದಾದ ಹಿಂದಿನ ಮಕ್ಕಳಾಟಿಕೆಯ
ಮರೆದು ಕಳೆಯಲಿ ಪಾಂಡುನಂದನ
ರೆರವಿಗರೆ ಬಾ ವಿದುರ ಭೀಷ್ಮನ
ಪರಮ ಮತವೇ ನನ್ನ ಮತ ಹೋಗೆಂದ ಧೃತರಾಷ್ಟ್ರ ೨೦
ಕಳುಹಿದರು ವಿದುರನನು ಬುದ್ಧಿಯ
ಕಲಿಸಿ ಭೀಷ್ಮಾದಿಗಳು ಪಯಣದ
ಲಲಿತ ಸನ್ನಾಹದೊಳು ಪರುಠವಿಸಿದನು ಪಾವುಡವ
ಬಳಿಕ ಸುಮುಹೂರ್ತದಲಿ ವಿಪ್ರಾ
ವಳಿಗಳಾಶೀರ್ವಾದದಲಿ ಮಂ
ಗಳತೆ ಮಿಗಲೊಲವಿಂದ ಹಸ್ತಿನಪುರವ ಹೊರವಂಟ ೨೧
ಕೇಳು ಭೂಪತಿ ಹಲವು ಪಯಣದ
ಮೇಲೆ ಪಯಣ್ದಲೈದಿದನು ಪಾಂ
ಚಾಲ ಪುರವನು ಬಂದನರಮನೆಗಧಿಕ ಹರ್ಷದಲಿ
ಕೇಳಿದರು ಕೌಂತೇಯರೀತನ
ಲಾಲಿಸಿದರಿದಿರೈದಿ ತನು ಪುಳ
ಕಾಳಿಯಲಿ ಮೈಮುಳುಗೆ ತೆಗೆದಪ್ಪಿದರು ತಮತಮಗೆ ೨೨
ಕ್ಷೇಮವನು ಕುಶಲವನು ಬಂಧು
ಸ್ತೋಮದಲಿ ಕೇಳಿದರು ತಮ್ಮಯ
ಕ್ಷೇಮಕುಶಲವ ಹೇಳಿದರು ಪೂರ್ವಾಪರ ಸ್ಥಿತಿಯ
ಭೂಮಿಪತಿ ಚಿತ್ತೈಸು ಬಳಿಕಿನ
ರಾಮಣೀಯಕ ಯಾದವೇಂದ್ರ ಶಿ
ರೋಮಣಿಯ ಸಮ್ಮೇಳವನು ಹೇಳಿದರು ವಿದುರಂಗೆ ೨೩
ತಂದ ಪಾವುಡವನಿತವನು ಯಮ
ನಂದನಂಗೊಪ್ಪಿಸಿದ ದ್ರುಪದ ಮು
ಕುಂದ ಧೃಷ್ಟದ್ಯುಮ್ನ ಕಂದರ್ಪಾನಿರುದ್ಧರಿಗೆ
ತಂದ ವಸ್ತುವನಿತ್ತವನು ಸಾ
ನಂದದಲಿ ನೀಡಿದನು ನಗುತರ
ವಿಂದನಾಭನ ಪದಕೆ ಮೈಯಿಕ್ಕಿದನು ಹರುಷದಲಿ ೨೪
ತೆಗೆದು ತಕೈಸಿದನು ಭೀಷ್ಮಾ
ದಿಗಳ ಕುಶಲವ ಕೇಳಿದನು ನಸು
ನಗುತ ಮೈದಡವ್ವಿದನು ವಿದುರನನಾ ಕೃಪಾಜಲಧಿ
ವಿಗಡನಾ ಧೃತರಾಷ್ಟ್ರನೀ ಬಂ
ಧುಗಳ ನೆನೆವನೆ ಪಾಂಡುಸುತರಿಗೆ
ಸೊಗಸುವನೆ ನೀ ಬಂದೆ ಲೇಸಾಯ್ತೆಂದನಸುರಾರಿ ೨೫
ಕಳುಹಿದನು ಬಿಡಾರಕಾತನ
ಬಳಿಯ ಪರಿವಾರವನು ಮನ್ನಿಸಿ
ಬಳಿಕ ಮರುದಿನ ಮೇಳವಿಸಿದರು ಮಂತ್ರಶಾಲೆಯಲಿ
ತಿಳುಹಿದನು ಧೃತರಾಷ್ಟ್ರಭೀಷ್ಮರ
ಲಲಿತಮತವನು ಬಂಧುವರ್ಗ
ಸ್ಖಲಿತವನು ಸೈರಿಸುವುದೆಂದನು ವಿನಯದಲಿ ವಿದುರ ೨೬
ಕರೆಸಿದನು ಧೃತರಾಷ್ಟ್ರನಾತನ
ಚರಣವನು ಕಾಂಬುದು ನದೀಸುತ
ಗುರುಕೃಪರು ನಿಮಗೊಳ್ಳಿದರು ನೀವಖಿಳ ರಾಜ್ಯದಲಿ
ಸರಿಯಕೊಂಬುದು ಸೇರುವಡೆ ಗಜ
ಪುರದೊಳಿಹುದಲ್ಲದೊಡೆ ನಿಮ್ಮಯ
ಪುರದಲಿರಿ ನೀವಾತ್ಮನಿರ್ಮಿತ ರಾಜಧಾನಿಯಲಿ ೨೭
ಮುರಹರನನಹುದೆನಿಸಿ ಭೂಮೀ
ಶ್ವರನ ಮೆಚ್ಚಿಸಿ ಭೀಮನನು ಮನ
ಬರಿಸಿ ಪಾರ್ಥನನೊಲಿಸಿ ಮಾದ್ರೀಸುತನನೊಡಬಡಿಸಿ
ಅರಸಿಗಭಿಮತವೆನಿಸಿ ಪಾಂಚಾ
ಲರಿಗೆ ಕಾರ್ಯವಿದೆನಿಸಿ ಕುಂತಿಗೆ
ಪರಮ ಹರುಷವ ರಚಿಸಿ ನುಡಿದನು ಸಂಧಿಯನು ವಿದುರ ೨೮
ಕದಡು ತಿಳಿದುದು ಕಾರ್ಯಗತಿಗಾ
ಸ್ಪದವ ಕೊಟ್ಟರು ಬಳಿಕ ಸುಮುಹೂ
ರ್ತದಲಿ ಪಯಣವ ಮಾಡಿದರು ಪಾಂಚಾಲದಳಸಹಿತ
ಯದು ಶಿರೋಮಣಿವೆರಸಿ ಬಹು ಪಯ
ಣದಲಿ ಬಂದರು ಮೇಲೆ ಕೌರವ
ರಿದಿರುಗೊಂಡರು ಕೂಡೆ ಹೊಕ್ಕರು ಹಸ್ತಿನಾಪುರವ ೨೯
ಬಂದು ಕಾಣಿಕೆಗೊಟ್ಟು ಗಂಗಾ
ನಂದನನ ಧೃತರಾಷ್ಟ್ರನನು ಸಾ
ನಂದದಲಿ ಗಾಂಧಾರಿಯನು ಗುರುಗೌತಮಾದಿಗಳ
ವಂದಿಸಿದರಿವರೈವರವರಾ
ನಂದಜಲ ಪರಿಲುಳಿತ ನಯನಾ
ಸ್ಪಂದ ಪರಿತೋಷದಲಿ ತೆಗೆದಪ್ಪಿದರು ಪಾಂಡವರ ೩೦
ಕರೆಸಿ ತನ್ನ ಕುಮಾರಕರ ನೂ
ರ್ವರನು ಕಾಣಿಸಿದನು ಪರಸ್ಪರ
ಪರಮ ಸಂಪ್ರೀತಿಗಳ ನಿಬಿಡಾಲಿಂಗನೋತ್ಸವದ
ದರುಶನೋಚಿತ ಮಾನ್ಯಮಾನ
ಸ್ಫುರಣದಲಿ ವಿಸ್ತರಿಸಿ ಸೈಂಧವ
ಗುರುತನುಜ ರಾಧೇಯ ಸೌಬಲರಪ್ಪಿದರು ನೃಪನ ೩೧
ಯಾದವರು ಪಾಂಚಾಲರಲಿ ಸಂ
ಪಾದಿಸಿದುದನ್ಯೋನ್ಯ ಘನ ಸಂ
ವಾದ ಸುಖ ಸಂಪ್ರೀತಿ ಮೆರೆಯಲ್ಕಿಷ್ಟಸತ್ಕಾರ
ಆದುದುತ್ಸವ ಜನಜನಿತ ಹರು
ಷೋದಧಿಯ ಹೊನಲಿನಲಿ ಹಿಂದಣ
ಭೇದ ಕರ್ದಮವಡಗಿ ಹೋಯ್ತವನೀಶ ಕೇಳೆಂದ ೩೨
ವೀತಭಯರನ್ಯೋನ್ಯ ಪರಮ
ಪ್ರೀತಿಗಳ ಬೆಳವಿಗೆಯಲಿದ್ದರು
ಭೂತಳಾಧಿಪರೈದು ಸಂವತ್ಸರಗಳೊಂದಾಗಿ
ಖ್ಯಾತವಿದು ಪಾಂಚಾಲಪುರದೊಳ
ತೀತವಾಯಿತ್ತೊಂದು ವರುಷವ
ಭೀತಿ ಧರ್ಮಸುತಂಗೆ ಮೂವತ್ತಾರು ಸಮಯವಾಯ್ತು
ಸಂಕ್ಷಿಪ್ತ ಭಾವ
ಧರ್ಮಜನು ತನ್ನವರೊಂದಿಗೆ ಹಸ್ತಿನಾಪುರಕ್ಕೆ ಮತ್ತೆ ಬಂದ ಪ್ರಸಂಗ ಇಲ್ಲಿದೆ.
ಕೌರವರು ದೊಡ್ಡ ಸೈನ್ಯದೊಂದಿಗೆ ಮತ್ತೆ ಪಾಂಚಾಲ ರಾಜ್ಯಕ್ಕೆ ಮುತ್ತಿಗೆ ಹಾಕಿದಾಗಭೀಮಾರ್ಜುನರು ಅವರನ್ನು ಹಿಮ್ಮೆಟ್ಟಿಸಿದರು. ನಂತರ ನಗರದಲ್ಲಿ ವಿವಾಹದ ಉತ್ಸವಗಳುನಡೆದವು. ಕೃಷ್ಣ ಅಲ್ಲಿಗೆ ಉಡುಗೊರೆಗಳೊಡನೆ ಬಂದನು.
ಕುಂತಿಯು ತನ್ನ ಮಕ್ಕಳಿಗೆ ಕೃಷ್ಣನನ್ನು ಪರಿಚಯಿಸಿದಳು. ಅದುವರೆಗೂ ತಾನು ಮತ್ತು ತನ್ನ ಮಕ್ಕಳುಪಟ್ಟ ಪಾಡನ್ನು ಕೃಷ್ಣನಲ್ಲಿ ವಿವರಿಸಿದಳು. ತನ್ನ ಮಕ್ಕಳನ್ನು ರಕ್ಷಿಸುವ ಹೊಣೆ ನಿನ್ನದು ಎಂದುಕೃಷ್ಣನಿಗೆ ಹೇಳಿದಳು.
ಗುಪ್ತಚರರಿಂದ ಇದೆಲ್ಲ ವಿವರಗಳು ಭೀಷ್ಮಾದಿಗಳಿಗೆ ತಿಳಿದವು. ಸಭೆಯನ್ನು ಸೇರಿಸಿ ಗಾಂಗೇಯನುಧೃತರಾಷ್ಟ್ರನಿಗೆ ತಿಳಿಹೇಳಿ ಪಾಂಡವರನ್ನು ಕರೆತರುವಂತೆ ಒಪ್ಪಿಸಿದನು. ಅವರಿಗೆ ಸಲ್ಲಬೇಕಾದರಾಜ್ಯವನ್ನು ಕೊಡಬೇಕು ಎಂದೂ ಹೇಳಿದನು. ಉಳಿದವರೂ ಅವನನ್ನು ಅನುಮೋದಿಸಿದರು. ಪಾಂಡವರನ್ನು ಕರೆತರಲು ವಿದುರನನ್ನು ಹೊರಡಿಸಿದರು.
ಉಡುಗೊರೆಗಳೊಂದಿಗೆ ಬಂದ ವಿದುರನನ್ನು ಕಂಡು ಎಲ್ಲರಿಗೂ ಸಂತಸವಾಯಿತು. ಪರಸ್ಪರರಕುಶಲ ಸಮಾಚಾರದ ಬಳಿಕ ಸಂಧಿಯ ವಿಷಯ ತಿಳಿಸಿದ ವಿದುರ. ಕೃಷ್ಣನನ್ನು ಕಂಡು ಅವನಲ್ಲಿಭಕ್ತಿರಸ ಉಕ್ಕಿತು.
ಎಲ್ಲರೂ ಹಸ್ತಿನಾಪುರಕ್ಕೆ ಬಂದರು. ಗುರು ಹಿರಿಯರೆಲ್ಲರಿಗೆ ನಮಿಸಿದರು. ಭೀಷ್ಮಾದಿಗಳು ಅವರನ್ನುಸ್ವಾಗತಿಸಿ ಪರಸ್ಪರ ಪ್ರೀತಿಯಿಂದ, ಸ್ನೇಹದಿಂದ ಇರುವಂತೆ ಒಡಂಬಡಿಸಿದರು. ಹೀಗೆ ಎಲ್ಲರೂಸುಖವಾಗಿ ಐದು ವರ್ಷಗಳನ್ನು ಕಳೆದರು. ಈ ಸಮಯಕ್ಕೆ ಧರ್ಮರಾಜನಿಗೆ ಮೂವತ್ತಾರುವರ್ಷಗಳಾಗಿದ್ದವು.
ಕಾಮೆಂಟ್ಗಳು