ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ32


 ದ್ಯೂತಕ್ಕೆ ಕುರಿಯಾಗಿ ಹೊರಟ ಧರ್ಮಜ
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಸಭಾ ಪರ್ವ-ಹನ್ನೆರಡನೆಯ ಸಂಧಿ


ಕಾಲ ಪಾಶಾಕರುಷದಲಿ ಭೂ
ಪಾಲನಿಂದ್ರಪ್ರಸ್ಥ ನಗರಿಯ
ಬೀಳುಕೊಂಡನು ಬಂದು ಹೊಕ್ಕನು ಹಸ್ತಿನಾಪುರವ

--

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆಮೊಗದ
ತಾಳಿಗೆಯ ನಿರ್ದ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜ ಮಂದಿರವ ೧

ಆರತಿಯ ಗಣಿಕೆಯರ ಸುಳಿವು
ಪ್ಪಾರತಿಯ ದಾದಿಯರ ಪಾಯವ
ಧಾರು ಸೂಳಾಯತರ ಮಂಗಳ ವಚನದೈದೆಯರ
ದೂರದಲಿ ನಿಲಿಸಿದನು ಭಂಗದ
ಭಾರಣೆಯ ಬಿಸುಸುಯ್ಲ ಸೂರೆಯ
ಸೈರಣೆಯ ಸೀವಟದ ಸಿರಿ ಮಂಚದಲಿ ಪವಡಿಸಿದ ೨

ಭಾನುಮತಿ ಬರೆ ಮುರಿದ ಮುಸುಕಿನ
ಮೌನಿ ನೂಕಿದನಿರುಳನುದಯದ
ನೂನ ಮಂಗಳ ಪಟಹ ಶಂಖಧ್ವನಿಯ ಮಾಣಿಸಿದ
ಭಾನುವಿಂಗರ್ಘ್ಯಾದಿ ಕೃತ್ಯವ
ನೇನುವನು ಮನ್ನಿಸದೆ ಚಿತ್ತದೊ
ಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ ೩

ಬೇಟೆ ನಿಂದುದು ಗಜ ತುರಗದೇ
ರಾಟ ಮಾದುದು ಕೇಳಮೇಳದ
ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತ ಮೊದಲಾದ
ನಾಟಕದ ಮೊಗರಂಬವೆನಿಪ ಕ
ವಾಟ ತೆರೆಯದು ಹೊಕ್ಕ ಸೂಯದ
ಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ ೪

ದ್ರೋಣ ಭೀಷ್ಮಾದಿಗಳು ಸಮಯವ
ಕಾಣರುಳಿದ ಪಸಾಯ್ತ ಸಚಿವ
ಶ್ರೇಣಿ ಬಾಗಿಲ ಹೊರಗೆ ನಿಂದುದು ಮತ್ತೆ ಮನೆಗಳಲಿ
ಕಾಣೆನೊಳಪೈಕದ ಸುವೇಣಿಯ
ರಾಣಿಯರ ದುರ್ಮನದ ಬೆಳಸಿನ
ಕೇಣಿಯನು ಕೈಕೊಂಡನೊಬ್ಬನೆ ಕೌರವರರಾಯ ೫

ಸಮಯವಿಲ್ಲೋರಂತೆ ಮೌನ
ಭ್ರಮೆಯ ಬಿಗುಹಿನ ಕೇರಿ ಕೇರಿಯ
ಕುಮತಿಗಳ ಗುಜುಗುಜಿನ ಗುಪ್ತದ ಮುಸುಕುಗೈದುಗಳ
ತಮ ತಮಗೆ ಬಿರುದುಗಳ ಗಣಿಕಾ
ರಮಣ ವೈರದ ಹೆಚ್ಚು ಕುಂದಿನ
ಸಮರ ಭಟರಿರಿದಾಡಿದರು ನಿರ್ನಾಮ ಭಾವದಲಿ ೬

ಸ್ತ್ರೈಣ ಚೇಷ್ಟಿತನೆಂದು ಕೆಲಬರು
ಕಾಣೆವರಸನನೆಂದು ಕೆಲರ
ಕ್ಷೀಣ ರೋಗಿತನೆಂದು ಕೆಲರು ವಿಷ ಪ್ರಯೋಗದಲಿ
ಪ್ರಾಣ ಶೋಷಿತನೆಂದು ಕೆಲಬರು
ಜಾಣಿನೂಹೆಯ ಜನದ ನೆನಹಿನ
ಸಾಣೆಯಲಿ ಸವೆಯಿತ್ತು ಕೌರವ ನೃಪನ ನಿರ್ದೇಶ ೭

ಅಕಟ ಕೌರವರಾಯ ರಾಜ
ನ್ಯಕ ಶಿರೋಮಣಿಯಿರಲು ಧರೆ ರಾ
ಜಕ ವಿಹೀನ ವಿಡಂಬವಾಯ್ತೇ ಶಿವಶಿವಾಯೆನುತ
ಸಕಲ ದಳ ನಾಯಕರು ಮಂತ್ರಿ
ಪ್ರಕರ ಚಿಂತಾಂಬುಧಿಯೊಳದ್ದಿರೆ
ಶಕುನಿ ಬಂದನು ಕೌರವೇಂದ್ರನ ರಾಜಮಂದಿರಕೆ ೮

ಕರೆದು ಬಾಗಿಲವರಿಗೆ ತನ್ನಯ
ಬರವನರುಹಿಸಲವರು ರಾಯನ
ಹೊರಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
ಅರಸ ಬಿನ್ನಹ ಮಾವದೇವರು
ದರುಶನಾರ್ಥಿಗಳೆನಲು ಮನದಲಿ
ಕುರು ನೃಪತಿ ಚಿಂತಿಸುತ ಬರಹೇಳೆಂದು ನೇಮಿಸಿದ ೯

ಹೊಕ್ಕನೀತನು ಕೌರವೇಂದ್ರನ
ನೆಕ್ಕಟಿಯೊಳಿರೆ ಕಂಡು ನುಡಿಸಿದ
ನಕ್ಕಜದ ರುಜೆಯೇನು ಮಾನಸವೋ ಶರೀರಜವೊ
ಮುಕ್ಕುಳಿಸಿ ಕೊಂಡಿರದಿರಾರಿಗೆ
ಸಿಕ್ಕಿದಿಯೊ ಸೀಮಂತಿನಿಯರಿಗೆ
ಮಕ್ಕಳಾಟಿಕೆ ಬೇಡ ನುಡಿ ಧೃತರಾಷ್ಟ್ರನಾಣೆಂದ ೧೦

ಮಾವ ನೀವ್ ಮರುಳಾದಿರೇ ನನ
ಗಾವ ರುಜೆಯಿಲ್ಲಂಗನೆಯರುಪ
ಜೀವಿಯೇ ನೀವರಿಯಿರೇ ಹಿಂದೀಸು ಕಾಲದಲಿ
ನೋವು ಬೇರಿಲ್ಲೆನಗೆ ನಿಳಯಕೆ
ನೀವು ಬಿಜಯಂಗೈವುದಂತ
ರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ ೧೧

ಏನು ನಿನ್ನಂತಸ್ಥ ಹೃದಯ ಕೃ
ಶಾನು ಸಂಭವವೇಕೆ ನುಡಿ ದು
ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ನೃಪನ
ಏನು ಭಯ ಬೇಡೆಂದೆನಲು ಯಮ
ಸೂನು ವೈಭವ ವಹ್ನಿದಗ್ಧ ಮ
ನೋನುಭಾವವನೇಕೆ ನುಡಿಸುವಿರೆಂದನಾ ಭೂಪ ೧೨

ಹೇಳು ಹೇಳೇನೇನು ಪಾಂಡು ನೃ
ಪಾಲ ಪುತ್ರರ ವಿಭವ ವಹ್ನಿ
ಜ್ವಾಲೆಯಲಿ ಮನ ಬೆಂದುದೇ ಹರಹರ ವಿಚಿತ್ರವಲ
ಪಾಲಕನು ಧರ್ಮಜನು ಸಲೆ ಕ
ಟ್ಟಾಳುಗಳು ಭೀಮಾರ್ಜುನರು ಬೆ
ಳ್ಳಾಳ ಹಬ್ಬುಗೆಯೈಸಲೇ ಪಾಂಡವರ ಸಿರಿಯೆಂದ ೧೩

ಅವರು ಪಿತ್ರಾರ್ಜಿತದ ರಾಜ್ಯ
ಪ್ರವರ ಪಾತ್ರರು ನಿನ್ನಸೂಯೆಯ
ಕವಲು ಮನದ ಕುಠಾರ ಬುದ್ಧಿಯ ಕಲುಷ ಭಾವನೆಯ
ವಿವರಣೆಯನವರೆತ್ತ ಬಲ್ಲರು
ಶಿವ ಶಿವಾ ಭುವನೈಕ ಮಾನ್ಯರ
ನವಗಡಿಸಲಂಗೈಸಿದೈ ಮಾಣೆಂದನಾ ಶಕುನಿ ೧೪

ಲೇಸು ಬಿಜಯಂಗೈಯಿ ನೀವೆ
ನ್ನಾಸರಾಗ್ನಿಯನೇಕೆ ಕೆಣಕುವಿ
ರಾಸುರವಿದೇಕೆನ್ನೊಡನೆ ಸೈರಿಸುವುದುಪಹತಿಯ
ಈಸು ನುಡಿವರೆ ಮಾವಯೆನುತ ಮ
ಹೀಶ ಕಂಬನಿದುಂಬಿ ನೆನಹಿನ
ಬೀಸರಕೆ ಬಿಸುಸುಯ್ದು ಧೊಪ್ಪನೆ ಕೆಡದನವನಿಯಲಿ ೧೫

ಎತ್ತಿದನು ಕಣ್ಣೆವೆಯ ಕಿರುವನಿ
ಮುತ್ತುಗಳ ಕೇವಣಿಯ ಶಕುನಿ ನೃ
ಪೋತ್ತಮನೆ ಬಾ ಕಂದ ಬಾಯೆಂದಪ್ಪಿ ಕೌರವನ
ಕಿತ್ತು ಬಿಸುಡುವೆನಹಿತರನು ನಿನ
ಗಿತ್ತೆನಿಂದ್ರಪ್ರಸ್ಥಪುರವನು
ಹೆತ್ತ ತಾಯ್ ಗಾಂಧಾರಿ ಸಂತೋಷಿಸಲಿ ಬಳಿಕೆಂದ ೧೬

ಮಾವ ಕೇಳತಿ ಬಲರು ಫಲಗುಣ
ಪಾವಮಾನಿಗಳೈವರಿಗೆ ತಾ
ಜೀವಸಖ ಗೋವಿಂದನನಿಬರ ಗೆಲವು ಗೋಚರವೆ
ಸಾವುದಲ್ಲದೆ ತನಗೆ ಬೇರಿ
ನ್ನಾವ ಪರಿಯಲಿ ಸಮತೆ ಸೇರದು
ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ ೧೭

ಗೆಲುವೆ ನಾನಂಜದಿರು ಪಾಂಡವ
ರಳವಳವ ನಾನರಿವೆ ನೃಪನ
ಗ್ಗಳದ ಧರ್ಮಜ್ಞನು ವಿಶೇಷ ದ್ಯೂತ ಲೋಲುಪನು
ಗೆಲುವ ಮೋಡಿಯನರಿಯನಾತನ
ನೆಲೆಯ ಬಲ್ಲೆನು ಜೂಜುಗಾರರ
ಕುಲಶಿರೋಮಣಿ ತಾನೆಯೆಂದನು ಶಕುನಿ ಕೌರವಗೆ ೧೮

ಕಪಟವನು ನೆರೆ ಮಾಡಿ ಜೂಜಿನೊ
ಳುಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸರರ ಕೈಕೊಳ್ಳದಿರು ನೀನೆಂದನಾ ಶಕುನಿ ೧೯

ಎನ್ನ ಬಹುಮಾನಾವಮಾನವು
ನಿನ್ನದೈಸಲೆ ಮಾವ ನೀ ಸಂ
ಪನ್ನ ಕೃತ್ರಿಮ ವಿದ್ಯನಾದರೆ ತೊಡಚು ಸಾಕದನು
ಅನ್ನಿಗರಿಗರುಹದಿರು ನಮ್ಮವ
ರೆನ್ನದಿರು ವಿದುರಾದಿಗಳನುಪ
ಪನ್ನ ಮಂತ್ರವನರುಹು ಬೊಪ್ಪಂಗೆಂದನವನೀಶ ೨೦

ನೀನರುಹು ನಿಮ್ಮಯ್ಯ ಮನಗೊ
ಟ್ಟಾ ನರೇಂದ್ರರ ಕರೆಸಿ ಕೊಟ್ಟರೆ
ಮಾನನಿಧಿಯೇ ಸಕಲ ಧರೆಯನು ಸೇರಿಸುವೆ ನಿನಗೆ
ನೀನೆ ಹೋಗಿಯೆ ನಿನ್ನ ಕಡು ದು
ಮ್ಮಾನವನು ಬೊಪ್ಪಂಗೆ ನುಡಿದರೆ
ತಾನೆ ಕರೆಸುವನರುಹುವೆನು ಜನಕಂಗೆ ನಿಜಮತವ ೨೧

ಅಹುದು ಬಳಿಕೇನೆನುತ ಬಂದನು
ಕುಹಕಮತಿ ಧೃತರಾಷ್ಟ್ರನರಮನೆ
ಗಿಹ ಸಮಯದಲಿ ಹೊಕ್ಕನಂದೇಕಾಂತ ಮಂದಿರವ
ಬಹಳ ಖೇದವ್ಯಸನದಲಿ ದು
ಸ್ಸಹ ಮನೋವ್ಯಥೆಯಲಿ ಕುಮಾರಕ
ನಿಹುದನರಿಯಿರೆ ನೀವೆನುತ ಬಿಸುಸುಯ್ದನಾ ಶಕುನಿ ೨೨

ಏನು ಶಕುನಿ ಮಗಂಗೆ ದುಗುಡವ
ದೇನು ಕಾರಣವಾರ ದೆಸೆಯಿಂ
ದೇನಸಾಧ್ಯವದೇನು ಭಯ ಮೇಣಾವುದಭಿಲಾಷೆ
ಏನುವನು ವಂಚಿಸದೆ ಹೇಳೆ
ನ್ನಾನೆಗೇಕೈ ಮರುಕವೆನೆ ನಿಜ
ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾ ಶಕುನಿ ೨೩

ಕರೆಸಿದನು ದುರಿಯೋಧನನನಾ
ದರಿಸಿ ಕಟ್ಟೇಕಾಂತದಲಿ ಮು
ವ್ವರು ವಿಚಾರಿಸಿದರು ನಿಜಾನ್ವಯ ಮೂಲ ನಾಶನವ
ಭರತಕುಲ ನಿರ್ವಾಹಕನೆ ಬಾ
ಕುರುಕುಲಾನ್ವಯದೀಪ ಬಾ ಎ
ನ್ನರಸ ಬಾ ಎನ್ನಾನೆ ಬಾಯೆಂದಪ್ಪಿದನು ಮಗನ ೨೪

ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧ ನೃಪ ೨೫

ಹೇಳಲೆಮ್ಮೆನು ನೀವು ಧರ್ಮದ
ಕೂಳಿಯಲಿ ಸಿಲುಕಿದವರೆನ್ನನು
ಖೂಳನೆಂಬಿರಿ ಕಷ್ಟನೆಂಬಿರಸೂಯನೆಂಬಿರಲೆ
ಸಾಲ ಭಂಜಿಕೆಯಾಯ್ತು ತನ್ನಯ
ಬಾಳಿಕೆಯ ಬೇಳಂಬವೇತಕೆ
ಕೇಳುವಿರಿ ನೀವೆಂದು ಸುಯ್ದನು ತುಂಬಿ ಕಂಬನಿಯ ೨೬

ಮುನಿಚರಿತ್ರರು ನೀವು ರಾಜಸ
ತನದ ಮದದಲಿ ಲೋಕ ಯಾತ್ರೆಯ
ನನುಸರಿಸುವವರಾವು ನೀವೇ ಭೋಗ ನಿಸ್ಪೃಹರು
ಅನುದಿವಸ ರಾಗಿಗಳು ನಾವೆ
ಮ್ಮನುಮತವ ಪಾಲಿಸುವರಾರೆಂ
ದೆನುತ ಸುಯ್ದನು ಮರುಗಿ ಬೈದನು ತನ್ನ ದುಷ್ಕೃತವ ೨೭

ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ವೈಸರವದೇನೆಂದು ಬೆಸಗೊಂಡನು ಸುಯೋಧನನ ೨೮

ಏನನೆಂಬೆನು ಬೊಪ್ಪ ಕುಂತೀ
ಸೂನುಗಳ ಸಾಮರ್ಥ್ಯ ಪಣವನು
ದಾನವಾರಿಯ ಹಾಸು ಹೊಕ್ಕಿನ ಸೌಖ್ಯಸಂಗತಿಯ
ತಾ ನಪುಂಸಕನಾದ ಪರಿಯನ
ದೇನ ವಿಸ್ತರಿಸುವೆನು ಲಜ್ಜಾ
ಮಾನಿನಿಗೆ ತನ್ನೊಕ್ಕತನವಿಂದಿಳಿದು ಹೋಯ್ತೆಂದ ೨೯

ನೆಗೆದ ಬುಗುಟದೆ ಹಣೆಯಲವರೋ
ಲಗದ ಸಭೆಯಲಿ ನನೆದ ಸೀರೆಯ
ತೆಗೆಸಿ ಕೊಟ್ಟರು ತಮ್ಮ ಮಡಿವರ್ಗದ ನವಾಂಬರವ
ಬೆಗಡುಗೊಳಿಸಿದರೆನ್ನನವರೋ
ಲಗದ ಸೂಳೆಯರವರ ಸೂಳಿನ
ನಗೆಯ ನೆನೆ ನೆನೆದೆನ್ನ ಮನ ಜರ್ಝರಿತವಾಯ್ತೆಂದ ೩೦

ಇದಕೆ ಕಾರಣವೇನು ಹಣೆ ನೊಂ
ದುದಕದೇನು ನಿಮಿತ್ತವೆನಲಾ
ಸದನದಲಿ ಮಯನಿತ್ತ ಸಭೆಯನು ದೇವರರಿಯಿರಲೆ
ಮುದದಿನಾ ಧರ್ಮಜನು ಘನ ಸಂ
ಪದದಲೋಲಗವಿತ್ತನಾ ದ್ರೌ
ಪದಿ ನಿಜಾನುಜ ಮಂತ್ರಿ ಸಚಿವ ಪಸಾಯಿತರು ಸಹಿತ ೩೧

ಆ ಮಹಾಸಭೆ ದೇವ ನಿರ್ಮಿತ
ರಾಮಣೀಯಕ ವಿವಿಧ ರತ್ನ
ಸ್ತೋಮ ತೇಜಃ ಪುಂಜ ಭಂಜಿತ ನಯನ ವೀಧಿಯಲಿ
ಸಾಮದಲಿ ನಮ್ಮನು ಯುಧಿಷ್ಠಿರ
ಭೂಮಿಪತಿ ಕರೆಸಿದನು ತನ್ನು
ದ್ದಾಮ ವಿಭವವನೆನಗೆ ತೋರಲು ತತ್ಸಭಾಸ್ಥಳಕೆ ೩೨

ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣಿಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ಷಿರಸಿದವರಾರೆನಲು ಮಣಿ ಬಂ
ಧುರದ ಬೆಳಗಿನ ಲಹರಿ ಮುರಿದುದು ತನ್ನ ಜಾಣುಮೆಯ ೩೩

ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕುಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕು ವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು ೩೪

ಹಿಡಿದವೆನ್ನೂಹೆಯಮ ಮಣಿ ರುಚಿ
ಯೆಡತರದೊಳಿಕ್ಕಿದವು ಭಿತ್ತಿಯ
ಬಿಡೆಯದಲಿ ಝಳುಪಿಸುವ ನೀಲದ ಲಳಿಯ ಲಹರಿಯಲಿ
ತಡಿಯ ಕಾಣೆನು ತಳಿತ ಕಾಂತಿಯ
ಕಡಲ ವಿಮಲ ಸ್ಫಟಿಕ ಜಲದಲಿ
ಮಿಡುಕಲಂಜಿದವಂಘ್ರಿಗಳು ನರನಾಥ ಕೇಳೆಂದ ೩೫

ಸ್ಥಳವೆ ಜಲರೂಪದಲಿ ಜಲವೇ
ಸ್ಥಳದ ಪಾಡಿನಲ್ಲಿದ್ದು ದದು ಕೆಲ
ಬಲನ ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು
ಹೊಳಹನೇ ಕಂಡೆನು ವಿವೇಕದ
ಕಳಿವು ಚಿತ್ತದ ಸೆರೆದುಹಾರದೊ
ಳಿಳಿದವಕ್ಷಿಗಳಿಂತು ಸೋತೆನು ತಂದೆ ಕೇಳೆಂದ ೩೬

ಮುಂದೆ ವಿಮಲಸ್ಫಟಿಕಭೂಮಿಯ
ದೊಂದು ಠಾವಿನೊಳೀಕ್ಷಿಸುತೆ ಕೊಳ
ನೆಂದು ಬಗೆದೆನು ನಿಂದು ಸಂವರಿಸಿದೆನು ಮುಂಜೆರೆಗ
ಅಂದು ದ್ರೌಪದಿ ಸಹಿತ ನಾರೀ
ವೃಂದ ಕೈಗಳ ಹೊಯ್ದು ಮಿಗೆ ಗೊ
ಲ್ಳೆಂದು ನಕ್ಕುದು ನೊಂದು ತಲೆವಾಗಿದೆನು ಲಜ್ಜೆಯಲಿ ೩೭

ಊಹೆಯಲಿ ತಡವರಿಸಿ ಹಜ್ಜೆಯ
ಗಾಹುಗತಕದೊಳಿಡುತ ಕಾಂತಿಯ
ಸೋಹೆಯರಿಯದೆ ಬೀದಿಯಲಿ ಕಂಡೆನು ಸರೋವರವ
ಆ ಹರಿಬವನು ಮುರಿವೆನೆಂದಿದ
ನೂಹಿಸದೆನಾ ಸ್ಫಟಿಕವೆಂದು
ತ್ಸಾಹಿಸಲು ನೀರಾಯ್ತು ನನೆದೆನು ನಾಭಿದಘ್ನದಲಿ ೩೮

ಮತ್ತೆ ಗೊಳ್ಳೆಂದುದು ನೃಪಾಲನ
ಮತ್ತ ಕಾಶಿನಿಯರು ಯುಧಿಷ್ಠಿರ
ನಿತ್ಯದಿವ್ಯ ದುಕೂಲವನು ತಡಿಗಡರಿ ತೊಡಚಿದೆನು
ಬತ್ತಿತೆನ್ನಭಿಮಾನ ಜಲನಿಧಿ
ಮತ್ತೆ ಮಾರಿಯ ಮಸಕವನು ನೀ
ವ್ಚಿತ್ತವಿಸಿರೇ ಬೊಪ್ಪಯೆಂದನು ಕೌರವರ ರಾಯ ೩೯

ನಂಬಿಸಿದುದೊಂದೆಡೆಯ ಬಾಗಿಲು
ಬಿಂಬಿಸಿತು ಭಿತ್ತಿಯಲಿ ತತ್ಪ್ರತಿ
ಬಿಂಬವೆಂದಾನರಿಯದೊಡ ಹಾಯಿದೆನು ಚೌಕಿಗೆಯ
ಎಂಬೆನೇನನು ಹೊರಳಿ ನಗುವ ನಿ
ತಂಬಿನಿಯರನು ಭೀಮ ಪಾರ್ಥರ
ಡಂಬರವ ಕಂಡಸುವ ಹಿಡಿದೆನು ನೋಡಿಕೊಳ್ಳೆಂದ ೪೦

ನೊಂದುದೇ ಹಣೆ ಮನದೊಳಗೆ ಕಡು
ನೊಂದೆನವದಿರ ನಗೆಗೆ ನಡೆದೆನು
ಮುಂದಣೋವರಿ ಬಾಗಿಲನು ಕಂಡೆನ್ನ ಮನದೊಳಗೆ
ಹಿಂದೆ ಹೇರಿದ ಭಂಗವೇ ಸಾ
ಕೆಂದು ಸುಪ್ರೌಢಿಯಲಿ ಬಾಗಿಲ
ನೊಂದು ಠಾವಿನೊಳರಸಿ ತಡವರಿಸಿದೆನು ಭಿತ್ತಿಗಳ ೪೧

ನಗೆಗೆ ನಗೆ ಕುಂಟಣಿ ವಿವೇಕದ
ಹೊಗೆಗೆ ಹೊಗೆ ಸಖಿಯಾದುದಲ್ಲಿಯ
ಹಗರಣಿಗ ನಾನಾದೆನದು ನೋಟಕದ ಜನವಾಯ್ತು
ನಗುವವರ ಜರೆದನೆ ಯುಧಿಷ್ಠಿರ
ನಗೆಯ ಮರೆದನೆ ಬೊಪ್ಪ ನಿಮ್ಮಯ
ಮಗನವಸ್ಥಾರೂಪವಿದು ಚಿತ್ತವಿಸಿ ನೀವೆಂದ ೪೨

ಒಡ್ಡವಿಸಿತೆನ್ನಾಟ ನಗೆಯೊಳ
ಗಡ್ಡ ಬಿದ್ದಳು ಪಾಂಡುಪುತ್ರರ
ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲಗುಣರು
ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ
ಬಡ್ಡಿಗಿನ್ನಕ ಬದುಕಿದೆನು ಧೃತರಾಷ್ಟ್ರ ಕೇಳೆಂದ ೪೩

ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ ೪೪

ಆ ಯುಧಿಷ್ಠಿರ ಸಹಿತ ನೀನೇ
ರಾಯನಾಗಿರು ಮೇಣು ನಮ್ಮೀ
ತಾಯಿ ಸಂತಸಬಡಲಿ ದುಶ್ಶಾಸನನ ಪಟ್ಟದಲಿ
ರಾಯತನವೆಮಗಿಂದ್ರ ಲೋಕದ
ಲಾಯದಲಿ ದಿಟವೆಂದು ನುಡಿವರು
ಜೋಯಿಸರು ಸಾಕವರ ವಚನ ನಿರರ್ಥವಲ್ಲೆಂದ ೪೫

ಪುರದಲೆಂಬತ್ತೆಂಟು ಸಾವಿರ
ಧರಣಿಯಮರರು ನಿತ್ಯ ಪಡೆಯುವ
ರರಸ ಕೇಳೈ ಹತ್ತು ಸಾವಿರ ಹೊನ್ನತಳಿಗೆಯಲಿ
ವರ ಯತೀಶರು ಹತ್ತು ಸಾವಿರ
ವರಮನೆಯಲುಂಬುದು ನೃಪಾಲಾ
ಧ್ವರದ ಸಿರಿಯನು ನೀವೆ ಕಂಡಿರೆಯೆಂದನಾ ಭೂಪ ೪೬

ಕೇಳಿದನು ಬಿಸುಸುಯ್ದ ನಕಟ ವಿ
ಕಾಳಿಸಿತೆ ಕೌರವನ ಬುದ್ಧಿ ವಿ
ಟಾಳ ಸಂಗತಿಯಾಯ್ತಲಾ ಪಿಸುಣಾರ ಕೆರಳಿಚದು
ಕೇಳು ಮಗನೇ ಧರ್ಮಪುತ್ರನ
ಮೇಲೆ ಮುನಿವರೆ ರಾಜಋಷಿ ನರ
ಪಾಲ ಮಾತ್ರವೆ ಶಿವ ಮಹಾದೇವೆಂದನಾ ಭೂಪ ೪೭

ಸತಿಯರಲಿ ನಿಮ್ಮವ್ವೆ ಸುಪತಿ
ವ್ರತೆ ಮಹಾಖಳ ನೀನು ಬೀಜ
ಸ್ಥಿತಿಯಲೂಣಯವಿಲ್ಲ ನಿನ್ನಯ ಬುದ್ಧಿ ದೋಷವಿದು
ಕೃತಕವೋ ಸಹಜವೋ ನವೀನ
ಸ್ಥಿತಿಯ ಕಂಡೆನು ಶಿವ ಶಿವಾ ದು
ರ್ಮತಿಗಳಾವುದ ನೆನೆಯರೆಂದನು ಸುಯ್ದು ಧೃತರಾಷ್ಟ್ರ ೪೮



ಪಾಂಡುವಿನ ಮಕ್ಕಳುಗಳಾರಾ
ಪಾಂಡುವಿನಲೆನ್ನಲ್ಲಿ ಭೇದವ
ಕಂಡೆಲಾ ನೀನವರಿಗೇನಪ್ರಾಪ್ತವೇ ಧರಣಿ
ಉಂಡು ಬದುಕುವ ಬಹಳ ಭಾಗ್ಯರ
ಕಂಡಸೂಯಂಬಡುವ ಖಡ್ಡರ
ಭಂಡರೆನ್ನದೆ ಲೋಕ ನಿನಗಿದು ಸಾಮ್ಯವಲ್ಲೆಂದ ೪೯

ಅಹುದು ಬೊಪ್ಪ ವೃತಾಭಿಮಾನದ
ಕುಹಕಿ ಹೋಗಲಿ ನಿಮ್ಮ ಚಿತ್ತಕೆ
ಬಹ ಕುಮಾರರ ಕೂಡಿ ನಡೆವುದು ಪಾಂಡು ನಂದನರ
ಮಹಿಯ ಹಂಗಿಂಗೋಸುಗವೆ ಬಿ
ನ್ನಹವ ಮಾಡಿದೆನೆನಗೆ ಭಂಡಿನ
ರಹಣಿ ಬಂದುದು ಸಾಕಲೇ ಸೊಗಸಾಯ್ತು ಲೇಸೆಂದ ೫೦

ತಾಯೆ ನೇಮವಗೊಂಡೆನಯ್ಯಂ
ಗಾ ಯುಧಿಷ್ಠಿರನಾತ್ಮಜನಲೇ
ವಾಯುಸುತ ನರ ನಕುಲ ಸಹದೇವರು ಕುಮಾರರಲೆ
ಈ ಯುಗದಲಿನ್ನವರ ಸಂತತಿ
ದಾಯ ಭಾಗಿಗಳಾಗಿ ಬದುಕಲಿ
ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ ೫೧

ಅರಸ ಧರ್ಮಿಷ್ಠನು ಯುಧಿಷ್ಠಿರ
ಧರಣಿಪತಿಯುತ್ತಮನು ಪವನಜ
ನರರು ವಿನಯಾನ್ವಿತರು ನೀವೇ ಪುತ್ರವತ್ಸಲರು
ಧರಣಿಗಾವಿನ್ನೈಸಲೇ ನೂ
ರ್ವರು ಕುಮಾರರು ಹೊರಗೆ ನಿಮ್ಮಯ
ಕರುಣವೇ ಸಾಮ್ರಾಜ್ಯ ನಮ್ಮನು ಬೀಳುಗೊಡಿರೆಂದ ೫೨

ಆಯ ಛಲವಭಿಮಾನ ಹೋಗಲಿ
ಕಾಯಬೇಕೆಂಬರೆ ನೃಪಾಲರ
ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ
ಆಯ ಛಲವಾಚಂದ್ರ ತಾರಕ
ಕಾಯವಧ್ರುವವೆಂಬಡಿದಕೆ ಸ
ಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ ೫೩

ಅರಸನಭ್ಯುದಯವನು ಭೀಮನ
ಧರಧುರವನರ್ಜುನನ ಬಿಂಕವ
ನರಸಿಯಾಟೋಪವನು ಮಾದ್ರೀಸುತರ ಸಂಭ್ರಮವ
ಹೊರೆಯ ಧೃಷ್ಟದ್ಯುಮ್ನ ದ್ರುಪದಾ
ದ್ಯರ ವೃಥಾಡಂಬರವ ಕಂಡೆದೆ
ಬಿರಿದುದಳುಕಿದೆನಳುಕಿದೆನು ಸಂತವಿಸಲರಿದೆಂದ ೫೪

ಕರಗಿದಳು ಗಾಂಧಾರಿ ಕಂಬನಿ
ದುರುಗಲಲಿ ಧೃತರಾಷ್ಟ್ರನೆದೆ ಜ
ರ್ಝರಿತವಾದುದು ಮಗನ ಮಾತಿನ ಮುಸಲ ಹತಿಗಳಲಿ
ಸುರಿವ ನಯನಾಂಬುಗಳ ಮೂಗಿನ
ಬೆರಳ ತೂಗುವ ಮಕುಟದವನೀ
ಶ್ವರನು ಮೌನದೊಳಿದ್ದನೊಂದು ವಿಗಳಿಗೆ ಮಾತ್ರದಲಿ ೫೫

ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ ೫೬

ಎಲೆಗೆ ಕರೆಯಾ ಪಾಪಿ ಕೌರವ
ಕುಲ ಕುಠಾರನ ನಿನ್ನ ಮಗನೊಡ
ನಳಿವೆನೈಸಲೆ ಪಾಂಡುಪುತ್ರರ ವೈರಬಂಧದಲಿ
ತಿಳುಹಿ ತಾಯೆನಲಾಕೆ ಶಕುನಿಯ
ಕಳುಹಿ ಕರೆಸಿದಡಾತ ಮರಳಿದ (೫೭

ನಳಲುದೊರೆಯಲಿ ಮೂಡಿ ಮುಳುಗಿದನಂದು ಧೃತರಾಷ್ಟ್ರ
ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಬೈಸಿದಿರಿ ಹೇಳಿನ್ನಂಜಬೇಡೆಂದ ೫೮

ತಿಂದ ವಿಷವಳ್ಕಿದವು ಮಡುವಿನೊ
ಳಂದು ಬಿಸುಟರೆ ಮುಳುಗಿ ಸುಖದಲಿ
ಮಿಂದು ಹೊರವಂಟರು ಮಹಾಗ್ನಿಯ ಭವನ ಭಂಗದಲಿ
ಒಂದು ಕೂದಲು ಸೀಯದನಿಬರು
ಬಂದರಿವು ಮೊದಲಾದ ಕೃತ್ರಿಮ
ದಿಂದ ಪಾಂಡವರಳಿದುದಿಲ್ಲಿದಕೇನು ಹದನೆಂದ ೫೯

ನೀವು ಚಿತ್ತವಿಸಿದೊಡೆ ನೆತ್ತದೊ
ಳಾವು ಸೋಲಿಸಿ ಕೊಡುವೆವವರನು
ನೀವು ಕರೆಸುವುದಿಲ್ಲಿಗುಚಿತ ಪ್ರೀತಿವಚನದಲಿ
ನಾವು ಜಾಣರು ಜೀಯ ಜೂಜಿನ
ಜೀವಕಲೆಯಲಿ ಧರ್ಮಸುತನಿದ
ನಾವ ಹವಣೆಂದರಿಯನಾತನ ಜಯಿಸಬಹುದೆಂದ ೬೦

ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ ೬೧

ಖೂಳರಲಿ ಸತ್ಕಳೆಗಳನು ನೆರೆ
ಕೇಳದವರಲಿ ಮಂತ್ರ ಬೀಜವ
ನಾಲಿಯಿಲ್ಲದವಂಗೆ ರೂಪು ವಿಲಾಸ ವಿಭ್ರಮವ
ಹೇಳುವಂತಿರೆ ನಿಮ್ಮ ವಿದುರನ
ಕೇಳಿಸಿದರಾ ಕಾರ್ಯಗತಿಗೆ ವಿ
ತಾಳವಾಗದೆ ಬೊಪ್ಪಯೆಂದನು ನಗುತ ಕುರುರಾಯ ೬೨

ಅರುಹಿದರೆ ವಿದುರಂಗೆ ಕಾರ‍್ಯವ
ಮುರಿವನಾತನು ಬಳಿಕ ನಿಮ್ಮಯ
ಕಿರಿಯ ತಮ್ಮನ ಮಕ್ಕಳಿಗೆ ಕೊಡಿ ಹಸ್ತಿನಾಪುರವ
ಹರುಕುಗಳು ನಾವ್ ನೂರು ಮಕ್ಕಳು
ಹೊರಗೆ ಬದುಕುವೆವೈಸಲೇ ನಿ
ಮ್ಮುರುವ ಮಕ್ಕಳುಗೂಡಿ ಸುಖದಲಿ ರಾಜ್ಯವಾಳೆಂದ ೬೩

ಪಾರಲೌಕಿಕದುಳಿವನೈಹಿಕ
ದೋರೆ ಪೋರೆಯನಿಂದು ಬಲ್ಲವ
ರಾರು ಹೇಳಾ ವಿದುರನಲ್ಲದೆ ನಮ್ಮ ಪೈಕದಲಿ
ಸಾರವಾತನ ಮಾತು ನಯ ವಿ
ಸ್ತಾರ ಸಹಿತಿಹುದಲ್ಲಿ ನಂಬುಗೆ
ದೂರವಿಲ್ಲೆನಗರಿಯೆ ನೀ ನಿಲ್ಲೆಂದನಂಧ ನೃಪ ೬೪

ತಿಳುಹಿ ವಿದುರನನವರ ಕರೆಯಲು
ಕಳುಹುವೆನು ಯಮಸೂನು ನಿಮ್ಮಯ
ಬಲುಹಿನಲಿ ಬಳುಕುವನೆ ಭೀಮಾರ‍್ಜುನರು ಕಿರುಕುಳರೆ
ತಿಳಿವೊಡೀತನ ಬುದ್ಧಿಯೇ ನಿ
ರ‍್ಮಲಿನವಹುದು ನಿಧಾನವಿದು ನೀ
ಕಳವಳಿಸದಿದ್ದರೆ ಮನೋರಥ ಸಿದ್ಧಿಯಹುದೆಂದು ೬೫

ನೀ ಕರುಣದಲಿ ನಮ್ಮ ಸಲಹುವ
ಡಾ ಕುಮಾರರ ಕರೆಸಿಕೊಟ್ಟರೆ
ಸಾಕು ಮತ್ತೊಂದಿಹುದಲೇ ಪಾಂಚಾಲ ನಂದನೆಯ
ನೂಕಿ ಮುಂದಲೆವಿಡಿದು ತೊತ್ತಿರೊ
ಳಾಕೆಯನು ಕುಳ್ಳಿರಿಸಿದಂದು ವಿ
ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ ೬೬

ಪೋಗು ನೀನೆಂದವನ ಕಳುಹಿದ
ನಾಗ ಮನದೊಳಗಧಿಕ ಚಿಂತಾ
ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ
ಈಗಳಿನ ಸವಿಗಳುಪಿ ಮೇಲಣ
ತಾಗನರಿಯನು ಕಂದನಿದಕಿ
ನ್ನೇಗುವೆನು ಗಾಂಧಾರಿ ನೀ ಹೇಳೆಂದನಾ ಭೂಪ ೬೭

ಅವರು ಕಪಟವನರಿಯರೀತನ
ಹವಣ ನೀನೇ ಕಂಡೆ ಕರೆಸಿದ
ಡವರು ನಿಲ್ಲರು ಗೋರಿಯಲಿ ಬಳಿಸಂದ ಮೃಗದಂತೆ
ನವಗೆ ಬಹುದಪ ಕೀರ್ತಿಯೀಗಿ
ನ್ನವನ ಕುಹಕವ ಲೋಕವರಿಯದು
ಶಿವಶಿವಾಯಂದಳಲಿ ಮರುಗಿದನಂದು ಧೃತರಾಷ್ಟ್ರ ೬೮

ಮುರಿವೆನೇ ಮುನಿದಿವರು ನೂರ್ವರು
ತೊರೆವರೆನ್ನನು ತೊಡಕಿಸುವೆನೇ
ತರಿದು ಬಿಸುಡುವರವರು ಕೌರವ ಶತಕವನು ಬಳಿಕ
ಹೊರಗೊಳಗೆ ಹದನಿದು ನಿಧಾನಿಸ
ಲರಿಯೆನೆನ್ನಸುವಿನಲಿ ಹೃದಯದ
ಸೆರೆ ಬಿಡದು ಶಿವ ಶಿವಯೆನುತ ಮರುಗಿದನು ಧೃತರಾಷ್ಟ್ರ ೬೯

ಏಕೆ ನಿಮಗೀ ಚಿಂತೆಯಿಂದೆರ
ಡೌಕಿದವು ದುಷ್ಕಾರ್ಯ ಸಂಧಿ ವಿ
ವೇಕ ನಿಕರದಲೊರೆದು ಮೋಹರಿಸೊಂದು ಬಾಹೆಯಲಿ
ಈ ಕುರುವ್ರಜ ನೂರ ಹಿಡಿ ಕುಂ
ತೀ ಕುಮಾರರ ಬಿಡು ತನೂಜರ
ನೂಕು ಹಿಡಿ ಪಾಂಡವರನೆಂದಳು ಪತಿಗೆ ಗಾಂಧಾರಿ ೭೦

ಐಸಲೇ ತಾನಾದುದಾಗಲಿ
ಲೇಸ ಕಾಣೆನು ನಿನ್ನ ಮಕ್ಕಳ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು
ಆ ಸಭೆಯ ಸರಿಸದ ಸಭಾ ವಿ
ನ್ಯಾಸ ಶಿಲ್ಪಿಗರಾರೆನುತ ಧರ
ಣೀಶ ಕರೆಸಿದನುರು ಸಭಾ ನಿರ್ಮಾಣ ಕೋವಿದರ ೭೧

ತೆಗೆಸಿ ಭಂಡಾರದಲಿ ಬಹು ವ
ಸ್ತುಗಳನಿತ್ತನು ತರು ಶಿಲಾಕೋ
ಟಿಗಳ ತರಿಸಿದನುರು ಸಹಸ್ರಸ್ತಂಭ ಡಂಬರವ
ಝಗಝಗಿಪ ಬಹು ಮೌಲ್ಯ ಮುಕ್ತಾ
ಳಿಗಳನುರುತರ ರಶ್ಮಿ ಲಹರಿ
ಸ್ಥಗಿತ ದಿಗು ಭಿತ್ತಿಗಳನನುಪಮ ರತ್ನರಾಶಿಗಳ ೭೨

ಮಾಡಿತಗ್ಗದ ಸಭೆ ಸುಧರ್ಮೆಯ
ನೇಡಿಸುವ ಚೆಲುವಿನಲಿ ಪುರದಲಿ
ರೂಢಿಸಿತು ಬಳಿಕಂಧ ನೃಪನೇಕಾಂತ ಭವನದಲಿ
ಕೂಡಿಕೊಂಡು ಕುಲಾಪಘಾತದ
ಕೇಡಿಗರ ಕಲ್ಪನೆಯ ಕಲುಷದ
ಜೋಡಿಯನೆ ನಿಶ್ಬೈಸಿ ವಿದುರಂಗರುಹಿದನು ಕರೆಸಿ ೭೩

ವಿದುರ ಕೇಳೈ ಪಾಂಡವರ ಸಂ
ಪದಕೆ ಸರಿಯೊ ಮಿಗಿಲೋ ಸಭೆ ತಾ
ನಿದು ವಿಶೇಷವಲಾ ಸಮಸ್ತ ಕ್ಷತ್ರ ವಿಭವದಲಿ
ಇದರೊಳೋಲಗವಿತ್ತು ಹರ್ಷಾ
ಸ್ಪದರು ಕುರು ನೃಪರಲ್ಲಿ ಸುಖ ದ್ಯೂ
ತದಲಿ ರಮಿಸಲಿ ಕರೆದು ತಾ ಕುಂತೀ ಕುಮಾರಕರ ೭೪

ಅವರ ವಿಭವವನವರ ಯಾಗೋ
ತ್ಸವವನಿಂದ್ರಪ್ರಸ್ಥದಲಿ ಕಂ
ಡೆವು ಮನೋಹರವಾಯ್ತು ಬೆಳವಿಗೆ ಪಾಂಡು ನಂದನರ
ಅವರು ಹಸ್ತಿನಪುರಿಗೆ ಬಂದು
ತ್ಸವದಲೀ ಸಭೆಯಲಿ ಸುಖ ದ್ಯೂ
ತವನು ರಮಿಸಲಿ ಸೇರಿ ಬದುಕಲಿ ಪಾಂಡು ಸುತರೆಂದ ೭೫

ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ ೭೬

ಹಾ ಮರುಳೆ ಕೆಣಕುವರೆ ಫಲುಗುಣ
ಭೀಮರನು ಮಿಗೆ ಹೆಚ್ಚಿ ಬೆಳೆದು
ದ್ದಾಮ ಸಿರಿಯಿದು ಹಸ್ತಿನಾಪುರವಕಟ ಕೆಡಿಸಿದೆಲ
ಕೈ ಮಗುಚದೇ ವಿಭವವಿದು ನಿ
ರ್ನಾಮರಾರೋ ಬಿತ್ತಿದರು ಕುರು
ಭೂಮಿಯಲಿ ವಿಷ ಬೀಜವನು ಹಾಯೆನುತ ಬಿಸುಸುಯ್ದ ೭೭

ವಿದುರ ಬೆಂಬೀಳದಿರು ಬಿಂಕದ
ಹದನ ಬಲ್ಲೆನು ಭೀಮ ಪಾರ್ಥರ
ಮುದವ ಬಯಸುವೆ ಮುನಿಯಲಾಪೆನೆ ಹೇಳು ತನಯರಿಗೆ
ಇದು ಮಹಾ ಸಭೆಯಿಲ್ಲಿ ಮೇಳಾ
ಪದಲಿ ಕುರು ಪಾಂಡವರು ಸದ್ಯೂ
ತದಲಿ ರಮಿಸುವರೇನು ಹೊಲ್ಲೆಹವೆಂದನಂಧ ನೃಪ ೭೮

ಮೊದಲಲಿದು ಸುದ್ಯೂತವವಸಾ
ನದಲಿ ವಿಷಮ ದ್ಯೂತದಲಿ ನಿಲು
ವುದು ನಿವಾರಣವುಂಟೆ ಮರ್ಮವನಿರಿದ ಸಬಳದಲಿ
ತುದಿಗೆ ತಾನಿದಪಥ್ಯ ಕುರುವ
ರ್ಗದಲಿ ವಿನಾಶಕ ಬೀಜವದು ನಿಮ
ಗಿದರೊಳಗೆ ಸೊಗಸಾದುದೇ ಕೈಕೊಂಡೆ ನಾನೆಂದ ೭೯

ಕರೆದು ತಾ ನೀನವರ ನಾನುಪ
ಚರಿಸುವಂದವ ನೋಡು ನಿನ್ನಯ
ಕರಣವೃತ್ತಿಗೆ ಕಠಿಣವಹವೇ ನಮ್ಮ ಮಾತುಗಳು
ದುರುಳರವರಿವರೆಂಬರದನಾ
ದರಿಸದಿರು ನೀ ಹೋಗು ಪಾಂಡವ
ಧರಣಿಪರನೊಡಗೊಂಡು ಬಾಯೆಂದಟ್ಟಿದನು ನೃಪತಿ ೮೦

ಅರುಹಿದನು ಭೀಷ್ಮಂಗೆ ಗುರು ಕೃಪ
ರರಿದರಿನ್ನಪಮೃತ್ಯುವೇನೆಂ
ದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ
ಹರಿದುದೇ ಕುರುವಂಶ ಲತೆ ಹೊ
ಕ್ಕಿರಿದನೇ ಧೃತರಾಷ್ಟ್ರ ನೀ ಬೇ
ಸರದಿರವರನು ಕರೆದು ತಾ ಹೋಗೆಂದರವರಂದು ೮೧

ಶುಭಮುಹೂರ್ತ ವಿಳಾಸ ಲಗ್ನ ದೊ
ಳಿಭಪುರಿಯ ಹೊರವಂಟು ಸುರ ಸ
ನ್ನಿಭನು ಬಂದನು ಹಲವು ಪಯಣದಲಿವರ ಪಟ್ಟಣಕೆ
ರಭಸ ಮಿಗಿಲಿದಿರ್ಗೊಂಡು ತಂದರು
ಸಭೆಗೆ ಮಾನ್ಯ ಯಥೋಪಚಾರ
ಪ್ರಭವ ಸತ್ಕಾರದಲಿ ಕೇಳ್ದರು ಕುಶಲ ಸಂಗತಿಯ ೮೨

ಧರಣಿಪತಿ ಗಾಂಗೇಯ ಗೌತಮ
ಗುರುತನುಜ ಗುರು ಕರ್ಣ ಸೌಬಲ
ಕುರು ನೃಪತಿಯನುಜಾತ್ಮಜರು ಗಾಂಧಾರಿ ಭಾನುಮತಿ
ವರಸಚಿವ ಸಾಮಂತ ಪರಿಜನ
ಪುರಜನಂಗಳ ಕುಶಲವನು ವಿ
ಸ್ತರಿಸಿದನು ವಿದುರನು ಮಹೀಪತಿಗಾಪ್ತ ಬಾಂಧವರ ೮೩

ಪಾವುಡಂಗಳನಿತ್ತು ಭೂಪನ
ನೋವಿದನು ನಾನಾ ಕಥಾ ಸಂ
ಭಾವನಾನಂತರದ ಮಜ್ಜನ ಭೋಜನಾದಿಗಳ
ಆ ವಿವಿಧ ಸತ್ಕಾರದಲಿ ದಿವ
ಸಾವಸಾನವ ಕಳೆದು ಬಳಿಕ ಸ
ಭಾವಳಯದಲಿ ಪಾಂಡು ಸುತರಿಗೆ ನುಡಿದನಾ ವಿದುರ ೮೪

ಧರಣಿಪತಿ ಬೆಸಸಿದನು ನೀವೈ
ವರು ಕುಮಾರರು ರಾಜಸೂಯಾ
ಧ್ವರ ಮಹಾವ್ರತದೇಕ ಭುಕ್ತಾದಿಯಲಿ ಬಳಲಿದಿರಿ
ವರಸಭೆಯ ರಚಿಸಿದರು ಹಸ್ತಿನ
ಪುರಿಗೆ ಬಿಜಯಂಗೈದು ವಿಭವೋ
ತ್ಕರದ ವಿಮಳ ದ್ಯೂತದಲಿ ರಮಿಸುವುದು ನೀವೆಂದ ೮೫

ನೋಡುವುದು ಬಾಂಧವರ ನಿಮ್ಮಡಿ
ಮಾಡುವುದು ಸೌಖ್ಯವನು ಭಯದಲಿ
ಬಾಡುವುದಲೇ ರಿಪುನೃಪಾಲರ ಸಮರ ಜಯಬೀಜ
ಜೋಡಿಸುವುದಗಲದಲಿ ಕೀರ್ತಿಯ
ಝಾಡಿಯನು ನಿಮ್ಮಭ್ಯುದಯ ಬಳಿ
ಕೇಡಿಸುವುದೈ ದುಂದುಮಾರ ದಿಲೀಪ ದಶರಥರ ೮೬

ನಂಬಿಸುವ ನಿಮ್ಮಯ್ಯನಿದ ಬೇ
ಡೆಂಬವರು ಗುರು ಭೀಷ್ಮರುಳಿದವ
ರಂಬಿನೋಪಾದಿಯಲಿ ನಿಲುವರು ಪಲವು ಮಾತೇನು
ಶಂಬರರು ನೃಪ ಕರ್ಣ ಶಕುನಿಗ
ಳೆಂಬವರು ನಿಮ್ಮೊಡನೆ ವಚನಾ
ಡಂಬರವೆ ಬಹದುಂಟೆ ಬಿಜಯಂಗೈಯಿ ನೀವೆಂದ ೮೭

ಕರೆಸುವನು ಧೃತರಾಷ್ಟ್ರ ಗಡ ನ
ಮ್ಮರಸನಲಿ ಧೃತರಾಟಷ್ಟ್ರನಲಿ ನಮ
ಗೆರಡು ಮನವೇ ಭಾವ ಭೇದವೆ ಪಾಂಡು ಬೊಪ್ಪನಲಿ
ವರವೆ ದೊರಕಲಿ ಶಾಪವೇ ಮೇಣ್ಬ
ರಲಿ ಭಯವಿಲ್ಲೆ ಮೆಗೆ ಬೊಪ್ಪನ
ಕರಣ ಕೃತಿಗೆ ಹಸಾದವೆಂದನು ಧರ್ಮನಂದನನು ೮೮

ದ್ಯೂತ ಮೃಗಯಾ ವ್ಯಸನ ಪೌರು
ಷ್ಯಾತಿಶಯ ಮಧುಪಾನ ಕಾಂತಾ
ಪ್ರೀತಿ ದಂಡ ವಿಘಾತಿ ದೂಷಣವರ್ಥ ಸಂಗತಿಯು
ಜಾತ ಸಪ್ತವ್ಯಸನವಿವು ಸಂ
ಪ್ರೀತಿಕರ ಮೊದಲಲಿ ವಿಪಾಕದೊ
ಳಾತು ಕೆಡಿಸುವ ಹದನನರಿದಿಹುದೆಂದನಾ ವಿದುರ ೮೯

ಖಳರು ಕೌರವರಕ್ಷ ಧೂರ್ತರ
ತಿಲಕ ಶಕುನಿ ವಿಕಾರಿಯಾ ದು
ಸ್ಸಳೆಯ ಪತಿ ದೌರ್ಜನ್ಯಮಖದೀಕ್ಷಿತನು ಕಲಿಕರ್ಣ
ಉಳಿದ ಭೀಷ್ಮ ದ್ರೋಣರೇ ನಿ
ಷ್ಫಲ ವಿಧಾನರು ನಿಮ್ಮ ಬೊಪ್ಪನ
ಬಳಕೆ ಕನ್ನಡಿ ನೋಡಿಕೊಳಿ ನೀವೆಂದನಾ ವಿದುರ ೯೦

ಪ್ರಕಟವದು ಸಲೆ ಕರ್ಣ ಕೌರವ
ಶಕುನಿಗಳ ದುಶ್ಚೇಷ್ಟೆ ಭೀಷ್ಮಾ
ದ್ಯಕುಟಿಲರು ಸಲ್ಲರು ಸುಯೋಧನ ಮಂತ್ರ ಸಂಗತಿಗೆ
ಮುಕುರ ಪಥವೆಮ್ಮಯ್ಯನೆಂಬುದು
ವಿಕಳವಲ್ಲಲೆ ವಿದುರ ಪರಿ ಪಾ
ಲಕನಲೇ ಧೃತರಾಷ್ಟ್ರನಾತನ ನಂಬಿ ಬಹೆವೆಂದ ೯೧

ಕರೆಸಿ ನಿಮ್ಮಯ ಮಂತ್ರಿಜನ ಮು
ಖ್ಯರ ಪಸಾಯ್ತರ ಕೇಳುವುದು ಮನ
ದೊರಗೆ ತೂಕಕೆ ಬಹರೆ ಭೀಮಾದಿಗಳ ಮತವಿಡಿದು
ಅರಸ ನಿಶ್ಬೈಸುವುದೆನಲು ನೀ
ಮರುಳೆ ವಿದುರ ಭವದ್ವಚೋವಿ
ಸ್ತರಕೆ ಪಡಿಸಣವುಂಟೆ ಶಿವಶಿವಯೆಂದನಾ ಭೂಪ ೯೨

ಹೋಹುದೇನಭಿಮತವೆ ಧೂರ್ತ
ವ್ಯೂಹವದು ಭೀಷ್ಮಾದಿ ಹಿರಿಯರು
ಸಾಹಸಿಗರಲ್ಲದೆ ರಹಸ್ಯಕೆ ಸಲ್ಲರವರುಗಳು
ಕಾಹುರರು ಕೌರವರು ಸಮರೋ
ತ್ಸಾಹಶಕ್ತಿಗೆ ಠಾವದಲ್ಲ
ವ್ಯಾಹತವೆ ಮತವೆಂದು ಭೀಮಾದಿಗಳ ಬೆಸಗೊಂಡ ೯೩

ಜೀಯ ಬಿನ್ನಹವಿಂದು ದೇಹ
ಚ್ಛಾಯೆಗುಂಟೇ ಬೇರೆ ಚೇಷ್ಟೆ ನ
ವಾಯಿಯೇ ನಮ್ಮಿನಿಬರಿಗೆ ರಾಜಾಭಿಮಾನದಲಿ
ನೋಯೆ ನೋವುದು ನಿಮ್ಮ ದೇಹದ
ಬೀಯದಲಿ ನಾಣ್ಬೀಯವಹುದೆ
ಮ್ಮಾಯತಂ ಸ್ವಾತಂತ್ರ್ಯವೆಮಗಿಲ್ಲೆಂದನಾ ಭೀಮ ೯೪

ಕರೆಸುವನು ಧೃತರಾಷ್ಟ್ರ ನಿಮ್ಮನು
ಕರೆವ ಮಣಿಹ ಸುಯೋಧನಾದ್ಯರ
ಮರುಳುಗಳ ಮಾತೇನು ಹಿತವರು ನೀವಲಾ ನನಗೆ
ಧರಣಿಯಿದು ಶಾಶ್ವತವೆ ತಂದೆಗೆ
ಹಿರಿಯನಾ ಧೃತರಾಷ್ಟ್ರನಾಜ್ಜೆಯ
ಶಿರದೊಳಾಂತೆನು ಬಹೆನೆನುತ ನಿಶ್ಬೈಸಿದನು ನೃಪತಿ ೯೫

ಇರುಳ ನೂಕಿದರುದಯದಲಿ ಭೂ
ಸುರರ ಕರೆಸಿದರಮಳ ಸಾಂವ
ತ್ಸರಿಕ ಸುಮುಹೂರ್ತದಲಿ ಹೊಯಿಸಿದರಂದು ಹೊರ ಗುಡಿಯ
ಪುರದ ಕಾಹನು ಸಚಿವ ಸಾವಂ
ತರಿಗೆ ನೇಮಿಸಿ ಸಕಲ ದಳ ಮೋ
ಹರದ ದೆಖ್ಖಾಳವನು ಕಂಡನು ಪುರವ ಹೊರವಂಟ ೯೬

ಬಿಗಿದ ರೆಂಚೆಯ ಹೊಮ್ಮಿಣಿಯ ಹೊರ
ಜೆಗಳ ಜೋಡಿಯ ಪಕ್ಕಘಂಟೆಯ
ಝಗೆಯ ಮೊಗರಂಬದ ನವಾಯಿಯ ಮಣಿಯ ಜಲವಟೆಯ
ಬಿಗಿದ ಕೂರಂಕುಶದ ಮಾವಂ
ತಿಗನ ಸನ್ನೆಗೆ ಕುಸಿದ ದಂತಿಯ
ಹೆಗಲ ಹೊಂಗದ್ದುಗೆಗೆ ಬಿಜಯಂಗೈದನಾ ಭೂಪ ೯೭

ತಿಳಿತವಿನನುದಯದಲಿ ತಾರಾ
ವಳಿಗಳದ್ಭುತವೆನಲು ಮುಕ್ತಾ
ವಳಿಯ ಧವಳಚ್ಛತ್ರದೆಡ ಬಲಕೊಲೆವ ಚೌರಿಗಳ
ಕೆಲಬಲದ ಭೀಮಾರ್ಜುನರ ಗಜ
ದಳದ ಮುಂದೆ ಕುಮಾರ ವರ್ಗದ
ಸುಳಿವುಗಳ ಸೌರಂಭದಲಿ ಹೊರವಂಟನಾ ಭೂಪ ೯೮

ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿ ಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು ೯೯

ಉಡಿಗೆಗಳ ದೇಸಿಯ ವಿಳಾಸದ
ತೊಡಿಗೆಗಳ ಮೌಳಿಯ ನವಾಯಿಯ
ಮುಡಿಗಳೆಡ ಬಲದೋರೆನೋಟದ ಬಳ್ಳಿ ಬೆಳಗುಗಳ
ಕಡು ಬೆಮರ ತನು ಪರಿಮಳದೊಳೆಡೆ
ವಿಡದ ಗಗನೋದರದ ಗರುವೆಯ
ರಡಸಿದರು ದ್ರುಪದಾತ್ಮಜೆಯ ದಂಡಿಗೆಯ ಬಳಸಿನಲಿ ೧೦೦

ಭೂರಿ ಭೇರೀ ವಾದ್ಯರವ ಕೈ
ವಾರಿಗಳ ಕಳಕಳದೊಳಡಗಿತು
ನಾರಿಯರ ನೇವುರದ ಮೊಳಗಿನೊಳದ್ದುದಾ ರಭಸ
ಆರು ಹೊಗಳುವರಾ ವಿಭವ ವಿ
ಸ್ತಾರ ಪಣವನು ಪಯಣ ಗತಿಯಲಿ
ಭೂರಮಣನೈತಂದು ಹೊಕ್ಕನು ಹಸ್ತಿನಾಪುರವ ೧೦೧

ಸಂಕ್ಷಿಪ್ತ ಭಾವ

ಕಾಲಕ್ಕೆ ವಶನಾದ ಧರ್ಮಜ ತನ್ನ ಪರಿವಾರದೊಡನೆ ದ್ಯೂತಕ್ಕೆ ಎಂದು ಹಸ್ತಿನಾಪುರವನ್ನು ಹೊಕ್ಕನು.

ದುರ್ಯೋಧನ ಅರಮನೆಗೆ ಬಂದವನು ಯಾರೊಂದಿಗೂ ಬೆರೆಯದೆ, ಯಾವುದರಲ್ಲಿಯೂ ಭಾಗವಹಿಸದೆ ಒಳಗೇ ಕುದಿಯುತ್ತಲಿದ್ದನು. ಶಕುನಿಯು ಬಂದು ಉಪಾಯವಾಗಿ ಅವನನ್ನು ಮಾತನಾಡಿಸಿ ಅವನ ಮನದ ಬೇಗೆಯನ್ನು ಅರಿತನು. ತಾನು ಅವನ ಪರವಾಗಿ ಸದಾ ಇರುವುದಾಗಿ ಆಶ್ವಾಸನೆಯಿತ್ತು ದ್ಯೂತಕ್ಕೆ ಧರ್ಮಜನನ್ನು ಒಪ್ಪಿಸುವಂತೆ ಹೇಳಿದನು.

ಧೃತರಾಷ್ಟ್ರನ ಬಳಿಗೆ ಬಂದ ದುರ್ಯೋಧನನನ್ನು ಅವನ ಬೇಸರಕ್ಕೆ ಕಾರಣವನ್ನು ಹೇಳಬೇಕೆನ್ನಲು ತಾನು ಧರ್ಮಜನ ಸಭಾಭವನದಲ್ಲಿ ಪಟ್ಟ ಅವಮಾನದ ದೃಶ್ಯಗಳನ್ನು ಹೇಳಿದನು. ನೆಲವೆಂದು ಬಗೆದು ಕಾಲನ್ನಿಟ್ಟು ನೀರಲ್ಲಿ ಬಿದ್ದುದು, ಗೋಡೆಯೆಂದು ಭ್ರಮಿಸಿದರೆ ಅದು ಕನ್ನಡಿಯಾಗಿದ್ದುದು, ಇನ್ನೊಂದು ಕಡೆ ನೀರು ಇದೆ ಎಂದು ಕಾಲಿಟ್ಟರೆ ಅದು ನೆಲವಾಗಿದ್ದುದು ಇತ್ಯಾದಿ. ಈ ಎಲ್ಲ ಸಂದರ್ಭಗಳಲ್ಲಿಯೂ ದ್ರೌಪದಿ ಆದಿಯಾಗಿ ಎಲ್ಲ ಹೆಣ್ಣುಮಕ್ಕಳು ನಕ್ಕು ಅಪಹಾಸ್ಯ ಮಾಡಿದ್ದು ಅವನನ್ನು ತುಂಬಾ ಕೆರಳಿಸಿತ್ತು. ಆರಂಭದಲ್ಲಿ ಹೇಳಿದ ಬುದ್ಧಿಮಾತುಗಳು ಮಗನಿಗೆ ಹಿಡಿಸಲಿಲ್ಲ. ತಾನು ಪ್ರಾಣವನ್ನೆ ಬಿಡುವೆನೆಂದನು. ಅವನನ್ನು ಸಮಾಧಾನ ಪಡಿಸಲು ವಿಫಲನಾದ ರಾಜನು ಕೊನೆಗೆ ದ್ಯೂತಕ್ಕೆ ಕರೆಸಲು ಒಪ್ಪಬೇಕಾಯಿತು.  ಪುತ್ರವ್ಯಾಮೋಹಕ್ಕೆ ಬಲಿಯಾದ ರಾಜ. ಗಾಂಧಾರಿಯೂ ಮಗನ ಹಠದ ಮುಂದೆ ಸೋಲಬೇಕಾಯಿತು. ಅದಕ್ಕಾಗಿ ಅತ್ಯಂತ ವೈಭವದ ಸಭಾಮಂದಿರದ ನಿರ್ಮಾಣವಾಯಿತು.  

ಭೀಷ್ಮಾದಿಗಳನ್ನು ನೆಪಮಾತ್ರಕ್ಕೆ ಕೇಳಿದ ಶಾಸ್ತ್ರವಾಯಿತು. ಅಣ್ಣ ತಮ್ಮಂದಿರು ಇಲ್ಲಿಯೂ ಸ್ವಲ್ಪ ಕಾಲ ಆರಾಮವಾಗಿ ಕಾಲ ಕಳೆಯಲಿ ಎಂದು ಅನುನಯದಿಂದ ಒಪ್ಪಿಸಲಾಯಿತು. ಪಾಂಡವರನ್ನು ಕರೆತರಲು ವಿದುರನೇ ಸರಿ ಎಂದು ಭಾವಿಸಿ ಅವನನ್ನು ಕಳಿಸಿದರು. ಅವನು ಈ ದ್ಯೂತದ ಬಗ್ಗೆ ಸಂದೇಹ ವ್ಯಕ್ತಪಡಿಸಿದನಾದರೂ ಕೊನೆಗೆ ಹೊರಡಬೇಕಾಯಿತು.

ಪಾಂಡವರಲ್ಲಿಗೆ ಬಂದ ವಿದುರನನ್ನು ಸತ್ಕರಿಸಿ ಸಕಲರ ಕುಶಲ ವಿಚಾರಿಸಲಾಯಿತು. ತಾನು ಬಂದ ಉದ್ದೇಶವನ್ನು ವಿದುರ ತಿಳಿಸಿದನು. ಯೋಚಿಸಿ ತೀರ್ಮಾನಿಸಿ ಹೇಳು ಎಂದನು. ರಾಜನ ಮಾತು ನಮಗೆ ವೇದ ವಾಕ್ಯ. ಪ್ರಸಾದವಿದ್ದಂತೆ. ಅವನ ಕರೆಯನ್ನು ಮನ್ನಿಸಬೇಕಾದುದು ಧರ್ಮ ಎಂದು ಧರ್ಮಜನು ಹೇಳಿದನು. ಆದರೂ ವಿದುರನು ದ್ಯೂತ ಮೊದಲಾದ ಸಪ್ತವ್ಯಸನಗಳ ಬಗ್ಗೆ ಎಚ್ಚರಿಸಿದನು. ತಮ್ಮಂದಿರು, ಮಂತ್ರಿಗಳು ಇವರೆಲ್ಲರೊಂದಿಗೆ ಚರ್ಚಿಸಲು ಹೇಳಿದನು. ಆದರೆ ವಿಧಿಯ ನಿಯಮ ಬೇರೆಯೇ ಇತ್ತು. ಯಾರೂ ಅಣ್ಣನಿಗೆ ಎದುರಾಡಲಿಲ್ಲ. ಕೊನೆಯಲ್ಲಿ ಸಕಲ ವೈಭವದಿಂದ  ತಮ್ಮೆಲ್ಲಾ ಪರಿವಾರದೊಂದಿಗೆ ಹೊರಟು ಹಸ್ತಿನಾಪುರವನ್ನು ತಲುಪಿದರು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ