ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ33

 


ಪಗಡೆಯಾಡಿ ಕೆಟ್ಟ ಪಾಂಡವ
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಸಭಾ ಪರ್ವ - ಹದಿಮೂರನೆಯ ಸಂಧಿ

ಸೂ. ವೀತರಾಗದ್ವೇಷಭಯನನ
ಜಾತ ಶತ್ರುವನಕಟ ಕಪಟ
ದ್ಯೂತದಲಿ ಕುರುರಾಯ ಗೆಲಿದನು ಧರ್ಮನಂದನನ

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡವ ನೃಪರನರಮನೆ
ಬೀಳುಗೊಂಡುದು ವಿಳಸದಿಂದ್ರಪ್ರಸ್ಥಪುರ ಸಹಿತ
ಮೇಲೆ ನೆಗಳುವ ದುರ್ನಿಮಿತ್ತವ
ನಾಲಿಸಿದರೇ ದೈವದೋಷ ನಿ
ಮೀಲಿತಾಂತಃಕರಣ ಹತರೈತಂದರಿಭ ಪುರಿಗೆ ೧

ಹರಡೆ ಕೆದರಿತು ಬಲದಲುದಯದ
ಲುರಿಯಲೊದರಿತು ಹಸುಬನೆಡದಲಿ
ಕರಿಯ ಹಕ್ಕಿಯ ತಾರುಹಂಗನ ವಾಮದುಡಿಕೆಗಳ
ನರಿಗಳೊದರಿದವಿದಿರಿನಲಿ ಮೋ
ಹರವ ಮೊಲನಡಹಾಯ್ದ ವಾನೆಗ
ಳರಚಿ ಕೆಡೆದವು ಮುಗ್ಗಿದವು ರಥವಾಜಿಗಳು ನೃಪರ ೨

ಶಕುನಗತಿ ಸಾಮಾನ್ಯವಿದು ಕಂ
ಟಕದ ನೆಲೆ ಜನ್ಮದಲಿ ಸಪ್ತಾ
ಧಿಕದೊಳಿದ್ದರು ಸೌರಿ ಗುರು ಭೌಮಾಬ್ಜ ಬಾಂಧವರು
ವಿಕಳದೆಸೆ ನಿಮ್ಮಡಿಗೆ ವೈರಿ
ಪ್ರಕರಕುನ್ನತದೆಸೆ ಮಹೀ ಪಾ
ಲಕ ಶಿರೋಮಣಿ ಪುರಕೆ ಮರಳೆಂದರು ಮಹೀಸುರರು ೩

ಮರಳಲಹುದೈ ದೈವವಿಕ್ಕಿದ
ಕೊರಳುಗಣ್ಣಿಯ ಕುಣಿಕೆ ಯಾರಲಿ
ಹರಿವುದೈ ಮನ್ನಿಸಿದನೇ ಮೌಹೂರ್ತಕರ ನುಡಿಯ
ಕರೆಸುವನು ಧೃತರಾಷ್ಟ್ರ ನಮಗೀ
ನರಿ ಮೊಲಂಗಳ ಹಕ್ಕಿ ಹರಿಣೆಯ
ಕರಹವೇಗುವವೆಂದು ಜರೆದನು ಶಕುನ ಕೋವಿದರ ೪

ಹರಿದರರಸಾಳುಗಳು ರಾಯನ
ಬರವನರುಹಿದರಂಧ ಭೂಪತಿ
ಪುರದೊಳಗೆ ಗುಡಿಗಟ್ಟಿಸಿದನತ್ಯಧಿಕ ಹರ್ಷದಲಿ
ಸುರನದೀಜ ದ್ರೋಣ ಗೌತಮ
ಗುರುಜ ಕರ್ಣ ಜಯದ್ರಥಾದಿಗ
ಳುರು ವಿಭವದಿಂದಿದಿರುಗೊಂಡರು ಹೊಗಿಸಿದರು ಪುರವ ೫

ಸೇನೆ ಬಿಟ್ಟುದು ಪುರದ ಬಹಿರೋ
ದ್ಯಾನ ವೀಧಿಗಳೊಳಗೆ ಕುಂತೀ
ಸೂನುಗಳು ಸುಮ್ಮಾನ ಮಿಗೆ ನಡೆತಂದರಿಭಪುರಿಗೆ
ಆ ನಗರದೊತ್ತೊತ್ತೆಗಳನಾ
ಮಾನಿನಿಯರು ಪ್ಪಾರತಿಯನವ
ರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ ೬

ಪೌರ ನಾರೀಜನದ ತಳಿಗೆಗ
ಳಾರತಿಯ ಸೇಸೆಗಳ ಲಾಜೆಯ
ತೋರಮುತ್ತಿನ ಮಳೆಯ ಮಂಗಳರವದ ಕಳಕಳದ
ಓರಣದ ತೋರಣದ ಗುಡಿಗಳ
ಚಾರು ವೀಧಿಗಳೊಳಗೆ ಬಂದರು
ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ ೭

ಇಳಿದರಾನೆಯನಮಳ ರತ್ನಾ
ವಳಿಯ ಕಾಣಿಕೆಗಳನು ಸುರಿದರು
ಖಳ ಶಿರೋಮಣಿಗೆರಗಿದರು ಧೃತರಾಷ್ಟ್ರ ಭೂಪತಿಗೆ
ಕುಲತಿಲಕ ಬಾ ಕಂದ ಭರತಾ
ವಳಿ ವನದ ಮಾಕಂದ ಧರ್ಮ
ಸ್ಥಳ ಲತಾವಳಿ ಕಂದ ಬಾಯಂದಪ್ಪಿದನು ನೃಪನ ೮

ಬಾ ಮಗನೆ ರಿಪುರಾಯ ಮನ್ಮಥ
ಭೀಮ ಬಾರೈ ಭೀಮ ರಣ ನಿ
ಸ್ಸೀಮ ಫಲುಗುಣ ಬಾ ನಕುಲ ಸಹದೇವ ಬಾಯೆನುತ
ಪ್ರೇಮ ರಸದಲಿ ಬೇರೆ ಬೇರು
ದ್ದಾಮ ಭುಜನಪ್ಪಿದನು ಚಿತ್ತದ
ತಾಮಸದ ತನಿ ಬೀಜ ಮುಸುಕಿತು ಹರ್ಷ ರಚನೆಯಲಿ ೯

ಹರಸಿದನು ಕಾಣಿಕೆಯ ಕೊಂಡೈ
ವರ ಮಹಾ ಸತಿಯನು ಕುಮಾರರ
ನರಸಿಯರನನಿಬರ ವಚೋ ರಚನೆಯಲಿ ಮನ್ನಿಸಿದ
ಅರಸ ಗಾಂಧಾರಿಯನು ವಂದಿಸಿ
ದರುಶನವ ಕೊಡು ಹೋಗೆನಲು ಕಡು
ಹರುಷ ಮಿಗಿಲೈತಂದರಾ ಗಾಂಧಾರಿಯರಮನೆಗೆ ೧೦

ಬಂದು ಕಾಣಿಕೆ ಕೊಟ್ಟು ವಂದಿಸಿ
ನಿಂದರೈವರು ತನ್ನ ಕೆಳದಿಯ
ರಿಂದ ತರಿಸಿದಳಾರತಿಯನುಪ್ಪಾರತಿಯನೊಲಿದು
ಚಂದ ಮಿಗೆ ಸಾವಿರದ ಸಂಖ್ಯೆಯ
ರಿಂದು ಮುಖಿಯರ ತಳಿಗೆಯಾರತಿ (೧೧

ಸಂದಣಿಸಿದವು ಜಯ ಸಬುದ ಝೋಂಪಿಸಿದುದಂಬರವ
ಅರಸಿ ಕಾಣಿಸಿಕೊಂಡಳೀ ನೃಪ
ರರಸಿಯನು ಸುಕುಮಾರಕರನವ
ರರಸಿಯರ ಸಖಿಯರ ವಿಳಾಸಿನಿಯರ ಪಸಾಯ್ತೆಯರ
ತರಿಸಿ ಕೊಟ್ಟನು ಬೇರೆ ಬೇರನಿ
ಬರಿಗೆ ಉಡುಗೊರೆ ಗಂಧ ಮಾಲ್ಯಾ
ಭರಣವನು ರಾಜೋಪಚಾರ ವಿಳಾಸ ವಿಭವದಲಿ ೧೨

ಬೀಳುಕೊಟ್ಟಳು ಬಳಿಕ ಕುರು ನೃಪ
ನಾಲಯಕೆ ಕರೆದೊಯ್ದು ಕುಂತಿಯ
ಕಾಲಿಗೆರಗಿ ದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ

ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು ೧೩
ಖಳರ ಹೃದಯದ ಕಾಳ ಕೂಟದ
ಹುಳಕು ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ ೧೪

ಬಂದು ಕಂಡುದು ನಿಖಿಳ ಪುರ ಜನ
ವಂದು ಕಾಣಿಕೆಗೊಟ್ಟು ಕೌರವ
ನಂದನರು ಸಚಿವರು ಪಸಾಯ್ತರು ನಿಯೋಗಿ ಮಂತ್ರಿಗಳು
ಸಂದಣಿಸಿದುದು ಕವಿ ಗಮಕಿ ನಟ
ವಂದಿ ಮಾಗಧ ಮಲ್ಲ ಗಾಯಕ
ವೃಂದ ದೀನಾನಾಥರೋಲಗಿಸಿದರು ಧರ್ಮಜನ ೧೫

ಆ ದಿವಸವನು ಮಧುರ ಗೇಯ ನಿ
ನಾನದದಲಿ ಕವಿ ವಾದಿ ವಾಗ್ಮಿ ವಿ
ನೋದದಲಿ ನೂಕಿದರು ಮಜ್ಜನ ಭೋಜನಾದಿಯಲಿ
ಆದುದುತ್ಸಹವಂದಿನಿರುಳು ದಿ
ನಾದಿಯಲಿ ಕಂಡನು ಕನಸ ಪ್ರಾ
ಸಾದ ಶಿಖರವು ಮುರಿದು ಬಿದ್ದುದನಡವಿ ಮಧ್ಯದಲಿ ೧೬

ಅರಸನುಪ್ಪವಡಿಸಿದನವನೀ
ಶ್ವರವಿಹಿತ ಸತ್ಕ್ರಿಯೆಗಳನು ವಿ
ಸ್ತರಿಸಿದನು ದುಃಸ್ವಪ್ನ ಕುಂತವಿಭಿನ್ನ ಚೇತನನು
ಕರೆಸಿ ಧೌಮ್ಯನಿಗರುಹಲತಿ ದು
ಸ್ತರದ ಕನಸಿದು ಶಾಂತಿ ಕರ್ಮವ
ಪುರದೊಳಗೆ ವಿರಚಿಸುವೆನಂಜದಿರೆಂದನಾ ಮುನಿಪ ೧೭

ಪುರದೊಳೆಲ್ಲಿಯ ಶಾಂತಿ ನಾರದ
ನೊರದನುತ್ಪಾತ ಪ್ರಬಂಧದ
ಹೊರಿಗೆಯನು ನಿಮ್ಮೈಶ್ವರಿಯ ವಿಧ್ವಂಸಕರವೆಂದು
ಇರುಳು ನಾನಾಸ್ವಪ್ನ ಕಾನನ
ಗಿರಿ ಪರಿಭ್ರಮಣೈಕ ಚಿಂತಾ
ಭರಿತನಾದೆನು ದೈವಕೃತ ಉಪಭೋಗ್ಯವೆನಗೆಂದ ೧೮

ಜನಪ ಕಳುಹಿದ ದೂತರಿವರರ
ಮನೆಗೆ ಬಂದರು ಜೀಯ ಧೃತರಾ
ಷ್ಟ್ರನ ಸಮಯವಾಯಿತ್ತು ನಿಮ್ಮಡಿ ಬಿಜಯ ಮಾಡುವದು
ಎನಲು ತನ್ನ ಕುಮಾರರನು ತ
ನ್ನನುಜರನು ಸಚಿವ ಪ್ರಧಾನರ
ನನಿಬರನು ಕರೆಸಿದನು ನೃಪ ಹೊರವಂಟನರಮನೆಯ ೧೯

ಬಂದು ಧೃತರಾಷಟ್ರನ ಪದಾಬ್ಜಕೆ
ವಂದಿಸಿದೊಡೆನ್ನಾನೆ ಬಾರೈ
ಕಂದೆ ಬಾರೆಂದೆಳೆದು ಕುಳ್ಳಿರಿಸಿದನು ಮಂಚದಲಿ
ನಂದನರು ಭೀಮಾರ್ಜುನಾದಿಗ
ಳಂದು ಪರಿವೇಷ್ಟಿಸಿದರಿತ್ತಲು
ಕಂದು ಹೃದಯದ ಕೌರವೇಂದ್ರನ ಹದನ ಕೇಳೆಂದ ೨೦

ಕರೆಸಿದನು ಶಕುನಿಯನು ಕರ್ಣಂ
ಗರುಹಿದನು ಸೈಂಧವನನೆಕ್ಕಟಿ
ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ
ಹರಸಿಕೊಂಡರು ಗಣಪ ಯಕ್ಷೇ
ಶ್ವರಿ ಕಳಾವತಿ ದುರ್ಗಿ ಭುವನೇ
ಶ್ವರಿಗಳಿಗೆ ವಿವಿಧೋಪಚಾರದ ಬಲ ವಿಧಾನದಲಿ ೨೧

ದ್ಯೂತ ಸಿದ್ಧಿಯ ಮಂತ್ರ ವರ ವಿ
ದ್ಯಾತಿಶಯ ವಿಚ್ಛೇದ ರಕ್ಷ ವಿ
ಧೂತ ರಿಪುಮತಿ ಯಂತ್ರಪರಸನ್ಮೋಹನೌಷಧಿಯ
ಈತಗಳು ಮೇಳವಿಸಿದರು ನಿ
ರ್ಭೀತರಿವರಿದನೆತ್ತ ಬಲ್ಲರು
ಕೈತವದ ಕಣಿ ಕೌರವೇಶ್ವರ ಬಂದನರಮನೆಗೆ ೨೨

ಆತ್ತವಿಸಿದರೆ ಬೊಪ್ಪ ಮಯ ನಿವ
ಗಿತ್ತ ಸಭೆಯದು ದೇವ ನಿರ‍್ಮಿತ
ವೆತ್ತ ಮಾನವ ಕರ್ಮವೆತ್ತಲು ಸರಿಸವಲ್ಲದಕೆ
ಇತ್ತ ನಿಮ್ಮಡಿ ಮಾಡಿಸಿದ ಸಭೆ
ಯೆತ್ತ ಬಿಜಯಂಗೈದು ನೋಡಿದ
ಡುತ್ತ ಮವಲಾಯೆಂದನಾ ದುರ‍್ಯೋಧನನು ನಗುತ ೨೩

ಆ ಸಭೆಯ ನೋಡುವೆವು ಶಿಲ್ಪದ
ದೇಸಿಗಾರರ ಕೈಮೆಗಳು ಲೇ
ಸೈಸಲೇ ಬೇರೇನು ಮಾನುಷ ದೈವಕೃತಿಯೆಂದು
ಈಸು ಸಂಪ್ರಿಯ ನಮ್ಮಲುಂಟೇ
ಲೇಸೆನುತ ನೃಪನೆದ್ದು ಕೈಗೊಡ
ಲಾ ಸಭೆಗೆ ಧೃತರಾಷ್ಟ್ರ ಬಂದನು ರಾಜಗಣ ಸಹಿತ ೨೪

ಬಿಗಿದ ನೀಲದ ಸರಿಯ ನೆಲಗ
ಟ್ಟುಗಳ ವೈಢೂರಿಯದ ಮಣಿ ಭಿ
ತ್ತಿಗಳ ವಜ್ರದ ವೇದಿಗಳ ವಿದ್ರುಮದ ಲೋವೆಗಳ
ಝಗೆಯ ಲಹರಿಯ ಜಾಳಿಗೆಯ ಪ
ಚ್ಚೆಗಳ ಪಾಗಾರದ ಸುರತ್ನಾ
ಳಿಗಳಲೆಸೆದುದು ರಾಜಸಭೆ ತತ್ಕ್ರೋಶ ಮಾತ್ರದಲಿ ೨೫

ಕವಿವ ವರುಣಾಂಶುಗಳ ಲಹರಿಯ
ಲವಣಿ ಲಾವಣಿಗೆಯಲಿ ನೀಲ
ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ
ತಿವಿದವೆಳ ಮುತ್ತುಗಳ ಚಂದ್ರಿಕೆ
ಜವಳಿಸಿದವೊಂದೊಂದನೌಕಿದ
ವವಿರಳಿತ ಮಣಿ ಕಿರಣ ವೇಣೀಬಂಧ ಬಂಧುರದಿ ೨೬

ಅಲ್ಲಿ ವಿಮಳೋದ್ಯಾನ ವೀಧಿಗ
ಳಲ್ಲಿ ತಾವರೆಗೊಳದ ರಚನೆಗ
ಳಲ್ಲಿ ಹಂಸ ಮಯೂರ ಮಧುಕರ ಶುಕಪಿಕಾನೀಕ
ಅಲ್ಲಿ ಕೇಳೀ ಶೈಲ ಹಿಮ ಗೃಹ
ವಲ್ಲಿ ವಿವಿಧ ವಿಳಾಸ ರಚನೆಗ
ಳಲ್ಲಿ ಹೊಯ್ಕೈಯೆನಿಸಿ ಮೆರೆದುದು ಪಾಂಡವರ ಸಭೆಯ ೨೭

ಸ್ಥಳವನೇ ಜಲವೆಂದು ನಿರ್ಮಳ
ಜಲವನೇ ಸ್ಥಳವೆಂದು ಬಾಗಿಲ
ನೆಳಲ ಭಿತ್ತಿಯ ಹಾಯ್ದು ಬಾಗಿಲ ಭಿತ್ತಿಯೆಂದಿಳಿದು
ಕಳವಳಿಸುವನೆ ಧರ್ಮಸುತನಾ
ಕೊಳನನೇ ಕೊಳನೆಂದು ಬಾಗಿಲ
ನೆಳಲ ಹೊಗಳುತ ಬಂದು ಹೊಕ್ಕನು ಬಹಳ ಚೌಕಿಗೆಯ ೨೮

ಕೆಲಸದಲಿ ಶಿಲ್ಪದಲಿ ರತ್ನಾ
ವಳಿಯ ಘಾಟನವಾಯಿಯಲಿ ಸಭೆ
ಯಿಳೆಗಪೂರ್ವವಲಾ ಮಹಾದೇವೆಂತು ರಚಿಸಿದರೊ
ವಿಳಸದಾಯವ್ಯಯದ ವಿಶ್ರುತ
ವಳಯದುನ್ನತ ವಾಸ್ತು ಲಕ್ಷಣ
ದೊಳಗೆ ಸೇರಿದುದೆಂದು ನೃಪ ಕೊಂಡಾಡಿದನು ಸಭೆಯ ೨೯

ಸೂಸಕದ ಮುತ್ತುಗಳು ತಾರಾ
ರಾಶಿಗಳ ಹಬ್ಬುಗೆಯ ನೀಲದ
ಹಾಸರೆಗಳು ಹೋಲುತಿದ್ದವು ಗಗನ ಮಂಡಲವ
ಸೂಸಕಂಗಳ ಮುರಿದ ಮುತ್ತಿನ
ದೇಶಿಕಾತಿಯರಾನನೇಂದುಗ
ಳಾ ಸುಧಾಕರವೆನಲು ಗೆಲಿದುದು ಸಭೆ ನಭಸ್ಥಳವ ೩೦

ಗುರು ನದೀಸುತ ಕರ್ಣ ಸೈಂಧವ
ಗುರುತನುಜ ಭಗದತ್ತ ಬಾಹ್ಲಿಕ
ನುರು ಯವನ ಸಂವೀರ ಕೌಸಲ ಚೈದ್ಯ ಮಾಗಧರು
ಅರಸುಗಳು ನಾನಾ ದಿಗಂತದ
ಧರಣಿಪರು ಸಚಿವರು ಪಸಾಯ್ತರು
ನೆರೆದುದಂದಿನ ದಿವಸದೋಲಗದೊಡ್ಡು ಚೆಲುವಾಯ್ತು ೩೧

ಧರಣಿಪತಿ ಕೇಳೊಂದು ಹರಿಯಂ
ತರ ವಿಶಾಲ ಮಹಾಸಭಾ ವಿ
ಸ್ತರಣದರಲಿ ತೆರಹ ಕಾಣೆನು ತೀವಿತವನಿಪರು
ಹೊರಗೆ ರಥಿಕರು ರಾಹುತರು ಜೋ
ಧರು ಪದಾತಿಗಳಿದ್ದುದಂದಿನ
ಸಿರಿ ಸುರೇಂದ್ರನ ಪಾಡಿಗೈಮಡಿ ಹತ್ತು ಮಡಿಯೆಂದ ೩೨

ಒಂದು ಕಡೆಯಲಿ ಕವಡಿಕೆಯ ಜೂ
ಜೊಂದು ಕಡೆಯಲಿ ಗದ್ಯಪದ್ಯವ
ದೊಂದು ಕಡೆಯಲಿ ವಾರವಧುಗಳ ಸಾರಸಂಗೀತ
ಒಂದು ಕಡೆಯಲಿ ತರ್ಕಗೋಷ್ಠಿಯ
ದೊಂದು ಕಡೆಯಲಿ ಕೌರವೇಂದ್ರನ
ಮುಂದೆ ಜಡಿದುದು ರಭಸ ಹಾಸಂಗಿಗಳ ಸಾರಿಗಳ ೩೩

ಆಡಲರಿವನು ಗಡ ಯುಧಿಷ್ಠಿರ
ನಾಡುವರೆ ಬರಹೇಳು ಮೇಣ್ತಾ
ನೋಡುತಿರಲಾವಾಡುವೆವು ಸಭೆಯಲಿ ವಿನೋದದಲಿ
ಖೋಡಿಯಿಲ್ಲದ ಸರಸ ನೆತ್ತವ
ನಾಡಲರಿಯದ ನೃಪತಿ ಮೃಗವೆಂ
ದಾಡುತಿಹ ರಿವವರು ತಾವಲ್ಲೆಂದನಾ ಶಕುನಿ ೩೪

ಅಹುದು ಹೊಲ್ಲೆಹವಾವುದಾಡಲು
ಬಹುದು ಸುಜನರ ಕೂಡೆ ನೀವೇ
ಕುಹಕ ವಿದ್ಯಾಸಾರ್ವಭೌಮರು ಶಕುನಿಕೌರವರು
ಸುಹೃದಯರಿಗತಿ ಕುಟಿಲರಲಿ ನಿ
ಸ್ಪೃಹರಿಗತಿ ರಾಗಿಗಳೊಡನೆ ದು
ಸ್ಸಹ ಕಣಾ ಸಮ್ಮೇಳವೆಂದನು ಧರ್ಮಸುತ ನಗುತ ೩೫

ನೀವು ಸುಹೃದಯರಿಂದು ದುರ್ಜನ
ರಾವು ನೀವ್ನೀರಾಗಿಗಳು ರಾ
ಗಾವಲಂಬರು ನಾವಲೇ ನೀವರಿಯರೇ ನಿಜವ
ನೀವು ನಾವೆಂಬೀ ಪೃಥಗ್ಭಾ
ವಾವಲಂಬನವೇಕೆ ನಿಮ್ಮಲಿ
ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ ೩೬

ಇರಲಿ ಬಾಂಧವರಿದರೊಳೆರಡಿ
ಟ್ಟಿರದೆ ನಿಲಲದು ಲೇಸಲಾ ವಿ
ಸ್ತರಿಸಲೇಕೈ ದ್ಯೂತ ದುರ್ವ್ಯಸನ ಪ್ರಪಂಚವಿದು
ತರುಣ ವಿಟ ಚಾರಣ ಕುಶೀಲಕ
ಭರತ ಗಣಿಕಾಯೋಗ್ಯ ವಿಷಯಕೆ
ಗರುವರೊಲಿವರೆಯೆಂದನಾ ಕುರುಪತಿಗೆ ಯಮಸೂನು ೩೭

ದ್ಯೂತವಿದು ದುರ್ವ್ಯಸನವೆಂಬವ
ನೀತಿವಿದನೇ ಶ್ರೋತ್ರಿಯರಿಗ
ಖ್ಯಾತಿಯದು ಯತಿಗಳಿಗೆ ಮೇಣ್ ರಣಭೀತ ಭೂಪರಿಗೆ
ದ್ಯೂತ ಮೃಗಯಾ ಸ್ತ್ರೀವ್ಯಸನ ನೃಪ
ಜಾತಿಗೋಸುಗರಾದವಿದರ ರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ ೩೮

ಅರಸ ಕೇಳ್ ಕಾಳಗಕೆ ಜೂಜಿಗೆ
ಕರೆದಡೋಸರಿಸಿದೊಡೆ ಬಳಿಕವ
ಗರುವನೇ ಕ್ಷತ್ರಿಯರೊಳಗೆ ನೃಪಧರ್ಮ ನೀನರಿಯ
ಕರೆದೆವಾವ್ ಜೂಜಿಂಗೆ ಬೇಕೇ
ಧರಣಿಪತಿ ಬಾ ರಾಜಧರ್ಮವ
ನೊರಸುವರೆ ನಿಲ್ಲೆಂದುಪೇಕ್ಷಿಸಿ ನುಡಿದನಾ ಶಕುನಿ ೩೯

ರಾಜ ಧರ್ಮವಿದಹುದು ಕಳವಿನ
ಜೂಜು ಧರ್ಮದ ಮಗನೊ ಮೊಮ್ಮನೊ
ಬೀಜವಾವುದು ನಿಮ್ಮ ಕಪಟದ್ಯೂತ ನಿರ್ಣಯಕೆ
ರಾಜ ಪರಿಪಾಟಿಗಳ ಪಂಥದ
ಜೂಜ ಬಲ್ಲರೆ ಕರೆಯಿ ಬಾರದ
ಡಾ ಜನಾರ್ದನನಾಣೆಯೆಂದನು ಧರ್ಮನಂದನನು ೪೦

ಭೂರಮಣ ಕೇಳಖಿಳ ನೃಪ ಸಂ
ಹಾರಬೀಜದ ಕರ್ಮಫಲ ಸಂ
ಸ್ಕಾರವಳ್ಳೆಯನಿರಿದು ನೂಕಿತು ಧರ್ಮನಂದನನ
ಧೀರನಲ್ಲಾ ಧರ್ಮಶಾಸ್ತ್ರ ವಿ
ಚಾರ ಸಾರಜ್ಞಾನ ನಿಷ್ಠೆಯೊ
ಳೋರೆಯುಂಟೇ ದ್ಯೂತಕೇಳಿಗೆ ಮಾಡಿದನು ಮನವ ೪೧

ಇಂದುವದನೆಗೆ ದಕ್ಷಿಣಾಕ್ಷಿ
ಸ್ಪಂದವಾಯಿತು ಭೀಮ ಪಾರ್ಥರಿ
ಗಂದು ಕೆತ್ತಿತು ಹೃದಯ ವಾಮ ಭುಜಾಕ್ಷಿಗಳು ಸಹಿತ
ಕಂದಿದುವು ಮೋರೆಗಳು ಗಂಗಾ
ನಂದನ ದ್ರೋಣಾದಿ ಸುಜನರಿ
ಗಂದವೇರಿತು ಮುಸುಡು ಶಕುನಿ ಸುಯೋಧನಾದಿಗಳ ೪೨

ಕುರುಪತಿಯ ಕೃತಪುಣ್ಯಬೀಜಾಂ
ಕುರದ ಕಾಲ ದಿಗಂತದವನೀ
ಶ್ವರ ಸಮೂಹ ಚಮೂನಿಬರ್ಹಣ ಸೂಚನಾ ಸಮಯ
ಅರಸ ಕೇಳ್ ಕುಂತೀಕುಮಾರರ
ಸಿರಿಯ ದುಗುಡದ ಹೊತ್ತು ಮಿಗೆ ಗ
ಬ್ಬರಿಸಿತೈ ಧರ್ಮಜನ ಗಾಢದ ಬುದ್ಧಿ ಪರ್ವತವ ೪೩

ವ್ಯಸನತೃಷ್ಣೆಯು ಕೀಳು ಚಿತ್ತದ
ಮಿಸುನಿಯೊಳು ಬೆರೆಸಿತು ಸುಬುದ್ಧಿಯ
ರಸವು ಹಾರಿತು ಹುದಿದ ರಾಗದ್ವೇಷ ವಹ್ನಿಯಲಿ
ಮುಸುಡ ತಿರುಹಿತು ತಿಳಿವು ಲಜ್ಜೆಯ
ದೆಸೆಗೆ ದುರ್ಘಟವಾಯ್ತು ಪರಿಭವ
ದೊಸಗೆಯನು ಸೂಚಿಸಿತು ಲಕ್ಷ್ಮಿಗೆ ಧರ್ಮಜನ ಹೃದಯ ೪೪

ಹಲವು ಮಾತಿನಲೇನು ಭೂಪತಿ
ಕೆಲಕೆ ಸಿಲುಕಿದನವದಿರೊಡ್ಡಿದ
ಬಲೆಗೆ ಬಂದನು ನೆತ್ತ ಸಾರಿಯ ಗುರಿಯ ಗದ್ದುಗೆಗೆ
ಕೆಲದಲನುಜರು ವಾಮದಲಿ ಮಣಿ
ವಳಯ ಮಂಚದಲಂಧನೃಪನಿದಿ
ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು ೪೫

ಹಲಗೆಯಿಕ್ಕಿತು ಹೊನ್ನ ಸಾರಿಗ
ಳಿಳುಹಿದವು ಹೇಳೊಡ್ಡವನು ಕಳ
ಕಳವ ನಿಲಹೇಳೆನುತ ಹಾಸಂಗಿಗಳ ಹೊಸೆಹೊಸೆದು
ನೆಲಕೆ ಹಾಯ್ಕಿದನಡಿಗಡಿಗೆ ಮಂ
ಡಳಿಸಿ ಸಾರಿಯ ಹೂಡಿ ಕುರುಪತಿ
ಗೆಲಿದ ಹೋಗೆಂದೊದರುತಿದ್ದನು ತೊಡೆಯನಪ್ಪಳಿಸಿ ೪೬

ಆಟವಾರಂಭಿಸದು ಬರಿ ಬೊ
ಬ್ಬಾಟವೇತಕೆ ವಿಜಯಸಿರಿ ವಾ
ಚಾಟರಿಗೆ ಮೆಚ್ಚುವಳೆ ತೋರಾ ದ್ಯೂತಕೌಶಲವ
ತೋಟಿ ಬೇಕೇ ಕೈಯ ಹೊಯ್
ಬೂತಾಟವೇತಕೆ ಧರ್ಮನಂದನ
ನಾಟವೊಳ್ಳಿತು ಬಲ್ಲೆನೆಂದನು ಶಕುನಿ ನಸುನಗುತ ೪೭

ಎನ್ನ ಲೆಕ್ಕಕೆ ಶಕುನಿ ಭೂಪತಿ
ನಿನ್ನೊಡನೆ ಕೈ ಹೊಯ್ದನೊಡ್ಡವ
ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ
ನಿನ್ನೊಳಾಗಲಿ ನಿನ್ನ ಮಾವನೆ
ಮುನ್ನ ಬರಲಿದಕೇನೆನುತ ಸಂ
ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ ೪೮

ಹೇಮಭಾರದ ವಿಮಲ ರತುನ
ಸ್ತೋಮವಿದೆ ಪಣವೆನಲು ಕೌರವ
ಭೂಮಿಪತಿಯೊಡ್ಡಿದನು ಧರ್ಮಜ ಹೆಸರಿಸಿದ ಧನವ
ಆ ಮಹಿಪ ಶಕುನಿಗಳು ಸಾರಿ
ಗ್ರಾಮವನು ಕೆದರಿದರು ದ್ಯೂತದ
ತಾಮಸದಲುಬ್ಬೆದುದ್ದಿಬ್ಬರ ಕರಣವೃತ್ತಿಗಳು ೪೯

ದುಗನ ಹಾಯಿತು ತನಗೆ ಹಾಯ್ಕಿ
ತ್ತಿಗನವೆಂಬಬ್ಬರದ ಹಾಸಂ
ಗಿಗಳ ಬೊಬ್ಬೆಯ ಸಾರಿಗಳ ಮಣಿ ಖಟಿಲ ನಿಸ್ವನವ
ಉಗಿವ ಸೆರೆಗಳ ಬಳಿ ದುಹಾರದ
ಬಿಗುಹುಗಳ ಬೀದಿಗಳ ತಳಿ ಸಾ
ರಿಗಳ ಧಾಳಾಧೂಳಿ ಮಸಗಿತು ಭೂಪ ಕೇಳೆಂದ ೫೦

ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ ೫೧

ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ ೫೨

ಸೋತೆಯರಸಾ ನಿನಗೆ ಜೂಜಿನ
ಭೀತಿಯುಂಟೇ ಮಾಣು ಮೇಣ್ ನಿ
ರ್ಭೀತನೇ ನುಡಿ ಮೇಲಣೊಡ್ಡವ ಹಲವು ಮಾತೇನು
ಕಾತರಿಸಬೇಡೆನಲು ಫಡ ಪಣ
ಭೀತನೇ ತಾನಕಟೆನುತ ಕುಂ
ತೀತನುಜನೊಡ್ಡಿದನು ಸಾವಿರ ಮತ್ತಗಜ ಘಟೆಯ ೫೩

ಆದವೆಮಗಿವು ಗಜ ಘಟೆಗಳೆಂ
ದಾ ದುರಾತ್ಮಕನಾಡಿದನು ದು
ರ್ಭೇದ ವಿವದಿರ ಕಪಟ ಮಂತ್ರವನಾವನರಿವವನು
ಆದುದರಸಗೆ ಸೋಲವಿನ್ನೇ
ನಾದುದೈ ಭೂಪತಿಯೆ ಗಜಘಟೆ
ತೀದವೇ ಮೇಲೇನು ಪಣವುಂಟೆಂದನಾ ಶಕುನಿ ೫೪

ಫಡ ದರಿದ್ರನೆ ತಾನು ತನ್ನಯ
ಮಡದಿಯರ ಕೆಳದಿಯರು ಸಾವಿರ
ಮಡಿ ಸುಯೋಧನ ರಾಜಭವನದ ವಾರನಾರಿಯರ
ನುಡಿಯಬೇಕೇ ಧರ್ಮಸುತ ನಿ
ಮ್ಮಡಿಗಳೊಡ್ಡಿದ ಬಳಿಕ ಗೆಲಿದವ
ರೊಡವೆಯೈಸಲೆ ಹಾಯ್ಕು ಹಾಯ್ಕೆಂದೊದರಿದನು ಶಕುನಿ ೫೫

ಏನನಾಡಿದಡೇನು ಫಲ ದೈ
ವಾನುಕೂಲ್ಯದ ಕುಣಿಕೆ ಬೇರಹು
ದಾ ನರೇಂದ್ರನ ಸಾರಿ ಸೋತುದು ನಿಮಿಷ ಮಾತ್ರದಲಿ
ಆ ನಿರೂಢಿಯ ಹತ್ತು ಸಾವಿರ
ಮಾನಿನಿಯರನು ಮತ್ತೆ ಸೋತನು
ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ ೫೬

ಅರಸಿಯರ ಮೈಗಾಹುಗಳ ಕಿಂ
ಕರರು ಸಾವಿರವಿದೆ ಪಣ ನಿ
ಮ್ಮರಸನಲಿ ಪಣವೇನೆನಲು ನೀವೇನನೊಡ್ಡಿದಿರಿ
ಮರಳಿ ಬೆಸಗೊಳಬೇಡ ನಮ್ಮಲಿ
ಬರಹವದು ಹಾಯ್ಕೆನುತ ಸಾರಿಯ
ಬೆರಸಿ ತಿವಿದಾಡಿದನು ಹೆಕ್ಕಳವಿಕ್ಕಿದನು ಶಕುನಿ ೫೭

ಅರಸ ಸೋತೈ ನಾರಿಯರ ಜಯ
ಮರಳಿತಿತ್ತಲು ಮನಕೆ ಭಿತಿಯ
ಬೆರಕೆಯುಳ್ಳಡೆ ಬಿಟ್ಟು ಕಳೆ ಪೈಸರಕೆ ಸಮಯವಿದು
ಅರಸು ಪಂಥದ ವಾಸಿ ಮನಕು
ಬ್ಬರಿಸುವೊಡೆ ಪಣವೇನು ಹೇಳೈ
ಧರಣಿಪಾಲಯೆನುತ್ತ ರಿಂಗಣಗುಣಿದನಾ ಶಕುನಿ ೫೮

ಎಲವೊ ಸೌಬಲ ಪಾಂಡುವಿನ ಮ
ಕ್ಕಳು ಕಣಾ ಚತುರಂಬುನಿಧಿಮೇ
ಖಲೆಯ ಉತ್ತರ ಕುರು ನರೇಂದ್ರರ ಸೀಮೆಪರಿಯಂತ
ನೆಲವಿದೆಮ್ಮದು ನೃಪರೊಳಗೆ ನಾ
ವುಳಿಯೆ ಧರಣಿಪರಾರು ರಥ ಸಂ
ಕುಳವನೊಡ್ಡುವೆನೊಂದು ಬಾರಿಗೆ ಹತ್ತು ಸಾವಿರವ ೫೯

ಈ ರಥಕೆ ನಾಲ್ವತ್ತು ಸಾವಿರ
ವಾರುವಂಗಳ ಕೂಟವಾ ಪರಿ
ವಾರವಿದೆಲಾ ರಪಣವೆಂದನು ಸುಬಲತನಯಂಗೆ
ವೀರನಹೆಯೈ ಧರಣಿಪತಿ ತೆಗೆ
ಸಾರಿಗಳ ಬಿಡು ಸೆರೆಯ ಬಿಗಿದು ದು
ಹಾರದಲಿ ನೀ ಸೋತೆ ಹೋಗೆಂದೊದರಿದನು ಶಕುನಿ ೬೦

ಆವ ಕೌಳಿಕ ಮಂತ್ರತಂತ್ರದ
ಡಾವರದ ಡೊಳ್ಳಾಸವಿಕ್ಕಿದ
ದೀವಸದ ಬೇಳುವೆಯನೇನೆಂಬೆನು ಮಹೀಪತಿಯ
ಆವ ವಸ್ತುವನರಸನೊಡ್ಡುವ
ನಾವ ವಹಿಲದಲಾತ ಸೋಲಿಸಿ
ಕೈವಳಿಸಿದನೊ ಬಲ್ಲನಾವವನೆಂದನಾ ಮುನಿಪ ೬೧

ಅರಸ ನೀಗಿದೆ ಹತ್ತು ಸಾವಿರ
ವರ ರಥವನಿನ್ನೇನು ಸಾಕೀ
ಸರಲಿ ನಿಲುವದು ವಿತ್ತವುಂಟೇ ಮತ್ತೆ ಹೇಳೆನಲು
ಮರುಳೆ ಸೌಬಲ ಚಿತ್ರರಥನೀ
ನರಗೆ ಕೊಟ್ಟನು ತೇಜಿಗಳ ತಿ
ತ್ತಿರಿಯ ಬಣ್ಣದ ಹತ್ತು ಸಾವಿರ ತುರಗವಿವೆಯೆಂದ ೬೨

ಆಡಿದನು ನೃಪನಾ ಕ್ಷಣಕೆ ಹೋ
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ ೬೩

ಅಗಣಿತದ ಧನವುಂಟು ಹಾಸಂ
ಗಿಗಳ ಹಾಯಿಕು ಸೋತ ವಸ್ತುವ
ತೆಗೆವೆನೀಗಳೆ ಶಕುನಿ ನೋಡಾ ತನ್ನ ಕೌಶಲವ
ದುಗುಣ ಹಲಗೆಗೆ ಹತ್ತು ಮಡಿ ರೇ
ಖೆಗೆ ಗಜಾಶ್ವನಿಕಾಯ ರಥವಾ
ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ ೬೪

ಆಯಿತಿದು ಪಣವಹುದಲೇ ನೃಪ
ಹಾಯಿಕಾ ಹಾಸಂಗಿಗಳ ಸಾ
ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು
ದಾಯ ಕಂದೆರೆವರೆ ಸುಯೋಧನ
ರಾಯನುಪಚಿತಪುಣ್ಯವಕಟಾ
ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ ೬೫

ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತ ನೈ ಸರ್ವಸ್ವ ಧನವನು ಸಕಲ ಸೈನಿಕನ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ ೬೬

ಅರಸ ಕೇಳೀ ತುರಗವೀ ರಥ
ಕರಿ ನಿಕರವೀ ಸೈನ್ಯ ಹಸ್ತಿನ
ಪುರಿಗೆ ಬಂದುದು ತಮ್ಮ ಕೂಡೆ ವಿನೋದ ಕೇಳಿಯಲಿ
ಕುರುಪತಿಯ ವಶವಾಯ್ತು ಬಳಿಕಿನ
ಮರಿಗುದುರೆ ಮರಿಯಾನೆಗಳನು
ಚ್ಚರಿಸಿ ಸಾರಿಯ ಸೋಕಿದಾಗಲೆ ಸೋತನಾ ಭೂಪ ೬೭

ಅಕಟ ಸಾಲದೆ ಜೂಜು ನಿರ್ಬಂ
ಧಕವೆ ಶಿವಶಿವ ತಾನಿದೆತ್ತಣ
ಶಕುನಿಯೆತ್ತಣ ಭರತಕುಲದ ಮಹಾ ಮಹೀಶ್ವರರು
ವಿಕಳ ಚೇಷ್ಟೆಯದೇನು ವೃದ್ಧ
ಪ್ರಕರಕಿದು ವಿಳಸವೆ ವಿಘಾತಿಗೆ
ಸಕಲಜನ ಸಮ್ಮತವೆಯೆಂದನು ಖಾತಿಯಲಿ ವಿದುರ ೬೮

ವರಪುರೂರವ ನಹುಷನವನೀ
ಶ್ವರತಿಲಕ ದುಷ್ಯಂತ ಕುರುಸಂ
ವರಣನಮಲ ಯಯಾತಿಯಾದಿ ಪರಂಪರಾಗತದ
ಭರತ ಕುಲವಿದರೊಳಗೆ ವಂಶೋ
ದ್ಧರರಿಳೆಯ ಬೆಳಗಿದರು ನೀನವ
ತರಿಸಿ ತಂದೈ ತೊಡಕನೆಂದನು ಖಾತಿಯಲಿ ವಿದುರ ೬೯

ಸೋಲ ಮಚ್ಚಿದುದಿವರನೊಡ್ಡದ
ಮೇಲೆ ಹೇರಿದುದೊಡ್ಡವೀಗಳು
ಮೇಲುಗೈ ನೀನಾದೆ ಕುಸಿದರು ಪಾಂಡು ನಂದನರು
ಸೋಲವಿದು ಕಾಲಾಂತಕನ ಮೈ
ಸಾಲ ಸಾರಿದೆನಕಟ ಸಾಕಿ
ನ್ನೇಳು ಕೌರವ ನೃಪತಿಯೆಂದನು ಖಾತಿಯಲಿ ವಿದುರ ೭೦

ಗೆಲಿದ ಧನವಕ್ಕುವುದೆ ಸೋತವ
ರಳುಕಿದವರೇ ಪಾಂಡುಪುತ್ರರ
ಬಲುಹ ಬೆಸಗೊಳ್ಳಾ ತದೀಯ ಶ್ರವಣ ದೃಷ್ಟಿಗಳ
ಎಲೆ ಸುಯೋಧನ ವಿಷದ ಮಧುರವು
ಕೊಲುವುದೋ ಮನ್ನಿಸುವುದೋ ಕ
ಕ್ಕುಲಿತೆಗಿದು ಕಡೆಹಾರವಾಗಲಿ ಸಾಕು ತೆಗೆಯೆಂದ ೭೧

ಗೆಲಿದ ದರ್ಪದ ದಡ್ಡಿ ತೆಗೆ ಸೌ
ಬಲನ ಬೀಳ್ಕೊಡು ನಿಖಿಲ ಬಾಂಧವ
ಕುಲಸಹಿತ ನೀ ಮಧುರ ವಚನದಲಿವರ ಸಂತೈಸು
ನೆಲನನೇಕಚ್ಛತ್ರದಲಿ ಹದ
ಗೊಳಿಸು ಬದುಕುವರಿದು ನಿಜಾನ್ವಯ
ದುಳಿವು ಬೆಸಗೊಳು ಬೇಹ ಹಿರಿಯರನೆಂದನಾ ವಿದುರ ೭೨

ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ ೭೩

ಹಿತವ ನೀನವರಿಗೆ ಕುಟುಂಬ
ಸ್ಥಿತಿ ವಿಡಂಬಕೆ ನಾವು ಕುಂತೀ
ಸುತರೊಡನೆ ಸಮ್ಮೇಳವೆಮ್ಮೊಳು ವೈಮನಸ್ಯಗತಿ
ಕೃತಕ ಮಾರ್ಗದ ಮೋಡಿಯಲಿ ಪರಿ
ಚಿತನು ನೀನಲ್ಲಕ್ಷ ವಿಮಲ
ಕ್ರತು ವಿಧಾನವನಕ್ಷ ದೀಕ್ಷಿತರರಿವರಿದನೆಂದ ೭೪

ನೀ ಹಿತವನೈ ಶಕುನಿ ರಾಜ
ದ್ರೋಹಿಯೈ ಹುಸಿಯಲ್ಲ ನೀನೇ
ಹೋಹುದೈ ನಿನಗಾವುದಭಿಮತವಾ ದಿಗಂತರಕೆ
ಐಹಿಕಾಮುಷ್ಠಿಕದ ವಿಭವೋ
ತ್ಸಾಹ ನಿಸ್ಪೃಹರಾವಲೇ ಸಂ
ದೇಹವೇ ನೀವರಿವಿರೆಂದನು ತೂಗಿ ತುದಿವೆರಳ ೭೫

ಗುರುಗಳುಸುರರು ಭೀಷ್ಮರೆಮ್ಮನು
ಕೆರಳಿಚರು ಕೃಪ ನುಡಿಯನಯ್ಯನ
ಕೊರಳು ಕೊಂಕದು ಬಾಹ್ಲಿಕನ ಮನ ನೋಯದಿನ್ನೆಬರ
ಹಿರಿಯರಿವರೇನಜ್ಞರೇ ನೀ
ಪರಮತತ್ವಜ್ಞಾನಿಯೇ ಕಾ
ತರಿಸದಿರು ನೀನೆಂದು ಟಕ್ಕರಿಗಳೆದನಾ ಭೂಪ ೭೬

ಇವರ ಜನಪಾಧ್ವರವನಡಹಾ
ಯ್ದವನನಾಗಳೆ ದೇವಕೀಸುತ
ಸವರಿದನು ನಮ್ಮೀ ವಿನೋದದ್ಯೂತಸಂಪದದ
ಸವನ ವಿಘ್ನ ವಿಕಾರಿಯನು ಪರಿ
ಭವಿಸುವವರನು ಕಾಣೆ ಶಿವಯೆಂ
ದವವನಿಪತಿ ನಿಜ ಹುಬ್ಬಿನಲಿ ಹೂಳಿದನು ಪರಿಚರರ ೭೭

ಮಣಿಯೆ ನೀನಿಲ್ಲೀಯನರ್ಥವ
ಕುಣಿಕೆಗೊಳಿಸಿದ ನೀ ಸಹಿತ ನಿ
ನ್ನೆಣೆಗಳಹ ಸೈಂಧವನನೀ ರಾಧೇಯ ಶಕುನಿಗಳ
ರಣದೊಳಗೆ ಭೀಮಾರ್ಜುನರ ಮಾ
ರ್ಗಣದ ಧಾರೆಗೆ ವೀರನಾರಾ
ಯಣನೆ ಸೇರಿಸಿಕೊಡುವನರಿದಿರುಯೆಂದನಾ ವಿದುರ ೭೮

ಸಂಕ್ಷಿಪ್ತ ಭಾವ

ಧರ್ಮಜನನ್ನು ಕಪಟ ದ್ಯೂತದಲ್ಲಿ ಗೆದ್ದ ಪ್ರಸಂಗ.

ಧರ್ಮಜ ತನ್ನ ಪರಿವಾರದೊಡನೆ ಹಸ್ತಿನಾಪುರದತ್ತ ನಡೆದಾಗ ಅಪಶಕುನಗಳಾದವು. ಆದರೆ ಅದನ್ನು ಪರಿಗಣಿಸದೆ ಮುಂದೆ ಸಾಗಿದನು. ಇವರನ್ನು ಕೌರವರು ವೈಭವದಿಂದ ಸ್ವಾಗತಿಸಿದರು. ಧೃತರಾಷ್ಟ್ರನಲ್ಲಿಗೆ ಬಂದು ನಮಸ್ಕರಿಸಿದಾಗ ಬಹಳ ಪ್ರೀತಿಯಿಂದ ಸ್ವಾಗತಿಸಿದನು. ಹಾಗೆಯೇ ಗಾಂಧಾರಿಯೂ ಎಲ್ಲರನ್ನೂ ಉಪಚರಿಸಿದಳು. ಎಲ್ಲರನ್ನೂ ನೋಡಿ, ಸಂತಸಪಟ್ಟು ಊಟೋಪಚಾರಗಳಲ್ಲಿ, ವಿವಿಧ ಮನರಂಜನೆಗಳಲ್ಲಿ ಆ ದಿನವನ್ನು ಕಳೆದರು. ಆ ದಿನ ರಾತ್ರಿಯೆಲ್ಲ ಧರ್ಮಜನಿಗೆ ಕೆಟ್ಟ ಕನಸುಗಳು. ಗಿರಿ, ಪರ್ವತ, ಅರಣ್ಯಗಳಲ್ಲಿ ಸಂಚರಿಸಿದಂತೆ, ಶಿಖರ ಕುಸಿದು ಬಿದ್ದಂತೆ..ಇದಕ್ಕೆ ಶಾಂತಿ ಪರಿಹಾರವನ್ನು ಊರಿನಲ್ಲಿ ಮಾಡುವುದಾಗಿ ಧೌಮ್ಯರು ನುಡಿದರು.

ಮರುದಿನ ಇವರೆಲ್ಲರನ್ನು ಕರೆದುಕೊಂಡು ಹೊಸದಾಗಿ ರಚಿತವಾದ ಭವನವನ್ನು ತೋರಿಸಿದರು. ಇಂದ್ರಪ್ರಸ್ಥದ ಭವನಕ್ಕೆ ಸರಿಸಾಟಿಯಾಗಿ ಅತ್ಯಂತ ವೈಭವದಿಂದ ಕೂಡಿದ್ದ ಆ ಭವನವನ್ನು ಎಲ್ಲರೂ ಮೆಚ್ಚಿದರು. ಅಲ್ಲಿನ ಕೊಳ, ಪಕ್ಷಿಗಳು, ವೇದಿಕೆಗಳು, ಹಿಮಗೃಹಗಳು, ಅಚ್ಚರಿಯ ನೆಲಗಳು ಎಲ್ಲವನ್ನೂ ನೋಡಿದ್ದು ಆಯಿತು.
ಇವರೆಲ್ಲರಿಗಾಗಿ ಬೇರೆ ಬೇರೆ ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸುತ್ತಿದ್ದರು. ಆಗ ಶಕುನಿಯು ದ್ಯೂತದ ಹಾಸಂಗಿಗಳನ್ನು ತರಿಸಿ ಯುಧಿಷ್ಠಿರನನ್ನು ಆಡಲು ಆಹ್ವಾನಿಸಿದನು. 
ದ್ಯೂತವು ಸಪ್ತ ವ್ಯಸನಗಳಲ್ಲೊಂದು ಎಂದು ಗೊತ್ತಿದ್ದರೂ  ಅದು ರಾಜರಿಗೆ ಅನ್ವಯಿಸದು, ಸ್ನೇಹಕ್ಕೆ ಆಡಿದರೆ ತಪ್ಪೇನಿಲ್ಲ ಎಂದೆಲ್ಲ ಹೇಳಿದಾಗ ಧರ್ಮಜನ ಮನಸ್ಸು ದ್ಯೂತದ ಕಡೆಗೆ ವಾಲಿತು. ಕರ್ಮಫಲ ತಪ್ಪದಲ್ಲವೇ?

ಆಟ ಆರಂಭವಾಯಿತು. ಶಕುನಿಯು ದುರ್ಯೋಧನನ ಪರವಾಗಿ ಗರವನ್ನು ಹಾಕುತ್ತಿದ್ದನು. ಗುರುಗಳು, ಹಿರಿಯರು ಎಲ್ಲರೂ ಸೇರಿ ನೋಡುತ್ತಿದ್ದರು. ನಿಧಾನವಾಗಿ ಧರ್ಮಜ ಒಂದೊಂದೇ ಆಟವನ್ನು ಸೋಲುತ್ತಾ ಬಂದನು. ಧನ, ಕನಕ, ರಥ, ಕುದುರೆ, ಆಭರಣಗಳು, ಸೈನಿಕರು ಇತ್ಯಾದಿ ಎಲ್ಲವನ್ನೂ ಪಣಕ್ಕೆ ಇಡುತ್ತಾ ಎಲ್ಲವನ್ನೂ ಕಳೆದುಕೊಂಡನು. ಪ್ರತಿಬಾರಿಯೂ ಶಕುನಿಯು ಇವನನ್ನು ಬೇಡವಾದರೆ ಬಿಟ್ಟುಬಿಡು ಎಂದು ಹೇಳುತ್ತಲೇ ವ್ಯಂಗ್ಯವಾಗಿ ಆಟಕ್ಕೆ ಮತ್ತೆ ಪ್ರೇರೇಪಿಸುತ್ತಿದ್ದನು.

ಇದನ್ನು ನೋಡುತ್ತಿದ್ದ ವಿದುರನು ತಂತ್ರದ ಆಟವನ್ನು ವಿರೋಧಿಸಿದನು. ನಿನ್ನ ವಂಶಕ್ಕೆ ಕಳಂಕವನ್ನು ತರುತ್ತಿದ್ದೀ. ಸಾಕು. ನಿಲ್ಲಿಸೆಂದನು. ಆದರೆ ದುರ್ಯೋಧನ ವಿದುರನನ್ನು ಕಡೆಗಣಿಸಿ ಮಾತನಾಡಿದನು. ಎಲ್ಲರೂ ಸುಮ್ಮನೆ ಇರುವಾಗ ನೀನು ಯಾರು ಮಾತನಾಡಲು ಎಂಬಂತೆ ಹೇಳಿದನು. ಧರ್ಮಜನೂ ವಿದುರನ ಹಿತವಚನದ ಕಡೆಗೆ ಗಮನ ಕೊಡಲಿಲ್ಲ. ನೊಂದ ವಿದುರನು ಇದಕ್ಕೆಲ್ಲ ಉತ್ತರವನ್ನು ಆ ಶ್ರೀಹರಿಯೇ ನೀಡುವನೆಂದನು. ಆಟ ಮುಂದುವರೆಯಿತು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ