ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ92


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ದ್ರೋಣ ಪರ್ವ - ಮೊದಲನೆಯ ಸಂಧಿ


ಸೂ. ರಾಯಕಟಕಪಿತಾಮಹನ ತರು
ವಾಯಲಭಿಷೇಕವನು ಕೌರವ
ರಾಯ ಮಾಡಿಸಿ ಪತಿಕರಿಸಿದನು ಕುಂಭಸಂಭವನ
 
ಸೋಲಿಸಿತೆ ಕರ್ಣಾಮೃತದ ಮಳೆ
ಗಾಲ ನಿನ್ನಯ ಕಿವಿಗಳನು ನೆರೆ
ಕೇಳಿದೈ ಕೌರವನ ಕದನದ ಬಾಲಕೇಳಿಗಳ
ಹೇಳುವುದು ತಾನೇನು ಕೆಂಗರಿ
ಗೋಲ ಮಂಚದ ಮಹಿಮನಿರವನು
ಮೇಲುಪೋಗಿನ ಕಥೆಯನವಧಾನದಲಿ ಕೇಳೆಂದ   ೧ 
 
ಬತ್ತಿತಂಬುಧಿ ನಿನ್ನ ಮಗ ಹೊಗು
ವತ್ತ ಕಾದುದು ನೆಲನು ನೃಪ ತಲೆ
ಗುತ್ತಿ ಹೊಗಲೊಳಕೊಳ್ಳದಂಬರವೇನನುಸುರುವೆನು
ಮಿತ್ತು ನಿನಗೊಲಿದಿಹಳು ಬಳಿಕಿ
ನ್ನುತ್ತರೋತ್ತರವೆಲ್ಲಿಯದು ನೆರೆ
ಚಿತ್ತವಿಸುವುದು ಜೀಯ ದ್ರೋಣಂಗಾಯ್ತು ಹರಿವೆಂದ ೨ 
 
ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರರ ನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ   ೩ 
 
ಶಿವಶಿವಾ ಭೀಷ್ಮಾವಸಾನ
ಶ್ರವಣ ವಿಷವಿದೆ ಮತ್ತೆ ಕಳಶೋ
ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ
ಅವನಿಪತಿ ದುಗುಡದಲಿ ಮೋರೆಯ
ನವುಚಿದನು ಕರತಳದಿ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ  ೪ 
 
ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ ೫ 
 
ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ  ೬ 
 
ಹರಿದುದೈ ಕುರುಸೇನೆ ಬತ್ತಿದ
ಕೆರೆಯೊಳಗೆ ಬಲೆಯೇಕೆ ಹಗೆ ಹೊ
ಕ್ಕಿರಿವರಿನ್ನಾರಡ್ಡಬೀಳ್ವರು ನಿನ್ನ ಮಕ್ಕಳಿಗೆ
ಬರಿದೆ ಮನ ನೋಯದಿರು ಸಾಕೆ
ಚ್ಚರುವುದೆನೆ ತನ್ನೊಳಗೆ ಹದುಳಿಸಿ
ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ ೭ 
 
ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧ ನೃಪ  ೮ 
 
ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರೆವುದು ಬಂಧುವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ       ೯ 
 
ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿದ ಪರಿಯನು ರಚಿಸಿ ಹೇಳೆಂದ ೧೦ 
 
ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೋರೆಯ ಮಹೀಪತಿ ಹೊಕ್ಕನರಮನೆಯ ೧೧ 
 
ಗಾಹು ಕೊಳ್ಳದ ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ ೧೨ 
 
ಗುರುತನುಜ ವೃಷಸೇನ ಮಾದ್ರೇ
ಶ್ವರ ಕಳಿಂಗ ವಿಕರ್ಣ ದುಸ್ಸಹ
ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು
ವರ ಸುಲೋಚನ ವಿಂದ್ಯ ಯವನೇ
ಶ್ವರರು ಕೃಪ ಕೃತವರ್ಮ ಭಗದ
ತ್ತರು ಮಹಾಮಂತ್ರಿಗಳು ಬಂದರು ರಾಯನೋಲಗಕೆ ೧೩ 
 
ತೊಡರ ಝಣಝಣ ರವದ ಹೆಗಲಲಿ
ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು  ಭಾರವಣೆಯಲಿ ಬಂದನು ಕರ್ಣನೋಲಗಕೆ ೧೪ 
 
ಇತ್ತ ಬಾರೈ ಕರ್ಣ ಕುರುಕುಲ
ಮತ್ತವಾರಣ ಕುಳ್ಳಿರೈ ಬಾ
ಯಿತ್ತ ಬಾ ತನ್ನಾಣೆಯೆನುತವೆ ಸೆರಗ ಹಿಡಿದೆಳೆದು
ಹತ್ತಿರಾತನ ನಿಲಿಸಿ ಬಟ್ಟಲ
ಲಿತ್ತು ವೀಳೆಯವನು ಸುಯೋಧನ
ಕೆತ್ತುಕೊಂಡಿರೆ ನುಡಿಸಿದನು ಕಲಿ ಕರ್ಣನವನಿಪನ  ೧೫
 
ಜೀಯ ದುಗುಡವಿದೇಕೆ ಬಿಡು ಗಾಂ
ಗೇಯನಳುಕಿದರೇನು ಕಾಣಿಯ
ಬೀಯದಲಿ ಬಡವಹುದೆ ಕನಕಾಚಲ ನಿಧಾನಿಸಲು
ರಾಯ ಜಗಜಟ್ಟಿಗಳು ರಣದೊಳ
ಜೇಯರಿದೆ ಪರಿವಾರವನು ನಿ                 
ರ್ದಾಯದಲಿ ದಣಿಸುವೆನು ರಿಪುಗಳ ಸಿರಿಯ ಸೂರೆಯಲಿ  ೧೬
 
ಕರ್ಣ ಕರ್ಣಕಠೋರ ಸಾಹಸ
ನಿರ್ಣಯಿಸು ಪರಸೈನ್ಯ ಸುಭಟ ಮ
ಹಾರ್ಣವಕೆ ಬಿಡು ನಿನ್ನ ವಿಕ್ರಮಬಾಡಬಾನಳನ
ಪೂರ್ಣಕಾಮನು ನೀನು ಕುರುಬಲ
ಕರ್ಣಧಾರನು ನೀನು ವಿಶ್ವವಿ
ಕರ್ಣ ನೀನೇ ರಕ್ಷಿಸೆಂದುದು ನಿಖಿಳ ಪರಿವಾರ         ೧೭ 
 
ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ ೧೮
 
ಎಂದು ನೃಪತಿಯ ಬೀಳುಕೊಂಡಿನ
ನಂದನನು ಬೊಂಬಾಳ ದೀಪದ
ಸಂದಣಿಗಳಲಿ ಸೆಳೆದಡಾಯ್ದದ ಭಟರ ಮುತ್ತಿಗೆಯ
ಮುಂದೆ ಪಾಯವಧಾರು ರಿಪುನೃಪ
ಬಂದಿಕಾರವಧಾರು ಧಿರುಪಯ
ವೆಂದು ಕಳಕಳ ಗಜರು ಮಿಗೆ ಕುರು ಭೂಮಿಗೈತಂದ ೧೯ 
 
ಹಾಯಿದವು ನರಿ ನಾಯಿಗಳು ಕಟ
ವಾಯಲೆಳಲುವ ಕರುಳಿನಲಿ ಬಸಿ
ವಾಯ ರಕುತದಲೋಡಿದವು ರಣ ಭೂತ ದೆಸೆದೆಸೆಗೆ
ಆಯುಧದ ಹರಹುಗಳ ತಲೆಗಳ
ಡೋಯಿಗೆಯ ಕಡಿ ಖಂಡಮಯದ ಮ
ಹಾಯತದ ರಣದೊಳಗೆ ಬಂದನು ಭೀಷ್ಮನಿದ್ದೆಡೆಗೆ ೨೦
 
ಸರಳ ಮಂಚವ ಹೊದ್ದಿ ಭೀಷ್ಮನ
ಚರಣಕಮಲವ ಹಿಡಿದು ನೊಸಲಿನೊ
ಳೊರಸಿಕೊಂಡನು ನಾದಿದನು ಕಂಬನಿಯೊಳಂಘ್ರಿಗಳ
ಕರುಣಿಸೈ ಗಾಂಗೇಯ ಕರುಣಾ
ಶರಧಿಯೈ ಖಳತಿಲಕ ಕರ್ಣನ
ದುರುಳತನವನು ಮರೆದು ಮೆರೆವುದು ನಿಮ್ಮ ಸದ್ಗುಣವ ೨೧ 
 
ಎನಲು ಹೃದಯಾಂಬುಜದ ಪೀಠದ
ವನಜನಾಭಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕವಡಗಿದವು  ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ  ೨೨
 
ಅಳಲದಿರು ಬಾ ಮಗನೆ ಕುರುಕುಲ
ತಿಲಕನವಸರದಾನೆ ರಿಪು ಮಂ
ಡಳಿಕಮಸ್ತಕಶೂಲ ಬಾರೈ ಕರ್ಣ ಬಾಯೆನುತ
ತುಳುಕಿದನು ಕಂಬನಿಯ ಕೋಮಳ
ತಳದಿ ಮೈದಡವಿದನು ಕೌರವ
ನುಳಿವು ನಿನ್ನದು ಕಂದ ಕದನವ ಜಯಿಸು ಹೋಗೆಂದ ೨೩
 
ಗಾರುಗೆಡೆದೆನು ನಿಮ್ಮನೋಲೆಯ
ಕಾರತನದುಬ್ಬಿನಲಿ ತನಿ ಮದ
ವೇರಿ ನಿಮ್ಮಲಿ ಸೆಣಸಿದೆನು ಸೇನಾಧಿಪತ್ಯದಲಿ
ದೂರ ಹೊತ್ತೆನು ರಣದ ಮೀಸಲಿ
ನೇರು ತಪ್ಪಿತು ನೀಲಮಣಿ ತಲೆ
ಗೇರಿಸಿದ ತೃಣವದಕೆ ಸರಿಯೇ ಭೀಷ್ಮ ಹೇಳೆಂದ  ೨೪
 
ತನುಜ ತಪ್ಪೇನದಕೆ ಕಾಳೆಗ
ವೆನಗೆ ತನಗೆನಬೇಕು ವೀರರು
ಮನದ ಕಲಿತನದುಬ್ಬುಗೊಬ್ಬಿನಲೆಂಬರಿದಕೇನು
ಮನದೊಳಗೆ ಖತಿಯಿಲ್ಲ ದುರಿಯೋ
ಧನ ನೃಪತಿಯೋಪಾದಿ ನೀ ಬೇ
ರೆನಗೆ ಲೋಗನೆ ಕಂದ ಕದನವ ಜಯಿಸು ಹೋಗೆಂದ ೨೫
 
ಆಳುತನದ ದೊಠಾರತನ ಸರಿ
ಯಾಳಿನಲಿ ಸೆಣಸಾದೊಡೊಳ್ಳಿತು
ಮೇಳವೇ ಗುರು ದೈವದಲಿ ಕಟ್ಟುವರೆ ಬಿರುದುಗಳ
ಹಾಳಿ ಹಸುಗೆಯನರಿಯದಾ ಹೀ
ಹಾಳಿಗೆಡಿಸಿದೆನಂದು ಸಭೆಯಲಿ
ಖೂಳನವಗುಣ ಶತವ ನೋಡದೆ ನಿಮ್ಮ ಮೆರೆಯೆಂದ ೨೬
 
ನೋವು ಮನದೊಳಗುಳ್ಳಡಾ ರಾ
ಜೀವಲೋಚನನಾಣೆ ಮಗನೇ
ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು
ಆವನಾತನ ಬಂಧುವಾತನೆ
ಜೀವವೆನ್ನಯ ದೆಸೆಯ ಭಯ ಬೇ
ಡಾವ ಪರಿಯಿಂದವನನುಳುಹುವ ಹದನ ಮಾಡೆಂದ ೨೭
 
ಎನ್ನ ಹವಣೇ ಹಗೆಯ ಗೆಲುವಡೆ
ನಿನ್ನ ವಂದಿಗರಿರಲು ನೂಕದು
ತನ್ನ ಸಾಹಸವೆಲ್ಲಿಪರಿಯಂತಹುದು ಕದನದಲಿ
ಗನ್ನಕಾಱನು ಕೃಷ್ಣನವರಿಗೆ
ತನ್ನನೊಚ್ಚತಗೊಟ್ಟನಹಿತರ
ನಿನ್ನು ಗೆಲುವವರಾರು ಜಯವೆಲ್ಲಿಯದು ನಮಗೆಂದ ೨೮
 
ಆಲವಟ್ಟದ ಗಾಳಿಯಲಿ ಮೇ
ಘಾಳಿ ಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ ೨೯ 
 
ಲೇಸನಾಡಿದೆ ಕರ್ಣ ದಿಟ ನೀ
ನೀಸು ಸಮ್ಯಜ್ಞಾನಿಯೆಂಬುದ
ನೀಸು ದಿನ ನಾವರಿಯೆವೈ ನೀ ಸತ್ಕುಲೀನನಲ
ಆ ಸುಯೋಧನಗರುಹಿ ಸಂಧಿಯ
ನೀ ಸಮಯದಲಿ ಘಟಿಸು ನೀನೆನ
ಲೈಸ ಮೀರನು ಪಾಂಡವರ ಸಂಪ್ರತಿಯ ಮಾಡೆಂದ ೩೦
 
ಜೀಯ ಮಂತ್ರದ ಮಾತು ರಾವುತ
ಪಾಯಕರಿಗೊಪ್ಪುವುದೆ ಅವರವ
ರಾಯತದಲೋಲೈಸಬೇಹುದು ಮೇರೆ ಮಾರ್ಗದಲಿ
ರಾಯನೊಲಿದುದ ಹಿಡಿವೆನೊಲ್ಲದ
ದಾಯವನು ಬಿಡುವೆನು ನಿಜಾಭಿ
ಪ್ರಾಯವಿದು ಸಂಪ್ರತಿಯ ನುಡಿ ತನಗಂಗವಲ್ಲೆಂದ ೩೧
 
ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ಧಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ ೩೨
 
ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ         ೩೩ 
 
ಇನ್ನು ಸೇನಾಪತಿಯದಾರೈ
ನಿನ್ನ ಮತವೇನುದಯವಾಗದ
ಮುನ್ನ ಬವರವ ಹಿಡಿಯಬೇಹುದು ವೈರಿರಾಯರಲಿ
ಎನ್ನು ನಿನ್ನಭಿಮತವನೆನೆ ಸಂ
ಪನ್ನಭುಜಬಲ ದ್ರೋಣನಿರಲಾ
ರಿನ್ನು ಸೇನಾಪತಿಗಳೆಂದನು ಭೂಪತಿಗೆ ಕರ್ಣ        ೩೪ 
 
ಪ್ರಭೆಯದಾರಿಗೆ ಸೂರ‍್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ   ೩೫ 
 
ಜಾಗು ಜಾಗುರೆ ಕರ್ಣ ಪರರ ಗು
ಣಾಗಮವ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ          ೩೬
 
ನುಡಿಸು ನಿಸ್ಸಾಳವನು ಕರೆ ಹೊಂ
ಗೊಡನ ಹಿಡಿದೈತರಲಿ ನಾರಿಯ
ರೆಡ ಬಲನು ತೆರಹಾಗಲಿಕ್ಕಲಿ ಸಿಂಹವಿಷ್ಟರವ
ತಡವು ಬೇಡೆನೆ ಕೌರವೇಂದ್ರನ
ನುಡಿಗೆ ಮುನ್ನನುವಾಯ್ತು ವಿಪ್ರರ
ಗಡಣ ಬಂದುದು ರಚಿಸಿದರು ಮೂರ್ಧಾಭಿಷೇಚನವ ೩೭
 
ಸಕಲ ಸಾವಂತರು ಮಹೀಪಾ
ಲಕರು ಬಂದುದು ಚರಣದಲಿ ಕಾ
ಣಿಕೆಯನಿಕ್ಕಿತು ಕೈಯ ಮುಗಿದುದು ನಿಖಿಳ ಪರಿವಾರ
ಮಕುಟರತ್ನದ ಲಹರಿ ಖಡುಗದ
ವಿಕಟ ಧಾರಾರಶ್ಮಿ ದೀಪ
ಪ್ರಕರದಲಿ ಥಳಥಳಿಸೆ ರವಿಯವೊಲೆಸೆದನಾ ದ್ರೋಣ ೩೮
 
ಅರಸ ಬೇಡೈ ವರವನೆನ್ನನು
ಕರೆದು ಮಿಗೆ ಪತಿಕರಿಸೆ ಬಳಿಕಾ
ಬರಿದೆ ಹೋಹೆನೆ ಮೆಚ್ಚಿದುದ ನುಡಿ ಖೇಡತನವೇಕೆ
ಹೊರೆ ಹೊಗದೆ ಹೇಳೆನಲು ನಗೆಮೊಗ
ವರಳಿ ಹೊಂಪುಳಿಯೋಗಿ ಕೌರವ
ರರಸ ನುಡಿದನು ಕಟ್ಟಿಕೊಡಿ ಧರ್ಮಜನ ತನಗೆಂದು ೩೯
 
ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ        ೪೦
 
ಕೊಡುವಡಿದು ವರವಲ್ಲದಿದ್ದರೆ
ನುಡಿಗೆ ಮೊಳೆ ಹೊಮ್ಮುವರೆ ನಿಮ್ಮಯ
ತೊಡಕನೊಲುವವನಲ್ಲ ನೀವೇ ಬಲ್ಲಿರೆನೆ ನಗುತ
ಹಿಡಿದು ಬಿಗಿವೆನು ಪಾರ್ಥನನು ಕೆಲ
ಕಡೆಗೆ ತಪ್ಪಿಸು ಧರ್ಮಪುತ್ರನ 
ಬಿಡೆನು ನಿನ್ನಯ ಪುಣ್ಯದಳತೆಯನರಿಯಬಹುದೆಂದ ೪೧
 
ಸಾಕಿದೊಳ್ಳಿತು ಚಾಪತಂತ್ರ ಪಿ
ನಾಕಿಯೇರಿಸಿ ನುಡಿದ ನುಡಿಗಳು
ಕಾಕಹುದೆ ಕೈಕೊಂಡೆವೆನುತವನೀಶ ಹರುಷದಲಿ
ಆ ಕೃಪಾದಿ ಮಹಾಪ್ರಧಾನಾ
ನೀಕವನು ಕಳುಹಿದನು ಮನೆಗೆ ದಿ
ವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ ೪೨
 
ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟುದು ಜಕ್ಕವಕ್ಕಿಗಳ     ೪೩
 
ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು ೪೪
 
ತಳಿತ ಝಲ್ಲರಿಗಳಿಗೆ ಗಗನದ
ವಳಯವೈದದು ನೆರೆದ ಸೇನೆಗೆ
ನೆಲನಗಲ ನೆರೆಯದು ನಿರೂಢಿಯ ಭಟರ ವಿಕ್ರಮಕೆ
ಅಳವು ಕಿರಿದರಿರಾಯರಿಗೆ ದಿಗು
ವಳಯವಿಟ್ಟೆಡೆಯಾಗೆ ರಥ ಹಯ
ದಳವುಳಕೆ ಕುರುಸೇನೆ ನಡೆದುದು ದೊರೆಯ ನೇಮದಲಿ ೪೫ 
 
ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿ ಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ ೪೬
 
ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿದ್ದವು ಗೌರುಗಹಳೆಗಳು ೪೭
 
ಬಿಗಿದ ಝಲ್ಲರಿ ಮುಗಿಲ ಹೊಸ ಕೈ
ದುಗಳ ಮಿಂಚಿನ ಮಕುಟಮಣಿಕಾಂ
ತಿಗಳ ಸುರಧನುವಿನ ಚತುರ್ಬಲ ರವದ ಸಿಡಿಲುಗಳ
ವಿಗಡ ಕುಂಭಜ ಮೇಘ ಋತು ತನಿ
ಹೊಗರಿರಿದು ಪರಬಲದ ಕಡುವೇ
ಸಗೆಗೆ ಕವಿದುದು ರಾಜಹಂಸ ಪ್ರಕರವೋಸರಿಸೆ  ೪೮
 
ಕಳನ ಗೆಲಿದುದು ಬಂದು ಕೌರವ
ಬಲ ಯುಧಿಷ್ಠಿರರಾಯ ದಳ ಮುಂ
ಕೊಳಿಸಿ ಹೊಕ್ಕುದು ಜಯದ ಸುಮ್ಮಾನದ ಸಘಾಡದಲಿ
ಬಲಿದರೊಡ್ಡನು ಮಂಡಳಾಕೃತಿ
ಗೊಳಿಸಿ ಕೌರವರಿವರು ಥಟ್ಟನು 
ನಿಲಿಸಿದರು ಚಂದ್ರಾರ್ಧಸದೃಶದಲಖಿಳ ಮೋಹರವ ೪೯
 
ಚೌರಿಗಳು ಬಲವೆರಡರೊಳಗೊ
ಯ್ಯಾರದಲಿ ತೂಗಿದವು ಚೂಣಿಯ
ವೀರರುರವಣೆ ಮಿಗಲು ಹೊಯ್ದರು ಹೊಕ್ಕು ಪರಬಲವ
ಮಾರಿ ಮೊಗವಡದೆರೆದವೊಲು ಜ
ಜ್ಝಾರ ಮಾಸಾಳುಗಳು ನಿಜ ದಾ
ತಾರನವಸರಕೊದಗಿ ಹಣವಿನ ಋಣನ ನೀಗಿದರು   ೫೦
 
ಬಿಟ್ಟ ಸೂಠಿಯೊಳೇರಿ ಕುದುರೆಗ
ಳಟ್ಟಿದುವು ಕಿವಿಗೌಂಕಿದುಂಗುಟ
ವಿಟ್ಟ ಸನ್ನೆಯೊಳೊಲೆದು ಕವಿದವು ಸೊಕ್ಕಿದಾನೆಗಳು
ನಿಟ್ಟುವರಿಯಲು ಕೂಡೆ ರಥ ಸಾ
ಲಿಟ್ಟು ಹರಿದವು ಬಿಡದೆ ಸುಭಟರು 
ಮುಟ್ಟಿ ಮೂದಲಿಸುತ್ತ ಹೊಯ್ದರು ಹೊಕ್ಕು ಪರಬಲವ ೫೧
 
ಏರುವಡೆದರು ಹೊಕ್ಕವರು ಕೈ
ದೋರೆ ಕಳಕಳಕಾರರಸುಗಳ
ಕಾರಿದರು ಕೈಮಾಡಿ ಕೊಂಡರು ಸುರರ ಕೋಟೆಗಳ
ತಾರುಥಟ್ಟಿನೊಳಟ್ಟಿ ಮೈಮಸೆ
ಸೂರೆಕಾಱರು ಮಿದುಳ ಜೊಂಡಿನ
ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ   ೫೨ 
 
ತೆಗೆಸು ದೊದ್ದೆಯನುರವಣಿಸದಿರಿ
ವಿಗಡ ಸುಭಟರು ಸಾಹಸದ ತನಿ
ಹೊಗರಿನಾತಗಳೆಲ್ಲಿ ಭೀಮಾರ್ಜುನರ ಬರಹೇಳು
ಹೊಗುವ ಬಿನುಗನು ಹೊಯ್ಯದಿರಿ ತೆಗೆ
ತೆಗೆಯೆನುತ ಸಾವಿರ ಮಹಾರಥ
ರಗಲದಲಿ ಬರಲುರುಬಿ ಹೊಕ್ಕನು ದ್ರೋಣ ಪರಬಲವ ೫೩
 
ಸಾರಿರೈ ಸಾಹಸಿಕರಿರ ಕೆಲ
ಸಾರಿರೈ ಪಾಂಚಾಲ ಮತ್ಸ್ಯರು
ವೀರರಹುದಲ್ಲೆಂಬೆವೇ ಶಿವ ಶಿವ ಮಹಾದೇವ
ಸಾರಿರೈ ನಮ್ಮೊಡನೆ ಕೈ ಮನ
ವಾರೆ ಕಾದುವ ಬಳಿಕ ಮೊದಲೊಳು
ದಾರ ಭೀಮಾರ್ಜುನರ ನೋಡುವೆನೆನುತ ಕೈಕೊಂಡ ೫೪
 
ಬಿನುಗು ಹಾರುವ ನಿನಗೆ ಭೀಮಾ
ರ್ಜುನರ ಪರಿಯಂತೇಕೆಯಂಬಿನ
ಮೊನೆಯಲುಣಲಿಕ್ಕುವೆನು ರಣಭೂತಕ್ಕೆ ನಿನ್ನೊಡಲ
ಎನುತ ಧೃಷ್ಟದ್ಯುಮ್ನನಿದಿರಾ
ದನು ಶರೌಘದ ಸೋನೆಯಲಿ ಮು
ಮ್ಮೊನೆಯ ರಥಿಕರ ಮುರಿದು ದ್ರೋಣನ ರಥಕೆ ಮಾರಾಂತ ೫೫
 
ಕಡಗಿದಡೆ ಕೋದಂಡ ರುದ್ರನ
ತೊಡಕಿ ಬದುಕುವರಾರು ಸಾರೆಂ
ದೊಡನೊಡನೆ ನಾರಾಚ ಜಾಲದಲರಿಭಟನ ಬಿಗಿದು
ಕಡಿದು ಬಿಸುಟನು ದ್ರುಪದತನಯನು
ಹಿಡಿದ ಬಿಲ್ಲನು ಸಾರಥಿಯನಡೆ 
ಗೆಡಹಿದನು ಚಂದ್ರಾರ್ಧಶರದಲಿ ನೊಸಲನೊಡೆಯೆಚ್ಚ ೫೬
 
ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖ ಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದರು ಪಾಂಚಾಲ ನಾಯಕರು
ಮುಸುಡ ಬಿಗುಹಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು ೫೭
 
ರಾಯರೊಳು ಪಾಂಚಾಲರುಬ್ಬಟೆ
ಕಾಯಗಟ್ಟಿತು ಪೂತು ಮಝ ಕುರು
ರಾಯನಾಡಿತು ದಿಟವೆನುತ ಹೊಗರಂಬ ಹೊದೆಗೆದರಿ
ನೋಯಿಸಿದನುರವಣಿಸಿ ಹರಿತಹ
ನಾಯಕರನುಬ್ಬೆದ್ದ ಬಿರುದರ 
ಬೀಯ ಮಾಡಿದನಹಿತ ರಥಿಕರನೆಂಟು ಸಾವಿರವ ೫೮
 
ಆಳುತನವುಳ್ಳವರ ಕರೆ ಪಾಂ
ಚಾಲರೊಳ್ಳೆಗರವದಿರಂಬಿನ
ಕೋಲ ಕಾಣದ ಮುನ್ನ ಹಮ್ಮೈಸುವರು ಹುರಿಯೊಡೆದು
ಖೂಳರಿವರಂತಿರಲಿ ದೊರೆ ಕ
ಟ್ಟಾಳಹನು ಕರೆ ಧರ್ಮಪುತ್ರನ
ತೋಳ ಬಲುಹನು ನೋಡಬೇಕೆಂದುರುಬಿದನು ದ್ರೋಣ ೫೯
 
ಸವರಿ ಹೊಕ್ಕನು ಕೆಲಬಲದ ಪಾಂ
ಡವ ಮಹಾರಥರನು ವಿಭಾಡಿಸಿ
ಪವನಜನ ಮುರಿಯೆಚ್ಚು ನಕುಲನ ರಥವ ಹುಡಿಮಾಡಿ
ಕವಲುಗೋಲಲಿ ದ್ರುಪದ ಮತ್ಸ್ಯರ
ನವಗಡಿಸಿ ಹೈಡಿಂಬನಭಿಮ
ನ್ಯುವನು ಮಸೆಗಾಣಿಸಿ ಮಹೀಶನ ರಥಕೆ ಮಾರಾಂತ ೬೦
 
ಅರಸ ಘಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸೆ ಧನುವನೊದರಿಸಿ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ   ೬೧
 
ಶಿವಶಿವಾ ಬೆಳುದಿಂಗಳಲಿ ಮೈ
ಬೆವರುವುದೆ ಕಲಿ ಧರ್ಮಪುತ್ರನ
ಬವರದಲಿ ಬೆಂಡಹರೆ ವೀರರು ಕಂಡೆವದುಭುತವ
ನಿವಗಿದೆತ್ತಣ ಕೈಮೆ ಕೋಲ್ಗಳ
ಕವಿಸುವಂದವಿದೊಳ್ಳಿತಿದಲೇ
ನವಗಭೀಷ್ಟವೆನುತ್ತ ಕಟ್ಟಳವಿಯಲಿ ಕೈಕೊಂಡ      ೬೨
 
ಎಲೆಲೆ ದೊರೆ ಸಿಕ್ಕಿದನು ಕರೆ ಪಡಿ
ತಳಿಸ ಹೇಳೋ ಸ್ವಾಮಿದ್ರೋಹರು
ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು
ಕಳವಳಿಸಿ ಸಾತ್ಯಕಿ ಘಟೋತ್ಕಚ
ರುಲಿದು ಹರಿತರೆ ಕೇಳಿದಾ ಕ್ಷಣ
ದಲಿ ಮುರಾಂತಕ ಸಹಿತ ವಹಿಲದಿ ಬಂದನಾ ಪಾರ್ಥ ೬೩
 
ಕಾಳಕೂಟದ ಬಹಳ ದಾಳಿಗೆ
ಶೂಲಿಯೊಡ್ಡೈಸುವವೊಲವನೀ
ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ
ಆಲಿಯಳುಕಿತು ತಿರುಹಿದಂಬಿನ
ಕೋಲ ಝಳಪಿಸಿ ಪೂತು ಮಝ ಮೇ
ಲಾಳು ಬಂದುದೆಯಕಟೆನುತ ಹಲುಮೊರೆದನಾ ದ್ರೋಣ ೬೪
 
ಮಂದಭಾಗ್ಯನು ಕೌರವನು ನಾ
ವೆಂದು ಮಾಡುವುದೇನು ನಿಮಿಷವು
ನಿಂದನಾದರೆ ಹಿಡಿವೆನಾಗಳೆ ಧರ್ಮನಂದನನ
ಬಂದು ಫಲಗುಣನಡ್ಡವಿಸಲಿ
ನ್ನಿಂದುಧರ ಮುಳಿದೇನ ಮಾಡುವ
ನೆಂದು ಖಾತಿಯ ಹಿಡಿದು ರಥವನು  ತಿರುಹಿದನು ದ್ರೋಣ ೬೫
 
ಎರಡು ಬಲದಲಿ ವೀರ ನೀ ಮಡ
ಮುರಿಯಲಿವನೇಸರವನಂಧಾ
ಸುರನೊ ತಾರಕನೋ ಹಿರಣ್ಯಾಸುರನೊ ಕೈಟಭನೊ
ಗುರುಗಳಿದಿರಲಿ ವೀರವೇ ಸಾ
ಕಿರಲಿ ಮೂದಲೆಯೆನುತಲಾ ಬಿಲು
ದಿರುವ ಮಿಡಿದೈದಿದರು ನಾಸಾವಿರ ಮಹಾರಥರು ೬೬
 
ಫಡ ಫಡೆಲವೋ ಪಾರ್ಥ ಭೀಷ್ಮನ
ಕೆಡಹಿದುಬ್ಬಟೆ ನಮ್ಮ ಕೂಡಳ
ವಡದು ತೆಗೆ ತೆಗೆಯೆನುತ ತುಳುಕಿದರಂಬಿನಂಬುಧಿಯ
ಗಡಣವೊಳ್ಳಿತು ಗಾಢ ಮಿಗೆ ಬಿಲು
ವಿಡಿಯ ಬಲ್ಲಿರಿ ಸಮರ ಜಯವಳ
ವಡುವುದಳವಡದಿಹುದು ತಪ್ಪೇನೆನುತ ನರನೆಚ್ಚ ೬೭
 
ಜೋಡು ಜರಿಯದೆ ಹುರುಳುಗೆಡದೆ
ಚ್ಚಾಡಿದರು ಫಲುಗುಣನ ರಥದಲಿ
ಹೂಡಿದರು ಹೊಗರಂಬುಗಳನುಬ್ಬೆದ್ದು ತಮತಮಗೆ
ನೋಡಿದನು ಸಾಕಿವದಿರನು ಕೊಂ
ಡಾಡಲೇಕೆನುತನಿಬರಸುಗಳ
ತೋಡಿದನು ಕೂರಂಬಿನಲಿ ಸಾವಿರ ಮಹಾರಥರ ೬೮
 
ಮಡಿದು ಕೆಲಬರು ಕೊರಳಲಸುಗಳ
ಹಿಡಿದು ಕೆಲಬರು ಘಾಯವಡೆದೆಲು
ವೊಡೆದು ಕೆಲಬರು ಕೈದು ರಥವನು ಬಿಸುಟು ಕೆಲಕೆಲರು 
ಹೊಡೆವ ಬಿರುಗಾಳಿಯಲಿ ಮುಗಿಲೊ
ಡ್ಡೊಡೆದವೊಲು ಮೈಮಾರಿಗಳು ಹಿಂ
ಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ ಪಾರ್ಥ ೬೯
 
ನಿಮಗೆ ಸದರವೆ ಪಾರ್ಥನೆಲೆ ವಿ
ಕ್ರಮದರಿದ್ರರಿರಾ ವೃಥಾ ಸಂ
ಭ್ರಮಿತರಿರ ಭಂಡಾಟವೇತಕೆ ರಣಕೆ ಹೆರತೆಗೆಯಿ
ಸಮರವಿಜಯತ್ಯಾಗಿಯೇ ತಾ
ನಮರಪತಿನಂದನನು ಸಾಕೀ
ಕುಮತಿಗಳ ತಡೆಯದಿರಿ ಹೋಗಲಿಯೆಂದನಾ ದ್ರೋಣ ೭೦
 
ಸೋಲದಲಿ ಕೌರವನ ಸೇನಾ
ಜಾಲ ಚೆಲ್ಲಿತು ವೀರ ಪಾರ್ಥನ
ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ
ಕೋಲು ಧರಿಸಿದವೆರಕೆಗಳನೆನೆ
ಚಾಳಿಸಿತು ಪಡೆ ರವಿಯ ರಶ್ಮಿಯ
ಗೂಳೆಯವು ತೆಗೆಯಿತ್ತು ಪಡುವಣ ಕಡಲೊಳಿನನಿಳಿದ ೭೧

ಸಂಕ್ಷಿಪ್ತ ಭಾವ

ದ್ರೋಣರಿಗೆ ಸೇನಾಧಿಪತಿ ಪಟ್ಟ. ಭೀಷ್ಮರಲ್ಲಿ ಕರ್ಣನ ಕ್ಷಮಾಪಣೆ.

ಸಂಜಯ ಧೃತರಾಷ್ಟ್ರನಿಗೆ ಯುದ್ಧದ ವಿವರಗಳನ್ನು ಹೇಳುತ್ತಿದ್ದಾನೆ. ಭೀಷ್ಮನ ಶರಶಯನವನ್ನು ಕೇಳಿ ರಾಜ ಬಹಳ ನೊಂದನು. ಸಂಜಯನು ಅದಕ್ಕೆ ನೀನು ಈಗ ದುಃಖಿಸಿದರೆ ಏನು ಪ್ರಯೋಜನ? ಮಗನ ಮೇಲಿನ ಮೋಹಕ್ಕೆ ಸಿಕ್ಕಿದೆಯೆಂದು ಹೇಳುವನು. ಹಾಗೆಯೇ ದ್ರೋಣರು ಐದು ದಿನ ಕಾದಿ ಸ್ವರ್ಗ ಸೇರಿದರು ಎಂದಾಗ ಅದನ್ನೆಲ್ಲ ವಿವರವಾಗಿ ಹೇಳು ಎಂದು ಕೇಳುತ್ತಾನೆ. ವರದಿ ಮುಂದುವರಿಯುತ್ತದೆ.

ಭೀಷ್ಮನನ್ನು ಬೀಳ್ಕೊಂಡು ಎರಡೂ ಪಕ್ಷದವರು ತಂತಮ್ಮ ಪಾಳೆಯವನ್ನು ಸೇರಿದರು.  ದುರ್ಯೋಧನನು ಸಭೆಯನ್ನು ಕರೆದು ಬೆಳಗಿನ ಕಾಳಗಕ್ಕೆ ಯಾರನ್ನು ಸೇನಾಪತಿಗಳನ್ನಾಗಿ ಮಾಡುವುದು ಎಂದು ಆಲೋಚಿಸಿದನು.  ಅಲ್ಲಿಯವರೆಗೂ ಯುದ್ಧ ಮಾಡದೆ ಸುಮ್ಮನಿದ್ದ ಕರ್ಣನು ಅಲ್ಲಿಗೆ ಬಂದನು. ಎಲ್ಲರೂ ಸ್ವಾಗತಿಸಿದರು. ತಾನು ಮೊದಲಿಗೆ ನದೀಸುತರನ್ನು ಕಂಡು ಮಾತನಾಡುವುದಿದೆಯೆಂದು ಕರ್ಣ ಹೊರಟನು. ಬಂದು ಭೀಷ್ಮರನ್ನು ಕಂಡನು.

ಅವರ ಚರಣಗಳನ್ನು ಹಿಡಿದು ತನ್ನ ಅವಿಧೇಯತೆಯನ್ನು ಮನ್ನಿಸಿರಿ ಎಂದು ಬೇಡಿಕೊಂಡನು. ಅವನನ್ನು ಸಂತೈಸಿದ ಭೀಷ್ಮರು ಎಲ್ಲವೂ ವಿಧಿಲಿಖಿತವೆಂದರು. ನೀನು ಬೇರೆಯಲ್ಲ ದುರ್ಯೋಧನ ಬೇರೆಯಲ್ಲ ಎಂದರು. ಏನಾದರೂ ಮಾಡಿ ದುರ್ಯೋಧನನನ್ನು ಉಳಿಸು ಎಂದರು. ಅದಕ್ಕೆ ಕರ್ಣನು ತಾನು ಅನ್ನದ, ಸ್ನೇಹದ ಋಣಕ್ಕಾಗಿ ಕಾಳಗ ಮಾಡುವೆನು. ಕೃಷ್ಣ ಅವರಲ್ಲಿರುವಾಗ ನಮಗೆ ಜಯವೆಲ್ಲಿಯದು? ಎಂದಾಗ ಭೀಷ್ಮರು ಅವನನ್ನು ಆಶೀರ್ವದಿಸಿ ಕಳಿಸಿಕೊಟ್ಟರು.

ಮತ್ತೆ ಸಭೆಗೆ ಬಂದ ಕರ್ಣನನ್ನು ಭೀಷ್ಮ ಏನು ಹೇಳಿದರು ಎಂದು ಕೇಳಲು ಸಂಕ್ಷಿಪ್ತವಾಗಿ ವಿವರಿಸಿದ. ಈಗ ಸೇನಾಪತಿ ಯಾರಾಗಬೇಕು ಎನ್ನಲು ಕರ್ಣನು ದ್ರೋಣರಿರುವಾಗ ಮತ್ತೆ ಯಾರು ಆ ಸ್ಥಾನಕ್ಕೆ ಅರ್ಹರು ಎಂದನು. ಎಲ್ಲರೂ ಸಂತಸಪಟ್ಟರು. ಎಲ್ಲವನ್ನೂ ಸಿದ್ಧಗೊಳಿಸಿ ದ್ರೋಣರಿಗೆ ಸೇನಾಪಟ್ಟವನ್ನು ನೀಡಿದರು.  ಕೌರವನು ದ್ರೋಣರಿಗೆ ಧರ್ಮಜ ಒಬ್ಬನನ್ನು ಹಿಡಿದುಕೊಡಿ ಎನ್ನಲು ಪಾರ್ಥನು ಹತ್ತಿರವಿದ್ದಾಗ ಅದು ಅಸಾಧ್ಯವೆಂದನು. ಪಾರ್ಥನನ್ನು ದೂರ ಕಳಿಸುವ ಉಪಾಯ ಚಿಂತಿಸೋಣವೆಂದನು.

ಇರುಳು ಕಳೆದು ಬೆಳಗಾಯಿತು. ಸೂರ್ಯ ಬಂದನು. ರಣಗಹಳೆ ಮೊಳಗಿದವು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ